ರಾಜಕೀಯ
ವೈವಿಧ್ಯತೆಯ ದಾರ್ಶನಿಕ ಶ್ರೇಷ್ಠತೆ
ಪ್ರಾಥಮಿಕ ಪ್ರೌಢಶಾಲಾ ದಿನಗಳು ನೆನಪಾಗುತ್ತಿವೆ. ಸ್ವಾತಂತ್ರ್ಯೋತ್ಸವ, ಗಣ ರಾಜ್ಯೋತ್ಸವ, ರಾಜ್ಯೋತ್ಸವ ಸೇರಿದಂತೆ ರಾಷ್ಟ್ರೀಯ, ಪ್ರಾದೇಶಿಕ ಮಹತ್ವದ ದಿನಗಳಂದು ಭಾಷಣ ಸ್ಪರ್ಧೆಗಳಲ್ಲಿ ಭಾಗವಹಿಸುವುದು ಹೆಮ್ಮೆಯ ಸಂಗತಿಯಾಗಿತ್ತು. ಪ್ರಥಮ ಬಹುಮಾನ ಗೆಲ್ಲುವುದರ ಕಡೆಗೆ ಸ್ಪರ್ಧಿಗಳ ಉತ್ಸಾಹ ಕೇಂದ್ರೀಕೃತವಾಗಿರುತ್ತಿತ್ತು. ಹಿರಿಯರು ನಮಗಾಗಿ ಬರೆದುಕೊಡುತ್ತಿದ್ದ ಭಾಷಣದ ಪ್ರತಿಗಳನ್ನು ಓದಿಕೊಂಡು ಸ್ಪರ್ಧೆಯಲ್ಲಿ ಭಾಗವಹಿಸುತ್ತಿದ್ದೆವು. ವಾಕ್ಪಟುತ್ವ, ಭಾಷಿಕ ಸಮಗ್ರತೆಯ ಗುಣಲಕ್ಷಣಗಳು ಅವುಗಳಲ್ಲಿ ಅಡಕವಾಗಿರುತ್ತಿದ್ದವು. ಪದಗಳ ವಿಶೇಷ ಅರ್ಥಗಳು ಗೊತ್ತಿರದಿದ್ದರೂ ಉರು ಹೊಡೆದು ಭಾಷಣವನ್ನು ಒಪ್ಪಿಸುವುದರ ಕಡೆಗೇ ನಮ್ಮ ಗಮನವಿರುತ್ತಿತ್ತು. ಬೆಳೆಯುತ್ತಿದ್ದ ಹಾಗೆ ಧ್ವನಿಯ ಏರಿಳಿತ ಮತ್ತು ಅರ್ಥವತ್ತಾದ ಪ್ರಸ್ತುತಪಡಿಸುವಿಕೆಯ ಮಹತ್ವವನ್ನು ತಿಳಿಸಿಕೊಟ್ಡ ನಂತರ ಆ ರೀತಿ ಯೋಚಿಸಲಾರಂಭಿಸಿದೆವು.
ಸ್ವಾತಂತ್ರ್ಯ ಹೋರಾಟ, ಭಾರತದ ವೈವಿಧ್ಯಮಯ ಸಂಸ್ಕೃತಿ, ಭಾವೈಕ್ಯತೆಯ ಶ್ರೇಷ್ಠತೆಯ ಮೌಲ್ಯಗಳು ನಮ್ಮನ್ನು ಹೆಚ್ಚಾಗಿ ಪ್ರಭಾವಿಸಿದ್ದವು. ಆಮೇಲಾಮೇಲೆ ಭಾಷಣವೆಂದರೆ ಭಾವನಾತ್ಮಕವಾಗಿ ಮಾತನಾಡಿ ಭಾಷಾ ಪ್ರೌಢಿಮೆ ಮೆರೆಯುವುದಲ್ಲ ಎಂಬುದು ಮನದಟ್ಟಾಗತೊಡಗಿತು. ಈಗಾಗಲೇ ಆಗಿಹೋದ ದಾರ್ಶನಿಕ ನಾಯಕರ ಬಗ್ಗೆ ಮಾತನಾಡುವಾಗಲೆಲ್ಲಾ ಅಭಿಮಾನಕ್ಕಿಂತ ಅವರ ಕೊಡುಗೆಗಳ ಸಾರ್ವಕಾಲಿಕ ಶಕ್ತಿಯನ್ನೇ ಗಣನೆಗೆ ತೆಗೆದುಕೊಂಡಾಗಲಷ್ಟೇ ಭಾಷಣಕ್ಕೆ ಸಮಗ್ರತೆ ದಕ್ಕುತ್ತಿತ್ತು. ಯಾರಾದರೂ ಭಾವುಕ ಆವೇಶ, ಭಾಷೆಯ ಅತಿರಂಜಕತೆಯನ್ನು ನೆಚ್ಚಿಕೊಂಡು ಮಾತನಾಡಿದರೆ ಅವರಿಗೆ ಅಂಕಗಳು ಸಿಗುತ್ತಿರಲಿಲ್ಲ. ಬಹುಮಾನವೂ ಲಭಿಸುತ್ತಿರಲಿಲ್ಲ. ಬದಲಾಗಿ ತೀರ್ಪುಗಾರರು ಅಂಥವರನ್ನು ಕರೆದು ಪೂರಕ ಮಾಹಿತಿ, ನಿದರ್ಶನಗಳಿಲ್ಲದೇ ಭಾಷಣ ಸೊರಗುತ್ತದೆ ಎಂದು ತಿಳಿಸುತ್ತಿದ್ದರು. ಭಾವುಕ ಭಾಷಿಕ ಅಬ್ಬರವು ಹುಸಿ ಅಭಿಮಾನವನ್ನು ಉಂಟುಮಾಡುತ್ತದೆಯೇ ಹೊರತು ಅದು ಚಿಂತನೆ ಬಿತ್ತುವುದಿಲ್ಲ ಎಂಬ ಕಿವಿಮಾತು ಹೇಳುತ್ತಿದ್ದರು. ನಂತರ ಭಾಷಣ ಸ್ಪರ್ಧೆ ಏರ್ಪಡುವ ಹೊತ್ತಿಗೆ ಅಂಥವರು ಬದಲಾಗುತ್ತಿದ್ದರು. ಈಗ ಇಂಥ ಮಾರ್ಗದರ್ಶನ ಲಭ್ಯವಾಗುತ್ತಿದ್ದರೂ ಬದಲಾದ ಕಾಲಘಟ್ಟದ ರಾಜಕಾರಣ ದೇಶದಾದ್ಯಂತ ರೂಪಿಸುತ್ತಿರುವ ಹುಸಿ ಅಭಿಮಾನದ ಅಲೆಯ ಹೊಡೆತದ ಪರಿಣಾಮಗಳು ಅಂಥ ಸಕಾರಾತ್ಮಕತೆಯ ಪ್ರಭಾವವನ್ನು ಮೊಟಕುಗೊಳಿಸುತ್ತಿವೆ. ನಾಯಕತ್ವದ ಧಾಟಿ, ಭಾಷಣ ವೈಖರಿ, ಭಾಷೆಯ ಬಳಕೆ, ಅತಿಭಾವುಕತೆಯ ಪ್ರದರ್ಶನ ತಂತ್ರಗಾರಿಕೆ, ಪಕ್ಷಪಾತಿ ಧೋರಣೆ, ಸ್ವಹಿತಾಸಕ್ತಿ ರಕ್ಷಿಸಿಕೊಳ್ಳುವ ರಹಸ್ಯ ಕಾರ್ಯಸೂಚಿಗಳೇ ನಾಯಕರೆನ್ನಿಸಿಕೊಳ್ಳುವವರ ಪ್ರಭಾವವನ್ನು ವಿಸ್ತರಿಸುತ್ತಿವೆ. ಅಂಥವರ ಮಾತುಗಳನ್ನು ಕೇಳಿ ಪ್ರಭಾವಕ್ಕೊಳಗಾಗುವವರು ಅವರ ಭಾಷಣ ಶೈಲಿಯನ್ನೇ ವಾಕ್ಪಟುತ್ವದ ಶ್ರೇಷ್ಠ ಉದಾಹರಣೆ ಎಂದುಕೊಳ್ಳುತ್ತಿದ್ದಾರೆ. ಆ ಭಾಷಿಕ ವೈಭವೀಕರಣವನ್ಮೇ ನೆಚ್ಚಿಕೊಂಡು ಮಾತುಗಳೆಂದರೆ ಹೀಗೆಯೇ ಇರಬೇಕು ಎಂದು ತಲೆದೂಗುತ್ತಿದ್ದಾರೆ. ಹೀಗೆ ಕೇಳುವವರಿದ್ದಾರೆ ಎಂದುಕೊಳ್ಳುವ ಅಂಥವರು ಜನರನ್ನು ಮೂರ್ಖರನ್ನಾಗಿಸುವ ಪ್ರಯತ್ನಗಳಲ್ಲಿ ಯಶಸ್ಸು ಕಾಣುತ್ತಲೇ ಇದ್ದಾರೆ. ಅಧಿಕಾರದಲ್ಲಿ ಉಳಿದುಕೊಳ್ಳುವ ತಮ್ಮ ಮನೋಭಿಲಾಷೆಯನ್ನು ಹಿಂದೆಂದಿಗಿಂತಲೂ ಹೆಚ್ಚಾಗಿ ಅತ್ಯಂತ ಎಚ್ಚರದಲ್ಲಿ ಈಡೇರಿಸಿಕೊಳ್ಳುತ್ತಿದ್ದಾರೆ.
