ದಿನದ ಸುದ್ದಿ
ಅರಣ್ಯ ಕಾಯ್ದೆ ತಿದ್ದುಪಡಿಗಳನ್ನು ಹಿಂತೆಗೆದುಕೊಳ್ಳಬೇಕು : ಅರಣ್ಯ ಮಂತ್ರಿಗಳಿಗೆ ಬೃಂದಾ ಕಾರಟ್ ಪತ್ರ
ಇದು ಕೇಂದ್ರೀಕರಣ, ವ್ಯಾಪಾರೀಕರಣ, ಖಾಸಗೀಕರಣ ಮತ್ತು ಅಪರಾಧೀಕರಣದ ನೀಲನಕ್ಷೆ
ಅರಣ್ಯ ಕಾಯ್ದೆ, 1927ಕ್ಕೆ ಸರಕಾರ ಸೂಚಿಸಿರುವ ಕರಡು ತಿದ್ದುಪಡಿಗಳನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಅವನ್ನು ಹಿಂತೆದುಕೊಳ್ಳಬೇಕು. ಅದರ ಬದಲಿಗೆ, ಈ ಕಾಯ್ದೆಯನ್ನು ಅರಣ್ಯ ಹಕ್ಕುಗಳ ಕಾಯ್ದೆ ಮತ್ತು ಬುಡಕಟ್ಟು ಸಮುದಾಯಗಳು ಎದುರಿಸುತ್ತಿರುವ ಚಾರಿತ್ರಿಕ ಅನ್ಯಾಯಗಳನ್ನು, ಈಗ ಒಂದೆಡೆಯಲ್ಲಿ ಅಭಿವೃದ್ಧಿಯ ಹೆಸರಲ್ಲಿ, ಮತ್ತೊಂದೆಡೆಯಲ್ಲಿ ಸಂರಕ್ಷಣೆಯ ಹೆಸರಲ್ಲಿ ಆಧುನಿಕ ಸ್ವರೂಪಗಳಲ್ಲಿ ಎಸಗುತ್ತಿರುವ ಅನ್ಯಾಯಗಳನ್ನು ಸರಿಪಡಿಸಲು ಯತ್ನಿಸಿರುವ ಇತರ ಕಾಯ್ದೆಗಳಿಗೆ ಸರಿಹೊಂದುವ ರೀತಿಯಲ್ಲಿ ತರುವುದೇ ಅರಣ್ಯ ಸಂರಕ್ಷಣೆಯ ಹಿತರಕ್ಷಣೆಯ ದೃಷ್ಟಿಯಿಂದ ಉತ್ತಮ ಎಂದು ಸಿಪಿಐ(ಎಂ) ಪೊಲಿಟ್ಬ್ಯುರೊ ಸದಸ್ಯರಾದ ಬೃಂದಾ ಕಾರಟ್ ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಮಂತ್ರಿ ಪ್ರಕಾಶ ಜಾವ್ಡೇಕರ್ ಅವರಿಗೆ ಜುಲೈ 9 ರಂದು ಬರೆದಿರುವ ಪತ್ರದಲ್ಲಿ ಆಗ್ರಹಿಸಿದ್ದಾರೆ.
