Connect with us

ದಿನದ ಸುದ್ದಿ

ಪರಿಸರದ ಪ್ರಜ್ಞೆ ಇಲ್ಲದಾಗ, ಸೃಷ್ಟಿಸುತ್ತಿರುವ ಜಾಗತಿಕ ತಲ್ಲಣಗಳು..!

Published

on

  • ಸೋಮನಗೌಡ. ಎಸ್.ಎಂ ಕಟ್ಟಿಗೆಹಳ್ಳಿ,ಪತ್ರಕರ್ತರು, ಬೆಂಗಳೂರು

ರಮಾಣು ಬಾಂಬುಗಳನ್ನು ಒಂದಾದ ಮೇಲೆ ಒಂದರಂತೆ ಸಿಡಿಸಿ ಈ ಜಗತ್ತಿನ ಪವರ್ ಫುಲ್ ರಾಷ್ಟ್ರ ಅಮೆರಿಕವನ್ನೇ ನಿರ್ನಾಮ ಮಾಡುತ್ತೇನೆ ಎಂದಿದ್ದ ಉತ್ತರ ಕೋರಿಯಾದ ಅಧ್ಯಕ್ಷ ಕಿಮ್ ಜಾಂಗ್ ಉನ್ ಈಗ ಅನಾರೋಗ್ಯದಿಂದ ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದಾರೆ.

ತನ್ನಲ್ಲಿರುವ ಪರಮಾಣು ಸಿಡಿತಲೆಗಳಿಂದ ಇರಾನ್ ದೇಶವನ್ನೇ ನಿರ್ನಾಮ ಮಾಡಬಲ್ಲೆ ಅಂತ ಹೇಳಿದ್ದ ಅಮೆರಿಕದ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಇಡೀ ವಿಶ್ವವನ್ನೇ ದಂಗು ಬಡಿಸುತ್ತಿರುವ ಕೋವಿಡ್-19 ವೈರಸ್ ವಿರುದ್ಧ ಹೋರಾಡುತ್ತಿದ್ದಾರೆ.

ಅತ್ಯಾಧುನಿಕ ಮಿಸೈಲ್‍ಗಳು, ಅಣುಬಾಂಬ್‍ಗಳು, ಶಸ್ತ್ರಸಜ್ಜಿತ ಸೈನ್ಯನಿಂದ ತಮ್ಮ ತಮ್ಮ ದೇಶಗಳನ್ನು ರಕ್ಷಿಸಿಕೊಂಡಿರುವ ಬಹುತೇಕ ಎಲ್ಲಾ ದೇಶಗಳನ್ನು ಕಾಣದ ಒಂದು ವೈರಣು ಜಗತ್ತನ್ನೇ ನಾಶ ಮಾಡಲು ತನ್ನ ಕಬಂಧಬಾಹುವನ್ನು ಚಾಚುತ್ತಲೇ ಇದೆ.

ವಿಶ್ವದ ಜನರೆಲ್ಲರೂ ಕೊರೋನಾ ವೈರಸ್ ಎಂಬ ಯಃಕಶ್ಚಿತ್ ಸೂಕ್ಷ್ಮಾಣುವಿಗೆ ಹೆದರಿ ಮನೆಯಲ್ಲೇ ಅವಿತು ಕುಳಿತಿದ್ದಾರೆ. ಜನ ಜಂಗುಳಿಯಿಂದ ತುಂಬಿ ತುಳುಕುತ್ತಿದ್ದ ಪ್ರಪಂಚದ ಎಲ್ಲಾ ನಗರಗಳು ಬಿಕೋ ಎನ್ನುತ್ತಿವೆ. ಆಕಾಶ ಶುಭ್ರವಾಗಿದೆ. ನದಿಗಳು ಶುದ್ಧವಾಗಿ ಹರಿಯುತ್ತಿವೆ. ಕಾಡುಪ್ರಾಣಿ, ಪಕ್ಷಿಗಳೆಲ್ಲವೂ ನಗರಗಳತ್ತ ಮುಖಮಾಡುತ್ತಿವೆ.

ಲೇಖಕರು : ಸೋಮನಗೌಡ. ಎಸ್.ಎಂ ಕಟ್ಟಿಗೆಹಳ್ಳಿ, ಪತ್ರಕರ್ತರು, ಬೆಂಗಳೂರು

ಮತ್ತೊಂದೆಡೆ ಕೋಟ್ಯಂತರ ಮಂದಿ ಕೆಲಸ ಕಳೆದುಕೊಂಡು ಬೀದಿಗೆ ಬಿದ್ದಿದ್ದಾರೆ. ಬಡತನದ ರೇಖೆ ಹೆಚ್ಚಾಗುತ್ತಿದೆ. ಕೋವಿಡ್ ಎಂಬ ಸೂಕ್ಷ್ಮಾಣು ಅಕ್ಷರಶಃ ಜಗತ್ತನ್ನೇ ತಲ್ಲಣಗೊಳಿಸಿದೆ. ಈಗ ನಾವು ವಿಜ್ಞಾನದ ಯುಗದಲ್ಲಿದ್ದೇವೆ. ನಮ್ಮ ಮುಂದೆ ವಿಜ್ಞಾನ ಹೊಸ ತರ್ಕ ಮತ್ತು ಹೊಸ ಸತ್ಯ ಶೋಧನೆಯನ್ನು ಮುಂದಿಟ್ಟಿದೆ.

ಆದರೆ ಮನುಷ್ಯ ಇಂದಿಗೂ ಎದುರಿಸುತ್ತಿರುವ ಹಳೆಯ ಯಕ್ಷಪ್ರಶ್ನೆ ನಾವು ಪರಿಸರ ಮುಂದೆ ಕೇವಲ ಬುದ್ಧಿ ಜೀವಿಗಳಷ್ಟೇ? ಜೀವ ಜಗತ್ತಿನ ಸಂಕೀರ್ಣತೆಯನ್ನು ಅರ್ಥಮಾಡಿಕೊಳ್ಳದಿದ್ದರೆ ಮುಂದೆ ಮನುಷ್ಯ ಎದುರಿಸುವ ಅತ್ಯಂತ ದೊಡ್ಡ ವಿಪತ್ತು ಜೈವಿಕ ಪ್ರಳಯ!

ಇಡೀ ವಿಶ್ವ ಒಂದು ಬೀಜರೂಪದ ಮಹಾನ್ ಅಗ್ನಿ. ಬಿಂದುವಿನಿಂದ ಆಸ್ಫೋಟಗೊಂಡು ವಿಶ್ವರೂಪ ತಳೆಯುತ್ತಾ ಸಾಗುತ್ತಿದೆ. ಸೃಷ್ಟಿ ಸ್ಥಿತಿ ಲಯಗಳ ನಿರಂತರ ಆವರ್ತದಲ್ಲಿ ವಿಶ್ವ ಇದೆ ಎಂದು ಪ್ರತಿಪಾದಿಸುತ್ತಾರೆ ಖ್ಯಾತ ಖಭೌತ ವಿಜ್ಞಾನಿ ಹಬಲ್ ಮತ್ತು ರಾಬರ್ಟ್ ಸನ್.

ಭೂಮಿಯ ಅವೈಜ್ಞಾನಿಕ ಮೂಲದಿಂದ ಜೈವಿಕ ಸೃಷ್ಟಿಯ ದಾರಿಯಲ್ಲಿ ಜೀವಿಗಳ ಬೆಳವಣಿಗೆ ಹೇಗಾಯಿತು ಎಂಬುದಕ್ಕೆ ನಿಖರವಾದ ಉತ್ತರ ಇನ್ನೂ ದೊರೆಯದಿದ್ದರೂ ವಿಶ್ವಸ್ಥಾಯಿ ವಾದ ಸಿದ್ಧಾಂತದ ಪ್ರವರ್ತಕರಲ್ಲಿ ಮುಖ್ಯವಾದ ಖಗೋಳ ವಿಜ್ಞಾನಿಗಳಾದ ಫ್ರೆಡ್‍ಹಾಯ್ಲ್ ಮತ್ತು ಭಾರತೀಯ ಗಣಿತ ಶಾಸ್ತ್ರಜ್ಞ ವಿಷ್ಣುಜಯಂತ್, ನಾರ್ಲೀಕರ್ ಮುಂತಾದವರು ವಿಶ್ವವನ್ನು ಅನಾದಿ, ಅನಂತ ಎನ್ನುತ್ತಾರೆ.

ಭೂಮಿ ಲಕ್ಷಾಂತರ ವರ್ಷಗಳ ಹಿಂದೆ ಸೂಕ್ಷ್ಮಾಣು ಜೀವಿಯಿಂದ ಪ್ರಾರಂಭಗೊಂಡ ಜೀವ ಸಂಕುಲ ಮನುಷ್ಯ ಸೇರಿದಂತೆ ಸಕಲ ಚರಾಚರ ಜೀವಿಗಳಿಗೆ ಆವಾಸಸ್ಥಾನ ಈ ವಸಂಧರೆ. ಜೀವವಿಕಾಸದ ಅತ್ಯಂತ ಸಂಕೀರ್ಣವೂ, ವಿಸ್ಮಯಗಳ ಮ್ಯಾಜಿಕ್ ಬಾಲ್ ಈ ಧರೆ.

ನಾವು ಭೂಮಿಯ ಒಂದು ಭಾಗ ಮಾತ್ರ ಎನ್ನುವುದನ್ನು ಮನವರಿಕೆ ಮಾಡಿ ಕೊಳ್ಳಬೇಕು. ಇಲ್ಲಿ ಇರುವುದು ಮನುಷ್ಯ ಜೀವಿ ಮಾತ್ರವಲ್ಲ. ಜೀವ ಪರಿಸರದ ಒಂದು ಅಂಗ ಮಾತ್ರ. ಈ ಧರೆಯಲ್ಲಿ ಮನುಷ್ಯನಂತೆಯೇ ಲಕ್ಷಾಂತರ ಜೀವಿಗಳಿಗೂ ಬದುಕುವ ಹಕ್ಕಿದೆ, ಸ್ವಾತಂತ್ರವಿದೆ.

ಮನುಷ್ಯನಿಗೆ ತಗುಲಿರುವ ಕೊರೋನಾ ಸೂಕ್ಷ್ಮಾಣು ಈಗ ಪ್ರಾಣಿ ಸಂಕುಲವನ್ನು ಆವರಿಸಿಕೊಳ್ಳುತ್ತಿದೆ. ಇದಕ್ಕೆ ಸಾಕ್ಷಿಯಾಗಿದ್ದು ಅಮೆರಿಕದ ನ್ಯೂಯಾರ್ಕ್ ನಗರದ ಬ್ರಾಂಕ್ಸ್ ಮೃಗಾಲಯದಲ್ಲಿರುವ ನಾಲ್ಕು ವರ್ಷದ ‘ಮಲಯನ್’ ಎಂಬ ಹೆಸರಿನ ಹುಲಿಗೆ ಕೋವಿಡ್-19 ವೈರಸ್ ತಗುಲಿದೆ.

ಈಗ ಮನುಷ್ಯನನ್ನಷ್ಟೇ ಅಲ್ಲ ಪ್ರಾಣಿಗಳಿಗೂ ಮಾರಕ ವೈರಾಣು ದಾಂಗುಡಿ ಇಟ್ಟಿರುವುದು ಪ್ರಾಣಿ ತಜ್ಞರಲ್ಲಿ ಆತಂಕ ಸೃಷ್ಟಿಸಿದೆ. ಮನುಷ್ಯನಿಂದ-ಪ್ರಾಣಿಗಳಿಗೆ ಸೋಂಕು ತಗುಲಿರುವುದು ಆತ್ಯಂತ ಅಪಾಯಕಾರಿ ಬೆಳವಣಿಗೆ ಎಂದು ವಿಜ್ಞಾನಿಗಳು ಕಳವಳ ವ್ಯಕ್ತಪಡಿಸಿದ್ದಾರೆ.

ಮನುಷ್ಯ ಸಮಾಜದಿಂದ ದೂರವಿರುವ ಕಾಡು ಪ್ರಾಣಿಗಳನ್ನು ಕೊರೋನಾ ಮತ್ತಿತರ ರೋಗಾಣುಗಳು ಬಾಧಿಸಿದರೆ ಭವಿಷ್ಯದಲ್ಲಿ ಜೈವಿಕ ಸರಪಳಿಯ ಕೊಂಡಿ ಕಳಚಿ ಈ ಪರಿಸರವೇ ನಾಶವಾದೀತು! ಕಾಡುಪ್ರಾಣಿಗಳಿಗೆ ಕೊರೋನಾ ವೈರಸ್ ಹಬ್ಬುವುದನ್ನು ಕಲ್ಪಿಸಿಕೊಳ್ಳುವುದು ಕಷ್ಟ. ಇವುಗಳನ್ನು Zoonatic ಕಾಯಿಲೆಗಳೆಂದು ಕರೆಯಬಹುದು. ಇವು ಮನುಷ್ಯನ ಹಲವು ಕಾರ್ಯ ಚಟುವಟಿಕೆಗಳಿಂದಲೇ ಹರಡಬಹುದು.

