Connect with us

ಅಂತರಂಗ

ಅರಿಮೆಯ ಅರಿವಿರಲಿ-58 : ಶಿಶುಪ್ರಧಾನ ಸಮಾಜ

Published

on

  • ಯೋಗೇಶ್ ಮಾಸ್ಟರ್

ಮಾನವ ಸಮಾಜವು ಪ್ರಾರಂಭವಾಗಿ ಬಹಳ ಕಾಲವಾಯಿತು. ಆಗಿನ ಸಮಸ್ಯೆಗಳಿಗೆ, ಸಂಘರ್ಷಗಳಿಗೆ ಮತ್ತು ವೈಫಲ್ಯಗಳಿಗೆ ಪ್ರಾರಂಭಿಕ ಹಂತಗಳಲ್ಲಿನ ಪ್ರಯೋಗಗಳು ಮತ್ತು ಅನುಭವಗಳಿಗೆ ಇದ್ದಂತಹ ಸಂಪನ್ಮೂಲಗಳ ಕೊರತೆ ಎಂದು ಮನ್ನಿಸಬಹುದು.

ಮಾನವ ಸಮಾಜ ಹೊಂದಿರುವ ಅನುಭವದ ಸುದೀರ್ಘ ಅವಧಿಯನ್ನು ಗಣನೆಗೆ ತೆಗೆದುಕೊಂಡರೆ ಈ ಹೊತ್ತಿಗೆ ಇಡೀ ಮಾನವ ಜಗತ್ತು ಆರೋಗ್ಯ, ಸೌಹಾರ್ದ ಮತ್ತು ಆನಂದದಿಂದ ಇರಬೇಕಿತ್ತು. ಕನಿಷ್ಟ ಪಕ್ಷ ಸಮಸ್ಯೆ, ಸಂಘರ್ಷ ಮತ್ತು ವೈಫಲ್ಯಗಳು ಕ್ಷೀಣಿಸಿಬೇಕಿತ್ತು. ಆದರೆ ಇಂದು ನಾವು ಬದುಕುತ್ತಿರುವ ಸಮಾಜದಲ್ಲಿ ಎಲ್ಲವೂ ಸರಿಯಾಗಿಲ್ಲ.

ಇನ್ನೂ ತನ್ನ ಒಟ್ಟಾರೆಯ ಬದುಕಿನಲ್ಲಿ ಸ್ಥಿರತೆ ಕಂಡಿಲ್ಲ. ಆರ್ಥಿಕ ಸಮಸ್ಯೆ, ಮೂಲಭೂತ ಸೌಕರ್ಯಗಳ ಕೊರತೆ, ನಾಗರಿಕ ದಂಗೆ, ಯುದ್ಧ, ಸಾಮಾಜಿಕ ಅಸಮಾನತೆ, ಧಾರ್ಮಿಕ ಸಂಘರ್ಷ, ಜನಾಂಗೀಯ ದ್ವೇಷ, ಸೈದ್ಧಾಂತಿಕ ಸಮರ, ಶ್ರೇಷ್ಟತೆಯ ಪೈಪೋಟಿ, ಮೌಢ್ಯಾಚರಣೆಗಳು, ಪರಿಸರ ನಾಶ, ಜೀವನಮಟ್ಟದ ವೈಫಲ್ಯ, ಸಂಬಂಧಗಳ ಗೊಂದಲ ಮತ್ತು ಇನ್ನೂ ಅನೇಕ ಮನುಷ್ಯ ಕೇಂದ್ರಿತ ಸಮಸ್ಯೆಗಳು ತಾಜಾ ಬೆಂಕಿಯಂತೆಯೇ ಉರಿಯುತ್ತಿವೆ.

ಹೌದು, ಬೆಂಕಿಯ ಜ್ವಾಲೆಗಳಲ್ಲಿ ಹೊಸತು ಹಳತುಗಳಿಲ್ಲ. ಸಮಸ್ಯೆ, ಸಂಘರ್ಷ ಮತ್ತು ವೈಫಲ್ಯಗಳ ಬೆಂಕಿಯಲ್ಲಿ ಬೇಯುತ್ತಿರುವ ಮನುಷ್ಯನು ಇಷ್ಟು ಸುಧೀರ್ಘಕಾಲ ಸಾಮಾಜಿಕ ಜೀವನ ನಡೆಸಿದರೂ ಎಡವಿರುವುದು ಎಲ್ಲಿ ಎಂದು ಪ್ರಶ್ನಿಸಿಕೊಳ್ಳಬೇಕಾಗಿದೆ. ಅವನಿಗಿರುವ ಸಾಮಾಜಿಕ ಅನುಭವ ಇನ್ನೂ ಸಾಲದೇ? ಒಬ್ಬ ವ್ಯಕ್ತಿ, ಒಂದು ಕುಟುಂಬ, ಒಂದು ಸಮಾಜ, ಒಂದು ರಾಷ್ಟ್ರ ಮತ್ತು ಇರುವುದೊಂದೇ ಭೂಮಿ; ಆರೋಗ್ಯವಾಗಿ ಆನಂದದಿಂದ ಇರಲು ಇನ್ನೂ ಸಂಪೂರ್ಣ ಸಾಧಿಸಲು ಸಾಧ್ಯವಿಲ್ಲದಿರುವುದು ಮನುಷ್ಯ ತನ್ನ ಆದ್ಯತೆಯನ್ನು ಗುರುತಿಸಿಕೊಂಡಿಲ್ಲದೇ ಇರುವುದು ಎಂದು ನನ್ನ ಅಭಿಪ್ರಾಯ.

ಮಾನವ ಸಮಾಜದ ಆದ್ಯತೆಯ ವಿಷಯಗಳ ಪಟ್ಟಿಯನ್ನು ಪುನರ್ಪರಿಶೀಲನೆ ಮಾಡಬೇಕಿದೆ. ಇದರಿಂದ ಈಗ ಮತ್ತು ನಾಳೆ, ನಾವು ಹಾಗೂ ಮುಂದಿನ ಪೀಳಿಗೆಗಳು, ಕನಿಷ್ಟ ಪಕ್ಷ ಮನುಷ್ಯ ಮಾಡುವ ದುರಂತಗಳಿಂದಾದರೂ ಬಿಡುಗಡೆಯನ್ನು ಪಡೆಯಬಹುದು.

ಮಕ್ಕಳ ಪೋಷಣೆ ಮತ್ತು ಶಿಕ್ಷಣವನ್ನು ಆದ್ಯತೆಯ ಪಟ್ಟಿಯಲ್ಲಿ ಯಾವ ಕ್ರಮದಲ್ಲಿ ಸೂಚಿತವಾಗಿವೆ ಎನ್ನುವುದರ ಮೇಲೆ ಮಾನವ ಸಮಾಜದ ವರ್ತಮಾನದ ಮತ್ತು ಭವಿಷ್ಯದ ಬದುಕು ನಿರ್ಧರಿತವಾಗಿದೆ. ನಿನ್ನೆಗಳ ಸಂಘರ್ಷಗಳು, ಸಮಸ್ಯೆಗಳು, ಸಂಕಷ್ಟಗಳು, ಸಂಕಟಗಳು ಪ್ರಮಾದಗಳಾಗಿ ಇಂದಿನ ಮಕ್ಕಳ ಮನಸ್ಸಿನ ಮೇಲೆ, ಭಾವನೆಗಳ ಮೇಲೆ, ಪೋಷಣೆಯ ಮೇಲೆ ಮತ್ತು ಶಿಕ್ಷಣದ ಮೇಲೆ ಪ್ರಭಾವ ಬೀರಿದರೆ ನಾಳಿನ ಸಮಾಜವು ಅಸ್ಥಿರತೆಯಲ್ಲಿಯೇ ಇರುತ್ತದೆ. ಹಳೆಯ ಎಲ್ಲಾ ಸಂಕಟಗಳು ಹೊಸ ರೂಪಗಳಲ್ಲಿ ಜೀವಂತವಾಗಿಯೇ ಇರುತ್ತದೆ.

