ರಾಜಕೀಯ
ಅನರ್ಹ ಶಾಸಕರು ಜನಸಾಮಾನ್ಯರ ರಕ್ತ ಹೀರುವ ಮಾಫಿಯಾ ಗ್ಯಾಂಗ್ನವರಂತೆ, ಇಂಥವರನ್ನು ಸೋಲಿಸಿ : ಸಿದ್ದರಾಮಯ್ಯ ಮನವಿ
ಸುದ್ದಿದಿನ,ಹೊಸಪೇಟೆ : ಹೊಸಪೇಟೆಯಲ್ಲಿ ಆಯೋಜಿಸಿದ್ದ ಕಾಂಗ್ರೆಸ್ ಪಕ್ಷದ ಬೃಹತ್ ಸಮಾವೇಶದಲ್ಲಿ ಭಾಗವಹಿಸಿ, ನಮ್ಮ ಪಕ್ಷದ ಅಭ್ಯರ್ಥಿ ವೆಂಕಟರಾವ್ ಘೋರ್ಪಡೆ ಅವರಿಗೆ ಮತ ನೀಡಿ ಆಶೀರ್ವಾದ ಮಾಡಬೇಕೆಂದು ಕ್ಷೇತ್ರದ ಮತದಾರರಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮನವಿ ಮಾಡಿದರು.
ಹಿಂದೆ ಆನಂದ್ ಸಿಂಗ್ ನನ್ನ ಬಳಿ ಕಾಂಗ್ರೆಸ್ ಟಿಕೆಟ್ ಕೇಳಿದಾಗ ಏನಪ್ಪಾ ನಿನ್ನ ಹಿನ್ನೆಲೆ ಸರಿಯಿಲ್ಲ, ಅಕ್ರಮ ಗಣಿಗಾರಿಕೆ ಕೇಸಲ್ಲಿ ಜೈಲಿಗೆ ಹೋಗಿ ಬಂದಿದೀಯ, ಇಷ್ಟೆಲ್ಲ ಸಮಸ್ಯೆ ಇದ್ರೆ ಹೇಗಪ್ಪ? ಅಂದೆ. ನಾನು ಇನ್ಮೇಲೆ ಯಾವ ಭ್ರಷ್ಟಾಚಾರವನ್ನೂ ಮಾಡಲ್ಲ, ಕಾಂಗ್ರೆಸ್ಗೆ ನಿಷ್ಠನಾಗಿರ್ತೀನಿ ಅಂತ ನನಗೆ ಮಾತು ಕೊಟ್ಟಿದ್ರು. ಆನಂದ್ ಸಿಂಗ್ ತನ್ನನ್ನು ಆಯ್ಕೆ ಮಾಡಿದ ಜನತೆಗೂ ಬೆಲೆ ಕೊಡದೆ ಪಕ್ಷಾಂತರ ಮಾಡಿ ಮತ್ತೆ ಚುನಾವಣೆ ಎದುರಾಗುವಂತೆ ಮಾಡಿದ್ದಾರೆ. ಯಾಕಪ್ಪ ಆನಂದ್ ಸಿಂಗ್ ನಾವೇನು ದ್ರೋಹ ಮಾಡಿದ್ವಿ ನಿಮ್ಗೆ? ಕ್ಷೇತ್ರದ ಜನತೆ ಮತ ನೀಡಿ ಗೆಲ್ಲಿಸಿದ್ದು ತಪ್ಪಾ? ಅಥವಾ ನಿಮ್ಮ ಮಾತನ್ನು ನಂಬಿ ಪಕ್ಷದ ಟಿಕೆಟ್ ಕೊಟ್ಟಿದ್ದು ತಪ್ಪಾ? ಎಂದು ಪ್ರಶ್ನಿಸಿದರು.
ಆನಂದ್ ಸಿಂಗ್ ಸೇರಿದಂತೆ 15 ಶಾಸಕರು ಪಕ್ಷಾಂತರ ಮಾಡಿರುವುದು ಸಾಬೀತಾಗಿರುವುದರಿಂದ ಸುಪ್ರೀಂ ಕೋರ್ಟ್ ಅವರನ್ನು ರಾಜಕೀಯದಲ್ಲಿ ಮುಂದುವರೆಯಲು ನಾಲಾಯಕ್ ಎಂದು ಹೇಳಿದೆ. ಈಗ ಜನತೆಯ ಸರದಿ, ಈ ಚುನಾವಣೆಯಲ್ಲಿ ಅನರ್ಹ ಶಾಸಕ ಆನಂದ್ ಸಿಂಗ್ರನ್ನು ತಿರಸ್ಕರಿಸಿ, ಶಾಶ್ವತವಾಗಿ ಮನೆಗೆ ಕಳುಹಿಸಿ, ಕೋರ್ಟ್ ತೀರ್ಪನ್ನು ಎತ್ತಿಹಿಡಿಯಬೇಕು. ಈ ಚುನಾವಣೆ ಇಲ್ಲಿನ ಮತದಾರರ ಸ್ವಾಭಿಮಾನದ ಪ್ರಶ್ನೆ. ಆನಂದ್ ಸಿಂಗ್ ಹೆಸರು ಈಗ ಅನರ್ಹ ಸಿಂಗ್ ಆಗಿದೆ. ಅವರಿಗೆ ಬಡವರ ಕಷ್ಟ ಗೊತ್ತಿಲ್ಲ. ಕ್ಷೇತ್ರದ ಜನರ ಸಮಸ್ಯೆ ಕೇಳಲು ಬಿಡುವಿಲ್ಲ. ಚುನಾವಣೆಯಲ್ಲಿ ಗೆದ್ದಾಗಿನಿಂದ ಈವರೆಗೆ ಕ್ಷೇತ್ರಕ್ಕೇ ಬಂದಿಲ್ಲ. ಇಂಥ ವ್ಯಕ್ತಿ ಬೇಕೇ? ಅಥವಾ ಸರಳ ಸಜ್ಜನ ನಾಯಕ ಘೋರ್ಪಡೆಯವರು ಬೇಕೇ ಎಂದು ಯೋಚಿಸಬೇಕಿದೆ ಎಂದರು.
ಇದೇ ಆನಂದ್ ಸಿಂಗ್, ಜನಾರ್ದನ ರೆಡ್ಡಿ, ಯಡಿಯೂರಪ್ಪ ಅವರ ವಿರುದ್ಧ ವಿಧಾನಸಭೆಯಲ್ಲಿ ತೊಡೆತಟ್ಟಿ, ಅವರಿಗೆ ಸವಾಲು ಹಾಕಿ ಬೆಂಗಳೂರಿನಿಂದ ಬಳ್ಳಾರಿವರೆಗೆ ಪಾದಯಾತ್ರೆ ಮಾಡಿದ್ದರ ಫಲ ಬಳ್ಳಾರಿಯ ಗಣಿಕಳ್ಳರೆಲ್ಲ ಜೈಲಿಗೆ ಹೋಗಿ ಬಂದಿದ್ದರು. ಇಂಥ ಲೂಟಿಕೋರರ ಕೈಗೆ ಮತ್ತೆ ಅಧಿಕಾರ ಸಿಗಬೇಕಾ? ನಾನು ಪ್ರಚಾರಕ್ಕೆಂದು ಹೋದ ಕಡೆಗಳಲ್ಲಿ ಸರ್ಕಾರ 4 ಕೆ.ಜಿ ಅಕ್ಕಿ ಕೊಡ್ತಿದೆ, ರಾಗಿ, ಗೋಧಿ ನಿಯಮಿತವಾಗಿ ಕೊಡ್ತಿಲ್ಲ ಎಂದು ಜನ ತಮ್ಮ ಕಷ್ಟ ಹೇಳಿಕೊಳ್ತಿದ್ದಾರೆ. ‘ಈ ಕಷ್ಟ ಇನ್ನು ಕೆಲವೇ ದಿನ ಮಾತ್ರ. ಉಪಚುನಾವಣೆ ಫಲಿತಾಂಶದ ನಂತರ ನಮ್ಮ ಸರ್ಕಾರ ಬರುತ್ತೆ, ಆಗ ಮತ್ತೆ 10 ಕೆ.ಜಿ ಅಕ್ಕಿ ಕೊಡ್ತೀವಿ’ ಅಂತ ಅವರಿಗೆ ಧೈರ್ಯ ಹೇಳಿದ್ದೀನಿ. ಆಪರೇಷನ್ ಕಮಲಕ್ಕೆ ನೂರಾರು ಕೋಟಿ ಖರ್ಚು ಯಡಿಯೂರಪ್ಪ ಅವರ ಬಳಿ ಹಣವಿದೆ, ಆದ್ರೆ ಬಡಜನರ ಎರಡು ಹೊತ್ತಿನ ಊಟಕ್ಕೆ ಅಕ್ಕಿ ಕೊಡಲು ಹಣವಿಲ್ಲ. ಬಡವರ ಅನ್ನ ಕಸಿದ ಇಂಥ ಭಂಡ ಸರ್ಕಾರ ಬೇಕಾ? ಈ ಉಪಚುನಾವಣೆಯಲ್ಲಿ ಮತ ನೀಡುವ ಮುನ್ನ ಜನತೆ ಈ ವಿಚಾರ ನೆನಪು ಮಾಡಿಕೊಳ್ಳಬೇಕು. ಸ್ವಾರ್ಥ ಸೋಲಬೇಕು, ಪ್ರಜಾತಂತ್ರ ಗೆಲ್ಲಬೇಕು ಎಂಬುದು ನನ್ನ ಆಶಯ ಎಂದು ಹೇಳಿದರು.
ತನ್ನ ಸ್ವಾರ್ಥಸಾಧನೆ, ಅಕ್ರಮ ಆಸ್ತಿಯನ್ನು ರಕ್ಷಿಸಿಕೊಳ್ಳಲು ಆನಂದ್ ಸಿಂಗ್ ರಾಜಕೀಯದಲ್ಲಿ ಇದ್ದಾರೆ. ಜನಸೇವೆ ಮಾಡಲು ಅಲ್ಲ. ಇವರೆಲ್ಲ ಜನಸಾಮಾನ್ಯರ ರಕ್ತ ಹೀರುವ ಮಾಫಿಯಾ ಗ್ಯಾಂಗ್ನವರು. ಎಲ್ಲ 15 ಅನರ್ಹ ಶಾಸಕರು ಇಂಥವರೆ. ಇವರು ಗೆದ್ದರೆ ಯಾರಿಗೂ ಪ್ರಯೋಜನವಿಲ್ಲ. ಇಂಥವರನ್ನು ಸೋಲಿಸಿ ದೇಶಕ್ಕೆ ಉತ್ತಮ ಸಂದೇಶ ರವಾನಿಸಬೇಕು ಎಂದು ಕ್ಷೇತ್ರದ ಮತದಾರರಲ್ಲಿ ಕೈಮುಗಿದು ಮನವಿ ಮಾಡುತ್ತೇನೆ ಎಂದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243
ದಿನದ ಸುದ್ದಿ
ಲೋಕಸಭಾ ಚುನಾವಣೆಯ ಮೊದಲ ಹಂತಕ್ಕೆ ನಾಮಪತ್ರ ಸಲ್ಲಿಕೆಗೆ ಇಂದು ಕೊನೆಯ ದಿನ
ಸುದ್ದಿದಿನ ಡೆಸ್ಕ್ : ಲೋಕಸಭಾ ಚುನಾವಣೆಯ ಮೊದಲ ಹಂತಕ್ಕೆ ನಾಮಪತ್ರ ಸಲ್ಲಿಸಲು ಇಂದು ಕೊನೆಯ ದಿನವಾಗಿದೆ.
ನಾಳೆ ನಾಮಪತ್ರಗಳ ಪರಿಶೀಲನೆ ನಡೆಯಲಿದ್ದು, ಇದೇ 30 ನಾಮಪತ್ರ ಹಿಂಪಡೆಯಲು ಕಡೆಯ ದಿನವಾಗಿದೆ. ಇದೇ ವೇಳೆ ಬಿಹಾರದಲ್ಲಿ ನಾಮಪತ್ರ ಸಲ್ಲಿಕೆಗೆ ನಾಳೆ ಕಡೆ ದಿನವಾಗಿದ್ದು, ಈ ತಿಂಗಳ 30 ರಂದು ನಾಮಪತ್ರಗಳ ಪರಿಶೀಲನೆ ಹಾಗೂ ಏಪ್ರಿಲ್ 2ರಂದು ನಾಮತ್ರ ಹಿಂಪಡೆಯುವಿಕೆಗೆ ಕೊನೆಯ ದಿನವಾಗಿರುತ್ತದೆ.
ಏಪ್ರಿಲ್ 19 ರಂದು 17 ರಾಜ್ಯಗಳು ಮತ್ತು ನಾಲ್ಕು ಕೇಂದ್ರಾಡಳಿತ ಪ್ರದೇಶಗಳಲ್ಲಿನ 102ಲೋಕಸಭಾ ಕ್ಷೇತ್ರಗಳಿಗೆ ಮೊದಲ ಹಂತದಲ್ಲಿ ಚುನಾವಣೆ ನಡೆಯಲಿದೆ. ಅದರಂತೆ ತಮಿಳುನಾಡಿನಲ್ಲಿ 39, ರಾಜಸ್ಥಾನದಲ್ಲಿ 12, ಉತ್ತರ ಪ್ರದೇಶದಲ್ಲಿ 8, ಮಧ್ಯಪ್ರದೇಶದಲ್ಲಿ 6, ಉತ್ತರಾಖಂಡ, ಅಸ್ಸಾಂ ಮತ್ತು ಮಹಾರಾಷ್ಟ್ರದಲ್ಲಿ ತಲಾ 5 , ಬಿಹಾರದಲ್ಲಿ 4, ಪಶ್ಚಿಮ ಬಂಗಾಳದಲ್ಲಿ 3, ಅರುಣಾಚಲ ಪ್ರದೇಶ, ಮಣಿಪುರ, ಮೆಘಾಲಯದಲ್ಲಿ ತಲಾ 2 ಮತ್ತು ಛತ್ತೀಸ್ಗಢ, ಮಿಜೋರಾಂ, ನಾಗಾಲ್ಯಾಂಡ್, ಸಿಕ್ಕಿಂ, ತ್ರಿಪುರ, ಅಂಡಮಾನ್-ನಿಕೋಬಾರ್ ದ್ವೀಪಗಳು, ಜಮ್ಮು-ಕಾಶ್ಮೀರ, ಲಕ್ಷದ್ವೀಪ ಮತ್ತು ಪುದುಚೇರಿಯಲ್ಲಿ ತಲಾ ಒಂದು ಕ್ಷೇತ್ರದಲ್ಲಿ ಮೊದಲ ಹಂತದಲ್ಲಿ ಚುನಾವಣೆ ನಡೆಯಲಿದೆ.
ಎರಡನೇ ಹಂತದಲ್ಲಿ 89 ಲೋಕಸಭಾ ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದ್ದು, ಚುನಾವಣಾ ಆಯೋಗ ನಾಳೆ ಅಧಿಸೂಚನೆ ಹೊರಡಿಸಲಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243
ದಿನದ ಸುದ್ದಿ
ಲೋಕಸಭಾ ಚುನಾವಣೆ | ಹೊಸ ಮತದಾರರೆಷ್ಟು ಗೊತ್ತಾ..?
ಸುದ್ದಿದಿನ ಡೆಸ್ಕ್ : 2024ರ ಲೋಕಸಭಾ ಚುನಾವಣೆಯಲ್ಲಿ ಅಂದಾಜು ಒಂದು ಕೋಟಿ 80 ಲಕ್ಷ ಹೊಸ ಮತದಾರರು ತಮ್ಮ ಅಮೂಲ್ಯ ಹಕ್ಕನ್ನು ಮೊದಲ ಬಾರಿಗೆ ಚಲಾಯಿಸಲಿದ್ದಾರೆ. ಇವರೆಲ್ಲ 18-19ರ ಪ್ರಾಯದವರು.
ಮೊದಲ ಬಾರಿಗೆ ಮತ ಚಲಾಯಿಸುವ ಯುವಕರಿಗೆ ಅವರ ಈ ಪವಿತ್ರ ಕರ್ತವ್ಯದ ಮಹತ್ವವನ್ನು ಮನಗಾಣಿಸುವ ಸಲುವಾಗಿ ಸಾಮಾಜಿಕ ಜಾಲತಾಣಗಳಲ್ಲಿ ’ನಾನು ಖಂಡಿತ ಮತ ಚಲಾಯಿಸುತ್ತೇನೆ’ ಎನ್ನುವ ಪ್ರಚಾರ ಆಂದೋಲನಗಳು ನಡೆಯುತ್ತಿವೆ.
ಈ ಬಾರಿ ಚುನಾವಣೆಯಲ್ಲಿ ಭಾಗವಹಿಸುವ ಯುವ ಮತದಾರರ ಪೈಕಿ 20ರಿಂದ 29ವರ್ಷ ವಯೋಮಾನದ ಅಂದಾಜು 19 ಕೋಟಿ 74 ಲಕ್ಷ ಮತದಾರರು ಪಾಲ್ಗೊಳ್ಳಲಿದ್ದಾರೆ. 18 ವರ್ಷಕ್ಕೆ ಮತದಾನದ ಹಕ್ಕು ದೊರೆಯುವುದಾದರೂ ಈಗ 17 ವರ್ಷ ತುಂಬಿರುವ ಯುವಜನ ಸಮೂಹದಿಂದ 13.4ಲಕ್ಷಕ್ಕೂ ಅಧಿಕ ಅರ್ಜಿಗಳನ್ನು ಮುಂಚಿತವಾಗಿಯೇ ಸ್ವೀಕರಿಸಲಾಗಿದೆ.
ಕೇಂದ್ರ ಚುನಾವಣಾ ಆಯೋಗ ಯುವ ಜನರಿಗೆ ಮತದಾನಕ್ಕೆ ಪ್ರೋತ್ಸಾಹ ನೀಡುವ ಸಲುವಾಗಿ ಸಚಿನ್ ತೆಂಡುಲ್ಕರ್ ಮತ್ತು ರಾಜಕುಮಾರ್ ರಾವ್ ಅವರಂತಹ ರಾಷ್ಟ್ರೀಯ ದಿಗ್ಗಜರಿಂದ ಸಂದೇಶಗಳನ್ನು ಪ್ರಸಾರ ಮಾಡುತ್ತಿದೆ. ಸಾಮಾಜಿಕ ಮಾಧ್ಯಮ ಅಭಿಯಾನಗಳು ಮತ್ತು ರೇಡಿಯೋ ಮೂಲಕವೂ ಸಂದೇಶಗಳನ್ನು ಪ್ರಸಾರ ಮಾಡಲಾಗುತ್ತದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243
ದಿನದ ಸುದ್ದಿ
ಬೆಂಗಳೂರಿನಲ್ಲಿ ಬಿಜೆಪಿ ನೂತನ ಮಾಧ್ಯಮಕೇಂದ್ರ ಆರಂಭ
ಸುದ್ದಿದಿನ,ಬೆಂಗಳೂರು : ದಕ್ಷಿಣ ಭಾರತದಲ್ಲಿ ಭಾರತೀಯ ಜನತಾಪಕ್ಷಕ್ಕೆ, ಕರ್ನಾಟಕ ಹೆಬ್ಬಾಗಿಲಿನಂತಿದ್ದು, ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಪಕ್ಷ ಅತಿ ಹೆಚ್ಚು ಸ್ಥಾನಗಳನ್ನು ಗೆಲ್ಲಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿದ್ದಾರೆ.
ಬರಲಿರುವ ಮಹಾಚುನಾವಣೆಗೆ ಪಕ್ಷದ ಕೇಂದ್ರಬಿಂದುವಾಗಿ ಕಾರ್ಯನಿರ್ವಹಿಸಲಿರುವ ನೂತನ ಮಾಧ್ಯಮ ಕೇಂದ್ರದಲ್ಲಿ ಪಕ್ಷದ ರಾಜ್ಯ ನಾಯಕರು ಇಂದು ಬೆಳಿಗ್ಗೆ ನಡೆಸಿದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ, ಜನಪರ ಆಡಳಿತ ನೀಡುವಲ್ಲಿ ಮತ್ತು ಬರಪರಿಸ್ಥಿತಿ ನಿರ್ವಹಣೆಯಲ್ಲಿ ಸಂಪೂರ್ಣ ವಿಫಲವಾಗಿದೆ ಎಂದು ಆಪಾದಿಸಿದರು.
ಜನವಿರೋಧಿ ಕ್ರಮಗಳಿಂದಾಗಿ ರಾಜ್ಯದ ಜನತೆ ಈ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ತಕ್ಕ ಪಾಠ ಕಲಿಸಲಿದ್ದಾರೆ ಎಂದರು.
ಲೋಕಸಭಾ ಚುನಾವಣೆಗೆ ರಾಜ್ಯದಲ್ಲಿ ಅತಿಹೆಚ್ಚು ಸ್ಥಾನಗಳನ್ನು ಗೆಲ್ಲುವ ಉದ್ದೇಶದಿಂದ ಕಾರ್ಯತಂತ್ರ ರೂಪಿಸಲು ತನ್ನ 200ಕ್ಕೂ ಹೆಚ್ಚು ಕಾರ್ಯಕರ್ತರಿಗೆ ಕಾರ್ಯಾಗಾರ ನಡೆಸಲು ಬಿಜೆಪಿ ನಿರ್ಧರಿಸಿದೆ. ಈ ನಡುವೆ ಲೋಕಸಭಾ ಚುನಾವಣೆ ಕುರಿತಂತೆ ದೆಹಲಿಯಲ್ಲಿ ಇಂದು ಬಿಜೆಪಿ ಕೇಂದ್ರೀಯ ಚುನಾವಣಾ ಸಮಿತಿಯ ಸಭೆ ನಡೆಯಲಿದೆ.
ಚುನಾವಣೆಗೆ ಪಕ್ಷದ ಕಾರ್ಯತಂತ್ರಗಳನ್ನು ಕುರಿತು ಸಮಾಲೋಚಿಸಲು ಪ್ರಧಾನಮಂತ್ರಿ ನರೇಂದ್ರ ಮೋದಿ, ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ, ಗೃಹ ಸಚಿವ ಅಮಿತ್ ಶಾ ಹಾಗೂ ಚುನಾವಣಾ ಸಮಿತಿಯ ಸದಸ್ಯರು ಮತ್ತಿತರ ಪದಾಧಿಕಾರಿಗಳು ಈ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ.
"ವಿಕಸಿತ ಭಾರತಕ್ಕಾಗಿ
ಮತ್ತೊಮ್ಮೆ ಮೋದಿ ಸರ್ಕಾರ"ಮಲ್ಲೇಶ್ವರಂನ ಜಿ.ಎಂ. ರಿಜಾಯ್ಸ್ ಹೋಟೆಲ್ನಲ್ಲಿ ಬಿಜೆಪಿ ಲೋಕಸಭಾ ಚುನಾವಣಾ 2024ರ ಮಾಧ್ಯಮ ಕೇಂದ್ರದ ಉದ್ಘಾಟನೆ ನೆರವೇರಿಸಲಾಯಿತು. ರಾಜ್ಯದೆಲ್ಲೆಡೆ ಪ್ರಧಾನಿ ಮೋದಿ ಜೀ ಅವರ ಪರವಾದ ಅಲೆ ವ್ಯಾಪಕವಾಗಿದ್ದು 'ಮೋದಿ ಮತ್ತೊಮ್ಮೆ' ಎಂಬುದು ಜನಸಾಮಾನ್ಯರ ಸಂಕಲ್ಪವಾಗಿದೆ. ದೇಶದಲ್ಲಿ 400 ಹಾಗೂ… pic.twitter.com/gYbNmo1Poo
— Vijayendra Yediyurappa (Modi Ka Parivar) (@BYVijayendra) March 23, 2024
ಸುದ್ದಿದಿನ.ಕಾಂ|ವಾಟ್ಸಾಪ್|9980346243
-
ದಿನದ ಸುದ್ದಿ7 days ago
ನಾಯಕನ ಹಟ್ಟಿ | ಶ್ರೀಗುರು ತಿಪ್ಪೇರುದ್ರಸ್ವಾಮಿ ರಥೋತ್ಸವಕ್ಕೆ ವಿಶೇಷ ಬಸ್ ಸೌಲಭ್ಯ
-
ದಿನದ ಸುದ್ದಿ6 days ago
ಲೋಕಸಭಾ ಚುನಾವಣೆ : ಚುನಾವಣಾ ಚಟುವಟಿಕೆಗಳ ಕುರಿತ ಜಿಲ್ಲಾವಾರು ಮಾಹಿತಿ
-
ದಿನದ ಸುದ್ದಿ6 days ago
ವಿಜಯಪುರ ಜಿಲ್ಲಾ ಸಾಹಿತ್ಯ ಸಮ್ಮೇಳನದ ಕವಿಗೋಷ್ಠಿಗೆ ಮೈಬೂಬಸಾಹೇಬ.ವೈ.ಜೆ ಆಯ್ಕೆ
-
ದಿನದ ಸುದ್ದಿ6 days ago
ಬೆಂಗಳೂರಿನಲ್ಲಿ ಬಿಜೆಪಿ ನೂತನ ಮಾಧ್ಯಮಕೇಂದ್ರ ಆರಂಭ
-
ದಿನದ ಸುದ್ದಿ5 days ago
ಲೋಕಸಭಾ ಚುನಾವಣೆ | ಹೊಸ ಮತದಾರರೆಷ್ಟು ಗೊತ್ತಾ..?
-
ದಿನದ ಸುದ್ದಿ5 days ago
ಕವಿತೆ | ನೆನಪು
-
ದಿನದ ಸುದ್ದಿ3 days ago
ಚುನಾವಣಾ ಅಕ್ರಮ ; ಸಾರ್ವಜನಿಕರು ದೂರು ಸಲ್ಲಿಸಲು ಆಯೋಗದಿಂದ ಸಿ-ವಿಜಿಲ್ ಆಪ್ ಅಭಿವೃದ್ಧಿ
-
ದಿನದ ಸುದ್ದಿ2 days ago
ಲೋಕಸಭಾ ಚುನಾವಣೆಯ ಮೊದಲ ಹಂತಕ್ಕೆ ನಾಮಪತ್ರ ಸಲ್ಲಿಕೆಗೆ ಇಂದು ಕೊನೆಯ ದಿನ