Connect with us

ಲೈಫ್ ಸ್ಟೈಲ್

ಪ್ರಾಣಿಗಳಲ್ಲಿ ಕೊರೋನಾ ವೈರಾಣು ಸತ್ಯ ಮತ್ತು ಮಿಥ್ಯ : ಮಿಸ್ ಮಾಡ್ದೆ ಓದಿ

Published

on

  • ಅನೇಕ ದಿನಗಳಿಂದ ವೈರಸ್ ಕೊರೋನಾ “ವೈರಲ್” ಆಗಿದೆ. ಸಾಮಾಜಿಕ ಜಾಲತಾಣಗಳು, ವ್ರತ್ತ ಪತ್ರಿಕೆಗಳು, ಬಾಯಿ ಸುದ್ದಿ, ಗಾಳಿ ಸುದ್ದಿ, ಫೋನ್ ಸುದ್ದಿ ಎಲ್ಲವೂ ಕರೋನಾಮಯ. ಇನ್ನು ಎಲೆಕ್ಟ್ರಾನಿಕ್ ಮಾಧ್ಯಮಗಳ ಬಗ್ಗೆಯಂತೂ ಹೇಳುವುದೇ ಬೇಡ. ಇಡೀ ದಿನ ಕರೋನಾ ಬಿಟ್ಟರೆ ಬೇರೊಂದಿಲ್ಲ. ಎಲ್ಲರಿಗೂ ಸಿಕ್ಕಾಪಟ್ಟೆ ಬಿಡುವು ಇರುವುದರಿಂದ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರೀಯರಾಗಿದ್ದಾರೆ. ಈ ಕರೋನಾ ಬಗ್ಗೆ ಬರೆಯೋದೇನಿದೆ ಎಂದು ಬೇರೆ ಕೆಲಸಗಳಲ್ಲಿ ಮಗ್ನನಾಗಿದ್ದೆ. ಈ ಮಧ್ಯೆ ಪ್ರಾಣಿಗಳಲ್ಲೂ ಕರೋನಾ ಎಂಬ ಸುದ್ಧಿ ಕೇಳಿ ಪ್ರತಿಕ್ರಿಯೆ ನೀಡಲಾರಂಭಿಸಿದೆ. ಆಗ ಅನಿಸಿದ್ದು ಪ್ರಾಣಿಗಳಲ್ಲೂ ಕರೋನಾದ ಬಗ್ಗೆ ಬರೆಯಬೇಕು ಎಂದು. ಕೆಲವು ಆಸಕ್ತಿದಾಯಕ ವಿಷಯಗಳಿವೆ. ಹಂಚಿಕೊಳ್ಳುವೆ. ಎಂದಿನಂತೆ ಓದಿ. ಪ್ರೋತ್ಸಾಹಿಸಿ.

-ಡಾ.ಎನ್.ಬಿ.ಶ್ರೀಧರ

ಇತ್ತೀಚೆಗಷ್ಟೇ ಚೀನಾದಲ್ಲಿ ಕಾಣಿಸಿಕೊಂಡ ಕೊರೊನಾ ವೈರಸ್‌, ಇದೀಗ ವಿಶ್ವವನ್ನೇ ಗಡಗಡ ನಡುಗಿಸುತ್ತಿದೆ. ಕೊರೊನಾ ವೈರಸ್ ಹಾವಳಿ ದಿನೇದಿನೆ ಹೆಚ್ಚುತ್ತಿದ್ದು, ಜನಸಾಮಾನ್ಯರಲ್ಲಿ ತಲ್ಲಣ ಉಂಟುಮಾಡಿದೆ. ಕೊರೊನಾ ವೈರಸ್‌ನಿಂದಾಗಿ ವಿಶ್ವದಾದ್ಯಂತ ಈ ಕ್ಷಣದವರೆಗೆ ( 27-03-2020, 1.41 ಮಧ್ಯಾಹ್ನ) ಅಧೀಕೃತವಾಗಿ ಬಾಧಿತರ ಸಂಖ್ಯೆ 532,263 ಇದ್ದರೆ ಸಾವಿನ ಸಂಖ್ಯೆ 24,090. ಭಾರತದಲ್ಲಿ ಕೊರೋನಾ ಪೀಡಿತರ ಈ ಸಂಖ್ಯೆ  733ಕ್ಷಣದ ವರೆಗೆ ಇದ್ದರೆ ಮತ್ತು ಸಾವಿನ ಸಂಖ್ಯೆ 13 ಕ್ಕೆ ಏರಿದೆ. ಕರ್ನಾಟಕದಲ್ಲಿ ಭಾದೆಗೊಳಗಾದವರು 74 ಮೃತಪಟ್ಟವರ ಸಂಖ್ಯೆ6. ಇದು ಈ ಕ್ಷಣದ ವರೆಗಿನ ಸುದ್ಧಿ. ಇದು ಕ್ಷಣ ಕ್ಷಣಕ್ಕೂ ಜಾಸ್ತಿಯಾಗುತ್ತಲೇ ಇದೆ.

ಕೊರೊನಾ ಎಂಬುದು ಪ್ರಾಣಿಗಳಲ್ಲಿ ಅನಾರಾಗ್ಯವನ್ನು ಉಂಟುಮಾಡಬಲ್ಲ ವೈರಸ್‌ಗಳ ಬೃಹತ್‌ ಗುಂಪಾಗಿದೆ. ಈ ವೈರಸ್‌ಗಳು ಹೆಚ್ಚಾಗಿ ಉಸಿರಾಟದ ತೊಂದರೆ ಉಂಟುಮಾಡುತ್ತವೆ. ಸಾಮಾನ್ಯ ಶೀತವನ್ನು ಉಂಟುಮಾಡುವ ವೈರಸ್‌ನಿಂದ ಹಿಡಿದು, ಅತ್ಯಂತ ಅಪಾಯಕಾರಿಯಾದ ಮೆರ್ಸ್‌ (ಮಿಡಲ್‌ ಈಸ್ಟ್‌ ರೆಸ್ಪಿರೇಟರಿ ಸಿಂಡ್ರೋಂ), ಸಾರ್ಸ್‌ (ಸಿವಿಯರ್‌ ಅಕ್ಯೂಟ್‌ ರೆಸ್ಪಿರೇಟರಿ ಸಿಂಡ್ರೋಂ), ಇತ್ತೀಚೆಗೆ ಕಾಣಿಸಿಕೊಂಡಿರುವ ಕೊರೊನಾ ವೈರಸ್‌ ಡಿಸೀಸ್‌ (COVID-19), ಈ ಎಲ್ಲ ವೈರಸ್‌ಗಳೂ ಒಂದೇ ಗುಂಪಿಗೆ ಸೇರುತ್ತವೆ.

COVID-19 ಎಂದರೆ, ಇದೂ ಕೂಡ ಸೋಂಕನ್ನು ಉಂಟುಮಾಡಬಲ್ಲ ವೈರಸ್‌. ಇದು ಕೊರೊನಾ ವೈರಸ್‌ಗಳ ಪೈಕಿ ಇತ್ತೀಚೆಗೆ ಚೀನಾದಲ್ಲಿ ಪತ್ತೆಯಾಗಿ, ವಿಶ್ವಾದ್ಯಂತ ಹರಡುತ್ತಿರುವ ವೈರಸ್‌ ಆಗಿದೆ. ಚೀನಾದ ವುಹಾನ್‌ನಲ್ಲಿ 2019ರ ಡಿಸೆಂಬರ್‌ನಲ್ಲಿ ಪತ್ತೆಯಾಗುವ ಮೊದಲು ಈ ವೈರಸ್ ಕುರಿತು ವಿಶ್ವಕ್ಕೆ ಪರಿಚಯ ಇರಲಿಲ್ಲ.

ಕೊರೊನಾ ಸೋಂಕಿನ ಲಕ್ಷಗಳು ಹಂತಹಂತವಾಗಿ ಕಾಣಿಸಿಕೊಳ್ಳುತ್ತೆ. ಇದರಲ್ಲಿ ರೋಗಲಕ್ಷಣ ರಹಿತ, ಸೌಮ್ಯ, ತೀವ್ರ ಮತ್ತು ಮಾರಣಾಂತಿಕ ಎಂಬ ಹಂತಗಳಿವೆ. ಸಾಮಾನ್ಯ ರೋಗಲಕ್ಷಣಗಳು ಜ್ವರ, ಕೆಮ್ಮು, ಏದುಸಿರು ಮತ್ತು ಉಸಿರಾಟ ಕಷ್ಟವಾಗುವುದು ಮೊದಲಾದ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಸೋಂಕು ತೀವ್ರವಾದ ಪ್ರಕರಣಗಳಲ್ಲಿ ನ್ಯುಮೋನಿಯಾ, ಮೂತ್ರಪಿಂಡ ವೈಫ‌ಲ್ಯ ಮತ್ತು ಬಹು ಅಂಗಾಂಗ ವೈಫ‌ಲ್ಯಕ್ಕೂ ಕಾರಣವಾಗಬಹುದು.

ವೈರಸ್ಸಿಗೆ ನೋವೆಲ್‌ ಕೊರೊನಾ ವೈರಸ್‌ ಎಂದು ಕರೆಯುವುದೇಕೆ?

ಈ ಹಿಂದೆ, ಪ್ರಾಣಿಗಳಲ್ಲಾಗಲಿ, ಮನುಷ್ಯರಲ್ಲಾಗಲಿ ಕಾಣಿಸಿಕೊಳ್ಳದೇ ಇದ್ದು, ಇದೇ ಮೊದಲ ಬಾರಿಗೆ ಕಾಣಿಸಿಕೊಳ್ಳುವ ಕೊರೊನಾ ವೈರಸ್‌ಗೆ ನೋವೆಲ್‌ ಕೊರೊನಾ ವೈರಸ್‌ ಎಂದು ಕರೆಯುತ್ತಾರೆ.

ವೈರಸ್‌ನ ನೈಸರ್ಗಿಕ ಮೂಲ ಯಾವುದು?

ಕೊರೊನಾ ವೈರಸ್‌ಗಳ ನೈಸರ್ಗಿಕ ಮೂಲಗಳೆಂದರೆ ಪ್ರಾಣಿಗಳು. ಅದರಲ್ಲೂ ಸಸ್ತನಿಗಳು ಈ ವೈರಸ್ಸುಗಳಿಗೆ ಆವಾಸಸ್ಥಾನ ಎನ್ನಬಹುದು. ಬಾವಲಿಗಳು ಈ ವೈರಸ್‌ಗಳಿಗೆ ಆಶ್ರಯ ನೀಡುವ ಪ್ರಮುಖ ಜೀವಿಗಳು. ಪುನುಗು ಬೆಕ್ಕು ಅಥವಾ ಸಿವೆಟ್ ಕ್ಯಾಟ್ ಇದು SARS-CoV ಈ ಕಾಯಿಲೆ ಹಬ್ಬಿಸಿದರೆ, ಒಂಟೆ ಮತ್ತು ಬಾವಲಿಗಳು MERS-CoV ಅಥವಾ COVID 19 ನ್ನು ಹರಡುತ್ತವೆ. ಸಾಕು ಪ್ರಾಣಿಗಳೂ ಸೇರಿದಂತೆ ಹಲವು ಪ್ರಾಣಿಗಳಲ್ಲಿಯೂ ಕೊರೋನಾ ವರ್ಗದ ವೈರಸ್‌ಗಳು ಇರುತ್ತವೆ.

ಪುನುಗು ಬೆಕ್ಕು, ಒಂಟೆ ಮತ್ತು ಬಾವಲಿ ಇವು ಈ ವೈರಸ್ಸಿನ ಸಂಗ್ರಾಹಕಗಳಾಗಿರುತ್ತವೆ. ಆಕಳುಗಳು, ಹಂದಿ, ನಾಯಿ, ಬೆಕ್ಕು, ಕೋಳಿ ಇತ್ಯಾದಿ ಅನೇಕ ಪ್ರಾಣಿಗಳಲ್ಲಿ ಕರೋನಾ ವೈರಾಣು ರೋಗ ತಂದರೂ ಸಹ ಅವುಗಳಿಂದ ಮನುಷ್ಯರಿಗೆ ಬರುವ ಬಗ್ಗೆ ದಾಖಲೆಗಳಿಲ್ಲ.

ಪ್ರಾಣಿಗಳಲ್ಲಿ ಕರೋನಾ ವೈರಾಣು ರೋಗ

ಸಾಕು ಪ್ರಾಣಿಗಳಿಂದ ಕೊರೊನಾ ವೈರಸ್ ಹರಡಬಹುದು ಎನ್ನುವ ಭಯದಿಂದ ಕೆಲವರು ತಮ್ಮ ಮನೆಯಲ್ಲಿ ಇರುವ ನಾಯಿ, ಬೆಕ್ಕುಗಳನ್ನು ದೂರ ಮಾಡುತ್ತಿದ್ದಾರೆ. ಆದರೆ ಈ ಪ್ರಾಣಿಗಳಿಂದ ಕರೋನಾ ಕಾಯಿಲೆ ಬರುವ ಯಾವುದೇ ದಾಖಲೆ ಇಲ್ಲ. ಬಾಲಿವುಡ್ ನಟಿ ರಾಖಿ ಸಾವಂತ್ ಚೀನಾದ ಪಾಪಿ ಜನರು ಕಾಡು ಪ್ರಾಣಿಗಳನ್ನು ತಿಂದು ಕೊರೊನಾ ವೈರಸ್ ಹರಡಿಸಿದ್ದಾರೆ ಎಂದು ಹೇಳುವ ಮೂಲಕ ವಿಡಿಯೋವೊಂದನ್ನು ಪೋಸ್ಟ್ ಮಾಡಿದ್ದರೂ ಸಹ ಪ್ರಾಣಿಗಳ ಮಾಂಸ ತಿನ್ನುವುದರಿಂದ ಕರೋನಾ ಬರುತ್ತದೆ ಎಂಬುದರ ಬಗ್ಗೆ ಯಾವುದೇ ದಾಖಲೆ ಇಲ್ಲ.

ಕೋಳಿಗಳಿಂದ ಕರೋನಾ ಬರುತ್ತದೆ ಎಂದು ಸಹಸ್ರ ಸಂಖ್ಯೆಯಲ್ಲಿ ಕೋಳಿಗಳನ್ನು ನಾಶ ಮಾಡಿದ್ದು ಇದ್ದಕ್ಕಿದ್ದಂತೆ ಜನ ಕೋಳಿ ತಿನ್ನುವುದನ್ನು ನಿಲ್ಲಿ ಸುಖಾ ಸುಮ್ಮನೇ ಆ ಉಧ್ಯಮ ನೆಲ ಕಚ್ಚುವಂತೆ ಮಾಡಿದ್ದು ಈಗ ಇತಿಹಾಸ. ಕೇವಲ ಊಹಾಪೋಹಗಳನ್ನು ನಂಬಿ ವಿಜ್ಞಾನವನ್ನು ಮೂಲೆಗೊತ್ತಿದ್ದರ ಪರಿಣಾಮವೇ ಇದು.

ಸಾಕು ಪ್ರಾಣಿಗಳು ಕರೋನಾ ವಾಹಕಗಳೇ?

ಅಲ್ಲ. ನಾಯಿ ಮತ್ತು ಬೆಕ್ಕುಗಳಲ್ಲಿ ಈ ಕೊರೊನಾ ವೈರಸ್ ಸಾಮಾನ್ಯ. ಆದರೆ ಈಗ ಬಂದ COVID 19 ಕ್ಕೂ ಪ್ರಾಣಿಗಳಲ್ಲಿ ಬರುವ ಕರೋನಾ ವೈರಸ್ ರೋಗಕ್ಕೂ ಯಾವುದೇ ಸಂಬಂಧವಿಲ್ಲ. ಹುವಾನಾನ್ ಸಮುದ್ರಾಹಾರ ಮಾರುಕಟ್ಟೆಯಲ್ಲಿ ಈ ವೈರಸ್ ಮೊದಲು ಕಾಣಿಸಿಕೊಂಡಿದೆ. ಇಲ್ಲಿ ಅನೇಕ ಕಾಡು ಪ್ರಾಣಿಗಳು ಮತ್ತು ಸಮುದ್ರ ಪ್ರಾಣಿಗಳನ್ನು ಜೀವಂತವಾಗಿ ಮಾರಾಟ ಮಾಡಲಾಗುತ್ತಿತ್ತು. ಪುನುಗು ಬೆಕ್ಕು ಮತ್ತು ಬಾವಲಿಗಳನ್ನು ಸೇರಿಸಿಕೊಂಡು ಇಲ್ಲಿನ ಜನ ಹುರಿದು ಮುಕ್ಕಿದ್ದಕ್ಕೆ ಶಿಕ್ಷೆಯಾಗಿ ಇಡಿ ಪ್ರಪಂಚವನ್ನು ಕೊರೋನಾ ಮಾರಿ ಹುರಿದು ಮುಕ್ಕುತ್ತಿದೆ ಎಂಬುದು ದಾರ್ಶನಿಕರ ಕೊಂಕು ನುಡಿ. ಆದರೂ ಇಲ್ಲಿ ಕೊರೊನಾ ವೈರಸ್ ಸೋಂಕು ಹರಡಲು ನಿಖರ ಕಾರಣವೇನೆಂದು ಇನ್ನೂ ದೃಢಪಡಿಸಿಲ್ಲ. ಅಲ್ಲಿ ವೈರಸ್ ಪ್ರಥಮವಾಗಿ ಉಗಮವಾಗಿರಬಹುದೇ ಹೊರತು ಯಾವುದೇ ಪ್ರಾಣಿಗಳ ಮಾಂಸ ತಿಂದರೆ ಕರೋನಾ ಕಾಯಿಲೆ ಬರುವುದೆಂದು ದೃಢಪಟ್ಟಿಲ್ಲ.

ಬೆಕ್ಕು,ನಾಯಿ, ಹಂದಿ, ಜಾನುವಾರುಗಳು, ಕುದುರೆ, ಕೋಳಿ,ಇಲಿ ಮತ್ತು ಅಷ್ಟೇಕೆ ಮೀನಿನಲ್ಲಿಯೂ ಸಹ ಕರೋನಾ ವೈರಾಣು ಕಾಯಿಲೆ ಬರುತ್ತದೆ ಎಂಬ ಪ್ರತೀತಿ ಇದೆ. ಅನೇಕ ಪ್ರಾಣಿಗಳಲ್ಲಿ ಕರೋನಾ ವೈರಾಣುಗಳ ವಿವಿಧ ಪ್ರಬೇಧಗಳಿಂದ ಕಾಯಿಲೆ ಬರುತ್ತದೆ. ಸುಮಾರು ೧೬ ಕ್ಕಿಂತ ಜಾಸ್ತಿ ಕಾಯಿಲೆಗಳು ಈ ವೈರಾಣುವಿನಿಂದ ಬಂದರೂ ಸಹ ಪ್ರಾಣಿಗಳಿಗೆ ಬರುವ ಕರೋನಾ ವೈರಾಣು ಕಾಯಿಲೆ ಮನುಷ್ಯನಿಗೆ ಹರಡಿದ್ದಕ್ಕೆ ಯಾವುದೇ ದಾಖಲೆಗಳಿಲ್ಲ.

ಈ ಕೆಳಗಿನ ಕೋಷ್ಟಕ ಗಮನಿಸಿದರೆ ಪ್ರಾಣಿಗಳಲ್ಲಿ ಕರೋನಾ ವೈರಾಣುವಿನ ಉಪಪ್ರಬೇಧದದಿಂದ ಬರುವ ಅನೇಕ ಕಾಯಿಲೆಗಳ ವಿವರ ಸಿಗುತ್ತದೆ.

ಉಪ ಕುಟುಂಬ: ಕರೋನಾ ವೈರಿನೇ,ಜೀನಸ್ : ಅಲ್ಫಾ ಕರೋನಾ ವೈರಸ್

  1. ಫಿಲೈನ್ ಕರೋನಾ ವೈರಸ್ (ಫಿಲೈನ್ ಎಂಟರಿಕ್ ಕರೋನಾ ವೈರಸ್, ಫಿಲೈನ್ ಇನ್ಫೆಕ್ಷಿಯಸ್ ಪೆರಿಟೋನೈಟಿಸ್ ವೈರಸ್) ಬೆಕ್ಕು, ಹುಲಿ, ಸಿಂಹ, ಚಿರತೆ ಬೆಕ್ಕು, ಹುಲಿ ಮತ್ತು ಈ ಪ್ರಬೇಧಕ್ಕೆ ಸೇರಿದ ಪ್ರಾಣಿಗಳಲ್ಲಿ ಅಲ್ಪ ಪ್ರಮಾಣದ ಭೇಧಿ ಮತ್ತು ವಾಂತಿ ಭೇಧಿ ಉಂಟು ಮಾಡುವುದು. ನೇರ ಸಂಪರ್ಕ, ಸೋಂಕಿತ ಮಲದ ಮೂಲಕ, ಬೇಧಿ ಸಂಪರ್ಕ,ರಕ್ತ, ಮೂತ್ರ ಇತ್ಯಾದಿ ಉತ್ತಮ ಗುಣಮಟ್ಟದ ಪ್ರತ್ಯೇಕಿಸುವಿಕೆ, ಹರಡುವಿಕೆಯ ಚಕ್ರದ ನಿಯಂತ್ರಣ.
  2. ಕೆನೈನ್ ಕರೋನಾ ವೈರಸ್ ನಾಯಿ, ತೋಳ, ನರಿ ವಾಂತಿಭೇಧಿ, ತೀವ್ರವಾದ ವಾಂತಿ, ಭೇಧಿ ಮತ್ತು ಬಿಳಿರಕ್ತ ಕಣಗಳ ಕಡಿಮೆಯಾಗುವಿಕೆ ಸೋಂಕಿತ ಮಲದ ಮೂಲಕ ನಿಷ್ಕ್ರಿಯೆಗೊಳಿಸಿದ ಲಸಿಕೆ.
  3. ಟ್ರಾನ್ಸ್ಮಿಸಿಬಲ್ ಗ್ಯಾಸ್ಟ್ರೋಎಂಟರೈಟಿಸ್ ಹಂದಿ ಸ್ವಲ್ಪ ಪ್ರಮಾಣದ ಭೇಧಿ ಆದರೆ ನೀರು ಭೇಧಿ ,ವಾಂತಿ,ನಿರ್ಜಲೀಕರಣ ಸೋಂಕಿತ ಮಲದ ಮೂಲಕ ಬಾಯಿಯ ಮೂಲಕ ನೀಡುವ ನಿಷ್ಕ್ರಿಯೆಗೊಳಿಸಿದ ಲಸಿಕೆ.
  4. ಪೋರ್ಸೈನ್ ರೆಸ್ಪಿರೇಟರಿ ಕರೋನಾ ವೈರಸ್ ಹಂದಿ ಮಂದ ಸ್ವರೂಪದ ಕಾಯಿಲೆ ಗಾಳಿಯ ಮೂಲಕ ಲಸಿಕೆ ಇಲ್ಲ.
  5. ಪೋರ್ಸೈನ್ ಎಪಿಡೆಮಿಕ್ ಡಯೇರಿಯಾ ಕರೋನಾ ವೈರಸ್ ಹಂದಿ ಭೇಧಿ, ನೀರು ಭೇಧಿ ,ವಾಂತಿ,ನಿರ್ಜಲೀಕರಣ ಸೋಂಕಿತ ಮಲದ ಮೂಲಕ ಗರ್ಭಿಣಿ ಹಂದಿಗಳಿಗೆ ನಿಷ್ಕ್ರಿಯಗೊಳಿಸಿದ ಲಸಿಕೆ ಮತ್ತು ನಿರ್ಜೀವ ವೈರಾಣು ಲಸಿವೈರಸ್, ಕುಟುಂಬ: ಕರೋನಾ ವೈರಿನೇ,ಜೀನಸ್ : ಬ್ಯಾಕ್ಟೊ ಕರೋನಾ ವೈರಸ್,ಗುಂಪು ಎ
  6. ಪೋರ್ಸೈನ್ ಹೀಮ್ ಅಗ್ಲುಟಿನೇಟಿಂಗ್ ಕರೋನಾ ವೈರಸ್ ಹಂದಿ ಭೇಧಿ, ಅಹಾರ ಸೇವಿಸದಿರುವಿಕೆ,ಮೆದುಳಿನ ಉರಿಯೂತ, ನಡುಕ,ಬಡಕಲಾಗುವಿಕೆ ನೇರಸಂಪರ್ಕ, ಮೂಗಿನ ಮೂಲಕ, ಸ್ರಾವಕಗಳು ಉತ್ತಮ ನಿರ್ವಹಣೆ.ಲಸಿಕೆ ಇಲ್ಲ.ಮೌಸ್ ಹೆಪಟೈಟಿಸ್ ವೈರಸ್.ರಾಟ್ ಕರೋನಾ ವೈರಸ್ ಚಿಕ್ಕಿಲಿ.
  7. ಇಲಿ ಭೇಧಿ, ಪಿತ್ತಜನಕಾಂಗದ ಉರಿಯೂತ, ಮೆದುಳಿನ ಉರಿಯೂತ, ಮೆದುಳಿನ ಉರಿಯೂತ, ನೇರಸಂಪರ್ಕ, ಮೂಗಿನ ಮೂಲಕ, ಸ್ರಾವಕಗಳು ಉತ್ತಮ ನಿರ್ವಹಣೆ.
    ಲಸಿಕೆ ಇಲ್ಲ.
  8. ಬೊವೈನ್ ಕರೋನಾ ವೈರಸ್ ಆಕಳು ಮತ್ತು ಜಾನುವಾರುಗಳು ತೀವ್ರ ರಕ್ತ ಬೇಧಿ, ನಿರ್ಜಲೀಕರಣ,ಹಾಲಿನ ತೀವ್ರ ಇಳಿಮುಖ, ಶ್ವಾಸದ ತೊಂದರೆ ಸಗಣಿ, ವಾಯುದ್ರವ ತಾಯಿಂದ ಬರುವ ರೋಗತಡೆಗಟ್ಟುವ ಶಕ್ತಿ
  9. ಇಕ್ವೈನ್ ಕರೋನಾ ವೈರಸ್
    ಕುದುರೆ, ಕತ್ತೆವಾಂತಿ ಬೇಧಿ, ಶ್ವಾಸದ ತೊಂದರೆ ಮಲ, ವಾಯುದ್ರವ ತಾಯಿಂದ ಮರಿಗಳಿಗೆ ಬರುವ ರೋಗತಡೆಗಟ್ಟುವ ಶಕ್ತಿ.ಗುಂಪು ಬಿ.
  10. ಸಿವಿಯರ್ ಅಕ್ಯುಟ್ ರೆಸ್ಪಿರೇಟರಿ ಸಿಂಡ್ರೋಮ್ (ಸಾರ್ಸ್) ಮನುಷ್ಯ ತೀವ್ರತರ ಶ್ವಾಸದ ತೊಂದರೆ
    (ಬಾವಲಿಗಳು ವೈರಾಣುಗಳ ಸಂಗ್ರಹಕಗಳು) ವಾಯುದ್ರವ.ಸಿಂಬಳ ಲಸಿಕೆ ಇಲ್ಲ.ಕ್ವಾರಂಟೈನ್ ಮಾತ್ರ.ಗುಂಪು ಸಿ.
  11. ಮಿಡ್ಲ್ ಈಸ್ಟ್ ರೆಸ್ಪಿರೇಟರಿ ಸಿಂಡ್ರೋಮ್
    (ಮೆರ್ಸ್)ಇದು ಈಗ ಇಡೀ ಪ್ರಪಂಚಕ್ಕೆ ಹಬ್ಬಿರುವುದು ಮನುಷ್ಯ ತೀವ್ರತರ ಶ್ವಾಸದ ತೊಂದರೆ(ಒಂಟೆ ಮತ್ತು ಬಾವಲಿಗಳು ವೈರಾಣುಗಳ ಸಂಗ್ರಹಕಗಳು) ವಾಯುದ್ರವ,ಸಿಂಬಳ ಲಸಿಕೆ ಇಲ್ಲ,ಚಿಕಿತ್ಸೆ ಇಲ್ಲ,
    ಕ್ವಾರಂಟೈನ್ ಮಾತ್ರ.ಉಪ ಕುಟುಂಬ: ಕರೋನಾ ವೈರಿನೇಜೀನಸ್ : ಗಾಮ್ಮಾ ಕರೋನಾ ವೈರಸ್
  12. ಏವಿಯನ್ ಇನ್ಫೆಕ್ಷಿಯಸ್ ಬ್ರೋಂಕೈಟಿಸ್ ವೈರಸ್ ಹಕ್ಕಿಗಳು ಶ್ವಾಸನಾಳದ ಉರಿಯೂತ, ಮೂತ್ರಜನಕಾಂಗದ ಉರಿಯೂತ ಶ್ವಾಸದ ತೊಂದರೆ ವಾಯುದ್ರವ.ಸಿಂಬಳ ಬಹು ವೈರಲ್ ಲಸಿಕೆ.
  13. ಟರ್ಕಿ ಕರೋನಾ ವೈರಸ್
  14. ಬ್ಲೂ ಕೋಂಬ್ ವೈರಸ್ ಟರ್ಕಿಗಳು ಬೇಧಿ, ಕಪ್ಪು ಚರ್ಮ, ಖಿನ್ನತೆ ಮಲ, ವಾಯುದ್ರವ ನಿಷ್ಕ್ರಿಯಗೊಳಿಸಿದ ಲಸಿಕೆ
    ಉಪ ಕುಟುಂಬ: ಕರೋನಾ ವೈರಿನೇ
    ಜೀನಸ್ : ಡೆಲ್ಟಾ ಕರೋನಾ ವೈರಸ್
  15. ಪೋರ್ಸೈನ್ ಡೆಲ್ಟಾ ಕರೋನಾ ವೈರಸ್ ಹಾಲು ನೀಡುತ್ತಿರುವ ಹಂದಿಗಳು ವಿಶೇಷ ಲಕ್ಷಣಗಳಿಲ್ಲ
    ಕಡಿಮೆ ಸಾವು ಮಲ ಲಸಿಕೆ ಇಲ್ಲ.
  16. ಉಪ ಕುಟುಂಬ: ಟೋರೋ ವೈರಿನೇ
    ಜೀನಸ್ : ಟೋರೋ ವೈರಸ್
  17. ಬ್ರೇಡಾ ವೈರಸ್ ಜಾನುವಾರುಗಳು ಬೇಧಿ, ನಿರ್ಜಲೀಕರಣ ಮಲ ಲಸಿಕೆ ಇಲ್ಲ
    ಉಪ ಕುಟುಂಬ: ಟೋರೋ ವೈರಿನೇ
    ಜೀನಸ್ : ಟೋರೋ ವೈರಸ್ವೈಟ್ ಬ್ರೀಮ್ ವೈರಸ್.
  18. ಫೆದರ್ಡ್ ಮಿನೋ ವೈರಸ್ ಮೀನು ಚರ್ಮ ಮತ್ತು ಕಣ್ಣುಗಳಲ್ಲಿ ರಕ್ತ ಸ್ರಾವ ಕಲುಷಿತ ನೀರು ಲಸಿಕೆ ಇಲ್ಲ

