Connect with us

ಲೈಫ್ ಸ್ಟೈಲ್

‘ಕೋವಿಡ್’ ನಾ ಕಂಡ ಹಾಗೆ : ಡಾ. ರಾಘವೇಂದ್ರ. ಎಫ್. ಎನ್

Published

on

  • ಡಾ. ರಾಘವೇಂದ್ರ. ಎಫ್. ಎನ್

ಬ್ಬ ಯೋದ ಯುದ್ಧದಲ್ಲಿ ಪಾಲ್ಗೊಂಡಾಗ ತನ್ನ ಪ್ರಾಣವನ್ನು ಒತ್ತೆಯಿಟ್ಟು ಹೊರಾಡುತ್ತಾನೆ. ಕೆಲವರು ಚತುರವಾಗಿ ತಮ್ಮ ಪ್ರಾಣ ರಕ್ಷಣೆ ಮಾಡಿಕೊಂಡು ಅಲ್ಪಸ್ವಲ್ಪ ಗಾಯ ಮಾಡಿಕೊಂಡರೂ ಸರಿ, ಆದರೂ ಹೋರಾಡಿ ಕೊನೆಗೆ ಗೆಲುವು ಸಾಧಿಸುತ್ತಾರೆ ಆದರೇ ಇನ್ನೂ ಕೆಲವರು ವೀರಾವೇಶದಿಂದ ಉದ್ವೇಗವಾಗಿ ಹೋರಾಡಿ ತಮ್ಮ ಪ್ರಾಣವನ್ನೇ ಕಳೆದುಕೊಳ್ಳುತ್ತಾರೆ ಯಾಕೆ ಇದನ್ನು ಹೇಳಿದೆ ಎಂದರೆ ಇದರಿಂದ ಸೋಂಕಿತರಾದ ಕೆಲವರ ಪರಿಸ್ಥಿತಿ ಹಾಗೆಯೆ.

ಕೋವಿಡ್ ಈಗ ಜಾಗತಿಕಮಾರಿ.ಜಗತ್ತನ್ನೇ ಭಯಭೀತಗೊಳಿಸಿ ಊನ ಮಾಡಿರುವ ಈ ವೈರಾಣು ಕೆಲವರನ್ನು ಸ್ವಲ್ಪ ದಿನ ಮಾತ್ರ ಕಾಡಿ ಸುಮ್ಮನೆ ಬಿಟ್ಟುಬಿಟ್ಟರೆ ಇನ್ನೂ ಕೆಲವರನ್ನು ಹಿಂಡಿ ಹಿಪ್ಪೆಕಾಯಿಮಾಡಿ ಪ್ರಾಣವನ್ನೇ ತೆಗೆದುಬಿಡುತ್ತದೆ.ಯಾಕೆ ಹೀಗೆ?

ಕೊರೊನ ಮತ್ತು ದೇಹದ ಯುದ್ಧ..!

ಇಲ್ಲಿ ಬರೀ ಕೊರೊನ ವೈರಾಣುವನ್ನು ಒಂದನ್ನೇ ದೂಷಿಸುವುದು ತರವಲ್ಲ. ನಾನು ಈಗಾಗಲೇ ಹೇಳಿದ ಹಾಗೆ ನಮ್ಮ ದೇಹದ ರೋಗನಿರೋಧಕ ಶಕ್ತಿ, ಸೈನಿಕರ ದಂಡು ಇದ್ದ ಹಾಗೆ ಈ ವೈರಾಣುವನ್ನು ಈ ಸೈನಿಕರು ಎಷ್ಟು ಚಾಣಾಕ್ಷವಾಗಿ ಹದ್ದು ಬಸ್ತಿಗೆ ತರುತ್ತಾರೆಯೋ ಅಥವಾ ಅತಿರೇಕವಾಗಿ ಹೋರಾಡಿ ತಮ್ಮ ದೇಹವನ್ನ ತಾವೇ ಹಾನಿ ಮಾಡಿಕೊಳ್ಳುತ್ತಾರೆಯೋ ಅದರ ಮೇಲೆ ನಿರ್ಭರ.

ಈ ವೈರಾಣು ಹೇಗೆ ದೇಹ ಪ್ರವೇಶಿಸುತ್ತದೆ, ಹೇಗೆ ರೋಗ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ, ಯಾಕೆ ಕೆಲವರು ಬರೀ ಶೀತ, ಕೆಮ್ಮು, ಜ್ವರ, ಮೈ ಕೈ ನೋವಿನಿಂದ ಬಳಲಿ ಗುಣಮುಖರಾಗುತ್ತಾರೆ ಮತ್ತು ಇನ್ನೂ ಕೆಲವರು ಉಸಿರಾಟದ ತೊಂದರೆ, ಆಯಾಸ, ಅಂಗವೈಫಲ್ಯ, ಆಮ್ಲಜನಕ ಕೊರತೆಯಿಂದ ಬಳಲಿ ಆಸ್ಪತ್ರಗೆ ಸೇರಿ ಆಮ್ಲಜನಕ, ವೆಂಟಿಲೇಟರ್ ಇತ್ಯಾದಿ ಉತ್ತಮ ಮಟ್ಟದ ವೈದ್ಯಕೀಯ ಚಿಕಿತ್ಸೆ, ಔಷಧ ಪಡೆದರೂ ಕೂಡ ಅಸುನೀಗುತ್ತಾರೆ ಎಂಬುದು ಒಂದು ವೈದ್ಯಕೀಯ ವೈಚಿತ್ರವೇ ಸರಿ.

ಇದಕ್ಕೆ ಕಾರಣ ನಮ್ಮ ದೇಹದ ರೋಗನಿರೋಧಕ ಶಕ್ತಿ ಮತ್ತು ಅದು ಹೋರಾಡುವ ಪರಿ ಅತಿಯಾಗಿ ಹೋರಾಡಿದರೆ ದೇಹದಲ್ಲಿನ ರೋಗನಿರೋಧಕ ಕಣಗಳು ಅಗತ್ಯಕ್ಕಿಂತ ಹೆಚ್ಚಾಗಿ ಹೊರಬಂದು, ರಕ್ತ ಸಂಚಲನೆ ತಡೆಯೊಡ್ಡಿ,, ಪುಪ್ಪಸದಲ್ಲಿ ರಕ್ತಹೆಪ್ಪುಗಟ್ಟಿ, ನೀರು ತುಂಬಿ ತೀವ್ರ ಉಸಿರಾಟದ ತೊಂದರೆಯಾಗಿ ಕೊರತೆಯಾಗಿ(ಹೈಪೈಕ್ಸಿಯಾ), ವೆಂಟಿಲೇಟರ್ ಇನ್ನಿತರ ಸಲಕರಣೆ ಮೂಲಕ ಆಮ್ಲಜನಕ ಪೂರೈಕೆ ಮಾಡಿ ಮತ್ತು ಅತೀ ಉನ್ನತ ಔಷಧಗಳನ್ನು ಕೊಟ್ಟರೂ ಸಾವನ್ನಪ್ಪುತ್ತಾರೆ.

ನಮ್ಮ ರೋಗನಿರೋಧಕ ಹೋರಾಟ ಅತೀ ಮಂದವಾಗಿದ್ದರೂ ಹಾನಿ, ಅತೀ ವೇಗವಾಗಿದ್ದರೂ ಹಾನಿ. ಮಧ್ಯಮದಲ್ಲಿದ್ದರೆ ಉತ್ತಮ.ಹಿಡಿತದಲ್ಲಿದ್ದರೆ ದೇಹಕ್ಕೆ ಇನ್ನೂ ಉತ್ತಮ, ಹೀಗಿದ್ದರೆ ಶೀಘ್ರ ಗುಣಮುಖರಾಗಲು ಅಥವಾ ರೋಗ ಸೋಂಕಿದ ನಂತರ, ಗುಣಮುಖರಾದ ಮೇಲೆ ದೇಹದ ಮೇಲೆ ಆಗುವ ಪರಿಣಾಮಗಳನ್ನು ತಡೆಗಟ್ಟಬಹುದು.

ಆದರೇ ಇದು ನಮ್ಮ ಕೈಯಲ್ಲಿಲ್ಲ ಆದರೂ ವಿಜ್ಞಾನಿಗಳು ಇಂತಹ ಪರಿಸ್ಥಿತಿ ಎದುರಿಸಲು ಕೆಲವು ಔಷಧಗಳನ್ನು ಕಂಡುಹಿಡಿದಿದ್ದಾರೆ. ವೈರಾಣುವನ್ನು ದೇಹದ ಒಳಗೆ ಬರುವುದನ್ನು ತಡೆಗಟ್ಟುವ ಕೆಲವು ಔಷಧಗಳಾದ ಹೈಡ್ರಾಕ್ಸಿಕ್ಲೋರೊಕ್ಕಿನ್, ವೈರಾಣು ದೇಹದೊಳಗಡೆ ದ್ವಿಗುಣಗೊಳ್ಳುವುದನ್ನು ತಡೆಗಟ್ಟಲು ಐವರ್ಮೆಕ್ಟಿನ್, ಲೋಪಿನವೀರ್, ಫೆವಿಪಿರವೀರ್, ರೆಮಿಡೀಸ್ವೀರ್ ಇತ್ಯಾದಿಗಳು ಹಾಗು ದೇಹದ ರೋಗನಿರೋಧಕ ಶಕ್ತಿ ಅತೀ ಹೆಚ್ಚು ಪ್ರಮಾಣದಲ್ಲಿದ್ದು ದೇಹಕ್ಕೆ ಹಾನಿ ಮಾಡುವಂಥ ಸೈಟೋಕೈನ್ ಎಂಬ ನಮ್ಮ ರೋಗ ನಿರೋಧಕ ಕಣಗಳೇ ನಮಗೆ ವೈರಿಯಾಗಿ ಬಿಡುತ್ತವೆ ಮತ್ತು ಸೈಟೊಕೈನ್ರಭಸದ ಖಾಯಿಲೆ ಅಥವಾ ಸೈಟೊಕೈನ್ಸ್ಟಾಮ್ ಸಿಂಡ್ರೋಮ್ ಅನ್ನುವ ಪರಿಸ್ಥಿತಿ ನಿರ್ಮಾಣವಾಗಿ ಅತೀಶೀಘ್ರವಾಗಿ ಸಾವನ್ನಪ್ಪುವ ಪರಿಸ್ಥಿತಿ ನಿರ್ಮಾಣವಾಗುತ್ತದೆ.

ಇದು ಎರಡನೇ ವಾರದಲ್ಲಿ ಕೆಲವರಲ್ಲಿ ಆಗುವ ಸಂಭವ ಹೆಚ್ಚು. ಹೀಗೆ ಹೆಚ್ಚಾದ ಸಂದರ್ಭದಲ್ಲಿ, ಅದನ್ನು ತಡೆಗಟ್ಟುವ ಔಷಧಗಳಾದ ಸ್ಟಿರಾಯ್ಡ್ಸ್, ಟೋಕ್ಲಿಜುಮ್ಯಾಬ್, ಉಲಿನ ಸ್ಟಾಟಿನ್ಹೀಗೆ ಇನ್ನೂ ಇತ್ಯಾದಿ ಔಷಧಗಳನ್ನ ಬಳಸಬಹುದು. ಆದರೇ ಇದು ಸಂಪೂರ್ಣವಾಗಿ ವೈದ್ಯರ ಮಾರ್ಗದರ್ಶನದಲ್ಲಿ, ತೀವ್ರ ನಿಗಾ ಘಟಕದಲ್ಲಿ ಕೊಡಬೇಕು. ಇದರಲ್ಲಿ ಕೆಲವರು ತೀವ್ರತೆ ಇಂದ ಹೊರಬರುತ್ತಾರೆ ಇನ್ನೂ ಕೆಲವರು ಇದಕ್ಕೆ ಸ್ಪಂದಿಸದೆ ಅಸುನೀಗುತ್ತಾರೆ.

ಮೊದಲೇ ರೋಗಲಕ್ಷಣಗಳು ಕಂಡಾಗ ತಪಾಸಣೆ ಮಾಡಿಸಿಕೊಳ್ಳುವುದು ಕ್ಷೇಮ. ಬೆರಳತುದಿಗೆ “ಪಲ್ಸ್‍ಆಕ್ಸಿಮೀಟರ್” ಎಂಬ ದೇಹದೊಳಗಿನ ಆಮ್ಲಜನಕ ಸಾಂದ್ರತೆ ಅಳೆಯುವ ಚಿಕ್ಕ ಮಾಪನವನ್ನು ತೂರಿಸಿ ಪರೀಕ್ಷೆಮಾಡಿಕೊಳ್ಳುವುದು ಬಹಳಮುಖ್ಯ. ಎಷ್ಟೋ ಜನ ಮೇಲ್ನೋಟಕ್ಕೆ ಆರೋಗ್ಯವಾಗಿ ಕಂಡರೂ ಅವರ ಆಮ್ಲಜನಕ ಸಾಂದ್ರತೆ (ಎಸ್ಪಿ 02)ಕಡಿಮೆ ಇರುತ್ತದೆ ಅದು ಹೊರಗಡೆ ತೋರ್ಪಡದೆ ಇದ್ದಕ್ಕಿದ್ದ ಹಾಗೆ ತೀವ್ರ ಉಸಿರಾಟದ ತೊಂದರೆಗೆ ಒಳಗಾಗುವವರು ಬಹಳ. ಇದಕ್ಕೆ ಇಂಗ್ಲಿಷ್‍ನಲ್ಲಿ “ಹ್ಯಾಪಿಹೈಪೆಕ್ಸಿಯಾ” ಅಥವಾ “ಒಳ ಹುದುಗಿರುವ ಕ್ಷೀಣಗೊಂಡ ಆಮ್ಲಜನಕದ ಕೊರತೆ” ಇಂಥ ಸಂದರ್ಭದಲ್ಲಿ ಬೇಗನೆ ಆಮ್ಲಜನಕ ಪೂರೈಕೆ ಮಾಡಿದರೆ ಬಹಳಷ್ಟು ಜನ ಬದುಕುವರು.

ಸಾಮಾನ್ಯವಾಗಿ ಈ ಆಮ್ಲಜನಕ ಸಾಂದ್ರತೆ ದೇಹದಲ್ಲಿ ಶೇಕಡಾ 95 ಅಥವಾ ಮೇಲ್ಪಟ್ಟು ಇರಬೇಕು. 90 ರಿಂದ 95 ಇದ್ದರೆ ಮಧ್ಯಮ, 90 ಕ್ಕಿಂತಲೂ ಕಡಿಮೆ ಇದ್ದರೆ ತೀವ್ರ ಹಾಗು 85 ಕ್ಕಿಂತಲೂ ಕಡಿಮೆ ಇದ್ದರೆ ಅತೀ ತೀವ್ರ ಆಮ್ಲಜನಕ ಕೊರತೆ ಎನ್ನುವರು. ಇಂಥವರಿಗೆ, ಸಿಲಿಂಡರ್ ಮೂಲಕ, ವಿಧವಾದ ಮಾಸ್ಕ್ ಮೂಲಕ ಅಥವಾ ನಳಿಕೆಗಳ ಮೂಲಕ ತೀವ್ರ ಆಮ್ಲಜನಕ ಪೂರೈಕೆ (ಹೆಚ್.ಎಫ್.ಎನ್.ಸಿ) ಅಥವಾ ಕೊನೆಗೆ ಕೃತಕ ಉಸಿರಾಟವನ್ನು ವೆಂಟಿಲೇಟರ್ ಮೂಲಕ ಪೂರೈಸಬೇಕಾಗಬಹುದು. ಇವೆಲ್ಲದರ ನಿರ್ಧಾರವನ್ನು ತೀವ್ರ ನಿಗಾ ಘಟಕದ ತುರ್ತು ವೈದ್ಯತಂಡದ ವೈದ್ಯರು ನಿರ್ಧರಿಸುತ್ತಾರೆ.

ರಕ್ತಪರೀಕ್ಷೆಗಳಾದ, ರಕ್ತಕಣಗಳು, ಡಿಡೈಮರ್, ಫೆರಿಟೀನ್, ಎಲ್ಡಿಹೆಚ್, ಸಕ್ಕರೆ ಪ್ರಮಾಣ, ಉಪ್ಪಿನಂಶ, ಇಂಟೆರ್ಲುಕಿನ್ 6 ಹೀಗೆ ಅನೇಕ ರಕ್ತಪರೀಕ್ಷೆಗಳನ್ನ ವೈದ್ಯರು ಮಾಡಿಸಿ ಅವರ ಮಾರ್ಗದರ್ಶನದಂತೆ ಚಿಕಿತ್ಸೆಕೊಡುತ್ತಾರೆ. ಎದೆಯ ಭಾಗದ ಕ್ಷ ಕಿರಣ ಚಿತ್ರ ಹಾಗೂ ಎದೆಯ ಸಿಟಿ ಸ್ಕ್ಯಾನ್ ಅನ್ನು ವೈದ್ಯರು ಸಲಹೆ ನೀಡಿ, ಅದರ ಉಪಲಬ್ಧತೆ ಮೇರೆಗೆ ಮಾಡಿಸಿ ಮುಂದಿನ ನಿರ್ಧಾರ ತೆಗೆದುಕೊಳ್ಳುವರು. ಇವೆಲ್ಲವನ್ನೂ ನಾಲ್ಕರಿಂದ ಎಂಟನೇ ದಿನಗಳ ಮಧ್ಯದಲ್ಲಿ ಮಾಡಿಸಿ ನಿರ್ಧರಿಸುತ್ತಾರೆ.

ರಕ್ತದಲ್ಲಿ ಕಣಗಳ ಸಾಂದ್ರತೆ ಹೆಚ್ಚಾದರೆ ಉಸಿರಾಟದ ಏರುಪೇರು ಹೆಚ್ಚು. ವಯಸ್ಸಾದವರು, ಸಕ್ಕರೆಖಾಯಿಲೆ, ಹೃದಯ, ಕಿಡ್ನಿ, ಲಿವರ್, ಕ್ಯಾನ್ಸರ್, ರೋಗನಿರೋಧಕ ಶಕ್ತಿ ಕುಂಠಿತಗೊಂಡ ಖಾಯಿಲೆಗಳ ರೋಗಿಗಳು ಹೆಚ್ಚಾಗಿ ತೊಂದರೆ ಅನುಭವಿಸುತ್ತಾರೆ. ಮಕ್ಕಳಲ್ಲಿ, ಯುವಕರಲ್ಲಿ ಮತ್ತು ಗರ್ಭಿಣಿಯರಲ್ಲಿ ಇದರ ತೀವ್ರತೆ ಕಡಿಮೆ.

ಬೋರಲು ಮಲಗುವುದು..!

ಹೌದು, ಬೋರಲು ಮಲಗುವುದು ಅಥವಾ ಪ್ರೈನ್ಪೊಸಿಷನ್ಲ್ಸೀಪಿಂಗ್ ಅಂತ ಏನು ಹೇಳುತ್ತೇವೆಯೋ ಇದರಲ್ಲಿ ಬೋರಲಾಗಿ ಮಲಗಿ ನಂತರ ಎಡಪಕ್ಕ ತಿರುಗಿ, ಹಾಗೆ ಬಲಪಕ್ಕ ತಿರುಗಿ ಮತ್ತೇ ಬೋರಲು ಮಲಗುವ ಈ ಚಕ್ರವನ್ನು ಪ್ರತಿ ಅರ್ಧ ಗಂಟೆಯಿಂದ ಒಂದು ಘಂಟೆ ಮಾಡುತ್ತಾ ಹೋದರೆ ಪುಪ್ಪಸಕ್ಕೆ ಮತ್ತು ಅದರ ಕೆಳಭಾಗಕ್ಕೆ ಹೆಚ್ಚು ಆಮ್ಲಜನಕ ಪೂರೈಕೆ ಆಗುತ್ತದೆ. ಈ ಕೊರೊನದಿಂದ ಉಂಟಾಗುವ ಊತ ಅಥವಾ ನ್ಯುಮೋನಿಯಾ ಪುಪ್ಪಸದ ಕೆಳಭಾಗಕ್ಕೆ ಹೆಚ್ಚು ಅಂಟಿಕೊಳ್ಳುತ್ತ್ತದೆ, ಇಲ್ಲಿ ಆಮ್ಲಜನಕದ ಕೊರತೆಯನ್ನು ನೀಗಿಸಲು ಈ ಬೋರಲು ಮಲಗುವ ಅಭ್ಯಾಸ ಬಹಳ ಉಪಾಯಕಾರಿ.

ಹೀಗೆ ಸತತವಾಗಿ ಆಮ್ಲಜನಕ ತೆಗೆದುಕೊಂಡವರು ಅಥವಾ ವೆಂಟಿಲೇಟನಿರ್ಂದ ಹೊರ ಬಂದವರು ತಮ್ಮ ಪುಪ್ಪಸದ ಮೊದಲಿನ ಶಕ್ತಿ ಮತ್ತು ಅಯಸ್ಸನ್ನು ಕಳೆದುಕೊಳ್ಳುವ ಸಂಭವ ಹೆಚ್ಚು. ಅದನ್ನು ತಡೆಗಟ್ಟಲು ಉಸಿರಾಟದ ಪುನಸ್ರ್ಥಾಪನೆ, ಪ್ರಾಣಾಯಾಮ, ಪರಿಶುದ್ಧ ಗಾಳಿ ಸೇವನೆ, ಮಾನಸಿಕ ಸ್ಥೈರ್ಯ, ಧನಾತ್ಮಕ ಮನೋಭಾವ ಬೆಳೆಸಿಕೊಳ್ಳುವುದರಿಂದ ದೇಹವು ಮತ್ತೆ ಮೊದಲಿನಂತೆ ಸಾಮಾನ್ಯ ಸ್ಥಿತಿಗೆ ತರಲು ಪ್ರಯತ್ನ ಮಾಡುತ್ತದೆ. ಇದನ್ನು ಉಳಿಸಿಕೊಳ್ಳಲು ವೈದ್ಯರ ಸಲಹೆ ಮೇರೆಗೆ ಸ್ಟಿರೋಯ್ಡ್, ಹೊಸ ಔಷಧಗಳು, ಆಸ್ಪಿರಿನ್ಹೀಗೆ ಇತ್ಯಾದಿಗಳನ್ನು ಕೆಲವು ದಿನ ಅಥವಾ ತಿಂಗಳುಗಟ್ಟಲೆ ಮುಂದುವರಿಸ ಬೇಕಾಗಬಹುದು

ಆಂಟಿಬಯೋಟಿಕ್ಸ್ ಮೊದಲ ದಿನ ದಿಂದಲೇ ಕೊಟ್ಟರೆ ಅಷ್ಟೇನೂ ಲಾಭವಿಲ್ಲ ಆದರೇ ವಾರದ ಕೊನೆ ಅಥವಾ ಎರಡನೇ ವಾರದ ಹಂತದಲ್ಲಿ ಬ್ಯಾಕ್ಟೀರಿಯಾ ಎಂಬ ರೋಗಾಣುಗಳು ಈ ವೈರಸ್‍ನಿಂದ ಕ್ಷೀಣಗೊಂಡ ರೋಗನಿರೋಧಕ ಶಕ್ತಿಯ ಅವಕಾಶ ಉಪಯೋಗಿಸಿಕೊಂಡು ದೇಹದ ಮೇಲೆ ದಾಳಿ ಮಾಡುತ್ತವೆ, ಅದನ್ನು ತಡೆಗಟ್ಟಲು ಈ ಅಂಟಿಬಯೋಟಿಕ್ ಉಪಯೋಗಿಸಬಹುದು.

ವಿಟಮಿನ್ಸಿ, ಜಿಂಕ್, ಡಿ ಹಾಗು ಇತರೆ ಮಾತ್ರೆಗಳು, ಮನೆ ಮದ್ದುಗಳು, ಆರೋಗ್ಯಕರವಾದ ಹಣ್ಣು ಮತ್ತು ತರಕಾರಿಗಳು ರೋಗನಿರೋಧಕ ಶಕ್ತಿಯನ್ನು ಬಲಪಡಿಸುತ್ತವೆಯೇ ಹೊರತು ಕೊರೊನ ಬರದೇ ಇರುವ ಹಾಗೆ ತಡೆಗಟ್ಟುವುದಿಲ್ಲ. ಇವೆಲ್ಲವನ್ನು ವೈದ್ಯರ ಸಲಹೆ ಮೇರೆಗೆ ಬಳಸಿದರೆ ತಪ್ಪೇನಿಲ್ಲ.

ಜಗತ್ತಿನಾದ್ಯಂತ ಎಷ್ಟೊಂದು ಚರ್ಚೆಗಳು, ಸಂಶೋಧನೆಗಳು, ಔಷದ ಮತ್ತು ರೋಗನಿರೋಧಕ ಲಸಿಕೆ ಕಂಡುಹಿಡಿಯುವತ್ತ ಹಗಲುರಾತ್ರಿ ಬಿಡುವಿಲ್ಲದೆ ಕೆಲಸಗಳು ನಡೆಯುತ್ತಲಿವೆ, ಈ ಕೆಲಸಗಳ ಮಧ್ಯೆ, ಊಟ ಉಪಚಾರ ನಿದ್ದೆ ಮರೆತು ವೈದ್ಯರು ಹಗಲಿರುಳೆನ್ನದೆ ಸೇವೆ ಮಾಡುತ್ತಿದ್ದಾರೆ. ವೈದ್ಯರ ಈ ನಿಸ್ವಾರ್ಥ ಮನೋಭಾವವನ್ನು ಜೀವನಮಾನವಿಡಿ ನೆನೆದರೆ ಸಾಲದು.

ಕರೋನ ಒಂದು ಹೊಸಯುಗವನ್ನೇ ಹುಟ್ಟುಹಾಕಿದೆ, ಹಲವು ಪಾಠಗಳನ್ನು ಕಲಿಸುತ್ತಲಿದೆ ಇನ್ನೂ ಕಲಿಯಬೇಕಾದದ್ದು ಬಹಳಷ್ಟು ಇದೆ ಇಲ್ಲಿ ಯಾರೂ ಪಂಡಿತರಲ್ಲ ಎಲ್ಲರೂ ವಿದ್ಯಾರ್ಥಿಗಳೇ..!

ಇದನ್ನು ತಡೆಗಟ್ಟಲು ಮುಖಕ್ಕೆ ಮತ್ತು ಮೂಗಿಗೆ ಮುಖಗವಸು ಅಥವಾ ಮಾಸ್ಕ್, ಸ್ವಚ್ಛತೆ, ಭೌತಿಕ ಮತ್ತು ಸಾಮಾಜಿಕ ಅಂತರಕಾಯ್ದುಕೊಳ್ಳುವಿಕೆ ಒಂದೇ ರಾಜಮಾರ್ಗ.

ಇದರಿಂದ ಪೀಡಿತರಾದ ರೋಗಿಗಳನ್ನು ವೈದ್ಯರು, ವಿಜ್ಞಾನಿಗಳು ತಮ್ಮ ಶಕ್ತಿಮೀರಿ ವೈಜ್ಞಾನಿಕ ಚೌಕಟ್ಟಿನಲ್ಲಿ ಈ ಕರೋನವನ್ನು ತಡೆಗಟ್ಟಲು ಪ್ರಯತ್ನ ಮಾಡಬಹುದೇ ಹೊರತು ಇದನ್ನು ಸಂಪೂರ್ಣವಾಗಿ ಗುಣಮಾಡುವ ಶಕ್ತಿ ಯಾವ ವೈದ್ಯರ ಕೈಲಿಲ್ಲ.

ಸಮಯಕ್ಕೆ ಸರಿಯಾಗಿ ತಪಾಸಣೆ ಮತ್ತು ಚಿಕಿತ್ಸೆ, ನಮ್ಮ ದೇಹದ ರೋಗನಿರೋಧಕ ಶಕ್ತಿ ಮತ್ತು ವೈರಾಣುವಿನ ಜೊತೆ ಇದರ ಪ್ರತಿಸ್ಪಂದನೆ, ಧನಾತ್ಮಕ ಚಿಂತನೆ ಮತ್ತು ಗಟ್ಟಿಯಾದ ಮನೋಬಲ ನಮ್ಮನ್ನು ಇದರಿಂದ ಕಾಪಾಡಿ ಹೊರತರುವುದರಲ್ಲಿ ಎರಡು ಮಾತಿಲ್ಲ.

ಡಾ. ರಾಘವೇಂದ್ರ. ಎಫ್. ಎನ್
ಎಂಬಿಬಿಎಸ್. ಎಂಡಿ.
ಸಹಪ್ರಾಧ್ಯಾಪಕರು ಮತ್ತು ಕನ್ಸಲ್ಟೆಂಟ್ಫಿಜಿಷಿಯನ್ ವೈದ್ಯಕೀಯ ವಿಭಾಗ
ಕೋವಿಡ್ ನೊಡಲ್ ಆಫೀಸರ್
ವಿಮ್ಸ್, ಬಳ್ಳಾರಿ

ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ

ತಂತ್ರಜ್ಞಾನ ಮೋಡಿ : ಅಪರೂಪವೆನಿಸುತ್ತಿರುವ ಹಳ್ಳಿಗಾಡಿನ ಜೀವನ

Published

on

  • ಡಾ. ಚಂದ್ರಪ್ಪ ಎಚ್, ಸಹಾಯಕ ಪ್ರಾಧ್ಯಾಪಕರು, ಭೌತವಿಜ್ಞಾನ ವಿಭಾಗ, ಸರ್ಕಾರಿ ವಿಜ್ಞಾನ ಕಾಲೇಜು, ಚಿತ್ರದುರ್ಗ

90ರ ದಶಕದಿಂದೀಚೆಗೆ, ಎಲ್ಲೆಡೆ ಸದ್ದಿಲ್ಲದೇ ಕ್ರಮೇಣ ಒಕ್ಕರಿಸತೊಡಗಿದೆ ಆಧುನಿಕ ಯಾಂತ್ರಿಕೃತ ಬದುಕು.

ಜನಸಾಮಾನ್ಯರ ಅರಿವಿನ-ಪರಿಧಿ ತಿಳಿಗೊಳ್ಳುವುದರ ಮೊದಲೇ ಊಹಿಸಲಾರದಷ್ಟು ಮಟ್ಟಿಗೆ ಇಂದು, ಸ್ವಚ್ಛಂದ ಹಳ್ಳಿ-ಸೊಬಗಿನ ಕೂಡು-ಕುಟುಂಬದ, ಮೈ-ಮನಸ್ಸು ತುಂಬಿದ, ಪರಿಶುದ್ಧ ಜೀವನ ಪ್ರೀತಿ, ಉತ್ಸಾಹ, ಮಮತೆಯನ್ನು ಇನ್ನಿಲ್ಲವಾಗಿಸಿದೆ ಎನಿಸುತ್ತದೆಯಲ್ಲವೆ?

ಹೇಗೆಂದರೆ, ಕಲ್ಪಿಸಿಕೊಂಡರೂ ಕಣ್ಣೆದುರಿಗೆ ತೆರೆದಿಡುವ ಅಮೂಲ್ಯ ಬದುಕು, ಅದೆಷ್ಟು ಬೇಗ ದಿಕ್ಕು-ದೆಸೆಯಿಲ್ಲದೆ ಕಣ್ಣು-ಕಟ್ಟಿದ ಸ್ಪರ್ಧೆಗಿಳಿದ ಕುದುರೆಯಂತೆ ಅಲೆಯುವಂತಾಗಿದೆ! ಅರೆಕ್ಷಣ, ಮೈಮನ ಕಸಿವಿಸಿಗೊಳ್ಳುತ್ತೆ! ಜೀವ ಮರುಗುತ್ತೆ. ಮತ್ತೆ ಮತ್ತೆ ಆ ಬಾಲ್ಯ, ಹಳ್ಳಿ ಬದುಕನ್ನ ಅರಸಿ ಬಯಸುತ್ತೆ! ಜನತೆ, ಹಳ್ಳಿಯಲ್ಲಿನ ಗಿಡ-ಮರ, ಪಶು-ಪಕ್ಷಿ, ಹಳ್ಳ-ಕೊಳ್ಳ, ಬೆಟ್ಟ-ಗುಡ್ಡ ಮುಂತಾದ ಪರಿಸರದ ಸಕಲ ಜೀವಿಗಳೊಂದಿಗೆ ಒಂದಾಗಿ ನಲ್ಮೆಯಿಂದ ಪರಿಶುದ್ಧ ಮನದಿ, ಭೂ ತಾಯಿ, ತಿಳಿ-ನೀಲಿ ಆಗಸ, ಮಳೆ, ಗಾಳಿ, ಬೆಳಕನ್ನ ಇನ್ನಿಲ್ಲದೆ ಅಪ್ಪಿ, ಅತ್ಯಂತ ಸಂತಸ-ಖುಷಿಯಿಂದ, ಇರುವ ಪರಿಸ್ಥಿತಿಗೆ ಒಗ್ಗಿ , ಬದುಕು ರೂಪಿಸಿಕೊಂಡು ಜೀವನೋತ್ಸಾಹ ತಳೆಯುತ್ತಿದ್ದರು.

ನಿಜ ಹೇಳಬೇಕೆಂದರೆ, ಪರಿಸರವೇ ಪಾಠ; ಭೂ ತಾಯಿಯೇ ಹಾಸಿಗೆ; ಆಗಸವೇ ಹೊದಿಕೆಯಾಗಿ, ದುಡಿದ, ದಣಿವರಿದ ಮನದಿ, ಕಣ್ತುಂಬಿ ನೆಮ್ಮದಿಯ ನಿಟ್ಟುಸಿರುಗೈವ ಕ್ಷಣಗಳು ಅದಾಗಿತ್ತು!

ಹಳ್ಳಿಯಲ್ಲಿನ ಆಟೋಟಗಳು, ತಮಾಷೆಯ ಕ್ಷಣಗಳು, ಆಟಿಕೆಗಳು, ಸಾಮಾನುಗಳು, ಹಬ್ಬ-ಹರಿದಿನಗಳು, ಜಾತ್ರೆ-ಸಂತೆಗಳು, ಒಕ್ಕಲು ಸಮಯದ ಸುಗ್ಗಿಯ ಮಧುರ ಕ್ಷಣಗಳು ಇತ್ಯಾದಿ ಜನತೆಯ ಮುಗ್ಧ -ಮನಸ್ಸು ಮತ್ತು ಹೊಳೆವ ಮುಖದಲ್ಲಿ, ನಿಷ್ಕಲ್ಮಶ ಮಂದಹಾಸ ಮೂಡಿಸಿ, ಬೆಲೆ ಕಟ್ಟಲಾಗದ ಖುಷಿಯ ಕ್ಷಣಗಳನ್ನು ಸದಾ ಅವರಲ್ಲಿ ಕಂಗೊಳಿಸುತ್ತಿದ್ದವು.

ಎಲ್ಲರೂ ದುಡಿವವರು; ಎಲ್ಲರೂ ಭಾಗಿಯಾಗುವವರು; ಎಲ್ಲರೊಳಗೊಂದಾಗಿ ಬಾಳುವವರು; ಎಲ್ಲರಲ್ಲೂ ಧನ್ಯತಾ ಭಾವ; ಆದರಣೀಯತೆ, ಪೂಜ್ಯತಾ-ಭಾವ ತುಂಬಿತ್ತು! ಅಂತಃಕರಣೆ, ಕರುಣೆ, ಪ್ರೀತಿ-ವಿಶ್ವಾಸ, ತಕ್ಕಮಟ್ಟಿಗೆ ಮಾನವೀಯತೆ ಬದುಕ-ಪ್ರೀತಿ ಹೆಚ್ಚಿಸಿತ್ತು!

ಈಗಾಗಲೇ, ನಾವು ಯಾವ ಸ್ಥಿತಿ ತಲುಪಿದ್ದೇವೆಂದರೆ: ಶಾಲಾ ರಜೆಯ ದಿನಗಳಲ್ಲಿ, ಈಗಿನ ಮಕ್ಕಳಿಗೆ ಆ ಕಾಲದ ಹಳ್ಳಿಗಳ ಜೀವನ ಪರಿಚಯಿಸಲು ಗೊಟಗೋಡಿಯ ರಾಕ್ ಗಾರ್ಡನ್ – ಹಾವೇರಿ, ಹೆರಿಟೇಜ್ ವಿಲೇಜ್ – ಮಣಿಪಾಲ, ಅಲ್ಲಲ್ಲಿ ಸಾರ್ವಜನಿಕ ಉದ್ಯಾನವನ, ಹಾಗೂ ಇತರೆ ಕೆಲವು ಮ್ಯೂಸಿಯಮ್ ಗಳತ್ತ ಮುಖ ಮಾಡಿಬೇಕೆ ಹೊರತು ನೈಜ ಚಿತ್ರಣ ಪ್ರಸ್ತುತ ಹಳ್ಳಿಗಾಡಿನಲ್ಲೂ ಕಾಣಸಿಗದು! ಸ್ವತಃ ಹಳ್ಳಿಗರೇ ಪರಿತಪಿಸುವ ಸ್ಥಿತಿ.

ಕಾರಣ ಇಷ್ಟೆ: ತಂತ್ರಜ್ಞಾನದ ಆವಿಷ್ಕಾರ ಮತ್ತು ಎಲ್ಲ ಕ್ಷೇತ್ರಗಳಲ್ಲೂ ಹೊಕ್ಕಿರುವ ಅದರ ಗಾಢವಾದ ಛಾಯೆ. ಇಡೀ ‘ಪ್ರಪಂಚವೇ ಒಂದು ಹಳ್ಳಿ’ (Global Village) ಯಾಗಿ ಮಾರ್ಪಟ್ಟಿರುವ ಭಾವನೆ. ವಿಶೇಷವಾಗಿ, ದೂರವಾಣಿ, ಇಂಟರ್ನೆಟ್, ಯುಟ್ಯೂಬ್, ನೇರ ಮೆದುಳಿಗೆ ಕೈ ಹಾಕಿರುವ ಸಾಮಾಜಿಕ ಜಾಲತಾಣಗಳ ಡ್ರಗ್ಸ್ ರೀತಿಯ ಮಾನಸಿಕ ಮೋಹ ಬೆಂಬಿಡದೆ ಇಂದಿನ ಆಧುನಿಕ ಜನತೆಯ ಚಿಂತನಾರ್ಹ ಯೋಚನಾ ಶಕ್ತಿ, ಆರೋಗ್ಯ , ಕೌಟುಂಬಿಕ ಮೌಲ್ಯಗಳು, ಮಾನವೀಯ ಗುಣಗಳು ಹಾಗೂ ಒಟ್ಟಾರೆ ಜೀವನ ಶೈಲಿಯನ್ನೇ ಅಕ್ಷರಸಃ ನುಂಗಿಹಾಕಿವೆ! ಅಲ್ಲದೆ, ಇದು ಇಂದಿನ ಅನಿವಾರ್ಯವೆಂಬಂತೆ ಕಠೋರ ಸನ್ನಿವೇಶ ಹುಟ್ಟುಹಾಕಿವೆ.

ಒಂದೆಡೆ, ‘ಅತೀಯಾದ ಅಮೃತವೂ ವಿಷ’ವೆನ್ನುವಂತೆ, ಹಾಗೂ ಊಟದಲ್ಲಿ ‘ರುಚಿಗೆ ತಕ್ಕಷ್ಟು ಉಪ್ಪಿ’ರುವಂತೆ ಹಲವು ಒಳಿತು-ಕೆಡುಕಗಳ ನಡುವೆ ಎಲ್ಲವೂ ಹಿತಮಿತವಾಗಿ ಬಳಕೆಯಲ್ಲಿದ್ದರೆ ಚೆನ್ನ. ಅಲ್ವೇ? ಮೈ ಮನ ಆರೋಗ್ಯಕರವಾಗಿರುತ್ತೆ; ಜೀವನ ಉತ್ಸಾಹದಿಂದ ಕೂಡಿರುತ್ತೆ.
ಜೊತೆಗೆ, ಇತ್ತೀಚೆಗೆ ಜಗತ್ತಿನೆಲ್ಲೆಡೆ ಭಾರೀ ಸಂಚಲನ ಸೃಷ್ಟಿಸಿರುವ ‘ಕೃತಕ ಬುದ್ಧಿಮತ್ತೆ’ (Artificial Intelligence – AI) ಹಾಗೂ ‘ಬಯೋಚಿಪ್’ ತಂತ್ರಜ್ಞಾನಗಳು. ಈ ಎರಡೂ ತಂತ್ರಜ್ಞಾನಗಳು ಬಹುತೇಕ ಮನುಷ್ಯನನ್ನ ಸಹ ಒಂದು ಸರಕಾಗಿ ನೋಡುವ ದೂರದೃಷ್ಟಿ ಹೊಂದಿವೆ ಎಂದರೆ ತಪ್ಪಾಗಲಿಕ್ಕಿಲ್ಲ! ತೀರ ಇತ್ತೀಚೆಗೆ, ತಂತ್ರಜ್ಞಾನ ಜಗತ್ತಿನ ಹೆಸರಾಂತ ಉದ್ಯಮಿ: ಎಲಾನ್ ಮಸ್ಕ್ ತಮ್ಮ ‘ನ್ಯೂರಾಲಿಂಕ್’ (Neuralink) ಸಂಸ್ಥೆಯ ಮೂಲಕ ಪ್ರಪಂಚದ ಮೊಟ್ಟ ಮೊದಲ ಪ್ರಯತ್ನವಾಗಿ ಆರೋಗ್ಯವಂತ ವ್ಯಕ್ತಿಯೊಬ್ಬರ ಮೆದುಳಿನಲ್ಲಿ ಪ್ರಾಯೋಗಿಕ – ‘ಮೊದಲ ಬಯೋಚಿಪ್’ ಅಳವಡಿಸಿರುವುದು ಎಲ್ಲರ ಅಚ್ಚರಿಗೆ ಕಾರಣವಾಗಿದೆ! ಇದುವರೆಗೂ, ಮೊಬೈಲ್ ನಲ್ಲಿ ಕೇವಲ ‘ಮೆಮೊರಿ ಕಾರ್ಡ್’ ಬಳಸಿ, ಅದರಲ್ಲಿ ಸಂಗ್ರಹಿಸಿದ ಮಾಹಿತಿ ಬೇಕೆಂದಾಗ ಆಲಿಸುವ, ನೋಡುವ ಪರಿಪಾಠದ ಪರಿಚಯವಿದ್ದ ನಮಗೆ, AI ಹಾಗೂ Biochip ತಂತ್ರಜ್ಞಾನಗಳ ಅವತಾರಗಳು ಊಹೆಗೂ ಮೀರಿದ್ದು ಅನ್ಸುತ್ತೆ ಕೂಡ.

ಆಗ, ಜಗತ್ತು ಹೇಗಿರಬೇಡ? ತಂತ್ರಜ್ಞಾನ ತೊರೆದು ಮನುಷ್ಯ, ಜೀವನ ಕಲ್ಪಿಸಿಕೊಳ್ಳಲಾರದ ಪರಿಸ್ಥಿತಿ ನಿರ್ಮಾಣವಾಗಿದೆ. ಅದು, ಕೇವಲ ಮನುಷ್ಯನ ಅವಶ್ಯಕತೆಗಳಿಗೆ ಪೂರಕವಾಗಿರಬೇಕೆ ಹೊರತು; ಆತನನ್ನ ಆಳುವ ಸ್ಥಿತಿ ತಲುಪಬಾರದು! ಮುಂದಿನ ದಿನಗಳಲ್ಲಿ, ಮನುಷ್ಯ ಎದುರಿಸಬಹುದಾದ ಭಯಾನಕ ತಂತ್ರಜ್ಞಾನ ಸಂಕೋಲೆಗಳನ್ನು ಕುರಿತು ಚರ್ಚಿಸುವ ಅಗತ್ಯ ಇಂದಿನ ತುರ್ತು ಅನಿವಾರ್ಯ. ಆದರೆ, ಎಲ್ಲವೂ ಸಲೀಸಾಗಿ ಕೈಗೆಟುಕುವ ಇಂದಿನ ದಿನಗಳಲಿ, ಅತಿಯಾಗಿ ಮಿತಿಮೀರಿರುವ ಅನುಕೂಲಗಳು ಅಮೂಲ್ಯ ಖುಷಿಯ ಕ್ಷಣಗಳನ್ನು ಎಂದಿಗೂ ನೀಡಲಾರವು.

ಬದಲಿಗೆ, ಪ್ರತಿಷ್ಠೆಯ ಹೆಮ್ಮರಗಳಾಗಿ, ಜನತೆ ನಾಲ್ಕು ದಿನದ ಈ ಬಾಳಲಿ ಏನೋ ಬಹುದೊಡ್ಡ ಸಾಧನೆಗೈದವರಂತೆ, ಯಂತ್ರಮಾನವರಂತೆ ಬೀಗುವವರೆ!!? ಮೂಲಭೂತವಾಗಿ, ಮಾನವ ಸಹಿತ ಸಕಲ ಜೀವ-ಸಂಕುಲವೂ ವಾಸಯೋಗ್ಯ ಸ್ವಚ್ಛಂದ ಭೂಮಿ ಸಂರಕ್ಷಣೆ ನಮ್ಮೆಲ್ಲರ ಹೊಣೆ. ಭೂಮಿಯಲ್ಲಿ, ಮಣ್ಣಿನ ಫಲವತ್ತತೆ ಹಾಗೂ ನೀರು ಸಂರಕ್ಷಿಸದೆ; ಗಿಡ-ಮರ ಬೆಳೆಸದೆ; ಹಸಿರು ಹೆಚ್ಚಿಸದೆ, ಮತ್ತು ಪರಿಸರ ಸಮತೋಲನ ಕಾಪಾಡದೆ; ಕೇವಲ ತಂತ್ರಜ್ಞಾನ ತಲೆಯಲಿ ಹೊತ್ತು, ಮನುಷ್ಯ ಉತ್ತಮ ಆಹಾರ, ಆರೋಗ್ಯ ಮತ್ತು ಜೀವನ ಕಟ್ಟಿಕೊಳ್ಳಲು ಎಂದಿಗೂ ಸಾಧ್ಯವಿಲ್ಲ. ಸಮರೋಪಾದಿಯಲ್ಲಿ, ಜನತೆ ಸ್ವ ಇಚ್ಛೆಯಿಂದ ಹಳ್ಳಿ-ಹಳ್ಳಿಗಳಿಂದ, ನಗರಗಳು, ಬೆಟ್ಟ-ಗುಡ್ಡಗಳಲ್ಲೆಡೆ ಬೃಹತ್ ಸಂಖ್ಯೆಯಲ್ಲಿ ಸಸಿಗಳನ್ನ ನೆಟ್ಟು, ಪಾಲನೆ-ಪೋಷಣೆಗೈಯ್ಯುವ ಚಳುವಳಿ ರೂಪದ ಆಂದೋಲನ ದೇಶಾದ್ಯಂತ ಅತ್ಯಂತ ತ್ವರಿತವಾಗಿ ಕೈಗೂಡಬೇಕು. ಈ ನಿಟ್ಟಿನಲ್ಲಿ, ಎಲ್ಲರೂ ಕೈಜೋಡಿಸಬೇಕು.

(ಲೇಖಕರು : ಡಾ. ಚಂದ್ರಪ್ಪ ಎಚ್, ಸಹಾಯಕ ಪ್ರಾಧ್ಯಾಪಕರು, ಭೌತವಿಜ್ಞಾನ ವಿಭಾಗ, ಸರ್ಕಾರಿ ವಿಜ್ಞಾನ ಕಾಲೇಜು, ಚಿತ್ರದುರ್ಗ)

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಕಾಟನ್ ಕ್ಯಾಂಡಿ ಮತ್ತು ಗೋಬಿ ಮಂಚೂರಿ ನಿಷೇಧ : ಸಚಿವ ದಿನೇಶ್ ಗುಂಡೂರಾವ್

Published

on

ಸುದ್ದಿದಿನ, ಬೆಂಗಳೂರು : ಕೃತಕ ಬಣ್ಣ ಬಳಸಿದ ಕಾಟನ್ ಕ್ಯಾಂಡಿ ಮತ್ತು ಗೋಬಿ ಮಂಚೂರಿ ಮಾರಾಟವನ್ನು ತಕ್ಷಣದಿಂದ ಜಾರಿಗೆ ಬರುವಂತೆ ರಾಜ್ಯಾದ್ಯಂತ ನಿಷೇಧಿಸಲಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ. ಆದಾಗ್ಯೂ, ಬಣ್ಣ ಹಾಗೂ ರಾಸಾಯನಿಕ ಹಾಕದೇ ಇರುವ ಈ ತಿನಿಸುಗಳ ಮಾರಾಟಕ್ಕೆ ನಿರ್ಬಂಧ ಇಲ್ಲ ಎಂದು ಹೇಳಿದ್ದಾರೆ.

ಬೆಂಗಳೂರಿನಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಕ್ಕಳು ಸೇರಿದಂತೆ ಎಲ್ಲ ವಯೋಮಾನದವರಿಗೂ ಅಚ್ಚುಮೆಚ್ಚಾದ ಈ ಎರಡು ತಿನಿಸುಗಳನ್ನು ಆಕರ್ಷಕವಾಗಿ ಕಾಣುವಂತೆ ಮಾಡಲು ಬಳಸುವ ಕೃತಕ ಬಣ್ಣಗಳಲ್ಲಿ ಅಪಾಯಕಾರಿ ರಾಸಾಯನಿಕಗಳು ಇರುವುದು ಪರೀಕ್ಷೆಗಳಿಂದ ದೃಢಪಟ್ಟಿದೆ ಎಂದರು. ರಾಜ್ಯದ ಹಲವೆಡೆ ಬೀದಿಬದಿಯ ಗಾಡಿಗಳು, ಹೋಟೆಲ್‌ಗಳಲ್ಲಿ ತಯಾರಿಸಿದ ಗೋಬಿ ಮಂಚೂರಿ ತಿನಿಸಿನ 171ಮಾದರಿಗಳನ್ನು ಪರೀಕ್ಷಿಸಲಾಗಿದೆ. ಈ ಪೈಕಿ 107ಮಾದರಿಗಳಲ್ಲಿ ಅಸುರಕ್ಷಿತ ರಾಸಾಯನಿಕಗಳು ಪತ್ತೆಯಾಗಿರುವುದು ಆತಂಕಕಾರಿಯಾಗಿದೆ ಎಂದರು.

ಕೃತಕ ಬಣ್ಣಗಳಲ್ಲಿರುವ ರೋಡೊಮೈನ್-ಬಿ ಮತ್ತು ಟಾಟ್ರಝೀನ್ ರಾಸಾಯನಿಕಗಳು ಕ್ಯಾನ್ಸರ್ ರೋಗಕ್ಕೆ ಕಾರಣವಾಗಬಹುದು ಎನ್ನುವ ಅಂಶ ತಿಳಿದುಬಂದಿದೆ. ಬಣ್ಣ ಹಾಕಿದ ಗೋಬಿಮಂಚೂರಿ ಮತ್ತು ಕಾಟನ್‌ಕ್ಯಾಂಡಿಗಳನ್ನು ಮಾರಾಟ ಮಾಡುವವರ ಮೇಲೆ ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಾಗುವುದು. ಏಳು ವರ್ಷದರೆಗೆ ಜೈಲು ಶಿಕ್ಷೆ, 10 ಲಕ್ಷ ರೂಪಾಯಿವರೆಗೆ ದಂಡ ಅಥವಾ ಜೀವಾವಧಿ ಶಿಕ್ಷೆಗೂ ಅವಕಾಶವಿದೆ ಎಂದು ಸಚಿವರು ಎಚ್ಚರಿಕೆ ನೀಡಿದರು.

ಹೇಳಿಕೆ


  • ಬಣ್ಣ ಹಾಕಿರುವ ಈ ಎರಡು ತಿನಿಸುಗಳನ್ನು ಸೇವಿಸಬಾರದು ಎಂದು ಸಾರ್ವಜನಿಕರಿಗೂ ಎಚ್ಚರಿಕೆ ನೀಡಲಾಗಿದೆ. ಸಾರ್ವಜನಿಕರ ಆರೋಗ್ಯ ರಕ್ಷಣೆ ದೃಷ್ಟಿಯಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಇದಲ್ಲದೇ, ಕಬಾಬ್, ಪಾನಿಪೂರಿ ಮೊದಲಾದ ತಿನಿಸುಗಳಲ್ಲೂ ಕೃತಕ ಬಣ್ಣಗಳ ಬಳಕೆ ಆಗುತ್ತಿದೆಯೇ ಎಂದು ಪರಿಶೀಲಿಸಲಾಗುತ್ತಿದೆ.

            | ಸಚಿವ ದಿನೇಶ್ ಗುಂಡೂರಾವ್


ಟ್ವೀಟ್

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ಲೈಫ್ ಸ್ಟೈಲ್

ನೀಲಿ ಪರ್ವತಗಳ ನಾಡಿನಲ್ಲಿ ಕೀಚಕರ ಹಾವಳಿ

Published

on

Unidentified miscreants torch two houses belonging to a particular community to retaliate the killing of nine civilians by Kukis in Manipur. (Photo: PTI)
  • ಡಾ. ಸಿದ್ದಯ್ಯ ರೆಡ್ಡಿಹಳ್ಳಿ

ಗತ್ತಿನ ಪ್ರತಿ ಜನಾಂಗವು ತನ್ನ ಪೂರ್ವಜರ ಪ್ರತಿಭೆ ಹಾಗೂ ಹಿರಿಮೆಯನ್ನು ಹೇಳಿಕೊಳ್ಳಲು ಕಾತರಿಸುತ್ತದೆ. ಅದರಂತೆಯೇ ನಮ್ಮ ಭರತ ಖಂಡದ ಈಶಾನ್ಯ ರಾಜ್ಯವಾದ ಮಣಿಪುರದಲ್ಲಿ ವಾಸಿಸುವ ಮಣಿಪುರಿ ಜನರು ಕ್ರಿಸ್ತಪೂರ್ವದಲ್ಲಿಯೇ ಅತ್ಯಾಧುನಿಕ ಸಾಮ್ರಾಜ್ಯವನ್ನು ಕಟ್ಟಿದ್ದರಂತೆ ಎಂದು ಹೇಳಿಕೊಳ್ಳುತ್ತಾರೆ.

ನಿಜ ಮಣಿಪುರಿಗಳು ಬೆಟ್ಟಗಳ ನಡುವೆ ಬೆಚ್ಚನೆಯ ಜೀವನವನ್ನು ಸಾಗಿಸಿದವರು. ಆದರೆ ಅಲ್ಲಿ ಕೊಳ್ಳಿ ಇಡುವ ಕೆಲಸಗಳು ಬಹಳ ಹಿಂದಿನಿಂದಲೇ ಪ್ರಾರಂಭವಾಗಿರುವುದು ತಿಳಿದುಬರುತ್ತದೆ. ವಾಸ್ತವದಲ್ಲಿ ಹಲವು ಬುಡಕಟ್ಟುಗಳ ಸಂಮಿಶ್ರಣವೇ ಮಣಿಪುರವಾಗಿದೆ. ಆದರೆ ಮಣಿಪುರಿಗಳು ಮಾತ್ರ ಈ ನೆಲದ ಮೂಲ ನಿವಾಸಿಗಳು, ಅವರಿಗೆ ಮಾತ್ರ ಸಕಲ ಸೌಕರ್ಯಗಳು ಸಿಗಬೇಕು, ಉಳಿದವರು ರಾಜ್ಯ ಬಿಡಬೇಕು ಎಂದು ಉಯಿಲ್ಲೆಬ್ಬಿಸುತ್ತಿರುವವರು ಯಾರು? ಪ್ರತಿಯೊಂದು ಬುಡಕಟ್ಟು ಜನಾಂಗಕ್ಕೆ ಇರುವಂತೆ ಹೇರಳವಾದ ಜಾನಪದ ಕಥೆ, ಪುರಾಣ ಮತ್ತು ದಂತಕಥೆಗಳ ಸಂಪತ್ತು ಇಲ್ಲಿನ ಬುಡಕಟ್ಟು ಜನಾಂಗಗಳಿಗೂ ಇದೆ.

ಮಣಿಪುರದ ರಾಜಧಾನಿ ಇಂಫಾಲ್‌ನಲ್ಲಿ ವಾಸಿಸುತ್ತಿದ್ದ ಜನರನ್ನು ಮಿತೇಯಿ ಅಥವಾ ಮೈತೇಯಿ ಎಂದು ಕರೆಯಲಾಗುತ್ತಿತ್ತು. ಸ್ವಾತಂತ್ರ್ಯಪೂರ್ವದಲ್ಲಿ ಮಣಿಪುರವು ಬಾಂಗ್ಲಾದ ಗುಡ್ಡುಗಾಡು ಜಿಲ್ಲೆಗಳಲ್ಲಿ ಒಂದಾಗಿತ್ತು. ಭಾರತ ಸ್ವಾತಂತ್ರ್ಯಗೊಂಡು ಎರಡು ವರ್ಷ ಎರಡು ತಿಂಗಳು ಕಳೆದ ನಂತರ ಅಂದರೆ ಅಕ್ಟೋಬರ್ 15, 1949ರಂದು ಭಾರತದೊಂದಿಗೆ ಏಕೀಕೃತವಾಯಿತು.

ಮಣಿಪುರದಲ್ಲಿ ಅಂತರ-ಜನಾಂಗೀಯ ಹಿಂಸಾಚಾರವು ಇದೇ ಮೊದಲೇನಲ್ಲ, ಇದಕ್ಕೆ ಸುದೀರ್ಘವಾದ ಇತಿಹಾಸವಿದೆ. ಮಣಿಪುರಿಗಳ ಅತಿರೇಕ ಎಲ್ಲಿಯವರೆಗೆ ಹೋಗಿತ್ತು ಎಂದರೆ 1964ರಲ್ಲಿ ಭಾರತದಿಂದ ಬಿಡುಗಡೆ ಹೊಂದಿ, ಹೊಸ ದೇಶವನ್ನು ಸೃಷ್ಟಿಸಿಕೊಳ್ಳಬೇಕು ಎಂದು ದಂಗೆಯನ್ನು ಎಬ್ಬಿಸಲಾಗಿತ್ತು. ಇದರಲ್ಲಿ ಹಲವಾರು ಗುಂಪುಗಳು ಕೂಡಿಕೊಂಡಿದ್ದವು. ಅವರಿಗೆ ಅವರದೇ ಆದ ಗುರಿಗಳು ಇದ್ದುದರಿಂದ ಈ ದಂಗೆ ವಿಫಲವಾಯಿತು.

ಚೀನಾ ದೇಶದ ಕುಮ್ಮಕ್ಕಿನಿಂದಾಗಿ ‘ರೆವಲ್ಯೂಷನರಿ ಪಾರ್ಟಿ ಆಫ್ ಕಾಂಗ್ಲೀಪಾಕ್’ ಮತ್ತು ‘ಪೀಪಲ್ಸ್ ಲಿಬರೇಶನ್ ಆರ್ಮಿಗಳು’ ಹುಟ್ಟಿಕೊಂಡವು. ಇವರು ಶಸ್ತ್ರಾಸ್ತ್ರ ತರಬೇತಿಯನ್ನು ಹೊಂದಿ, ಬ್ಯಾಂಕ್ ದರೋಡೆಗಳನ್ನು ಮಾಡುವುದು, ಪೊಲೀಸ್ ಅಧಿಕಾರಿಗಳ ಮೇಲೆ ಮತ್ತು ಸರ್ಕಾರಿ ಕಟ್ಟಡಗಳ ಮೇಲೆ ದಾಳಿ ಮಾಡುವುದು ಇಂತಹ ಕೃತ್ಯಗಳನ್ನು ಮಾಡತೊಡಗಿದರು. 1980 ರಿಂದ 2004ರವರೆಗೂ ಭಾರತ ಸರ್ಕಾರ ಮಣಿಪುರವನ್ನು ಪ್ರಕ್ಷÄಬ್ದ ಪ್ರದೇಶ ಎಂದು ಉಲ್ಲೇಖಿಸಿತ್ತು.

ಈ ಸಂದರ್ಭದಲ್ಲಿ ‘ಸಶಸ್ತ್ರ ಪಡೆಗಳ ವಿಶೇಷ ಅಧಿಕಾರ ಕಾಯಿದೆ’ಯನ್ನು ಜಾರಿಗೆ ತರಲಾಯಿತು. ಈ ಕಾಯಿದೆಯ ಪ್ರಕಾರ ಖಾಸಗಿ ಅಥವಾ ಸಾರ್ವಜನಿಕ ಸ್ಥಳಗಳಲ್ಲಿ ಕೆಟ್ಟವರ್ತನೆಗಳನ್ನು ಮಾಡುತ್ತಿದ್ದರೆ, ಯಾವುದೇ ವಾರಂಟ್‌ಗಳಿಲ್ಲದೆ ಬಂಧಿಸಬಹುದಾಗಿತ್ತು. ಕಾನೂನುಗಳನ್ನು ಉಲ್ಲಂಘಿಸುವ, ಶಸ್ತ್ರಾಸ್ತ್ರಗಳನ್ನು ಹೊಂದಿರುವವರನ್ನು ಅಥವಾ ದೊಡ್ಡ ದೊಡ್ಡ ಗುಂಪುಗಳಲ್ಲಿ ಸೇರಿದ್ದವರನ್ನು ಗುಂಡಿಕ್ಕಿ ಕೊಲ್ಲುವ ಅವಕಾಶವನ್ನು ಮಿಲಿಟರಿಗೆ ಕೊಡಲಾಗಿತ್ತು. ಮಿಲಿಟರಿಯ ಪರವಾಗಿರುವ ಈ ಕಾನೂನು ಅನಿಯಂತ್ರಿತ ಹತ್ಯೆಗಳು, ಚಿತ್ರಹಿಂಸೆ, ಕ್ರೂರ ಅಮಾನವೀಯತೆ, ಅಪಹರಣದಂತಹ ಮಾನವ ಹಕ್ಕುಗಳ ಉಲ್ಲಂಘನೆಗೆ ಕಾರಣವಾಯಿತು.

ಈ ಮಾನವ ವಿರೋದಿ ಮಿಲಿಟರಿ ಕಾನೂನಿನ ವಿರುದ್ಧ ಹಲವಾರು ಪ್ರತಿಭಟನೆಗಳು, ಹೋರಾಟಗಳು ಜರುಗಿದವು. ಇರೋಮ್ ಶರ್ಮಿಳಾ ಚಾನು ಎಂಬ ದಿಟ್ಟ ಮಹಿಳೆ ದೀರ್ಘಾವಧಿಯ ಉಪವಾಸ ಸತ್ಯಾಗ್ರಹವನ್ನು ಮಾಡಿದ್ದಳು. ಆದರೂ 2004ರಲ್ಲಿ ಸ್ಥಳೀಯ ಮಹಿಳೆಯರ ಮೇಲೆ ಹಿಂಸಾತ್ಮಕ ದಾಳಿಯನ್ನು ನಡೆಸಲಾಯಿತು. ಇದಕ್ಕೆ ಪ್ರತಿರೋಧವಾಗಿ ಪ್ರತಿಭಟನೆಗಳು ತೀವ್ರಮಟ್ಟಕ್ಕೆ ತಲುಪಿದಾಗ ಸರ್ಕಾರವು ಮಣಿಪುರದಲ್ಲಿದ್ದ ಗೊಂದಲದ ಸ್ಥಿತಿಯನ್ನು ತೆಗೆದುಹಾಕಿತು.

ಮಣಿಪುರವು ನೀಲಿ ಪರ್ವತಗಳಿಂದ ಸುತ್ತುವರೆದಿರುವ ನಾಡಾಗಿದೆ. ಈ ಪರ್ವತ ಶ್ರೇಣಿಗಳು ತಣ್ಣನೆಯ ಗಾಳಿಯನ್ನು ಮಣಿಪುರಿಗಳಿಗೆ ತಲುಪದಂತೆ ತಡೆಯುತ್ತವೆ. ಆದರೆ ಮಣಿಪುರಿಗಳಲ್ಲಿಯೇ ಹೊತ್ತಿಕೊಂಡಿರುವ ಬೆಂಕಿಯನ್ನು ನಂದಿಸಲು ಅವುಗಳಿಗೆ ಸಾಧ್ಯವೇ!? ಅವುಗಳು ಚಂಡಮಾರುತದ ಬಿರುಗಾಳಿಗಳನ್ನು ತಡೆಯಬಹುದು, ಆದರೆ ಅವರಲ್ಲಿರುವ ಮೌಢ್ಯವನ್ನು ತೊಡೆದುಹಾಕಲು ಸಾಧ್ಯವೇ?!
ಮಣಿಪುರ ರಾಜ್ಯವು ಉತ್ತರಕ್ಕೆ ನಾಗಾಲ್ಯಾಂಡ್, ದಕ್ಷಿಣಕ್ಕೆ ಮಿಜೋರಾಂ, ಪಶ್ಚಿಮಕ್ಕೆ ಅಸ್ಸಾಂ ಮತ್ತು ಪೂರ್ವಕ್ಕೆ ಮಯನ್ಮಾರ್ ದೇಶದ ಗಡಿಯನ್ನು ಹೊಂದಿದೆ.

ಮಣಿಪುರದಲ್ಲಿ ಮಳೆಗೆ, ನೀರಿಗೆ ಕೊರತೆಯಿಲ್ಲ. ಇದರ ಪಶ್ಚಿಮಕ್ಕೆ ಬರಾಕ್ ನದಿಯ ಜಲಾನಯನ ಪ್ರದೇಶ, ಪೂರ್ವದಲ್ಲಿ ಯು ನದಿಯ ಜಲಾನಯನ ಪ್ರದೇಶ, ಉತ್ತರದಲ್ಲಿ ಲಾನ್ಯೆ ನದಿಯ ಜಲಾನಯನ ಪ್ರದೇಶ, ಮಧ್ಯದಲ್ಲಿ ಮಣಿಪುರ ನದಿಯ ಜಲಾನಯನ ಪ್ರದೇಶವನ್ನು ಹೊಂದಿ ಸಮೃದ್ಧವಾಗಿರುವಂತೆ, ಅಲ್ಲಿನ ಮಹಿಳೆಯರು ಧಾರಾಕಾರವಾಗಿ ಕಣ್ಣೀರನ್ನು ಸುರಿಸುತ್ತಿದ್ದಾರೆ. ಇಲ್ಲಿನ ಮಹಿಳೆಯರ ಕಣ್ಣೀರಿಗೆ ಮೊದಲನ್ನು ಗುರುತಿಸುವುದಕ್ಕೆ, ಕೊನೆಯನ್ನು ಗ್ರಹಿಸುವುದಕ್ಕೆ ಸಾಧ್ಯವಾಗುತ್ತಿಲ್ಲ.

ಮಣಿಪುರದ ಅತಿದೊಡ್ಡ ನದಿ ಬರಾಕ್. ಇದು ಇರಾಂಗ್, ಮಕು ಮತ್ತು ತುವೈ ಉಪನದಿಗಳನ್ನು ಹೊಂದಿ ಅಸ್ಸಾಂ ರಾಜ್ಯವನ್ನು ಪ್ರವೇಶಿಸುತ್ತದೆ. ಮಣಿಪುರ ನದಿಯ ಜಲಾನಯನ ಪ್ರದೇಶವು ಮಣಿಪುರ, ಇಂಫಾಲ್, ಇರಿಲ್, ನಂಬುಲ್, ಸೆಕ್ಮೆಂ, ಚಕ್ಪಿ, ತೌಬಲ್ ಮತ್ತು ಖುಗಾ ಎಂಬಂತಹ ಎಂಟು ನದಿಗಳನ್ನು ಹೊಂದಿದೆ. ಈ ಎಲ್ಲಾ ನದಿಗಳು ಸುತ್ತಮುತ್ತಲಿನ ಬೆಟ್ಟಗಳಿಂದಲೇ ಹುಟ್ಟಿಕೊಂಡಿವೆ. ಈ ನದಿಗಳ ಒಳಹರಿವಿನ ಮರ್ಮ ನಮ್ಮ ರಾಜಕಾರಣಿಗಳ ಮರ್ಮದಂತೆ ಯಾರಿಗೂ ತಿಳಿಯದಂತಹ ಕಗ್ಗಂಟಾಗಿದೆ. ನದಿಯು ತಣ್ಣಗಿದ್ದು, ಒಂದೇ ಭಾರಿ ಬೋರ್ಗರೆದು ತಣ್ಣಗಾಗುವಂತೆ ನಮ್ಮ ಪ್ರಧಾನಮಂತ್ರಿಗಳು ಮೂರು ತಿಂಗಳ ಕಾಲ ದಿವ್ಯ ಮೌನವಾಗಿದ್ದು, ಜನರ ನಿತ್ಯ ಜೀವನವು ಅಲ್ಲೋಲ-ಕಲ್ಲೋಲ ಆದಮೇಲೆ ತಣ್ಣಗೆ ಮಾತನಾಡಿದ್ದಾರೆ.

ಆದರೆ ಅಲ್ಲಿಗೆ ಹೋಗುವ ಧೈರ್ಯವನ್ನು ಮಾಡಿಲ್ಲ. ಚುನಾವಣೆ ಇದ್ದರೆ ಹತ್ತು-ಹದಿನೈದು ಬಾರಿ ರೋಡ್-ಶೋ ಮಾಡುವ ಇವರು ಕಷ್ಟದ ಕಾಲದಲ್ಲಿ ಆ ಕಡೆ ತಿರುಗಿಯು ನೋಡದೇ ಇರುವುದು ಭಾರತೀಯರು ಪಶ್ಚಾತ್ತಾಪಪಡುವಂತೆ ಮಾಡಿದೆ.
ಮಣಿಪುರವನ್ನು ಭೌತಿಕ ಲಕ್ಷಣಗಳಲ್ಲಿ ವಿಭಿನ್ನವಾಗಿರುವ ಎರಡು ವಿಭಿನ್ನ ಭೌತಿಕ ಪ್ರದೇಶಗಳಾಗಿ ನಿರೂಪಿಸಬಹುದು. ಒಂದು ಒರಟಾದ ಬೆಟ್ಟಗಳು, ಕಿರಿದಾದ ಕಣಿವೆಗಳ ಹೊರ ಪ್ರದೇಶ ಮತ್ತೊಂದು ಸಮತಟ್ಟಾದ ಬಯಲಿನ ಒಳ ಪ್ರದೇಶ. ಇಲ್ಲಿನ ಕಣಿವೆ ಪ್ರದೇಶವು ಸಮತಟ್ಟಾದ ಮೇಲ್ಮೈ ಮೇಲೆ ಏರುತ್ತಿರುವ ಬೆಟ್ಟಗಳು ಮತ್ತು ದಿಬ್ಬಗಳಿಂದ ಕೂಡಿದೆ.

ಇಲ್ಲಿನ ಲೋಕ್ಟಾಕ್ ಸರೋವರವು ಕೇಂದ್ರ ಬಯಲಿನಿಂದ ನಾಗಾಲ್ಯಾಂಡ್‌ನ ಗಡಿಯವರೆಗೂ ತನ್ನ ವಿಸ್ತಾರವನ್ನು ಹರಡಿಕೊಂಡಿದೆ. ಇಲ್ಲಿನ ಮಣ್ಣಿನ ಹೊದಿಕೆಗೂ ಗಂಡು-ಹೆಣ್ಣಿನ ಸಂಬಂಧಕ್ಕೂ ನಿಕಟವಾದ ಹೋಲಿಕೆ ಇರುವಂತೆ ಕಂಡುಬರುತ್ತದೆ. ಬೆಟ್ಟದ ಪ್ರದೇಶದಲ್ಲಿ ಕೆಂಪು ಫೆರುಜಿನಸ್ ಮಣ್ಣು ಮತ್ತು ಕಣಿವೆಯಲ್ಲಿ ಮೆಕ್ಕಲು ಮಣ್ಣು ಇದೆ. ಕಣಿವೆಯ ಮಣ್ಣು ಇಲ್ಲಿನ ಗಂಡಿನ ರೀತಿಯಲ್ಲಿ ಕಠಿಣವಾಗಿದ್ದರೆ, ಕಡಿದಾದ ಇಳಿಜಾರುಗಳಲ್ಲಿರುವ ಮಣ್ಣು ಹೆಣ್ಣಿನಂತೆ ಹೆಚ್ಚಿನ ಸವೆತಕ್ಕೆ ಒಳಗಾಗಿದೆ, ಒಳಗಾಗುತ್ತಿದೆ. ಇದರ ಪರಿಣಾಮವಾಗಿ ಬಂಜರು ಬಂಡೆಗಳ ಇಳಿಜಾರುಗಳು ಸೃಷ್ಟಿಯಾಗುವಂತೆ ಅಲ್ಲಿನ ಪುರುಷರ ಮನಸ್ಸುಗಳು ಬಂಡೆಯಂತೆ ಆಗುತ್ತಿರುವುದು ಖೇದಕರವಾದ ಸಂಗತಿಯಾಗಿದೆ.

ಬೆಟ್ಟದ ತಪ್ಪಲಿನಲ್ಲಿ ರತ್ನಗಂಬಳಿಯನ್ನು ಹಾಸಿಹೊದಿಸಿರುವಂತೆ ಕಾಣುವ ಫ್ಲೋರಾ ಹೂವುಗಳು ಅಲ್ಲಿನ ಬುಡಕಟ್ಟು ಮಹಿಳೆಯರ ಸೌಂದರ್ಯವನ್ನು ಬಿತ್ತರಿಸಿದರೆ, ಬೆಟ್ಟಗಳು ಪುರುಷಾಂಕಾರದಂತೆ ಕಾಣುತ್ತವೆ. ಇಲ್ಲಿ ಏನಿಲ್ಲ ಹೇಳಿ, ನೈಸರ್ಗಿಕವಾದ ಸಸ್ಯವರ್ಗವಿದೆ. ನಾಲ್ಕು ರೀತಿಯ ವಿಶಾಲವಾಗಿ ಹರಡಿರುವ ಉಷ್ಣವಲಯದ ಅರೆ-ನಿತ್ಯಹರಿದ್ವರ್ಣ, ಒಣ ಸಮಶೀತೋಷ್ಣ ಅರಣ್ಯ, ಉಪ-ಉಷ್ಣವಲಯದ ಪೈನ್ ಕಾಡುಗಳು ಮತ್ತು ಉಷ್ಣವಲಯದ ತೇವಾಂಶವುಳ್ಳ ಅರಣ್ಯಗಳಿವೆ. ತೇಗ, ಪೈನ್, ಓಕ್, ಯುನಿಂಗ್ದೌ, ಲಿಹಾವೊ, ಬಿದಿರಿನ ಮರಗಳಿವೆ. ತಮ್ಮ ಕಷ್ಟಗಳ ನಡುವೆಯೂ ರಬ್ಬರ್, ಟೀ, ಕಾಫಿ, ಕಿತ್ತಳೆ, ಏಲಕ್ಕಿ ಬೆಳೆಯುತ್ತಾರೆ. ಆದರೆ ಅವರು ಹೆಚ್ಚು ಬೆಳೆಯುವ ಮತ್ತು ಇಷ್ಟಪಡುವ ಅಕ್ಕಿಯಂತೆ ಅಲ್ಲಿನ ಪುರುಷರ ಮನಸ್ಸುಗಳು ಬೇಗನೇ ಹಾಳಾಗುತ್ತಿರುವುದು ಜಾತಿ, ಧರ್ಮಗಳೆಂಬ ಕೀಟಗಳಿಂದ ಎಂಬುದನ್ನು ಅವರು ತಿಳಿಯದಿರುವುದು ದುರದೃಷ್ಟಕರ.

ಮಣಿಪುರ ಮತ್ತು ನಾಗಾಲ್ಯಾಂಡ್‌ಗಳ ಗಡಿಗಳ ನಡುವೆ ಇರುವ ಝುಕೊ ಎಂಬ ಕಣಿವೆಯು ಸಮಶೀತೋಷ್ಣ ಹವಾಮಾನವನ್ನು ಹೊಂದಿರುವಂತೆ, ಅಲ್ಲಿನ ಜನರಿಗೆ ಸಮಚಿತ್ತತೆಯನ್ನು ನೀಡಿದ್ದರೆ ಚೆನ್ನಾಗಿರುತ್ತಿತ್ತು. ಭಾರತದ ಈಶಾನ್ಯ ಮೂಲೆಯು ಸಾಮಾನ್ಯವಾಗಿ ಸೌಹಾರ್ದಯುತವಾದ ಹವಾಮಾನವನ್ನು ಹೊಂದಿದೆ. ಆದರೆ ಅಲ್ಲಿನ ಜನರು ಸೌಹಾರ್ದಯುತವಾದ ಮನೋಭಾವನೆಯನ್ನು ಹೊಂದಿಲ್ಲ. ಅಲ್ಲಿನ ವಾತಾವರಣದಂತೆ ಚಳಿಗಾಲದಲ್ಲಿ ಚಳಿ ಹೆಚ್ಚಾಗಿರುವಂತೆ, ಬೇಸಿಗೆಯಲ್ಲಿ ಬಿಸಿಲು ಗರಿಷ್ಠ ಮಟ್ಟಕ್ಕೆ ಹೋಗುವಂತೆ ಅಲ್ಲಿನ ಜನರು ಆವೇಶಕ್ಕೊಳಗಾಗುತ್ತಾರೆ.
ಇಂಫಾಲದ ಮೈತೇಯಿ ಜನರು ವಾರ್ಷಿಕ ಸರಾಸರಿ 933 ಮಿಲಿಮೀಟರ್ ಮಳೆಯನ್ನು ಪಡೆಯುತ್ತಾರೆ. ಆದರೂ ಕೂಡ ತಮ್ಮದೇ ನೆಲದಲ್ಲಿರುವ ಕುಕಿ ಜನಾಂಗದ ಮಹಿಳೆಯರು ಕಣ್ಣೀರು ಸುರಿಸುವಂತೆ ನಡೆದುಕೊಳ್ಳುತ್ತಾರೆ.

ನೈರುತ್ಯ ಮಾನ್ಸೂನ್ ಮಾರುತಗಳು ಬಂಗಾಳಕೊಲ್ಲಿಯಿAದ ತೇವಾಂಶವನ್ನು ಎತ್ತಿಕೊಂಡು ಪೂರ್ವ ಹಿಮಾಲಯ ಶ್ರೇಣಿಗಳ ಕಡೆಗೆ ಹೋಗುವಾಗ ಈ ಪ್ರದೇಶದಲ್ಲಿ ಮಳೆಯಾಗುವಂತೆ ಪ್ರಕೃತಿಯೇ ನೋಡಿಕೊಂಡರೂ ಮಹಿಳೆಯರ ಕಣ್ಣೀರು ಮಾತ್ರ ಧಾರಾಕಾರವಾಗಿ ಹರಿಯುವಂತೆ ತಮ್ಮ ಸ್ವಾರ್ಥಕ್ಕಾಗಿ ರಾಜಕಾರಣಿಗಳು ನೋಡಿಕೊಳ್ಳುತ್ತಿದ್ದಾರೆ.

ಇತ್ತೀಚೆಗೆ ಮಣಿಪುರದಲ್ಲಿ ಹವಾಮಾನದಲ್ಲಿ ಬದಲಾವಣೆ ಹೆಚ್ಚಾಗುತ್ತಿದೆ. ಉದಾಹರಣೆಗೆ ಮಳೆ ಮತ್ತು ತಾಪಮಾನದಲ್ಲಿ ತೀವ್ರ ಬದಲಾವಣೆಗಳು ಹೆಚ್ಚಾಗುತ್ತಿವೆ. ಆದರೆ ಅಲ್ಲಿನ ಜನಾಂಗಗಳ ನಡುವಿನ ಬಾಂಧವ್ಯದ ಬದ್ಧತೆಗಳು ಏರುಪೇರಾಗುತ್ತಿರುವುದು ಸಾಕಷ್ಟು ಹಿಂದಿನಿAದಲೇ ನಡೆಯುತ್ತಿರುವುದು ಮನುಷ್ಯ ಸಂಬಂಧಗಳ ನಡುವೆ ಬಿರುಕು ಮೂಡಿರುವುದರ ದ್ಯೋತಕವಾಗಿದೆ. ಕಣಿವೆ ಅಥವಾ ಬಯಲು ಪ್ರದೇಶಗಳಲ್ಲಿ ಮೈತೇಯಿ ಮಾತನಾಡುವ ಅಂದರೆ ಮಣಿಪುರಿ ಭಾಷಿಕರು ನೆಲೆಸಿದ್ದಾರೆ. ಬೆಟ್ಟಗಳಲ್ಲಿ ನಾಗಾಗಳು, ಕುಕಿಗಳು ಮೊದಲಾದ ಸಣ್ಣ ಬುಡಕಟ್ಟು ಜನರು ವಾಸಿಸುತ್ತಿದ್ದಾರೆ. ಇವರು ಬೆಟ್ಟಗಳ ಮೇಲ್ಮೈ ಮಣ್ಣಿನಂತೆ ಮೈತೇಯಿ ಜನರ ಹಾವಳಿಗೆ ಕೊಚ್ಚಿ ಹೋಗುತ್ತಿದ್ದಾರೆ. ಅಲ್ಲಿ ಮೈತೇಯಿ ಭಾಷೆಯು ಮಣಿಪುರಿ ಭಾಷೆಗೆ ಸಮಾನಾರ್ಥಕವಾಗಿ ಬಳಕೆಯಾಗುತ್ತಿರುವುದರಿಂದ ಇಲ್ಲಿನ ಬಹುಪಾಲು ಜನಸಂಖ್ಯೆ ಮೈತೇಯಿಯರೇ ಎಂದು ಕರೆಸಿಕೊಂಡಿದ್ದಾರೆ.

ಇವರು ಮಣಿಪುರದ ಮುಖ್ಯ ಜನಾಂಗ ಎಂಬುದೇನೋ ಸರಿ. ಆದರೆ ನಾಗಾ ಮತ್ತು ಕುಕಿ ಬುಡಕಟ್ಟು ಜನಾಂಗಗಳನ್ನು ಹಲವಾರು ಬುಡಕಟ್ಟು ಜನಾಂಗಗಳಾಗಿ ವಿಂಗಡಿಸಲಾಗಿದೆ. ಇವರೆಲ್ಲರೂ ಒಗ್ಗಟ್ಟಾಗಿದ್ದರೆ ನಮ್ಮ ಬೇಳೆ ಬೇಯ್ಯುವುದಿಲ್ಲ ಎಂಬ ಸಾಂಸ್ಕೃತಿಕ ರಾಜಕಾರಣವು ವ್ಯವಸ್ಥಿತವಾಗಿ ಬಹಳ ಹಿಂದಿನಿAದಲೇ ಇವರನ್ನು ಹೊಡೆದು ಹೊಡೆದು ಹಾಳುತ್ತಿದೆ.
ಮಣಿಪುರದಲ್ಲಿ ಮೇ 4ರಂದು ಜರುಗಿದ ಇಬ್ಬರು ಮಹಿಳೆಯರ ಸಾಮೂಹಿಕ ಅತ್ಯಾಚಾರ ಮತ್ತು ಬೆತ್ತಲೆ ಮೆರವಣಿಗೆಯು ಜುಲೈ 20ರಂದು ಹೊರ ಜಗತ್ತಿಗೆ ತಿಳಿಯಿತು. ಈ ಘಟನೆಯು ಪ್ರಪಂಚದ ಜನರನ್ನು ತಲ್ಲಣಗೊಳಿಸಿತು.

ಇಡೀ ಜಗತ್ತೇ ಈ ಕೃತ್ಯವನ್ನು ವಿರೋಧಿಸಿದರೂ ಕೂಡ, ಒಟ್ಟು ದೇಶವನ್ನೇ ತನ್ನ ಕುಟುಂಬ ಎಂದು ಕರೆದುಕೊಳ್ಳುವ ನಮ್ಮ ಪ್ರಧಾನಿಗಳು ಬೆಂಕಿ ಹೊತ್ತಿಕೊಂಡ ಮೂರು ತಿಂಗಳು ದಿವ್ಯ ಮೌನದಿಂದ ಇದ್ದರು ಎಂಬುದನ್ನು ಜಗತ್ತು ಮರೆಯುತ್ತದೆಯೇ? 140 ಕೋಟಿ ಜನರು ನನ್ನ ಕುಟುಂಬಸ್ಥರೇ ಎಂದು ಹೇಳಿಕೊಳ್ಳುವ ಪ್ರಧಾನಿಗಳು ಅದರಲ್ಲಿ ಮಹಿಳೆಯರೂ ಇದ್ದಾರೆ ಎಂಬುದನ್ನು ಮರೆತಿದ್ದಾರೆಯೇ!? ಒಟ್ಟಾರೆ ನಮ್ಮ ಪ್ರಧಾನಿಗಳ ಮೌನ, ಮೈತೇಯಿ ಮತಾಂಧರ ಆರ್ಭಟ ಕುಕಿ ಜನಾಂಗದ ಮಹಿಳೆಯರ ಬದುಕನ್ನು ಮೂರಾಬಟ್ಟೆ ಮಾಡಿರುವುದಂತೂ ಖಚಿತ.

(ಡಾ. ಸಿದ್ದಯ್ಯ ರೆಡ್ಡಿಹಳ್ಳಿ, 9449899520)

ಸುದ್ದಿದಿನ.ಕಾಂ|ವಾಟ್ಸಾಪ್|9980346243

 

Continue Reading

Trending