Connect with us

ದಿನದ ಸುದ್ದಿ

ಸಂವಿಧಾನ ಪ್ರಜಾತಂತ್ರ ಮತ್ತು ಸಾರ್ವಭೌಮ ಪ್ರಜೆಗಳು

Published

on

  • ನಾ ದಿವಾಕರ

ಸಂವಿಧಾನ ಈ ದೇಶದ ಆತ್ಮ ಪ್ರಜಾತಂತ್ರ ನಮ್ಮ ಉಸಿರು ಎಂದು ಹೇಳುತ್ತಲೇ ಬಂದಿರುವ ನಾವು, ಅಂದರೆ ಈ ದೇಶದ ಸಾರ್ವಭೌಮ ಪ್ರಜೆಗಳು ಈಗ ಉಸಿರುಗಟ್ಟಿ ಕೊನೆಯುಸಿರೆಳೆಯುವ ಹಂತ ತಲುಪುತ್ತಿದ್ದೇವೆ. ಪರಿಶುದ್ಧ ಆತ್ಮ ಇರುವವರೆಗೂ ಜೀವ ನಶಿಸುವುದಿಲ್ಲ ದೇಹ ಕೃಶವಾಗಿ ಅಳಿದರೂ ಆತ್ಮ ಸದಾ ಜೀವಾವಸ್ಥೆಯಲ್ಲಿರುತ್ತದೆ ಎನ್ನುವ ನಂಬಿಕೆಯೂ ನಮ್ಮ ನಡುವೆ ಇದೆ. ಅದಕ್ಕೇ ನಾವು ಆತ್ಮ ಎಂದ ಕೂಡಲೇ ಆಳಕ್ಕಿಳಿದು ನೋಡುವ ಒಂದು ಸೃಷ್ಟಿಕ್ರಿಯೆ ಎಂದು ಭಾವಿಸಿಬಿಡುತ್ತೇವೆ. ವೈಚಾರಿಕ ನೆಲೆಯಲ್ಲಿ, ವೈಜ್ಞಾನಿಕ ತಳಹದಿಯ ಮೇಲೆ ನಿಂತು ನೋಡಿದಾಗ ಆತ್ಮ ಎನ್ನುವುದು ಜೈವಿಕ ಅಸ್ತಿತ್ವವಿಲ್ಲದ ಮಾನವನ ಕಲ್ಪನೆ ಎನ್ನುವುದು ಸ್ಪಷ್ಟವಾಗುತ್ತದೆ.

ಆದರೂ ಒಂದು ಭೌಗೋಳಿಕ ದೇಶವನ್ನು ಮಾನವನ ದೇಹಕ್ಕೆ ಹೋಲಿಸಿದಾಗ ಸಂವಿಧಾನ ಎನ್ನುವುದು ಈ ಕಲ್ಪಿತ ಆತ್ಮ ಎನಿಸಿಕೊಳ್ಳುತ್ತದೆ. ಪ್ರಜಾತಂತ್ರ ಉಸಿರು ಎನಿಸಿಕೊಳ್ಳುತ್ತದೆ. ಆಡಳಿತ ವ್ಯವಸ್ಥೆಯನ್ನು ನಿರ್ವಹಿಸುವ ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗ ಈ ದೇಹದ ಅವಯವಗಳಂತೆ ಕಾರ್ಯ ನಿರ್ವಹಿಸುತ್ತವೆ. ಮಾಧ್ಯಮ ಎನ್ನಲಾಗುವ ಸುದ್ದಿ ಪ್ರಸರಣ ಸಂಸ್ಥೆಗಳು ಈ ದೇಹವನ್ನು ಬಾಧಿಸುವ ರೋಗ ರುಜಿನಗಳ ಮೂಲ ಲಕ್ಷಣಗಳನ್ನು ಗ್ರಹಿಸಿ ಸೂಕ್ತ ಸಮಯದಲ್ಲಿ ಚಿಕಿತ್ಸೆ ನೀಡುವಂತೆ ಮಾರ್ಗದರ್ಶನ ನೀಡುವ ಮತ್ತೊಂದು ಆಧಾರಸ್ತಂಭದಂತೆ ಕಾರ್ಯನಿರ್ವಹಿಸುತ್ತದೆ. ಆಂಗ್ಲಭಾಷೆಯಲ್ಲಿ ಇದನ್ನು ಫೋರ್ತ್ ಎಸ್ಟೇಟ್ ಎನ್ನಲಾಗುತ್ತದೆ.

ನಾವು ಸಂವಿಧಾನ ಎಂಬ ಆತ್ಮವನ್ನು ಪೂಜಿಸುತ್ತಾ, ಆರಾಧಿಸುತ್ತಾ, ಗೌರವಿಸುತ್ತಾ ಗ್ರಾಂಥಿಕವಾಗಿ ಕಿಂಚಿತ್ತೂ ಧಕ್ಕೆಯಾಗದಂತೆ ಕಾಪಾಡಿಕೊಂಡು ಬಂದಿದ್ದೇವೆ. ಸಂವಿಧಾನವನ್ನು ಬದಲಿಸುವ ಪ್ರಸ್ತಾಪ ಎದುರಾದ ಕೂಡಲೇ ಪ್ರತಿರೋಧದ ದನಿಗಳು ಮುಗಿಲುಮುಟ್ಟುತ್ತವೆ. ಸಂವಿಧಾನದ ಮೂಲ ಆಶಯಗಳನ್ನು ಸಂರಕ್ಷಿಸಲು ಪಣ ತೊಟ್ಟಿರುವ ಅಸಂಖ್ಯಾತ ದನಿಗಳು ನಮ್ಮ ನಡುವೆ ಇವೆ. ಸಾಮಾಜಿಕ ನ್ಯಾಯ, ರಾಜಕೀಯ ಸ್ವಾತಂತ್ರ್ಯ, ಆರ್ಥಿಕ ಪ್ರಗತಿ ಈ ಧ್ಯೇಯಗಳನ್ನು ಸಾಧಿಸಲು ಕಳೆದ 73 ವರ್ಷಗಳಲ್ಲಿ ಅನೇಕ ರೀತಿಯ ಹೋರಾಟಗಳೂ ನಡೆದಿವೆ.

ಈ ಆಶಯಗಳನ್ನು ಭಾರತೀಯ ಪ್ರಭುತ್ವ ಸಾಧಿಸಲು ಸಾಧ್ಯವಾಗಿದೆಯೇ? ಈ ಪ್ರಶ್ನೆ ಎದುರಾದ ಕೂಡಲೇ ಅಂಕಿಅಂಶಗಳು ನಮ್ಮೆದುರು ನಿಲ್ಲುತ್ತವೆ. 70 ವರ್ಷಗಳಲ್ಲಿ ಏನೂ ಸಾಧನೆಯಾಗಿಲ್ಲ ಎಂದು ಹೇಳುತ್ತಾ ಆರು ವರ್ಷಗಳ ಕನ್ನಡಿ ಹಿಡಿದರೂ , ಸಾಧನೆಯ ಹೆಜ್ಜೆಗಳು ಮತ್ತು ಮುನ್ನಡೆಯ ಕೋಷ್ಟಕಗಳು ನಮ್ಮೆದುರು ನಿಲ್ಲುತ್ತವೆ. ಈ ಸಾಧನೆಗಳೇನಾದರೂ ಸಾಧ್ಯವಾಗಿದ್ದರೆ ಅದು ಸ್ವಾತಂತ್ರ್ಯೋತ್ತರ ಭಾರತದ ಆರಂಭಿಕ ವರ್ಷಗಳಲ್ಲಿ ಕೈಗೊಂಡ ಕೆಲವು ನಿರ್ಧಾರಗಳು ಮತ್ತು ಜಾರಿಗೊಳಿಸಿದ ಯೋಜನೆಗಳ ಫಲ ಎಂದಷ್ಟೇ ಹೇಳಬಹುದು.

ಆದರೆ ಸಾಧನೆಯ ಮೆಟ್ಟಿಲುಗಳನ್ನು ಪರಿಶೀಲಿಸುತ್ತಾ ಹೋದಂತೆಲ್ಲಾ ನಮಗೆ ತಾರತಮ್ಯದ ಕಂದಕಗಳು ಕಾಣುತ್ತಲೇ ಹೋಗುತ್ತವೆ. ಸಾಮಾಜಿಕ ನೆಲೆಯಲ್ಲಾಗಲೀ, ಆರ್ಥಿಕ ನೆಲೆಯಲ್ಲಾಗಲೀ ಈ ಕಂದಕಗಳು ಹೆಜ್ಜೆ ಹೆಜ್ಜೆಗೂ ಗೋಚರಿಸುವಷ್ಟು ಮಟ್ಟಿಗೆ ಮುನ್ನಡೆಯ ಹೆಜ್ಜೆಗಳಲ್ಲಿ ಲೋಪಗಳನ್ನು ಗುರುತಿಸಬಹುದು. ನಾವು ಸಾಮಾಜಿಕ ನ್ಯಾಯ ಸಾಧಿಸುವ ಮಾರ್ಗದಲ್ಲಿ ಸಾಕಷ್ಟು ಮುನ್ನಡೆದಿದ್ದೇವೆ.

ಆದರೆ ಜಾತಿ ದೌರ್ಜನ್ಯ , ಜಾತಿ ತಾರತಮ್ಯ , ಜಾತಿ ವೈಷಮ್ಯ ಇಂದಿಗೂ ಕಾಡುತ್ತಿರುವ ಜ್ವಲಂತ ಸಮಸ್ಯೆಯಾಗಿದೆ. ಶಿಕ್ಷಣ ಮತ್ತು ಉದ್ಯೋಗದಲ್ಲಿ ಮೀಸಲಾತಿ ಒದಗಿಸುವುದನ್ನೇ ಸಾಮಾಜಿಕ ನ್ಯಾಯದ ಉನ್ನತ ಹಂತ ಎಂಬ ಭಾವನೆ ಆಳುವ ವರ್ಗಗಳಲ್ಲಿದೆ. ಅಲ್ಲಿಯೂ ಸಹ ಶೋಷಿತ ಸಮುದಾಯದ ಒಂದು ವರ್ಗ ಅವಕಾಶವಂಚಿತವಾಗಿರುವುದನ್ನು ಇತ್ತೀಚಿನ ದಿನಗಳಲ್ಲಿ ಕಾಣುತ್ತಿದ್ದೇವೆ.

ಮೀಸಲಾತಿ ಸಾಮಾಜಿಕ ನ್ಯಾಯ ಸಾಧಿಸುವ ಒಂದು ಆಯಾಮವಷ್ಟೇ. ಶೋಷಿತ ಸಮುದಾಯಗಳ ಆರ್ಥಿಕ ಸಬಲೀಕರಣ ಕೇವಲ ಮೀಸಲಾತಿಯಿಂದ ಸಾಧ್ಯವಾಗುವುದಿಲ್ಲ ಎನ್ನುವುದು ಅಂಬೇಡ್ಕರರಿಗೂ ತಿಳಿದಿತ್ತು. ಸಾರ್ವತ್ರಿಕ ಪ್ರಾಥಮಿಕ ಶಿಕ್ಷಣ, ಆರ್ಥಿಕ ಸಬಲೀಕರಣದ ನೀತಿಗಳು ಮತ್ತು ಅರ್ಥವ್ಯವಸ್ಥೆಯಲ್ಲಿ ಸಮಾನ ನೆಲೆಯ ಪ್ರಾತಿನಿಧ್ಯ ಈ ಅಂಶಗಳನ್ನು ಗಂಭೀರವಾಗಿ ಪರಿಗಣಿಸದಿದ್ದರೆ ಪರಿಪೂರ್ಣ ಸಾಮಾಜಿಕ ನ್ಯಾಯ ಸಾಧಿಸುವುದು ಅಸಾಧ್ಯ ಎಂದು ಅರಿತಿದ್ದರಿಂದಲೇ ಅಂಬೇಡ್ಕರ್ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಿದ್ದರು, ಭೂ ರಾಷ್ಟ್ರೀಕರಣಕ್ಕಾಗಿ ಆಗ್ರಹಿಸಿದ್ದರು. ಕಾರ್ಮಿಕರ ರಕ್ಷಣೆಗಾಗಿ ಹಲವು ಸುಧಾರಣಾ ಕ್ರಮಗಳನ್ನು ಪ್ರಸ್ತಾಪಿಸಿದ್ದರು. ಇದು ತಾತ್ವಿಕವಾಗಿ ಮಾಕ್ರ್ಸ್ ವಾದಿಗಳ ಆಗ್ರಹಗಳಿಗಿಂತಲೂ ಭಿನ್ನವಾಗಿರಲಿಲ್ಲ.

ಆದರೆ ಭಾರತದ ಪ್ರಭುತ್ವ ಈ ಸಾಂವಿಧಾನಿಕ ಆಶಯಗಳನ್ನು ಒಂದು ಸೀಮಿತ ಚೌಕಟ್ಟಿನಲ್ಲಿ ಮಾತ್ರವೇ ಅನುಸರಿಸುತ್ತಿರುವುದನ್ನೂ, ಅಧಿಕಾರ ರಾಜಕಾರಣದ ಒಂದು ಅಸ್ತ್ರದಂತೆ ಬಳಸುತ್ತಿರುವುದನ್ನೂ ಗಮನಿಸುತ್ತಲೇ ಬಂದಿದ್ದೇವೆ. ಹಾಗೆಯೇ ಸಾಮಾಜಿಕ ನ್ಯಾಯ ಸಾಧಿಸುವ ಮೂಲಕ, ಸಮಾಜೋ-ಆರ್ಥಿಕ ಮತ್ತು ರಾಜಕೀಯ ಸಮಾನತೆಯನ್ನು ಸಾಧಿಸುವ ನಿಟ್ಟಿನಲ್ಲೂ ಭಾರತದ ಪ್ರಭುತ್ವ ಸೋತಿದೆ.

73 ವರ್ಷಗಳ ನಂತರ ಈ ಸಮಾನತೆಯ ಕನಸು ಕನಸಾಗಿಯೇ ಉಳಿದಿರುವುದನ್ನು ಗಮನಿಸಬಹುದು. ಸಾರ್ವಜನಿಕರ ದೃಷ್ಟಿಯಲ್ಲಿ ಇದು ಪ್ರಭುತ್ವದ ಸೋಲು ಎನಿಸಿದರೂ, ಅಧಿಕಾರ ಮತ್ತು ಅಧಿಪತ್ಯ ರಾಜಕಾರಣದ ದೃಷ್ಟಿಯಲ್ಲಿ ಇದು ಭಾರತೀಯ ಪ್ರಭುತ್ವದ ಗೆಲುವು ಎನ್ನಬಹುದು. ಏಕೆಂದರೆ ಈ ದೇಶದ ಪ್ರಭುತ್ವ ಯಾವುದೇ ಕಾಲಘಟ್ಟದಲ್ಲೂ ಶೋಷಿತರ ಪರವಾಗಿ ಇರಲಿಲ್ಲ.

ಪ್ರಭುತ್ವದ ಈ ವೈಫಲ್ಯವನ್ನು ನಾವು ಸರ್ಕಾರಗಳ ವೈಫಲ್ಯವೆಂದೋ, ರಾಜಕೀಯ ಪಕ್ಷಗಳ ವೈಫಲ್ಯವೆಂದೋ ಭಾವಿಸುತ್ತೇವೆ. ವೈಫಲ್ಯದ ಪ್ರತಿಯೊಂದು ಹೆಜ್ಜೆಯಲ್ಲೂ ಸಂವಿಧಾನದ ಉಲ್ಲಂಘನೆಯನ್ನು ಕಾಣಬಹುದಾದರೂ ನಾವು ಅದನ್ನು ಆಡಳಿತಾತ್ಮಕ ಚೌಕಟ್ಟಿನಲ್ಲಿ ವಿಶ್ಲೇಷಿಸುತ್ತಿದ್ದೇವೆಯೇ ಹೊರತು ಸಂವಿಧಾನದ ಚೌಕಟ್ಟಿನಲ್ಲಿ ವಿಶ್ಲೇಷಿಸುತ್ತಿಲ್ಲ.

ಮೂಲ ಸಾಂವಿಧಾನಿಕ ಆಶಯಗಳಾದ ಸಮ ಸಮಾಜ ಮತ್ತು ಶೋಷಣೆ ರಹಿತ ಸಮಾಜದ ನಿರ್ಮಾಣಕ್ಕಾಗಿ ಹಾತೊರೆಯುವ ಮನಸುಗಳು ಈ ಆಶಯಗಳನ್ನು ಈಡೇರಿಸುವ ನಿಟ್ಟಿನಲ್ಲಿ ಹಲವು ಮಾರ್ಗಗಳನ್ನು ಕಂಡುಕೊಂಡಿವೆ. ಶಾಂತಿಯುತ ಪ್ರತಿಭಟನೆ, ಹಕ್ಕೊತ್ತಾಯಗಳು, ಮುಷ್ಕರಗಳು, ಚಳುವಳಿ, ಆಂದೋಲನ, ತೀವ್ರವಾದಿ ಹೋರಾಟ, ಸಶಸ್ತ್ರ ಹೋರಾಟ ಹೀಗೆ ಹಲವು ಮಾರ್ಗಗಳಲ್ಲಿ ಶೋಷಣೆಯಿಲ್ಲದ ಸಮಾಜಕ್ಕಾಗಿ ಹೋರಾಟಗಳು ನಡೆದಿವೆ, ನಡೆಯುತ್ತಿವೆ.