ಉದಾಹರಣೆಗೆ ಕೊರೋನಾದಂತೆಯೇ ಎಬೊಲ, ಸಾರ್ಸ್ ವೈರಸ್‍ಗಳು ವನ್ಯಜೀವಿಗಳಿಂದಲೇ ಬಂದಿವೆ. ಅಂದರೆ ಹಾವು, ಬಾವಲಿ ಮತ್ತು ಇತರ ಪ್ರಾಣಿಗಳಿಂದ, ಗಿಡ ಮತ್ತು ಕೀಟಗಳಿಂದ. ಜೊನಾಟಿಕ್ ಕಾಯಿಲೆಗಳು ಹೆಚ್ಚಾಗಿ ಹರಡುವುದು ಮನುಷ್ಯನ ಚಟುವಟಿಕೆಗಳಿಂದಲೇ. ಆತ ಕಡಿಯುವ ಕಾಡು, ಸೃಷ್ಟಿಸುವ ಪರಿಸರ ಮಾಲಿನ್ಯ ಮತ್ತು ಜಾಗತಿಕ ವ್ಯಾಪಾರ ವಹಿವಾಟುಗಳು ಈ ವಿಷಯದಲ್ಲಿ ಬೃಹತ್ ಪಾತ್ರವನ್ನೇ ಸೃಷ್ಟಸಿದೆ.

ನೋವೆಲ್ ಕೊರೋನಾ ಅಥವಾ ಕೋವಿಡ್-19 ಎನ್ನುವ ಮಾರಕ ಕಾಯಿಲೆ ಬಂದಿದ್ದು ಮಾತ್ರ ಚೀನಾದ ವುಹಾನ್ ಮಾರುಕಟ್ಟೆಯಿಂದ. ಒಂದು ಬಾವಲಿಯೊಳಗಿನ ಸೂಕ್ಷ್ಮಾಣು ಮನುಷ್ಯಲೋಕದ ಎಲ್ಲಾ ಚಟುವಟಿಕೆಗಳನ್ನು ಸ್ತಬ್ಧಗೊಳಿಸಿದೆ. ಲಸಿಕೆಯೇ ಇಲ್ಲದ ಈ ವೈರಸ್‍ಗೆ ಲಾಕ್‍ಡೌನ್, ಸೀಲ್‍ಡೌನ್ ಮತ್ತು ಕ್ವಾರಂಟೈನ್ ಎನ್ನುವ ಸ್ವಯಂ ನಿಯಂತ್ರಣವೇ ಮದ್ದು.

ಇದರಿಂದಾಗಿ ಭೂಮಿಯ ಕಲುಷಿತ ಪರಿಸರದ ಮೇಲೆ ಎಂತಹ ಪರಿಣಾಮ ಉಂಟುಮಾಡಿದೆ ಎನ್ನುವುದು ನಾವೆಲ್ಲಾ ನೋಡುತ್ತಿದ್ದೇವೆ. ಪ್ರಕೃತಿ ಮಾತೆ ಮನುಷ್ಯನಿಗೆ ಅನೇಕ ಎಚ್ಚರಿಕೆಗಳನ್ನು ನೀಡುತ್ತಾಬಂದಿದೆ.

ಸಾಂಕ್ರಾಮಿಕ ರೋಗಗಳು ಈ ಜಗತ್ತಿನಲ್ಲಿ ಮಹತ್ವದ ಬದಲಾವಣೆಗೆ ಹಲವು ಬಾರಿ ಮುನ್ನುಡಿ ಬರೆದಿವೆ.
ಈ ಹಿಂದೆ ಜಗತ್ತನ್ನೇ ಕಾಡಿದ ಮಹಾಮಾರಿಗಳಿಗೆ ಬಹುದೊಡ್ಡ ಇತಿಹಾಸವೇ ಇದೆ. 12 ಸಾವಿರ ವರ್ಷಗಳಲ್ಲಿ ಹಲವು ಸಾಂಕ್ರಾಮಿಕ ರೋಗಗಳು ಜಗತ್ತನ್ನು ದಂಗು ಬಡಿಸಿವೆ. ಚೀನಾದ ಹಮೀನ್ ಮಂಘಿ ಎಂಬಲ್ಲಿ ಪತ್ತೆ ಮಾಡಲಾದ ಸುಮಾರು 5000 ವರ್ಷಗಳಷ್ಟು ಹಳೆಯ ಮನೆಯೊಂದರಲ್ಲಿ ಉತ್ಕನನದ ವೇಳೆ ಸುಟ್ಟು ಕರಕಲಾದ ನೂರಾರು ಅಸ್ತಿಪಂಜರಗಳು ಕಂಡವು.

ಯಾವುದೋ ಸಾಂಕ್ರಾಮಿಕ ರೋಗಕ್ಕೆ ತುತ್ತಾಗಿ ಇಡೀ ಊರಿಗೂರೇ ಬಲಿಯಾಗಿರಬಹುದು. ಎಲ್ಲ ಶವಗಳನ್ನು ಒಂದೇ ಮನೆಯಲ್ಲಿ ಸುಟ್ಟುಹಾಕಿರಬಹುದು ಎಂದು ಪುರಾತತ್ವ ಸಂಶೋಧಕರು ವಿಶ್ಲೇಷಿಸಿದ್ದಾರೆ. ಕ್ರಿ.ಪೂ 430ರಲ್ಲಿ ಗ್ರೀಸ್ ದೇಶದ ಅಥೆನ್ಸ್‌ನಲ್ಲಿ ಕಂಡ ವಿಚಿತ್ರ ಕಾಯಿಲೆಗೆ ಲಕ್ಷಾಂತರ ಮಂದಿ ಸತ್ತರು. ಇದನ್ನು ಪ್ಲೇಗ್ ಎಂದು ಇತಿಹಾಸಕಾರರು ಅಂದಾಜಿಸಿದ್ದಾರೆ.

ಕ್ರಿ.ಶ. 165 ರಿಂದ 180 ಹಾಗೂ 250 ರಿಂದ 271 ಮತ್ತು 541-542ರಲ್ಲಿ ರೋಮ್‍ನಲ್ಲಿ ಪ್ಲೇಗ್ ರೋಗಕ್ಕೆ ಲಕ್ಷಾಂತರ ಮಂದಿ ಪ್ರಾಣತೆತ್ತರು. ಕ್ರಿ.ಶ. 250ರಿಂದ271ರ ಪ್ಲೇಗ್ ಎಷ್ಟು ಭೀಕರವಾಗಿತ್ತು ಎಂದರೆ ಇದು ಉತ್ತುಂಗಕ್ಕೇರಿದಾಗ ದಿನಕ್ಕೆ 5000 ಮಂದಿ ರೋಮ್ ನಗರವೊಂದರಲ್ಲೇ ಸಾಯುತ್ತಿದ್ದರು ಎಂದು ಇತಿಹಾಸಗಳೇ ಹೇಳುತ್ತವೆ.

1346-53ರಲ್ಲಿ ಏಷ್ಯಾದಿಂದ ಯೂರೋಪ್‍ವರೆಗೆ ಹಬ್ಬಿದ ಪ್ಲೇಗ್ ಮಹಾಮಾರಿಗೆ ಯೂರೋಪ್‍ನ ಅರ್ಧಕ್ಕೂ ಹೆಚ್ಚು ಜನರನ್ನು ಬಲಿ ತೆಗೆದುಕೊಂಡಿತ್ತು. ಇಲಿಗಳ ಮೂಲಕ ಬ್ಯಾಕ್ಟೀರಿಯಾಗಳು ಹರಡಿ ಲಕ್ಷಾಂತರ ಜನರು ಪ್ರಾಣ ಬಿಟ್ಟರು.

ಕೊಕೊಲಿಸ್ಟಲಿ (ಟೈಫಾಯ್ಡ್ ಮಾದರಿಯ ಜ್ವರ) ಕ್ರಿ.ಶ 1545-48ರಲ್ಲಿ ಸ್ಪೇನ್‍ನಲ್ಲಿ ಕಾಣಿಸಿಕೊಂಡ ಸಾಂಕ್ರಾಮಿಕ ರೋಗಕ್ಕೆ ಮೆಕ್ಸಿಕೋ ಮತ್ತು ಮಧ್ಯ ಅಮೆರಿಕದ ಸುಮಾರು 1.50 ಕೋಟಿ ಜನರು ಬಲಿಯಾದರು. ಕ್ರಿ.ಶ. 1665-66 ರಲ್ಲಿ ಇಲಿಗಳ ಮೂಲಕ ಕಾಣಿಸಿಕೊಂಡ ವೈರಸ್ ಬ್ರಿಟನ್‍ನಲ್ಲಿ 1ಲಕ್ಷಕ್ಕೂ ಅಧಿಕ ಜನರ ಸಾವಿಗೆ ಕಾರಣವಾಯಿತು.
ಜಸ್ಪೀನಿಯರ್ ಪ್ಲೇಗ್, ಥರ್ಡ್‍ಪ್ಲೇಗ್, ಆಂಟೋನೈನ್ ಪ್ಲೇಗ್, ಗ್ರೇಟ್ ಪ್ಲೇಗ್‍ಗಳಿಂದ ಲೆಕ್ಕವಿಲ್ಲದಷ್ಟು ಜನ ಬಲಿಯಾಗಿದ್ದಾರೆ.

ಇತ್ತೀಚಿನ ಕಾಯಿಲೆಗಳ ಬಗ್ಗೆ ನಮ್ಮ ಹಿರಿಕರು ಹೇಳುವ ಭೀಕರ ಕಾಯಿಲೆ ಎಂದರೆ ಸ್ಪ್ಯಾಮೊಷ್ ಫ್ಲೂ. ಆ ರೋಗಕ್ಕೆ 1918-19ರಲ್ಲಿ ಜಗತ್ತಿನಲ್ಲಿ 4ರಿಂದ5 ಕೋಟಿ ಜನ ಸಾವನ್ನಪ್ಪಿದ್ದಾರೆ ಎಂದು ಅಂದಾಜಿಸಿ ಹೇಳಿರುವುದು ದಾಖಲೆಗಳೇ ಸ್ಪಷ್ಟಪಡಿಸುತ್ತವೆ. 2002-2003ರಲ್ಲಿ ಸಾರ್ಸ್‍ಗೆ 770, 2012ರಲ್ಲಿ ಕಾಣಿಸಿಕೊಂಡ ಮರ್ಸ್ 850ಜನ, ಎಬೊಲಾ ಮಾರಣಾಂತಿಕ ರೋಗಕ್ಕೆ 2014-16ರಲ್ಲಿ 11.300 ಜನರು ಪ್ರಾಣಬಿಟ್ಟಿದ್ದಾರೆ.

ಸ್ಪ್ಯಾಮೊಷ್ ಫ್ಲೂ (1918-19)ಬಂದು ಹೋದ ನಂತರ ಬರೊಬ್ಬರಿ 100 ವರ್ಷಗಳ ಬಳಿಕ 2019 ಡಿಸೆಂಬರ್-19 ರಂದು ಚೀನಾದಲ್ಲಿ ಕಾಣಿಸಿಕೊಂಡ ಕೊರೋನಾ ವೈರಸ್‍ಗೆ 1.62 ಲಕ್ಷಕ್ಕೂ ಹೆಚ್ಚಿನ ಮಂದಿ ಜಗತ್ತಿನಾದ್ಯಂತ ಜೀವ ಕಳೆದುಕೊಂಡಿದ್ದಾರೆ. ವಿಶ್ವ ಆರೋಗ್ಯ ಸಂಸ್ಥೆ ಈ ಕೋವಿಡ್ ರೋಗವನ್ನು ಜಾಗತಿಕ ಪಿಡುಗು ಎಂದು ಕಳೆದ ತಿಂಗಳು 11 ಘೋಷಿಸಿದೆ. ಕ್ರಿ.ಪೂರ್ವ, ಕ್ರಿ.ಶಕ ಎನ್ನುವ ಕಾಲಘಟ್ಟಗಳ ಇತಿಹಾಸ ಹೇಳುವಂತೆ ಕೊರೋನಾ ಪೂರ್ವ ಮತ್ತು ಕೊರೋನಾ ನಂತರದ ಜಗತ್ತು ಎಂದು ವಿಭಜಿಸಿ ಹೇಳಬೇಕಾಗಿರುವ ಕಾಲ ಬಂದಿದೆ.

ಇದೇ ವರ್ಷ ಜನವರಿಯಲ್ಲಿ ದಾವೋಸ್ ವಿಶ್ವ ಆರ್ಥಿಕ ವೇದಿಕೆ ಸಮಾವೇಶದಲ್ಲಿ ಹವಮಾನ ಬದಲಾವಣೆ ತಡೆ ಕುರಿತ ಸಮಾಲೋಚನೆಯಲ್ಲಿ ಪರಿಸರ ಹಾಗೂ ಆರ್ಥಿಕತೆಯ ಮೇಲೆ ಪರಿಣಾಮ ಉಂಟು ಮಾಡುತ್ತಿರುವ ಹವಮಾನ ವೈಪರೀತ್ಯ ಮತ್ತು ಇತರ ಸಮಸ್ಯೆಗಳ ಬಗ್ಗೆ ಚರ್ಚಿಸಲು ಬಂದಿದ್ದ ಜಾಗತಿಕ ನಾಯಕರ ಮುಂದೆ ಸ್ವೀಡನ್ 16ರ ಬಾಲೆ ಗ್ರೇತಾ ಥನ್‍ಬರ್ಗ್ ‘ಇನ್ನು ಸಮಯವಿಲ್ಲ ಭೂಮಿಯ ತಾಪಮಾನ ತಗ್ಗಿಸಲು ಏನಾದರೂ ಕ್ರಮ ಕೈಗೊಳ್ಳಿ.

2030-2050 ಅಂತ ಕಥೆ ಹೇಳಬೇಡಿ’ ಎಂದು ಹೇಳಿದರೂ ದೊಡ್ಡಣ್ಣ ಅಮೆರಿಕ ನಿರ್ಲಕ್ಷಿಸಿತು. ಈಗ ನೋಡಿ ಭೌತಿಕ ಯುದ್ಧವಿಲ್ಲದೇ ಶೀತಲ ಯುದ್ಧದ ಸ್ಥಿತಿಗೆ ಕಾಣದ ಕೊರೋನಾ ಸೂಕ್ಷ್ಮಾಣುಗಳು ಮನುಷ್ಯನ ವಿರುದ್ಧ ಹೋರಾಟಕ್ಕಿಳಿದಿವೆ.
ಮನುಷ್ಯನ ಅತಿ ಆಸೆಗೆ ಸಿಲುಕಿ ಭೂಮಿ ಬಿಸಿಯಾಗುತ್ತಿದೆ. ಪಾತಾಳದ ಕಲ್ಲಿದ್ದಲು ಕರಗಿ ವಿದ್ಯುತ್ ಆಗಿ ಪರಿವರ್ತಿಯಾಗಿ ಓಝೋನ್ ಪದರವನ್ನೇ ರಂಧ್ರ ಮಾಡುತ್ತಿದೆ.

ಪೆಟ್ರೋಲ್ ಉತ್ಪನ್ನಗಳ ಬಳಕೆಯಿಂದ ಪರಿಸರ ನಾಶವಾಗುತ್ತಿದೆ. ಸಿಮೆಂಟ್, ಉಕ್ಕು ಕಾರ್ಖಾನೆಗಳಿಂದ ಭೂಮಿ ಕೆಂಡವಾಗುತ್ತಿದೆ. ಆಕಾಶವನ್ನು ಕಲುಷಿತಗೊಳಿಸುತ್ತಿದ್ದೇವೆ. ಇಂತಿಪ್ಪ ಪರಿಸರದ ಮೇಲೆ ನಡೆಯುತ್ತಿರುವ ಮನುಷ್ಯನ ದುರಾಸೆಗೆ ಇಡೀ ಭೂ ಮಂಡಲದ ವಿನಾಶದ ಅಂಚಿಗೆ ಹೋಗುತ್ತಿದೆ.

ಅಣ್ವಸ್ತ್ರಗಳನ್ನು ಬಳಸಿ ನಡೆಸುವ ಹತ್ಯಾಕಾಂಡವು ಮನುಷ್ಯ ಕುಲಕ್ಕೆ ಎಷ್ಟು ಕಂಟಕವಾಗಬಲ್ಲದೋ ವೈರಸ್‍ಗಳು ಕೂಡ ಅಷ್ಟೇ ಮಟ್ಟಿನ ಸಮಸ್ಯೆಯನ್ನು ಸೃಷ್ಟಿಸುತ್ತಿದೆ. ಮನುಷ್ಯ ತನ್ನ ಸ್ವಾರ್ಥಕ್ಕಾಗಿ ವಸುಂಧರೆಯ ಸಂಪತ್ತನ್ನು ಅತಿಯಾಗಿ ದುರ್ಬಳಕೆ ಮಾಡಿಕೊಂಡಿದ್ದಕ್ಕಾಗಿ ನಿಸರ್ಗದ ದೇವತೆಗಳು ಕೊಟ್ಟಿರುವ ಈ ಶಿಕ್ಷೆಯೇ ಸಾಂಕ್ರಾಮಿಕ ಪಿಡುಗು ಕೊರೋನಾ ವೈರಸ್.

ಈ ಕೊರೋನಾ ವೈರಸ್‍ಗೆ ಅತ್ಯಂತ ಹೆಚ್ಚು ಬಲಿಯಾಗುತ್ತಿರುವುದು 60 ವರ್ಷ ಮೇಲ್ಪಟ್ಟ ವೃದ್ಧರು ಮತ್ತು 8 ವರ್ಷದ ಒಳಗಿನ ಮಕ್ಕಳು. ಸಾವಿನ ದವಡೆಯಿಂದ ರಕ್ಷಿಸಲು ವೈದ್ಯರು ತಮ್ಮ ಪ್ರಾಣವನ್ನೂ ಲೆಕ್ಕಿಸದ ಹೋರಾಡುತ್ತಿದ್ದಾರೆ. ಅವರಿಗೆ ಕೋಟಿ ಕೋಟಿ ನಮನಗಳು.