ಈ ಮಂತ್ರಾಲಯ ಚರ್ಚೆಗೆ ಬಿಡುಗಡೆ ಮಾಡಿರುವುದು ಅರಣ್ಯ ಕಾಯ್ದೆ, 1927ಕ್ಕೆ ತಿದ್ದುಪಡಿಗಳ ಮೊದಲ ಕರಡನ್ನು ಮಾತ್ರವಾದರೂ, ಲೋಕಸಭೆಯಲ್ಲಿ ಜೂನ್ 28ರಂದು ಪ್ರಕಾಶ್ ಜಾವ್ಡೇಕರ್ ಈ ಕುರಿತು ಸಲ್ಲಿಸಿರುವ ಲಿಖಿತ ಹೇಳಿಕೆ ಬಹಳಷ್ಟು ದಾರಿ ತಪ್ಪಿಸುವಂತದ್ದು. “ನೀವು ತಿದ್ದುಪಡಿಗಳನ್ನು ಸಮರ್ಥಿಸಿ ಕೊಂಡಿದ್ದೀರಿ. ಈ ಕಾಯ್ದೆಯಲ್ಲಿರುವ ಅತ್ಯಂತ ದಮನಕಾರಿ ಕ್ರಮಗಳನ್ನು ಅಷ್ಟೇನೂ ಮುಖ್ಯವಲ್ಲ ಎಂದು ಬದಿಗೆ ಸರಿಸುವ ಪ್ರಯತ್ನ ಮಾಡಿದ್ದೀರಿ, ಅದರಲ್ಲೂ ಬುಡಕಟ್ಟು ಸಮುದಾಯಗಳ ಹಕ್ಕುಗಳನ್ನು ದಮನಮಾಡುತ್ತಿರುವುದನ್ನು ಉಪೇಕ್ಷಿಸಿದ್ದೀರಿ. ಆದ್ದರಿಂದ ಈ ತಿದ್ದುಪಡಿಗಳ ಬಗ್ಗೆ ಹೆಚ್ಚು ವಿವರವಾದ ವಿಮರ್ಶೆಯನ್ನು ತಮಗೆ ಕೊಡುವುದು ಅಗತ್ಯ ಎಂದು ನನಗನಿಸಿದೆ. ಇದು ಸಂಸತ್ತಿಗೆ ಒಂದು ಹೆಚ್ಚು ಸರಿಯಾದ ಚಿತ್ರವನ್ನು ಕೊಡಲು ನೆರವಾಗಬಹುದು” ಎಂದು ಈ ಪತ್ರವನ್ನು ಬರೆದಿರುವುದಕ್ಕೆ ಕಾರಣವನ್ನು ತಿಳಿಸುತ್ತ ಬೃಂದಾ ಕಾರಟ್ ಹೇಳಿದ್ದಾರೆ.
1927ರ ಅರಣ್ಯ ಕಾಯ್ದೆ ಬ್ರಿಟಿಶ್ ವಸಾಹತುಶಾಹಿಗಳಿಗೆ ಭಾರತದ ಅರಣ್ಯಗಳ ಮೇಲೆ ಅವರ ಸರಕಾರದ ಒಡೆತನವನ್ನು ಸ್ಥಾಪಿಸುವ ಒಂದು ಸಾಧನವಾಗಿತ್ತು. ಈ ಕಾಯ್ದೆಯ ಮೂಲಕ ಅವರು ಬುಡಕಟ್ಟು ಸಮುದಾಯಗಳು ಅತಿಕ್ರಮಣಕಾರರು ಎಂದು ಸಾರಿದರು. ಈ ಸಮುದಾಯಗಳ ವಿರುದ್ಧ ಚಾರಿತ್ರಿಕ ಅನ್ಯಾಯಗಳಿಗೆ ಈ ಮೂಲಕ ಕಾನೂನಿನ ಮಂಜೂರಾತಿಯನ್ನು ಪಡೆಯಲಾಯಿತು. ಈಗ ಸೂಚಿಸಿರುವ ತಿದ್ದುಪಡಿಗಳು, ಕೆಲವು ಸಂಪೂರ್ಣ ಹೊಸದಾದ ವಿಭಾಗಗಳನ್ನೂ ಹೊಂದಿದ್ದು, ಈ 91 ಅಂಶಗಳು ಅರಣ್ಯ ಸಂರಕ್ಷಣೆಯನ್ನು ಮಿಲಿಟರೀಕರಿಸಿ ಬ್ರಿಟಿಶರನ್ನೂ ಮೀರಿಸಿವೆ, ಅವರು ಧೈರ್ಯಸಾಲದೆ ಮಾಡದಿರುವುದನ್ನೂ ಮಾಡ ಹೊರಟಿದೆ.
ಈ ತಿದ್ದುಪಡಿಗಳು ಬುಡಕಟ್ಟು ಬದುಕಿನ ಪ್ರತಿಯೊಂದು ಆಯಾಮವನ್ನೂ ಅಪರಾಧೀಕರಿಸಿವೆ, ಅರಣ್ಯ ಅಧಿಕಾರಶಾಹಿಗೆ ವಾರಂಟ್ ನೀಡದೆಯೇ ಬಂಧಿಸುವ, ಕಾನೂನು ಜಾರಿಗೊಳಿಸಲು ಶಸ್ತ್ರಾಸ್ತ್ರಗಳ ಬಳಕೆಗೂ ಲಂಗುಲಗಾಮಿಲ್ಲದ ಅಧಿಕಾರಗಳನ್ನು ಕೊಟ್ಟಿದೆ. ಪ್ರಸ್ತಾವಿತ ರಾಷ್ಟ್ರೀಯ ಅರಣ್ಯ ಮಂಡಳಿಯಲ್ಲಿ ಸೇನಾಪಡೆಗಳ ಮುಖ್ಯಸ್ಥರನ್ನು ಒಬ್ಬ ಸದಸ್ಯರಾಗಿ ಸೂಚಿಸಿರುವುದು ಈ ದಮನಕಾರೀ ನಿಲುವಿನ ಸಂಕೇತವಾಗಿದೆ. ಬಹುಶಃ ಭಾರತದ ಸೇನಾಧಿಪತಿಗಳು ಈಗ ದೇಶದ ಗಡಿಗಳ ಬದಲು ಅರಣ್ಯಗಳನ್ನು ರಕ್ಷಿಸುವುದು ಹೇಗೆ ಎಂಬ ಚರ್ಚೆಗೆ ಸಮಯ ಕೊಡಬೇಕಾಗಿದೆ ಎಂದು ಈ ಬಗ್ಗೆ ಬರೆಯುತ್ತ ಬೃಂದಾ ಅವರು ಗೇಲಿ ಮಾಡಿದ್ದಾರೆ.
ಇನ್ನೊಂದೆಡೆಯಲ್ಲಿ, ಅರಣ್ಯಗಳ ನಿರ್ವಹಣೆಗೆ, ಸಂರಕ್ಷಣೆಗೆ, ಕಾಯ್ದುಕೊಳ್ಳಲಿಕ್ಕೆ ಮತ್ತು ಬುಡಕಟ್ಟು ಹಕ್ಕುಗಳಿಗೆ ಎಷ್ಟೊಂದು ಅನಿವಾರ್ಯವಾದ ಗ್ರಾಮಸಭೆಗಳ, ಅದರಲ್ಲೂ ಬುಡಕಟ್ಟು ಪ್ರದೇಶಗಳಲ್ಲಿನ ಗ್ರಾಮಸಭೆಗಳ ಪಾತ್ರವನ್ನು ಅಳಿಸಿ ಬಿಡಲಾಗಿದೆ ಎಂಬುದನ್ನು ಎತ್ತಿ ತೋರುತ್ತ ಬೃಂದಾ ಕಾರಟ್ ಈ ತಿದ್ದುಪಡಿಗಳು ಕೇಂದ್ರೀಕರಣ, ವ್ಯಾಪಾರೀಕರಣ ಮತ್ತು ಅಪರಾಧೀಕರಣದ ಒಂದು ನೀಲನಕ್ಷೆ ಎಂದು ಟೀಕಿಸಿದ್ದಾರೆ. ಅರಣ್ಯ ಸಂರಕ್ಷಣೆ ಈ ತಿದ್ದುಪಡಿಗಳ ಘೋಷಿತ ಗುರಿ.
ಆದರೆ ಇವು ಆ ಗುರಿಸಾಧನೆಗೆ ನೆರವಾಗುವುದಿಲ್ಲ. ತದ್ವಿರುದ್ಧವಾಗಿ, ಇವು ಅರಣ್ಯ ಹಕ್ಕುಗಳ ಕಾಯ್ದೆಯಲ್ಲಿ, 2006ರಲ್ಲಿ ತಿದ್ದುಪಡಿಗೊಂಡ ವನ್ಯ ಪ್ರಾಣಿಗಳ ರಕ್ಷಣಾ ಕಾಯ್ದೆಯಲ್ಲಿ, ಪರಿಶಿಷ್ಟ ಪ್ರದೇಶಗಳಿಗೆ ಪಂಚಾಯತ್ ವಿಸ್ತರಣೆ ಕಾಯ್ದೆ(ಪಿಎಇಎಸ್ಎಎ), ಭೂಸ್ವಾಧೀನ ಮತ್ತು ಮರುವಸತಿ ಕಾಯ್ದೆ,2013ರಲ್ಲಿ ಮಾತ್ರವಲ್ಲ, ಸಂವಿಧಾನದ ಶೆಡ್ಯೂಲ್ 5 ಮತ್ತು 6ರಲ್ಲಿ ಮಾನ್ಯ ಮಾಡಿರುವ ಬುಡಕಟ್ಟುಗಳು ಮತ್ತು ಇತರ ಪಾರಂಪರಿಕ ಅರಣ್ಯವಾಸಿಗಳ ಈಗಿರುವ ಹಕ್ಕುಗಳನ್ನು ಅಳಿಸಿ ಹಾಕುತ್ತವೆ.
ಮೇಲೆ ಹೇಳಿದಂತೆ, ಈ ತಿದ್ದುಪಡಿಗಳು ಹೇಗೆ ಕೇಂದ್ರೀಕರಣ, ವ್ಯಾಪಾರೀಕರಣ ಮತ್ತು ಅಪರಾಧೀಕರಣದ ನೀಲನಕ್ಷೆ ಎಂಬುದಕ್ಕೆ ವಿವರಗಳನ್ನೂ ಈ ಪತ್ರ ಒಳಗೊಂಡಿದೆ. ಇನ್ನೂ ಗಮನಾರ್ಹ ಸಂಗತಿಯೆಂದರೆ, ಬುಡಕಟ್ಟು ಜನಗಳ ಹಕ್ಕುಗಳ ಪ್ರಶ್ನೆ ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಇಲಾಖೆಯ ವ್ಯಾಪ್ತಿಗೆ ಬರುವುದಿಲ್ಲ ಎಂಬುದನ್ನು ಪ್ರಕಾಶ ಜಾವ್ಡೇಕರ್ ಅವರಿಗೆ ಬೃಂದಾ ಕಾರಟ್ ಈ ಪತ್ರದಲ್ಲಿ ನೆನಪಿಸಬೇಕಾಗಿ ಬಂದಿದೆ.
“ಆದ್ದರಿಂದ ಈ ತಿದ್ದುಪಡಿಗಳು, ಒಟ್ಟಿನಲ್ಲಿ, ಸಂವಿಧಾನಕ್ಕೆ, ಪ್ರಜಾಪ್ರಭುತ್ವಕ್ಕೆ ಮತ್ತು ನಿರ್ದಿಷ್ಟವಾಗಿ ಬುಡಕಟ್ಟು ಜನಗಳ ಹಕ್ಕುಗಳನ್ನು, ಒಟ್ಟಾರೆಯಾಗಿ ಪಾರಂಪರಿಕ ಅರಣ್ಯವಾಸಿಗಳ ಹಕ್ಕುಗಳನ್ನು ರಕ್ಷಿಸುವ ಕಾನೂನು ಚೌಕಟ್ಟಿಗೆ ವ್ಯತಿರಿಕ್ತವಾಗಿವೆ. ಅಲ್ಲದೆ, ಬುಡಕಟ್ಟು ಹಕ್ಕುಗಳು ತಮ್ಮ ಮಂತ್ರಾಲಯದ ಕಾರ್ಯವ್ಯಾಪ್ತಿಗೆ ಸೇರಿದ್ದಲ್ಲ, ಅವು ಬುಡಕಟ್ಟು ವ್ಯವಹಾರಗಳ ಮಂತ್ರಾಲಯದ ವ್ಯಾಪ್ತಿಗೆ ಸೇರಿದವುಗಳು. ಆದರೂ ಈ ತಿದ್ದುಪಡಿಗಳ ಮೂಲಕ ತಮ್ಮ ಮಂತ್ರಾಲಯ ಬುಡಕಟ್ಟು ಹಕ್ಕುಗಳಿಗೆ ಸಂಬಂಧಪಟ್ಟ ಎಲ್ಲ ಶಾಸನಗಳನ್ನು ಮೀರಿ ನಿಲ್ಲಲು, ಅವನ್ನೆಲ್ಲ ಈ ಪ್ರಸ್ತಾವಿತ ಕಾಯ್ದೆಗೆ ಅಧೀನಗೊಳಿಸಲು ಪ್ರಯತ್ನಿಸುತ್ತಿದೆ. ಇದು ಯಾವುದೇ ರೀತಿಯಲ್ಲಿ ಒಪ್ಪತಕ್ಕಂತದ್ದಲ್ಲ” ಎಂದು ಬೃಂದಾ ಕಾರಟ್ ಪ್ರಕಾಶ ಜಾವ್ಡೇಕರ್ ಅವರಿಗೆ ಬರೆದ ಪತ್ರದಲ್ಲಿ ಸ್ಪಷ್ಟವಾಗಿ ಹೇಳಿದ್ದಾರೆ.
( ಈ ವಾರದ ಜನಶಕ್ತಿ ಪತ್ರಿಕೆಯಲ್ಲಿ ಪ್ರಕಟವಾದ ಲೇಖನ)
ಸುದ್ದಿದಿನ.ಕಾಂ|ವಾಟ್ಸಾಪ್|9980346243
ದಿನದ ಸುದ್ದಿ
ಇಂದಿನಿಂದ ಏ.3 ರವರೆಗೆ ಸೂಳೆಕೆರೆಗೆ ನೀರು ಬಿಡುಗಡೆ
ಸುದ್ದಿದಿನ,ದಾವಣಗೆರೆ: ಭದ್ರಾ ಜಲಾಶಯ ಯೋಜನೆ ವ್ಯಾಪ್ತಿಗೆ ಬರುವ ದೇವರಬೆಳಕೆರೆ ಪಿಕ್ಅಪ್ ಅಣೆಕಟ್ಟಿನ ಸ್ಕವರಿಂಗ್ ಸ್ಪೂಯೀಸ್ ಗೇಟ್ ಮುಖಾಂತರ ಜಲಾಶಯದ ಡೆಡ್ ಸ್ಟೋರೇಜ್ ನೀರನ್ನು ಸೂಳೆಕೆರೆ ಹಳ್ಳಕ್ಕೆ ಮಾರ್ಚ್ 28 ರಿಂದ ಏಪ್ರಿಲ್ 3 ರವರೆಗೆ ಪ್ರತಿದಿನ 20 ಕ್ಯೂಸೆಕ್ಸ್ಗಳಲ್ಲಿ ಜನ-ಜಾನುವಾರು ಪಕ್ಷಿಗಳಿಗೆ ಕುಡಿಯುವ ನೀರು ಒದಗಿಸಲು ಹಾಗೂ ಅಕ್ಕಪಕ್ಕದ ಗ್ರಾಮಗಳ ಕುಡಿಯುವ ನೀರಿನ ಉದ್ದೇಶಕ್ಕೆ ಬಿಡಲಾಗುತ್ತಿದೆ.
ಈ ವೇಳೆ ಹಳ್ಳಕ್ಕೆ ದನ ಕರಗಳನ್ನು ಇಳಿಸುವುದಾಗಲಿ, ಪಂಪ್ಸೆಟ್ಗಳಿಂದ ನೀರೆತ್ತುವುದುನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ ಎಂದು ಕನೀನಿನಿ ಕಾರ್ಯಪಾಲಕ ಇಂಜಿನಿಯರ್ ತಿಳಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243
ದಿನದ ಸುದ್ದಿ
ಲೋಕಸಭಾ ಚುನಾವಣೆಯ ಮೊದಲ ಹಂತಕ್ಕೆ ನಾಮಪತ್ರ ಸಲ್ಲಿಕೆಗೆ ಇಂದು ಕೊನೆಯ ದಿನ
ಸುದ್ದಿದಿನ ಡೆಸ್ಕ್ : ಲೋಕಸಭಾ ಚುನಾವಣೆಯ ಮೊದಲ ಹಂತಕ್ಕೆ ನಾಮಪತ್ರ ಸಲ್ಲಿಸಲು ಇಂದು ಕೊನೆಯ ದಿನವಾಗಿದೆ.
ನಾಳೆ ನಾಮಪತ್ರಗಳ ಪರಿಶೀಲನೆ ನಡೆಯಲಿದ್ದು, ಇದೇ 30 ನಾಮಪತ್ರ ಹಿಂಪಡೆಯಲು ಕಡೆಯ ದಿನವಾಗಿದೆ. ಇದೇ ವೇಳೆ ಬಿಹಾರದಲ್ಲಿ ನಾಮಪತ್ರ ಸಲ್ಲಿಕೆಗೆ ನಾಳೆ ಕಡೆ ದಿನವಾಗಿದ್ದು, ಈ ತಿಂಗಳ 30 ರಂದು ನಾಮಪತ್ರಗಳ ಪರಿಶೀಲನೆ ಹಾಗೂ ಏಪ್ರಿಲ್ 2ರಂದು ನಾಮತ್ರ ಹಿಂಪಡೆಯುವಿಕೆಗೆ ಕೊನೆಯ ದಿನವಾಗಿರುತ್ತದೆ.
ಏಪ್ರಿಲ್ 19 ರಂದು 17 ರಾಜ್ಯಗಳು ಮತ್ತು ನಾಲ್ಕು ಕೇಂದ್ರಾಡಳಿತ ಪ್ರದೇಶಗಳಲ್ಲಿನ 102ಲೋಕಸಭಾ ಕ್ಷೇತ್ರಗಳಿಗೆ ಮೊದಲ ಹಂತದಲ್ಲಿ ಚುನಾವಣೆ ನಡೆಯಲಿದೆ. ಅದರಂತೆ ತಮಿಳುನಾಡಿನಲ್ಲಿ 39, ರಾಜಸ್ಥಾನದಲ್ಲಿ 12, ಉತ್ತರ ಪ್ರದೇಶದಲ್ಲಿ 8, ಮಧ್ಯಪ್ರದೇಶದಲ್ಲಿ 6, ಉತ್ತರಾಖಂಡ, ಅಸ್ಸಾಂ ಮತ್ತು ಮಹಾರಾಷ್ಟ್ರದಲ್ಲಿ ತಲಾ 5 , ಬಿಹಾರದಲ್ಲಿ 4, ಪಶ್ಚಿಮ ಬಂಗಾಳದಲ್ಲಿ 3, ಅರುಣಾಚಲ ಪ್ರದೇಶ, ಮಣಿಪುರ, ಮೆಘಾಲಯದಲ್ಲಿ ತಲಾ 2 ಮತ್ತು ಛತ್ತೀಸ್ಗಢ, ಮಿಜೋರಾಂ, ನಾಗಾಲ್ಯಾಂಡ್, ಸಿಕ್ಕಿಂ, ತ್ರಿಪುರ, ಅಂಡಮಾನ್-ನಿಕೋಬಾರ್ ದ್ವೀಪಗಳು, ಜಮ್ಮು-ಕಾಶ್ಮೀರ, ಲಕ್ಷದ್ವೀಪ ಮತ್ತು ಪುದುಚೇರಿಯಲ್ಲಿ ತಲಾ ಒಂದು ಕ್ಷೇತ್ರದಲ್ಲಿ ಮೊದಲ ಹಂತದಲ್ಲಿ ಚುನಾವಣೆ ನಡೆಯಲಿದೆ.
ಎರಡನೇ ಹಂತದಲ್ಲಿ 89 ಲೋಕಸಭಾ ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದ್ದು, ಚುನಾವಣಾ ಆಯೋಗ ನಾಳೆ ಅಧಿಸೂಚನೆ ಹೊರಡಿಸಲಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243
ದಿನದ ಸುದ್ದಿ
ಚುನಾವಣಾ ಅಕ್ರಮ ; ಸಾರ್ವಜನಿಕರು ದೂರು ಸಲ್ಲಿಸಲು ಆಯೋಗದಿಂದ ಸಿ-ವಿಜಿಲ್ ಆಪ್ ಅಭಿವೃದ್ಧಿ
ಸುದ್ದಿದಿನ ಡೆಸ್ಕ್ : 18ನೇ ಲೋಕಸಭೆಗೆ ಸದಸ್ಯರನ್ನು ಆಯ್ಕೆ ಮಾಡಲು ನಡೆಯಲಿರುವ ಸಾರ್ವತ್ರಿಕ ಚುನಾವಣೆಗೆ ಭಾರತ ಚುನಾವಣಾ ಆಯೋಗ, ಸಕಲ ಸಿದ್ಧತೆಯೊಂದಿಗೆ ಸಜ್ಜಾಗಿದೆ.
ದೇಶದಲ್ಲಿ ಚುನಾವಣೆಗಳನ್ನು ಪಾರದರ್ಶಕವಾಗಿ ಹಾಗೂ ಅತ್ಯಂತ ವಿಶ್ವಾಸಾರ್ಹ ರೀತಿಯಲ್ಲಿ ನಡೆಸುವ ಸಂಕಲ್ಪದೊಂದಿಗೆ ಚುನಾವಣಾ ಆಯೋಗ, ಸಮಸ್ತ ಚುನಾವಣಾ ಪ್ರಕ್ರಿಯೆಗಳನ್ನು ಸುಗಮಗೊಳಿಸಲು ತಂತ್ರಜ್ಞಾನದ ನೆರವನ್ನು ಬಳಸಿಕೊಳ್ಳುತ್ತಿದೆ. ಈ ನಿಟ್ಟಿನಲ್ಲಿ ಮತದಾರರು, ಚುನಾವಣಾ ಸಿಬ್ಬಂದಿ ಹಾಗೂ ಆಯೋಗಕ್ಕೆ ನೆರವಾಗುವ ಹಲವು ಆಪ್ಗಳನ್ನು ಚುನಾವಣಾ ಆಯೋಗ ಅಭಿವೃದ್ಧಿಪಡಿಸಿದೆ.
ಈ ಪೈಕಿ ಇಂದು ಸಿ-ವಿಜಿಲ್ ಆಪ್ ಬಗ್ಗೆ ಮಾಹಿತಿ.
ದೇಶದಲ್ಲಿ ಚುನಾವಣೆಗಳ ವೇಳೆ ನಡೆಯುವ ಅಕ್ರಮಗಳು, ಮಾದರಿ ನೀತಿ ಸಂಹಿತೆಯ ಉಲ್ಲಂಘನೆ ಪ್ರಕರಣಗಳ ಮೇಲೆ ಕಣ್ಣಿಡುವುದು ಕೇವಲ ಚುನಾವಣಾ ಸಿಬ್ಬಂದಿಯ ಕೆಲಸವಲ್ಲ. ಇದು ಪ್ರತಿಯೊಬ್ಬ ನಾಗರಿಕನ ಕರ್ತವ್ಯವೂ ಹೌದು. ಹಾಗಾಗಿ ಚುನಾವಣಾ ಅಕ್ರಮಗಳ ಬಗ್ಗೆ ಸಾರ್ವಜನಿಕರು ಆಯೋಗಕ್ಕೆ ದೂರು ತಲುಪಿಸಲು ಭಾರತ ಚುನಾವಣಾ ಆಯೋಗ ಸಿ-ವಿಜಿಲ್ ಆಪ್ ಅನ್ನು ಅಭಿವೃದ್ಧಿ ಪಡಿಸಿದೆ.
ದೂರುಗಳನ್ನು ಆನ್ಲೈನ್ ಮೂಲಕ ಆಯೋಗಕ್ಕೆ ರವಾನಿಸಲು ಈ ಆಪ್ ನೆರವಾಗುವುದು. ಯಾವುದೇ ಚುನಾವಣಾ ಅಕ್ರಮಗಳ ಬಗ್ಗೆ ಧ್ವನಿಮುದ್ರಣ, ವಿಡಿಯೋ ಚಿತ್ರದ ತುಣುಕುಗಳು ಮತ್ತು ಫೋಟೊ ಮೊದಲಾದ ದಾಖಲೆಗಳನ್ನು ಸಾರ್ವಜನಿಕರು ಇದರ ಮೂಲಕ ಕಳುಹಿಸಬಹುದು.
ಚುನಾವಣೆಗಳಲ್ಲಿ ರಾಜಕೀಯ ಪಕ್ಷಗಳು, ಅಭ್ಯರ್ಥಿಗಳು ಮಾಡುವ ಖರ್ಚು-ವೆಚ್ಚ, ಮತದಾರರ ಮನವೊಲಿಕೆಗೆ ಆಮಿಷಗಳ ಬಳಕೆ ಮೊದಲಾದ ಅಕ್ರಮಗಳ ಬಗ್ಗೆ ದೂರು ನೀಡಲು ಇದನ್ನು ಬಳಸಬಹುದು. ಒಂದುನೂರು ನಿಮಿಷಗಳಲ್ಲಿ ಚುನಾವಣಾಧಿಕಾರಿಗಳು ಅಗತ್ಯ ಕ್ರಮ ಕೈಗೊಳ್ಳುತ್ತಾರೆ ಎಂದು ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಹೇಳಿದ್ದಾರೆ.
ದೇಶದ ಯಾವ ಮೂಲೆಯಲ್ಲೇ ಆಗಲಿ ನಡೆಯುವ ಚುನಾವಣಾ ಅಕ್ರಮ ಅಥವಾ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣಗಳ ಬಗ್ಗೆ ತಾವು ನೀಡಿದ ದೂರುಗಳನ್ನು ಆಯೋಗ ಪರಿಗಣಿಸಿದೆಯೇ ಎನ್ನುವ ವಿವರಗಳನ್ನು ಸಹ ಸಾರ್ವಜನಿಕರು ಸಿ-ವಿಜಿಲ್-ಆಪ್ ಮೂಲಕ ವೀಕ್ಷಿಸಬಹುದು.
ಸುದ್ದಿದಿನ.ಕಾಂ|ವಾಟ್ಸಾಪ್|9980346243
-
ದಿನದ ಸುದ್ದಿ6 days ago
ಲೋಕಸಭಾ ಚುನಾವಣೆ : ಚುನಾವಣಾ ಚಟುವಟಿಕೆಗಳ ಕುರಿತ ಜಿಲ್ಲಾವಾರು ಮಾಹಿತಿ
-
ದಿನದ ಸುದ್ದಿ6 days ago
ಬೆಂಗಳೂರಿನಲ್ಲಿ ಬಿಜೆಪಿ ನೂತನ ಮಾಧ್ಯಮಕೇಂದ್ರ ಆರಂಭ
-
ದಿನದ ಸುದ್ದಿ6 days ago
ಲೋಕಸಭಾ ಚುನಾವಣೆ | ಹೊಸ ಮತದಾರರೆಷ್ಟು ಗೊತ್ತಾ..?
-
ದಿನದ ಸುದ್ದಿ6 days ago
ವಿಜಯಪುರ ಜಿಲ್ಲಾ ಸಾಹಿತ್ಯ ಸಮ್ಮೇಳನದ ಕವಿಗೋಷ್ಠಿಗೆ ಮೈಬೂಬಸಾಹೇಬ.ವೈ.ಜೆ ಆಯ್ಕೆ
-
ದಿನದ ಸುದ್ದಿ5 days ago
ಕವಿತೆ | ನೆನಪು
-
ದಿನದ ಸುದ್ದಿ3 days ago
ಚುನಾವಣಾ ಅಕ್ರಮ ; ಸಾರ್ವಜನಿಕರು ದೂರು ಸಲ್ಲಿಸಲು ಆಯೋಗದಿಂದ ಸಿ-ವಿಜಿಲ್ ಆಪ್ ಅಭಿವೃದ್ಧಿ
-
ದಿನದ ಸುದ್ದಿ2 days ago
ಲೋಕಸಭಾ ಚುನಾವಣೆಯ ಮೊದಲ ಹಂತಕ್ಕೆ ನಾಮಪತ್ರ ಸಲ್ಲಿಕೆಗೆ ಇಂದು ಕೊನೆಯ ದಿನ
-
ದಿನದ ಸುದ್ದಿ1 day ago
ಇಂದಿನಿಂದ ಏ.3 ರವರೆಗೆ ಸೂಳೆಕೆರೆಗೆ ನೀರು ಬಿಡುಗಡೆ