ಆಡಳಿತ ಯಂತ್ರವನ್ನು ಬಳಸಿಕೊಂಡು ಸಕಾರಾತ್ಮಕ ಇತಿಹಾಸಕ್ಕೆ ತದ್ವಿರುದ್ಧವಾದ ಸುಳ್ಳುಗಳನ್ನು ಹರಿಬಿಡುವ ಹುನ್ನಾರಗಳೊಂದಿಗೆ ನಾಯಕರೆನ್ನಿಸಿಕೊಂಡವರು ಗುರುತಿಸಿಕೊಂಡಿದ್ದಾರೆ. ಈಗಾಗಲೇ ಆಗಿಹೋದ ನಾಯಕರನ್ನು ನೆನಪಿಸಿಕೊಳ್ಳುವ ಕೃತಕ ನಿಷ್ಠೆಯ ಭಾವುಕತೆಯ ಆವರಣದಲ್ಲಿ ಈ ಸುಳ್ಳುಗಳನ್ನು ಚಾಣಾಕ್ಷಯುತವಾಗಿ ಪ್ರತಿಷ್ಠಾಪಿಸುತ್ತಿದ್ದಾರೆ. ಇದಕ್ಕಾಗಿ ಅವರು ಭಾಷೆಯ ನಮ್ಯಗುಣವನ್ನೇ ಉಪಯೋಗಿಸಿಕೊಂಡು ಅಪಭ್ರಂಶಗೊಳಿಸುತ್ತಿದ್ದಾರೆ. ಅಷ್ಟೇ ಅಲ್ಲ, ಪ್ರಜಾಸತ್ತಾತ್ಮಕ ತಾರ್ಕಿಕ ಪ್ರತಿರೋಧದ ವಿರುದ್ಧ ಆಕ್ರಾಮಕವಾದ ಭಾಷೆಯ ಅಸ್ತ್ರ ಪ್ರಯೋಗಿಸುತ್ತಿದ್ದಾರೆ. ನಾವೆಲ್ಲಾ ಭಾರತವನ್ನು ವಿವಿಧತೆಯಲ್ಲಿ ಏಕತೆ ಸಾಧಿಸಿಕೊಂಡ ದೇಶ ಎಂದು ಗ್ರಹಿಸಿದ್ದೆವು. ಹಿರಿಯರು ಇಂಥದ್ದೊಂದು ವೈವಿಧ್ಯಮಯ ಅಸ್ಮಿತೆಯನ್ನು ಪರಿಚಯಿಸಿ ನಮ್ಮ ತಿಳುವಳಿಕೆಗೆ ಭಿನ್ನ ಸಂಸ್ಕಾರವನ್ಮು ಒದಗಿಸಿದ್ದರು. ಆಗಿನ ಗ್ರಹಿಕೆಯು ದೇಶಾಭಿಮಾನದ ಹುಸಿ ವೇಷವನ್ನು ತೊಟ್ಟಿರಲಿಲ್ಲ. ಸೋಗಲಾಡಿತನದ ಹೆಮ್ಮೆಯ ಭಾವಾವೇಷವನ್ನು ಹೊದ್ದುಕೊಂಡಿರಲಿಲ್ಲ. ಬದಲಾಗಿ ಆ ಗ್ರಹಿಕೆಯು ಅಪ್ಪಟ ವಾಸ್ತವವಾದಿ ನೆಲೆಗಟ್ಟಿನಲ್ಲಿ ನಮ್ಮೊಳಗೆ ಅಂತರ್ಗತವಾಗಿತ್ತು. ಈಗ ಅಂಥ ಗ್ರಹಿಕೆಯ ಮೌಲಿಕ ವ್ಯಕ್ತಿಗತ ಸ್ವಯಂಸಂವಿಧಾನವನ್ನು ಧ್ವಂಸಗೊಳಿಸುವ ಭಾಷಿಕ ಅತಿರೇಕದ ಪ್ರಯತ್ನಗಳೇ ಶ್ರೇಷ್ಡ ಎಂದೆನ್ನಿಸುವ ಹಾಗೆ ಬಿಂಬಿತವಾಗುತ್ತಿವೆ. ಭಾಷಣ ಮತ್ತು ಬರಹದ ವಿವಿಧ ರೂಪಗಳು ಈ ಅಂಶವನ್ನು ಸಾಬೀತುಪಡಿಸುತ್ತಿವೆ. ವಿವಿಧತೆಯ ಒಟ್ಟಂದವನ್ಮು ಕಲುಷಿತಗೊಳಿಸುವುದರೊಂದಿಗೆ ಅಂಥ ಪ್ರಯತ್ನದ ಹಾದಿಯಲ್ಲಿ ಯುವಸಮೂಹ ಸಾಗುವಂತೆ ಭಾಷಿಕ ಹುನ್ನಾರದ ನೆರವಿನೊಂದಿಗೇ ಪ್ರಚೋದಿಸಲಾಗುತ್ತಿದೆ.
ವಿವಿಧತೆಯ ಜಾಗದಲ್ಲಿ ಏಕಭಾರತದ ಪರಿಕಲ್ಪನೆಯ ನಿಧಾನ ವಿಷವನ್ನು ಉಣಬಡಿಸಲಾಗುತ್ತಿದೆ. ಅತ್ಯಾಕರ್ಷಕ ಪುಟವಿನ್ಯಾಸ, ವರ್ಣರಂಜಿತ ಅಕ್ಷರಗಳು, ಜನಪ್ರಿಯ ಸೆಲೆಬ್ರಿಟಿಗಳ ವಯ್ಯಾರದ ನುಡಿಗಳು, ಇಂಥವುಗಳೊಂದಿಗಿನ ಜಾಹಿರಾತು, ಸುದ್ದಿ ಬಿಂಬಗಳು ಆ ವಿಷವನ್ನು ರವಾನಿಸುತ್ತಿವೆ. ಜನರು ಇರಿಸಿಕೊಂಡ ವಿಶ್ವಾಸವನ್ನು ಭಗ್ನಗೊಳಿಸುತ್ತಿವೆ. ವಿವಿಧತೆಯನ್ನು ಉಳಿಸಿಕೊಂಡು ಏಕತೆಯನ್ನು ಸಾಧಿಸುವುದೇ ಆಡಳಿತದ ಪರಮ ಗುರಿಯಾಗಬೇಕು. ವಿವಿಧತೆಗಳ ಸೌಂದರ್ಯದ ಪ್ರಾಬಲ್ಯವಿಲ್ಲದ ಏಕತೆ ಅರ್ಥವಂತಿಕೆ ಕಳೆದುಕೊಳ್ಳುತ್ತದೆ. ವೈವಿಧ್ಯತೆ ಇದ್ದಾಗಲೇ ಭಾರತ ಸರ್ವಜನಾಂಗದ ಶಾಂತಿಯ ತೋಟವಾಗುತ್ತದೆ. ಏಕಭಾರತ ಕಟ್ಟುವ ಗುಂಗಿನಲ್ಲಿ ಈ ತೋಟಕ್ಕೆ ನುಗ್ಗಿ ಸಾಂಸ್ಕೃತಿಕ ವೈವಿಧ್ಯ ಫಸಲನ್ನು ಧ್ವಂಸಗೊಳಿಸದರೆ ದೇಶ ಸಶಕ್ತವಾಗುವುದಿಲ್ಲ.ಈ ನೆಲದ ಮಣ್ಣು ವೈವಿಧ್ಯಮಯ ಫಲವತ್ತತೆಯನ್ನು ಕಳೆದುಕೊಳ್ಳುತ್ತದೆ. ಶಾಲೆ- ಕಾಲೇಜುಗಳಲ್ಲಿ ಅನುರಣನಗೊಳ್ಳುವ ನಾಡಗೀತೆಯನ್ನು ಮತ್ತೆ ಓದಿಕೊಳ್ಳಬೇಕಿದೆ. ಹಾಡಿನ ರಾಗಮಾಧುರ್ಯದಂತೆಯೇ ನಾಡಗೀತೆಯ ಪ್ರತಿಯೊಂದು ಸಾಲು ರಚಿತವಾಗಿದೆ. ‘ಜಯ ಭಾರತ ಜನನಿಯ ತನುಜಾತೆ, ಜಯಹೇ ಕರ್ನಾಟಕ ಮಾತೆ’ ಸಾಲುಗಳ ವೈಚಾರಿಕ ಸೌಂದರ್ಯವನ್ನು ಅರ್ಥೈಸಿಕೊಳ್ಳಬೇಕಿದೆ. ಈ ದೇಶದ ವೈವಿಧ್ಯದ ಸೌಂದರ್ಯವನ್ನು ವಿಶಿಷ್ಠವಾಗಿ ಹಿಡಿದಿಟ್ಡ ಕುವೆಂಪು ಅವರ ವೈಚಾರಿಕ ಪ್ರಜ್ಞೆಯನ್ನು ಆಪ್ತವಾಗಿಸಿಕೊಳ್ಳಬೇಕಿದೆ.