ಮಕ್ಕಳ ಮನಸ್ಸನ್ನು ರಕ್ಷಿಸಿದರೆ ಸಾಕು
ಯಾರ ಮಗುತನವನ್ನು ಜತನ ಮಾಡುತ್ತೇವೆಯೋ ಆ ವ್ಯಕ್ತಿಯ ತನ್ನತನವು ನೈತಿಕವಾಗಿಯೂ ಮತ್ತು ಬೌದ್ಧಿಕವಾಗಿಯೂ ಬಲಿಷ್ಟವಾಗಿರಲು ಸಾಧ್ಯ. ಹಾಗಾಗಿ ಶಿಶುವನ್ನು ಉಪಚರಿಸುವ ರೀತಿಯಲ್ಲಿ, ಸಂಸ್ಕರಿಸುವ ವಿಧಾನದಲ್ಲಿ ಮತ್ತು ಶಿಕ್ಷಣ ಕೊಡುವ ವಿಧಾನಗಳಲ್ಲಿ ಶಿಸ್ತು, ಸಂಯಮ ಮತ್ತು ಕ್ರಮವಂತೂ ಅಗತ್ಯವಾಗಿ ಬೇಕು.

ಒಂದು ದೊಡ್ಡದಾದ ಮರವು ತನ್ನ ಭೂತ ಕಾಲದಲ್ಲಿ ಸಣ್ಣ ಬೀಜವೇ ಆಗಿರುತ್ತದೆ. ಪ್ರಕೃತಿಯ ತೆಕ್ಕೆಯಲ್ಲಿರುವ ಮರವಾದರೂ ಒಮ್ಮೊಮ್ಮೆ ಯಾವ ವಿಶೇಷ ಉಪಚಾರ ಮತ್ತು ಸಂಸ್ಕರಣಗಳಿಲ್ಲದೇ ತನ್ನ ನೈಸರ್ಗಿಕ ಪ್ರಭಾವಕ್ಕೇ ತೆರೆದುಕೊಂಡು ವೃಕ್ಷವಾಗುವ ತನ್ನ ಸಾರ್ಥಕತೆಯನ್ನು ಕಂಡುಕೊಳ್ಳಬಹುದು. ಮನುಷ್ಯನ ಸಮಾಜದಲ್ಲಿ ಎಳೆಯ ಸದಸ್ಯನಾಗಿರುವ ಮಗುವಿನ ವಿಚಾರದಲ್ಲಿ ಹಾಗಾಗುವುದಿಲ್ಲ.

ಮಗುವನ್ನು ಅದರ ನೈಸರ್ಗಿಕ ಗುಣಗಳಿಂದ ಬಿಡಿಸಿ ಸಾಮಾಜಿಕ ಪ್ರಾಣಿಯನ್ನಾಗಿಸುವ ತರಬೇತಿಯನ್ನು ಸಮಾಜದ ಹಿರಿಯ ಸದಸ್ಯರು ಕೊಡುತ್ತಾರೆ. ಈ ಮಗುವನ್ನು ಸ್ವತಂತ್ರ ಜೀವನಕ್ಕೆ ಸಜ್ಜುಗೊಳಿಸುವ, ಸಾಮಾಜಿಕ ಜೀವನಕ್ಕೆ ಒಗ್ಗಿಸುವ ಪ್ರಕ್ರಿಯೆಯಲ್ಲಿ ಬಲವನ್ನೂ, ಒಲವನ್ನೂ ಮತ್ತು ನಲಿವನ್ನೂ ರೂಢಿಸಬೇಕು. ಅದು ಹೊಣೆಗಾರಿಕೆಯೂ ಹೌದು ಮತ್ತು ಸವಾಲಿನದೂ ಹೌದು.

ಮಗುತನದ ಬಹುಮುಖ್ಯ ಗುಣಗಳೆಂದರೆ ಅದು ಎಳೆಯದಾಗಿ ಮೆದುವಾಗಿರುವುದು, ಗ್ರಹಿಸುವ ಸಾಮರ್ಥ್ಯದಲ್ಲಿ ಶಕ್ತಿಯಾಗಿರುವುದು ಮತ್ತು ಸ್ವೀಕರಿಸಿದ್ದನ್ನು ಹೆಚ್ಚಿಸುವ, ವಿಕಸಿಸುವ ಹಾಗೂ ಮರುಸೃಷ್ಟಿಸುವ ಫಲವತ್ತಿಕೆಯನ್ನು ಹೊಂದಿರುವುದು. ಆದ್ದರಿಂದ ಈ ಮಗುತನವನ್ನು ಬಹಳ ನೇಮ ನಿಷ್ಟೆಯಿಂದ ಜತನ ಮಾಡಬೇಕಾಗಿರುವುದು.

ಇಂತಹ ಮೆದುತನದ ಮತ್ತು ಫಲವಂತಿಕೆಯ ಮಗುತನವು ಯಾವುದ್ಯಾವುದೋ ಆಕ್ರಮಣಗಳಿಗೆ ಸಿಕ್ಕು ನಾಶವಾಗದಿರಲು ಪ್ರತಿಯೊಬ್ಬ ಹಿರಿಯನೂ, ಅಂದರೆ ಸಮಾಜದ ಹಿರಿಯ ಸದಸ್ಯನು ಕಿರಿಯ ಸದಸ್ಯನಿಗೆ ಕವಚವಾಗಿ ತನ್ನ ಹೊಣೆಗಾರಿಕೆಯನ್ನು ನಿರ್ವಹಿಸಬೇಕು. ಸಂರಕ್ಷಿಸಲ್ಪಟ್ಟ ಶಿಶುತನದ ಸಸಿಯು ನಾಳೆ ಸಶಕ್ತವಾದ ತನ್ನತನವನ್ನು ಹೊಂದಿರುವ ವ್ಯಕ್ತಿಯಾಗಿ ರೂಪುಗೊಳ್ಳುವ ಸಾಧ್ಯತೆ ಇರುವುದು.

ಹಾಗೆಯೇ ಭದ್ರತೆ ಅಥವಾ ರಕ್ಷಣೆಯ ನೆಪದಲ್ಲಿ ಮಗುವಿನ ಸ್ವಾತಂತ್ರ್ಯಹರಣ ಮಾಡುವುದಲ್ಲ. ಹಿರಿಯ ಸದಸ್ಯರ ಜೀವನಾನುಭವ, ಜೀವನ ಕೌಶಲ್ಯ ಮತ್ತು ಜೀವನ ಪಾಠಗಳು ತಮ್ಮ ಮುಂದಿರುವ ಮಗುವಿಗೆ ಒಂದು ಸರಿಯಾದ ಅನುಭವ ಕೊಡದಿದ್ದರೆ, ಕೌಶಲ್ಯವನ್ನು ಕಲಿಸದಿದ್ದರೆ, ತನ್ನ ಜೀವನವನ್ನು ತಾನು ಸಮರ್ಥವಾಗಿ ಪ್ರೀತಿಸಿಕೊಳ್ಳುತ್ತಾ ಎಲ್ಲರೊಡನೆ ಬದುಕಲು ಸಾಧ್ಯವಾಗದಿದ್ದರೆ; ಆ ಹಿರಿ ಬದುಕಿನ ಸಾರ್ಥಕತೆಯೇನು?

ಶಿಶುವೆಂಬ ಮಹಾಬಲ

ಮಗುವು ಆಕಾರದಲ್ಲಿ ಚಿಕ್ಕದೆಂದೂ, ಆಧಾರಕ್ಕೆ ನಮ್ಮನ್ನು ಅವಲಂಬಿಸಿದೆಯೆಂದೂ, ಆಹಾರವನ್ನು ನಾವೇ ನೀಡುತ್ತಾ, ಅಕ್ಷರವನ್ನೂ ಕಲಿಸುವುದರಿಂದ ನಾವೇ ಅದರ ಮಹಾಪೋಷಕರೂ, ಆಧಾರಸ್ತಂಭವೆಂದೂ ಹಿರಿಯರು ತಿಳಿದುಕೊಳ್ಳುವುದರಿಂದ ಎಷ್ಟೋ ಮಕ್ಕಳ ಸಾಮರ್ಥ್ಯ ಬೆಳೆಯುವುದಿಲ್ಲ, ಪ್ರತಿಭೆಗಳು ಅನಾವರಣಗೊಳ್ಳುವುದಿಲ್ಲ, ಮತ್ತು ಬದುಕಿನ ಸ್ಥಿರತೆ ಕಾಣುವುದಿಲ್ಲ. ಮಕ್ಕಳ ಎಳೆಯತನವನ್ನು ಬಲಗೊಳಿಸುತ್ತೇವೆ ಎಂಬ ಭ್ರಮೆಯಿಂದ ಅವರನ್ನು ದುರ್ಬಲಗೊಳಿಸುತ್ತೇವೆ.

