ದಿನದ ಸುದ್ದಿ
ಯಜಮಾನಿಕೆ ಮತ್ತು ಯಜಮಾನರ ಅಧಿಪತ್ಯ
- ಪ್ರತಾಪ್ ಭಾನು ಮೆಹ್ತಾ ( ಇಂಡಿಯನ್ ಎಕ್ಸ್ ಪ್ರೆಸ್ 18-11-20), ಅನುವಾದ : ನಾ ದಿವಾಕರ
ರಾಜ್ಯಶಾಸ್ತ್ರದ ಸಾಹಿತ್ಯದಲ್ಲಿ ಸಾಮಾನ್ಯವಾಗಿ ಪ್ರಜಾಪ್ರಭುತ್ವದ ಬರ್ಬರತೆ ಎಂಬ ಪದವನ್ನು ಬಳಸಲಾಗುತ್ತದೆ. ಈ ಪ್ರಜಾಪ್ರಭುತ್ವದ ಬರ್ಬರತೆಯನ್ನು ನ್ಯಾಯಿಕ ಬರ್ಬರತೆಯು ಕಾಪಾಡಿಕೊಂಡುಬರುತ್ತದೆ. ಬರ್ಬರತೆಗೆ ಹಲವಾರು ಆಯಾಮಗಳಿವೆ. ಮೊದಲನೆಯದಾಗಿ ನ್ಯಾಯಾಂಗದಲ್ಲಿ ನಿರ್ಧಾರಗಳನ್ನು ಕೈಗೊಳ್ಳುವಾಗ, ತೀರ್ಪು ನೀಡುವಾಗ ನಿರಂಕುಶತೆ ಮೇಲುಗೈ ಸಾಧಿಸುತ್ತದೆ.
ಕಾನೂನುಗಳನ್ನು ಅನ್ವಯಿಸುವ ಸಂದರ್ಭದಲ್ಲಿ ನ್ಯಾಯಾಧೀಶರ ವ್ಯಕ್ತಿಗತ ನಿಲುವುಗಳನ್ನು ಅನುಸರಿಸಲಾಗುತ್ತದೆ. ಹಾಗಾಗಿ ಸಾಂವಿಧಾನಿಕ ನಿಯಮಗಳು, ಕಾಯ್ದೆ ಕಾನೂನುಗಳು ಅರ್ಥಹೀನವಾಗಿಬಿಡುತ್ತವೆ. ಕಾನೂನು ಎನ್ನುವುದು ದಬ್ಬಾಳಿಕೆಯ ಅಸ್ತ್ರವಾಗುತ್ತದೆ. ಕಾನೂನು ದಬ್ಬಾಳಿಕೆಗೆ ಕನಿಷ್ಟಪಕ್ಷ ಸಹಾಯಕವಾಗಿರುತ್ತದೆ.
ಹೀಗಾದಾಗ ನಾಗರಿಕ ಹಕ್ಕುಗಳ ಮತ್ತು ಪ್ರತಿರೋಧದ ದನಿಗಳ ರಕ್ಷಣೆ ದುರ್ಬಲವಾಗುತ್ತದೆ ಮತ್ತು ಸಾಂವಿಧಾನಿಕ ನಿಯಮಗಳ ಚೌಕಟ್ಟಿನಲ್ಲಿ ಪ್ರಭುತ್ವದ ಶಕ್ತಿಗೆ ಮನ್ನಣೆ ನೀಡುವ ಸಾಧ್ಯತೆಗಳು ಹೆಚ್ಚಾಗುತ್ತವೆ. ನ್ಯಾಯಾಲಯಗಳೂ ದೈವೀಕ ದೊರೆಯ ಹಾಗೆ ತನ್ನ ಅಸ್ತಿತ್ವ ಮತ್ತು ಗೌರವದ ಬಗ್ಗೆ ಹೆಚ್ಚಿನ ಕಾಳಜಿ ವಹಿಸುತ್ತದೆ. ನ್ಯಾಯಾಲಯವನ್ನು ಗಂಭೀರವಾಗಿ ಟೀಕಿಸುವುದಾಗಲೀ, ಅಣಕಿಸುವುದಾಗಲೀ ಸಾಧ್ಯವಾಗುವುದಿಲ್ಲ. ನ್ಯಾಯಾಲಯದ ಘನತೆ ಗೌರವದ ರಕ್ಷಣೆಗೆ ಅದರ ವಿಶ್ವಾಸಾರ್ಹತೆಗಿಂತಲೂ ಅವಜ್ಞೆಯ ಶಕ್ತಿ ಮುಖ್ಯವಾಗುತ್ತದೆ.
ಅಂತಿಮವಾಗಿ ಇನ್ನೂ ಗಂಭೀರ ಸ್ವರೂಪದ ಬರ್ಬರತೆ ಇಲ್ಲಿ ಕಾಣಿಸಿಕೊಳ್ಳುತ್ತದೆ. ಪ್ರಭುತ್ವ ತನ್ನದೇ ಪ್ರಜೆಗಳನ್ನು ಜನದ್ರೋಹಿಗಳೆಂದು ಪರಿಗಣಿಸಿದಾಗ ಇದು ವ್ಯಕ್ತವಾಗುತ್ತದೆ. ರಾಜಕಾರಣದ ಧ್ಯೇಯ ಸಮಸ್ತ ಜನತೆಗೂ ಸಮಾನ ನ್ಯಾಯ ಒದಗಿಸುವುದು ಆಗಿರುವುದಿಲ್ಲ. ರಾಜಕಾರಣವನ್ನು ಶೋಷಕರು ಮತ್ತು ಶೋಷಿತರ ನಡುವಿನ ಸಂಘರ್ಷದಂತೆ ಪರಿವರ್ತಿಸಲಾಗುತ್ತದೆ. ಪ್ರಭುತ್ವ ಸದಾ ವಿಜಯಿಯಾಗುವಂತೆ ಎಚ್ಚರವಹಿಸಲಾಗುತ್ತದೆ.