–ಡಾ.ಎನ್.ಕೆ.ಪದ್ಮನಾಭ
ದಿನದ ಸುದ್ದಿ
ಸಂವಿಧಾನಕ್ಕೆ ಅಪಾಯವಾದರೆ, ಬಡವರ, ಶ್ರಮಿಕರ ಭವಿಷ್ಯಕ್ಕೆ ಅಪಾಯವಾದಂತೆ : ಸಿಎಂ ಸಿದ್ದರಾಮಯ್ಯ
ಸುದ್ದಿದಿನ,ಮಡಿಕೇರಿ : ದೇಶದ ಸಂವಿಧಾನಕ್ಕೆ ಅಪಾಯವಾದರೆ ಈ ದೇಶದ ಮಹಿಳೆಯರ, ಬಡವರ, ಮಧ್ಯಮ ವರ್ಗದವರ, ಶ್ರಮಿಕರ, ಬದುಕು-ಭವಿಷ್ಯಕ್ಕೆ ಅಪಾಯ ಎಂದರ್ಥ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಮಡಿಕೇರಿಯಲ್ಲಿ ನಡೆದ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ಈ ಲೋಕಸಭಾ ಚುನಾವಣೆ ನಮಗೊಂದು ಅವಕಾಶ. ಈ ಬಾರಿ ಬಿಜೆಪಿಯನ್ನು ಸೋಲಿಸಿ ಕಾಂಗ್ರೆಸ್ ಗೆಲ್ಲಿಸುವ ಮೂಲಕ ಪ್ರಜಾತಂತ್ರ ಉಳಿಸಬೇಕು ಎಂದು ಕರೆ ನೀಡಿದರು.
ಬಳಿಕ ತುಮಕೂರಿನಲ್ಲಿ ಮಾತನಾಡಿದ ಅವರು, ರಾಜ್ಯದ ಹಿತಾಸಕ್ತಿ ಕಾಪಾಡುವಲ್ಲಿ ಕಳೆದ ಲೋಕಸಭಾ ಚುನಾವಣೆಯಲ್ಲಿ ಆಯ್ಕೆಯಾಗಿದ್ದ ಬಿಜೆಪಿ ಸಂಸದರು ವಿಫಲರಾಗಿದ್ದಾರೆ ಎಂದು ಮುಖ್ಯಮಂತ್ರಿ ಆರೋಪಿಸಿದರು.
ಮಹಿಳೆಯರ ಅಭ್ಯುದಯಕ್ಕಾಗಿ ಪಂಚ ಗ್ಯಾರಂಟಿ ಯೋಜನೆಗಳನ್ನು ನುಡಿದಂತೆ ಜಾರಿಗೆ ತಂದಿದ್ದೇವೆ. ಇದರಿಂದಾಗಿ ಮಹಿಳೆಯರ ಜೀವನದಲ್ಲಿ ಸುಧಾರಣೆ ಕಂಡಿದೆ, ಈ ಯೋಜನೆಯ ಫಲಾನುಭವಿಗಳ ಬಗ್ಗೆ ಟೀಕಿಸುವುದು ಸರಿಯಲ್ಲ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಮಡಿಕೇರಿಯಲ್ಲಿ ನಡೆದ ಜನಧ್ವನಿ-2 ಬೃಹತ್ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದೆ.
ಸಂವಿಧಾನಕ್ಕೆ ಅಪಾಯ ಎಂದರೆ ದೇಶದ ಮಹಿಳೆಯರು, ಬಡವರು, ಮಧ್ಯಮ ವರ್ಗದವರು, ಶೂದ್ರರು, ಶ್ರಮಿಕರ ಬದುಕು-ಭವಿಷ್ಯಕ್ಕೆ ಅಪಾಯ ಎಂದರ್ಥ.
ಭಾರತದಲ್ಲಿ ಪ್ರಜಾತಂತ್ರ ಅಪಾಯದಲ್ಲಿದೆ. ಇದನ್ನು ಉಳಿಸುವ ಅನಿವಾರ್ಯತೆ ನಮ್ಮೆಲ್ಲರ ಮುಂದಿದೆ. ಈ ಲೋಕಸಭಾ ಚುನಾವಣೆ ನಮಗೊಂದು… pic.twitter.com/UapeRxBcZP
— Siddaramaiah (@siddaramaiah) April 14, 2024
ಸುದ್ದಿದಿನ.ಕಾಂ|ವಾಟ್ಸಾಪ್|9980346243
ದಿನದ ಸುದ್ದಿ
ವಿವಿಧ ಜಿಲ್ಲೆಗಳಲ್ಲಿ ಡಾ. ಬಾಬು ಜಗಜೀವನ್ ರಾಮ್ 117ನೇ ಜನ್ಮ ದಿನಾಚರಣೆ
ಸುದ್ದಿದಿನ ಡೆಸ್ಕ್ : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಡಾ. ಬಾಬು ಜಗಜೀವನ್ ರಾಮ್ ಅವರ 117ನೇ ಜನ್ಮ ದಿನಾಚರಣೆ ಪ್ರಯುಕ್ತ ವಿಧಾನ ಸೌದದಲ್ಲಿರುವ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು.
ಸಮಾಜ ಕಲ್ಯಾಣ ಸಚಿವ ಹೆಚ್.ಸಿ. ಮಹದೇವಪ್ಪ್ಪ, ಹಿರಿಯ ಶಾಸಕ ಈ. ತುಕಾರಾಮ್, ಮಾಜಿ ಸಚಿವ ಹೆಚ್.ಆಂಜನೇಯ, ವಿಧಾನ ಪರಿಷತ್ ಸದಸ್ಯ ಸುದಾಮ ದಾಸ್, ಮಹಿಳಾ ಆಯೋಗದ ಅದ್ಯಕ್ಷೆ ಡಾ. ನಾಗಲಕ್ಷ್ಮಿ ಸೇರಿ ಹಲವರು ಉಪಸ್ಥಿತರಿದ್ದರು. ದಾವಣಗೆರೆ ಜಿಲ್ಲಾಧಿಕಾರಿ ಕಚೇರಿಯಲ್ಲಿಂದು ಹಸಿರು ಕ್ರಾಂತಿಯ ಹರಿಕಾರ ಡಾ.ಬಾಬು ಜಗಜೀವನ ರಾಂ ಅವರ ಜನ್ಮ ಜಯಂತಿಯನ್ನು ಸಾಂಕೇತಿಕವಾಗಿ ಆಚರಿಸಲಾಯಿತು.
ಲೋಕಸಭಾ ಚುನಾವಣೆ ನೀತಿ ಸಂಹಿತೆ ಹಿನ್ನೆಲೆಯಲ್ಲಿ ಸರಳವಾಗಿ ನಡೆದ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್ ಜಗಜೀವನರಾಂ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು. ಮಂಡ್ಯದ ಡಿಸಿ ಪಾರ್ಕ್ ಎದುರು ಇರುವ ಜಗಜೀವನ್ರಾಮ್ ಪ್ರತಿಮೆಗೆ ಜಿಲ್ಲಾಡಳಿತದ ವತಿಯಿಂದ ಮಾಲಾರ್ಪಣೆ ಮಾಡಲಾಯಿತು. ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಡಾ.ಕುಮಾರ, ಎಸ್ಪಿ ಎನ್.ಯತೀಶ್ ಸೇರಿದಂತೆ ಅಧಿಕಾರಿಗಳ ವರ್ಗ ಹಾಗೂ ಜಗಜೀವನ್ರಾಮ್ ಅನುಯಾಯಿಗಳು ಭಾಗವಹಿಸಿದ್ದರು.
ಹಸಿರು ಕ್ರಾಂತಿಯ ಹರಿಕಾರ, ಮಾಜಿ ಉಪ ಪ್ರಧಾನಿ ಬಾಬು ಜಗಜೀವನ ರಾಂ ಅವರ ಅವರ 117ನೇ ಜಯಂತಿಯನ್ನು ಹಾವೇರಿ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸಾಂಕೇತಿಕವಾಗಿ ಆಚರಿಸಲಾಯಿತು. ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಬಾಬು ಜಗಜೀವನ್ ರಾಂ ಅವರ ಭಾವಚಿತ್ರಕ್ಕೆ ಜಿಲ್ಲಾಧಿಕಾರಿ ಜಿಲ್ಲಾಧಿಕಾರಿ ರಘುನಂದನ ಮೂರ್ತಿ ಪುಷ್ಪಾರ್ಚನೆ ಮಾಡಿ ಗೌರವ ನಮನ ಸಲ್ಲಿಸಿದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243
ದಿನದ ಸುದ್ದಿ
ಇಂದು ಚುನಾವಣಾ ಆಯೋಗ ಸಮಾವೇಶ
ಸುದ್ದಿದಿನ ಡೆಸ್ಕ್ : ಕಳೆದ ಲೋಕಸಭಾ ಚುನಾವಣೆಯಲ್ಲಿ ಕಡಿಮೆ ಮತದಾನವಾಗಿರುವ 11 ರಾಜ್ಯಗಳ ನಗರ ಪಾಲಿಕೆ ಆಯುಕ್ತರು ಮತ್ತು ಆಯ್ದ ಜಿಲ್ಲಾ ಚುನಾವಣಾ ಅಧಿಕಾರಿಗಳೊಂದಿಗೆ ಕೇಂದ್ರ ಚುನಾವಣಾ ಆಯೋಗ ಇಂದು ದೆಹಲಿಯಲ್ಲಿ ಸಮಾವೇಶ ನಡೆಸಲಿದೆ.
ಈ ಸಮಾವೇಶದಲ್ಲಿ ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಮತದಾನದ ಪ್ರಮಾಣವನ್ನು ಹೆಚ್ಚಿಸುವ ಮಾರ್ಗಗಳ ಕುರಿತು ಚರ್ಚಿಸಲಾಗುವುದು ಮತ್ತು ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಕಡಿಮೆ ಮತದಾನದ ಸಮಸ್ಯೆಯನ್ನು ಪರಿಹರಿಸಲು ಉದ್ದೇಶಿತ ಮತ್ತು ನಿರ್ದಿಷ್ಟ ಕ್ರಿಯಾ ಯೋಜನೆಗಳನ್ನು ಸಿದ್ಧಪಡಿಸಲಾಗುವುದು.
ದೆಹಲಿ, ಮುಂಬೈ, ಚೆನ್ನೈ, ಬೆಂಗಳೂರು, ಹೈದರಾಬಾದ್, ಅಹಮದಾಬಾದ್, ಪುಣೆ, ಥಾಣೆ, ನಾಗ್ಪುರ, ಪಾಟ್ನಾ ಸಾಹಿಬ್, ಲಖನೌ ಮತ್ತು ಕಾನ್ಪುರ ನಗರ ಪಾಲಿಕೆಯ ಆಯುಕ್ತರು ಮತ್ತು ಬಿಹಾರ ಮತ್ತು ಉತ್ತರದ ಆಯ್ದ ಜಿಲ್ಲಾ ಚುನಾವಣಾ ಅಧಿಕಾರಿಗಳು ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ. ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಮತ್ತು ಚುನಾವಣಾ ಆಯುಕ್ತರುಗಳಾದ ಜ್ಞಾನೇಶ್ ಕುಮಾರ್ ಮತ್ತು ಸುಖಬೀರ್ ಸಿಂಗ್ ಸಂಧು ಸಮಾವೇಶದ ಅಧ್ಯಕ್ಷತೆ ವಹಿಸಲಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243