ಬಾವಲಿ ಮತ್ತು ಕರೋನಾ ವೈರಾಣು

ಬಾವಲಿಗಳು ಎಲ್ಲಾ ರೀತಿಯ ಕರೋನಾ ವೈರಾಣು ಹರಡುವಲ್ಲಿ ಅತ್ಯಂತ ಮಹತ್ತರ ಪಾತ್ರ ವಹಿಸಿವೆ. ಸಿವಿಯರ್ ಅಕ್ಯುಟ್ ರೆಸ್ಪಿರೇಟರಿ ಸಿಂಡ್ರೋಮ್ (ಸಾರ್ಸ್) ಎಂದು ಕರೆಯುವ ಮನುಷ್ಯನ ಸಾವನ್ನು ಅಪೇಕ್ಷಿಸುವ ಕರೋನಾ ವೈರಾಣು ಕಾಯಿಲೆ ಸಹ ಬಾವಲಿಗಳಿಂದಲೇ ಹರಡಿದೆ ಎಂದರೆ ನಿಮಗೆ ಆಶ್ಚರ್ಯವಾಗಬಹುದು. ಹಂದಿಗಳಲ್ಲಿ ಕರೋನಾ ವೈರಾಣು ಕಾಯಿಲೆ ಹರಡಲು ಸಹ ಈ ಬಾವಲಿಗಳೇ ಕಾರಣ. ಆದರೆ ಈ ಬಾವಲಿಗಳಲ್ಲಿ ರೋಗದ ಯಾವುದೇ ಲಕ್ಷಣಗಳು ಕಂಡು ಬರುವುದಿಲ್ಲ. ಕಾರಣ ಬಾವಲಿಗಳನ್ನು “ ಅತಿಥೇಯ ಸಂಗ್ರಾಹಕ” ಎನ್ನಬಹುದು. ಈಗ ಬರುತ್ತಿರುವ COVID-

ಇದಕ್ಕೆ ಒಂಟೆಗಳ ಮೂಲಕ ಮನುಷ್ಯರಿಗೆ ವೈರಸ್ ಹರಡಲು ಮೂಲಕಾರಣ ಬಾವಲಿಗಳು ಎಂದರೆ ತಪ್ಪಾಗಲಿಕ್ಕಿಲ್ಲ. ಮಧ್ಯಪ್ರಾಚ್ಯ ದೇಶಗಳಲ್ಲಿಯೇ ಈ ಕೊರೊನಾ ಮಹಾಮಾರಿ ಜನನವಾಗಿರುವುದು. ಇದಕ್ಕೇ ಇರಬಹುದು COVID-19 ಇದಕ್ಕೆ “ಮಿಡ್ಲ್ ಈಸ್ಟ್ ರೆಸ್ಪಿರೇಟರಿ ಸಿಂಡ್ರೋಮ್ (ಮೆರ್ಸ್)” ಎಂದು ಕರೆಯುವುದು. ಬಹುಶ: ಬಾವಲಿಗಳಿಂದ ಒಂಟೆಗಳಿಗೆ ಸಾಗಿದ ಕರೋನಾ ವೈರಸ್ ಮಧ್ಯಪ್ರಾಚ್ಯದ ಜನರಿಗೆ ಹಬ್ಬಿರಬಹುದು ಎಂಬ ಪ್ರತೀತಿ ಇದೆ. ಕರ್ನಾಟಕದಲ್ಲಿಯೂ ಸಹ ಮಧ್ಯಪ್ರಾಚ್ಯ ದೇಶಗಳಿಗೆ ಹೋಗಿ ಬಂದವರಿಂದ ಹರಡಿದ ಕರೋನಾ ಜಾಸ್ತಿ ಇರುವುದಕ್ಕೆ ಇದೇ ಕಾರಣವಿರಬಹುದೇನೋ?

ಪುನುಗು ಬೆಕ್ಕು (ಹಿಮಾಲಯನ್ ಪಾಮ್ ಸಿವೆಟ್) ಮತ್ತು ಕರೋನಾ ವೈರಾಣು

ಪುನುಗು ಬೆಕ್ಕು (ಹಿಮಾಲಯನ್ ಪಾಮ್ ಸಿವೆಟ್ ಕ್ಯಾಟ್) ಇವು ಬೆಕ್ಕಿನ ಜಾತಿಗೆ ಸೇರಿಲ್ಲ. ಮುಂಗುಸಿ ಜಾತಿಗೆ ಸೇರಿದ ಇವು ಹಲ್ಲಿ, ಹಾವು, ಕಪ್ಪೆ, ಇಲಿ ಇತ್ಯಾದಿ ಹಿಡಿದು ತಿನ್ನುತ್ತವೆ. ಚೈನಾದ ಹುವಾನಿನಲ್ಲಿ ಇವುಗಳನ್ನು ಹಿಡಿದು ಹುರಿದು ಮುಕ್ಕಿದ್ದರಿಂದ ಕರೋನಾ ಕಾಯಿಲೆ ಬಂದಿರಬಹುದೆಂದು ಊಹಿಸಲಾಗಿದೆ. ಇವು ಮಹತ್ತರವಾದ ಕರೋನಾ ವಾಹಕಗಳು. ನಮ್ಮ ದೇಶದ ಈಶಾನ್ಯ ಪ್ರಾಂತ್ಯದಲ್ಲಿ ಇವು ಇದ್ದರೂ ಸಹ ಯಾರು ಇವನ್ನು ತಿನ್ನುವ ಗೊಡವೆಗೆ ಹೋಗುವುದಿಲ್ಲ. ಇವುಗಳಿಂದ ಹೊರಸೂಸುವ “ಪುನುಗು” ಎಂಬ ಸುಗಂಧ ದ್ರವ್ಯಕ್ಕೆ ಆಸೆ ಪಟ್ಟು ಬೇಟೆಯಾಡಿ ಇವು ವಿನಾಶದಂಚು ತಲುಪಿವೆ.

ಈ ಪ್ರಾಣಿಗಳು ಚೈನಾ, ಭಾರತ ಮತ್ತು ಮಲೇಶಿಯಾದಲ್ಲಿದ್ದರೂ ಚೀನಿಯರು ಹಾವು, ಹುಳ ಹುಪ್ಪಟೆ ಮತ್ತು ಈ ತರಹದ ಇಲ್ಲ ಸಲ್ಲದ ಪ್ರಾಣಿಗಳನ್ನು ಹಿಡಿದು ಮುಕ್ಕುವುದರಿಂದ ಕರೋನಾ ಕಾಯಿಲೆ ಬಂದಿದೆ ಎಂದು ಜಗತ್ತಿನ ಜನಕ್ಕೆ ಚೀನಿಯರ ಮೇಲೆ ಕೋಪ. ಗಲೀಜು ಚೀನಿಯರು ಗುವಾಂಗ್ ಎಂಬ ಸ್ಥಳದ ಹೊಟೇಲೊಂದರಲ್ಲಿ ಅತ್ಯಂತ ಕೊಳಕು ರೀತಿಯಲ್ಲಿ ಈ ಸಿವೆಟ್ ಬೆಕ್ಕುಗಳನ್ನು ಕಡಿದು ಗ್ರಾಹಕರಿಗೆ ಹುರಿದು ಉಣಬಡಿಸಿದ್ದಕ್ಕೆ ಸಾರ್ಸ್ ಮಹಾಮಾರಿಯೂ ಸಹ ನುಸುಳಿದೆ ಎಂಬುದು ವೈಜ್ಞಾನಿಕವಾಗಿ ಸಾಬೀತಾಗಿದೆ. ಅದಕ್ಕೆ ಇಲ್ಲ ಸಲ್ಲದ ಪ್ರಾಣಿಗಳನ್ನೆಲ್ಲಾ ಕಡಿದು ತಿನ್ನಬಾರದು ಎನ್ನುವುದು.

ಒಂಟೆಗಳು ಮತ್ತು ಕರೋನಾ ವೈರಾಣು

ಒಂಟಿ ಡುಬ್ಬದ ಡ್ರೊಮೇಡರಿ ಒಂಟೆಗಳು ಕರೋನಾ ವೈರಾಣುಗಳ ವಾಹಕಗಳು ಎಂಬುದು ವಿವಾದಾತೀತವಾಗಿ ಸಬೂತಾಗಿದೆ. ಸಧ್ಯಕ್ಕೆ ವಿಶ್ವಕ್ಕೆ ಹೆಮ್ಮಾರಿಯಂತೆ ಅಂಟಿರುವ COVID-19 ಇದನ್ನು “ಮಿಡ್ಲ್ ಈಸ್ಟ್ ರೆಸ್ಪಿರೇಟರಿ ಸಿಂಡ್ರೋಮ್” (ಮೆರ್ಸ್) ಅಥವಾ “ಮಧ್ಯ ಪ್ರಾಚ್ಯ ಶ್ವಾಸಕೋಶದ ತೊಂದರೆ” ಎಂದೂ ಕರೆಯುತ್ತಾರೆ. ಇದು ಕರೋನಾ ವೈರಿನೇ ಉಪಕುಟುಂಬಕ್ಕೆ ಸೇರಿದ ಮತ್ತು ಜೀನಸ್ ಬ್ಯಾಕ್ಟೊ ಕರೋನಾ ವೈರಸ್ (ಗುಂಪು ಎ ) ಇದರಿಂದ ಬರುತ್ತದೆ. ಮಧ್ಯಪ್ರಾಚ್ಯ ದೇಶಗಳಾದ ಈಜಿಪ್ಟ್, ಓಮನ್, ಕ್ವತಾರ್ ಮತ್ತು ಸೌದಿ ಅರೇಬಿಯಾ ದೇಶಗಳಲ್ಲಿ ಇದು 2012 ನೇ ಸಾಲಿನಲ್ಲಿಯೇ ಕಾಣಿಸಿಕೊಂಡು ಮರಣ ಮ್ರದಂತಗ ಭಾರಿಸಿತ್ತು. ಅಲ್ಲಿ ಒಂಟೆಗಳ ಸಂಖ್ಯೆ ಜಾಸ್ತಿ ಇದ್ದು ಇವುಗಳಿಂದ ಮನುಷ್ಯರಿಗೆ ಬಂದಿದೆ ಎಂದು ಹೇಳಲಾಗುತ್ತಿದೆ.

ಹಾಗೆಂದು ಒಂಟೆಗಳಲ್ಲಿ ಯಾವುದೇ ರೋಗಲಕ್ಷಣ ಅಥವಾ ಕಂಡು ಬರದೇ ಇರುವುದರಿಂದ ಇವು ಈ ವೈರಾಣುಗಳ “ಸಂಗ್ರಾಹಕ” (Reservoir) ಗಳಾಗಿ ಕೆಲಸ ಮಾಡುತ್ತವೆ. ಈ ವೈರಾಣು ಒಂಟೆಗಳ ಹಾಲಿನಲ್ಲಿ ಹೇರಳವಾಗಿ ಸ್ರವಿಸಲ್ಪಡುತ್ತದೆ. ಈ ಮಧ್ಯಪ್ರಾಚ್ಯ ದೇಶಗಳಲ್ಲಿ ಒಂಟೆ ಹಾಲು ಔಷಧಿಯೆಂದು ಪರಿಗಣಿಸಲ್ಪಡುತ್ತದೆಯಂತೆ. ಕಾಯಿಸದೇ ಕುಡಿದ ಈ ಹಾಲಿನಿಂದ ಮನುಷ್ಯರಿಗೆ ಮೊದಲು ಬಂತು ಎಂಬುದು ಪ್ರತೀತಿ. ನಮ್ಮಲ್ಲಿಯೂ ಸಹ ಆಕಳಿಗೆ ಬೇಡದ ಶರೀರದ ತ್ಯಾಜ್ಯ ವಸ್ತುಗಳನ್ನು ಹೊರ ಚೆಲ್ಲಲು ಇರುವ ಗೋಮೂತ್ರವನ್ನು ಔಷಧಿಯೆಂದು ತಪ್ಪು ಗ್ರಹಿಕೆಯಿಂದ ಕುಡಿಯುವಂತೆ ಅಲ್ಲಿಯೂ ಸಹ ಒಂಟೆ ಮೂತ್ರವನ್ನು ಕುಡಿಯುತ್ತಾರಂತೆ.

ಇದೂ ಸಹ ವೈರಾಣು ಹರಡಲು ಕಾರಣ ಎನ್ನುತ್ತಾರೆ ವಿಜ್ಞಾನಿಗಳು. ಒಂಟೆಗಳಲ್ಲಿ ಹೇಗೆ ಈ ವೈರಾಣು ಬಂತು ಎನ್ನುವುದೂ ಸಹ ಕುತೂಹಲಕಾರಿ. 1950 ರಲ್ಲಿ ಕ್ವತಾರಿನ ಜನಸಂಖ್ಯೆ ಕೇವಲ 16,000 ಆದರೆ ತೈಲ ಸಂಪತ್ತು ಪತ್ತೆಯಾದ ನಂತರ ಅನೇಕ ದೇಶಗಳಿಂದ ವಲಸೆ ಬಂದು ಹೋದವರಿಂದ ಅದು ತುಂಬಿ ಹೋಗಿ 2016 ರ ಹೊತ್ತಿಗೆ ಇದು 2,617,634 ತಲುಪಿತು. ಅರಬ್ ದೇಶಗಳಲ್ಲಿ1983-2000 ರ ನಂತರ ತೈಲ ಕಂಪನಿಗಳು ಅಗಾದವಾದ ತೈಲ ಸಂಪತ್ತನ್ನು ಪತ್ತೆ ಹಚ್ಚಿದವು. ಇವುಗಳನ್ನು ಅವುಗಳ ಸ್ಥಾನದಿಂದ ಮಾರುಕಟ್ಟೆಗೆ ಒಯ್ಯಲು ಉತ್ತಮ ಕಡಿಮೆ ಖರ್ಚಿನ ಸಾಧನ ಬೇಕಿತ್ತು. ಆಗಿಂದ ಪ್ರಾರಂಭವಾಗಿದ್ದು ಈ ಒಂಟೆಗಳ ಸಾಕಣೆ ಮತ್ತು ಅವುಗಳ ಮೂಲಕ ತೈಲ ಸಾಗಣೆ.

ಸರ್ಕಾರವೂ ಸಹ ಒಂಟೆ ಸಾಕಣೆ ಪ್ರೋತ್ಸಾಹಿಸಿತು. ಪರಿಣಾಮವಾಗಿ ಒಂಟೆಗಳ ಸಂಖ್ಯೆಯಲ್ಲಿ ಅಗಾಧ ಏರಿಕೆಯಾಯಿತು. ಈ ಒಂಟೆಗಳನ್ನು ಸಾಕುವವರು ಒಂಟೆಗಳ ಸಂಖ್ಯೆಯೊಂದಿಗೇ ಜಾಸ್ತಿಯಾದರು. ಒಂಟೆಗಳ ಜೊತೆಯೇ ಇರುವ ಇವರಿಗೆ ಒಂಟೆಗಳನ್ನು ಭಾಧಿಸದ ಆದರೆ ಮನುಷ್ಯರನ್ನು ಕಾಡುವ ಕರೋನಾ ವೈರಾಣು ಭಾಧೆ ಜಾಸ್ತಿಯಾಯಿತು. ಇವರು ಪಟ್ಟಣಕ್ಕೆ ಬಂದು ಪಟ್ಟಣದ ಜನರಿಗೆ ಈ ವೈರಾಣು ಬಾಧೆ ತಗಲಿಸಿದರು. ಪೇಟೆಯ ಜನ ಇಡೀ ಪ್ರಪಂಚಕ್ಕೆ ಕರೋನಾ ವೈರಾಣುವನ್ನು ಬಳುವಳಿಯಾಗಿ ನೀಡಿದರು.

ಇದು ಸಾಕು ಪ್ರಾಣಿಗಳಿಗೆ ಬರುತ್ತದೆ ಎಂಬ ಬಗ್ಗೆ ದಾಖಲೆಗಳಿಲ್ಲ. ಉಳಿದಂತೆ ಕರೋನಾ ವೈರಾಣುವಿನ ವಿವಿಧ ಪ್ರಭೇಧಗಳು ಹಂದಿ, ನಾಯಿ, ಹಕ್ಕಿಗಳು, ಮೀನು ಇತ್ಯಾದಿಗಳನ್ನು ಬಾಧಿಸುತ್ತಿದ್ದರೂ ಸಹ ಇವು ಮನುಷ್ಯನನ್ನು ಬಾಧಿಸುವ ಬಗ್ಗೆ ಯಾವುದೇ ದಾಖಲೆಗಳು ಇಲ್ಲ.

ನಾಯಿಗಳಲ್ಲಿ ಕರೋನಾ ವೈರಾಣು ಬಾಧೆ

ಈ ವೈರಾಣು ಶ್ವಾನಗಳನ್ನು ಕಡಿಮೆ ಪ್ರಮಾಡದಲ್ಲಿ ಭಾಧಿಸುವುದು. ಇದು ನಾಯಿಗಳಲ್ಲಿ ವಾಂತಿಭೇಧಿ, ತೀವ್ರವಾದ ವಾಂತಿ, ಭೇಧಿ ಮತ್ತು ಬಿಳಿರಕ್ತ ಕಣಗಳ ಕಡಿಮೆಯಾಗುವಿಕೆ ಇತ್ಯಾದಿಗಳನ್ನು ಉಂಟು ಮಾಡುತ್ತದೆ. ಇದಕ್ಕೆ ಉತ್ತಮ ಚಿಕಿತ್ಸೆ ಇಲ್ಲ. ಆದರೆ ನಿಯಮಿತವಾಗಿ ಇದಕ್ಕೆಂದೇ ಇರುವ ಲಸಿಕೆಯನ್ನು ಬಳಸುವುದರಿಂದ ಈ ಕಾಯಿಲೆಯನ್ನು ತಡೆಯಬಹುದು. ಈ ವೈರಸ್ಸು ಮನುಷ್ಯನಿಗೆ ಯಾವುದೇ ರೋಗವನ್ನುಂಟು ಮಾಡುವುದಿಲ್ಲ.

ಬೆಕ್ಕುಗಳ ಕೊರೋನಾ ವೈರಾಣು ಪೀಡೆ

ಇದೂ ಸಹ ಕರೋನಾ ವೈರಾಣುಗಳ ಪೀಡೆಯಿಂದ ಬರಬಹುದಾದ ಕಾಯಿಲೆಯಾದರೂ ಸಹ ಇದು ಹೊಟ್ಟೆಯಯ ಪೆರಿಟೋನಿಯಂ ಪದರದ ಉರಿಯೂತವನ್ನುಂಟು ಮಾಡುತ್ತದೆ. ತೀವ್ರ ಸಾಂಕ್ರಾಮಿಕವಾದ ಈ ಕಾಯಿಲೆಗೆ ಅನೇಕ ಬೆಕ್ಕುಗಳು ಬಲಿಯಾಗುತ್ತವೆ. ರೋಗನಿರೋಧಕ ಶಕ್ತಿ ಕಡಿಮೆ ಇರುವ ಬೆಕ್ಕುಗಳನ್ನು ಬಹಳ ಬೇಗ ಕಾಡುವ ಈ ಕಾಯಿಲೆ ಮರಿ ಬೆಕ್ಕುಗಳನ್ನು ಜಾಸ್ತಿ ಭಾಧಿಸುತ್ತದೆ. ಈ ಕಾಯಿಲೆಯನ್ನು ಅಷ್ಟು ಸುಲಭವಾಗಿ ಪತ್ತೆ ಸಾಧ್ಯವಿಲ್ಲ. ಈಗ ಇದಕ್ಕೆ ಲಸಿಕೆ ತಯಾರಿಸಲಾಗಿದ್ದು ಇದನ್ನು ಮೂಗಿನ ಮೂಲಕ ನೀಡಲಾಗುತ್ತದೆ. ಒಮ್ಮೆ ಈ ಕಾಯಿಲೆ ಬೆಕ್ಕಿಗೆ ಬಂದರೆ ಬೆಕ್ಕನ್ನು ಉಳಿಸಿಕೊಳ್ಳುವುದು ಬಹಳ ಕಷ್ಟ. ಚಿಕ್ಕ ಬೆಕ್ಕಿನ ಮರಿಗಳಿಗೆ ಈ ಕಾಯಿಲೆ ಬಹಳ ಮಾರಕ.

ಹಂದಿಗಳಲ್ಲಿ ಕರೋನಾ ವೈರಾಣು ತೊಂದರೆ

ಸುಮಾರು ನಾಲ್ಕೈದು ವಿಧದ ಕೊರೋನಾ ವೈರಾಣುಗಳು ಹಂದಿಗಳನ್ನು ಭಾಧಿಸುತ್ತವೆ. ಇದರಲ್ಲಿ ಅನೇಕ ಕರೋನಾ ವೈರಾಣುಗಳ ಪಾತ್ರ ಇದೆ. ಇವುಗಳಲ್ಲಿ ಪೋರ್ಸೈನ್ ಎಪಿಡೆಮಿಕ್ ಡಯೇರಿಯಾ ಇದು ತೀವ್ರತರನಾಗಿದ್ದು ಒಂದು ಹಂದಿಯಿಂದ ಮತ್ತೊಂದು ಹಂದಿಗೆ ಅತಿ ಶೀಘ್ರದಲ್ಲಿ ಹಬ್ಬುತ್ತದೆ. ತೀವ್ರತರನಾದ ಬೇಧಿ, ವಾಂತಿ, ಶರೀರದ ತಾಪಮಾನ ಇಳಿಯುವುದು, ನಿರ್ಜಲೀಕರಣ ಇತ್ಯಾದಿ ಈ ರೋಗದ ಲಕ್ಷಣಗಳು. ಶೇ 80-100ರಷ್ಟು ಸಾವು ಈ ಕಾಯಿಲೆಯಲ್ಲಿ ಕಂಡು ಬರುತ್ತದೆ. ಲಸಿಕೆ ಹಾಕಿ ತಡೆಯುವುದೊಂದೇ ಇದಕ್ಕೆ ದಾರಿ.

ಪೋರ್ಸೈನ್ ಹೀಮ್ ಅಗ್ಲುಟಿನೇಟಿಂಗ್ ಕರೋನಾ ವೈರಸ್ ಸಹ ಹಂದಿಗಳಲ್ಲಿ ಅಷ್ಟೇ ತೀವ್ರವಾದ ಕಾಯಿಲೆ. ಇದರಲ್ಲಿಯೂ ಸಹ ಹಂದಿಮರಿಗಳು ಸಾವಿಗೀಡಾಗುತ್ತವೆ. ಮೆದುಳು ಜ್ವರದಲ್ಲಿನ ಲಕ್ಷಗಳು ಕಾಣಿಸಿಕೊಂಡು ತೀವ್ರವಾದ ವಾಂತಿ ಇರುತ್ತದೆ. ಇದಕ್ಕೂ ಸೂಕ್ತ ಚಿಕಿತ್ಸೆ ಇಲ್ಲ. ಲಸಿಕೆಯಿಂದ ಮಾತ್ರ ತಡಿಯಬಹುದು. ಒಮ್ಮೆ ಬಂದರೆ ಎಲ್ಲಾ ಭಾಧಿತ ಹಂದಿಗಳು ಸತ್ತು ತಾನೇ ನಿಯಂತ್ರಣಕ್ಕೆ ಬರಬೇಕು.

ಆಕಳು ಮತ್ತು ಜಾನುವಾರುಗಳಲ್ಲಿ ಕರೋನಾ ವೈರಾಣು ಬಾಧೆ

ಕರುಗಳಲ್ಲಿ ಬಹಳ ಸಾಮಾನ್ಯವಾದ ಈ ಕಾಯಿಲೆ ತೀವ್ರವಾದ ಬೇಧಿ, ನಿರ್ಜಲೀಕರಣಮತ್ತು ಹಸಿವಿಲ್ಲದಿರುವಿಕೆ ಇತ್ಯಾದಿ ಲಕ್ಷಣಗಳನ್ನು ಹೊಂದಿದೆ. ಶ್ವಾಸಕೋಶದ ಉರಿಯೂತವೂ ಸಹ ಇರುತ್ತದೆ. ಇದಕ್ಕೆ ಉತ್ತಮ ಲಸಿಕೆ ಇಲ್ಲ.

ಕುದುರೆಗಳ ಕರೋನಾ ವೈರಾಣು ಬಾಧೆ

ಕುದುರೆ, ಕತ್ತೆ ಮತ್ತು ಈ ಜಾತಿಯ ಪ್ರಾಣಿಗಳಲ್ಲಿ ಈ ಕಾಯಿಲೆ ಬಂದಾಗ ಬೇಧಿ ಮತ್ತು ಹೊಟ್ಟೆನೋವು ಅನುಕ್ರಮವಾಗಿ ಕಂಡು ಬರುತ್ತದೆ. ಚಿಕಿತ್ಸೆಯ ನಂತರ ಬಹುತೇಕ ಪ್ರಾಣಿಗಳು ಚೇತರಿಸಿಕೊಳ್ಳುತ್ತವೆ.
ಹಕ್ಕಿಗಳ ಕೊರೊನಾ ಬಾಧೆ
ಏವಿಯನ್ ಇನ್ಫೆಕ್ಷಿಯಸ್ ಬ್ರೋಂಕೈಟಿಸ್ ವೈರಸ್ ಎಂಬ ವೈರಾಣು ಈ ಕಾಯಿಲೆಯನ್ನುಂಟು ಮಾಡುತ್ತದೆ. ಹಕ್ಕಿಗಳಲ್ಲಿ ಗುರುತಿಸಲಾಗದ ಶ್ವಾಸಕೋಶಕ್ಕೆ ಸಂಬಂಧಿಸಿದ ಕಾಯಿಲೆಯನ್ನುಂಟು ಮಾಡುತ್ತದೆ. ಅನೇಕ ಹಕ್ಕಿಗಳು ಸಾಯುತ್ತವೆ. ಮರಣೋತ್ತರ ಪರೀಕ್ಷೆಯಲ್ಲಿ ಮೂತ್ರಜನಕಾಂಗ ಹಾಳಾಗಿರುವುದು ಕಂಡು ಬರುತ್ತದೆ.  ಇಷ್ಟು ಕರೋನಾ ಪುರಾಣ ಸಾಕು.

ಆಕರ: ಕರೋನಾ ವೈರಾಣು ಬಾಧೆ Appeal et al., 1980 and Carmicheal and Binn, 1981: Animal Corona Virus.In Advances in Veterinary Medicine 1999.

ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ

ತಂತ್ರಜ್ಞಾನ ಮೋಡಿ : ಅಪರೂಪವೆನಿಸುತ್ತಿರುವ ಹಳ್ಳಿಗಾಡಿನ ಜೀವನ

Published

on

  • ಡಾ. ಚಂದ್ರಪ್ಪ ಎಚ್, ಸಹಾಯಕ ಪ್ರಾಧ್ಯಾಪಕರು, ಭೌತವಿಜ್ಞಾನ ವಿಭಾಗ, ಸರ್ಕಾರಿ ವಿಜ್ಞಾನ ಕಾಲೇಜು, ಚಿತ್ರದುರ್ಗ

90ರ ದಶಕದಿಂದೀಚೆಗೆ, ಎಲ್ಲೆಡೆ ಸದ್ದಿಲ್ಲದೇ ಕ್ರಮೇಣ ಒಕ್ಕರಿಸತೊಡಗಿದೆ ಆಧುನಿಕ ಯಾಂತ್ರಿಕೃತ ಬದುಕು.

ಜನಸಾಮಾನ್ಯರ ಅರಿವಿನ-ಪರಿಧಿ ತಿಳಿಗೊಳ್ಳುವುದರ ಮೊದಲೇ ಊಹಿಸಲಾರದಷ್ಟು ಮಟ್ಟಿಗೆ ಇಂದು, ಸ್ವಚ್ಛಂದ ಹಳ್ಳಿ-ಸೊಬಗಿನ ಕೂಡು-ಕುಟುಂಬದ, ಮೈ-ಮನಸ್ಸು ತುಂಬಿದ, ಪರಿಶುದ್ಧ ಜೀವನ ಪ್ರೀತಿ, ಉತ್ಸಾಹ, ಮಮತೆಯನ್ನು ಇನ್ನಿಲ್ಲವಾಗಿಸಿದೆ ಎನಿಸುತ್ತದೆಯಲ್ಲವೆ?

ಹೇಗೆಂದರೆ, ಕಲ್ಪಿಸಿಕೊಂಡರೂ ಕಣ್ಣೆದುರಿಗೆ ತೆರೆದಿಡುವ ಅಮೂಲ್ಯ ಬದುಕು, ಅದೆಷ್ಟು ಬೇಗ ದಿಕ್ಕು-ದೆಸೆಯಿಲ್ಲದೆ ಕಣ್ಣು-ಕಟ್ಟಿದ ಸ್ಪರ್ಧೆಗಿಳಿದ ಕುದುರೆಯಂತೆ ಅಲೆಯುವಂತಾಗಿದೆ! ಅರೆಕ್ಷಣ, ಮೈಮನ ಕಸಿವಿಸಿಗೊಳ್ಳುತ್ತೆ! ಜೀವ ಮರುಗುತ್ತೆ. ಮತ್ತೆ ಮತ್ತೆ ಆ ಬಾಲ್ಯ, ಹಳ್ಳಿ ಬದುಕನ್ನ ಅರಸಿ ಬಯಸುತ್ತೆ! ಜನತೆ, ಹಳ್ಳಿಯಲ್ಲಿನ ಗಿಡ-ಮರ, ಪಶು-ಪಕ್ಷಿ, ಹಳ್ಳ-ಕೊಳ್ಳ, ಬೆಟ್ಟ-ಗುಡ್ಡ ಮುಂತಾದ ಪರಿಸರದ ಸಕಲ ಜೀವಿಗಳೊಂದಿಗೆ ಒಂದಾಗಿ ನಲ್ಮೆಯಿಂದ ಪರಿಶುದ್ಧ ಮನದಿ, ಭೂ ತಾಯಿ, ತಿಳಿ-ನೀಲಿ ಆಗಸ, ಮಳೆ, ಗಾಳಿ, ಬೆಳಕನ್ನ ಇನ್ನಿಲ್ಲದೆ ಅಪ್ಪಿ, ಅತ್ಯಂತ ಸಂತಸ-ಖುಷಿಯಿಂದ, ಇರುವ ಪರಿಸ್ಥಿತಿಗೆ ಒಗ್ಗಿ , ಬದುಕು ರೂಪಿಸಿಕೊಂಡು ಜೀವನೋತ್ಸಾಹ ತಳೆಯುತ್ತಿದ್ದರು.

ನಿಜ ಹೇಳಬೇಕೆಂದರೆ, ಪರಿಸರವೇ ಪಾಠ; ಭೂ ತಾಯಿಯೇ ಹಾಸಿಗೆ; ಆಗಸವೇ ಹೊದಿಕೆಯಾಗಿ, ದುಡಿದ, ದಣಿವರಿದ ಮನದಿ, ಕಣ್ತುಂಬಿ ನೆಮ್ಮದಿಯ ನಿಟ್ಟುಸಿರುಗೈವ ಕ್ಷಣಗಳು ಅದಾಗಿತ್ತು!

ಹಳ್ಳಿಯಲ್ಲಿನ ಆಟೋಟಗಳು, ತಮಾಷೆಯ ಕ್ಷಣಗಳು, ಆಟಿಕೆಗಳು, ಸಾಮಾನುಗಳು, ಹಬ್ಬ-ಹರಿದಿನಗಳು, ಜಾತ್ರೆ-ಸಂತೆಗಳು, ಒಕ್ಕಲು ಸಮಯದ ಸುಗ್ಗಿಯ ಮಧುರ ಕ್ಷಣಗಳು ಇತ್ಯಾದಿ ಜನತೆಯ ಮುಗ್ಧ -ಮನಸ್ಸು ಮತ್ತು ಹೊಳೆವ ಮುಖದಲ್ಲಿ, ನಿಷ್ಕಲ್ಮಶ ಮಂದಹಾಸ ಮೂಡಿಸಿ, ಬೆಲೆ ಕಟ್ಟಲಾಗದ ಖುಷಿಯ ಕ್ಷಣಗಳನ್ನು ಸದಾ ಅವರಲ್ಲಿ ಕಂಗೊಳಿಸುತ್ತಿದ್ದವು.

ಎಲ್ಲರೂ ದುಡಿವವರು; ಎಲ್ಲರೂ ಭಾಗಿಯಾಗುವವರು; ಎಲ್ಲರೊಳಗೊಂದಾಗಿ ಬಾಳುವವರು; ಎಲ್ಲರಲ್ಲೂ ಧನ್ಯತಾ ಭಾವ; ಆದರಣೀಯತೆ, ಪೂಜ್ಯತಾ-ಭಾವ ತುಂಬಿತ್ತು! ಅಂತಃಕರಣೆ, ಕರುಣೆ, ಪ್ರೀತಿ-ವಿಶ್ವಾಸ, ತಕ್ಕಮಟ್ಟಿಗೆ ಮಾನವೀಯತೆ ಬದುಕ-ಪ್ರೀತಿ ಹೆಚ್ಚಿಸಿತ್ತು!

ಈಗಾಗಲೇ, ನಾವು ಯಾವ ಸ್ಥಿತಿ ತಲುಪಿದ್ದೇವೆಂದರೆ: ಶಾಲಾ ರಜೆಯ ದಿನಗಳಲ್ಲಿ, ಈಗಿನ ಮಕ್ಕಳಿಗೆ ಆ ಕಾಲದ ಹಳ್ಳಿಗಳ ಜೀವನ ಪರಿಚಯಿಸಲು ಗೊಟಗೋಡಿಯ ರಾಕ್ ಗಾರ್ಡನ್ – ಹಾವೇರಿ, ಹೆರಿಟೇಜ್ ವಿಲೇಜ್ – ಮಣಿಪಾಲ, ಅಲ್ಲಲ್ಲಿ ಸಾರ್ವಜನಿಕ ಉದ್ಯಾನವನ, ಹಾಗೂ ಇತರೆ ಕೆಲವು ಮ್ಯೂಸಿಯಮ್ ಗಳತ್ತ ಮುಖ ಮಾಡಿಬೇಕೆ ಹೊರತು ನೈಜ ಚಿತ್ರಣ ಪ್ರಸ್ತುತ ಹಳ್ಳಿಗಾಡಿನಲ್ಲೂ ಕಾಣಸಿಗದು! ಸ್ವತಃ ಹಳ್ಳಿಗರೇ ಪರಿತಪಿಸುವ ಸ್ಥಿತಿ.

ಕಾರಣ ಇಷ್ಟೆ: ತಂತ್ರಜ್ಞಾನದ ಆವಿಷ್ಕಾರ ಮತ್ತು ಎಲ್ಲ ಕ್ಷೇತ್ರಗಳಲ್ಲೂ ಹೊಕ್ಕಿರುವ ಅದರ ಗಾಢವಾದ ಛಾಯೆ. ಇಡೀ ‘ಪ್ರಪಂಚವೇ ಒಂದು ಹಳ್ಳಿ’ (Global Village) ಯಾಗಿ ಮಾರ್ಪಟ್ಟಿರುವ ಭಾವನೆ. ವಿಶೇಷವಾಗಿ, ದೂರವಾಣಿ, ಇಂಟರ್ನೆಟ್, ಯುಟ್ಯೂಬ್, ನೇರ ಮೆದುಳಿಗೆ ಕೈ ಹಾಕಿರುವ ಸಾಮಾಜಿಕ ಜಾಲತಾಣಗಳ ಡ್ರಗ್ಸ್ ರೀತಿಯ ಮಾನಸಿಕ ಮೋಹ ಬೆಂಬಿಡದೆ ಇಂದಿನ ಆಧುನಿಕ ಜನತೆಯ ಚಿಂತನಾರ್ಹ ಯೋಚನಾ ಶಕ್ತಿ, ಆರೋಗ್ಯ , ಕೌಟುಂಬಿಕ ಮೌಲ್ಯಗಳು, ಮಾನವೀಯ ಗುಣಗಳು ಹಾಗೂ ಒಟ್ಟಾರೆ ಜೀವನ ಶೈಲಿಯನ್ನೇ ಅಕ್ಷರಸಃ ನುಂಗಿಹಾಕಿವೆ! ಅಲ್ಲದೆ, ಇದು ಇಂದಿನ ಅನಿವಾರ್ಯವೆಂಬಂತೆ ಕಠೋರ ಸನ್ನಿವೇಶ ಹುಟ್ಟುಹಾಕಿವೆ.

ಒಂದೆಡೆ, ‘ಅತೀಯಾದ ಅಮೃತವೂ ವಿಷ’ವೆನ್ನುವಂತೆ, ಹಾಗೂ ಊಟದಲ್ಲಿ ‘ರುಚಿಗೆ ತಕ್ಕಷ್ಟು ಉಪ್ಪಿ’ರುವಂತೆ ಹಲವು ಒಳಿತು-ಕೆಡುಕಗಳ ನಡುವೆ ಎಲ್ಲವೂ ಹಿತಮಿತವಾಗಿ ಬಳಕೆಯಲ್ಲಿದ್ದರೆ ಚೆನ್ನ. ಅಲ್ವೇ? ಮೈ ಮನ ಆರೋಗ್ಯಕರವಾಗಿರುತ್ತೆ; ಜೀವನ ಉತ್ಸಾಹದಿಂದ ಕೂಡಿರುತ್ತೆ.
ಜೊತೆಗೆ, ಇತ್ತೀಚೆಗೆ ಜಗತ್ತಿನೆಲ್ಲೆಡೆ ಭಾರೀ ಸಂಚಲನ ಸೃಷ್ಟಿಸಿರುವ ‘ಕೃತಕ ಬುದ್ಧಿಮತ್ತೆ’ (Artificial Intelligence – AI) ಹಾಗೂ ‘ಬಯೋಚಿಪ್’ ತಂತ್ರಜ್ಞಾನಗಳು. ಈ ಎರಡೂ ತಂತ್ರಜ್ಞಾನಗಳು ಬಹುತೇಕ ಮನುಷ್ಯನನ್ನ ಸಹ ಒಂದು ಸರಕಾಗಿ ನೋಡುವ ದೂರದೃಷ್ಟಿ ಹೊಂದಿವೆ ಎಂದರೆ ತಪ್ಪಾಗಲಿಕ್ಕಿಲ್ಲ! ತೀರ ಇತ್ತೀಚೆಗೆ, ತಂತ್ರಜ್ಞಾನ ಜಗತ್ತಿನ ಹೆಸರಾಂತ ಉದ್ಯಮಿ: ಎಲಾನ್ ಮಸ್ಕ್ ತಮ್ಮ ‘ನ್ಯೂರಾಲಿಂಕ್’ (Neuralink) ಸಂಸ್ಥೆಯ ಮೂಲಕ ಪ್ರಪಂಚದ ಮೊಟ್ಟ ಮೊದಲ ಪ್ರಯತ್ನವಾಗಿ ಆರೋಗ್ಯವಂತ ವ್ಯಕ್ತಿಯೊಬ್ಬರ ಮೆದುಳಿನಲ್ಲಿ ಪ್ರಾಯೋಗಿಕ – ‘ಮೊದಲ ಬಯೋಚಿಪ್’ ಅಳವಡಿಸಿರುವುದು ಎಲ್ಲರ ಅಚ್ಚರಿಗೆ ಕಾರಣವಾಗಿದೆ! ಇದುವರೆಗೂ, ಮೊಬೈಲ್ ನಲ್ಲಿ ಕೇವಲ ‘ಮೆಮೊರಿ ಕಾರ್ಡ್’ ಬಳಸಿ, ಅದರಲ್ಲಿ ಸಂಗ್ರಹಿಸಿದ ಮಾಹಿತಿ ಬೇಕೆಂದಾಗ ಆಲಿಸುವ, ನೋಡುವ ಪರಿಪಾಠದ ಪರಿಚಯವಿದ್ದ ನಮಗೆ, AI ಹಾಗೂ Biochip ತಂತ್ರಜ್ಞಾನಗಳ ಅವತಾರಗಳು ಊಹೆಗೂ ಮೀರಿದ್ದು ಅನ್ಸುತ್ತೆ ಕೂಡ.

ಆಗ, ಜಗತ್ತು ಹೇಗಿರಬೇಡ? ತಂತ್ರಜ್ಞಾನ ತೊರೆದು ಮನುಷ್ಯ, ಜೀವನ ಕಲ್ಪಿಸಿಕೊಳ್ಳಲಾರದ ಪರಿಸ್ಥಿತಿ ನಿರ್ಮಾಣವಾಗಿದೆ. ಅದು, ಕೇವಲ ಮನುಷ್ಯನ ಅವಶ್ಯಕತೆಗಳಿಗೆ ಪೂರಕವಾಗಿರಬೇಕೆ ಹೊರತು; ಆತನನ್ನ ಆಳುವ ಸ್ಥಿತಿ ತಲುಪಬಾರದು! ಮುಂದಿನ ದಿನಗಳಲ್ಲಿ, ಮನುಷ್ಯ ಎದುರಿಸಬಹುದಾದ ಭಯಾನಕ ತಂತ್ರಜ್ಞಾನ ಸಂಕೋಲೆಗಳನ್ನು ಕುರಿತು ಚರ್ಚಿಸುವ ಅಗತ್ಯ ಇಂದಿನ ತುರ್ತು ಅನಿವಾರ್ಯ. ಆದರೆ, ಎಲ್ಲವೂ ಸಲೀಸಾಗಿ ಕೈಗೆಟುಕುವ ಇಂದಿನ ದಿನಗಳಲಿ, ಅತಿಯಾಗಿ ಮಿತಿಮೀರಿರುವ ಅನುಕೂಲಗಳು ಅಮೂಲ್ಯ ಖುಷಿಯ ಕ್ಷಣಗಳನ್ನು ಎಂದಿಗೂ ನೀಡಲಾರವು.

ಬದಲಿಗೆ, ಪ್ರತಿಷ್ಠೆಯ ಹೆಮ್ಮರಗಳಾಗಿ, ಜನತೆ ನಾಲ್ಕು ದಿನದ ಈ ಬಾಳಲಿ ಏನೋ ಬಹುದೊಡ್ಡ ಸಾಧನೆಗೈದವರಂತೆ, ಯಂತ್ರಮಾನವರಂತೆ ಬೀಗುವವರೆ!!? ಮೂಲಭೂತವಾಗಿ, ಮಾನವ ಸಹಿತ ಸಕಲ ಜೀವ-ಸಂಕುಲವೂ ವಾಸಯೋಗ್ಯ ಸ್ವಚ್ಛಂದ ಭೂಮಿ ಸಂರಕ್ಷಣೆ ನಮ್ಮೆಲ್ಲರ ಹೊಣೆ. ಭೂಮಿಯಲ್ಲಿ, ಮಣ್ಣಿನ ಫಲವತ್ತತೆ ಹಾಗೂ ನೀರು ಸಂರಕ್ಷಿಸದೆ; ಗಿಡ-ಮರ ಬೆಳೆಸದೆ; ಹಸಿರು ಹೆಚ್ಚಿಸದೆ, ಮತ್ತು ಪರಿಸರ ಸಮತೋಲನ ಕಾಪಾಡದೆ; ಕೇವಲ ತಂತ್ರಜ್ಞಾನ ತಲೆಯಲಿ ಹೊತ್ತು, ಮನುಷ್ಯ ಉತ್ತಮ ಆಹಾರ, ಆರೋಗ್ಯ ಮತ್ತು ಜೀವನ ಕಟ್ಟಿಕೊಳ್ಳಲು ಎಂದಿಗೂ ಸಾಧ್ಯವಿಲ್ಲ. ಸಮರೋಪಾದಿಯಲ್ಲಿ, ಜನತೆ ಸ್ವ ಇಚ್ಛೆಯಿಂದ ಹಳ್ಳಿ-ಹಳ್ಳಿಗಳಿಂದ, ನಗರಗಳು, ಬೆಟ್ಟ-ಗುಡ್ಡಗಳಲ್ಲೆಡೆ ಬೃಹತ್ ಸಂಖ್ಯೆಯಲ್ಲಿ ಸಸಿಗಳನ್ನ ನೆಟ್ಟು, ಪಾಲನೆ-ಪೋಷಣೆಗೈಯ್ಯುವ ಚಳುವಳಿ ರೂಪದ ಆಂದೋಲನ ದೇಶಾದ್ಯಂತ ಅತ್ಯಂತ ತ್ವರಿತವಾಗಿ ಕೈಗೂಡಬೇಕು. ಈ ನಿಟ್ಟಿನಲ್ಲಿ, ಎಲ್ಲರೂ ಕೈಜೋಡಿಸಬೇಕು.

(ಲೇಖಕರು : ಡಾ. ಚಂದ್ರಪ್ಪ ಎಚ್, ಸಹಾಯಕ ಪ್ರಾಧ್ಯಾಪಕರು, ಭೌತವಿಜ್ಞಾನ ವಿಭಾಗ, ಸರ್ಕಾರಿ ವಿಜ್ಞಾನ ಕಾಲೇಜು, ಚಿತ್ರದುರ್ಗ)

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಕಾಟನ್ ಕ್ಯಾಂಡಿ ಮತ್ತು ಗೋಬಿ ಮಂಚೂರಿ ನಿಷೇಧ : ಸಚಿವ ದಿನೇಶ್ ಗುಂಡೂರಾವ್

Published

on

ಸುದ್ದಿದಿನ, ಬೆಂಗಳೂರು : ಕೃತಕ ಬಣ್ಣ ಬಳಸಿದ ಕಾಟನ್ ಕ್ಯಾಂಡಿ ಮತ್ತು ಗೋಬಿ ಮಂಚೂರಿ ಮಾರಾಟವನ್ನು ತಕ್ಷಣದಿಂದ ಜಾರಿಗೆ ಬರುವಂತೆ ರಾಜ್ಯಾದ್ಯಂತ ನಿಷೇಧಿಸಲಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ. ಆದಾಗ್ಯೂ, ಬಣ್ಣ ಹಾಗೂ ರಾಸಾಯನಿಕ ಹಾಕದೇ ಇರುವ ಈ ತಿನಿಸುಗಳ ಮಾರಾಟಕ್ಕೆ ನಿರ್ಬಂಧ ಇಲ್ಲ ಎಂದು ಹೇಳಿದ್ದಾರೆ.

ಬೆಂಗಳೂರಿನಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಕ್ಕಳು ಸೇರಿದಂತೆ ಎಲ್ಲ ವಯೋಮಾನದವರಿಗೂ ಅಚ್ಚುಮೆಚ್ಚಾದ ಈ ಎರಡು ತಿನಿಸುಗಳನ್ನು ಆಕರ್ಷಕವಾಗಿ ಕಾಣುವಂತೆ ಮಾಡಲು ಬಳಸುವ ಕೃತಕ ಬಣ್ಣಗಳಲ್ಲಿ ಅಪಾಯಕಾರಿ ರಾಸಾಯನಿಕಗಳು ಇರುವುದು ಪರೀಕ್ಷೆಗಳಿಂದ ದೃಢಪಟ್ಟಿದೆ ಎಂದರು. ರಾಜ್ಯದ ಹಲವೆಡೆ ಬೀದಿಬದಿಯ ಗಾಡಿಗಳು, ಹೋಟೆಲ್‌ಗಳಲ್ಲಿ ತಯಾರಿಸಿದ ಗೋಬಿ ಮಂಚೂರಿ ತಿನಿಸಿನ 171ಮಾದರಿಗಳನ್ನು ಪರೀಕ್ಷಿಸಲಾಗಿದೆ. ಈ ಪೈಕಿ 107ಮಾದರಿಗಳಲ್ಲಿ ಅಸುರಕ್ಷಿತ ರಾಸಾಯನಿಕಗಳು ಪತ್ತೆಯಾಗಿರುವುದು ಆತಂಕಕಾರಿಯಾಗಿದೆ ಎಂದರು.

ಕೃತಕ ಬಣ್ಣಗಳಲ್ಲಿರುವ ರೋಡೊಮೈನ್-ಬಿ ಮತ್ತು ಟಾಟ್ರಝೀನ್ ರಾಸಾಯನಿಕಗಳು ಕ್ಯಾನ್ಸರ್ ರೋಗಕ್ಕೆ ಕಾರಣವಾಗಬಹುದು ಎನ್ನುವ ಅಂಶ ತಿಳಿದುಬಂದಿದೆ. ಬಣ್ಣ ಹಾಕಿದ ಗೋಬಿಮಂಚೂರಿ ಮತ್ತು ಕಾಟನ್‌ಕ್ಯಾಂಡಿಗಳನ್ನು ಮಾರಾಟ ಮಾಡುವವರ ಮೇಲೆ ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಾಗುವುದು. ಏಳು ವರ್ಷದರೆಗೆ ಜೈಲು ಶಿಕ್ಷೆ, 10 ಲಕ್ಷ ರೂಪಾಯಿವರೆಗೆ ದಂಡ ಅಥವಾ ಜೀವಾವಧಿ ಶಿಕ್ಷೆಗೂ ಅವಕಾಶವಿದೆ ಎಂದು ಸಚಿವರು ಎಚ್ಚರಿಕೆ ನೀಡಿದರು.

ಹೇಳಿಕೆ


  • ಬಣ್ಣ ಹಾಕಿರುವ ಈ ಎರಡು ತಿನಿಸುಗಳನ್ನು ಸೇವಿಸಬಾರದು ಎಂದು ಸಾರ್ವಜನಿಕರಿಗೂ ಎಚ್ಚರಿಕೆ ನೀಡಲಾಗಿದೆ. ಸಾರ್ವಜನಿಕರ ಆರೋಗ್ಯ ರಕ್ಷಣೆ ದೃಷ್ಟಿಯಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಇದಲ್ಲದೇ, ಕಬಾಬ್, ಪಾನಿಪೂರಿ ಮೊದಲಾದ ತಿನಿಸುಗಳಲ್ಲೂ ಕೃತಕ ಬಣ್ಣಗಳ ಬಳಕೆ ಆಗುತ್ತಿದೆಯೇ ಎಂದು ಪರಿಶೀಲಿಸಲಾಗುತ್ತಿದೆ.

            | ಸಚಿವ ದಿನೇಶ್ ಗುಂಡೂರಾವ್


ಟ್ವೀಟ್

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ಲೈಫ್ ಸ್ಟೈಲ್

ನೀಲಿ ಪರ್ವತಗಳ ನಾಡಿನಲ್ಲಿ ಕೀಚಕರ ಹಾವಳಿ

Published

on

Unidentified miscreants torch two houses belonging to a particular community to retaliate the killing of nine civilians by Kukis in Manipur. (Photo: PTI)
  • ಡಾ. ಸಿದ್ದಯ್ಯ ರೆಡ್ಡಿಹಳ್ಳಿ

ಗತ್ತಿನ ಪ್ರತಿ ಜನಾಂಗವು ತನ್ನ ಪೂರ್ವಜರ ಪ್ರತಿಭೆ ಹಾಗೂ ಹಿರಿಮೆಯನ್ನು ಹೇಳಿಕೊಳ್ಳಲು ಕಾತರಿಸುತ್ತದೆ. ಅದರಂತೆಯೇ ನಮ್ಮ ಭರತ ಖಂಡದ ಈಶಾನ್ಯ ರಾಜ್ಯವಾದ ಮಣಿಪುರದಲ್ಲಿ ವಾಸಿಸುವ ಮಣಿಪುರಿ ಜನರು ಕ್ರಿಸ್ತಪೂರ್ವದಲ್ಲಿಯೇ ಅತ್ಯಾಧುನಿಕ ಸಾಮ್ರಾಜ್ಯವನ್ನು ಕಟ್ಟಿದ್ದರಂತೆ ಎಂದು ಹೇಳಿಕೊಳ್ಳುತ್ತಾರೆ.

ನಿಜ ಮಣಿಪುರಿಗಳು ಬೆಟ್ಟಗಳ ನಡುವೆ ಬೆಚ್ಚನೆಯ ಜೀವನವನ್ನು ಸಾಗಿಸಿದವರು. ಆದರೆ ಅಲ್ಲಿ ಕೊಳ್ಳಿ ಇಡುವ ಕೆಲಸಗಳು ಬಹಳ ಹಿಂದಿನಿಂದಲೇ ಪ್ರಾರಂಭವಾಗಿರುವುದು ತಿಳಿದುಬರುತ್ತದೆ. ವಾಸ್ತವದಲ್ಲಿ ಹಲವು ಬುಡಕಟ್ಟುಗಳ ಸಂಮಿಶ್ರಣವೇ ಮಣಿಪುರವಾಗಿದೆ. ಆದರೆ ಮಣಿಪುರಿಗಳು ಮಾತ್ರ ಈ ನೆಲದ ಮೂಲ ನಿವಾಸಿಗಳು, ಅವರಿಗೆ ಮಾತ್ರ ಸಕಲ ಸೌಕರ್ಯಗಳು ಸಿಗಬೇಕು, ಉಳಿದವರು ರಾಜ್ಯ ಬಿಡಬೇಕು ಎಂದು ಉಯಿಲ್ಲೆಬ್ಬಿಸುತ್ತಿರುವವರು ಯಾರು? ಪ್ರತಿಯೊಂದು ಬುಡಕಟ್ಟು ಜನಾಂಗಕ್ಕೆ ಇರುವಂತೆ ಹೇರಳವಾದ ಜಾನಪದ ಕಥೆ, ಪುರಾಣ ಮತ್ತು ದಂತಕಥೆಗಳ ಸಂಪತ್ತು ಇಲ್ಲಿನ ಬುಡಕಟ್ಟು ಜನಾಂಗಗಳಿಗೂ ಇದೆ.

ಮಣಿಪುರದ ರಾಜಧಾನಿ ಇಂಫಾಲ್‌ನಲ್ಲಿ ವಾಸಿಸುತ್ತಿದ್ದ ಜನರನ್ನು ಮಿತೇಯಿ ಅಥವಾ ಮೈತೇಯಿ ಎಂದು ಕರೆಯಲಾಗುತ್ತಿತ್ತು. ಸ್ವಾತಂತ್ರ್ಯಪೂರ್ವದಲ್ಲಿ ಮಣಿಪುರವು ಬಾಂಗ್ಲಾದ ಗುಡ್ಡುಗಾಡು ಜಿಲ್ಲೆಗಳಲ್ಲಿ ಒಂದಾಗಿತ್ತು. ಭಾರತ ಸ್ವಾತಂತ್ರ್ಯಗೊಂಡು ಎರಡು ವರ್ಷ ಎರಡು ತಿಂಗಳು ಕಳೆದ ನಂತರ ಅಂದರೆ ಅಕ್ಟೋಬರ್ 15, 1949ರಂದು ಭಾರತದೊಂದಿಗೆ ಏಕೀಕೃತವಾಯಿತು.

ಮಣಿಪುರದಲ್ಲಿ ಅಂತರ-ಜನಾಂಗೀಯ ಹಿಂಸಾಚಾರವು ಇದೇ ಮೊದಲೇನಲ್ಲ, ಇದಕ್ಕೆ ಸುದೀರ್ಘವಾದ ಇತಿಹಾಸವಿದೆ. ಮಣಿಪುರಿಗಳ ಅತಿರೇಕ ಎಲ್ಲಿಯವರೆಗೆ ಹೋಗಿತ್ತು ಎಂದರೆ 1964ರಲ್ಲಿ ಭಾರತದಿಂದ ಬಿಡುಗಡೆ ಹೊಂದಿ, ಹೊಸ ದೇಶವನ್ನು ಸೃಷ್ಟಿಸಿಕೊಳ್ಳಬೇಕು ಎಂದು ದಂಗೆಯನ್ನು ಎಬ್ಬಿಸಲಾಗಿತ್ತು. ಇದರಲ್ಲಿ ಹಲವಾರು ಗುಂಪುಗಳು ಕೂಡಿಕೊಂಡಿದ್ದವು. ಅವರಿಗೆ ಅವರದೇ ಆದ ಗುರಿಗಳು ಇದ್ದುದರಿಂದ ಈ ದಂಗೆ ವಿಫಲವಾಯಿತು.

ಚೀನಾ ದೇಶದ ಕುಮ್ಮಕ್ಕಿನಿಂದಾಗಿ ‘ರೆವಲ್ಯೂಷನರಿ ಪಾರ್ಟಿ ಆಫ್ ಕಾಂಗ್ಲೀಪಾಕ್’ ಮತ್ತು ‘ಪೀಪಲ್ಸ್ ಲಿಬರೇಶನ್ ಆರ್ಮಿಗಳು’ ಹುಟ್ಟಿಕೊಂಡವು. ಇವರು ಶಸ್ತ್ರಾಸ್ತ್ರ ತರಬೇತಿಯನ್ನು ಹೊಂದಿ, ಬ್ಯಾಂಕ್ ದರೋಡೆಗಳನ್ನು ಮಾಡುವುದು, ಪೊಲೀಸ್ ಅಧಿಕಾರಿಗಳ ಮೇಲೆ ಮತ್ತು ಸರ್ಕಾರಿ ಕಟ್ಟಡಗಳ ಮೇಲೆ ದಾಳಿ ಮಾಡುವುದು ಇಂತಹ ಕೃತ್ಯಗಳನ್ನು ಮಾಡತೊಡಗಿದರು. 1980 ರಿಂದ 2004ರವರೆಗೂ ಭಾರತ ಸರ್ಕಾರ ಮಣಿಪುರವನ್ನು ಪ್ರಕ್ಷÄಬ್ದ ಪ್ರದೇಶ ಎಂದು ಉಲ್ಲೇಖಿಸಿತ್ತು.

ಈ ಸಂದರ್ಭದಲ್ಲಿ ‘ಸಶಸ್ತ್ರ ಪಡೆಗಳ ವಿಶೇಷ ಅಧಿಕಾರ ಕಾಯಿದೆ’ಯನ್ನು ಜಾರಿಗೆ ತರಲಾಯಿತು. ಈ ಕಾಯಿದೆಯ ಪ್ರಕಾರ ಖಾಸಗಿ ಅಥವಾ ಸಾರ್ವಜನಿಕ ಸ್ಥಳಗಳಲ್ಲಿ ಕೆಟ್ಟವರ್ತನೆಗಳನ್ನು ಮಾಡುತ್ತಿದ್ದರೆ, ಯಾವುದೇ ವಾರಂಟ್‌ಗಳಿಲ್ಲದೆ ಬಂಧಿಸಬಹುದಾಗಿತ್ತು. ಕಾನೂನುಗಳನ್ನು ಉಲ್ಲಂಘಿಸುವ, ಶಸ್ತ್ರಾಸ್ತ್ರಗಳನ್ನು ಹೊಂದಿರುವವರನ್ನು ಅಥವಾ ದೊಡ್ಡ ದೊಡ್ಡ ಗುಂಪುಗಳಲ್ಲಿ ಸೇರಿದ್ದವರನ್ನು ಗುಂಡಿಕ್ಕಿ ಕೊಲ್ಲುವ ಅವಕಾಶವನ್ನು ಮಿಲಿಟರಿಗೆ ಕೊಡಲಾಗಿತ್ತು. ಮಿಲಿಟರಿಯ ಪರವಾಗಿರುವ ಈ ಕಾನೂನು ಅನಿಯಂತ್ರಿತ ಹತ್ಯೆಗಳು, ಚಿತ್ರಹಿಂಸೆ, ಕ್ರೂರ ಅಮಾನವೀಯತೆ, ಅಪಹರಣದಂತಹ ಮಾನವ ಹಕ್ಕುಗಳ ಉಲ್ಲಂಘನೆಗೆ ಕಾರಣವಾಯಿತು.

ಈ ಮಾನವ ವಿರೋದಿ ಮಿಲಿಟರಿ ಕಾನೂನಿನ ವಿರುದ್ಧ ಹಲವಾರು ಪ್ರತಿಭಟನೆಗಳು, ಹೋರಾಟಗಳು ಜರುಗಿದವು. ಇರೋಮ್ ಶರ್ಮಿಳಾ ಚಾನು ಎಂಬ ದಿಟ್ಟ ಮಹಿಳೆ ದೀರ್ಘಾವಧಿಯ ಉಪವಾಸ ಸತ್ಯಾಗ್ರಹವನ್ನು ಮಾಡಿದ್ದಳು. ಆದರೂ 2004ರಲ್ಲಿ ಸ್ಥಳೀಯ ಮಹಿಳೆಯರ ಮೇಲೆ ಹಿಂಸಾತ್ಮಕ ದಾಳಿಯನ್ನು ನಡೆಸಲಾಯಿತು. ಇದಕ್ಕೆ ಪ್ರತಿರೋಧವಾಗಿ ಪ್ರತಿಭಟನೆಗಳು ತೀವ್ರಮಟ್ಟಕ್ಕೆ ತಲುಪಿದಾಗ ಸರ್ಕಾರವು ಮಣಿಪುರದಲ್ಲಿದ್ದ ಗೊಂದಲದ ಸ್ಥಿತಿಯನ್ನು ತೆಗೆದುಹಾಕಿತು.

ಮಣಿಪುರವು ನೀಲಿ ಪರ್ವತಗಳಿಂದ ಸುತ್ತುವರೆದಿರುವ ನಾಡಾಗಿದೆ. ಈ ಪರ್ವತ ಶ್ರೇಣಿಗಳು ತಣ್ಣನೆಯ ಗಾಳಿಯನ್ನು ಮಣಿಪುರಿಗಳಿಗೆ ತಲುಪದಂತೆ ತಡೆಯುತ್ತವೆ. ಆದರೆ ಮಣಿಪುರಿಗಳಲ್ಲಿಯೇ ಹೊತ್ತಿಕೊಂಡಿರುವ ಬೆಂಕಿಯನ್ನು ನಂದಿಸಲು ಅವುಗಳಿಗೆ ಸಾಧ್ಯವೇ!? ಅವುಗಳು ಚಂಡಮಾರುತದ ಬಿರುಗಾಳಿಗಳನ್ನು ತಡೆಯಬಹುದು, ಆದರೆ ಅವರಲ್ಲಿರುವ ಮೌಢ್ಯವನ್ನು ತೊಡೆದುಹಾಕಲು ಸಾಧ್ಯವೇ?!
ಮಣಿಪುರ ರಾಜ್ಯವು ಉತ್ತರಕ್ಕೆ ನಾಗಾಲ್ಯಾಂಡ್, ದಕ್ಷಿಣಕ್ಕೆ ಮಿಜೋರಾಂ, ಪಶ್ಚಿಮಕ್ಕೆ ಅಸ್ಸಾಂ ಮತ್ತು ಪೂರ್ವಕ್ಕೆ ಮಯನ್ಮಾರ್ ದೇಶದ ಗಡಿಯನ್ನು ಹೊಂದಿದೆ.

ಮಣಿಪುರದಲ್ಲಿ ಮಳೆಗೆ, ನೀರಿಗೆ ಕೊರತೆಯಿಲ್ಲ. ಇದರ ಪಶ್ಚಿಮಕ್ಕೆ ಬರಾಕ್ ನದಿಯ ಜಲಾನಯನ ಪ್ರದೇಶ, ಪೂರ್ವದಲ್ಲಿ ಯು ನದಿಯ ಜಲಾನಯನ ಪ್ರದೇಶ, ಉತ್ತರದಲ್ಲಿ ಲಾನ್ಯೆ ನದಿಯ ಜಲಾನಯನ ಪ್ರದೇಶ, ಮಧ್ಯದಲ್ಲಿ ಮಣಿಪುರ ನದಿಯ ಜಲಾನಯನ ಪ್ರದೇಶವನ್ನು ಹೊಂದಿ ಸಮೃದ್ಧವಾಗಿರುವಂತೆ, ಅಲ್ಲಿನ ಮಹಿಳೆಯರು ಧಾರಾಕಾರವಾಗಿ ಕಣ್ಣೀರನ್ನು ಸುರಿಸುತ್ತಿದ್ದಾರೆ. ಇಲ್ಲಿನ ಮಹಿಳೆಯರ ಕಣ್ಣೀರಿಗೆ ಮೊದಲನ್ನು ಗುರುತಿಸುವುದಕ್ಕೆ, ಕೊನೆಯನ್ನು ಗ್ರಹಿಸುವುದಕ್ಕೆ ಸಾಧ್ಯವಾಗುತ್ತಿಲ್ಲ.

ಮಣಿಪುರದ ಅತಿದೊಡ್ಡ ನದಿ ಬರಾಕ್. ಇದು ಇರಾಂಗ್, ಮಕು ಮತ್ತು ತುವೈ ಉಪನದಿಗಳನ್ನು ಹೊಂದಿ ಅಸ್ಸಾಂ ರಾಜ್ಯವನ್ನು ಪ್ರವೇಶಿಸುತ್ತದೆ. ಮಣಿಪುರ ನದಿಯ ಜಲಾನಯನ ಪ್ರದೇಶವು ಮಣಿಪುರ, ಇಂಫಾಲ್, ಇರಿಲ್, ನಂಬುಲ್, ಸೆಕ್ಮೆಂ, ಚಕ್ಪಿ, ತೌಬಲ್ ಮತ್ತು ಖುಗಾ ಎಂಬಂತಹ ಎಂಟು ನದಿಗಳನ್ನು ಹೊಂದಿದೆ. ಈ ಎಲ್ಲಾ ನದಿಗಳು ಸುತ್ತಮುತ್ತಲಿನ ಬೆಟ್ಟಗಳಿಂದಲೇ ಹುಟ್ಟಿಕೊಂಡಿವೆ. ಈ ನದಿಗಳ ಒಳಹರಿವಿನ ಮರ್ಮ ನಮ್ಮ ರಾಜಕಾರಣಿಗಳ ಮರ್ಮದಂತೆ ಯಾರಿಗೂ ತಿಳಿಯದಂತಹ ಕಗ್ಗಂಟಾಗಿದೆ. ನದಿಯು ತಣ್ಣಗಿದ್ದು, ಒಂದೇ ಭಾರಿ ಬೋರ್ಗರೆದು ತಣ್ಣಗಾಗುವಂತೆ ನಮ್ಮ ಪ್ರಧಾನಮಂತ್ರಿಗಳು ಮೂರು ತಿಂಗಳ ಕಾಲ ದಿವ್ಯ ಮೌನವಾಗಿದ್ದು, ಜನರ ನಿತ್ಯ ಜೀವನವು ಅಲ್ಲೋಲ-ಕಲ್ಲೋಲ ಆದಮೇಲೆ ತಣ್ಣಗೆ ಮಾತನಾಡಿದ್ದಾರೆ.

ಆದರೆ ಅಲ್ಲಿಗೆ ಹೋಗುವ ಧೈರ್ಯವನ್ನು ಮಾಡಿಲ್ಲ. ಚುನಾವಣೆ ಇದ್ದರೆ ಹತ್ತು-ಹದಿನೈದು ಬಾರಿ ರೋಡ್-ಶೋ ಮಾಡುವ ಇವರು ಕಷ್ಟದ ಕಾಲದಲ್ಲಿ ಆ ಕಡೆ ತಿರುಗಿಯು ನೋಡದೇ ಇರುವುದು ಭಾರತೀಯರು ಪಶ್ಚಾತ್ತಾಪಪಡುವಂತೆ ಮಾಡಿದೆ.
ಮಣಿಪುರವನ್ನು ಭೌತಿಕ ಲಕ್ಷಣಗಳಲ್ಲಿ ವಿಭಿನ್ನವಾಗಿರುವ ಎರಡು ವಿಭಿನ್ನ ಭೌತಿಕ ಪ್ರದೇಶಗಳಾಗಿ ನಿರೂಪಿಸಬಹುದು. ಒಂದು ಒರಟಾದ ಬೆಟ್ಟಗಳು, ಕಿರಿದಾದ ಕಣಿವೆಗಳ ಹೊರ ಪ್ರದೇಶ ಮತ್ತೊಂದು ಸಮತಟ್ಟಾದ ಬಯಲಿನ ಒಳ ಪ್ರದೇಶ. ಇಲ್ಲಿನ ಕಣಿವೆ ಪ್ರದೇಶವು ಸಮತಟ್ಟಾದ ಮೇಲ್ಮೈ ಮೇಲೆ ಏರುತ್ತಿರುವ ಬೆಟ್ಟಗಳು ಮತ್ತು ದಿಬ್ಬಗಳಿಂದ ಕೂಡಿದೆ.

ಇಲ್ಲಿನ ಲೋಕ್ಟಾಕ್ ಸರೋವರವು ಕೇಂದ್ರ ಬಯಲಿನಿಂದ ನಾಗಾಲ್ಯಾಂಡ್‌ನ ಗಡಿಯವರೆಗೂ ತನ್ನ ವಿಸ್ತಾರವನ್ನು ಹರಡಿಕೊಂಡಿದೆ. ಇಲ್ಲಿನ ಮಣ್ಣಿನ ಹೊದಿಕೆಗೂ ಗಂಡು-ಹೆಣ್ಣಿನ ಸಂಬಂಧಕ್ಕೂ ನಿಕಟವಾದ ಹೋಲಿಕೆ ಇರುವಂತೆ ಕಂಡುಬರುತ್ತದೆ. ಬೆಟ್ಟದ ಪ್ರದೇಶದಲ್ಲಿ ಕೆಂಪು ಫೆರುಜಿನಸ್ ಮಣ್ಣು ಮತ್ತು ಕಣಿವೆಯಲ್ಲಿ ಮೆಕ್ಕಲು ಮಣ್ಣು ಇದೆ. ಕಣಿವೆಯ ಮಣ್ಣು ಇಲ್ಲಿನ ಗಂಡಿನ ರೀತಿಯಲ್ಲಿ ಕಠಿಣವಾಗಿದ್ದರೆ, ಕಡಿದಾದ ಇಳಿಜಾರುಗಳಲ್ಲಿರುವ ಮಣ್ಣು ಹೆಣ್ಣಿನಂತೆ ಹೆಚ್ಚಿನ ಸವೆತಕ್ಕೆ ಒಳಗಾಗಿದೆ, ಒಳಗಾಗುತ್ತಿದೆ. ಇದರ ಪರಿಣಾಮವಾಗಿ ಬಂಜರು ಬಂಡೆಗಳ ಇಳಿಜಾರುಗಳು ಸೃಷ್ಟಿಯಾಗುವಂತೆ ಅಲ್ಲಿನ ಪುರುಷರ ಮನಸ್ಸುಗಳು ಬಂಡೆಯಂತೆ ಆಗುತ್ತಿರುವುದು ಖೇದಕರವಾದ ಸಂಗತಿಯಾಗಿದೆ.

ಬೆಟ್ಟದ ತಪ್ಪಲಿನಲ್ಲಿ ರತ್ನಗಂಬಳಿಯನ್ನು ಹಾಸಿಹೊದಿಸಿರುವಂತೆ ಕಾಣುವ ಫ್ಲೋರಾ ಹೂವುಗಳು ಅಲ್ಲಿನ ಬುಡಕಟ್ಟು ಮಹಿಳೆಯರ ಸೌಂದರ್ಯವನ್ನು ಬಿತ್ತರಿಸಿದರೆ, ಬೆಟ್ಟಗಳು ಪುರುಷಾಂಕಾರದಂತೆ ಕಾಣುತ್ತವೆ. ಇಲ್ಲಿ ಏನಿಲ್ಲ ಹೇಳಿ, ನೈಸರ್ಗಿಕವಾದ ಸಸ್ಯವರ್ಗವಿದೆ. ನಾಲ್ಕು ರೀತಿಯ ವಿಶಾಲವಾಗಿ ಹರಡಿರುವ ಉಷ್ಣವಲಯದ ಅರೆ-ನಿತ್ಯಹರಿದ್ವರ್ಣ, ಒಣ ಸಮಶೀತೋಷ್ಣ ಅರಣ್ಯ, ಉಪ-ಉಷ್ಣವಲಯದ ಪೈನ್ ಕಾಡುಗಳು ಮತ್ತು ಉಷ್ಣವಲಯದ ತೇವಾಂಶವುಳ್ಳ ಅರಣ್ಯಗಳಿವೆ. ತೇಗ, ಪೈನ್, ಓಕ್, ಯುನಿಂಗ್ದೌ, ಲಿಹಾವೊ, ಬಿದಿರಿನ ಮರಗಳಿವೆ. ತಮ್ಮ ಕಷ್ಟಗಳ ನಡುವೆಯೂ ರಬ್ಬರ್, ಟೀ, ಕಾಫಿ, ಕಿತ್ತಳೆ, ಏಲಕ್ಕಿ ಬೆಳೆಯುತ್ತಾರೆ. ಆದರೆ ಅವರು ಹೆಚ್ಚು ಬೆಳೆಯುವ ಮತ್ತು ಇಷ್ಟಪಡುವ ಅಕ್ಕಿಯಂತೆ ಅಲ್ಲಿನ ಪುರುಷರ ಮನಸ್ಸುಗಳು ಬೇಗನೇ ಹಾಳಾಗುತ್ತಿರುವುದು ಜಾತಿ, ಧರ್ಮಗಳೆಂಬ ಕೀಟಗಳಿಂದ ಎಂಬುದನ್ನು ಅವರು ತಿಳಿಯದಿರುವುದು ದುರದೃಷ್ಟಕರ.

ಮಣಿಪುರ ಮತ್ತು ನಾಗಾಲ್ಯಾಂಡ್‌ಗಳ ಗಡಿಗಳ ನಡುವೆ ಇರುವ ಝುಕೊ ಎಂಬ ಕಣಿವೆಯು ಸಮಶೀತೋಷ್ಣ ಹವಾಮಾನವನ್ನು ಹೊಂದಿರುವಂತೆ, ಅಲ್ಲಿನ ಜನರಿಗೆ ಸಮಚಿತ್ತತೆಯನ್ನು ನೀಡಿದ್ದರೆ ಚೆನ್ನಾಗಿರುತ್ತಿತ್ತು. ಭಾರತದ ಈಶಾನ್ಯ ಮೂಲೆಯು ಸಾಮಾನ್ಯವಾಗಿ ಸೌಹಾರ್ದಯುತವಾದ ಹವಾಮಾನವನ್ನು ಹೊಂದಿದೆ. ಆದರೆ ಅಲ್ಲಿನ ಜನರು ಸೌಹಾರ್ದಯುತವಾದ ಮನೋಭಾವನೆಯನ್ನು ಹೊಂದಿಲ್ಲ. ಅಲ್ಲಿನ ವಾತಾವರಣದಂತೆ ಚಳಿಗಾಲದಲ್ಲಿ ಚಳಿ ಹೆಚ್ಚಾಗಿರುವಂತೆ, ಬೇಸಿಗೆಯಲ್ಲಿ ಬಿಸಿಲು ಗರಿಷ್ಠ ಮಟ್ಟಕ್ಕೆ ಹೋಗುವಂತೆ ಅಲ್ಲಿನ ಜನರು ಆವೇಶಕ್ಕೊಳಗಾಗುತ್ತಾರೆ.
ಇಂಫಾಲದ ಮೈತೇಯಿ ಜನರು ವಾರ್ಷಿಕ ಸರಾಸರಿ 933 ಮಿಲಿಮೀಟರ್ ಮಳೆಯನ್ನು ಪಡೆಯುತ್ತಾರೆ. ಆದರೂ ಕೂಡ ತಮ್ಮದೇ ನೆಲದಲ್ಲಿರುವ ಕುಕಿ ಜನಾಂಗದ ಮಹಿಳೆಯರು ಕಣ್ಣೀರು ಸುರಿಸುವಂತೆ ನಡೆದುಕೊಳ್ಳುತ್ತಾರೆ.

ನೈರುತ್ಯ ಮಾನ್ಸೂನ್ ಮಾರುತಗಳು ಬಂಗಾಳಕೊಲ್ಲಿಯಿAದ ತೇವಾಂಶವನ್ನು ಎತ್ತಿಕೊಂಡು ಪೂರ್ವ ಹಿಮಾಲಯ ಶ್ರೇಣಿಗಳ ಕಡೆಗೆ ಹೋಗುವಾಗ ಈ ಪ್ರದೇಶದಲ್ಲಿ ಮಳೆಯಾಗುವಂತೆ ಪ್ರಕೃತಿಯೇ ನೋಡಿಕೊಂಡರೂ ಮಹಿಳೆಯರ ಕಣ್ಣೀರು ಮಾತ್ರ ಧಾರಾಕಾರವಾಗಿ ಹರಿಯುವಂತೆ ತಮ್ಮ ಸ್ವಾರ್ಥಕ್ಕಾಗಿ ರಾಜಕಾರಣಿಗಳು ನೋಡಿಕೊಳ್ಳುತ್ತಿದ್ದಾರೆ.

ಇತ್ತೀಚೆಗೆ ಮಣಿಪುರದಲ್ಲಿ ಹವಾಮಾನದಲ್ಲಿ ಬದಲಾವಣೆ ಹೆಚ್ಚಾಗುತ್ತಿದೆ. ಉದಾಹರಣೆಗೆ ಮಳೆ ಮತ್ತು ತಾಪಮಾನದಲ್ಲಿ ತೀವ್ರ ಬದಲಾವಣೆಗಳು ಹೆಚ್ಚಾಗುತ್ತಿವೆ. ಆದರೆ ಅಲ್ಲಿನ ಜನಾಂಗಗಳ ನಡುವಿನ ಬಾಂಧವ್ಯದ ಬದ್ಧತೆಗಳು ಏರುಪೇರಾಗುತ್ತಿರುವುದು ಸಾಕಷ್ಟು ಹಿಂದಿನಿAದಲೇ ನಡೆಯುತ್ತಿರುವುದು ಮನುಷ್ಯ ಸಂಬಂಧಗಳ ನಡುವೆ ಬಿರುಕು ಮೂಡಿರುವುದರ ದ್ಯೋತಕವಾಗಿದೆ. ಕಣಿವೆ ಅಥವಾ ಬಯಲು ಪ್ರದೇಶಗಳಲ್ಲಿ ಮೈತೇಯಿ ಮಾತನಾಡುವ ಅಂದರೆ ಮಣಿಪುರಿ ಭಾಷಿಕರು ನೆಲೆಸಿದ್ದಾರೆ. ಬೆಟ್ಟಗಳಲ್ಲಿ ನಾಗಾಗಳು, ಕುಕಿಗಳು ಮೊದಲಾದ ಸಣ್ಣ ಬುಡಕಟ್ಟು ಜನರು ವಾಸಿಸುತ್ತಿದ್ದಾರೆ. ಇವರು ಬೆಟ್ಟಗಳ ಮೇಲ್ಮೈ ಮಣ್ಣಿನಂತೆ ಮೈತೇಯಿ ಜನರ ಹಾವಳಿಗೆ ಕೊಚ್ಚಿ ಹೋಗುತ್ತಿದ್ದಾರೆ. ಅಲ್ಲಿ ಮೈತೇಯಿ ಭಾಷೆಯು ಮಣಿಪುರಿ ಭಾಷೆಗೆ ಸಮಾನಾರ್ಥಕವಾಗಿ ಬಳಕೆಯಾಗುತ್ತಿರುವುದರಿಂದ ಇಲ್ಲಿನ ಬಹುಪಾಲು ಜನಸಂಖ್ಯೆ ಮೈತೇಯಿಯರೇ ಎಂದು ಕರೆಸಿಕೊಂಡಿದ್ದಾರೆ.

ಇವರು ಮಣಿಪುರದ ಮುಖ್ಯ ಜನಾಂಗ ಎಂಬುದೇನೋ ಸರಿ. ಆದರೆ ನಾಗಾ ಮತ್ತು ಕುಕಿ ಬುಡಕಟ್ಟು ಜನಾಂಗಗಳನ್ನು ಹಲವಾರು ಬುಡಕಟ್ಟು ಜನಾಂಗಗಳಾಗಿ ವಿಂಗಡಿಸಲಾಗಿದೆ. ಇವರೆಲ್ಲರೂ ಒಗ್ಗಟ್ಟಾಗಿದ್ದರೆ ನಮ್ಮ ಬೇಳೆ ಬೇಯ್ಯುವುದಿಲ್ಲ ಎಂಬ ಸಾಂಸ್ಕೃತಿಕ ರಾಜಕಾರಣವು ವ್ಯವಸ್ಥಿತವಾಗಿ ಬಹಳ ಹಿಂದಿನಿAದಲೇ ಇವರನ್ನು ಹೊಡೆದು ಹೊಡೆದು ಹಾಳುತ್ತಿದೆ.
ಮಣಿಪುರದಲ್ಲಿ ಮೇ 4ರಂದು ಜರುಗಿದ ಇಬ್ಬರು ಮಹಿಳೆಯರ ಸಾಮೂಹಿಕ ಅತ್ಯಾಚಾರ ಮತ್ತು ಬೆತ್ತಲೆ ಮೆರವಣಿಗೆಯು ಜುಲೈ 20ರಂದು ಹೊರ ಜಗತ್ತಿಗೆ ತಿಳಿಯಿತು. ಈ ಘಟನೆಯು ಪ್ರಪಂಚದ ಜನರನ್ನು ತಲ್ಲಣಗೊಳಿಸಿತು.

ಇಡೀ ಜಗತ್ತೇ ಈ ಕೃತ್ಯವನ್ನು ವಿರೋಧಿಸಿದರೂ ಕೂಡ, ಒಟ್ಟು ದೇಶವನ್ನೇ ತನ್ನ ಕುಟುಂಬ ಎಂದು ಕರೆದುಕೊಳ್ಳುವ ನಮ್ಮ ಪ್ರಧಾನಿಗಳು ಬೆಂಕಿ ಹೊತ್ತಿಕೊಂಡ ಮೂರು ತಿಂಗಳು ದಿವ್ಯ ಮೌನದಿಂದ ಇದ್ದರು ಎಂಬುದನ್ನು ಜಗತ್ತು ಮರೆಯುತ್ತದೆಯೇ? 140 ಕೋಟಿ ಜನರು ನನ್ನ ಕುಟುಂಬಸ್ಥರೇ ಎಂದು ಹೇಳಿಕೊಳ್ಳುವ ಪ್ರಧಾನಿಗಳು ಅದರಲ್ಲಿ ಮಹಿಳೆಯರೂ ಇದ್ದಾರೆ ಎಂಬುದನ್ನು ಮರೆತಿದ್ದಾರೆಯೇ!? ಒಟ್ಟಾರೆ ನಮ್ಮ ಪ್ರಧಾನಿಗಳ ಮೌನ, ಮೈತೇಯಿ ಮತಾಂಧರ ಆರ್ಭಟ ಕುಕಿ ಜನಾಂಗದ ಮಹಿಳೆಯರ ಬದುಕನ್ನು ಮೂರಾಬಟ್ಟೆ ಮಾಡಿರುವುದಂತೂ ಖಚಿತ.

(ಡಾ. ಸಿದ್ದಯ್ಯ ರೆಡ್ಡಿಹಳ್ಳಿ, 9449899520)

ಸುದ್ದಿದಿನ.ಕಾಂ|ವಾಟ್ಸಾಪ್|9980346243

 

Continue Reading

Trending