ಭಾರತದ ಸರ್ವೋಚ್ಛ ನ್ಯಾಯಾಲಯ ಎಂದೂ ಪರಿಪೂರ್ಣತೆಯನ್ನು ಹೊಂದಿರಲಿಲ್ಲ. ಈ ಹಿಂದೆಯೂ ಸಹ ಕೆಲವು ಕಪ್ಪು ಚುಕ್ಕೆಗಳನ್ನು ಗುರುತಿಸಬಹುದಿತ್ತು. ಆದರೆ ಮೇಲೆ ಉಲ್ಲೇಖಿಸಲಾದ ಅಂಶಗಳ ಹಿನ್ನೆಲೆಯಲ್ಲಿ ಸರ್ವೋಚ್ಛ ನ್ಯಾಯಾಲಯವು ನ್ಯಾಯಿಕ ಬರ್ಬರತೆಯತ್ತ ಜಾರುತ್ತಿರುವ ಸೂಚನೆಗಳು ಕಾಣಿಸಿಕೊಳ್ಳುತ್ತಿದೆ. ಈ ವಿದ್ಯಮಾನ ಕೇವಲ ವ್ಯಕ್ತಿಗತವಾಗಿ ಒಬ್ಬ ನ್ಯಾಯಾಧೀಶರಿಗೆ ಅಥವಾ ಒಂದು ಪ್ರಕರಣಕ್ಕೆ ಸಂಬಂಧಿಸಿದ್ದಲ್ಲ. ಇದು ಸಾಂಸ್ಥಿಕವಾಗಿ ವ್ಯವಸ್ಥೆಯ ವಿದ್ಯಮಾನವಾಗಿದೆ. ಜಾಗತಿಕ ಮಟ್ಟದಲ್ಲೂ ಈ ಪ್ರವೃತ್ತಿಯನ್ನು ಗುರುತಿಸಬಹುದು.
ಟರ್ಕಿ, ಪೋಲೆಂಡ್ ಮತ್ತು ಹಂಗೆರಿಯಲ್ಲಿ ಇದರ ಛಾಯೆಯನ್ನು ಕಾಣಬಹುದು. ಈ ದೇಶಗಳಲ್ಲಿ ನ್ಯಾಯಾಂಗವು ಪ್ರಜಾತಾಂತ್ರಿಕ ಬರ್ಬರತೆಯನ್ನು ಪೋಷಿಸುತ್ತಿದೆ. ನಿಖರವಾಗಿ ಹೇಳುವುದಾದರೆ ಎಲ್ಲ ನ್ಯಾಯಾಧೀಶರೂ ಇದಕ್ಕೆ ಬಲಿಯಾಗುವುದಿಲ್ಲ. ವ್ಯವಸ್ಥೆಯಲ್ಲಿ ಇಂದಿಗೂ ಸಹ ಪ್ರತಿರೋಧದ ದನಿಗಳನ್ನು ಗುರುತಿಸಬಹುದು. ಸ್ವಾತಂತ್ರ್ಯದ ಪರ ಇರುವ ತಾತ್ವಿಕ ನೀತಿಗಳನ್ನು ಘೋಷಿಸುವ ಕೆಲವು ಪ್ರಸಂಗಗಳನ್ನೂ ಕಾಣಲು ಸಾಧ್ಯ.
ಅರ್ಹ ಅರ್ಜಿದಾರರಿಗೆ ಸಮಾಧಾನ ತರುವಂತಹ ತೀರ್ಪುಗಳನ್ನು ಅಪರೂಪವಾಗಿಯಾದರೂ ನೋಡಬಹುದು. ಹಾಗಾಗಿ ನಿತ್ಯ ಕಲಾಪಗಳಲ್ಲಿ ನ್ಯಾಯಾಂಗದ ಕಾರ್ಯವೈಖರಿಯಲ್ಲಿ ಏನೇ ದೋಷ ಗುರುತಿಸಬಹುದಾದರೂ ಸಂಸ್ಥೆಯ ಗೌರವ ಮತ್ತು ಘನತೆಯನ್ನು ಉಳಿಸುವ ಕೆಲವು ಪ್ರಸಂಗಗಳನ್ನು ಕಾಣಲೂ ಸಾಧ್ಯ.
ನ್ಯಾಯಿಕ ಬರ್ಬರತೆಯ ಲಕ್ಷಣಗಳೇನು ? ಪ್ರಜಾಪ್ರಭುತ್ವದ ಸಾಂಸ್ಥಿಕ ವಿಶ್ವಾಸಾರ್ಹತೆಯನ್ನು ಉಳಿಸುವಂತಹ ಪ್ರಕರಣಗಳಲ್ಲಿ ಸಕಾಲದಲ್ಲಿ ವಿಚಾರಣೆ ನಡೆಸಲು ನ್ಯಾಯಾಲಯ ನಿರಾಕರಿಸಿರುವುದು. ಇಲ್ಲಿ ಸ್ಪಷ್ಟ ನಿದರ್ಶನ ಎಂದರೆ ಚುನಾವಣಾ ಬಾಂಡ್ ಪ್ರಕರಣ.
ಸರ್ವೋಚ್ಛ ನ್ಯಾಯಾಲಯ ಮತ್ತು ಹಲವು ಉಚ್ಚ ನ್ಯಾಯಾಲಯಗಳು ಜಾಮೀನು ನೀಡುವ ಅಥವಾ ನಿರಾಕರಿಸುವ ಸಂದರ್ಭಗಳಲ್ಲಿ ನಿರಂಕುಶತೆಯ ಪರಾಕಾಷ್ಟೆ ತಲುಪಿರುವುದನ್ನು ಗಮನಿಸಬಹುದು. ಇಲ್ಲಿ ಒಂದು ಅಂಶವನ್ನು ಸ್ಪಷ್ಟವಾಗಿ ಹೇಳಬೇಕಾಗುತ್ತದೆ.
ಯಾವುದೇ ವಿಚಾರಣಾಧೀನ ಕೈದಿಗೆ ತಿಳಿದಿರುವಂತೆ, ಭಾರತದ ನ್ಯಾಯ ವ್ಯವಸ್ಥೆಯಲ್ಲಿ ನ್ಯಾಯಕ್ಕಾಗಿ ಆಗ್ರಹಿಸುವಾಗ ಅದೃಷ್ಟವೂ ಮುಖ್ಯವಾಗಿರುತ್ತದೆ. ಪ್ರಸ್ತುತ ಸಂದರ್ಭದ ವಿಶಿಷ್ಟತೆಯನ್ನು ನಾವು ತಪ್ಪಾಗಿ ಅರ್ಥೈಸಬೇಕಿಲ್ಲ. ಸಾಮಾಜಿಕ ಕಾರ್ಯಕರ್ತರಾದ, ದೇಶಪ್ರೇಮದ ಸಾಕಾರ ಎನ್ನಬಹುದಾದ ಸುಧಾ ಭರದ್ವಾಜ್, ಚಿಂತಕರಾದ ಆನಂದ್ ತೇಲ್ತುಂಬ್ಡೆ ಮುಂತಾದವರಿಗೆ ಜಾಮೀನು ನಿರಾಕರಿಸಲಾಗುತ್ತದೆ.
ಉಮರ್ ಖಾಲಿದ್ ಗೆ ತನ್ನ ಜೈಲು ಕೋಣೆಯಿಂದ ಹೊರಬರಲು ಕೊಂಚ ಅವಕಾಶ ನೀಡಿದ್ದುದು ಸಮಾಧಾನ ತರುವಂತಹುದು. ಆದರೆ ಪೌರತ್ವ ತಿದ್ದುಪಡಿ ಕಾಯ್ದೆಯ ವಿರುದ್ಧ ಪ್ರತಿಭಟಿಸಿ ಜೈಲುವಾಸ ಅನುಭವಿಸುತ್ತಿರುವ ಅನೇಕ ವಿದ್ಯಾರ್ಥಿ ಯುವಜನರು ಇಷ್ಟು ಅದೃಷ್ಟ ಮಾಡಿಲ್ಲ. ಪಾರ್ಕಿನ್ ಸನ್ ಖಾಯಿಲೆಯಿಂದ ಬಳಲುತ್ತಿರುವ 80 ವರ್ಷದ ಸಾಮಾಜಿಕ ಕಾರ್ಯಕರ್ತರಿಗೆ ಜಾಮೀನು ನಿರಾಕರಿಸಲಾಗುತ್ತದೆ.
ನ್ಯಾಯಾಲಯ ತನ್ನ ಇಚ್ಚೆಯನುಸಾರ ಇವರ ಅರ್ಜಿಯನ್ನು ವಿಚಾರಣೆಗೊಳಪಡಿಸುತ್ತದೆ. ಇದಕ್ಕಿಂತಲೂ ಹೆಚ್ಚಾಗಿ ಕ್ರೌರ್ಯದ ಅನಾವರಣ ಆಗಬೇಕಿಲ್ಲ. ಹೇಬಿಯಸ್ ಕಾರ್ಪಸ್ ಮೂಲಕ ಪರಿಹಾರವನ್ನೂ ನೀಡಲಿಚ್ಚಿಸದೆ, ನೂರಾರು ಕಾಶ್ಮೀರಿಗಳನ್ನು ಬಂಧನದಲ್ಲಿರಿಸಲಾಗಿದೆ.
ಈ ಎಲ್ಲ ಪ್ರಕರಣಗಳು ಸಾಂಸ್ಥಿಕ ಅದಕ್ಷತೆಯಿಂದ ಉಂಟಾದ ನ್ಯಾಯ ವಂಚನೆಯ ಅಪರೂಪದ ಪ್ರಕರಣಗಳೆಂದು ಭಾವಿಸಲಾಗುವುದಿಲ್ಲ. ಪ್ರತಿಭಟನೆ, ಪ್ರತಿರೋಧ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಪರಿಕಲ್ಪನೆಗಳನ್ನು ಪ್ರಭುತ್ವದ ಶತ್ರುಗಳು ಎನ್ನುವ ದೃಷ್ಟಿಕೋನದಿಂದಲೇ ನೋಡುವ ರಾಜಕೀಯ ನಿಲುವಿನ ನೇರ ಪರಿಣಾಮಗಳಾಗಿ ಇದನ್ನು ನಾವು ಪರಿಗಣಿಸಬೇಕಾಗುತ್ತದೆ.
ಈ ಪ್ರಜೆಗಳು ಕಾನೂನಿನ ದೃಷ್ಟಿಯಲ್ಲಿ ಸಮಾನ ಪ್ರಜೆಗಳಾಗಿ ಕಾಣುವುದಿಲ್ಲ. ಹಾಗಾಗಿ ಅನೇಕ ಪ್ರಕರಣಗಳಲ್ಲಿ ಇವರನ್ನು ಬಂಡುಕೋರರಂತೆ , ಯಾವುದೇ ಸಮರ್ಥನೆ ಇಲ್ಲದೆಯೇ, ಪರಿಗಣಿಸಲಾಗುತ್ತದೆ. ಭಿನ್ನಾಭಿಪ್ರಾಯವನ್ನು ಹತ್ತಿಕ್ಕಲು ಈ ಆರೋಪವೊಂದೇ ಪ್ರಜಾಪ್ರಭುತ್ವದ ಬರ್ಬರತೆಗೆ ಸಮರ್ಥನೀಯ ಸಾಧನ ಎನಿಸುತ್ತದೆ. ಈ ಧೋರಣೆಗೆ ಈಗ ನ್ಯಾಯಿಕ ಸಮರ್ಥನೆ ದೊರೆಯುತ್ತಿದೆ. ಇದೇ ವಿದ್ಯಮಾನವನ್ನು ರಾಜ್ಯಗಳ ಮಟ್ಟದಲ್ಲಿ ವಿವಿಧ ರಾಜಕೀಯ ಪಕ್ಷಗಳ ವಿರುದ್ಧ ಅನುಸರಿಸುವ ಸಾಧ್ಯತೆಗಳಿವೆ.
ನಾಗರಿಕ ಸ್ವಾತಂತ್ರ್ಯದ ಚೌಕಟ್ಟಿನಲ್ಲಿ ಆಯ್ದ ಪ್ರಸಂಗಗಳಲ್ಲಿ ಅನ್ವಯಿಸಲಾಗುವ ನಿಯಮಗಳು ಕ್ರಮೇಣ ಪ್ರಭುತ್ವದ ಸೈದ್ಧಾಂತಿಕ ಚೌಕಟ್ಟಿನಲ್ಲಿ ಅಳವಡಿಸಲಾಗುತ್ತದೆ. ಒಂದಾದ ಮೇಲೊಂದರಂತೆ ರಾಜ್ಯಗಳು ಲವ್ ಜಿಹಾದ್ ವಿರುದ್ಧ ಕಾನೂನು ಜಾರಿಗೊಳಿಸುತ್ತಿರುವುದನ್ನು ಗಮನಿಸಿದರೆ, ಕೋಮುವಾದಿ ದೃಷ್ಟಿಕೋನದ ಈ ವಂಚಕ ಬಲೆಯನ್ನು ಎಲ್ಲ ರಾಜ್ಯಗಳೂ ಅನುಸರಿಸುವ ಸಾಧ್ಯತೆಗಳಿವೆ.
ವ್ಯಕ್ತಿ ಸ್ವಾತಂತ್ರ್ಯದ ಮೇಲಿನ ಈ ಪ್ರಹಾರವನ್ನು ನ್ಯಾಯಾಲಯಗಳು ಹೇಗೆ ನ್ಯಾಯಬದ್ಧವಾಗಿಸುತ್ತವೆ ಎನ್ನುವುದನ್ನು ಗಮನಿಸುತ್ತಿರಿ. ದೇಶದ ಅತ್ಯುನ್ನತ ನ್ಯಾಯಾಲಯದ ದೌರ್ಬಲ್ಯಗಳನ್ನು ಸಾಂಸ್ಥಿಕ ಸುಧಾರಣೆಯ ಪರಿಭಾಷೆಯಲ್ಲಿ ಗುರುತಿಸುವ ಹಂತದಿಂದ ನಾವು ಬಹಳ ದೂರ ನಡೆದುಬಂದಿದ್ದೇವೆ. ಬದಲಾಗಿ ಪ್ರಜಾತಾಂತ್ರಿಕ ಬರ್ಬರತೆಯ ಪರಿಭಾಷೆಗೆ ನ್ಯಾಯಿಕ ಸ್ವರೂಪವನ್ನು ನೀಡಲಾಗುತ್ತಿದೆ.
ಅರ್ನಾಬ್ ಗೋಸ್ವಾಮಿಗೆ ಜಾಮೀನು ನೀಡಿದ ಸರ್ವೋಚ್ಚ ನ್ಯಾಯಾಲಯದ ಕ್ರಮ ಸರಿಯಾದದ್ದೇ. ಕೊನೆಗೂ ನ್ಯಾಯಾಲಯವು ಉತ್ತರಪ್ರದೇಶ ಸರ್ಕಾರಕ್ಕೆ, ಪತ್ರಕರ್ತರ ಬಂಧನದ ವಿಚಾರದಲ್ಲಿ ನೋಟಿಸ್ ಜಾರಿ ಮಾಡಿದೆ. ಆದರೆ ನ್ಯಾಯಮೂರ್ತಿ ಎಸ್ ಎ ಬೋಬ್ಡೆ ಮಧ್ಯ ಪ್ರವೇಶಿಸಿ, ಸರ್ವೋಚ್ಚ ನ್ಯಾಯಾಲಯವು ಸಂವಿಧಾನ ವಿಧಿ 32ರ ಬಳಕೆಯನ್ನು ಅನುಮೋದಿಸುವುದಿಲ್ಲ ಎಂದು ಹೇಳುವ ಮೂಲಕ ತಮಗೆ ತಿಳಿಯದೆಯೇ ರಹಸ್ಯವೊಂದನ್ನು ಹೊರಗೆಡಹಿದ್ದಾರೆ.
ಭಾರತದ ಸಂವಿಧಾನದಲ್ಲಿ ವಿಧಿ 32 ಮೂಲಭೂತ ಹಕ್ಕುಗಳನ್ನು ರಕ್ಷಿಸುವ ಒಂದು ಪ್ರಬಲ ಅಸ್ತ್ರ. ತುರ್ತುಪರಿಸ್ಥಿತಿ ಘೋಷಿಸಿದಲ್ಲಿ ಮಾತ್ರವೇ ಇದನ್ನು ರದ್ದುಪಡಿಸಬಹುದು. ಒಂದು ರೀತಿಯಲ್ಲಿ ಈ ಪರಿಚ್ಚೇದದ ಬಳಕೆಯನ್ನು ಅನುಮೋದಿಸದೆ ಇರುವುದು ನಮ್ಮ ಕಾಲಘಟ್ಟದ ರೂಪಕದಂತೆ ಕಾಣುತ್ತದೆ. ಅಂದರೆ ನಾವು ತುರ್ತುಪರಿಸ್ಥಿತಿಯನ್ನು ಘೋಷಿಸಲೇ ಬೇಕಿಲ್ಲ, ತುರ್ತುಪರಿಸ್ಥಿತಿ ಘೋಷಣೆಯಾಗಿದೆ ಎನ್ನುವ ರೀತಿಯಲ್ಲೇ ನಮಗೆ ಬೇಕಾದಾಗ ವರ್ತಿಸಬಹುದು ಎನ್ನುವಂತಾಗಿದೆ. ಹಾಗಾಗಿ ವಿಧಿ 32ರ ಬಳಕೆಯನ್ನು ರದ್ದುಪಡಿಸದಿದ್ದರೂ ಅನುಮೋದಿಸುವುದಿಲ್ಲ ಎಂದು ಹೇಳಲಾಗಿದೆ.
ಇದರ ವಿರುದ್ಧ ಹೋರಾಟ ಸುಲಭವಲ್ಲ. ಪ್ರಜಾತಾಂತ್ರಿಕ ಬರ್ಬರತೆಯ ವಾತಾವರಣದಲ್ಲಿ ಪ್ರತಿಯೊಂದು ವಿಚಾರವನ್ನೂ ಪಕ್ಷಪಾತೀಯ ನೆಲೆಯಲ್ಲಿ ನೋಡಲಾಗುವುದೇ ಹೊರತು ತರ್ಕಬದ್ಧತೆಯಿಂದಲ್ಲ. ನ್ಯಾಯಾಂಗವು ಈ ಧೋರಣೆಯನ್ನು ಮೀರಿ ನಿಂತಿದೆ ಎಂದು ತೋರಿಸಿಕೊಳ್ಳಲೂ ವಿಫಲವಾಗಿರುವುದರಿಂದ ನ್ಯಾಯಾಂಗದ ನಿಷ್ಕರ್ಷೆಯೂ ಇದಕ್ಕೆ ಪೂರಕವಾಗಿಯೇ ಕಂಡುಬರುತ್ತಿದೆ.
ನ್ಯಾಯಿಕ ಅಪರಾಧಿಗಳನ್ನೂ ನಮ್ಮ ಮೂಗಿನ ನೇರಕ್ಕೆ ಅನುಗುಣವಾಗಿ ಪರಿಗಣಿಸುವ ಈ ಧೋರಣೆ ತೀವ್ರವಾಗಿರುವ ಸಂದರ್ಭದಲ್ಲಿ ಕಾನೂನು ಪಾಲನೆಯ ಬಗ್ಗೆ ಒಮ್ಮತಕ್ಕೆ ಬರುವುದು ಸುಲಭವೇನಲ್ಲ. ವಿಡಂಬನೆ ಎಂದರ, ಪ್ರತಿಯೊಂದು ವಿಚಾರವನ್ನೂ ನಿರ್ಷರ್ಷೆ ಮಾಡಲು ನ್ಯಾಯಾಂಗವೊಂದೇ ವೇದಿಕೆ ಎನ್ನುವ ದೃಷ್ಟಿಕೋನದಲ್ಲಿ ಬೆಳೆದುಬಂದಿರುವ ಕಾನೂನಾತ್ಮಕ ಕ್ರಿಯಾಶೀಲತೆಯ ಸಂಪ್ರದಾಯವೇ ಈ ರೀತಿಯ ನ್ಯಾಯಿಕ ಉನ್ಮತ್ತತೆಗೆ ಕಾರಣವಾಗಿದೆ. ಈ ಪ್ರವೃತ್ತಿ ಇನ್ನೂ ಮುಂದುವರೆಯಲಿದೆ.
ಉದಾಹರಣೆಗೆ, ಸೆಂಟ್ರಲ್ ವಿಸ್ಟಾ ಯೋಜನೆಯ ಬಗ್ಗೆ ( ನೂತನ ಸಂಸತ್ ಭವನ ನಿರ್ಮಾಣ ಯೋಜನೆ-ಅನು ) ನಾವು ನಮ್ಮದೇ ಆದ ನಿಲುವು ಹೊಂದಿರಬಹುದು. ಆದರೆ ಈ ವಿಚಾರಗಳಿಗೆ ನ್ಯಾಯಾಲಯಗಳು ಹೆಚ್ಚಿನ ಪ್ರಾಶಸ್ತ್ಯ ನೀಡಬೇಕಿಲ್ಲ. ನ್ಯಾಯಾಲಯಗಳಿಂದ ಸಣ್ಣ ಪುಟ್ಟ ನೀತಿ ಸಂಹಿತೆಯ ವಿಚಾರಗಳಲ್ಲಿ ಜಯ ಗಳಿಸುವ ಸಂಭ್ರಮದಲ್ಲಿ ನಾವು ಬಹುಶಃ ಸಾಂವಿಧಾನಿಕ ತತ್ವಗಳ ವಿಚಾರದಲ್ಲಿ ನ್ಯಾಯಾಲಯಗಳ ಉಲ್ಲಂಘನೆಗಳಿಗೆ ಮಾನ್ಯತೆ ನೀಡುತ್ತಿದ್ದೇವೆ ಎನಿಸುತ್ತದೆ.
ನ್ಯಾಯವಾದಿಗಳ ಸಂಘದಲ್ಲಿ ಒಂದು ಸಂಸ್ಕೃತಿ ಇದೆ. ದುಷ್ಯಂತ ದವೆ, ಗೌತಮ್ ಭಾಟಿಯಾ, ಶ್ರೀರಾಂ ಪಂಚು ಮುಂತಾದವರು ನೇರವಾಗಿ ನ್ಯಾಯಾಂಗದ ಹುಳುಕುಗಳನ್ನು ಎತ್ತಿ ತೋರುವ ಆತ್ಮಸ್ಥೈರ್ಯ ಹೊಂದಿದ್ದಾರೆ. ಆದರೆ ಇದು ವೃತ್ತಿಪರ ನೆಲೆಯಲ್ಲಿ ಹಿಮ್ಮೆಟ್ಟಿಸುವ ಶಕ್ತಿಯಾಗಿ ಹೊರಹೊಮ್ಮಿಲ್ಲ. ಇಂದಿಗೂ ಸಹ ನ್ಯಾಯಿಕ ಬರ್ಬರತೆಯನ್ನು ಸಹನೀಯ ಎಂದು ಭಾವಿಸಿ, ನ್ಯಾಯಾಲಯಗಳ ಪವಿತ್ರ ಸ್ಥಾನಮಾನವನ್ನು ಮಾನ್ಯ ಮಾಡುವ ಹಿರಿಯ ವಕೀಲರ ಸಂಖ್ಯೆ ಹೆಚ್ಚಾಗಿಯೇ ಇದೆ.
ಇದು ವಿನಯ ರಹಿತ ಉತ್ಪ್ರೇಕ್ಷೆ ಎನಿಸಬಹುದು ಆದರೆ ವೀಮಾರ್ ನ್ಯಾಯಾಂಗದ ಛಾಯೆ ( ಹಿಟ್ಲರನ ನಾಝಿ ಕಾಲಘಟ್ಟದಲ್ಲಿ ಜರ್ಮನಿಯಲ್ಲಿದ್ದ ಸಂವಿಧಾನ ಮತ್ತು ನ್ಯಾಯ ವ್ಯವಸ್ಥೆ-ಅನು) ದಟ್ಟವಾಗಿ ಆವರಿಸುತ್ತಿರುವ ಸಂದರ್ಭದಲ್ಲಿ ದೇಶದ ಸಾಮಾನ್ಯ ಜನತೆಗೆ ವಿನಯ ಒಂದು ಆಯ್ಕೆಯಾಗಲು ಸಾಧ್ಯವಿಲ್ಲ.
ಸುದ್ದಿದಿನ.ಕಾಂ|ವಾಟ್ಸಾಪ್|9980346243
ದಿನದ ಸುದ್ದಿ
ಇಂದಿನಿಂದ ಏ.3 ರವರೆಗೆ ಸೂಳೆಕೆರೆಗೆ ನೀರು ಬಿಡುಗಡೆ
ಸುದ್ದಿದಿನ,ದಾವಣಗೆರೆ: ಭದ್ರಾ ಜಲಾಶಯ ಯೋಜನೆ ವ್ಯಾಪ್ತಿಗೆ ಬರುವ ದೇವರಬೆಳಕೆರೆ ಪಿಕ್ಅಪ್ ಅಣೆಕಟ್ಟಿನ ಸ್ಕವರಿಂಗ್ ಸ್ಪೂಯೀಸ್ ಗೇಟ್ ಮುಖಾಂತರ ಜಲಾಶಯದ ಡೆಡ್ ಸ್ಟೋರೇಜ್ ನೀರನ್ನು ಸೂಳೆಕೆರೆ ಹಳ್ಳಕ್ಕೆ ಮಾರ್ಚ್ 28 ರಿಂದ ಏಪ್ರಿಲ್ 3 ರವರೆಗೆ ಪ್ರತಿದಿನ 20 ಕ್ಯೂಸೆಕ್ಸ್ಗಳಲ್ಲಿ ಜನ-ಜಾನುವಾರು ಪಕ್ಷಿಗಳಿಗೆ ಕುಡಿಯುವ ನೀರು ಒದಗಿಸಲು ಹಾಗೂ ಅಕ್ಕಪಕ್ಕದ ಗ್ರಾಮಗಳ ಕುಡಿಯುವ ನೀರಿನ ಉದ್ದೇಶಕ್ಕೆ ಬಿಡಲಾಗುತ್ತಿದೆ.
ಈ ವೇಳೆ ಹಳ್ಳಕ್ಕೆ ದನ ಕರಗಳನ್ನು ಇಳಿಸುವುದಾಗಲಿ, ಪಂಪ್ಸೆಟ್ಗಳಿಂದ ನೀರೆತ್ತುವುದುನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ ಎಂದು ಕನೀನಿನಿ ಕಾರ್ಯಪಾಲಕ ಇಂಜಿನಿಯರ್ ತಿಳಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243
ದಿನದ ಸುದ್ದಿ
ಲೋಕಸಭಾ ಚುನಾವಣೆಯ ಮೊದಲ ಹಂತಕ್ಕೆ ನಾಮಪತ್ರ ಸಲ್ಲಿಕೆಗೆ ಇಂದು ಕೊನೆಯ ದಿನ
ಸುದ್ದಿದಿನ ಡೆಸ್ಕ್ : ಲೋಕಸಭಾ ಚುನಾವಣೆಯ ಮೊದಲ ಹಂತಕ್ಕೆ ನಾಮಪತ್ರ ಸಲ್ಲಿಸಲು ಇಂದು ಕೊನೆಯ ದಿನವಾಗಿದೆ.
ನಾಳೆ ನಾಮಪತ್ರಗಳ ಪರಿಶೀಲನೆ ನಡೆಯಲಿದ್ದು, ಇದೇ 30 ನಾಮಪತ್ರ ಹಿಂಪಡೆಯಲು ಕಡೆಯ ದಿನವಾಗಿದೆ. ಇದೇ ವೇಳೆ ಬಿಹಾರದಲ್ಲಿ ನಾಮಪತ್ರ ಸಲ್ಲಿಕೆಗೆ ನಾಳೆ ಕಡೆ ದಿನವಾಗಿದ್ದು, ಈ ತಿಂಗಳ 30 ರಂದು ನಾಮಪತ್ರಗಳ ಪರಿಶೀಲನೆ ಹಾಗೂ ಏಪ್ರಿಲ್ 2ರಂದು ನಾಮತ್ರ ಹಿಂಪಡೆಯುವಿಕೆಗೆ ಕೊನೆಯ ದಿನವಾಗಿರುತ್ತದೆ.
ಏಪ್ರಿಲ್ 19 ರಂದು 17 ರಾಜ್ಯಗಳು ಮತ್ತು ನಾಲ್ಕು ಕೇಂದ್ರಾಡಳಿತ ಪ್ರದೇಶಗಳಲ್ಲಿನ 102ಲೋಕಸಭಾ ಕ್ಷೇತ್ರಗಳಿಗೆ ಮೊದಲ ಹಂತದಲ್ಲಿ ಚುನಾವಣೆ ನಡೆಯಲಿದೆ. ಅದರಂತೆ ತಮಿಳುನಾಡಿನಲ್ಲಿ 39, ರಾಜಸ್ಥಾನದಲ್ಲಿ 12, ಉತ್ತರ ಪ್ರದೇಶದಲ್ಲಿ 8, ಮಧ್ಯಪ್ರದೇಶದಲ್ಲಿ 6, ಉತ್ತರಾಖಂಡ, ಅಸ್ಸಾಂ ಮತ್ತು ಮಹಾರಾಷ್ಟ್ರದಲ್ಲಿ ತಲಾ 5 , ಬಿಹಾರದಲ್ಲಿ 4, ಪಶ್ಚಿಮ ಬಂಗಾಳದಲ್ಲಿ 3, ಅರುಣಾಚಲ ಪ್ರದೇಶ, ಮಣಿಪುರ, ಮೆಘಾಲಯದಲ್ಲಿ ತಲಾ 2 ಮತ್ತು ಛತ್ತೀಸ್ಗಢ, ಮಿಜೋರಾಂ, ನಾಗಾಲ್ಯಾಂಡ್, ಸಿಕ್ಕಿಂ, ತ್ರಿಪುರ, ಅಂಡಮಾನ್-ನಿಕೋಬಾರ್ ದ್ವೀಪಗಳು, ಜಮ್ಮು-ಕಾಶ್ಮೀರ, ಲಕ್ಷದ್ವೀಪ ಮತ್ತು ಪುದುಚೇರಿಯಲ್ಲಿ ತಲಾ ಒಂದು ಕ್ಷೇತ್ರದಲ್ಲಿ ಮೊದಲ ಹಂತದಲ್ಲಿ ಚುನಾವಣೆ ನಡೆಯಲಿದೆ.
ಎರಡನೇ ಹಂತದಲ್ಲಿ 89 ಲೋಕಸಭಾ ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದ್ದು, ಚುನಾವಣಾ ಆಯೋಗ ನಾಳೆ ಅಧಿಸೂಚನೆ ಹೊರಡಿಸಲಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243
ದಿನದ ಸುದ್ದಿ
ಚುನಾವಣಾ ಅಕ್ರಮ ; ಸಾರ್ವಜನಿಕರು ದೂರು ಸಲ್ಲಿಸಲು ಆಯೋಗದಿಂದ ಸಿ-ವಿಜಿಲ್ ಆಪ್ ಅಭಿವೃದ್ಧಿ
ಸುದ್ದಿದಿನ ಡೆಸ್ಕ್ : 18ನೇ ಲೋಕಸಭೆಗೆ ಸದಸ್ಯರನ್ನು ಆಯ್ಕೆ ಮಾಡಲು ನಡೆಯಲಿರುವ ಸಾರ್ವತ್ರಿಕ ಚುನಾವಣೆಗೆ ಭಾರತ ಚುನಾವಣಾ ಆಯೋಗ, ಸಕಲ ಸಿದ್ಧತೆಯೊಂದಿಗೆ ಸಜ್ಜಾಗಿದೆ.
ದೇಶದಲ್ಲಿ ಚುನಾವಣೆಗಳನ್ನು ಪಾರದರ್ಶಕವಾಗಿ ಹಾಗೂ ಅತ್ಯಂತ ವಿಶ್ವಾಸಾರ್ಹ ರೀತಿಯಲ್ಲಿ ನಡೆಸುವ ಸಂಕಲ್ಪದೊಂದಿಗೆ ಚುನಾವಣಾ ಆಯೋಗ, ಸಮಸ್ತ ಚುನಾವಣಾ ಪ್ರಕ್ರಿಯೆಗಳನ್ನು ಸುಗಮಗೊಳಿಸಲು ತಂತ್ರಜ್ಞಾನದ ನೆರವನ್ನು ಬಳಸಿಕೊಳ್ಳುತ್ತಿದೆ. ಈ ನಿಟ್ಟಿನಲ್ಲಿ ಮತದಾರರು, ಚುನಾವಣಾ ಸಿಬ್ಬಂದಿ ಹಾಗೂ ಆಯೋಗಕ್ಕೆ ನೆರವಾಗುವ ಹಲವು ಆಪ್ಗಳನ್ನು ಚುನಾವಣಾ ಆಯೋಗ ಅಭಿವೃದ್ಧಿಪಡಿಸಿದೆ.
ಈ ಪೈಕಿ ಇಂದು ಸಿ-ವಿಜಿಲ್ ಆಪ್ ಬಗ್ಗೆ ಮಾಹಿತಿ.
ದೇಶದಲ್ಲಿ ಚುನಾವಣೆಗಳ ವೇಳೆ ನಡೆಯುವ ಅಕ್ರಮಗಳು, ಮಾದರಿ ನೀತಿ ಸಂಹಿತೆಯ ಉಲ್ಲಂಘನೆ ಪ್ರಕರಣಗಳ ಮೇಲೆ ಕಣ್ಣಿಡುವುದು ಕೇವಲ ಚುನಾವಣಾ ಸಿಬ್ಬಂದಿಯ ಕೆಲಸವಲ್ಲ. ಇದು ಪ್ರತಿಯೊಬ್ಬ ನಾಗರಿಕನ ಕರ್ತವ್ಯವೂ ಹೌದು. ಹಾಗಾಗಿ ಚುನಾವಣಾ ಅಕ್ರಮಗಳ ಬಗ್ಗೆ ಸಾರ್ವಜನಿಕರು ಆಯೋಗಕ್ಕೆ ದೂರು ತಲುಪಿಸಲು ಭಾರತ ಚುನಾವಣಾ ಆಯೋಗ ಸಿ-ವಿಜಿಲ್ ಆಪ್ ಅನ್ನು ಅಭಿವೃದ್ಧಿ ಪಡಿಸಿದೆ.
ದೂರುಗಳನ್ನು ಆನ್ಲೈನ್ ಮೂಲಕ ಆಯೋಗಕ್ಕೆ ರವಾನಿಸಲು ಈ ಆಪ್ ನೆರವಾಗುವುದು. ಯಾವುದೇ ಚುನಾವಣಾ ಅಕ್ರಮಗಳ ಬಗ್ಗೆ ಧ್ವನಿಮುದ್ರಣ, ವಿಡಿಯೋ ಚಿತ್ರದ ತುಣುಕುಗಳು ಮತ್ತು ಫೋಟೊ ಮೊದಲಾದ ದಾಖಲೆಗಳನ್ನು ಸಾರ್ವಜನಿಕರು ಇದರ ಮೂಲಕ ಕಳುಹಿಸಬಹುದು.
ಚುನಾವಣೆಗಳಲ್ಲಿ ರಾಜಕೀಯ ಪಕ್ಷಗಳು, ಅಭ್ಯರ್ಥಿಗಳು ಮಾಡುವ ಖರ್ಚು-ವೆಚ್ಚ, ಮತದಾರರ ಮನವೊಲಿಕೆಗೆ ಆಮಿಷಗಳ ಬಳಕೆ ಮೊದಲಾದ ಅಕ್ರಮಗಳ ಬಗ್ಗೆ ದೂರು ನೀಡಲು ಇದನ್ನು ಬಳಸಬಹುದು. ಒಂದುನೂರು ನಿಮಿಷಗಳಲ್ಲಿ ಚುನಾವಣಾಧಿಕಾರಿಗಳು ಅಗತ್ಯ ಕ್ರಮ ಕೈಗೊಳ್ಳುತ್ತಾರೆ ಎಂದು ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಹೇಳಿದ್ದಾರೆ.
ದೇಶದ ಯಾವ ಮೂಲೆಯಲ್ಲೇ ಆಗಲಿ ನಡೆಯುವ ಚುನಾವಣಾ ಅಕ್ರಮ ಅಥವಾ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣಗಳ ಬಗ್ಗೆ ತಾವು ನೀಡಿದ ದೂರುಗಳನ್ನು ಆಯೋಗ ಪರಿಗಣಿಸಿದೆಯೇ ಎನ್ನುವ ವಿವರಗಳನ್ನು ಸಹ ಸಾರ್ವಜನಿಕರು ಸಿ-ವಿಜಿಲ್-ಆಪ್ ಮೂಲಕ ವೀಕ್ಷಿಸಬಹುದು.
ಸುದ್ದಿದಿನ.ಕಾಂ|ವಾಟ್ಸಾಪ್|9980346243
-
ದಿನದ ಸುದ್ದಿ7 days ago
ನಾಯಕನ ಹಟ್ಟಿ | ಶ್ರೀಗುರು ತಿಪ್ಪೇರುದ್ರಸ್ವಾಮಿ ರಥೋತ್ಸವಕ್ಕೆ ವಿಶೇಷ ಬಸ್ ಸೌಲಭ್ಯ
-
ದಿನದ ಸುದ್ದಿ6 days ago
ಲೋಕಸಭಾ ಚುನಾವಣೆ : ಚುನಾವಣಾ ಚಟುವಟಿಕೆಗಳ ಕುರಿತ ಜಿಲ್ಲಾವಾರು ಮಾಹಿತಿ
-
ದಿನದ ಸುದ್ದಿ6 days ago
ವಿಜಯಪುರ ಜಿಲ್ಲಾ ಸಾಹಿತ್ಯ ಸಮ್ಮೇಳನದ ಕವಿಗೋಷ್ಠಿಗೆ ಮೈಬೂಬಸಾಹೇಬ.ವೈ.ಜೆ ಆಯ್ಕೆ
-
ದಿನದ ಸುದ್ದಿ6 days ago
ಬೆಂಗಳೂರಿನಲ್ಲಿ ಬಿಜೆಪಿ ನೂತನ ಮಾಧ್ಯಮಕೇಂದ್ರ ಆರಂಭ
-
ದಿನದ ಸುದ್ದಿ5 days ago
ಲೋಕಸಭಾ ಚುನಾವಣೆ | ಹೊಸ ಮತದಾರರೆಷ್ಟು ಗೊತ್ತಾ..?
-
ದಿನದ ಸುದ್ದಿ5 days ago
ಕವಿತೆ | ನೆನಪು
-
ದಿನದ ಸುದ್ದಿ3 days ago
ಚುನಾವಣಾ ಅಕ್ರಮ ; ಸಾರ್ವಜನಿಕರು ದೂರು ಸಲ್ಲಿಸಲು ಆಯೋಗದಿಂದ ಸಿ-ವಿಜಿಲ್ ಆಪ್ ಅಭಿವೃದ್ಧಿ
-
ದಿನದ ಸುದ್ದಿ2 days ago
ಲೋಕಸಭಾ ಚುನಾವಣೆಯ ಮೊದಲ ಹಂತಕ್ಕೆ ನಾಮಪತ್ರ ಸಲ್ಲಿಕೆಗೆ ಇಂದು ಕೊನೆಯ ದಿನ