ವಾಸ್ತವವಾಗಿ ನಮ್ಮ ಮಕ್ಕಳು ನಮಗಿಂತ ದೂರಗಾಮಿಗಳು, ಸಬಲರು ಮತ್ತು ವಿವೇಚನೆಯುಳ್ಳವರು. ಅವರ ಸಂವೇದನಾಶೀಲತೆಯನ್ನು ಕಂಡುಕೊಳ್ಳಲು ಬಿಡದೇ, ಸೃಜನಶೀಲತೆಯನ್ನು ಮತ್ತು ಕ್ರಿಯಾಶೀಲತೆಯನ್ನು ಪ್ರಯೋಗಕ್ಕೆ ಒಳಪಡಿಸಿಕೊಳ್ಳಲೂ ಬಿಡದೇ ನಮ್ಮ ಪ್ರಯೋಗಳ ಸಾಧನೆ ಮತ್ತು ವೈಫಲ್ಯಗಳನ್ನೇ ಅವರ ಪ್ರಯೋಗಳಿಗೂ ಮಾನದಂಡವಾಗಿಸುವುದರಿಂದ ಅವರ ನಿಜವಾದ ಬಲ ಸಂವರ್ಧನೆಯಾಗುವುದಿಲ್ಲ. ಎಷ್ಟೋ ಸಲ ಅನಾವರಣವೇ ಆಗುವುದಿಲ್ಲ.

ನಮ್ಮ ದೌರ್ಬಲ್ಯವನ್ನು ಅರಿಯುವಲ್ಲಿ ಅವರ ಸಾಮರ್ಥ್ಯವನ್ನು ಅರಿಯುವ ಸಾಧ್ಯತೆಯುಂಟು. ನಮ್ಮ ವೈಫಲ್ಯವನ್ನು ಗುರುತಿಸಿಕೊಳ್ಳುವುದರಲ್ಲಿ ಅವರ ಸಾಫಲ್ಯವಿರಬಹುದು. ನಮ್ಮ ಸಿದ್ಧ ಮಾದರಿಗಳನ್ನು ಮೀರುವುದರಲ್ಲಿ ಅವರ ಸಾಧನೆಯ ಹಾದಿಯು ವಿಸ್ತರಿಸುವ ಸಾಧ್ಯತೆಗಳಿರುತ್ತದೆ. ನಮ್ಮ ಹಿರಿಮೆ ಅವರ ಮುಂದೆ ವಿದೇಯವಾಗಬೇಕು. ನಮ್ಮ ಗುರಿ ಅವರ ಗುರಿಯಲ್ಲ. ಅವರ ದಾರಿಯಲ್ಲಿ ನಾವು ಅವರನ್ನು ಹೊತ್ತೊಯ್ಯಲಾಗದಿದ್ದರೂ ತೊಡಕಾದಿರುವಂತೆ ನಮ್ಮನ್ನು ನಾವು ನಿರ್ಬಂಧಿಸಿಕೊಂಡರೆ ಅವರು ತಮ್ಮ ಬಲವನ್ನು ತಾವು ಸಾಕ್ಷಾತ್ಕರಿಸಿಕೊಳ್ಳಲು ಸಾಧ್ಯವಾಗುತ್ತದೆ.