ಇದು ವಿಶ್ವಮಟ್ಟದ ಬಿಕ್ಕಟ್ಟಿನ ಸಂದರ್ಭ. ನಮ್ಮ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು ಯೋಚಿಸಬೇಕಾದ ಕಾಲ. ಸಂಕಷ್ಟದಲ್ಲಿರುವ ಜನರಿಗೆ ಸಹಾಯ ಹಸ್ತ ಚಾಚಲೇ ಬೇಕು. ‘ಸಾಲು ಮನೆಗೆ ಬೆಂಕಿ ಬಿದ್ದರೆ ಸಂಪನ್ನರ ಮನೆ ಉಳಿಯುತ್ತದಾ’? ವೇದ ಸುಳ್ಳಾದರೂ ಗಾದೆ ಸುಳ್ಳಾಗದು. ‘ಒಲೆ ಹತ್ತಿ ಉರಿದಡೆ ನಿಲಬಹುದಲ್ಲದೆ ಧರೆ ಹತ್ತಿ ಉರಿದಡೆ ನಿಲಲು ಬಾರದು’ ಬಸವಣ್ಣನವರ ಈ ವಚನ ಆಗಾಗ ನೆನಪಾಗುತ್ತದೆ.

ಪರಿಸರದಲ್ಲಿ ಆಗುವ ಏರಿಳಿತಳನ್ನು ಅಥವಾ ಬದಲಾವಣೆಗಳನ್ನು ಕಡಿಮೆ ಅವಧಿಯಲ್ಲಿ ಅಂದಾಜಿಸುವುದು ಕಷ್ಟ. ಇತಿಹಾಸಕಾರ ‘ಲಾ ಮಾರ್ಟಿನ್’ ಹೇಳುವಂತೆ ‘ಇತಿಹಾಸ ಕೇವಲ ಭೂತಕಾಲವನ್ನಷ್ಟೇ ಹೇಳುವುದಿಲ್ಲ. ಭವಿಷ್ಯವನ್ನು ನುಡಿಯುತ್ತದೆ’ ಎಂಬ ಮಾತು ಸರ್ವಕಾಲಿಕವು ಸತ್ಯವಾದುದು. ಅದುವೇ ಸೂಕ್ಷ್ಮಾಣು ಸೃಷ್ಟಿಸುತ್ತಿರುವ ಜಾಗತಿಕ ತಲ್ಲಣಗಳು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ

ಸಂವಿಧಾನಕ್ಕೆ ಅಪಾಯವಾದರೆ, ಬಡವರ, ಶ್ರಮಿಕರ ಭವಿಷ್ಯಕ್ಕೆ ಅಪಾಯವಾದಂತೆ : ಸಿಎಂ ಸಿದ್ದರಾಮಯ್ಯ

Published

on

ಸುದ್ದಿದಿನ,ಮಡಿಕೇರಿ : ದೇಶದ ಸಂವಿಧಾನಕ್ಕೆ ಅಪಾಯವಾದರೆ ಈ ದೇಶದ ಮಹಿಳೆಯರ, ಬಡವರ, ಮಧ್ಯಮ ವರ್ಗದವರ, ಶ್ರಮಿಕರ, ಬದುಕು-ಭವಿಷ್ಯಕ್ಕೆ ಅಪಾಯ ಎಂದರ್ಥ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಮಡಿಕೇರಿಯಲ್ಲಿ ನಡೆದ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ಈ ಲೋಕಸಭಾ ಚುನಾವಣೆ ನಮಗೊಂದು ಅವಕಾಶ. ಈ ಬಾರಿ ಬಿಜೆಪಿಯನ್ನು ಸೋಲಿಸಿ ಕಾಂಗ್ರೆಸ್ ಗೆಲ್ಲಿಸುವ ಮೂಲಕ ಪ್ರಜಾತಂತ್ರ ಉಳಿಸಬೇಕು ಎಂದು ಕರೆ ನೀಡಿದರು.

ಬಳಿಕ ತುಮಕೂರಿನಲ್ಲಿ ಮಾತನಾಡಿದ ಅವರು, ರಾಜ್ಯದ ಹಿತಾಸಕ್ತಿ ಕಾಪಾಡುವಲ್ಲಿ ಕಳೆದ ಲೋಕಸಭಾ ಚುನಾವಣೆಯಲ್ಲಿ ಆಯ್ಕೆಯಾಗಿದ್ದ ಬಿಜೆಪಿ ಸಂಸದರು ವಿಫಲರಾಗಿದ್ದಾರೆ ಎಂದು ಮುಖ್ಯಮಂತ್ರಿ ಆರೋಪಿಸಿದರು.

ಮಹಿಳೆಯರ ಅಭ್ಯುದಯಕ್ಕಾಗಿ ಪಂಚ ಗ್ಯಾರಂಟಿ ಯೋಜನೆಗಳನ್ನು ನುಡಿದಂತೆ ಜಾರಿಗೆ ತಂದಿದ್ದೇವೆ. ಇದರಿಂದಾಗಿ ಮಹಿಳೆಯರ ಜೀವನದಲ್ಲಿ ಸುಧಾರಣೆ ಕಂಡಿದೆ, ಈ ಯೋಜನೆಯ ಫಲಾನುಭವಿಗಳ ಬಗ್ಗೆ ಟೀಕಿಸುವುದು ಸರಿಯಲ್ಲ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ದಾವಣಗೆರೆ | ದ್ವಿತೀಯ ಪಿ.ಯು.ಸಿ ಪರೀಕ್ಷೆ; ಜಿಲ್ಲೆಗೆ ಶೇ 80.96 ರಷ್ಟು ಫಲಿತಾಂಶ

Published

on

ಸುದ್ದಿದಿನ,ದಾವಣಗೆರೆ : 2024 ರ ಮಾರ್ಚ್‍ನಲ್ಲಿ ನಡೆದ ದ್ವಿತೀಯ ಪಿ.ಯು.ಸಿ. ಫಲಿತಾಂಶ ಪ್ರಕಟವಾಗಿದ್ದು ಜಿಲ್ಲೆಗೆ ಶೇ 80.96 ರಷ್ಟು ಫಲಿತಾಂಶ ಬಂದಿದ್ದು ಶೇ 74.27 ಗಂಡು, ಶೇ 82.01 ರಷ್ಟು ಹೆಣ್ಣು ಮಕ್ಕಳು ಉತ್ತೀರ್ಣರಾಗಿದ್ದಾರೆ ಎಂದು ಜಿಲ್ಲಾಧಿಕಾರಿ ಡಾ; ವೆಂಕಟೇಶ್ ಎಂ.ವಿ ತಿಳಿಸಿದರು.

ಅವರು ಬುಧವಾರ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಚುನಾವಣಾ ಸಂಬಂಧ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು. ಏಪ್ರಿಲ್ 10 ರಂದು ಫಲಿತಾಂಶ ಪ್ರಕಟವಾಗಿದ್ದು ಹೆಚ್ಚಿನ ವಿವರಗಳು ಬರಬೇಕಾಗಿದೆ. ಈ ವರ್ಷ ಜಿಲ್ಲೆಯಲ್ಲಿ ದ್ವಿತೀಯ ಪಿ.ಯು.ಸಿ ಪರೀಕ್ಷೆಯನ್ನು 19644 ರೆಗ್ಯುಲರ್, 422 ಖಾಸಗಿ ಸೇರಿ 20066 ವಿದ್ಯಾರ್ಥಿಗಳು ತೆಗೆದುಕೊಂಡಿದ್ದರು. ಇದರಲ್ಲಿ 15904 ವಿದ್ಯಾರ್ಥಿಗಳು ಉತ್ತೀರ್ಣರಾಗುವ ಮೂಲಕ ಶೇ 80.96 ರಷ್ಟು ಫಲಿತಾಂಶ ಪಡೆದಿದ್ದಾರೆ.

ಕಳೆದ ವರ್ಷ ಶೇ 75.72 ರಷ್ಟು ಫಲಿತಾಂಶ ಬಂದಿತ್ತು, ಈ ವರ್ಷ ಶೇ 5.24 ರಷ್ಟು ಫಲಿತಾಂಶ ಹೆಚ್ಚಳವಾಗಿದೆ. ಜಿಲ್ಲೆಗೆ ಟಾಪ್ ಬಂದವರಲ್ಲಿ ಕಲಾ ವಿಭಾಗದಲ್ಲಿ ಹರಿಹರದ ಶ್ರೀಮತಿ ಗಿರಿಯಮ್ಮ ಕಾಂತಪ್ಪ ಮಹಿಳಾ ಪದವಿ ಪೂರ್ವ ಕಾಲೇಜಿನ ಹೀನಬಾನು ಪಿ.ಕೆ. 591 ಅಂಕ ಪಡೆದು ಶೇ 98.5, ವಾಣಿಜ್ಯ; ದಾವಣಗೆರೆ ತಾ; ಗೋಪನಾಳು ಸರ್ಕಾರಿ ಪದವಿ ಪೂರ್ವ ಕಾಲೇಜಿನ ರೇಷ್ಮಾ ಬಾನು 589 ಅಂಕ ಪಡೆದು ಶೇ 98.16 ರಷ್ಟು ಫಲಿತಾಂಶ ಪಡೆದು ಜಿಲ್ಲೆಗೆ ಮೊದಲಿಗರಾಗಿದ್ದಾರೆ.

ವಿಜ್ಞಾನ ವಿಭಾಗದಲ್ಲಿ ಲೋಕಿಕೆರೆ ರಸ್ತೆಯಲ್ಲಿನ ಸರ್‍ಎಂವಿ ಸಂಯುಕ್ತ ಪದವಿ ಪೂರ್ವ ಕಾಲೇಜಿನ ಮೊಹಮ್ಮದ್ ಸುಹೇಲ್, ಅಮೃತ ದೊಡ್ಡ ಬಸಪ್ಪನವರ್, ಅನನ್ಯ ಹೆಚ್.ಎಸ್, ಆಕಾಶ್ ಸಿ.ಪಾಟೀಲ್ ಇವರು 593 ಅಂಕ ಶೇ 98.83 ರಷ್ಟು ಸಮನಾದ ಫಲಿತಾಂಶ ಹಂಚಿಕೊಂಡಿದ್ದಾರೆ ಎಂದರು.

ವಿಭಾಗವಾರು ಫಲಿತಾಂಶ; ಕಲಾ ವಿಭಾಗದಲ್ಲಿ ಶೇ 57.83 ರಷ್ಟು ಫಲಿತಾಂಶ ಬಂದಿದ್ದು ಇದರಲ್ಲಿ ಗಂಡು ಶೇ 45, ಹೆಣ್ಣು ಶೇ 66.46 ರಷ್ಟು ಉತ್ತೀರ್ಣರಾಗಿದ್ದಾರೆ. ವಾಣಿಜ್ಯ ವಿಭಾಗದಲ್ಲಿ ಶೇ 76.22 ರಷ್ಟು ಫಲಿತಾಂಶ ಬಂದಿದ್ದು ಗಂಡು ಶೇ 65.5, ಹೆಣ್ಣು ಶೇ 80.8, ವಿಜ್ಞಾನ ವಿಭಾಗದಲ್ಲಿ ಶೇ 91.13 ರಷ್ಟು ಫಲಿತಾಂಶ ಬಂದಿದ್ದು ಗಂಡು ಶೇ 91.39 ಹಾಗೂ ಹೆಣ್ಣು ಶೇ 88.69 ರಷ್ಟು ಫಲಿತಾಂಶ ಬಂದಿದೆ.

ನಗರಕ್ಕಿಂತ ಗ್ರಾಮೀಣರ ಮೇಲುಗೈ; ಫಲಿತಾಂಶದಲ್ಲಿ ನಗರ ಪ್ರದೇಶಕ್ಕಿಂತ ಗ್ರಾಮೀಣ ವಿದ್ಯಾರ್ಥಿಗಳು ಶೇ 1.1 ರಷ್ಟು ಮೇಲುಗೈ ಸಾಧಿಸಿದ್ದಾರೆ. ಗ್ರಾಮೀಣ ಪ್ರದೇಶದಲ್ಲಿ ಶೇ 73.65 ಗಂಡು, ಶೇ 84.6 ಹೆಣ್ಣು ಉತ್ತೀರ್ಣರಾದರೆ ನಗರ ಪ್ರದೇಶದ ಒಟ್ಟು ಫಲಿತಾಂಶ ಶೇ 80.75 ರಲ್ಲಿ ಗಂಡು ಶೇ 74.41, ಹೆಣ್ಣು ಶೇ 81.37 ರಷ್ಟು ಫಲಿತಾಂಶ ಪಡೆದಿದ್ದಾರೆ.

ಶೇ 100 ರಷ್ಟು ಫಲಿತಾಂಶ ಪಡೆದ ಶಾಲೆಗಳು; ದಾವಣಗೆರೆ ಅಂಜುಂ ಪದವಿ ಪೂರ್ವ ಕಾಲೇಜು, ಲೇಬರ್ ಕಾಲೋನಿ, ಜೈನ್ ಟ್ರಿನಿಟಿ ಪದವಿ ಪೂರ್ವ ಕಾಲೇಜು, ಅನ್‍ಮೋಲ್ ಪದವಿ ಪೂರ್ವ ಕಾಲೇಜು, ಶ್ರೀ ಗೀತಂ ಪದವಿ ಪೂರ್ವ ಕಾಲೇಜು, ದಾವಣಗೆರೆ ಇವು ಶೇ 100 ರಷ್ಟು ಫಲಿತಾಂಶ ಪಡೆದ ಕಾಲೇಜುಗಳಾಗಿವೆ.

ಈ ವೇಳೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸುರೇಶ್ ಬಿ.ಇಟ್ನಾಳ್, ಜಿಲ್ಲಾ ರಕ್ಷಣಾಧಿಕಾರಿ ಉಮಾ ಪ್ರಶಾಂರ್, ಶಾಲಾ ಶಿಕ್ಷಣ, ಪದವಿ ಪೂರ್ವ ಇಲಾಖೆ ಉಪನಿರ್ದೇಶಕ ಕರಿಸಿದ್ದಪ್ಪ ಉಪಸ್ಥಿತರಿದ್ದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಗ್ರಾಹಕರಿಂದ ಹೆಚ್ಚುವರಿಯಾಗಿ ಪೇಪರ್ ಬ್ಯಾಗ್‍ಗೆ ರೂ.10 ಪಡೆದ ಶಾಪಿಂಗ್ ಮಾಲ್‍ಗೆ ದಂಡ

Published

on

ಸಾಂದರ್ಭಿಕ ಚಿತ್ರ

ಸುದ್ದಿದಿನ ,ದಾವಣಗೆರೆ : ವಕೀಲ ವೃತ್ತಿಯಲ್ಲಿ ತೊಡಗಿಕೊಂಡಿರುವ ಆರ್. ಬಸವರಾಜ್ ಎಂಬುವವರು ದಾವಣಗೆರೆ ನಗರದ ಮ್ಯಾಕ್ಸ್ ರೀಟೈಲ್ ಅಂಗಡಿಯಲ್ಲಿ 2023 ರ ಅಕ್ಟೋಬರ್ 29 ರಂದು ರೂ.1,499 ಪಾವತಿಸಿ, ಡೆನಿವಾ ಪ್ಯಾಂಟ್ ಖರೀದಿಸಿದರು. ಈ ವೇಳೆಯಲ್ಲಿ ಇಲ್ಲಿಯೇ ಲೈಫ್ ಸ್ಟೈಲ್ ಇಂಟರ್‍ನ್ಯಾಷನಲ್ ವಾಣಿಜ್ಯ ಸಂಸ್ಥೆ ಪ್ಯಾಂಟ್ ಮಾರಾಟದ ವೇಳೆ ಹೆಚ್ಚುವರಿಯಾಗಿ ರೂ.10/- ಪೇಪರ್ ಬ್ಯಾಗ್‍ಗೆ ಪಡೆಯಲಾಯಿತು.

ಗ್ರಾಹಕರಾದ ಆರ್. ಬಸವರಾಜ್ ಇವರ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದಲ್ಲಿ ದೂರನ್ನು ದಾಖಲಿಸಿ ವಾಣಿಜ್ಯ ಸಂಸ್ಥೆ ವಿರುದ್ದ ರೂ.50,000 ಮಾನಸಿಕ ಕಿರುಕುಳ ಹಾಗೂ ದೂರು ದಾಖಲಿಸಲು ಖರ್ಚು ಮಾಡಿದ ಮೊ ರೂ.10,000 ಗಳನ್ನು ಪಾವತಿಸುವಂತೆ ದೂರನ್ನು ದಾಖಲಿಸಿದರು.

ವಾಣಿಜ್ಯ ಸಂಸ್ಥೆಗೆ ನೋಟಿಸ್ ಜಾರಿ ಮಾಡಿದ್ದು ಈ ಸಂಸ್ಥೆ ವಕೀಲರ ಮುಖಾಂತರ ಹಾಜರಾಗಿ ಬ್ಯಾಗ್‍ಗೆ ಹೆಚ್ಚುವರಿಯಾಗಿ ಪಡೆದ ಹಣಕ್ಕೆ ಸಮರ್ಥಿಸಿಕೊಂಡಿತ್ತು. ಆದರೆ ಗ್ರಾಹಕರ ಆಯೋಗ ಈ ಮೊದಲು ರಾಷ್ಟ್ರೀಯ ಗ್ರಾಹಕರ ಆಯೋಗ ಬಿಗ್ ಬಜಾರ್ ವಿರುದ್ಧ ಸಾಯಲ್ ದಾವ ಪ್ರಕರಣದ ನ್ಯಾಯ ನಿರ್ಣಯದ ತೀರ್ಪಿನ ಅನುಗುಣವಾಗಿ ವಾಣಿಜ್ಯ ಸಂಸ್ಥೆಗಳು ಕ್ಯಾರಿ ಬ್ಯಾಗ್‍ಗಳಿಗೆ ಹೆಚ್ಚಿನ ಹಣವನ್ನು ಪಡೆಯುವಂತಿಲ್ಲ ಎಂಬ ತೀರ್ಪನ್ನು ಉಲ್ಲೇಖಿಸಿ ಹೆಚ್ಚುವರಿಯಾಗಿ ರೂ.10 ಪಡೆದ ಸಂಸ್ಥೆಯ ಕ್ರಮವು ಗ್ರಾಹಕರ ಸಂರಕ್ಷಣಾ ಕಾಯ್ದೆಯ ಅಡಿಯಲ್ಲಿ ಅನುಚಿತ ವ್ಯಾಪಾರ ಪದ್ದತಿಯೆಂದು ಪರಿಗಣಿಸಿ ದಾವಣಗೆರೆ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷರಾದ ಮಹಂತೇಶ ಈರಪ್ಪ ಶಿಗ್ಲಿ, ಸದಸ್ಯರಾದ ತ್ಯಾಗರಾಜನ್ ಮತ್ತು ಮಹಿಳಾ ಸದಸ್ಯರಾದ ಶ್ರೀಮತಿ ಬಿ.ಯು. ಗೀತಾ ಇವರು ವಾಣಿಜ್ಯ ಸಂಸ್ಥೆಗೆ ರೂ.7000 ದಂಡವಿದಿಸಿ ಆದೇಶಿಸಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending