Connect with us

ರಾಜಕೀಯ

ಅಹಿಂಸೆ : ಎಂದಿಗೂ ಬತ್ತದ ನದಿಯ ನಿನಾದ

Published

on

ಸಂಘರ್ಷವನ್ನು ಸ್ಥಾಯಿಯಾಗಿಸಿ ಪ್ರಯೋಜನ ಪಡೆದುಕೊಳ್ಳುವ ಪ್ರಯತ್ನಗಳು ನಿರಂತರವಾಗಿ ಯಶಸ್ಸು ಕಾಣುತ್ತಿರುವ ಪ್ರಸ್ತುತ ಸಂದರ್ಭದಲ್ಲಿ ಅಹಿಂಸೆಯ ಮೌಲ್ಯದ ಆಧಾರದಲ್ಲಿ ಪರ್ಯಾಯ ರಾಜಕಾರಣ ರಾಷ್ಟ್ರದಾದ್ಯಂತ ರೂಪುಗೊಳ್ಳಬೇಕಾದ ಅನಿವಾರ್ಯತೆಯನ್ನು ಹಿಂದೆಂದಿಗಿಂತಲೂ ಹೆಚ್ಚಾಗಿ ಕಾಡಿಸಿಕೊಳ್ಳಬೇಕಿದೆ. ದೇಶವೊಂದು ಇನ್ನೊಂದು ರಾಷ್ಟ್ರದ ಕುರಿತು ಸಿಟ್ಟಿಗೇಳುವಿಕೆ ಜಾಗತಿಕ ಮಟ್ಟದ ಸಂಘರ್ಷವನ್ನು ಸಂಕೇತಿಸಿದರೆ, ಜನರ ನಡುವೆಯೇ ನಡೆಯುವ ಜಗಳಗಳು ಆಂತರಿಕ ವ್ಯಗ್ರತೆಗೆ ಸಾಕ್ಷಿಯಾಗುತ್ತವೆ. ವಿವಿಧ ಸ್ತರಗಳಲ್ಲಿ ವ್ಯಗ್ರತೆಯು ವ್ಯಕ್ತಿಯೊಳಗೆ ಮೇಳೈಸಿಕೊಳ್ಳುತ್ತದೆ. ಅದು ವಿವಿಧ ವರ್ತನೆಗಳಲ್ಲಿ ವ್ಯಕ್ತವಾಗುತ್ತದೆ. ಆ ವರ್ತನೆಗಳು ಉಂಟುಮಾಡುವ ಪರಿಣಾಮಗಳು ವ್ಯಕ್ತಿಗತ ಹಾಗೂ ಸಾಮೂಹಿಕ ಸಂಘರ್ಷಗಳ ರೂಪದಲ್ಲಿ ಕಂಡುಬರುತ್ತವೆ. ಸಾಮಾಜಿಕ, ರಾಜಕೀಯ ಮತ್ತು ಧಾರ್ಮಿಕ ಅಧಿಕಾರ ಕೇಂದ್ರಗಳು ಈ ರೂಪಗಳನ್ನು ತಮ್ಮ ತಮ್ಮ ಅವಶ್ಯಕತೆಗಳಿಗೆ ಅನುಗುಣವಾಗಿ ಅತ್ಯಂತ ಚಾಣಾಕ್ಷಯುತವಾಗಿ ಬಳಸಿಕೊಳ್ಳುತ್ತವೆ. ದೇಶ, ಧರ್ಮ ಮತ್ತು ಜಾತಿಯ ಅಸ್ಮಿತೆಯ ಪ್ರಶ್ನೆಗಳನ್ನು ಮುನ್ನೆಲೆಗೆ ತಂದು ತಮ್ಮ ಉದ್ದೇಶಗಳನ್ನು ಈಡೇರಿಸಿಕೊಳ್ಳುವ ರಾಜಕಾರಣ ಅತ್ಯಂತ ಯಶಸ್ವಿಯಾಗಿ ನಿಭಾಯಿಸಲ್ಪಡುತ್ತದೆ.

ಪ್ರಜಾಪ್ರಭುತ್ವವಾದಿ ಆಡಳಿತ ವಿನ್ಯಾಸಗೊಳಿಸಗೊಳಿಸಿಕೊಂಡಿರುವ ಅಭಿವೃದ್ಧಿ ಮತ್ತು ಅದಕ್ಕೆ ಸಂಬಂಧಿಸಿದ ಪರಿಕಲ್ಪನೆಗಳು ಅಂಥ ರಾಜಕಾರಣಕ್ಕೆ ಪೂರಕವಾಗಿರುವಂತೆಯೇ ಪಾತ್ರವನ್ನು ನಿರ್ವಹಿಸುತ್ತಿವೆ. ಟೊಳ್ಳುತನದ ಸಂಗತಿಗಳೊಂದಿಗೆ ಅಭಿವೃದ್ದಿಯನ್ನು ವ್ಯಾಖ್ಯಾನಿಸುವ ಪ್ರವೃತ್ತಿಯನ್ನು ಸಾರ್ವತ್ರಿಕಗೊಳಿಸುವ ಈ ಅಭಿವೃದ್ಧಿಯು ಅದಕ್ಕೆ ಸಹಕಾರಿಯಾಗಿರುತ್ತದೆ. ಪ್ರಶ್ನಿಸುವ ಬದಲಾಗಿ ಆ ಸಂಕುಚಿತ ರಾಜಕಾರಣವು ಅಧಿಕಾರ ಮತ್ತು ಪ್ರಭಾವವನ್ನು ಸ್ಥಿರವಾಗಿರಿಸಿಕೊಂಡು ಬಹುದೊಡ್ಡ ಸಾಮಾಜಿಕ ಪಲ್ಲಟದ ಸಾಧ್ಯತೆಗಳನ್ನು ಒಡೆಯುವುದರ ಕಡೆಗೆ ನಡೆದುಬಿಡುತ್ತದೆ. ಅಡ್ಡ ಎದುರಾಗುವವರನ್ನು ತಮ್ಮ ಪ್ರಭಾವೀ ಪ್ರಾಬಲ್ಯದ ಬಲದೊಂದಿಗೆ ಹತ್ತಿಕ್ಕಿಬಿಡುತ್ತದೆ. ಅಧಿಕಾರ ಕೇಂದ್ರಗಳ ಮೂಲಕ ದಾಟಿಕೊಂಡ ಶಿಕ್ಷಣವು ವ್ಯಕ್ತಿಗತ ಪ್ರಯೋಜನವಾದಿ ಯೋಚನೆಗಳನ್ನೇ ಬಿತ್ತುವುದರ ಕಡೆಗೆ ಆಸಕ್ತಿ ವಹಿಸುವುದರಿಂದ ಶಿಕ್ಷಿತ-ಸುಶಿಕ್ಷಿತ ವಲಯವೂ ಅನಕ್ಷರಸ್ತ ಸಮುದಾಯಗಳಲ್ಲಿರುವ ಮೌಢ್ಯವನ್ನೇ ಅಂತರ್ಗತ ಗುಣಲಕ್ಷಣವಾಗಿಸಿಕೊಳ್ಳುತ್ತದೆ. ಅದನ್ನು ಜನರೊಳಗೂ ವ್ಯಾಪಕವಾಗಿಸಲು ಪ್ರಯತ್ನಿಸುತ್ತದೆ. ಹೀಗಾದಾಗ ಹೊಸ ಪೀಳಿಗೆಯು ಅದರ ರಹಸ್ಯ ಕಾರ್ಯಸೂಚಿಯ ಭಾಗವಾಗಿರುವ ಅಪಮೌಲ್ಯೀಕೃತ ಅಂಶಗಳು ರೂಪಿಸುವ ಚೌಕಟ್ಟುಗಳಲ್ಲಿ ಬಂಧಿಯಾಗಿ ಯೋಚಿಸಲಾರಂಭಿಸುತ್ತದೆ.

ಸಾರ್ವಕಾಲಿಕ ಮೌಲಿಕ ರಾಜಕೀಯ ಆಂದೋಲನದ ಹೊಳಹುಗಳು

ಈ ಹಂತದಲ್ಲಿಯೇ ಸಂಘರ್ಷದ ಪರ ನಿಲ್ಲುವ ದೃಷ್ಟಿಕೋನಗಳನ್ನೇ ಮುಖ್ಯವಾಗಿಸಿಕೊಳ್ಳುತ್ತದೆ. ಅಹಿಂಸೆಯ ಮೌಲ್ಯದ ಸಕಾರಾತ್ಮಕತೆಯು ಹಿಂಸೆಯ ಪರವಾದ ವಿತಂಡವಾದಿ ಆಲೋಚನೆಗಳ ಭರಾಟೆಯಲ್ಲಿ ಹಿನ್ನೆಲೆಗೆ ಸರಿಯುತ್ತದೆ. ಇಂಥ ಸಂದರ್ಭದಲ್ಲಿ ಅಹಿಂಸಾತ್ಮಕ ಮನೋಧರ್ಮವನ್ನು ಮುನ್ನೆಲೆಗೆ ತಂದು ಅಧಿಕೃತಗೊಳಿಸುವ ಅಪ್ಪಟ ಪ್ರಯೋಗಶೀಲ ರಾಜಕಾರಣ ಮೊಳಕೆಯೊಡೆಯಬೇಕು. ಹಾಗಾಗುತ್ತಿಲ್ಲ. ಹಾಗಾಗುವುದಕ್ಕೆ ಸಾಮಾಜಿಕ, ರಾಜಕೀಯ, ಧಾರ್ಮಿಕ ಕೇಂದ್ರಗಳ ಮುಂಚೂಣಿ ಮುಖಂಡತ್ವ ಬಿಡುತ್ತಿಲ್ಲ. ತಾವು ಸಮಸ್ಯೆ ಎಂದು ಪರಿಭಾವಿಸಿಕೊಂಡಿರುವ ಜಟಿಲತೆಗೆ ಪ್ರಾಮಾಣಿಕವಾಗಿ ಪರಿಹಾರ ಹುಡುಕಿಕೊಳ್ಳುವ ಪ್ರಯತ್ನಗಳನ್ನೂ ನಡೆಸುತ್ತಿಲ್ಲ. ಅಂಥ ಪ್ರಾಮಾಣಿಕ ಹೆಜ್ಜೆಗಳು ಅಹಿಂಸೆಯ ಪರವಾದ ಅಲೆಯನ್ನು ಸೃಷ್ಟಿಸುವ ಸಾರ್ವಕಾಲಿಕ ಮೌಲಿಕ ರಾಜಕೀಯ ಆಂದೋಲನದ ಹೊಳಹುಗಳನ್ನು ಹೊಳೆಸುತ್ತವೆ. ಇದರ ಬದಲಾಗಿ ಮತ್ತೆ ಜಾತಿನಿಷ್ಠ ಮಿತಿಗಳನ್ನು ವಿಸ್ತರಿಸುವ, ಧರ್ಮದೊಳಗೆ ಇಲ್ಲದೇ ಇರುವ ಸಂಗತಿಗಳನ್ನು ಇತಿಹಾಸದೊಂದಿಗೆ ತಳುಕುಹಾಕುವ ಮತ್ತು ಅಂಥ ಸಂಕುಚಿತ ಪಠ್ಯಗಳ ಆಧಾರದಲ್ಲಿಯೇ ಅಧಿಕಾರ ರಾಜಕಾರಣವನ್ನು ಬದುಕಿಸಿಬಿಡುವ ಹುನ್ನಾರಗಳನ್ನು ಹೊಳೆಸಿಕೊಳ್ಳುವುದರ ಕಡೆಗೇ ಅತ್ಯುತ್ಸಾಹ ವ್ಯಕ್ತವಾಗುತ್ತಿದೆ. ಒಳ್ಳೆಯದನ್ನು ಹೇಳಿದರೆ ಸುಲಭಕ್ಕೆ ಒಪ್ಪಿಕೊಳ್ಳದ ಹಠಮಾರಿತನ ಅದರದ್ದು. ಗಾಂಧಿ ಜೀವಂತಗೊಳಿಸಿದ ಅಹಿಂಸೆಯ ಮಾದರಿಯ ಬಗ್ಗೆ ಪ್ರಸ್ತಾಪಿಸಿದರೆ ಅದು ದಿಢೀರನೆ ಅವಿವೇಕತನದ ಅತಿರೇಕವನ್ನು ಪ್ರದರ್ಶಿಸಿಬಿಡುತ್ತದೆ. ‘ಗಾಂಧಿ ಏನಿದ್ದರೂ ಆ ಕಾಲಕ್ಕೆ, ಈಗಲ್ಲ’ ಎಂದು ಉಡಾಫೆಯ ಮನೋಭಾವವನ್ನು ತೂರಿಬಿಡುತ್ತದೆ.
ಗಾಂಧಿಯ ವ್ಯಕ್ತಿತ್ವದೊಂದಿಗೇ ಬೆರೆತುಹೋಗಿದ್ದ ಅಹಿಂಸೆಯ ಮೌಲ್ಯವು ವರ್ತಮಾನದಲ್ಲಷ್ಟೇ ಅಲ್ಲ, ಭವಿಷ್ಯದ ಜಗತ್ತಿನ ಎಲ್ಲ ಬಗೆಯ ಸಂಘರ್ಷಗಳನ್ನು ಕೊನೆಗಾಣಿಸುವ ಪ್ರಾಕೃತಿಕ ದಿವ್ಯೌಷಧ ಎಂಬುದನ್ನು ಮನಗಾಣಲೇಬೇಕು. ಗಾಂಧಿಯನ್ನು ಅರ್ಥೈಸಿಕೊಳ್ಳದ ಮನಸ್ಸುಗಳು ಈ ಕ್ಷಣಕ್ಕೆ ತಮ್ಮ ಮೂಗಿನ ನೇರಕ್ಕೆ ತೀರ್ಮಾನವನ್ನು ಕೈಗೊಂಡುಬಿಡುತ್ತವೆ. ಸಂಪೂರ್ಣ ತಿಳುವಳಿಕೆ ಇಲ್ಲದೇ ರೂಪುಗೊಳ್ಳುವ ಅಂಥ ವ್ಯಕ್ತಿಗತ ನಿಲುವುಗಳು ಸಮೂಹಕ್ಕೂ ದಾಟಿಕೊಳ್ಳುತ್ತವೆ. ಗಾಂಧಿ ಮತ್ತು ಅವರು ಪ್ರತಿಪಾದಿಸಿದ ಅಹಿಂಸಾವಾದ ಅಪ್ರಸ್ತುತ ಎಂದು ಹೇಳುವ ಕಾಲಕ್ಕೆ ಅಹಿಂಸೆಯ ತಾತ್ವಿಕತೆಯೊಂದಿಗಿನ ಗಾಂಧಿ ವ್ಯಕ್ತಿತ್ವವನ್ನು ಸಮಗ್ರವಾಗಿ ತಿಳಿದುಕೊಳ್ಳುವ ಪ್ರಯತ್ನಗಳನ್ನೇ ನಡೆಸುವುದಿಲ್ಲ. ಆ ತಾತ್ವಿಕ ಆದರ್ಶವನ್ನು ವರ್ತಮಾನದ ಸ್ಥಿತಿಗತಿಗಳಿಗೆ ತಕ್ಕಂತೆ ಅನ್ವಯಿಸಿಕೊಳ್ಳುವ ನಮ್ಯತೆಯ ಹೆಜ್ಜೆಗಳನ್ನೇ ಅನುಸರಿಸದೇ ಸಾರಾಸಗಟಾಗಿ ತಿರಸ್ಕಾರದ ಭಾವನೆಗಳು ನೆಲೆಗೊಂಡರೆ ಪ್ರಯೋಜನವಿಲ್ಲ.

ಅಹಿಂಸೆ : ಫಿಫ್ಟಿ-ಫಿಪ್ಟಿ ಲೆಕ್ಕಾಚಾರದ ನೆಲೆಗಟ್ಟಿನ ಪರಿಭಾಷೆ..?

ಈಗಿನ ರಾಜಕೀಯ ಹೇಳಿಕೆಗಳು ಇಂಥ ತಿರಸ್ಕಾರದ ಭಾವನೆಗಳ ಆಧಾರದಲ್ಲಿಯೇ ರೂಪುಗೊಳ್ಳುತ್ತಿವೆ. ಅವುಗಳು ಜನರ ಅಭಿಪ್ರಾಯಗಳನ್ನೂ ನಿಯಂತ್ರಿಸುತ್ತಿವೆ. ಗಾಂಧಿ ಮತ್ತು ಅಹಿಂಸಾ ತಾತ್ವಿಕತೆಯ ಬಗ್ಗೆ ಹೊಸ ಪೀಳಿಗೆಯು ಅರ್ಧಂಬರ್ಧ ತಿಳಿದುಕೊಂಡ ಸಂದರ್ಭದಲ್ಲಿ ಪ್ರಬಲ ಕೇಂದ್ರಗಳು ಹಿಂಸೆಯೊಂದಿಗಿನ ಕಾರ್ಯತಂತ್ರಗಳನ್ನು ಪ್ರಯೋಗಿಸಿ ಯಶಸ್ಸು ಕಂಡುಕೊಳ್ಳುತ್ತವೆ. ಈ ಕಾರ್ಯತಂತ್ರಗಳನ್ನು ಅಧಿಕಾರ ಕೇಂದ್ರಗಳು ಸಂಘಟನೆಗಳ ನೆರವಿನೊಂದಿಗೆ ಪ್ರಯೋಗಿಸುತ್ತವೆ. ಈಗಾಗಲೇ ಆಗಿಹೋದ ಇತಿಹಾಸ, ಗಾಂಧಿಯೂ ಸೇರಿದಂತೆ ವಿವಿಧ ದಾರ್ಶನಿಕರ ಕುರಿತಾದ ಸಮಗ್ರ ವಿವರಗಳು ಮತ್ತು ತಾತ್ವಿಕತೆಯ ಶಕ್ತಿಯ ಬಗ್ಗೆ ಸ್ಪಷ್ಟವಾಗಿ ತಿಳಿದುಕೊಂಡಿರದ ಜನಸಮೂಹದ ಅಜ್ಞಾನವನ್ನು ತಮ್ಮ ರಹಸ್ಯ ಕಾರ್ಯಸೂಚಿಗಳ ಯಶಸ್ವಿಗೆ ಪೂರಕವಾಗಿ ಬಳಸಿಕೊಳ್ಳುತ್ತವೆ. ಇಂದು ಬಹುತೇಕ ಯುವಕರು ಹಿಂಸೆ ಮತ್ತು ಅಹಿಂಸೆಯನ್ನು ಫಿಫ್ಟಿ-ಫಿಪ್ಟಿ ಲೆಕ್ಕಾಚಾರದ ನೆಲೆಗಟ್ಟಿನ ಪರಿಭಾಷೆಯಲ್ಲಿ ಚರ್ಚೆಗೊಳಪಡಿಸುತ್ತಿದ್ದಾರೆ. ಇದರರ್ಥ ಐವತ್ತು ಪರ್ಸೆಂಟ್ ಹಿಂಸೆ, ಐವತ್ತು ಪರ್ಸೆಂಟ್ ಅಹಿಂಸೆ ಇರಬೇಕು, ಅಂದಾಗಲೇ ಬ್ಯಾಲೆನ್ಸ್ ಆಗುತ್ತದೆ ಎಂಬ ಸಂಕುಚಿತತೆಯ ವಾದಗಳನ್ನು ಮುಂದಿಡುತ್ತಿದ್ದಾರೆ. ಹಿಂಸಿಸುವ ಪ್ರಾಬಲ್ಯ ನಮ್ಮ ಜೊತೆಗಿದ್ದರೆ ಉಳಿದವರು ಭಯಪಡುತ್ತಾರೆ ಎಂದು ಹಿರಿಯರ ಮುಂದೆ ಅಪ್ರಬುದ್ಧ ಮಾತುಗಳನ್ನಾಡುತ್ತಿದ್ದಾರೆ. ಅವರೊಂದಿಗೆ ಚರ್ಚಿಸುವ ಉತ್ಸಾಹದಲ್ಲಿ ಗಾಂಧಿ ವ್ಯಕ್ತಿತ್ವ, ಅವರು ಪ್ರತಿಪಾದಿಸಿದ ಅಹಿಂಸಾ ಮೌಲ್ಯ, ಭಾರತದ ಸ್ವಾತಂತ್ರ್ಯದ ಹೋರಾಟದಲ್ಲಿ ಅದು ನಿರ್ವಹಿಸಿದ ಮೌಲಿಕ ಪಾತ್ರ, ವರ್ತಮಾನದಲ್ಲಿ ಅದು ಅನ್ವಯಗೊಳ್ಳಬೇಕಾದ ಅವಶ್ಯಕತೆಗಳ ಬಗ್ಗೆ ಮಾತನಾಡಿದರೆ ಆ ಅಂಶಗಳನ್ನು ಆ ಕ್ಷಣಕ್ಕೆ ಸಂಕುಚಿತವಾಗಿ ಅರ್ಥೈಸಿಕೊಂಡು ಅಪ್ರಸ್ತುತವೆನ್ನಿಸುವ, ಅವಿವೇಕತನದ ವಾದವನ್ನು ಮುಂದಿಡುತ್ತಿದ್ದಾರೆ. ಮುಖ್ಯವಾಹಿನಿಯ ಮಾಧ್ಯಮಗಳ ಒಳಗೂ ಇಂಥ ವಾದಗಳನ್ನು ನೆಚ್ಚಿಕೊಂಡವರು ಇರುವುದರಿಂದ ಗಾಂಧಿ ಕುರಿತಾದ ಸಮಗ್ರ ಅರ್ಥೈಸಿಕೊಳ್ಳುವಿಕೆಯ ಜವಾಬ್ದಾರಿಯುತ ನಡೆಗಳು ಹಿನ್ನಡೆ ಅನುಭವಿಸುವಂಥ ಸ್ಥಿತಿ ನಿರ್ಮಾಣವಾಗಿದೆ.

ಅಹಿಂಸೆಯ ಸಾರ್ವಕಾಲಿಕತೆಯ ನಿದರ್ಶನಗಳು

ಇತಿಹಾಸದ ಪುಟಗಳಲ್ಲಿ ಅಹಿಂಸೆಯ ಸಾರ್ವಕಾಲಿಕತೆಯ ಶ್ರೇಷ್ಠ ನಿದರ್ಶನಗಳು ದಾಖಲಾಗಿವೆ. ಅವುಗಳು ವರ್ತಮಾನದ ಪೀಳಿಗೆಯ ಪ್ರಜ್ಞೆಯ ಅಂತಸತ್ವವನ್ನು ಮತ್ತಷ್ಟು ಪ್ರಖರಗೊಳಿಸುವ ರೀತಿಯಲ್ಲಿ ಮೇಳೈಸಿಕೊಳ್ಳಬೇಕು. ಆದರೆ, ಮೌಲಿಕ ಆದರ್ಶ ಹೆಜ್ಜೆಗಳು ಮತ್ತು ಅವುಗಳೊಂದಿಗಿನ ಇತಿಹಾಸದ ಅರಿವು ತಂದುಕೊಳ್ಳುವ ಯಾವುದೇ ಪ್ರಯತ್ನಗಳಲ್ಲಿ ತೊಡಗಿಕೊಳ್ಳದೇ ಅಗ್ರೆಸ್ಸಿವ್ ನಡವಳಿಕೆಗಳನ್ನೇ ಬಂಡವಾಳವಾಗಿಸಿಕೊಳ್ಳುತ್ತಿರುವ ಯುವ ಸಮೂಹವು ಪ್ರಬಲ ಶಕ್ತಿಗಳು ಸಾಕಿಕೊಳ್ಳುವ ರಾಜಕೀಯ ಪಕ್ಷಗಳ
ಕಾರ್ಯಕರ್ತರಾಗುವುದಕ್ಕಷ್ಟೇ ತಮ್ಮನ್ನು ಸೀಮಿತಗೊಳಿಸಿಕೊಂಡಿದೆ. ಹಿಂದಿನದ್ದನ್ನು ಅರಿತುಕೊಳ್ಳುವ ಸಂಯಮ, ಯಾರು ಯಾರನ್ನು ದಾರಿ ತಪ್ಪಿಸಿ ತಮ್ಮ ಶಕ್ತಿ ಸಂಪನ್ಮೂಲವನ್ನು ಯಾವ ಬಗೆಯ ಸಂಘರ್ಷಗಳಿಗೆ ಬಳಸಿಕೊಳ್ಳುತ್ತಿದ್ದಾರೆ ಎಂಬುದರ ಕುರಿತಾದ ಸ್ಪಷ್ಟ ತಿಳುವಳಿಕೆ, ಆ ಮೂಲಕ ಅಹಿಂಸೆಯೊಂದಿಗಿನ ಗಾಂಧಿವಾದವನ್ನು ಮುನ್ನೆಲೆಗೆ ತರುವಂಥ ಆದರ್ಶಯುತ ಹೆಜ್ಜೆಗಳೊಂದಿಗೆ ಗುರುತಿಸಿಕೊಳ್ಳಬಹುದಾದ ಅವಕಾಶವನ್ನೇ ಬಿಟ್ಟುಕೊಟ್ಟಿದೆ. ಈ ಕಾರಣಕ್ಕಾಗಿಯೇ ಯಾವುದು ಸರಿ, ಯಾವುದು ತಪ್ಪು ಎಂಬ ವಿವೇಚನೆಯ ಬದಲು ಅಧಿಕಾರ ಸಂರಚನೆಯ ಕೇಂದ್ರಗಳನ್ನು ಬಲಪಡಿಸಿ ತಮ್ಮ ತಾತ್ಪೂರ್ತಿಕ ಆಸೆಗಳನ್ನು ಅವರು ಈಡೇರಿಸಿಕೊಳ್ಳುತ್ತಿದ್ದಾರೆ. ಬೈಕ್ ಕೊಳ್ಳಬೇಕು, ಕಾರ್ ಜೊತೆಗಿರಿಸಿಕೊಂಡು ಪ್ರತಿಷ್ಠೆ ಮೆರೆಯಬೇಕು, ಸುಸಜ್ಜಿತ ಮನೆ ಹೊಂದಬೇಕು, ಐಷಾರಾಮಿ ಬದುಕು ತಮ್ಮದಾಗಿಸಿಕೊಳ್ಳಬೇಕು – ಇಂಥವೇ ತಾತ್ಪೂರ್ತಿಕ ಆಸೆಗಳನ್ನು ಈಡೇರಿಸಿಕೊಳ್ಳುವುದಕ್ಕೆ ಕಾರ್ಯಕರ್ತರಿಗೆ ಹಂತಹಂತವಾಗಿ ರಾಜಕೀಯ ಪಕ್ಷಗಳು ನೆರವಾಗುತ್ತವೆ. ಅಧಿಕಾರದ ಗಮ್ಯ ತಲುಪಿಕೊಳ್ಳಲು ಇವು ಸಂಘರ್ಷ ಸೃಷ್ಟಿಗೆ ಇಂಥ ಯುವ ಸಮೂಹವನ್ನೇ ಬಳಸಿಕೊಳ್ಳುತ್ತವೆ. ಆಗ ಹಿಂಸೆಯೇ ವ್ಯಾಪಕವಾಗುತ್ತದೆ. ಅಹಿಂಸೆಯ ತಾರ್ಕಿಕವಾದವನ್ನೇ ಅಲ್ಲಗಳೆಯುವಂಥ ವಾತಾವರಣವನ್ನು ಉದ್ದೇಶಪೂರ್ವಕವಾಗಿ ಸೃಷ್ಟಿಸಲಾಗುತ್ತದೆ.

ಸಾಂಪ್ರದಾಯಿಕ ಸಂಕುಚಿತ ಮೂಲಭೂತವಾದಿ ಅಣೆಕಟ್ಟುಗಳು

ನಾವು ಎಷ್ಟೇ ಕೃತಿಗಳನ್ನು ಓದಿಕೊಂಡರೂ, ತಜ್ಞರ ಬರಹಗಳನ್ನು ಗೊತ್ತುಮಾಡಿಕೊಂಡರೂ ಗಾಂಧೀಜಿಯವರ ಅಹಿಂಸೆಯ ತಾತ್ವಿಕ ದಾರ್ಶನಿಕ ನದಿಯ ಜೀವಜಲದ ಬೊಗಸೆಯಷ್ಟು ಹನಿಗಳನ್ನಷ್ಟೇ ದಕ್ಕಿಸಿಕೊಂಡಿರುತ್ತೇವೆ. ಅದರ ಜೀವಂತಿಕೆಯ ಸಮಗ್ರ ಅಮೃತಧಾರೆಯನ್ನು ನಮ್ಮೊಳಗಿಳಿಸಿಕೊಳ್ಳುವ ನಿರಂತರ ಪ್ರಯತ್ನಗಳ ಮೂಲಕವೇ ಆ ತಾತ್ವಿಕತೆಯ ಹೊಳೆಯು ಮನುಷ್ಯಸಮೂಹದೊಳಗೆ ನೆಲೆಗೊಳ್ಳುತ್ತಾ ತನ್ನ ನಡಿಗೆಯನ್ನು ಮೂಡಿಸುತ್ತಾ ಸಾಗುತ್ತದೆ. ಅದು ಸಾಗಿದಲ್ಲೆಲ್ಲಾ ಮನುಷ್ಯತ್ವ ಮತ್ತು ಜೀವಪರ ನಿಲುವುಗಳ ಫಲವತ್ತತೆಯು ವ್ಯಾಪಕವಾಗುತ್ತಿರುತ್ತದೆ. ಆದರೆ, ಇಂಥ ತಾತ್ವಿಕ ನದಿಯ ಹರಿವನ್ನು ಅರ್ಧಕ್ಕೆ ತಡೆಗಟ್ಟಿ ಸಾಂಪ್ರದಾಯಿಕ ಸಂಕುಚಿತ ಮೂಲಭೂತವಾದಿ ಅಣೆಕಟ್ಟುಗಳನ್ನು ಕಟ್ಟಲಾಗುತ್ತಿದೆ. ಈ ಅಣೆಕಟ್ಟುಗಳೇ ಸುಖ, ಶಾಂತಿ, ನೆಮ್ಮದಿಯೊಂದಿಗಿನ ಅಭ್ಯುದಯದ ಬೆಳೆ ಬೆಳೆಯುವುದಕ್ಕೆ ಸಹಕಾರಿಯಾಗುತ್ತವೆ ಎಂಬ ತಪ್ಪುಕಲ್ಪನೆಯನ್ನೇ ಬಿತ್ತಿ ನಂಬಿಸಲಾಗುತ್ತಿದೆ. ಇಂಥ ಸಂಕೀರ್ಣತೆಯ ಮಧ್ಯೆ ಅಹಿಂಸೆಯ ಜೀವನದಿ ಬತ್ತದಂತೆ, ಅದು ಕಾಲದಿಂದ ಕಾಲಕ್ಕೆ ಅತ್ಯಂತ ಎಚ್ಚರದೊಂದಿಗೆ ದಾಟಿಕೊಳ್ಳುವಂತೆ ನೋಡಿಕೊಳ್ಳುವ ಜವಾಬ್ದಾರಿಯನ್ನು ನಿರ್ವಹಿಸುವ ಹೊಸದೊಂದು ಪರ್ಯಾಯ ರಾಜಕಾರಣದ ಮಾದರಿ ರೂಪುಗೊಳ್ಳಬೇಕಾಗಿದೆ. ಅದಕ್ಕಿಂತ ಮುಂಚೆ ಅಹಿಂಸೆಯ ತಾತ್ವಿಕ ನದಿಯ ಹರಿವು ನಿಲ್ಲಿಸುತ್ತಿರುವ ಶಕ್ತಿಗಳನ್ನು ಸ್ಪಷ್ಟವಾಗಿ ಅರ್ಥೈಸಿಕೊಳ್ಳಬೇಕಾಗಿದೆ. ಆ ಶಕ್ತಿಗಳು ಈ ನದಿಯನ್ನು ಬತ್ತಿಸುವ ಪ್ರಯತ್ನದಲ್ಲಿ ತೊಡಗಿವೆ. ಅದರ ಚಲನೆಯ ಹರಿವಿನೊಳಗೆ ರಕ್ತಪಾತ ನಡೆಸಿ ಭಯ ಹುಟ್ಟಿಸಿ ತಾವು ಪ್ರಬಲರಾಗುವ ಸ್ವಹಿತಾಸಕ್ತಿಗಳನ್ನು ಕಾಯ್ದುಕೊಳ್ಳುತ್ತಿವೆ. ಜನರನ್ನು ಮರಳು ಮಾಡುವ ಮರಳುಗಾರಿಕೆಯನ್ನು ಇದೇ ಆವರಣದಲ್ಲಿಯೇ ಅತ್ಯಂತ ಚಾಣಾಕ್ಷತನದಿಂದ ನಿರ್ವಹಿಸುತ್ತಿವೆ. ಇದಕ್ಕೆ ಪರ್ಯಾಯವಾಗಿ ಅಪ್ಪಟ ಸಾತ್ವಿಕತೆಯೊಂದಿಗಿನ ರಾಜಕಾರಣ ರೂಪುಗೊಳ್ಳಬೇಕು. ಅಹಿಂಸೆಯು ಸಾರ್ವಕಾಲಿಕ ಸತ್ಯ. ಹಾಗಾಗಿಯೇ ಎಲ್ಲ ಕಾಲದ ಕೊಳಕುಗಳೊಂದಿಗೆ ಎದುರುಗೊಳ್ಳುತ್ತಲೇ ಅದು ತನ್ನ ಅಸ್ತಿತ್ವವನ್ನು ಉಳಿಸಿಕೊಳ್ಳುತ್ತದೆ. ಅದು ಎಂದಿಗೂ ಬತ್ತದ ನದಿಯ ನಿನಾದದ ಹಾಗೆ. ಪ್ರಾಕೃತಿಕ ವಿಕೋಪಗಳಾದಾಗ ಅದರ ನಡಿಗೆಗೆ ಅಡ್ಡಿ-ಆತಂಕಗಳು ಎದುರಾಗುವ ಹಾಗೆ ಇದೀಗ ಪ್ರಬಲ ಶಕ್ತಿಗಳ ಉದ್ದೇಶಪೂರ್ವಕ ನಕಾರಾತ್ಮಕತೆಯ ಕಾರಣಕ್ಕಾಗಿ ಹಿಂಸೆಯೇ ಸರಿಯಾದದ್ದು ಎಂಬ ಸಂಕುಚಿತ ಅಭಿಪ್ರಾಯ ಮುನ್ನೆಲೆಗೆ ಬಂದಿದೆ. ಇದನ್ನು ಅಲ್ಲಗಳೆದು ಅಹಿಂಸೆಯೇ ನಿರ್ಣಾಯಕ, ಅದರ ಆಧಾರದಲ್ಲಿಯೇ ನವಭಾರತದ ನಿರ್ಮಾಣ ಎಂಬ ದೃಢಸಂಕಲ್ಪದೊಂದಿಗಿನ ಸನ್ಮತಿಯ ರಾಜಕಾರಣ ಶುರುವಾಗಬೇಕಿದೆ. ಅಹಿಂಸೆಯ ನಿನಾದದ ಮಾಧುರ್ಯದ ಮಾದರಿ ಜಗತ್ತನ್ನು ಸ್ವಚ್ಛಗೊಳಿಸಬೇಕಿದೆ.

-ಡಾ.ಎನ್.ಕೆ.ಪದ್ಮನಾಭ

ದಿನದ ಸುದ್ದಿ

ಲೋಕಸಭಾ ಚುನಾವಣೆಯ ಮೊದಲ ಹಂತಕ್ಕೆ ನಾಮಪತ್ರ ಸಲ್ಲಿಕೆಗೆ ಇಂದು ಕೊನೆಯ ದಿನ

Published

on

ಸುದ್ದಿದಿನ ಡೆಸ್ಕ್ : ಲೋಕಸಭಾ ಚುನಾವಣೆಯ ಮೊದಲ ಹಂತಕ್ಕೆ ನಾಮಪತ್ರ ಸಲ್ಲಿಸಲು ಇಂದು ಕೊನೆಯ ದಿನವಾಗಿದೆ.

ನಾಳೆ ನಾಮಪತ್ರಗಳ ಪರಿಶೀಲನೆ ನಡೆಯಲಿದ್ದು, ಇದೇ 30 ನಾಮಪತ್ರ ಹಿಂಪಡೆಯಲು ಕಡೆಯ ದಿನವಾಗಿದೆ. ಇದೇ ವೇಳೆ ಬಿಹಾರದಲ್ಲಿ ನಾಮಪತ್ರ ಸಲ್ಲಿಕೆಗೆ ನಾಳೆ ಕಡೆ ದಿನವಾಗಿದ್ದು, ಈ ತಿಂಗಳ 30 ರಂದು ನಾಮಪತ್ರಗಳ ಪರಿಶೀಲನೆ ಹಾಗೂ ಏಪ್ರಿಲ್ 2ರಂದು ನಾಮತ್ರ ಹಿಂಪಡೆಯುವಿಕೆಗೆ ಕೊನೆಯ ದಿನವಾಗಿರುತ್ತದೆ.

ಏಪ್ರಿಲ್ 19 ರಂದು 17 ರಾಜ್ಯಗಳು ಮತ್ತು ನಾಲ್ಕು ಕೇಂದ್ರಾಡಳಿತ ಪ್ರದೇಶಗಳಲ್ಲಿನ 102ಲೋಕಸಭಾ ಕ್ಷೇತ್ರಗಳಿಗೆ ಮೊದಲ ಹಂತದಲ್ಲಿ ಚುನಾವಣೆ ನಡೆಯಲಿದೆ. ಅದರಂತೆ ತಮಿಳುನಾಡಿನಲ್ಲಿ 39, ರಾಜಸ್ಥಾನದಲ್ಲಿ 12, ಉತ್ತರ ಪ್ರದೇಶದಲ್ಲಿ 8, ಮಧ್ಯಪ್ರದೇಶದಲ್ಲಿ 6, ಉತ್ತರಾಖಂಡ, ಅಸ್ಸಾಂ ಮತ್ತು ಮಹಾರಾಷ್ಟ್ರದಲ್ಲಿ ತಲಾ 5 , ಬಿಹಾರದಲ್ಲಿ 4, ಪಶ್ಚಿಮ ಬಂಗಾಳದಲ್ಲಿ 3, ಅರುಣಾಚಲ ಪ್ರದೇಶ, ಮಣಿಪುರ, ಮೆಘಾಲಯದಲ್ಲಿ ತಲಾ 2 ಮತ್ತು ಛತ್ತೀಸ್‌ಗಢ, ಮಿಜೋರಾಂ, ನಾಗಾಲ್ಯಾಂಡ್, ಸಿಕ್ಕಿಂ, ತ್ರಿಪುರ, ಅಂಡಮಾನ್-ನಿಕೋಬಾರ್ ದ್ವೀಪಗಳು, ಜಮ್ಮು-ಕಾಶ್ಮೀರ, ಲಕ್ಷದ್ವೀಪ ಮತ್ತು ಪುದುಚೇರಿಯಲ್ಲಿ ತಲಾ ಒಂದು ಕ್ಷೇತ್ರದಲ್ಲಿ ಮೊದಲ ಹಂತದಲ್ಲಿ ಚುನಾವಣೆ ನಡೆಯಲಿದೆ.

ಎರಡನೇ ಹಂತದಲ್ಲಿ 89 ಲೋಕಸಭಾ ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದ್ದು, ಚುನಾವಣಾ ಆಯೋಗ ನಾಳೆ ಅಧಿಸೂಚನೆ ಹೊರಡಿಸಲಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಲೋಕಸಭಾ ಚುನಾವಣೆ | ಹೊಸ ಮತದಾರರೆಷ್ಟು ಗೊತ್ತಾ..?

Published

on

ಸುದ್ದಿದಿನ ಡೆಸ್ಕ್ : 2024ರ ಲೋಕಸಭಾ ಚುನಾವಣೆಯಲ್ಲಿ ಅಂದಾಜು ಒಂದು ಕೋಟಿ 80 ಲಕ್ಷ ಹೊಸ ಮತದಾರರು ತಮ್ಮ ಅಮೂಲ್ಯ ಹಕ್ಕನ್ನು ಮೊದಲ ಬಾರಿಗೆ ಚಲಾಯಿಸಲಿದ್ದಾರೆ. ಇವರೆಲ್ಲ 18-19ರ ಪ್ರಾಯದವರು.

ಮೊದಲ ಬಾರಿಗೆ ಮತ ಚಲಾಯಿಸುವ ಯುವಕರಿಗೆ ಅವರ ಈ ಪವಿತ್ರ ಕರ್ತವ್ಯದ ಮಹತ್ವವನ್ನು ಮನಗಾಣಿಸುವ ಸಲುವಾಗಿ ಸಾಮಾಜಿಕ ಜಾಲತಾಣಗಳಲ್ಲಿ ’ನಾನು ಖಂಡಿತ ಮತ ಚಲಾಯಿಸುತ್ತೇನೆ’ ಎನ್ನುವ ಪ್ರಚಾರ ಆಂದೋಲನಗಳು ನಡೆಯುತ್ತಿವೆ.

ಈ ಬಾರಿ ಚುನಾವಣೆಯಲ್ಲಿ ಭಾಗವಹಿಸುವ ಯುವ ಮತದಾರರ ಪೈಕಿ 20ರಿಂದ 29ವರ್ಷ ವಯೋಮಾನದ ಅಂದಾಜು 19 ಕೋಟಿ 74 ಲಕ್ಷ ಮತದಾರರು ಪಾಲ್ಗೊಳ್ಳಲಿದ್ದಾರೆ. 18 ವರ್ಷಕ್ಕೆ ಮತದಾನದ ಹಕ್ಕು ದೊರೆಯುವುದಾದರೂ ಈಗ 17 ವರ್ಷ ತುಂಬಿರುವ ಯುವಜನ ಸಮೂಹದಿಂದ 13.4ಲಕ್ಷಕ್ಕೂ ಅಧಿಕ ಅರ್ಜಿಗಳನ್ನು ಮುಂಚಿತವಾಗಿಯೇ ಸ್ವೀಕರಿಸಲಾಗಿದೆ.

ಕೇಂದ್ರ ಚುನಾವಣಾ ಆಯೋಗ ಯುವ ಜನರಿಗೆ ಮತದಾನಕ್ಕೆ ಪ್ರೋತ್ಸಾಹ ನೀಡುವ ಸಲುವಾಗಿ ಸಚಿನ್ ತೆಂಡುಲ್ಕರ್ ಮತ್ತು ರಾಜಕುಮಾರ್ ರಾವ್ ಅವರಂತಹ ರಾಷ್ಟ್ರೀಯ ದಿಗ್ಗಜರಿಂದ ಸಂದೇಶಗಳನ್ನು ಪ್ರಸಾರ ಮಾಡುತ್ತಿದೆ. ಸಾಮಾಜಿಕ ಮಾಧ್ಯಮ ಅಭಿಯಾನಗಳು ಮತ್ತು ರೇಡಿಯೋ ಮೂಲಕವೂ ಸಂದೇಶಗಳನ್ನು ಪ್ರಸಾರ ಮಾಡಲಾಗುತ್ತದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಬೆಂಗಳೂರಿನಲ್ಲಿ ಬಿಜೆಪಿ ನೂತನ ಮಾಧ್ಯಮಕೇಂದ್ರ ಆರಂಭ

Published

on

ಸುದ್ದಿದಿನ,ಬೆಂಗಳೂರು : ದಕ್ಷಿಣ ಭಾರತದಲ್ಲಿ ಭಾರತೀಯ ಜನತಾಪಕ್ಷಕ್ಕೆ, ಕರ್ನಾಟಕ ಹೆಬ್ಬಾಗಿಲಿನಂತಿದ್ದು, ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಪಕ್ಷ ಅತಿ ಹೆಚ್ಚು ಸ್ಥಾನಗಳನ್ನು ಗೆಲ್ಲಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿದ್ದಾರೆ.

ಬರಲಿರುವ ಮಹಾಚುನಾವಣೆಗೆ ಪಕ್ಷದ ಕೇಂದ್ರಬಿಂದುವಾಗಿ ಕಾರ್ಯನಿರ್ವಹಿಸಲಿರುವ ನೂತನ ಮಾಧ್ಯಮ ಕೇಂದ್ರದಲ್ಲಿ ಪಕ್ಷದ ರಾಜ್ಯ ನಾಯಕರು ಇಂದು ಬೆಳಿಗ್ಗೆ ನಡೆಸಿದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ, ಜನಪರ ಆಡಳಿತ ನೀಡುವಲ್ಲಿ ಮತ್ತು ಬರಪರಿಸ್ಥಿತಿ ನಿರ್ವಹಣೆಯಲ್ಲಿ ಸಂಪೂರ್ಣ ವಿಫಲವಾಗಿದೆ ಎಂದು ಆಪಾದಿಸಿದರು.

ಜನವಿರೋಧಿ ಕ್ರಮಗಳಿಂದಾಗಿ ರಾಜ್ಯದ ಜನತೆ ಈ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ತಕ್ಕ ಪಾಠ ಕಲಿಸಲಿದ್ದಾರೆ ಎಂದರು.

ಲೋಕಸಭಾ ಚುನಾವಣೆಗೆ ರಾಜ್ಯದಲ್ಲಿ ಅತಿಹೆಚ್ಚು ಸ್ಥಾನಗಳನ್ನು ಗೆಲ್ಲುವ ಉದ್ದೇಶದಿಂದ ಕಾರ್ಯತಂತ್ರ ರೂಪಿಸಲು ತನ್ನ 200ಕ್ಕೂ ಹೆಚ್ಚು ಕಾರ್ಯಕರ್ತರಿಗೆ ಕಾರ್ಯಾಗಾರ ನಡೆಸಲು ಬಿಜೆಪಿ ನಿರ್ಧರಿಸಿದೆ. ಈ ನಡುವೆ ಲೋಕಸಭಾ ಚುನಾವಣೆ ಕುರಿತಂತೆ ದೆಹಲಿಯಲ್ಲಿ ಇಂದು ಬಿಜೆಪಿ ಕೇಂದ್ರೀಯ ಚುನಾವಣಾ ಸಮಿತಿಯ ಸಭೆ ನಡೆಯಲಿದೆ.

ಚುನಾವಣೆಗೆ ಪಕ್ಷದ ಕಾರ್ಯತಂತ್ರಗಳನ್ನು ಕುರಿತು ಸಮಾಲೋಚಿಸಲು ಪ್ರಧಾನಮಂತ್ರಿ ನರೇಂದ್ರ ಮೋದಿ, ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ, ಗೃಹ ಸಚಿವ ಅಮಿತ್ ಶಾ ಹಾಗೂ ಚುನಾವಣಾ ಸಮಿತಿಯ ಸದಸ್ಯರು ಮತ್ತಿತರ ಪದಾಧಿಕಾರಿಗಳು ಈ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading
Advertisement

Title

ದಿನದ ಸುದ್ದಿ1 day ago

ಇಂದಿನಿಂದ ಏ.3 ರವರೆಗೆ ಸೂಳೆಕೆರೆಗೆ ನೀರು ಬಿಡುಗಡೆ

ಸುದ್ದಿದಿನ,ದಾವಣಗೆರೆ: ಭದ್ರಾ ಜಲಾಶಯ ಯೋಜನೆ ವ್ಯಾಪ್ತಿಗೆ ಬರುವ ದೇವರಬೆಳಕೆರೆ ಪಿಕ್‍ಅಪ್ ಅಣೆಕಟ್ಟಿನ ಸ್ಕವರಿಂಗ್ ಸ್ಪೂಯೀಸ್ ಗೇಟ್ ಮುಖಾಂತರ ಜಲಾಶಯದ ಡೆಡ್ ಸ್ಟೋರೇಜ್ ನೀರನ್ನು ಸೂಳೆಕೆರೆ ಹಳ್ಳಕ್ಕೆ ಮಾರ್ಚ್...

ದಿನದ ಸುದ್ದಿ2 days ago

ಲೋಕಸಭಾ ಚುನಾವಣೆಯ ಮೊದಲ ಹಂತಕ್ಕೆ ನಾಮಪತ್ರ ಸಲ್ಲಿಕೆಗೆ ಇಂದು ಕೊನೆಯ ದಿನ

ಸುದ್ದಿದಿನ ಡೆಸ್ಕ್ : ಲೋಕಸಭಾ ಚುನಾವಣೆಯ ಮೊದಲ ಹಂತಕ್ಕೆ ನಾಮಪತ್ರ ಸಲ್ಲಿಸಲು ಇಂದು ಕೊನೆಯ ದಿನವಾಗಿದೆ. ನಾಳೆ ನಾಮಪತ್ರಗಳ ಪರಿಶೀಲನೆ ನಡೆಯಲಿದ್ದು, ಇದೇ 30 ನಾಮಪತ್ರ ಹಿಂಪಡೆಯಲು...

ದಿನದ ಸುದ್ದಿ3 days ago

ಚುನಾವಣಾ ಅಕ್ರಮ ; ಸಾರ್ವಜನಿಕರು ದೂರು ಸಲ್ಲಿಸಲು ಆಯೋಗದಿಂದ ಸಿ-ವಿಜಿಲ್ ಆಪ್ ಅಭಿವೃದ್ಧಿ

ಸುದ್ದಿದಿನ ಡೆಸ್ಕ್ : 18ನೇ ಲೋಕಸಭೆಗೆ ಸದಸ್ಯರನ್ನು ಆಯ್ಕೆ ಮಾಡಲು ನಡೆಯಲಿರುವ ಸಾರ್ವತ್ರಿಕ ಚುನಾವಣೆಗೆ ಭಾರತ ಚುನಾವಣಾ ಆಯೋಗ, ಸಕಲ ಸಿದ್ಧತೆಯೊಂದಿಗೆ ಸಜ್ಜಾಗಿದೆ. ದೇಶದಲ್ಲಿ ಚುನಾವಣೆಗಳನ್ನು ಪಾರದರ್ಶಕವಾಗಿ...

ದಿನದ ಸುದ್ದಿ5 days ago

ಕವಿತೆ | ನೆನಪು

ರುದ್ರಪ್ಪ ಹನಗವಾಡಿ ಅಪ್ಪನನ್ನು ಒಪ್ಪ ಮಾಡಿ ವರ್ಷಗಳೇ ಕಳೆದವು ಮುವ್ವತ್ತೇಳು ಇಂದಿರಾಗಾಂಧಿಯ ತುರ್ತು ಪರಿಸ್ಥಿತಿ ಅರಸರ ಮೀಸಲಾತಿ ಬಸವಲಿಂಗಪ್ಪನವರ ಬೂಸಾ ಖ್ಯಾತಿ ಮಲ ಹೊತ್ತು ಮಲಗಿದ್ದ ಕಾಲಕ್ಕೆ...

ದಿನದ ಸುದ್ದಿ5 days ago

ಲೋಕಸಭಾ ಚುನಾವಣೆ | ಹೊಸ ಮತದಾರರೆಷ್ಟು ಗೊತ್ತಾ..?

ಸುದ್ದಿದಿನ ಡೆಸ್ಕ್ : 2024ರ ಲೋಕಸಭಾ ಚುನಾವಣೆಯಲ್ಲಿ ಅಂದಾಜು ಒಂದು ಕೋಟಿ 80 ಲಕ್ಷ ಹೊಸ ಮತದಾರರು ತಮ್ಮ ಅಮೂಲ್ಯ ಹಕ್ಕನ್ನು ಮೊದಲ ಬಾರಿಗೆ ಚಲಾಯಿಸಲಿದ್ದಾರೆ. ಇವರೆಲ್ಲ...

ದಿನದ ಸುದ್ದಿ6 days ago

ಬೆಂಗಳೂರಿನಲ್ಲಿ ಬಿಜೆಪಿ ನೂತನ ಮಾಧ್ಯಮಕೇಂದ್ರ ಆರಂಭ

ಸುದ್ದಿದಿನ,ಬೆಂಗಳೂರು : ದಕ್ಷಿಣ ಭಾರತದಲ್ಲಿ ಭಾರತೀಯ ಜನತಾಪಕ್ಷಕ್ಕೆ, ಕರ್ನಾಟಕ ಹೆಬ್ಬಾಗಿಲಿನಂತಿದ್ದು, ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಪಕ್ಷ ಅತಿ ಹೆಚ್ಚು ಸ್ಥಾನಗಳನ್ನು ಗೆಲ್ಲಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ...

ದಿನದ ಸುದ್ದಿ6 days ago

ವಿಜಯಪುರ ಜಿಲ್ಲಾ ಸಾಹಿತ್ಯ ಸಮ್ಮೇಳನದ ಕವಿಗೋಷ್ಠಿಗೆ ಮೈಬೂಬಸಾಹೇಬ.ವೈ.ಜೆ ಆಯ್ಕೆ

ಮೂಲತಃ ವಿಜಯಪುರ ಜಿಲ್ಲೆಯ ಸಿಂದಗಿ ತಾಲ್ಲೂಕಿನ ಯರಗಲ ಗ್ರಾಮದವರಾದ ಮೈಬೂಬಸಾಹೇಬ, ಪ್ರಾಥಮಿಕ ಮತ್ತು ಮಾಧ್ಯಮಿಕ ಶಿಕ್ಷಣ ಹುಟ್ಟೂರಲ್ಲಿ ಪಡೆದುಕೊಂಡು ಉನ್ನತ ಶಿಕ್ಷಣವನ್ನು ವಿದ್ಯಾಕಾಶಿ ಧಾರವಾಡದಲ್ಲಿ ಮುಗಿಸಿ, ಪ್ರಸ್ತುತ...

ದಿನದ ಸುದ್ದಿ6 days ago

ಲೋಕಸಭಾ ಚುನಾವಣೆ : ಚುನಾವಣಾ ಚಟುವಟಿಕೆಗಳ ಕುರಿತ ಜಿಲ್ಲಾವಾರು ಮಾಹಿತಿ

ರಾಜ್ಯದ 28ಲೋಕಸಭಾ ಮತಕ್ಷೇತ್ರಗಳನ್ನು ಒಳಗೊಂಡ ಜಿಲ್ಲೆಗಳಲ್ಲಿ ನಡೆದಿರುವ ಚುನಾವಣಾ ಚಟುವಟಿಕೆಗಳ ಬಗ್ಗೆ ಮಾಹಿತಿ ಸುದ್ದಿದಿನ ಡೆಸ್ಕ್ : ದಾವಣಗೆರೆಯಲ್ಲಿ ಚುನಾವಣಾ ಕಾರ್ಯಗಳ ವೀಕ್ಷಣೆ ಮತ್ತು ನಿಯಂತ್ರಣಕ್ಕಾಗಿ ಜಿಲ್ಲಾಧಿಕಾರಿ...

ದಿನದ ಸುದ್ದಿ1 week ago

ನಾಯಕನ ಹಟ್ಟಿ | ಶ್ರೀಗುರು ತಿಪ್ಪೇರುದ್ರಸ್ವಾಮಿ ರಥೋತ್ಸವಕ್ಕೆ ವಿಶೇಷ ಬಸ್ ಸೌಲಭ್ಯ

ಸುದ್ದಿದಿನ,ದಾವಣಗೆರೆ : ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲ್ಲೂಕಿನ ಶ್ರೀಕ್ಷೇತ್ರ ನಾಯಕನಹಟ್ಟಿಯಲ್ಲಿ ಮಾರ್ಚ್ 26 ರಂದು ಜರುಗಲಿರುವ ಶ್ರೀಗುರು ತಿಪ್ಪೇರುದ್ರಸ್ವಾಮಿ ರಥೋತ್ಸವಕ್ಕೆ ರಾಜ್ಯ ರಸ್ತೆ ಸಾರಿಗೆ ನಿಗಮ ವಿಭಾಗದ...

mallikarjun kharge_suddidina mallikarjun kharge_suddidina
ದಿನದ ಸುದ್ದಿ1 week ago

ಕಾಂಗ್ರೆಸ್ ಪಕ್ಷದ ಬ್ಯಾಂಕ್ ಖಾತೆಗಳು ಸ್ಥಗಿತ ; ಬಿಜೆಪಿ ಅಧಿಕಾರ ದುರುಪಯೋಗ : ಖರ್ಗೆ ಕಿಡಿ

ಸುದ್ದಿದಿನ, ದೆಹಲಿ : ಲೋಕಸಭೆ ಚುನಾವಣೆ ವೇಳೆ ಕಾಂಗ್ರೆಸ್ ಪಕ್ಷದ ಬ್ಯಾಂಕ್ ಖಾತೆಗಳನ್ನು ಸ್ಥಗಿತಗೊಳಿಸಿರುವುದರಿಂದ ಚುನಾವಣಾ ಖರ್ಚುವೆಚ್ಚ ನಿರ್ವಹಣೆಯಲ್ಲಿ ಪಕ್ಷಕ್ಕೆ ಹಿನ್ನಡೆಯಾಗುತ್ತಿದೆ. ಆಡಳಿತ ಪಕ್ಷ ಬಿಜೆಪಿಗೆ ಅನುಕೂಲವಾಗುವಂತೆ...

Trending