ದುರಂತ ಎಂದರೆ ಈ ಹೋರಾಟಗಳನ್ನು ನಾವೇ ಹಿಂಸಾತ್ಮಕ ಮತ್ತು ಅಹಿಂಸಾತ್ಮಕ, ಸಾಂವಿಧಾನಿಕ ಮತ್ತು ಅಸಾಂವಿಧಾನಿಕ, ಕಾನೂನುಬದ್ಧ ಮತ್ತು ಕಾನೂನುಬಾಹಿರ ಎಂದು ವಿಂಗಡಿಸಿಬಿಟ್ಟಿದ್ದೇವೆ. ತನ್ನ ಅಧಿಕಾರ ಕೇಂದ್ರವನ್ನು ಅಲುಗಾಡಿಸುವ ಯಾವುದೇ ಚಳುವಳಿ ಅಥವಾ ಹೋರಾಟಗಳು ಪ್ರಭುತ್ವದ ದೃಷ್ಟಿಯಲ್ಲಿ ಸಹನೀಯ ಎನಿಸುವುದಿಲ್ಲ , ಕಾನೂನುಬಾಹಿರ ಎನಿಸಿಬಿಡುತ್ತದೆ.

ಆದರೆ ಶೋಷಿತರ ದೃಷ್ಟಿಯಲ್ಲಿ ಎಲ್ಲ ರೀತಿಯ ಹೋರಾಟಗಳಿಗೂ ಒಂದು ತಾರ್ಕಿಕ ನೆಲೆ ಇರುತ್ತದೆ. ಎಲ್ಲ ಹೋರಾಟಗಳ ಗುರಿ ಸಮಾನತೆ ಮತ್ತು ಸಾಮಾಜಿಕ ಘನತೆಯನ್ನು ಸಾಧಿಸುವುದೇ ಆಗಿರುತ್ತದೆ. ಹಾಗಾಗಿಯೇ ಪ್ರಭುತ್ವ ಸಂವಿಧಾನದ ಚೌಕಟ್ಟಿನಲ್ಲೇ ಸಂವಿಧಾನ ಬಾಹಿರ ಕಾನೂನುಗಳನ್ನು ರಚಿಸುವ ಮೂಲಕ ಈ ಪ್ರಜಾಂದೋಲನಗಳ ವಿಘಟನೆಗೆ ಮಾರ್ಗಗಳನ್ನು ಹುಡುಕುತ್ತಿರುತ್ತದೆ.

1960ರ ದಶಕದಿಂದ ಇವತ್ತಿನವರೆಗೂ ಪ್ರಭುತ್ವ ಈ ನೀತಿಯನ್ನು ಅನುಸರಿಸುತ್ತಲೇ ಬಂದಿದೆ. ಇಂದು ಕೇಂದ್ರ ಸರ್ಕಾರದ ಕೃಷಿ ಮಸೂದೆಗಳ ವಿರುದ್ಧ ದೇಶಾದ್ಯಂತ ಸಿಡಿದೆದ್ದಿರುವ ನಾವು, ಕಳೆದ ನಾಲ್ಕು ದಶಕಗಳಲ್ಲಿ ಭೂ ಸುಧಾರಣೆ ಮತ್ತು ಭೂಮಿಯ ಹಕ್ಕಿಗಾಗಿ ಹೋರಾಟ ನಡೆಸುವುದನ್ನೇ ಮರೆತಿದ್ದೇವೆ ಎನ್ನುವುದನ್ನೂ ಗಮನಿಸಬೇಕು.

ಭೂ ಹೋರಾಟಗಳಿಗೆ ಅಂತ್ಯ ಹಾಡಲೆಂದೇ ಪ್ರಭುತ್ವ ನಕ್ಸಲ್ ಭೂತವನ್ನೂ ಸೃಷ್ಟಿಸಿದ್ದನ್ನು ಈ ಸಂದರ್ಭದಲ್ಲಿ ಸ್ಮರಿಸಬೇಕಿದೆ. ಆದರೆ ಭೂಮಿ ಇಲ್ಲದವರಿಗೆ ಭೂಮಿ ಹಂಚುವುದು, ಭೂ ಒಡೆತನದ ಮಿತಿಯನ್ನು ಹೇರುವುದು, ಭೂಮಾಲೀಕರ ದೌರ್ಜನ್ಯ ಮತ್ತು ಅಟ್ಟಹಾಸದಿಂದ ಗ್ರಾಮೀಣ ಬಡಜನತೆಯನ್ನು, ಶೋಷಿತ ಸಮುದಾಯಗಳನ್ನು ರಕ್ಷಿಸುವುದು ಕೇವಲ ನಕ್ಸಲರ ಕಾರ್ಯಸೂಚಿಯಾಗಬೇಕಿಲ್ಲ ಅಲ್ಲವೇ ?

ಪ್ರಜಾತಂತ್ರದ ಮಾರ್ಗದಲ್ಲಿಯೇ ಈ ಹೋರಾಟಗಳನ್ನು ಮುನ್ನಡೆಸುವ ನಿಟ್ಟಿನಲ್ಲಿ ನಾವು ಯೋಚಿಸುವುದನ್ನೇ ಬಿಟ್ಟಿದ್ದೇವೆ ಅಲ್ಲವೇ ? ಭೂ ಸ್ವಾಧೀನ ಒತ್ತಟ್ಟಿಗಿರಲಿ, ಭೂ ಸುಧಾರಣೆಯ ಕ್ರಮಗಳನ್ನು ಚಾಲ್ತಿಯಲ್ಲಿರುವ ಕಾನೂನುಗಳ ಅನ್ವಯವೇ ಜಾರಿಗೊಳಿಸಲೂ ಒತ್ತಾಯಿಸಲಾಗಿಲ್ಲ. ಪರಿಣಾಮಕಾರಿಯಾಗಿ ಅನುಷ್ಟಾನವಾಗಿದ್ದ ಭೂ ಸುಧಾರಣಾ ಕ್ರಮಗಳನ್ನು ಕಾಪಾಡಿಕೊಳ್ಳುವ ನಿಟ್ಟಿನಲ್ಲೂ ಸಹ ಯಾವುದೇ ಪರಿಣಾಮಕಾರಿ ಆಂದೋಲನಗಳು ರೂಪುಗೊಂಡಿಲ್ಲ.

ಬಹುಶಃ ಉತ್ಪಾದನಾ ಪ್ರಕ್ರಿಯೆಯಲ್ಲಿನ ಶ್ರಮ ವಿಭಜನೆಯಂತೆ ಇಲ್ಲಿಯೂ ಸಹ ವಿಭಜನೆಯ ಸೂತ್ರಗಳನ್ನು ನಾವು ಅಳವಡಿಸಿಕೊಂಡಿದ್ದೇವೆ. ಹಾಗಾಗಿಯೇ ಭೂಮಾಲೀಕರಿಂದ ಭೂಮಿಯನ್ನು ಕಸಿದುಕೊಳ್ಳುವುದು, ನಕ್ಸಲ್ ಪರಿಕಲ್ಪನೆಯಲ್ಲಿ, ಹಿಂಸಾತ್ಮಕ ಎನಿಸಿಬಿಟ್ಟಿತು. ಅಹಿಂಸಾತ್ಮಕವಾದ ಪ್ರಯತ್ನಗಳು ನಡೆಯಲೂ ಇಲ್ಲ.

ಏಕೆ ನಡೆಯಲಿಲ್ಲ ? ಕಾರಣ ಸ್ಪಷ್ಟ. ಈ ದೇಶದ ಭೂಮಾಲೀಕ ವರ್ಗಗಳು ಅಧಿಪತ್ಯ ರಾಜಕಾರಣದ ಕೇಂದ್ರ ಬಿಂದು ಆಗಿವೆ. ಔದ್ಯಮಿಕ ಬಂಡವಾಳಗಾರರಷ್ಟೇ ಪ್ರಬಲವಾಗಿ ಈ ಭೂಮಾಲೀಕ ವರ್ಗ ಈ ದೇಶದ ಅಧಿಕಾರ ರಾಜಕಾರಣವನ್ನು ಪಕ್ಷಗಳ ಹೆಸರಿನಲ್ಲಿ ನಿರ್ವಹಿಸುತ್ತಿವೆ. ಈ ವರ್ಗಗಳ ಯಥಾಸ್ಥಿತಿವಾದ ಮತ್ತು ಅಧಿಕಾರದಾಹಕ್ಕೆ ಬಲಿಯಾಗಿರುವುದು ಜನಪರ ಹೋರಾಟಗಳು ಮತ್ತು ಈ ಹೋರಾಟಗಳನ್ನು ಪ್ರತಿನಿಧಿಸುವ ಅಸಂಖ್ಯಾತ ಸಂಘಟನೆಗಳು.

ಕಾರ್ಮಿಕ ಸಂಘಟನೆಗಳ ಹೋರಾಟವನ್ನೇ ಗಮನಿಸಿದರೆ, ಮುಷ್ಕರ ಹೋರಾಟಗಳ ಮೂಲಕ ಹಕ್ಕೊತ್ತಾಯಗಳನ್ನು ಮಂಡಿಸುವುದನ್ನು “ ಕಮ್ಯುನಿಸ್ಟ್ ” ಎಂದು ಹೀಗಳೆದು, ರಾಜಿ ಸಂಧಾನಗಳ ಮಾರ್ಗವನ್ನೇ ಪ್ರಧಾನವಾಗಿ ಆಯ್ಕೆ ಮಾಡಿಕೊಂಡ ನಿದರ್ಶನಗಳು ಹೇರಳವಾಗಿವೆ. ಈಗ ಒಂದೊಂದೇ ಸಂಸ್ಥೆಗಳು ಖಾಸಗಿ ಪಾಲಾಗುತ್ತಿರುವಾಗ ರಾಜಿ ಸಂಧಾನ ಎಷ್ಟರ ಮಟ್ಟಿಗೆ ಫಲಪ್ರದವಾಗುತ್ತವೆ ? ಈ ಪ್ರಶ್ನೆ ನಮ್ಮನ್ನು ಕಾಡಲೇಬೇಕಿದೆ. ಏಕೆಂದರೆ ಹೋರಾಟದ ಮಾರ್ಗಗಳಲ್ಲಿ ನಾವೇ ತಡೆಗೋಡೆಗಳನ್ನು ನಿರ್ಮಿಸಿಬಿಟ್ಟಿದ್ದೇವೆ ಅಥವಾ ಪ್ರಭುತ್ವ ನಿರ್ಮಿಸಿರುವ ದಿಬ್ಬಗಳಿಗೆ ಆಸರೆಯಾಗಿ ನಿಂತಿದ್ದೇವೆ.

ನಾವೇ ನಿರ್ಮಿಸಿರುವ ಬೌದ್ಧಿಕ ತಡೆಗೋಡೆಗಳನ್ನು ಕಿತ್ತೊಗೆಯುವುದು ಕಷ್ಟವೇನಲ್ಲ. ಆದರೆ ನಾಲ್ಕು ದಶಕಗಳ ಅವಧಿಯಲ್ಲಿ ಈ ಪ್ರಕ್ರಿಯೆಗೆ ಪ್ರಭುತ್ವ ತನ್ನದೇ ಆದ ನೆಲೆಗಳನ್ನು ಒದಗಿಸಿದೆ. ಶೋಷಣೆಗೊಳಗಾಗಿರುವ ಕೋಟ್ಯಂತರ ಜನತೆಯನ್ನು ಅಸ್ಮಿತೆಗಳ ಚೌಕಟ್ಟಿನಲ್ಲಿ ಬಂಧಿಸಿ, ಜಾತಿ ಧರ್ಮ ಮತ್ತು ಪ್ರಾದೇಶಿಕ ನೆಲೆಗಳಲ್ಲಿ ವಿಭಜಿಸಿರುವ ಪ್ರಭುತ್ವ ಶೋಷಿತ ಸಮುದಾಯಗಳ ಐಕಮತ್ಯ ಅಸಾಧ್ಯ ಎನ್ನುವಷ್ಟು ಮಟ್ಟಿಗೆ ಅಸ್ಮಿತೆಗಳ ಗೋಡೆಗಳನ್ನು ನಿರ್ಮಿಸಿಬಿಟ್ಟಿದೆ.

ಈ ಬೆಳವಣಿಗೆಗಳು ಹಠಾತ್ತನೆ ಸಂಭವಿಸಿದ್ದಲ್ಲ ಎನ್ನುವುದನ್ನೂ ಗಮನಿಸಬೇಕಿದೆ. 1980ರ ದಶಕದ ನವ ಉದಾರವಾದ ಮತ್ತು ಜಾತಿ ರಾಜಕಾರಣ, 1990ರ ದಶಕದ ಮತೀಯವಾದ ಮತ್ತು ಸಾಂಸ್ಕøತಿಕ ರಾಷ್ಟ್ರೀಯತೆ, 2000ದ ನಂತರದ ನಾಲ್ಕನೆಯ ಔದ್ಯಮಿಕ ಕ್ರಾಂತಿ ಮತ್ತು ಡಿಜಿಟಲೀಕರಣ ಈ ಎಲ್ಲ ಪ್ರಕ್ರಿಯೆಯ ಗರ್ಭದಲ್ಲಿ ಶೋಷಿತ ಸಮುದಾಯಗಳ ವಿಘಟನೆಯ ಬೀಜಗಳು ಅಡಗಿವೆ.

ದಲಿತ ಸಮುದಾಯಗಳ ಭೂಮಿಯ ಹಕ್ಕು ಮತ್ತು ಅಲ್ಪ ಪ್ರಮಾಣದಲ್ಲಿ ಹೊಂದಿರುವ ಭೂಮಿಯ ರಕ್ಷಣೆಗಾಗಿ ಈಗ ಒಕ್ಕೊರಲಿನ ದನಿ ಕೇಳಿಬರುತ್ತಿದೆ. ಏಕೆಂದರೆ ಕೇಂದ್ರ ಸರ್ಕಾರದ ಕೃಷಿ ಮಸೂದೆ ಭೂಮಿಯ ಖಾಸಗೀಕರಣಕ್ಕೆ ಹಾದಿಯನ್ನು ಸುಗಮವಾಗಿಸಿದೆ. ಆದರೆ ನವ ಉದಾರವಾದ ಮತ್ತು ಸಾಂಸ್ಕøತಿಕ ರಾಷ್ಟ್ರೀಯತೆಯ ಜಂಟಿ ಕಾರ್ಯಾಚರಣೆಯಲ್ಲಿ ಈ ಎರಡೂ ಅಂಶಗಳನ್ನು ನಾವೇ ನೇಪಥ್ಯಕ್ಕೆ ಸರಿಸಿದ್ದೇವೆ ಎನ್ನುವುದನ್ನೂ ಗಮನಿಸಬೇಕಲ್ಲವೇ ? ಈಗ ಅಲ್ಪಸ್ವಲ್ಪ ಭೂಮಿ ಇರುವವರೂ ತಮ್ಮ ನೆಲೆ ಕಳೆದುಕೊಳ್ಳಲಿದ್ದಾರೆ, ಭೂಮಿ ನಮ್ಮ ಹಕ್ಕು ಎಂದು ಭಾವಿಸುವವರು ಅಸಹಾಯಕ ಸ್ಥಿತಿ ತಲುಪುವಂತಾಗಿದೆ. ಈ ಸಂದಿಗ್ಧತೆಯ ಮೂಲವನ್ನು ಅಯೋಧ್ಯೆಯ ಕಾಲಾಳುಗಳ ಸದ್ದಿನಲ್ಲಿ ಕೇಳಿಸಿಕೊಳ್ಳಲು ಈಗಲಾದರೂ ಸಾಧ್ಯವೇ ? ಯೋಚಿಸೋಣ.

ಬಂಡವಾಳ ವ್ಯವಸ್ಥೆ ಪ್ರಬಲವಾದಂತೆಲ್ಲಾ ಹೋರಾಟದ ನೆಲೆಗಳನ್ನು ನಾಶಪಡಿಸುತ್ತಲೇ ಮುನ್ನಡೆಯುತ್ತದೆ. ಈ ಮುನ್ನಡೆಗೆ ಬಲಪಂಥೀಯ ರಾಜಕಾರಣದ ಹೆಗಲು ದೊರೆತರೆ ಏನಾಗುತ್ತದೆ ಎನ್ನುವುದನ್ನು ಮೂರು ದಶಕಗಳ ಭಾರತದ ರಾಜಕೀಯ ಬೆಳವಣಿಗೆಗಳು ನಿರೂಪಿಸಿವೆ. ಭಾರತದಂತಹ ಜಾತಿವ್ಯವಸ್ಥೆಯಲ್ಲಿ ಈ ವಿಘಟನೆ ಎಷ್ಟು ಸುಲಭಸಾಧ್ಯ ಎನ್ನುವುದನ್ನೂ ಪ್ರಭುತ್ವ ನಿರೂಪಿಸಿದೆ. ಮಂಡಲ-ಕಮಂಡಲ ರಾಜಕಾರಣದ ಕೂಪದಲ್ಲಿ ಎಷ್ಟೋ ಹೋರಾಟಗಳು ಇಂದಿಗೂ ಅಡಗಿ ಕುಳಿತಿವೆ. ಬಂಡವಾಳ ಮತ್ತು ಶ್ರಮಜೀವಿಗಳ ನಡುವಿನ ಸಂಘರ್ಷದ ನೆಲೆಯಲ್ಲಿ ಎಷ್ಟೋ ಜೀವಗಳು ನಲುಗಿಹೋಗಿವೆ. ಈ ಬಲಿಯಾದ ಜೀವಗಳು ಆಳುವ ವರ್ಗಗಳಿಗೆ ಬಂಡವಾಳವಾಗುತ್ತಿವೆ ನಮಗೆ ಕೇವಲ ಸ್ಮಾರಕಗಳಾಗುತ್ತಿವೆ.

ಭೀಮ ಕೊರೆಗಾಂವ್ ಸಂದರ್ಭದಲ್ಲಿ ಈ ದ್ವಂದ್ವವನ್ನು ನಾವು ಸ್ಪಷ್ಟವಾಗಿ ಗಮನಿಸಬಹುದು. ಅಥವಾ ಊನ, ದಾದ್ರಿ , ಜೆ ಎನ್ ಯು ಘಟನೆಗಳ ಸಂದರ್ಭದಲ್ಲಿ ಈ ವಿರೋಧಾಭಾಸಗಳನ್ನು ಗಮನಿಸಬಹುದು. ಮಾನವ ಹಕ್ಕುಗಳಿಗಾಗಿ, ಪರಿಸರ ರಕ್ಷಣೆಗಾಗಿ, ಆದಿವಾಸಿಗಳ ಮೂಲ ಸಂಸ್ಕøತಿ ಮತ್ತು ಜೀವನೆಲೆಗಳ ರಕ್ಷಣೆಗಾಗಿ ನಡೆಯುವ ಹೋರಾಟಗಳಿಗೆ ವಿಮುಖವಾಗುವ ಮೂಲಕ ಅನೇಕಾನೇಕ ಹೋರಾಟಗಳು ಪ್ರಭುತ್ವದ ಕಬಂಧ ಬಾಹುಗಳಿಗೆ ಸಿಲುಕಿ ತಮ್ಮ ಅಸ್ತಿತ್ವವನ್ನೇ ಕಳೆದುಕೊಂಡಿವೆ. ಇನ್ನು ಕೆಲವು ತಟಸ್ಥ ನೀತಿ ಅನುಸರಿಸಿ ಯಥಾಸ್ಥಿತಿವಾದಕ್ಕೆ ಶರಣಾಗಿ ನಿಷ್ಕ್ರಿಯವಾಗಿವೆ, ನಿಸ್ತೇಜವಾಗಿವೆ.

ಈ ನಿಷ್ಕ್ರಿಯತೆಯಿಂದ ಹೊರಬರುವ ಕಾಲ ಸನ್ನಿಹಿತವಾಗುತ್ತಿದೆ. ಏಕೆಂದರೆ ಬಂಡವಾಳ ವ್ಯವಸ್ಥೆ ನವ ಉದಾರವಾದದ ಸಂಪೂರ್ಣ ಸಾರ್ಥಕತೆಯತ್ತ ದಾಪುಗಾಲು ಹಾಕುತ್ತಿದೆ. ಭಾರತದ ಪ್ರಭುತ್ವವೂ ಈ ನಿಟ್ಟಿನಲ್ಲಿ ಮುನ್ನಡೆಯುತ್ತಿದೆ. ಸಮಸಮಾಜ , ಸಮಾನತೆ, ಸೌಹಾರ್ದತೆಯನ್ನು ಸಾಧಿಸುವ ಮತ್ತು ಶೋಷಣೆ ಹಾಗೂ ದೌರ್ಜನ್ಯರಹಿತ ಸಮಾಜದ ನಿರ್ಮಾಣದ ಕನಸುಗಳು ಸಂಪೂರ್ಣವಾಗಿ ಭಗ್ನವಾಗುವ ಸಂದರ್ಭದಲ್ಲಿ ನಾವಿದ್ದೇವೆ. ಈ ಕನಸುಗಳನ್ನು ನನಸಾಗಿಸುವ ನಿಟ್ಟಿನಲ್ಲಿ ಯಾವುದೇ ರೀತಿಯ ಹೋರಾಟವೂ ಸಂವಿಧಾನಬಾಹಿರವಾಗಲಾರದು ಎನ್ನುವ ವಾಸ್ತವವನ್ನು ನಾವು ಪ್ರಾಮಾಣಿಕವಾಗಿ ಒಪ್ಪಿಕೊಳ್ಳಬೇಕಿದೆ.

ಏಕೆಂದರೆ ಪ್ರಭುತ್ವ ಸಂವಿಧಾನಬಾಹಿರವಾಗಿಯೇ ಪ್ರಜೆಗಳ ಪ್ರಜಾಸತ್ತಾತ್ಮಕ ಹಕ್ಕುಗಳನ್ನು ಕಸಿದುಕೊಳ್ಳುತ್ತಿದೆ. ಕಾರ್ಮಿಕ ಕಾಯ್ದೆಗಳ ತಿದ್ದುಪಡಿ, ಕೃಷಿ ಕಾಯ್ದೆಗಳ ತಿದ್ದುಪಡಿ, ಹಣಕಾಸು ಮಸೂದೆಗಳು ಈ ದೇಶದ ಶೋಷಿತ ಸಮುದಾಯಗಳನ್ನು ಮತ್ತಷ್ಟು ಶೋಷಣೆಗೊಳಪಡಿಸುವ ನಿಟ್ಟಿನಲ್ಲಿ ಸಾಗುತ್ತಿವೆ. ಹಿತವಲಯದಲ್ಲಿರುವ ಸುಶಿಕ್ಷಿತ-ಸುರಕ್ಷಿತ ವರ್ಗಗಳಿಗೂ ಇದರ ಬಿಸಿ ತಟ್ಟಲಿದೆ. ಆದರೆ ಆ ವೇಳೆಗೆ ಅರ್ಧದೇಹ ಸುಟ್ಟುಹೋಗಿರಬಹುದು. ಏನೇ ಆದರೂ ತಾವು ನಿಂತ ನೆಲೆ ಕುಸಿಯುತ್ತಿದೆ ಎಂದಾಗ ಮನುಕುಲ ಒಮ್ಮೆಲೆ ಚಿಮ್ಮಿ ಹೊರಬರುತ್ತದೆ. ಇದು ಇತಿಹಾಸ ನಿರೂಪಿಸಿರುವ ಸತ್ಯ. ಈ ಸಂದರ್ಭದಲ್ಲೇ ಭಾರತದ ಶೋಷಿತ ಸಮುದಾಯಗಳು, ಅವಕಾಶವಂಚಿತರು, ದೌರ್ಜನ್ಯ ಮತ್ತು ತುಳಿತಕ್ಕೊಳಗಾದವರು ತಮ್ಮ ಭವಿಷ್ಯದ ಬಗ್ಗೆ ಗಂಭೀರವಾಗಿ ಯೋಚಿಸಬೇಕಿದೆ.

ಅರಣ್ಯ , ಜಲ ಮತ್ತು ಭೂಮಿಯ ಒಡಲಲ್ಲಿರುವ ಸಮಸ್ತ ನೈಸರ್ಗಿಕ ಸಂಪತ್ತು ಕಾರ್ಪೋರೇಟ್ ಮಾರುಕಟ್ಟೆಯ ವಶಕ್ಕೊಳಪಟ್ಟಾಗ ಅಸ್ಮಿತೆಗಳ ಲೋಕವೂ ಕುಸಿಯುತ್ತದೆ. ಏಕೆಂದರೆ ಹಣಕಾಸು ಬಂಡವಾಳ ಯುಗದಲ್ಲಿ ಶೋಷಕರು ಮತ್ತು ಶೋಷಿತರು ಎನ್ನುವ ಎರಡೇ ವರ್ಗಗಳು ಉಳಿಯುತ್ತವೆ. ಇಂದು ಪ್ರತಿರೋಧದ ದನಿಗಳನ್ನು ದಮನಿಸುವ ಕ್ರೌರ್ಯವನ್ನು ಸಮರ್ಥಿಸಲು ಸಾಕಷ್ಟು ದನಿಗಳು ಕೇಳಿಬರುತ್ತಿವೆ. ಏಕೆಂದರೆ ಈ ದನಿಗಳು ಅಸಮಾನತೆಯನ್ನೇ ಪೋಷಿಸುವ ಒಂದು ಕ್ರೂರ ವ್ಯವಸ್ಥೆಯ ಫಲಾನುಭವಿಗಳಾಗಿವೆ. ಈ ಫಲಾನುಭವಿಗಳು ಇರುವ ಹಿತವಲಯಗಳು ಹಂತಹಂತವಾಗಿ ಇದೇ ಕ್ರೌರ್ಯಕ್ಕೆ ಬಲಿಯಾಗುತ್ತವೆ.

ಶೋಷಿತರಲ್ಲಿ ಅಸ್ಮಿತೆಗಳ ಚೌಕಟ್ಟುಗಳಿರುತ್ತವೆ. ಆದರೆ ಶೋಷಕರಿಗೆ ಇರುವುದಿಲ್ಲ. ಪ್ರಭುತ್ವ ಮತ್ತು ಆಡಳಿತ ವ್ಯವಸ್ಥೆ ಈ ಶೋಷಕ ವರ್ಗದೊಡನೆ ಒಂದಾದಾಗ ಶೋಷಿತರ ದನಿಗಳು ಒಂದಾಗುತ್ತವೆ. ಭೂಮಿಯ ಪ್ರಶ್ನೆ ಈ ದನಿಗಳನ್ನು ಒಂದುಗೂಡಿಸುವ ನೆಲೆಯಾಗಿರುತ್ತದೆ. ನಾವು ಸಂವಿಧಾನವನ್ನು ಗ್ರಾಂಥಿಕವಾಗಿ ಮಾತ್ರ ಸಂರಕ್ಷಿಸುತ್ತಿದ್ದೇವೆ ಎನ್ನುವ ಪ್ರಜ್ಞೆ ನಮ್ಮಲ್ಲಿದ್ದರೆ, ಸಂವಿಧಾನದ ಮೌಲ್ಯಗಳನ್ನು ಸಂರಕ್ಷಿಸಲು ಸಾಧ್ಯ . ಪ್ರತಿರೋಧದ ದನಿಗಳೇ ಸಂವಿಧಾನ ವಿರೋಧಿ ಎನ್ನುವಂತಹ ಕಾಯ್ದೆ ಕಾನೂನುಗಳನ್ನು ನಮ್ಮ ಕಣ್ಣೆದುರಿನಲ್ಲೇ ಜಾರಿಗೊಳಿಸಲಾಗುತ್ತಿದೆ. ಈ ಕಾನೂನುಗಳ ವಿರುದ್ಧ ಹೋರಾಡುವುದೇ ಸಂವಿಧಾನ ರಕ್ಷಣೆಯ ಪ್ರಥಮ ಹೆಜ್ಜೆಯಾಗಬೇಕಿದೆ.

ಇದು ಎಡ-ಬಲದ ನಡುವಿನ ಸಂಘರ್ಷ ಮಾತ್ರವಲ್ಲ. ಶೋಷಕರು ಮತ್ತು ಶೋಷಿತರು, ಬಂಡವಾಳ ಮತ್ತು ಶ್ರಮ, ಬಂಡವಾಳಿಗ ಮತ್ತು ಶ್ರಮಿಕ, ಭೂಮಾಲೀಕ ಮತ್ತು ಭೂಹೀನ, ಮೇಲ್ಜಾತಿ ಮತ್ತು ದಲಿತರು, ಪುರುಷ ಪ್ರಧಾನ ವ್ಯವಸ್ಥೆ ಮತ್ತು ಮಹಿಳೆಯರು, ಶ್ರೀಮಂತರು ಮತ್ತು ಬಡಜನತೆ ಹೀಗೆ ಹಲವು ಆಯಾಮಗಳ ಸಂಘರ್ಷ. ಈ ಸಂಘರ್ಷ ತನ್ನ ತಾರ್ಕಿಕ ಅಂತ್ಯ ತಲುಪಬೇಕಾದರೆ ನಾವು ನಮ್ಮ ಹೋರಾಟದ ನೆಲೆಗಳಲ್ಲಿ ಸ್ಪಷ್ಟತೆಯನ್ನು ಕಂಡುಕೊಳ್ಳಬೇಕು. ಜಾತಿ, ಮತ ಮತ್ತು ಸಮುದಾಯಗಳ ಅಸ್ಮಿತೆಗಳಿಂದಾಚೆಗೆ ಯೋಚಿಸಬೇಕು.

ಅಲ್ಲಿ ನಮಗೆ ಅಂಬೇಡ್ಕರ್ ಮತ್ತು ಮಾಕ್ರ್ಸ್ ಒಂದೇ ನೆಲೆಯಲ್ಲಿ ಕಾಣಲು ಸಾಧ್ಯ. ನವ ಉದಾರವಾದ ಮತ್ತು ಬಲಪಂಥೀಯ ರಾಜಕಾರಣ ನಮಗೆ ಈ ಅವಕಾಶವನ್ನು ಕಲ್ಪಿಸಿದೆ. ಎಲ್ಲವನ್ನೂ ಕಳೆದುಕೊಳ್ಳುವ ಮುನ್ನ ಜಾಗೃತರಾಗಬೇಕಿದೆ. ಭಾರತದ ಸಂವಿಧಾನವನ್ನು ಬದಲಿಸದೆಯೇ ಸಂವಿಧಾನದ ಮೂಲ ಆಶಯಗಳನ್ನು ಕೈಬಿಟ್ಟು ದೇಶದ ಸಾರ್ವಭೌಮ ಪ್ರಜೆಗಳ ಎಲ್ಲ ಹಕ್ಕುಗಳನ್ನೂ ಕಸಿದುಕೊಳ್ಳಲಾಗುತ್ತಿದೆ.

ರೈತಾಪಿಯ ಪರ ದನಿ ಎತ್ತುವ, ಕಾರ್ಮಿಕರೊಡನೆ ದನಿಗೂಡಿಸುವ, ಶೋಷಿತರ ದನಿಗಳಿಗೆ ಒತ್ತಾಸೆಯಾಗಿ ನಿಲ್ಲುವ ಪ್ರತಿರೋಧದ ದನಿಗಳೆಲ್ಲವೂ ಮುಂಬರುವ ದಿನಗಳಲ್ಲಿ ನಗರ ನಕ್ಸಲರ ಅಥವಾ ಭಯೋತ್ಪಾದಕರ ದನಿಗಳಂತೆ ಕಾಣುತ್ತವೆ. ಕೊರೋನಾ ಸೋಂಕು ನಮಗೆ ತಗಲುವುದಿಲ್ಲ ಎಂಬ ಭಂಡ ಧೈರ್ಯ ಇದ್ದವರು ನಂತರ ಸೋಂಕಿಗೆ ಒಳಗಾದಂತೆ ಇಂದಿನ ವಂದಿಮಾಗಧರು, ಭಟ್ಟಂಗಿಗಳು ನಾಳೆ ನಗರ ನಕ್ಸಲರಾಗಿಬಿಡುತ್ತಾರೆ. ಇದು ಪ್ರಭುತ್ವದ ಚಾಣಕ್ಯ ನೀತಿಯ ಫಲ.

ದೇಶಾದ್ಯಂತ ಭುಗಿಲೆದ್ದಿರುವ ಆಕ್ರೋಶದ ಜ್ವಾಲೆಗಳ ಒಂದೊಂದು ಕಿಡಿಯೂ ಈ ವಾಸ್ತವವನ್ನು ಬಿಂಬಿಸುತ್ತಿದೆ. ಈ ಕಿಡಿಗಳಲ್ಲಿರುವ ಸಂದೇಶವನ್ನು ಗ್ರಹಿಸುವುದು ನಮ್ಮ ಆದ್ಯತೆಯೂ ಹೌದು ಕರ್ತವ್ಯವೂ ಹೌದು. ಗ್ರಾಂಥಿಕವಾಗಿ ಸಂವಿಧಾನ ಸುರಕ್ಷಿತವಾಗಿದೆ. ಆದರೆ ಸ್ವತಃ ಅಂಬೇಡ್ಕರರೇ ಹೇಳಿರುವಂತೆ ಈ ಸಂವಿಧಾನದ ಮೂಲ ಆಶಯಗಳಿಗೆ ಚ್ಯುತಿ ಬರುವಂತಹ ಆಡಳಿತ ನೀತಿಗಳು ಜಾರಿಯಾಗುತ್ತಾ ಹೋದರೆ ಸಂವಿಧಾನ ತನ್ನ ಅರ್ಥವನ್ನೇ ಕಳೆದುಕೊಳ್ಳುತ್ತದೆ.

ಪ್ರಜಾತಂತ್ರ ವ್ಯವಸ್ಥೆಯಲ್ಲಿ ಪ್ರಜೆಗಳ ಸಾರ್ವಭೌಮತ್ವಕ್ಕೇ ಧಕ್ಕೆ ಉಂಟಾಗುವ ಸನ್ನಿವೇಶವನ್ನು ನಾವು ಎದುರಿಸುತ್ತಿದ್ದೇವೆ. ಈ ಸಂದರ್ಭದಲ್ಲಿ ನಾವು ಸಂವಿಧಾನದ ರಕ್ಷಣೆಗಾಗಿ ಗ್ರಾಂಥಿಕ ಪರಿಮಿತಿಯನ್ನು ಮೀರಿ ದೃಷ್ಟಿ ಹಾಯಿಸಬೇಕಿದೆ. ಇಲ್ಲವಾದರೆ ಇತಿಹಾಸದ ಪುಟಗಳಲ್ಲಿ ಶಾಶ್ವತ ಅಪರಾಧಿಗಳಾಗಿಯೇ ಉಳಿದುಬಿಡುತ್ತೇವೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ

ಸಂವಿಧಾನಕ್ಕೆ ಅಪಾಯವಾದರೆ, ಬಡವರ, ಶ್ರಮಿಕರ ಭವಿಷ್ಯಕ್ಕೆ ಅಪಾಯವಾದಂತೆ : ಸಿಎಂ ಸಿದ್ದರಾಮಯ್ಯ

Published

on

ಸುದ್ದಿದಿನ,ಮಡಿಕೇರಿ : ದೇಶದ ಸಂವಿಧಾನಕ್ಕೆ ಅಪಾಯವಾದರೆ ಈ ದೇಶದ ಮಹಿಳೆಯರ, ಬಡವರ, ಮಧ್ಯಮ ವರ್ಗದವರ, ಶ್ರಮಿಕರ, ಬದುಕು-ಭವಿಷ್ಯಕ್ಕೆ ಅಪಾಯ ಎಂದರ್ಥ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಮಡಿಕೇರಿಯಲ್ಲಿ ನಡೆದ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ಈ ಲೋಕಸಭಾ ಚುನಾವಣೆ ನಮಗೊಂದು ಅವಕಾಶ. ಈ ಬಾರಿ ಬಿಜೆಪಿಯನ್ನು ಸೋಲಿಸಿ ಕಾಂಗ್ರೆಸ್ ಗೆಲ್ಲಿಸುವ ಮೂಲಕ ಪ್ರಜಾತಂತ್ರ ಉಳಿಸಬೇಕು ಎಂದು ಕರೆ ನೀಡಿದರು.

ಬಳಿಕ ತುಮಕೂರಿನಲ್ಲಿ ಮಾತನಾಡಿದ ಅವರು, ರಾಜ್ಯದ ಹಿತಾಸಕ್ತಿ ಕಾಪಾಡುವಲ್ಲಿ ಕಳೆದ ಲೋಕಸಭಾ ಚುನಾವಣೆಯಲ್ಲಿ ಆಯ್ಕೆಯಾಗಿದ್ದ ಬಿಜೆಪಿ ಸಂಸದರು ವಿಫಲರಾಗಿದ್ದಾರೆ ಎಂದು ಮುಖ್ಯಮಂತ್ರಿ ಆರೋಪಿಸಿದರು.

ಮಹಿಳೆಯರ ಅಭ್ಯುದಯಕ್ಕಾಗಿ ಪಂಚ ಗ್ಯಾರಂಟಿ ಯೋಜನೆಗಳನ್ನು ನುಡಿದಂತೆ ಜಾರಿಗೆ ತಂದಿದ್ದೇವೆ. ಇದರಿಂದಾಗಿ ಮಹಿಳೆಯರ ಜೀವನದಲ್ಲಿ ಸುಧಾರಣೆ ಕಂಡಿದೆ, ಈ ಯೋಜನೆಯ ಫಲಾನುಭವಿಗಳ ಬಗ್ಗೆ ಟೀಕಿಸುವುದು ಸರಿಯಲ್ಲ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ದಾವಣಗೆರೆ | ದ್ವಿತೀಯ ಪಿ.ಯು.ಸಿ ಪರೀಕ್ಷೆ; ಜಿಲ್ಲೆಗೆ ಶೇ 80.96 ರಷ್ಟು ಫಲಿತಾಂಶ

Published

on

ಸುದ್ದಿದಿನ,ದಾವಣಗೆರೆ : 2024 ರ ಮಾರ್ಚ್‍ನಲ್ಲಿ ನಡೆದ ದ್ವಿತೀಯ ಪಿ.ಯು.ಸಿ. ಫಲಿತಾಂಶ ಪ್ರಕಟವಾಗಿದ್ದು ಜಿಲ್ಲೆಗೆ ಶೇ 80.96 ರಷ್ಟು ಫಲಿತಾಂಶ ಬಂದಿದ್ದು ಶೇ 74.27 ಗಂಡು, ಶೇ 82.01 ರಷ್ಟು ಹೆಣ್ಣು ಮಕ್ಕಳು ಉತ್ತೀರ್ಣರಾಗಿದ್ದಾರೆ ಎಂದು ಜಿಲ್ಲಾಧಿಕಾರಿ ಡಾ; ವೆಂಕಟೇಶ್ ಎಂ.ವಿ ತಿಳಿಸಿದರು.

ಅವರು ಬುಧವಾರ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಚುನಾವಣಾ ಸಂಬಂಧ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು. ಏಪ್ರಿಲ್ 10 ರಂದು ಫಲಿತಾಂಶ ಪ್ರಕಟವಾಗಿದ್ದು ಹೆಚ್ಚಿನ ವಿವರಗಳು ಬರಬೇಕಾಗಿದೆ. ಈ ವರ್ಷ ಜಿಲ್ಲೆಯಲ್ಲಿ ದ್ವಿತೀಯ ಪಿ.ಯು.ಸಿ ಪರೀಕ್ಷೆಯನ್ನು 19644 ರೆಗ್ಯುಲರ್, 422 ಖಾಸಗಿ ಸೇರಿ 20066 ವಿದ್ಯಾರ್ಥಿಗಳು ತೆಗೆದುಕೊಂಡಿದ್ದರು. ಇದರಲ್ಲಿ 15904 ವಿದ್ಯಾರ್ಥಿಗಳು ಉತ್ತೀರ್ಣರಾಗುವ ಮೂಲಕ ಶೇ 80.96 ರಷ್ಟು ಫಲಿತಾಂಶ ಪಡೆದಿದ್ದಾರೆ.

ಕಳೆದ ವರ್ಷ ಶೇ 75.72 ರಷ್ಟು ಫಲಿತಾಂಶ ಬಂದಿತ್ತು, ಈ ವರ್ಷ ಶೇ 5.24 ರಷ್ಟು ಫಲಿತಾಂಶ ಹೆಚ್ಚಳವಾಗಿದೆ. ಜಿಲ್ಲೆಗೆ ಟಾಪ್ ಬಂದವರಲ್ಲಿ ಕಲಾ ವಿಭಾಗದಲ್ಲಿ ಹರಿಹರದ ಶ್ರೀಮತಿ ಗಿರಿಯಮ್ಮ ಕಾಂತಪ್ಪ ಮಹಿಳಾ ಪದವಿ ಪೂರ್ವ ಕಾಲೇಜಿನ ಹೀನಬಾನು ಪಿ.ಕೆ. 591 ಅಂಕ ಪಡೆದು ಶೇ 98.5, ವಾಣಿಜ್ಯ; ದಾವಣಗೆರೆ ತಾ; ಗೋಪನಾಳು ಸರ್ಕಾರಿ ಪದವಿ ಪೂರ್ವ ಕಾಲೇಜಿನ ರೇಷ್ಮಾ ಬಾನು 589 ಅಂಕ ಪಡೆದು ಶೇ 98.16 ರಷ್ಟು ಫಲಿತಾಂಶ ಪಡೆದು ಜಿಲ್ಲೆಗೆ ಮೊದಲಿಗರಾಗಿದ್ದಾರೆ.

ವಿಜ್ಞಾನ ವಿಭಾಗದಲ್ಲಿ ಲೋಕಿಕೆರೆ ರಸ್ತೆಯಲ್ಲಿನ ಸರ್‍ಎಂವಿ ಸಂಯುಕ್ತ ಪದವಿ ಪೂರ್ವ ಕಾಲೇಜಿನ ಮೊಹಮ್ಮದ್ ಸುಹೇಲ್, ಅಮೃತ ದೊಡ್ಡ ಬಸಪ್ಪನವರ್, ಅನನ್ಯ ಹೆಚ್.ಎಸ್, ಆಕಾಶ್ ಸಿ.ಪಾಟೀಲ್ ಇವರು 593 ಅಂಕ ಶೇ 98.83 ರಷ್ಟು ಸಮನಾದ ಫಲಿತಾಂಶ ಹಂಚಿಕೊಂಡಿದ್ದಾರೆ ಎಂದರು.

ವಿಭಾಗವಾರು ಫಲಿತಾಂಶ; ಕಲಾ ವಿಭಾಗದಲ್ಲಿ ಶೇ 57.83 ರಷ್ಟು ಫಲಿತಾಂಶ ಬಂದಿದ್ದು ಇದರಲ್ಲಿ ಗಂಡು ಶೇ 45, ಹೆಣ್ಣು ಶೇ 66.46 ರಷ್ಟು ಉತ್ತೀರ್ಣರಾಗಿದ್ದಾರೆ. ವಾಣಿಜ್ಯ ವಿಭಾಗದಲ್ಲಿ ಶೇ 76.22 ರಷ್ಟು ಫಲಿತಾಂಶ ಬಂದಿದ್ದು ಗಂಡು ಶೇ 65.5, ಹೆಣ್ಣು ಶೇ 80.8, ವಿಜ್ಞಾನ ವಿಭಾಗದಲ್ಲಿ ಶೇ 91.13 ರಷ್ಟು ಫಲಿತಾಂಶ ಬಂದಿದ್ದು ಗಂಡು ಶೇ 91.39 ಹಾಗೂ ಹೆಣ್ಣು ಶೇ 88.69 ರಷ್ಟು ಫಲಿತಾಂಶ ಬಂದಿದೆ.

ನಗರಕ್ಕಿಂತ ಗ್ರಾಮೀಣರ ಮೇಲುಗೈ; ಫಲಿತಾಂಶದಲ್ಲಿ ನಗರ ಪ್ರದೇಶಕ್ಕಿಂತ ಗ್ರಾಮೀಣ ವಿದ್ಯಾರ್ಥಿಗಳು ಶೇ 1.1 ರಷ್ಟು ಮೇಲುಗೈ ಸಾಧಿಸಿದ್ದಾರೆ. ಗ್ರಾಮೀಣ ಪ್ರದೇಶದಲ್ಲಿ ಶೇ 73.65 ಗಂಡು, ಶೇ 84.6 ಹೆಣ್ಣು ಉತ್ತೀರ್ಣರಾದರೆ ನಗರ ಪ್ರದೇಶದ ಒಟ್ಟು ಫಲಿತಾಂಶ ಶೇ 80.75 ರಲ್ಲಿ ಗಂಡು ಶೇ 74.41, ಹೆಣ್ಣು ಶೇ 81.37 ರಷ್ಟು ಫಲಿತಾಂಶ ಪಡೆದಿದ್ದಾರೆ.

ಶೇ 100 ರಷ್ಟು ಫಲಿತಾಂಶ ಪಡೆದ ಶಾಲೆಗಳು; ದಾವಣಗೆರೆ ಅಂಜುಂ ಪದವಿ ಪೂರ್ವ ಕಾಲೇಜು, ಲೇಬರ್ ಕಾಲೋನಿ, ಜೈನ್ ಟ್ರಿನಿಟಿ ಪದವಿ ಪೂರ್ವ ಕಾಲೇಜು, ಅನ್‍ಮೋಲ್ ಪದವಿ ಪೂರ್ವ ಕಾಲೇಜು, ಶ್ರೀ ಗೀತಂ ಪದವಿ ಪೂರ್ವ ಕಾಲೇಜು, ದಾವಣಗೆರೆ ಇವು ಶೇ 100 ರಷ್ಟು ಫಲಿತಾಂಶ ಪಡೆದ ಕಾಲೇಜುಗಳಾಗಿವೆ.

ಈ ವೇಳೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸುರೇಶ್ ಬಿ.ಇಟ್ನಾಳ್, ಜಿಲ್ಲಾ ರಕ್ಷಣಾಧಿಕಾರಿ ಉಮಾ ಪ್ರಶಾಂರ್, ಶಾಲಾ ಶಿಕ್ಷಣ, ಪದವಿ ಪೂರ್ವ ಇಲಾಖೆ ಉಪನಿರ್ದೇಶಕ ಕರಿಸಿದ್ದಪ್ಪ ಉಪಸ್ಥಿತರಿದ್ದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಗ್ರಾಹಕರಿಂದ ಹೆಚ್ಚುವರಿಯಾಗಿ ಪೇಪರ್ ಬ್ಯಾಗ್‍ಗೆ ರೂ.10 ಪಡೆದ ಶಾಪಿಂಗ್ ಮಾಲ್‍ಗೆ ದಂಡ

Published

on

ಸಾಂದರ್ಭಿಕ ಚಿತ್ರ

ಸುದ್ದಿದಿನ ,ದಾವಣಗೆರೆ : ವಕೀಲ ವೃತ್ತಿಯಲ್ಲಿ ತೊಡಗಿಕೊಂಡಿರುವ ಆರ್. ಬಸವರಾಜ್ ಎಂಬುವವರು ದಾವಣಗೆರೆ ನಗರದ ಮ್ಯಾಕ್ಸ್ ರೀಟೈಲ್ ಅಂಗಡಿಯಲ್ಲಿ 2023 ರ ಅಕ್ಟೋಬರ್ 29 ರಂದು ರೂ.1,499 ಪಾವತಿಸಿ, ಡೆನಿವಾ ಪ್ಯಾಂಟ್ ಖರೀದಿಸಿದರು. ಈ ವೇಳೆಯಲ್ಲಿ ಇಲ್ಲಿಯೇ ಲೈಫ್ ಸ್ಟೈಲ್ ಇಂಟರ್‍ನ್ಯಾಷನಲ್ ವಾಣಿಜ್ಯ ಸಂಸ್ಥೆ ಪ್ಯಾಂಟ್ ಮಾರಾಟದ ವೇಳೆ ಹೆಚ್ಚುವರಿಯಾಗಿ ರೂ.10/- ಪೇಪರ್ ಬ್ಯಾಗ್‍ಗೆ ಪಡೆಯಲಾಯಿತು.

ಗ್ರಾಹಕರಾದ ಆರ್. ಬಸವರಾಜ್ ಇವರ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದಲ್ಲಿ ದೂರನ್ನು ದಾಖಲಿಸಿ ವಾಣಿಜ್ಯ ಸಂಸ್ಥೆ ವಿರುದ್ದ ರೂ.50,000 ಮಾನಸಿಕ ಕಿರುಕುಳ ಹಾಗೂ ದೂರು ದಾಖಲಿಸಲು ಖರ್ಚು ಮಾಡಿದ ಮೊ ರೂ.10,000 ಗಳನ್ನು ಪಾವತಿಸುವಂತೆ ದೂರನ್ನು ದಾಖಲಿಸಿದರು.

ವಾಣಿಜ್ಯ ಸಂಸ್ಥೆಗೆ ನೋಟಿಸ್ ಜಾರಿ ಮಾಡಿದ್ದು ಈ ಸಂಸ್ಥೆ ವಕೀಲರ ಮುಖಾಂತರ ಹಾಜರಾಗಿ ಬ್ಯಾಗ್‍ಗೆ ಹೆಚ್ಚುವರಿಯಾಗಿ ಪಡೆದ ಹಣಕ್ಕೆ ಸಮರ್ಥಿಸಿಕೊಂಡಿತ್ತು. ಆದರೆ ಗ್ರಾಹಕರ ಆಯೋಗ ಈ ಮೊದಲು ರಾಷ್ಟ್ರೀಯ ಗ್ರಾಹಕರ ಆಯೋಗ ಬಿಗ್ ಬಜಾರ್ ವಿರುದ್ಧ ಸಾಯಲ್ ದಾವ ಪ್ರಕರಣದ ನ್ಯಾಯ ನಿರ್ಣಯದ ತೀರ್ಪಿನ ಅನುಗುಣವಾಗಿ ವಾಣಿಜ್ಯ ಸಂಸ್ಥೆಗಳು ಕ್ಯಾರಿ ಬ್ಯಾಗ್‍ಗಳಿಗೆ ಹೆಚ್ಚಿನ ಹಣವನ್ನು ಪಡೆಯುವಂತಿಲ್ಲ ಎಂಬ ತೀರ್ಪನ್ನು ಉಲ್ಲೇಖಿಸಿ ಹೆಚ್ಚುವರಿಯಾಗಿ ರೂ.10 ಪಡೆದ ಸಂಸ್ಥೆಯ ಕ್ರಮವು ಗ್ರಾಹಕರ ಸಂರಕ್ಷಣಾ ಕಾಯ್ದೆಯ ಅಡಿಯಲ್ಲಿ ಅನುಚಿತ ವ್ಯಾಪಾರ ಪದ್ದತಿಯೆಂದು ಪರಿಗಣಿಸಿ ದಾವಣಗೆರೆ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷರಾದ ಮಹಂತೇಶ ಈರಪ್ಪ ಶಿಗ್ಲಿ, ಸದಸ್ಯರಾದ ತ್ಯಾಗರಾಜನ್ ಮತ್ತು ಮಹಿಳಾ ಸದಸ್ಯರಾದ ಶ್ರೀಮತಿ ಬಿ.ಯು. ಗೀತಾ ಇವರು ವಾಣಿಜ್ಯ ಸಂಸ್ಥೆಗೆ ರೂ.7000 ದಂಡವಿದಿಸಿ ಆದೇಶಿಸಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending