ಲೈಫ್ ಸ್ಟೈಲ್
ಡಾಕ್ಟ್ರೇ… ಸೈಡ್ ಇಫೆಕ್ಟ್ ಇಲ್ಲದ ಔಷಧಿ ಬರ್ದು ಕೊಡಿ..!
- ಡಾ: ಎನ್.ಬಿ.ಶ್ರೀಧರ
“ಡಾಕ್ಟ್ರೇ… ದನಕ್ಕೆ ಸೈಡ್ ಎಫ಼ೆಕ್ಟ್ ಇರದ ಮೆಡಿಸಿನ್ ಬರ್ದು ಕೊಡಿ. ಅದಕ್ಕೆ ಹೀಟಾಗುತ್ತೆ… ಬೇಡವೇ ಬೇಡ” ಇದು ನಮ್ಮ ಗೋಪಾಲಕರೊಬ್ಬರ ವಿನಂತಿ.
“ನಮ್ಮನೇ ದನಕ್ಕೆ ಯಾವುದೂ ಇಂಗ್ಲಿಷ್ ಔಷಧೀನೇ ಕೊಡಿಸಲ್ಲ. ಎಲ್ಲಾನೂ ನೈಸರ್ಗಿಕ.. ಯಾವುದೇ ಸೈಡ್ ಇಫ಼ೆಕ್ಟ್ ಇಲ್ವಂತೆ.
ದನಾ ಕಟ್ಲೇ ಇಲ್ಲ. ಎಲ್ಲಾ ಔಷಧೀನೂ ಮಾಡಿಸ್ದೆ… ಏನೂ ಪ್ರಯೋಜನಾ ಆಗ್ಲೇ ಇಲ್ಲ. ಹಳ್ಳಿ ಔಷಧಿ ಮಾಡಿಸಿದೆ. ಈಗ ನೋಡಿ ಕಟ್ಬಿಟ್ಟಿದೆ.
“ಈ ಇಂಗ್ಲಿಷ್ ಮೆಡಿಸಿನ್ ಬಿಟ್ಬಿಟ್ಟೆ.. ಭಾರಿ ವಿಷ ಅಂತೆ ಕಣ್ರೀ.. ಈ ಹಳ್ಳಿ ಔಷಧೀನೆ ಸೈ.. ಒಂಚೂರು ಸೈಡ್ ಇಫ಼ೇಕ್ಟ್ ಇಲ್ಲವಂತೆ.. ಅದನ್ನೇ ದನಕ್ಕೆ ಹಾಕೋದು ಅಂತ ಅಂದ್ಕಂಡಿದ್ದೀನಿ”..ನೋಡ್ಬೇಕು” ಇದು ಮತ್ತೊಬ್ಬರ ಅಂಬೋಣ.
“ಅಯ್ಯೋ.. ಈ ಇಂಗ್ಲಿಷ್ ಆಸ್ಪತ್ರೆಗಳೇ ಇಷ್ಟು.. ಅದೂ ಇದೂ ಟೆಸ್ಟ್ ಅಂತ ದುಡ್ಡಿಗಾಗಿ ಮಾಡಿಸ್ತಾರೆ.. ಎಲ್ಲಾ ದುಡ್ಡು ಸುಲಿಯುವ ಕೇಂದ್ರಗಳು ಕಣ್ರೀ… ಇದು ಮತ್ತೊಬ್ಬರ ಹೇಳಿಕೆ.
“ನಾನೆಂತೂ ಇಂಗ್ಲಿಷ್ ಔಷಧಿ ತಗೊಳ್ಳೋದೇ ಇಲ್ಲ. ಹಳ್ಳಿ ಔಷಧೀನೇ ತಗಳ್ಳೋದು.. ಇಂಗ್ಲಿಷ್ ಔಷಧಿ ಒಂದು ದೊಡ್ಡ ದಂಧೆ.. ಡಾಕ್ಟರುಗಳೆಲ್ಲಾ ಮಾಡೋದು ಬ್ಯುಸಿನೆಸ್”…ಇದು ಇನ್ನೊಬ್ಬರ ಅನಿಸಿಕೆ.
“ದಿನಕ್ಕೆ 4-5 ಲೀಟರ್ ನೀರು ಕುಡಿದರೆ ಸಾಕು. ಯಾವ ಕಾಯಿಲೆನೂ ಬರಲ್ಲ. ಇಂಗ್ಲಿಷ್ ಮೆಡಿಸಿನ್ ತಗೊಳ್ಳೋದೇ ಬೇಡ” ಮತ್ತೋರ್ವರ ಅಭಿಪ್ರಾಯ.
ಇಂಗ್ಲಿಷ್ ಔಷಧಿ ಒಳ್ಳೇದಲ್ಲ. ಹೋದ ತಕ್ಷಣ ಆಂಟಿಬಯೋಟಿಕ್ ಬರ್ದು ಕೊಡ್ತಾರೆ.. ಇದ್ರಿಂದ ಹೀಟು..ಸಿಕ್ಕಾಪಟ್ಟೆ ಸೈಡ್ ಎಫೆಕ್ಟ್..ಅದಕ್ಕೆ ಹಳ್ಳಿ ಔಷಧ ತಗಳ್ತಿದ್ದೀನಿ..
ಹೀಗೆ ಔಷಧಗಳ ಬಗ್ಗೆ ವೈರುಧ್ಯಗಳ ಪಟ್ಟೀಯೇ ಬೆಳೆಯುತ್ತಾ ಹೋಗುತ್ತದೆ. ಒಂದರ್ಥದಲ್ಲಿ ಹೇಳಬೇಕೆಂದರೆ ಆಂಗ್ಲ ಅಥವಾ ಪಾಶ್ಚ್ಯಾತ್ಯ ಅಥವಾ ಆಧುನಿಕ ಔಷಧಿಗಳ ಬಗ್ಗೆ ಜನರಿಗೆ ಅಸಹನೆ ಬೆಳೆಯುತ್ತಲೇ ಇದೆ. ಇದರ ಬಗ್ಗೆ ಸ್ವಲ್ಪ ಬೆಳಕು ಚೆಲ್ಲೋಣವೇ?
ಒಂದು ಕಾಯಿಲೆಯ ಬಗ್ಗೆ ಔಷಧಿಯನ್ನು ಕಂಡು ಹಿಡಿಯಲು ಸಹಸ್ರಾರು ವಿಜ್ಞಾನಿಗಳ ಮಾನವ ಘಂಟೆಗಳ ಪರಿಶ್ರಮ ಇರಲೇ ಬೇಕು. ಕಾಯಿಲೆ ಅಂದ ಮೇಲೆ ಅದಕ್ಕೊಂದು ಕಾರಣ ಇರಬೇಕು.ಆ ಕಾರಣ ಕಂಡು ಹಿಡಿಯಲೂ ಸಹ ಪ್ರಯತ್ನ ಬೇಕು. ಅದಾದ ನಂತರ ಅದಕ್ಕೊಂದು ಸೂಕ್ತ ಔಷಧ ಕಂಡು ಹಿಡಿಯಬೇಕು. ಅದು ಸುಲಭವೇ? ಖಂಡಿತಾ ಅಲ್ಲ.
ಹೊಸದೊಂದು ಔಷಧಿ ಕಂಡು ಹಿಡಿಯಬೇಕಾದರೆ ಲಕ್ಷಗಟ್ಟಲೇ ರಾಸಾಯನಿಕಗಳ ವಿಶ್ಲೇಷಣೆ ನಡೆಸಬೇಕು. ಈ ಸಹಸ್ರ ಸಂಖ್ಯೆಯ ರಾಸಾಯನಿಕಗಳಲ್ಲಿ ಕೇವಲ 100-200 ಮಾತ್ರ ಪರಿಣಾಮಕಾರಿಯಾಗಿ ಹೊರಹೊಮ್ಮುತ್ತವೆ. ಈ ಪ್ರಕ್ರಿಯೆಗೆ ಸುಮಾರು 3-4 ವರ್ಷ ಬೇಕು. ಇದಕ್ಕೆ ಸಾಮಾನ್ಯವಾಗಿ 10-15 ಬಿಲಿಯ ಡಾಲರುಗಳ ವೆಚ್ಚವಾಗುತ್ತದೆ. ಔಷಧದ ಕಣ ಕಂಡು ಹಿಡಿಯಬೇಕಾದರೆ ಅದಕ್ಕೆ ಅತ್ಯುತ್ತಮ ಪರಿಣಾಮ ಮತ್ತು ಅತೀ ಕಡಿಮೆ ಅಡ್ಡ ಪರಿಣಾಮ ವಿರಬೇಕೆಂಬುದು ಒಂದು ಕಠಿಣ ನಿಯಮ.
ಅದಕ್ಕೆಂದೇ ಇವುಗಳನ್ನು ಮೊದಲು ಇಲಿಗಳ ಮೇಲೆ ಪ್ರಯೋಗಿಸಬೇಕಾಗುತ್ತದೆ. ಏಕೆಂದರೆ ಇವುಗಳನ್ನು ಮನುಷ್ಯರ ಮೇಲೆ ಪ್ರಯೋಗಿಸಲು ಸಾಧ್ಯವಿಲ್ಲವಲ್ಲ!!. ಇಲಿಗಳನ್ನು ನಮಗಾಗಿ ಶೋಷಣೆ ಮಾಡಬಾರದೆಂಬ ಅರಿವು ಇದ್ದರೂ ಸಹ ಅವುಗಳ ಮೇಲೆ ಅಥವಾ ಇತರ ಪ್ರಯೋಗಶಾಲಾ ಪ್ರಾಣಿಗಳಾದ ಮೊಲ, ಗಿನಿ ಹಂದಿ, ಚಿಕ್ಕಿಲಿ, ಕೋತಿ ಅಥವಾ ನಾಯಿಗಳ ಮೇಲೆ ಪ್ರಯೋಗ ಮಾಡಿ ಅವುಗಳ ಪರಿಣಾಮ ಮತ್ತು ಅಡ್ಡ ಪರಿಣಾಮಗಳನ್ನು ಪತ್ತೆ ಮಾಡಬೇಕಾಗುತ್ತದೆ. ಇದಕ್ಕೆ ಕ್ಲಿನಿಕಲ್ ಪೂರ್ವ ಪ್ರಯೋಗವೆನ್ನುತ್ತಾರೆ. ಇದಕ್ಕೆ ಮನುಷ್ಯರನ್ನು ಉಪಯೋಗಿಸಬೇಕಾದ ಪ್ರಸಂಗ ಬಂದರೆ ಸಹಸ್ರಾರು ಮನುಜರೇ ಬೇಕಾಗಿದ್ದರೇನೋ??!!. ಇತ್ತೀಚೆಗೆ ಪ್ರಾಣಿಗಳನ್ನು ಬಹಳಷ್ಟು ಕಡಿಮೆ ಉಪಯೋಗಿಸಬೇಕೆಂಬ ಕಟ್ಟು ನಿಟ್ಟಾದ ನಿಯಮಗಳು, ಹೇಗೆ ಪ್ರಯೋಗ ಮಾಡಬೇಕೆಂಬ ಬಗ್ಗೆ ಅಂತಾರಾಷ್ಟ್ರೀಯ ಮಟ್ಟದ ನಿಯಮಗಳು ಬಂದಿವೆ. ಈ ಹಂತದಲ್ಲೇ ಹಲವಾರು ಔಷಧಿಗಳು ಬಿದ್ದು ಹೋಗುತ್ತವೆ.
ಯಾವುದೇ ಒಂದು ಹಂತದಲ್ಲಿ ಔಷಧಿ ಕಣವು ಬ್ರೂಣಕ್ಕೆ ಧಕ್ಕೆ ಮಾಡುವಂತಿದ್ದರೆ, ಗರ್ಭಪಾತ ಮಾಡುವಂತಿದ್ದರೆ, ನರಮಂಡಳಕ್ಕೆ ತೊಂದರೆ ಉಂಟು ಮಾಡುತ್ತಿದ್ದರೆ ಅಥವಾ ಹೃದಯ, ಮೂತ್ರಜನಕಾಂಗ, ಪಿತ್ತಜನಕಾಂಗ, ಮೇದೋಜೀರಕಾಂಗ, ಉದರ, ಮೆದುಳು ಅಥವಾ ಯಾವುದೇ ಅಂಗಕ್ಕೆ ಸೂಕ್ಷ್ಮದರ್ಶಕದಲ್ಲಿ ಮಾತ್ರ ನೋಡಬಹುದಾದ ಸ್ವಲ್ಪ ತೊಂದರೆಯುಂಟುಮಾಡುತ್ತಿದ್ದರೂ ಸಹ ಈ ಔಷಧಿಯ ಕಣವನ್ನು ಮುಲಾಜಿಲ್ಲದೇ ಬದಿಗೊತ್ತಲಾಗುತ್ತದೆ. ಅಂದರೆ ಸುಮಾರು 3-5 ವರ್ಷಗಳ ಸತತ ಪ್ರಯತ್ನ ಮತ್ತು 10-20 ಬಿಲಿಯ ಡಾಲರುಗಳು ಹೋಮವಾದ ಹಾಗೇ!!.
ಇದೆಲ್ಲ ಪರೀಕ್ಷೆಗಳನ್ನು ಪಾಸು ಮಾಡಿ ಬಂದರೆ ಅದನ್ನು ಔಷಧಿಯೆಂದು ಪರಿಗಣಿಸಲಾಗುತ್ತದೆ. ಇದಾದ ನಂತರ ಮನುಷ್ಯರ ಮೇಲೆ ನಾಲ್ಕು ಹಂತದ ಪ್ರಯೋಗಗಳು ಅಥವಾ ಕ್ಲಿನಿಕಲ್ ಪರೀಕ್ಷೆಗಳನ್ನು ಅವರ ಒಪ್ಪಿಗೆ ಪಡೆದು ಮಾಡಲಾಗುತ್ತದೆ.
ಮೊದಲ ಹಂತ
ಇದರಲ್ಲಿ 10-15 ಅರೋಗ್ಯಕರ ಸ್ವಯಂ ಪ್ರೇರಣೆಯಿಂದ ಪ್ರಯೋಗಕ್ಕೆ ಒಡ್ಡಿಕೊಳ್ಳುವ ಆರೋಗ್ಯವಂತ ಜನರ ಮೇಲೆ ಔಷಧಿಯನ್ನು ಪ್ರಯೋಗಿಸಲಾಗುತ್ತದೆ. ಈ ಹಂತದಲ್ಲಿ ಔಷಧಿಯು ಇಲಿಗಳ ಮೇಲೆ ಮಾಡಿದ ಪರಿಣಾಮ ಮನುಷ್ಯನಲ್ಲೂ ಪುನರಾವರ್ತನೆಯಾಗುತ್ತದೆಯೋ ಇಲ್ಲವೋ ಎಂಬುದನ್ನು ಪರಿಶೀಲಿಸಲಾಗುತ್ತದೆ. ಅದರಲ್ಲೂ ಔಷಧಿಯು ಎಷ್ಟು ಪ್ರಮಾಣದಲ್ಲಿ ದೇಹಕ್ಕೆ ಸೇರಿತು? ಎಷ್ಟು ಪ್ರಮಾಣದಲ್ಲಿ ರಕ್ತದಲ್ಲಿ ಪ್ರಸರಣವಾಯಿತು, ಎಷ್ಟು ನಿರ್ವಿಷಗೊಂಡಿತು? ಎಷ್ಟು ದೇಹದಿಂದ ವಿಸರ್ಜಿಸಲ್ಪಟ್ಟಿತು ಎಂಬುದನ್ನು ಪರಿಶೀಲಿಸಲಾಗುತ್ತದೆ. ಅಲ್ಲದೇ ಅವಶ್ಯಕ ಪರಿಣಾಮವನ್ನು ಅದು ಮನುಷ್ಯ ದೇಹದ ಮೇಲೆ ಅವಶ್ಯಕ ಪರಿಣಾಮ ಮಾಡಿತೇ ಎಂಬುದನ್ನು ಖಚಿತ ಪಡಿಸಿಕೊಳ್ಳುತ್ತಾರೆ.ಅಲ್ಲದೇ ಬಾಯಿಯಿಂದ ನೀಡಬೇಕಾದ ಔಷಧವಾದರೆ ಅಹಾರದ ಪರಿಣಾಮವನ್ನು ಸಹ ಪರಿಶೀಲಿಸಿ ನೀಡಲಾಗುತ್ತದೆ. ಈ ಅಧ್ಯಯನಕ್ಕೆ 2-4 ವರ್ಷ ಬೇಕಾಗಿದ್ದು ಸುಮಾರು 10-20 ಬಿಲಿಯನ್ ಡಾಲರ್ ಖರ್ಚಾಗಬಹುದು.
ಎರಡನೇ ಹಂತ
ಈ ಹಂತದಲ್ಲಿ ಔಷಧಿಯನ್ನು ಮೇಲಿನ ಎಲ್ಲಾ ಸಂಶೋಧನೆಗಳನ್ನು ಜಾಸ್ತಿ ಜನ ಅಂದರೆ ಸುಮಾರು 100-1000 ಜನರ ಮೇಲೆ ಪ್ರಯೋಗಿಸಿ ಅದರ ಪರಿಣಾಮ ಮತ್ತು ಅಡ್ಡಪರಿಣಾಮ ಎರಡನ್ನೂ ಅಭ್ಯಾಸ ಮಾಡಲಾಗುತ್ತದೆ. ಇದಕ್ಕೆ 2-4 ವರ್ಷಗಳ ಪರಿಶ್ರಮದ ಅವಶ್ಯಕತೆ ಇದೆ.ಹಂತ 1 ಮತ್ತು 2 ರ ಅಧ್ಯಯನವನ್ನು ಆರೋಗ್ಯವಂತ ಮನುಷ್ಯರ ಮೇಲೆ ಮಾಡಲಾಗುತ್ತದೆ.
ಮೂರನೇ ಹಂತ
ಈ ಹಂತದಲ್ಲಿ ಅಧ್ಯಯನವನ್ನು 1000-3000 ರೋಗ ಪೀಡಿತ ಮನುಷ್ಯರ ಮೇಲೆ ಮಾಡಲಾಗುತ್ತದೆ. ಇಲ್ಲಿಯೂ ಸಹ ಹಂತ 1 ರಲ್ಲಿನ ಅಧ್ಯಯನವನ್ನೇ ಮುಂದುವರೆಸಲಾಗುತ್ತಿದ್ದು, ಔಷಧಿಯ ಸುರಕ್ಷತೆಯ ಬಗ್ಗೆ ಸಂಪೂರ್ಣ ಗಮನ ನೀಡಲಾಗುತ್ತದೆ.
ರೋಗ ಪೀಡಿತ ವ್ಯಕ್ತಿಯ ಮೇಲೆ ಅಡ್ಡ ಪರಿಣಾಮವಾಗುತ್ತಿದ್ದರೆ ಔಷಧಿಯ ಪ್ರಯೋಗವನ್ನು ನಿಲ್ಲಿಸಿ ಅದನ್ನು ಹಿಂಪಡೆಯಲಾಗುತ್ತದೆ. ಈ ಅಧ್ಯಯನಕ್ಕೂ ಸಹ 2-4 ವರ್ಷ ಅವಧಿ ಬೇಕಾಗಿದ್ದು 20-30 ಬಿಲಿಯನ್ ಡಾಲರ್ ಖರ್ಚು ಬರುತ್ತದೆ. ಇದಾದ ನಂತರ ವಿವಿಧ ದೇಶಗಳಲ್ಲಿ ಆಯಾ ದೇಶಗಳ ನಿಯಮಗಳಂತೆ ಅರ್ಜಿ ಸಲ್ಲಿಸಿ ರಹದಾರಿ ಪಡೆಯಲಾಗುತ್ತದೆ.
ಇಲ್ಲಿ ಪ್ಲಾಸೆಬೋ ಪರಿಣಾಮವನ್ನೂ ಸಹ ಗಮನಿಸಲಾಗುತ್ತದೆ. ಪ್ಲಾಸೆಬೋ ಅಂದರೆ “ಹುಸಿ ಔಷದಿ” ಅಥವಾ “ಸುಳ್ಳೌಷಧಿ” ಅನ್ನಬಹುದೇನೋ? ಈ ಹಂತದಲ್ಲಿ ಔಷಧಿಯ ಪರಿಣಾಮವನ್ನು ಗಮನಿಸಲು “ಹುಸಿ ಔಷಧಿ” ಯನ್ನು ಗುಳಿಗಳ ಒಳಗೆ ಹಾಕಿ ಅದನ್ನು ವಿವಿಧ ಗುಂಪುಗಳಲ್ಲಿ ವಿಂಗಡಿಸಿದ ರೋಗಿಗಳ ಮೇಲೆ ಪ್ರಯೋಗಿಸಲಾಗುತ್ತದೆ.
ಇದು ವೈದ್ಯರಿಗೆ ಅಥವಾ ಕಂಪನಿಗೆ ಅಥವಾ ರೋಗಿಗೆ ಗೊತ್ತಿರುವುದಿಲ್ಲ. ಮನುಷ್ಯನಲ್ಲಿ ಶೇ: 65-70 ರೋಗಗಳು ಮನಸ್ಸಿನ ಮೇಲಿನ ಪರಿಣಾಮದಿಂದ ಉದ್ಭವವಾಗುವುದರಿಂದ ನಂಬಿಕೆ ಅಥವಾ ಭರವಸೆ ಅಥವಾ ಗುಣವಾಗಿಯೇ ಆಗುತ್ತದೆ ಎಂಬ ನಿರೀಕ್ಷೆಯಿಂದ ಹಲವಾರು ರೋಗಗಳು ಗುಣವಾಗುತ್ತವೆ. ಆದರೆ ಈ ಪರಿಣಾಮ ಪ್ರಾಣಿಗಳಲ್ಲಿ ಇರದು.
ಇದಕ್ಕೊಂದು ಚಿಕ್ಕ ಉದಾಹರಣೆಯೆಂದರೆ ಒಂದು ಕಂಪನಿ ಜಿಮ್ ಮಾಡುವ ಜನಗಳಿಗಾಗಿ ಶಕ್ತಿ ಜಾಸ್ತಿ ಮಾಡುವ ಔಷಧಿಯನ್ನು ನೀಡುತ್ತಿದೆಯೆಂದರೆ ಅಲ್ಲಿ ಶೇ:75ರಷ್ಟು ಜನರಿಗೆ ಶಕ್ತಿ ಬರಬಹುದು. ಆದರೆ ನಿಜವಾಗಿ ಗುಳಿಗೆಯಿಂದ ಎಷ್ಟು ಜನರಿಗೆ ಶಕ್ತಿ ಬಂದಿದೆ ಎಂಬುದು ಎರಡು ಗುಂಪುಗಳಲ್ಲಿ ಒಂದು ಗುಂಪಿಗೆ ಹುಸಿ ಔಷಧಿ ಮತ್ತೊಂದು ಗುಂಪಿಗೆ ನಿಜವಾದ ಔಷಧಿಯನ್ನು ಹೊಂದಿದ ಗುಳಿಗೆಯನ್ನು ನೀಡುತ್ತಾರೆ.
ಹುಸಿ ಔಷಧಿ ನೀಡಿದ ಗುಂಪು ಮತ್ತು ನಿಜವಾದ ಔಷಧ ನೀಡಿದ ಗುಂಪಿನಲ್ಲಿ ಶಕ್ತಿ ಜಾಸ್ತಿ ಆದರೆ ಔಷಧಿಯ ಪರಿಣಾಮ ಇಲ್ಲ ಎನ್ನಬಹುದು. ಕೇವಲ ಎರಡನೇ ಗುಂಪಿನಲ್ಲಿ ಶಕ್ತಿ ಜಾಸ್ತಿಯಾಗಿದ್ದರೆ ಮಾತ್ರ ಔಷಧಿ ಪರಿಣಾಮಕಾರಿ ಎನ್ನಬಹುದು.
ಈ “ಪ್ಲಾಸೆಬೋ” ಪರಿಣಾಮ ಔಷಧಿಯ ನಿರೀಕ್ಷಿತ ಪರಿಣಾಮಕ್ಕಿಂತ ಜಾಸ್ತಿಯಾದರೆ ಔಷಧಿ ಮಾರುಕಟ್ಟೆಗೆ ಬರದು.
ನಾಲ್ಕನೇ ಹಂತ
ಈ ಹಂತವನ್ನು ಮಾರುಕಟ್ಟೆಯ ನಂತರದ ಸರ್ವೇಕ್ಷಣೆ ಅನ್ನಬಹುದು. ವಿವಿಧ ದೇಶಗಳಲ್ಲಿ ರಹದಾರಿ ದೊರೆತ ನಂತರ ಆಯಾ ದೇಶಗಳಲ್ಲಿ ಔಷಧಿಯನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿ, ವೈದ್ಯರಿಗೆ ಈ ಬಗ್ಗೆ ಮಾಹಿತಿ ನೀಡಿ, ರೋಗಿಗಳಿಗೆ ಅವರು ಔಷಧಿಯನ್ನು ನೀಡಿದಾಗ ಏನಾದರೂ ಅಡ್ಡಪರಿಣಾಮಗಳು ಇರುವವೇ ಎಂಬುದನ್ನು ಪತ್ತೆ ಹಚ್ಚಲು ತಂಡವೊಂದು ಕಾರ್ಯ ನಿರ್ವಹಿಸುತ್ತದೆ. ಯಾವ ಹಂತದಲ್ಲಿಯಾದರೂ ಸಹ ಔಷಧಿಯನ್ನು ಮಾರುಕಟ್ಟೆಯಿಂದ ವಾಪಸ್ ಪಡೆಯಬೇಕಾಗಬಹುದು.
ಅಂದರೆ ಇಂಗ್ಲಿಷ್ ಔಷಧ ಕಂಡು ಹಿಡಿಯುವ ಪದ್ಧತಿ ಇಡೀ ಪ್ರಪಂಚದಲ್ಲಿ ಏಕರೂಪದಲ್ಲಿದೆ. ಏಕೆಂದರೆ ಒಂದು ಔಷಧಿಯನ್ನು ಕಂಡು ಹಿಡಿದರೆ ಅದು ಪ್ರಪಂಚದಲ್ಲಿರುವ ಕೋಟ್ಯಾನುಕೋಟಿ ಜನರ ಮೇಲೆ ಒಂದೇ ರೂಪದಲ್ಲಿರಬೇಕು. ಅದಕ್ಕೆಂದೇ ವಿಶ್ವ ಆರೋಗ್ಯ ಸಂಸ್ಥೆಯ ಆಧೀನದ ಆಹಾರ ಮತ್ತು ಔಷಧ ಆಡಳಿತ ಪ್ರಾಧಿಕಾರ (FDA-Food and Drug Administration) ವು ಕಾರ್ಯ ನಿರ್ವಹಿಸುತ್ತಿದ್ದು, ವಿಶ್ವದ ಯಾವುದೇ ಭಾಗದಲ್ಲಿ ಹೊಸ ಔಷಧ ಕಂಡು ಹಿಡಿದರೂ ಇದರ ಕಠಿಣ ನಿಯಮಗಳನ್ನು ಪಾಲಿಸಿ ಇದರ ತಜ್ಞರ ಹದ್ದಿನ ಕಣ್ಣಿನ ಅಡಿ ಲೈಸನ್ಸ್ ಪಡೆಯಬೇಕಾಗುತ್ತದೆ.
ಇದಕ್ಕೆ ಕೋಟ್ಯಾಂತರ ಡಾಲರ್ ವೆಚ್ಚ ಮತ್ತು ಸಹಸ್ರಾರು ಮಾನವ ಘಂಟೆಗಳ ಪರಿಶ್ರಮವಿರುತ್ತದೆ. ನಂತರ ಇದಕ್ಕೆ ಕಂಡು ಹಿಡಿದ ಕಂಪನಿಯವರು ಪೇಟಂಟ್ ಪಡೆಯುತ್ತಾರೆ. ಯಾವುದೇ ವ್ಯವಸ್ಥೆ ನೂರಕ್ಕೆ ನೂರರಷ್ಟು ಪರಿಪೂರ್ಣವಲ್ಲ. ಆದರೂ ಆ ದಿಶೆಯೆಡೆಗೆ ಎಷ್ಟು ಪ್ರಾಮಾಣಿಕ ಪ್ರಯತ್ನ ನಡೆದಿದೆ ಎನ್ನುವುದು ಮುಖ್ಯ.
ಆಧುನಿಕ ಅಥವಾ ಇಂಗ್ಲಿಷ್ ಅಥವಾ ಅಲೋಪತಿ ಔಷಧಿ ಕಂಡು ಹಿಡಿಯುವ ಪದ್ಧತಿಯಲ್ಲಿ ಇಷ್ಟೆಲ್ಲಾ ಕಟ್ಟು ನಿಟ್ಟು ಇದೆ. ಇದು ಯಾಕೆಂದರೆ ಮನುಷ್ಯರಲ್ಲಿ ಬಹಳ ಬೇಗ ಜಾಸ್ತಿ ಉತ್ತಮ ಪರಿಣಾಮವನ್ನು ಬೀರಿ , ಅತಿ ಕಡಿಮೆ “ಸೈಡ್ ಇಫೆಕ್ಟ್” ಇರಬೇಕು ಅಂತ. ಬಹುತೇಕ ಫಾರ್ಮಾಕಾಲಜಿ ಪುಸ್ತಕಗಳಲ್ಲಿ ಮತ್ತು ಜರ್ನಲ್ಲುಗಳಲ್ಲಿ ನಂತರ ಇದು ಪ್ರಕಟವಾಗುತ್ತದೆ.
ಪ್ರತಿ ಗುಳಿಗೆ, ಚುಚ್ಚುಮದ್ದು ಅಥವಾ ಮಾತ್ರೆಗಳ ಜೊತೆ ಒಂದು ಮಾಹಿತಿ ಚೀಟಿಯನ್ನೂ ಸಹ ಇಟ್ಟಿರುತ್ತಾರೆ. ಅದರಲ್ಲಿ ಔಷಧಿಯ ವಿವರ, ಅದರ ಜೊತೆ ಬೆರೆಸಿರುವ ಬಣ್ಣ, ಇತರ ದ್ರವಗಳು ಅಥವಾ ಘನಗಳು, ಕೊನೆ ದಿನಾಂಕ, ಕಂಪನಿಯ ಹೆಸರು, ವಿಳಾಸ, ರಹದಾರಿ ಸಂಖ್ಯೆ, ಉಪಯೋಗದ ವಿಧಾನ, ಅಡ್ಡ ಪರಿಣಾಮ ಇತ್ಯಾದಿಗಳನ್ನು ವಿವರವಾಗಿ ಆಂಗ್ಲ ಭಾಷೆಯಲ್ಲಿ ಹಾಕುತ್ತಾರೆ. ಇಲ್ಲಿ ಯಾವುದೇ ಮುಚ್ಚುಮರೆ ಇಲ್ಲ. ಮಾಡುವಂತೆಯೂ ಇಲ್ಲ.
ಆದರೆ ಬಹುತೇಕ ಜನರು ಗೂಗಲ್ಲಿನಲ್ಲಿಯೋ ಅಥವಾ ಔಷಧಿಯ ಜೊತೆ ಇರುವ ಚೀಟಿಯನ್ನು ಓದಿಯೋ, ಕೇವಲ “ಸೈಡ್ ಇಫೆಕ್ಟ್” ಓದಿ ಎಲ್ಲಾ ಇಂಗ್ಲಿಷ್ ಔಷಧಿಗಳಿಗೆ “ಸೈಡ್ ಇಫೆಕ್ಟ್” ಮಾತ್ರ ಇದೆ ಎಂದು ಭಾವಿಸುತ್ತಾರೆ ಮತ್ತು ಅದನ್ನು ಅನುಭವಿಸುತ್ತಾರೆ ಕೂಡಾ. ಇದಕ್ಕೆ “ನೋಸೆಬೋ” ಪರಿಣಾಮ ಅನ್ನುತ್ತಾರೆ. ಈ ಪರಿಣಾಮವನ್ನು ಅನುಭವಿಸುವವರ ಬಹು ದೊಡ್ಡ ಗುಂಪೇ ಇದೆ.
ಈ ಪ್ಲಾಸೆಬೋ ಮತ್ತು ನೋಸೆಬೋ ಪರಿಣಾಮಗಳಿಗೆ ಮೆದುಳಿನಲ್ಲಿರುವ ಡೋಪಮಿನ್, ಎಂಡೋರ್ಫ್ಹಿನ್ ಮತ್ತು ಎನ್ಕೆಫಾಲಿನ್ ಎಂಬ ವಸ್ತುಗಳು ಮತ್ತು ಇನ್ನೂ ಅನೇಕ ಹಾರ್ಮೋನುಗಳು ಕಾರಣ ಎಂದು ವಿಜ್ಞಾನ ಹೇಳುತ್ತಿದೆ. ಯಾವ ಔಷಧಿಗೆ ಪರಿಣಾಮ ಇದೆಯೋ ಅದಕ್ಕೆ ಅಡ್ಡ ಪರಿಣಾಮ ಇದ್ದೇ ಇದೆ. ಅಡ್ಡ ಪರಿಣಾಮ ಇರದಿದ್ದರೆ ಅದಕ್ಕೆ ಪರಿಣಾಮವು ಇರುವುದಿಲ್ಲ. ಇದು ನೆನಪಿರಲಿ.
ಬೇರೆ ಪದ್ದತಿಯ ಔಷಧಗಳಿಗೆ ಅಡ್ಡ ಪರಿಣಾಮಗಳು ಇಲ್ಲ ಎಂದು ಮನಸ್ಸಿನಲ್ಲಿ ಆಳವಾಗಿ ಬೇರೂರಿರುವುದರಿಂದ ಇಂಗ್ಲಿಷ್ ಔಷಧಿಗಳಿಗೆ ಮಾತ್ರ ಅದು ಇದೆ ಎಂಬ ತಪ್ಪು ಕಲ್ಪನೆ ಅನೇಕರಲ್ಲಿ ಇದೆ. ಇತರೇ ಪದ್ದತಿಯ ಯಾವ ಔಷಧಗಳೂ ಸಹ ಈ ರೀತಿಯ ಕಠಿಣ ಪರೀಕ್ಷೆ ತಪಾಸಣೆಯ ಮೂಲಕ ಬಂದಿಲ್ಲ. ಪರಂಪರೆಯಿಂದ ಬಂದವುಗಳೆಲ್ಲಾ ಸುರಕ್ಷಿತ ಎನ್ನುವುದು ತಪ್ಪು ಕಲ್ಪನೆ. ಯಾಕೆಂದರೆ ಈಗ ಎಲ್ಲವೂ ವಾಣಿಜ್ಯಿಕರಣಗೊಂಡಿವೆ.
ಕೆಲವೊಮ್ಮೆ ಹೀಗೂ ಇರುವುದು ಸಹಜ. ಕೆಲವೊಮ್ಮೆ ವೈದ್ಯಕೀಯ ನೀತಿಶಾಸ್ತ್ರವನ್ನು ಉಲ್ಲಂಘಿಸಿ, ಈಗಾಗಲೇ ಕೆಲವೊಂದು ಪ್ರಯೋಗಶಾಲಾ ಪರೀಕ್ಷೆಗಳು ಮತ್ತೊಂದು ಆಸ್ಪತ್ರೆಗಳಲ್ಲಿ ಮಾಡಲ್ಪಟ್ಟಿದ್ದರೂ ಸಹ ಅವರಿಗೆ ಬೇಕಾದ ಮತ್ತೊಂದು ಪ್ರಯೋಗಶಾಲೆಯಲ್ಲಿ ಅಥವಾ ಅವರದೇ ಪ್ರಯೋಗಶಾಲೆಯಲ್ಲಿ ರೋಗಿಗಳ ಹತ್ತಿರ ಹಣ ಪೀಕಿಸಿ ಮಾಡಿಸುತ್ತಾರೆ ಎಂಬ ಅಪವಾದ ಇದೆ. ಅಲ್ಲದೇ ಅವಶ್ಯಕತೆ ಇಲ್ಲದಿದ್ದರೂ ಸಹ ಹಣ ಮಾಡಲೆಂದು ಶಸ್ತ್ರಚಿಕಿತ್ಸೆ ಮಾಡುತ್ತಾರೆ ಎಂಬ ಅಪವಾದವೂ ಇದೆ.
ಉತ್ತಮ ವಿಭಾಗಗಳಲ್ಲಿ ವೈದ್ಯಕೀಯ ಸ್ನಾತಕೋತ್ತರ ಪದವಿ ಪಡೆಯಲು ಕೋಟ್ಯಾಂತರ ರೂಪಾಯಿ ವೆಚ್ಚ ಮಾಡಬೇಕಾದ ಪರಿಸ್ಥಿತಿ ಮತ್ತು ದುಬಾರಿ ವೈದ್ಯಕೀಯ ಉಪಕರಣಗಳು ಸಹ ದುಬಾರಿ ವೈದ್ಯಕೀಯ ವೆಚ್ಚಕ್ಕೆ ಕಾರಣವಿರಬಹುದು. ಅಲ್ಲದೇ ಸಾರ್ವಜನಿಕ ವಲಯದಲ್ಲಿರುವ ವೈದ್ಯರುಗಳ ಕಾರ್ಯಕ್ಷಮತೆ ಅನೇಕ ಕಾರಣಗಳಿಂದ ಕಡಿಮೆಯಾಗಿರುವುದೂ ಸಹ ಜನರು ದುಬಾರಿಯಾದರೂ ಸಹ ಖಾಸಗಿಯೆಡೆಗೆ ಓಡುವಂತೆ ಮಾಡಿವೆ ಎನ್ನೆಬಹುದು.
ಒಬ್ಬ ಖ್ಯಾತ ವೈದ್ಯರು ಸಾರ್ವಜನಿಕವಾಗಿ ಹೇಳುವ ಹಾಗೇ ಔಷಧ ಕಂಪನಿಗಳು ಜನರನ್ನು ದರೋಡೆ ಮಾಡಲು ಹುಟ್ಟಿವೆ ಮತ್ತು ಚಿಕಿತ್ಸೆ ಮಾಡುವವರು ಹಣ ಪಿಪಾಸುಗಳಾಗಿದ್ದಾರೆ ಎನ್ನುವುದನ್ನು ಪರಾಮರ್ಷೆಗೆ ಒಳಪಡಿಸುವುದು ಸೂಕ್ತ. ಏಕೆಂದರೆ ಈ ರೀತಿಯಾಗಲು ಯಾರು ಕಾರಣ ಎನ್ನುವುದೂ ಒಂದು ವಿಮರ್ಷೆಗೊಳಪಡಬೇಕಲ್ಲವೇ?
ವೈದ್ಯಕೀಯ ಪದವಿ ಪಡೆಯಲು ಕಡಿಮೆ ವೆಚ್ಚ ಮತ್ತು ಔಷಧಗಳನ್ನು ಕಡಿಮೆ ವೆಚ್ಚದಲ್ಲಿ ಉತ್ಪಾದನೆ ಮಾಡುವ ವಾತಾವರಣ ಸೃಷ್ಟಿಯಾಗಬೇಕು. ಇದನ್ನು ಜವಾಬ್ಧಾರಿ ಜಾಗದಲ್ಲಿರುವವರು ಸಂಬಂಧಿಸಿದವರಿಗೆ ವಿವಿಧ ಮಾಧ್ಯಮಗಳ ಮೂಲಕ ಹೇಳಬೇಕು ಮತ್ತು ಆಧುನಿಕ ಔಷಧಿಗಳ ಬಗ್ಗೆ ಜನರ ತಪ್ಪು ನಂಬಿಕೆ ಹೋಗಲಾಡಿಸಬೇಕು.
ಪಶುವೈದ್ಯಕೀಯದಲ್ಲೂ ಹೊಸ ಔಷಧ ಪತ್ತೆ ಮತ್ತು ಸಂಶೋಧನೆ ಬಹುತೇಕ ಇದೇ ರೀತಿ ನಡೆಯುತ್ತದೆ. ಆದರೆ ಅವುಗಳಲ್ಲಿ “ಪ್ಲಾಸೆಬೋ” ಮತ್ತು “ನೋಸೆಬೋ” ಪರಿಣಾಮಗಳು ಇರದಿದ್ದರೂ ಅವುಗಳ ಮಾಲಕರಲ್ಲಿ ಇವೆಯಲ್ಲ?!!!
ಈ ಕುರಿತು “ಅಡ್ಡಪರಿಣಾಮ” ಗಳಿಲ್ಲದ ಆರೋಗ್ಯಕರ ಚರ್ಚೆಯಾಗಲಿ…
ಸುದ್ದಿದಿನ.ಕಾಂ|ವಾಟ್ಸಾಪ್|9980346243
ದಿನದ ಸುದ್ದಿ
ಕಾಟನ್ ಕ್ಯಾಂಡಿ ಮತ್ತು ಗೋಬಿ ಮಂಚೂರಿ ನಿಷೇಧ : ಸಚಿವ ದಿನೇಶ್ ಗುಂಡೂರಾವ್
ಸುದ್ದಿದಿನ, ಬೆಂಗಳೂರು : ಕೃತಕ ಬಣ್ಣ ಬಳಸಿದ ಕಾಟನ್ ಕ್ಯಾಂಡಿ ಮತ್ತು ಗೋಬಿ ಮಂಚೂರಿ ಮಾರಾಟವನ್ನು ತಕ್ಷಣದಿಂದ ಜಾರಿಗೆ ಬರುವಂತೆ ರಾಜ್ಯಾದ್ಯಂತ ನಿಷೇಧಿಸಲಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ. ಆದಾಗ್ಯೂ, ಬಣ್ಣ ಹಾಗೂ ರಾಸಾಯನಿಕ ಹಾಕದೇ ಇರುವ ಈ ತಿನಿಸುಗಳ ಮಾರಾಟಕ್ಕೆ ನಿರ್ಬಂಧ ಇಲ್ಲ ಎಂದು ಹೇಳಿದ್ದಾರೆ.
ಬೆಂಗಳೂರಿನಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಕ್ಕಳು ಸೇರಿದಂತೆ ಎಲ್ಲ ವಯೋಮಾನದವರಿಗೂ ಅಚ್ಚುಮೆಚ್ಚಾದ ಈ ಎರಡು ತಿನಿಸುಗಳನ್ನು ಆಕರ್ಷಕವಾಗಿ ಕಾಣುವಂತೆ ಮಾಡಲು ಬಳಸುವ ಕೃತಕ ಬಣ್ಣಗಳಲ್ಲಿ ಅಪಾಯಕಾರಿ ರಾಸಾಯನಿಕಗಳು ಇರುವುದು ಪರೀಕ್ಷೆಗಳಿಂದ ದೃಢಪಟ್ಟಿದೆ ಎಂದರು. ರಾಜ್ಯದ ಹಲವೆಡೆ ಬೀದಿಬದಿಯ ಗಾಡಿಗಳು, ಹೋಟೆಲ್ಗಳಲ್ಲಿ ತಯಾರಿಸಿದ ಗೋಬಿ ಮಂಚೂರಿ ತಿನಿಸಿನ 171ಮಾದರಿಗಳನ್ನು ಪರೀಕ್ಷಿಸಲಾಗಿದೆ. ಈ ಪೈಕಿ 107ಮಾದರಿಗಳಲ್ಲಿ ಅಸುರಕ್ಷಿತ ರಾಸಾಯನಿಕಗಳು ಪತ್ತೆಯಾಗಿರುವುದು ಆತಂಕಕಾರಿಯಾಗಿದೆ ಎಂದರು.
ಕೃತಕ ಬಣ್ಣಗಳಲ್ಲಿರುವ ರೋಡೊಮೈನ್-ಬಿ ಮತ್ತು ಟಾಟ್ರಝೀನ್ ರಾಸಾಯನಿಕಗಳು ಕ್ಯಾನ್ಸರ್ ರೋಗಕ್ಕೆ ಕಾರಣವಾಗಬಹುದು ಎನ್ನುವ ಅಂಶ ತಿಳಿದುಬಂದಿದೆ. ಬಣ್ಣ ಹಾಕಿದ ಗೋಬಿಮಂಚೂರಿ ಮತ್ತು ಕಾಟನ್ಕ್ಯಾಂಡಿಗಳನ್ನು ಮಾರಾಟ ಮಾಡುವವರ ಮೇಲೆ ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಾಗುವುದು. ಏಳು ವರ್ಷದರೆಗೆ ಜೈಲು ಶಿಕ್ಷೆ, 10 ಲಕ್ಷ ರೂಪಾಯಿವರೆಗೆ ದಂಡ ಅಥವಾ ಜೀವಾವಧಿ ಶಿಕ್ಷೆಗೂ ಅವಕಾಶವಿದೆ ಎಂದು ಸಚಿವರು ಎಚ್ಚರಿಕೆ ನೀಡಿದರು.
ಹೇಳಿಕೆ
- ಬಣ್ಣ ಹಾಕಿರುವ ಈ ಎರಡು ತಿನಿಸುಗಳನ್ನು ಸೇವಿಸಬಾರದು ಎಂದು ಸಾರ್ವಜನಿಕರಿಗೂ ಎಚ್ಚರಿಕೆ ನೀಡಲಾಗಿದೆ. ಸಾರ್ವಜನಿಕರ ಆರೋಗ್ಯ ರಕ್ಷಣೆ ದೃಷ್ಟಿಯಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಇದಲ್ಲದೇ, ಕಬಾಬ್, ಪಾನಿಪೂರಿ ಮೊದಲಾದ ತಿನಿಸುಗಳಲ್ಲೂ ಕೃತಕ ಬಣ್ಣಗಳ ಬಳಕೆ ಆಗುತ್ತಿದೆಯೇ ಎಂದು ಪರಿಶೀಲಿಸಲಾಗುತ್ತಿದೆ.
| ಸಚಿವ ದಿನೇಶ್ ಗುಂಡೂರಾವ್
ಟ್ವೀಟ್
In consideration of public health, we are banning the use of artificial colours in Gobi Manchurian and cotton candy. Violation of this ban may result in imprisonment for up to 7 years and a fine of up to 10 lakhs.
Following reports of substandard quality and the presence of… pic.twitter.com/z2KWHi8Jbd
— Dinesh Gundu Rao/ದಿನೇಶ್ ಗುಂಡೂರಾವ್ (@dineshgrao) March 11, 2024
ಸುದ್ದಿದಿನ.ಕಾಂ|ವಾಟ್ಸಾಪ್|9980346243
ಲೈಫ್ ಸ್ಟೈಲ್
ನೀಲಿ ಪರ್ವತಗಳ ನಾಡಿನಲ್ಲಿ ಕೀಚಕರ ಹಾವಳಿ
- ಡಾ. ಸಿದ್ದಯ್ಯ ರೆಡ್ಡಿಹಳ್ಳಿ
ಜಗತ್ತಿನ ಪ್ರತಿ ಜನಾಂಗವು ತನ್ನ ಪೂರ್ವಜರ ಪ್ರತಿಭೆ ಹಾಗೂ ಹಿರಿಮೆಯನ್ನು ಹೇಳಿಕೊಳ್ಳಲು ಕಾತರಿಸುತ್ತದೆ. ಅದರಂತೆಯೇ ನಮ್ಮ ಭರತ ಖಂಡದ ಈಶಾನ್ಯ ರಾಜ್ಯವಾದ ಮಣಿಪುರದಲ್ಲಿ ವಾಸಿಸುವ ಮಣಿಪುರಿ ಜನರು ಕ್ರಿಸ್ತಪೂರ್ವದಲ್ಲಿಯೇ ಅತ್ಯಾಧುನಿಕ ಸಾಮ್ರಾಜ್ಯವನ್ನು ಕಟ್ಟಿದ್ದರಂತೆ ಎಂದು ಹೇಳಿಕೊಳ್ಳುತ್ತಾರೆ.
ನಿಜ ಮಣಿಪುರಿಗಳು ಬೆಟ್ಟಗಳ ನಡುವೆ ಬೆಚ್ಚನೆಯ ಜೀವನವನ್ನು ಸಾಗಿಸಿದವರು. ಆದರೆ ಅಲ್ಲಿ ಕೊಳ್ಳಿ ಇಡುವ ಕೆಲಸಗಳು ಬಹಳ ಹಿಂದಿನಿಂದಲೇ ಪ್ರಾರಂಭವಾಗಿರುವುದು ತಿಳಿದುಬರುತ್ತದೆ. ವಾಸ್ತವದಲ್ಲಿ ಹಲವು ಬುಡಕಟ್ಟುಗಳ ಸಂಮಿಶ್ರಣವೇ ಮಣಿಪುರವಾಗಿದೆ. ಆದರೆ ಮಣಿಪುರಿಗಳು ಮಾತ್ರ ಈ ನೆಲದ ಮೂಲ ನಿವಾಸಿಗಳು, ಅವರಿಗೆ ಮಾತ್ರ ಸಕಲ ಸೌಕರ್ಯಗಳು ಸಿಗಬೇಕು, ಉಳಿದವರು ರಾಜ್ಯ ಬಿಡಬೇಕು ಎಂದು ಉಯಿಲ್ಲೆಬ್ಬಿಸುತ್ತಿರುವವರು ಯಾರು? ಪ್ರತಿಯೊಂದು ಬುಡಕಟ್ಟು ಜನಾಂಗಕ್ಕೆ ಇರುವಂತೆ ಹೇರಳವಾದ ಜಾನಪದ ಕಥೆ, ಪುರಾಣ ಮತ್ತು ದಂತಕಥೆಗಳ ಸಂಪತ್ತು ಇಲ್ಲಿನ ಬುಡಕಟ್ಟು ಜನಾಂಗಗಳಿಗೂ ಇದೆ.
ಮಣಿಪುರದ ರಾಜಧಾನಿ ಇಂಫಾಲ್ನಲ್ಲಿ ವಾಸಿಸುತ್ತಿದ್ದ ಜನರನ್ನು ಮಿತೇಯಿ ಅಥವಾ ಮೈತೇಯಿ ಎಂದು ಕರೆಯಲಾಗುತ್ತಿತ್ತು. ಸ್ವಾತಂತ್ರ್ಯಪೂರ್ವದಲ್ಲಿ ಮಣಿಪುರವು ಬಾಂಗ್ಲಾದ ಗುಡ್ಡುಗಾಡು ಜಿಲ್ಲೆಗಳಲ್ಲಿ ಒಂದಾಗಿತ್ತು. ಭಾರತ ಸ್ವಾತಂತ್ರ್ಯಗೊಂಡು ಎರಡು ವರ್ಷ ಎರಡು ತಿಂಗಳು ಕಳೆದ ನಂತರ ಅಂದರೆ ಅಕ್ಟೋಬರ್ 15, 1949ರಂದು ಭಾರತದೊಂದಿಗೆ ಏಕೀಕೃತವಾಯಿತು.
ಮಣಿಪುರದಲ್ಲಿ ಅಂತರ-ಜನಾಂಗೀಯ ಹಿಂಸಾಚಾರವು ಇದೇ ಮೊದಲೇನಲ್ಲ, ಇದಕ್ಕೆ ಸುದೀರ್ಘವಾದ ಇತಿಹಾಸವಿದೆ. ಮಣಿಪುರಿಗಳ ಅತಿರೇಕ ಎಲ್ಲಿಯವರೆಗೆ ಹೋಗಿತ್ತು ಎಂದರೆ 1964ರಲ್ಲಿ ಭಾರತದಿಂದ ಬಿಡುಗಡೆ ಹೊಂದಿ, ಹೊಸ ದೇಶವನ್ನು ಸೃಷ್ಟಿಸಿಕೊಳ್ಳಬೇಕು ಎಂದು ದಂಗೆಯನ್ನು ಎಬ್ಬಿಸಲಾಗಿತ್ತು. ಇದರಲ್ಲಿ ಹಲವಾರು ಗುಂಪುಗಳು ಕೂಡಿಕೊಂಡಿದ್ದವು. ಅವರಿಗೆ ಅವರದೇ ಆದ ಗುರಿಗಳು ಇದ್ದುದರಿಂದ ಈ ದಂಗೆ ವಿಫಲವಾಯಿತು.
ಚೀನಾ ದೇಶದ ಕುಮ್ಮಕ್ಕಿನಿಂದಾಗಿ ‘ರೆವಲ್ಯೂಷನರಿ ಪಾರ್ಟಿ ಆಫ್ ಕಾಂಗ್ಲೀಪಾಕ್’ ಮತ್ತು ‘ಪೀಪಲ್ಸ್ ಲಿಬರೇಶನ್ ಆರ್ಮಿಗಳು’ ಹುಟ್ಟಿಕೊಂಡವು. ಇವರು ಶಸ್ತ್ರಾಸ್ತ್ರ ತರಬೇತಿಯನ್ನು ಹೊಂದಿ, ಬ್ಯಾಂಕ್ ದರೋಡೆಗಳನ್ನು ಮಾಡುವುದು, ಪೊಲೀಸ್ ಅಧಿಕಾರಿಗಳ ಮೇಲೆ ಮತ್ತು ಸರ್ಕಾರಿ ಕಟ್ಟಡಗಳ ಮೇಲೆ ದಾಳಿ ಮಾಡುವುದು ಇಂತಹ ಕೃತ್ಯಗಳನ್ನು ಮಾಡತೊಡಗಿದರು. 1980 ರಿಂದ 2004ರವರೆಗೂ ಭಾರತ ಸರ್ಕಾರ ಮಣಿಪುರವನ್ನು ಪ್ರಕ್ಷÄಬ್ದ ಪ್ರದೇಶ ಎಂದು ಉಲ್ಲೇಖಿಸಿತ್ತು.
ಈ ಸಂದರ್ಭದಲ್ಲಿ ‘ಸಶಸ್ತ್ರ ಪಡೆಗಳ ವಿಶೇಷ ಅಧಿಕಾರ ಕಾಯಿದೆ’ಯನ್ನು ಜಾರಿಗೆ ತರಲಾಯಿತು. ಈ ಕಾಯಿದೆಯ ಪ್ರಕಾರ ಖಾಸಗಿ ಅಥವಾ ಸಾರ್ವಜನಿಕ ಸ್ಥಳಗಳಲ್ಲಿ ಕೆಟ್ಟವರ್ತನೆಗಳನ್ನು ಮಾಡುತ್ತಿದ್ದರೆ, ಯಾವುದೇ ವಾರಂಟ್ಗಳಿಲ್ಲದೆ ಬಂಧಿಸಬಹುದಾಗಿತ್ತು. ಕಾನೂನುಗಳನ್ನು ಉಲ್ಲಂಘಿಸುವ, ಶಸ್ತ್ರಾಸ್ತ್ರಗಳನ್ನು ಹೊಂದಿರುವವರನ್ನು ಅಥವಾ ದೊಡ್ಡ ದೊಡ್ಡ ಗುಂಪುಗಳಲ್ಲಿ ಸೇರಿದ್ದವರನ್ನು ಗುಂಡಿಕ್ಕಿ ಕೊಲ್ಲುವ ಅವಕಾಶವನ್ನು ಮಿಲಿಟರಿಗೆ ಕೊಡಲಾಗಿತ್ತು. ಮಿಲಿಟರಿಯ ಪರವಾಗಿರುವ ಈ ಕಾನೂನು ಅನಿಯಂತ್ರಿತ ಹತ್ಯೆಗಳು, ಚಿತ್ರಹಿಂಸೆ, ಕ್ರೂರ ಅಮಾನವೀಯತೆ, ಅಪಹರಣದಂತಹ ಮಾನವ ಹಕ್ಕುಗಳ ಉಲ್ಲಂಘನೆಗೆ ಕಾರಣವಾಯಿತು.
ಈ ಮಾನವ ವಿರೋದಿ ಮಿಲಿಟರಿ ಕಾನೂನಿನ ವಿರುದ್ಧ ಹಲವಾರು ಪ್ರತಿಭಟನೆಗಳು, ಹೋರಾಟಗಳು ಜರುಗಿದವು. ಇರೋಮ್ ಶರ್ಮಿಳಾ ಚಾನು ಎಂಬ ದಿಟ್ಟ ಮಹಿಳೆ ದೀರ್ಘಾವಧಿಯ ಉಪವಾಸ ಸತ್ಯಾಗ್ರಹವನ್ನು ಮಾಡಿದ್ದಳು. ಆದರೂ 2004ರಲ್ಲಿ ಸ್ಥಳೀಯ ಮಹಿಳೆಯರ ಮೇಲೆ ಹಿಂಸಾತ್ಮಕ ದಾಳಿಯನ್ನು ನಡೆಸಲಾಯಿತು. ಇದಕ್ಕೆ ಪ್ರತಿರೋಧವಾಗಿ ಪ್ರತಿಭಟನೆಗಳು ತೀವ್ರಮಟ್ಟಕ್ಕೆ ತಲುಪಿದಾಗ ಸರ್ಕಾರವು ಮಣಿಪುರದಲ್ಲಿದ್ದ ಗೊಂದಲದ ಸ್ಥಿತಿಯನ್ನು ತೆಗೆದುಹಾಕಿತು.
ಮಣಿಪುರವು ನೀಲಿ ಪರ್ವತಗಳಿಂದ ಸುತ್ತುವರೆದಿರುವ ನಾಡಾಗಿದೆ. ಈ ಪರ್ವತ ಶ್ರೇಣಿಗಳು ತಣ್ಣನೆಯ ಗಾಳಿಯನ್ನು ಮಣಿಪುರಿಗಳಿಗೆ ತಲುಪದಂತೆ ತಡೆಯುತ್ತವೆ. ಆದರೆ ಮಣಿಪುರಿಗಳಲ್ಲಿಯೇ ಹೊತ್ತಿಕೊಂಡಿರುವ ಬೆಂಕಿಯನ್ನು ನಂದಿಸಲು ಅವುಗಳಿಗೆ ಸಾಧ್ಯವೇ!? ಅವುಗಳು ಚಂಡಮಾರುತದ ಬಿರುಗಾಳಿಗಳನ್ನು ತಡೆಯಬಹುದು, ಆದರೆ ಅವರಲ್ಲಿರುವ ಮೌಢ್ಯವನ್ನು ತೊಡೆದುಹಾಕಲು ಸಾಧ್ಯವೇ?!
ಮಣಿಪುರ ರಾಜ್ಯವು ಉತ್ತರಕ್ಕೆ ನಾಗಾಲ್ಯಾಂಡ್, ದಕ್ಷಿಣಕ್ಕೆ ಮಿಜೋರಾಂ, ಪಶ್ಚಿಮಕ್ಕೆ ಅಸ್ಸಾಂ ಮತ್ತು ಪೂರ್ವಕ್ಕೆ ಮಯನ್ಮಾರ್ ದೇಶದ ಗಡಿಯನ್ನು ಹೊಂದಿದೆ.
ಮಣಿಪುರದಲ್ಲಿ ಮಳೆಗೆ, ನೀರಿಗೆ ಕೊರತೆಯಿಲ್ಲ. ಇದರ ಪಶ್ಚಿಮಕ್ಕೆ ಬರಾಕ್ ನದಿಯ ಜಲಾನಯನ ಪ್ರದೇಶ, ಪೂರ್ವದಲ್ಲಿ ಯು ನದಿಯ ಜಲಾನಯನ ಪ್ರದೇಶ, ಉತ್ತರದಲ್ಲಿ ಲಾನ್ಯೆ ನದಿಯ ಜಲಾನಯನ ಪ್ರದೇಶ, ಮಧ್ಯದಲ್ಲಿ ಮಣಿಪುರ ನದಿಯ ಜಲಾನಯನ ಪ್ರದೇಶವನ್ನು ಹೊಂದಿ ಸಮೃದ್ಧವಾಗಿರುವಂತೆ, ಅಲ್ಲಿನ ಮಹಿಳೆಯರು ಧಾರಾಕಾರವಾಗಿ ಕಣ್ಣೀರನ್ನು ಸುರಿಸುತ್ತಿದ್ದಾರೆ. ಇಲ್ಲಿನ ಮಹಿಳೆಯರ ಕಣ್ಣೀರಿಗೆ ಮೊದಲನ್ನು ಗುರುತಿಸುವುದಕ್ಕೆ, ಕೊನೆಯನ್ನು ಗ್ರಹಿಸುವುದಕ್ಕೆ ಸಾಧ್ಯವಾಗುತ್ತಿಲ್ಲ.
ಮಣಿಪುರದ ಅತಿದೊಡ್ಡ ನದಿ ಬರಾಕ್. ಇದು ಇರಾಂಗ್, ಮಕು ಮತ್ತು ತುವೈ ಉಪನದಿಗಳನ್ನು ಹೊಂದಿ ಅಸ್ಸಾಂ ರಾಜ್ಯವನ್ನು ಪ್ರವೇಶಿಸುತ್ತದೆ. ಮಣಿಪುರ ನದಿಯ ಜಲಾನಯನ ಪ್ರದೇಶವು ಮಣಿಪುರ, ಇಂಫಾಲ್, ಇರಿಲ್, ನಂಬುಲ್, ಸೆಕ್ಮೆಂ, ಚಕ್ಪಿ, ತೌಬಲ್ ಮತ್ತು ಖುಗಾ ಎಂಬಂತಹ ಎಂಟು ನದಿಗಳನ್ನು ಹೊಂದಿದೆ. ಈ ಎಲ್ಲಾ ನದಿಗಳು ಸುತ್ತಮುತ್ತಲಿನ ಬೆಟ್ಟಗಳಿಂದಲೇ ಹುಟ್ಟಿಕೊಂಡಿವೆ. ಈ ನದಿಗಳ ಒಳಹರಿವಿನ ಮರ್ಮ ನಮ್ಮ ರಾಜಕಾರಣಿಗಳ ಮರ್ಮದಂತೆ ಯಾರಿಗೂ ತಿಳಿಯದಂತಹ ಕಗ್ಗಂಟಾಗಿದೆ. ನದಿಯು ತಣ್ಣಗಿದ್ದು, ಒಂದೇ ಭಾರಿ ಬೋರ್ಗರೆದು ತಣ್ಣಗಾಗುವಂತೆ ನಮ್ಮ ಪ್ರಧಾನಮಂತ್ರಿಗಳು ಮೂರು ತಿಂಗಳ ಕಾಲ ದಿವ್ಯ ಮೌನವಾಗಿದ್ದು, ಜನರ ನಿತ್ಯ ಜೀವನವು ಅಲ್ಲೋಲ-ಕಲ್ಲೋಲ ಆದಮೇಲೆ ತಣ್ಣಗೆ ಮಾತನಾಡಿದ್ದಾರೆ.
ಆದರೆ ಅಲ್ಲಿಗೆ ಹೋಗುವ ಧೈರ್ಯವನ್ನು ಮಾಡಿಲ್ಲ. ಚುನಾವಣೆ ಇದ್ದರೆ ಹತ್ತು-ಹದಿನೈದು ಬಾರಿ ರೋಡ್-ಶೋ ಮಾಡುವ ಇವರು ಕಷ್ಟದ ಕಾಲದಲ್ಲಿ ಆ ಕಡೆ ತಿರುಗಿಯು ನೋಡದೇ ಇರುವುದು ಭಾರತೀಯರು ಪಶ್ಚಾತ್ತಾಪಪಡುವಂತೆ ಮಾಡಿದೆ.
ಮಣಿಪುರವನ್ನು ಭೌತಿಕ ಲಕ್ಷಣಗಳಲ್ಲಿ ವಿಭಿನ್ನವಾಗಿರುವ ಎರಡು ವಿಭಿನ್ನ ಭೌತಿಕ ಪ್ರದೇಶಗಳಾಗಿ ನಿರೂಪಿಸಬಹುದು. ಒಂದು ಒರಟಾದ ಬೆಟ್ಟಗಳು, ಕಿರಿದಾದ ಕಣಿವೆಗಳ ಹೊರ ಪ್ರದೇಶ ಮತ್ತೊಂದು ಸಮತಟ್ಟಾದ ಬಯಲಿನ ಒಳ ಪ್ರದೇಶ. ಇಲ್ಲಿನ ಕಣಿವೆ ಪ್ರದೇಶವು ಸಮತಟ್ಟಾದ ಮೇಲ್ಮೈ ಮೇಲೆ ಏರುತ್ತಿರುವ ಬೆಟ್ಟಗಳು ಮತ್ತು ದಿಬ್ಬಗಳಿಂದ ಕೂಡಿದೆ.
ಇಲ್ಲಿನ ಲೋಕ್ಟಾಕ್ ಸರೋವರವು ಕೇಂದ್ರ ಬಯಲಿನಿಂದ ನಾಗಾಲ್ಯಾಂಡ್ನ ಗಡಿಯವರೆಗೂ ತನ್ನ ವಿಸ್ತಾರವನ್ನು ಹರಡಿಕೊಂಡಿದೆ. ಇಲ್ಲಿನ ಮಣ್ಣಿನ ಹೊದಿಕೆಗೂ ಗಂಡು-ಹೆಣ್ಣಿನ ಸಂಬಂಧಕ್ಕೂ ನಿಕಟವಾದ ಹೋಲಿಕೆ ಇರುವಂತೆ ಕಂಡುಬರುತ್ತದೆ. ಬೆಟ್ಟದ ಪ್ರದೇಶದಲ್ಲಿ ಕೆಂಪು ಫೆರುಜಿನಸ್ ಮಣ್ಣು ಮತ್ತು ಕಣಿವೆಯಲ್ಲಿ ಮೆಕ್ಕಲು ಮಣ್ಣು ಇದೆ. ಕಣಿವೆಯ ಮಣ್ಣು ಇಲ್ಲಿನ ಗಂಡಿನ ರೀತಿಯಲ್ಲಿ ಕಠಿಣವಾಗಿದ್ದರೆ, ಕಡಿದಾದ ಇಳಿಜಾರುಗಳಲ್ಲಿರುವ ಮಣ್ಣು ಹೆಣ್ಣಿನಂತೆ ಹೆಚ್ಚಿನ ಸವೆತಕ್ಕೆ ಒಳಗಾಗಿದೆ, ಒಳಗಾಗುತ್ತಿದೆ. ಇದರ ಪರಿಣಾಮವಾಗಿ ಬಂಜರು ಬಂಡೆಗಳ ಇಳಿಜಾರುಗಳು ಸೃಷ್ಟಿಯಾಗುವಂತೆ ಅಲ್ಲಿನ ಪುರುಷರ ಮನಸ್ಸುಗಳು ಬಂಡೆಯಂತೆ ಆಗುತ್ತಿರುವುದು ಖೇದಕರವಾದ ಸಂಗತಿಯಾಗಿದೆ.
ಬೆಟ್ಟದ ತಪ್ಪಲಿನಲ್ಲಿ ರತ್ನಗಂಬಳಿಯನ್ನು ಹಾಸಿಹೊದಿಸಿರುವಂತೆ ಕಾಣುವ ಫ್ಲೋರಾ ಹೂವುಗಳು ಅಲ್ಲಿನ ಬುಡಕಟ್ಟು ಮಹಿಳೆಯರ ಸೌಂದರ್ಯವನ್ನು ಬಿತ್ತರಿಸಿದರೆ, ಬೆಟ್ಟಗಳು ಪುರುಷಾಂಕಾರದಂತೆ ಕಾಣುತ್ತವೆ. ಇಲ್ಲಿ ಏನಿಲ್ಲ ಹೇಳಿ, ನೈಸರ್ಗಿಕವಾದ ಸಸ್ಯವರ್ಗವಿದೆ. ನಾಲ್ಕು ರೀತಿಯ ವಿಶಾಲವಾಗಿ ಹರಡಿರುವ ಉಷ್ಣವಲಯದ ಅರೆ-ನಿತ್ಯಹರಿದ್ವರ್ಣ, ಒಣ ಸಮಶೀತೋಷ್ಣ ಅರಣ್ಯ, ಉಪ-ಉಷ್ಣವಲಯದ ಪೈನ್ ಕಾಡುಗಳು ಮತ್ತು ಉಷ್ಣವಲಯದ ತೇವಾಂಶವುಳ್ಳ ಅರಣ್ಯಗಳಿವೆ. ತೇಗ, ಪೈನ್, ಓಕ್, ಯುನಿಂಗ್ದೌ, ಲಿಹಾವೊ, ಬಿದಿರಿನ ಮರಗಳಿವೆ. ತಮ್ಮ ಕಷ್ಟಗಳ ನಡುವೆಯೂ ರಬ್ಬರ್, ಟೀ, ಕಾಫಿ, ಕಿತ್ತಳೆ, ಏಲಕ್ಕಿ ಬೆಳೆಯುತ್ತಾರೆ. ಆದರೆ ಅವರು ಹೆಚ್ಚು ಬೆಳೆಯುವ ಮತ್ತು ಇಷ್ಟಪಡುವ ಅಕ್ಕಿಯಂತೆ ಅಲ್ಲಿನ ಪುರುಷರ ಮನಸ್ಸುಗಳು ಬೇಗನೇ ಹಾಳಾಗುತ್ತಿರುವುದು ಜಾತಿ, ಧರ್ಮಗಳೆಂಬ ಕೀಟಗಳಿಂದ ಎಂಬುದನ್ನು ಅವರು ತಿಳಿಯದಿರುವುದು ದುರದೃಷ್ಟಕರ.
ಮಣಿಪುರ ಮತ್ತು ನಾಗಾಲ್ಯಾಂಡ್ಗಳ ಗಡಿಗಳ ನಡುವೆ ಇರುವ ಝುಕೊ ಎಂಬ ಕಣಿವೆಯು ಸಮಶೀತೋಷ್ಣ ಹವಾಮಾನವನ್ನು ಹೊಂದಿರುವಂತೆ, ಅಲ್ಲಿನ ಜನರಿಗೆ ಸಮಚಿತ್ತತೆಯನ್ನು ನೀಡಿದ್ದರೆ ಚೆನ್ನಾಗಿರುತ್ತಿತ್ತು. ಭಾರತದ ಈಶಾನ್ಯ ಮೂಲೆಯು ಸಾಮಾನ್ಯವಾಗಿ ಸೌಹಾರ್ದಯುತವಾದ ಹವಾಮಾನವನ್ನು ಹೊಂದಿದೆ. ಆದರೆ ಅಲ್ಲಿನ ಜನರು ಸೌಹಾರ್ದಯುತವಾದ ಮನೋಭಾವನೆಯನ್ನು ಹೊಂದಿಲ್ಲ. ಅಲ್ಲಿನ ವಾತಾವರಣದಂತೆ ಚಳಿಗಾಲದಲ್ಲಿ ಚಳಿ ಹೆಚ್ಚಾಗಿರುವಂತೆ, ಬೇಸಿಗೆಯಲ್ಲಿ ಬಿಸಿಲು ಗರಿಷ್ಠ ಮಟ್ಟಕ್ಕೆ ಹೋಗುವಂತೆ ಅಲ್ಲಿನ ಜನರು ಆವೇಶಕ್ಕೊಳಗಾಗುತ್ತಾರೆ.
ಇಂಫಾಲದ ಮೈತೇಯಿ ಜನರು ವಾರ್ಷಿಕ ಸರಾಸರಿ 933 ಮಿಲಿಮೀಟರ್ ಮಳೆಯನ್ನು ಪಡೆಯುತ್ತಾರೆ. ಆದರೂ ಕೂಡ ತಮ್ಮದೇ ನೆಲದಲ್ಲಿರುವ ಕುಕಿ ಜನಾಂಗದ ಮಹಿಳೆಯರು ಕಣ್ಣೀರು ಸುರಿಸುವಂತೆ ನಡೆದುಕೊಳ್ಳುತ್ತಾರೆ.
ನೈರುತ್ಯ ಮಾನ್ಸೂನ್ ಮಾರುತಗಳು ಬಂಗಾಳಕೊಲ್ಲಿಯಿAದ ತೇವಾಂಶವನ್ನು ಎತ್ತಿಕೊಂಡು ಪೂರ್ವ ಹಿಮಾಲಯ ಶ್ರೇಣಿಗಳ ಕಡೆಗೆ ಹೋಗುವಾಗ ಈ ಪ್ರದೇಶದಲ್ಲಿ ಮಳೆಯಾಗುವಂತೆ ಪ್ರಕೃತಿಯೇ ನೋಡಿಕೊಂಡರೂ ಮಹಿಳೆಯರ ಕಣ್ಣೀರು ಮಾತ್ರ ಧಾರಾಕಾರವಾಗಿ ಹರಿಯುವಂತೆ ತಮ್ಮ ಸ್ವಾರ್ಥಕ್ಕಾಗಿ ರಾಜಕಾರಣಿಗಳು ನೋಡಿಕೊಳ್ಳುತ್ತಿದ್ದಾರೆ.
ಇತ್ತೀಚೆಗೆ ಮಣಿಪುರದಲ್ಲಿ ಹವಾಮಾನದಲ್ಲಿ ಬದಲಾವಣೆ ಹೆಚ್ಚಾಗುತ್ತಿದೆ. ಉದಾಹರಣೆಗೆ ಮಳೆ ಮತ್ತು ತಾಪಮಾನದಲ್ಲಿ ತೀವ್ರ ಬದಲಾವಣೆಗಳು ಹೆಚ್ಚಾಗುತ್ತಿವೆ. ಆದರೆ ಅಲ್ಲಿನ ಜನಾಂಗಗಳ ನಡುವಿನ ಬಾಂಧವ್ಯದ ಬದ್ಧತೆಗಳು ಏರುಪೇರಾಗುತ್ತಿರುವುದು ಸಾಕಷ್ಟು ಹಿಂದಿನಿAದಲೇ ನಡೆಯುತ್ತಿರುವುದು ಮನುಷ್ಯ ಸಂಬಂಧಗಳ ನಡುವೆ ಬಿರುಕು ಮೂಡಿರುವುದರ ದ್ಯೋತಕವಾಗಿದೆ. ಕಣಿವೆ ಅಥವಾ ಬಯಲು ಪ್ರದೇಶಗಳಲ್ಲಿ ಮೈತೇಯಿ ಮಾತನಾಡುವ ಅಂದರೆ ಮಣಿಪುರಿ ಭಾಷಿಕರು ನೆಲೆಸಿದ್ದಾರೆ. ಬೆಟ್ಟಗಳಲ್ಲಿ ನಾಗಾಗಳು, ಕುಕಿಗಳು ಮೊದಲಾದ ಸಣ್ಣ ಬುಡಕಟ್ಟು ಜನರು ವಾಸಿಸುತ್ತಿದ್ದಾರೆ. ಇವರು ಬೆಟ್ಟಗಳ ಮೇಲ್ಮೈ ಮಣ್ಣಿನಂತೆ ಮೈತೇಯಿ ಜನರ ಹಾವಳಿಗೆ ಕೊಚ್ಚಿ ಹೋಗುತ್ತಿದ್ದಾರೆ. ಅಲ್ಲಿ ಮೈತೇಯಿ ಭಾಷೆಯು ಮಣಿಪುರಿ ಭಾಷೆಗೆ ಸಮಾನಾರ್ಥಕವಾಗಿ ಬಳಕೆಯಾಗುತ್ತಿರುವುದರಿಂದ ಇಲ್ಲಿನ ಬಹುಪಾಲು ಜನಸಂಖ್ಯೆ ಮೈತೇಯಿಯರೇ ಎಂದು ಕರೆಸಿಕೊಂಡಿದ್ದಾರೆ.
ಇವರು ಮಣಿಪುರದ ಮುಖ್ಯ ಜನಾಂಗ ಎಂಬುದೇನೋ ಸರಿ. ಆದರೆ ನಾಗಾ ಮತ್ತು ಕುಕಿ ಬುಡಕಟ್ಟು ಜನಾಂಗಗಳನ್ನು ಹಲವಾರು ಬುಡಕಟ್ಟು ಜನಾಂಗಗಳಾಗಿ ವಿಂಗಡಿಸಲಾಗಿದೆ. ಇವರೆಲ್ಲರೂ ಒಗ್ಗಟ್ಟಾಗಿದ್ದರೆ ನಮ್ಮ ಬೇಳೆ ಬೇಯ್ಯುವುದಿಲ್ಲ ಎಂಬ ಸಾಂಸ್ಕೃತಿಕ ರಾಜಕಾರಣವು ವ್ಯವಸ್ಥಿತವಾಗಿ ಬಹಳ ಹಿಂದಿನಿAದಲೇ ಇವರನ್ನು ಹೊಡೆದು ಹೊಡೆದು ಹಾಳುತ್ತಿದೆ.
ಮಣಿಪುರದಲ್ಲಿ ಮೇ 4ರಂದು ಜರುಗಿದ ಇಬ್ಬರು ಮಹಿಳೆಯರ ಸಾಮೂಹಿಕ ಅತ್ಯಾಚಾರ ಮತ್ತು ಬೆತ್ತಲೆ ಮೆರವಣಿಗೆಯು ಜುಲೈ 20ರಂದು ಹೊರ ಜಗತ್ತಿಗೆ ತಿಳಿಯಿತು. ಈ ಘಟನೆಯು ಪ್ರಪಂಚದ ಜನರನ್ನು ತಲ್ಲಣಗೊಳಿಸಿತು.
ಇಡೀ ಜಗತ್ತೇ ಈ ಕೃತ್ಯವನ್ನು ವಿರೋಧಿಸಿದರೂ ಕೂಡ, ಒಟ್ಟು ದೇಶವನ್ನೇ ತನ್ನ ಕುಟುಂಬ ಎಂದು ಕರೆದುಕೊಳ್ಳುವ ನಮ್ಮ ಪ್ರಧಾನಿಗಳು ಬೆಂಕಿ ಹೊತ್ತಿಕೊಂಡ ಮೂರು ತಿಂಗಳು ದಿವ್ಯ ಮೌನದಿಂದ ಇದ್ದರು ಎಂಬುದನ್ನು ಜಗತ್ತು ಮರೆಯುತ್ತದೆಯೇ? 140 ಕೋಟಿ ಜನರು ನನ್ನ ಕುಟುಂಬಸ್ಥರೇ ಎಂದು ಹೇಳಿಕೊಳ್ಳುವ ಪ್ರಧಾನಿಗಳು ಅದರಲ್ಲಿ ಮಹಿಳೆಯರೂ ಇದ್ದಾರೆ ಎಂಬುದನ್ನು ಮರೆತಿದ್ದಾರೆಯೇ!? ಒಟ್ಟಾರೆ ನಮ್ಮ ಪ್ರಧಾನಿಗಳ ಮೌನ, ಮೈತೇಯಿ ಮತಾಂಧರ ಆರ್ಭಟ ಕುಕಿ ಜನಾಂಗದ ಮಹಿಳೆಯರ ಬದುಕನ್ನು ಮೂರಾಬಟ್ಟೆ ಮಾಡಿರುವುದಂತೂ ಖಚಿತ.
(ಡಾ. ಸಿದ್ದಯ್ಯ ರೆಡ್ಡಿಹಳ್ಳಿ, 9449899520)
ಸುದ್ದಿದಿನ.ಕಾಂ|ವಾಟ್ಸಾಪ್|9980346243
ದಿನದ ಸುದ್ದಿ
ಮದ್ರಾಸ್ ಐ ವೈರಾಣುವಿಗೆ ಭಯ ಪಡಬೇಕಾಗಿಲ್ಲ : ಡಾ. ನಾಗರಾಜ
ಸುದ್ದಿದಿನ,ದಾವಣಗೆರೆ : ಸಾಮಾನ್ಯವಾಗಿ ಚಳಿಗಾಲದಲ್ಲಿ ಕಾಣಿಸಿಕೊಳ್ಳುತ್ತಿದ್ದ ಮದ್ರಾಸ್ ಐ ವೈರಾಣು ಅತೀ ವೇಗವಾಗಿ ಹರಡುತ್ತಿದ್ದು ಇದಕ್ಕೆ ಭಯ ಪಡಬೇಕಾಗಿಲ್ಲ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ನಾಗರಾಜ ತಿಳಿಸಿದ್ದಾರೆ.
ಮದ್ರಾಸ್ ಐ ಈ ಬಾರಿ ಮಳೆಗಾಲದಲ್ಲಿ ಆರಂಭವಾಗಿದ್ದು ರಾಜ್ಯದ ಜನರಕಣ್ಣು ಕೆಂಪಾಗಿಸುತ್ತಿದೆ, ಮುಖ್ಯವಾಗಿ ಶಾಲಾ-ಕಾಲೇಜು ವಿದ್ಯಾರ್ಥಿಗಳು ಹಾಗೂ ಹಾಸ್ಟಲ್ ವಿದ್ಯಾರ್ಥಿಗಳಲ್ಲಿ “ಮದ್ರಾಸ್ ಐ” ವೇಗಾಗಿ ಹರಡುತ್ತಿರುವುದು ಆತಂಕಕ್ಕೆ ಕಾರಣವಾಗಿದೆ, ಕಂಜಕ್ವಿಟಿಸ್ ಎಂದು ಕರೆಯಲಾಗುವ ಮದ್ರಾಸ್ ಐ ಅಥವಾ ಕಣ್ಣು ವೈರಾಣುಗಳಿಂದ ಹರಡುವ ಕಣ್ಣಿನ ಸಮಸ್ಯೆ ತೇವಾಂಶ ಹೆಚ್ಚಾದಾಗ ಅಥವಾ ಚಳಿಗಾಲದ ವಾತಾವರಣದಲ್ಲಿ ಹುಟ್ಟಿಕೊಳ್ಳುವ ಈ ವೈರಾಣುಗಳು ನೇರವಾಗಿಕಣ್ಣಿ ಮೇಲೆ ಪರಿಣಾಮಉಂಟು ಮಾಡುತ್ತವೆ, ರಾಜ್ಯದಲ್ಲಿ ಮಳೆಯಾಗುತ್ತಿದ್ದ ಪರಿಣಾಮ ಬಿಸಿಲು ಇಲ್ಲದಂತಾಗಿದೆ ಇದರ ಪರಿಣಾಮತೇವಾಂಶ ಹೆಚ್ಚಾಗಿ ಅವಧಿಗೂ ಮೊದಲೇ ಈ ವೈರಾಣು ದಾಂಗುಡಿ ಇರಿಸಿದೆ.
ರೋಗದ ಲಕ್ಷಣಗಳು
ಕಸ ಬಿದ್ದದಂತೆಆಗುವ ರೀತಿಯಾಗಿಕಣ್ಣುಚುಚ್ಚುವುದು, ಬೆಳಗ್ಗೆ ಎದ್ದಾಗ ಹೆಚ್ಚು ಪಿಸುರು (ಪಿಚ್ಚು) ಬರುತ್ತದೆ, ಕಣ್ಣುಗಳು ಕೆಂಪಾಗಿ, ಕಿರಿಕಿರಿ ಹೆಚ್ಚುವುದು, ಕಣ್ಣಲ್ಲಿ ನೀರು ಬರುವುದು, ರೆಪ್ಪೆ ಕಣ್ಣು ದಪ್ಪ ಆಗುವುದು ಕಂಡು ಬರುತ್ತದೆ.
ಮುಂಜಾಗೃತಾ ಕ್ರಮಗಳು
ಸಮಸ್ಯೆ ಇರುವವರು ಕೆಲದಿನ ಪ್ರತ್ಯೇಕ ವಾಸ ಮಾಡಿ, ಲಕ್ಷಣಗಳು ಕಾಣಿಸಿಕೊಳ್ಳದಿದ್ದರೆ, ಕಣ್ಣಿಗೆಔಷಧ ಹಾಕಿಸಿಕೊಳ್ಳಬೇಡಿ, ದಿನಕ್ಕೆ 8-10 ಬಾರಿ ಸ್ಯಾನಿಟೈಸರ್, ಸೋಪು ಬಳಸಿ ಕೈ ತೊಳೆದುಕೊಳ್ಳಿ, ವೈರಸ್ ಕಾಣಿಸಿಕೊಂಡಾಗ ಹತ್ತಿರದ ಆರೋಗ್ಯ ಕೇಂದ್ರಗಳಿಗೆ ಭೇಟಿ ನೀಡಿ ಸಲಹೆ ಪಡೆಯಬೇಕು, ವೈದ್ಯರ ತಪಾಸಣೆ ಮಾಡಿಸದೇ, ಔಷಧಿ ಅಂಗಡಿಗಳಲ್ಲಿ ಸಿಗುವ ಡ್ರಾಪ್ಸ್ಗಳನ್ನು ಬಳಸಬಾರದು, ಕಣ್ಣು ಮುಟ್ಟಿಕೊಳ್ಳುವುದನ್ನು ಕಡಿಮೆ ಮಾಡಬೇಕು.
ಪರಿಹಾರ
ಸಮಸ್ಯೆ ಉಳ್ಳವರು ಇತರರಿಂದದೂರಇರಬೇಕು, ವೈದ್ಯರ ಬಳಿ ತೋರಿಸಿ, ಐ ಡ್ರಾಪ್ಸ್ ಮಾತ್ರ ಹಾಕಬೇಕು, ಸಮಸ್ಯೆ ಕಡಿಮೆ ಆಗುವವರೆಗೆ ಗಾಳಿಗೆ ಹೋಗಬಾರದು, ದ್ವಿಚಕ್ರ ವಾಹನ ಓಡಿಸಬಾರದು, ಟಿ.ವಿ,ಮೊಬೈಲ್, ಕಂಪ್ಯೂಟರ್ಗಳನ್ನು ನೋಡುವುದನ್ನ ಕಡಿಮೆ ಮಾಡಿ ಕಣ್ಣಿಗೆ ವಿಶ್ರಾಂತಿಕೊಡಬೇಕು.
ರೋಗದ ಲಕ್ಷಣಗಳು ಕಾಣಿಸಿಕೊಂಡರೆ ತಕ್ಷಣವೇ ಸಮೀಪದ ನಗರ, ಗ್ರಾಮೀಣ ಪ್ರಾಥಮಿಕ ಆರೋಗ್ಯ ಕೇಂದ್ರಗಳು, ಸಮುದಾಯಆರೋಗ್ಯ ಕೇಂದ್ರಗಳು, ತಾಲ್ಲೂಕು ಆಸ್ಪತ್ರೆಗಳು ಹಾಗೂ ಜಿಲ್ಲಾಆಸ್ಪತ್ರೆಗೆ ಭೇಟಿ, ವೈದ್ಯರ ಹತ್ತಿರತಪಾಸಣೆ ಮಾಡಿಸಿ ಚಿಕಿತ್ಸೆ ಪಡೆಯುವುದು ಸೂಕ್ತ. ವೈರಾಣುವಿನ ಸಮಸ್ಯೆ ಆಗಿರುವ ಕಾರಣ ನಿರ್ದಿಷ್ಟ ಚಿಕಿತ್ಸೆ ಇಲ್ಲ ಮುನ್ನೆಚ್ಚರಿಕೆಯೇ ಮದ್ದಾಗಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243
-
ದಿನದ ಸುದ್ದಿ7 days ago
ನಾಯಕನ ಹಟ್ಟಿ | ಶ್ರೀಗುರು ತಿಪ್ಪೇರುದ್ರಸ್ವಾಮಿ ರಥೋತ್ಸವಕ್ಕೆ ವಿಶೇಷ ಬಸ್ ಸೌಲಭ್ಯ
-
ದಿನದ ಸುದ್ದಿ6 days ago
ಲೋಕಸಭಾ ಚುನಾವಣೆ : ಚುನಾವಣಾ ಚಟುವಟಿಕೆಗಳ ಕುರಿತ ಜಿಲ್ಲಾವಾರು ಮಾಹಿತಿ
-
ದಿನದ ಸುದ್ದಿ6 days ago
ವಿಜಯಪುರ ಜಿಲ್ಲಾ ಸಾಹಿತ್ಯ ಸಮ್ಮೇಳನದ ಕವಿಗೋಷ್ಠಿಗೆ ಮೈಬೂಬಸಾಹೇಬ.ವೈ.ಜೆ ಆಯ್ಕೆ
-
ದಿನದ ಸುದ್ದಿ6 days ago
ಬೆಂಗಳೂರಿನಲ್ಲಿ ಬಿಜೆಪಿ ನೂತನ ಮಾಧ್ಯಮಕೇಂದ್ರ ಆರಂಭ
-
ದಿನದ ಸುದ್ದಿ5 days ago
ಲೋಕಸಭಾ ಚುನಾವಣೆ | ಹೊಸ ಮತದಾರರೆಷ್ಟು ಗೊತ್ತಾ..?
-
ದಿನದ ಸುದ್ದಿ5 days ago
ಕವಿತೆ | ನೆನಪು
-
ದಿನದ ಸುದ್ದಿ3 days ago
ಚುನಾವಣಾ ಅಕ್ರಮ ; ಸಾರ್ವಜನಿಕರು ದೂರು ಸಲ್ಲಿಸಲು ಆಯೋಗದಿಂದ ಸಿ-ವಿಜಿಲ್ ಆಪ್ ಅಭಿವೃದ್ಧಿ
-
ದಿನದ ಸುದ್ದಿ2 days ago
ಲೋಕಸಭಾ ಚುನಾವಣೆಯ ಮೊದಲ ಹಂತಕ್ಕೆ ನಾಮಪತ್ರ ಸಲ್ಲಿಕೆಗೆ ಇಂದು ಕೊನೆಯ ದಿನ