ಮಗುವೆಂದರೆ ನಮ್ಮ ಅಧೀನದಲ್ಲಿರುವ ಅಧೀರನೆಂಬ ಭ್ರಮೆ ನಮ್ಮಿಂದ ತೊಲಗದ ತನಕ, ಮಗುವಿನ ಅಸಹಾಯಕತೆಗೆ ನಾನೇ ಔದಾರ್ಯದ ಮಹಾ ಸಹಾಯವೆಂಬ ಅಹಂಕಾರ ಕುಸಿಯುವ ತನಕ, ಮಗುವೆಂಬ ಮುಗ್ಧ ಜೀವಕ್ಕೆ ನಾವೇ ವಿಚಾರ ಮತ್ತು ಚಿಂತನೆಗಳನ್ನು ನೀಡಬೇಕು ಎಂಬ ಅವೈಜ್ಞಾನಿಕ ನಿಲುವನ್ನು ತೊರೆಯುವ ತನಕ ಮಗುವು ತನ್ನ ಬಲವನ್ನು ತಾನು ಸಾಕ್ಷಾತ್ಕರಿಸಿಕೊಳ್ಳಲು ನಮ್ಮ ಹಿರಿಯರು ಬಿಡುವುದಿಲ್ಲ.

ಶಿಶುವಿನ ಬಲವು ಹೊತ್ತಿಳಿಯುತ್ತಿರುವ ಹಿರಿಯರಿಗೆ ಬಲ ನೀಡುವುದು. ಈ ಸತ್ಯವನ್ನು ಅರಿಯುವ ಹಿರಿಯರು ಶಿಶುವಿನ ಪೋಷಣೆಯ ಮತ್ತು ಶಿಕ್ಷಣದ ವಿಷಯದಲ್ಲಿ ತಮ್ಮ ದಾರಿ ಮತ್ತು ಗುರಿಯನ್ನು ಸ್ಪಷ್ಟವಾಗಿಸಿಕೊಂಡಿರಲು ಸಾಧ್ಯ. ಶಿಶುಬಲವೇ ಸಮಾಜದ ಮಹಾಬಲ.

ಶಿಶುಮನ

ಮಕ್ಕಳ ಮನಸ್ಸು ಬಹಳ ವಿಶಿಷ್ಟ ಸಂಯೋಜನೆಯಿಂದ ಕೂಡಿರುತ್ತದೆ. ಮೊದಲನೆಯದಾಗಿ ಅದು ಬಹಳ ಸಶಕ್ತವಾಗಿರುತ್ತದೆ. ಎರಡನೆಯದಾಗಿ ಗ್ರಹಿಕೆಯಲ್ಲಿ ಚುರುಕಾಗಿರುತ್ತದೆ. ಮೂರನೆಯದಾಗಿ ಅಗಾಧ ಫಲವತ್ತಿನ ಕ್ಷೇತ್ರವಾಗಿರುತ್ತದೆ. ನಾಲ್ಕನೆಯದಾಗಿ ಸಲಿಲತೆಯಿಂದ ಕೂಡಿರುತ್ತದೆ. ಐದನೆಯದಾಗಿ ಮುಗ್ಧವಾಗಿರುತ್ತದೆ. ಆರನೆಯದಾಗಿ ಸಂವೇದನೆಯಿಂದ ಕೂಡಿರುತ್ತದೆ. ಏಳನೆಯದಾಗಿ ಸೂಕ್ಷ್ಮವಾಗಿರುತ್ತದೆ. ಈ ಏಳೂ ಗುಣಗಳ ಕಾರಣದಿಂದ ಅವರ ಜೊತೆಗೆ ಹಿರಿಯರಾದವರು ವ್ಯವಹರಿಸುವಾಗ ಬಹಳ ಎಚ್ಚರಿಕೆಯಿಂದಲೂ ಮತ್ತು ಜವಾಬ್ದಾರಿಯಿಂದಲೂ ವರ್ತಿಸಬೇಕು.

ಅವರ ಸಂಪರ್ಕದಲ್ಲಿರುವಾಗ ಮತ್ತು ಸಂವಹನ ನಡೆಸುವಾಗ ಹಿರಿಯರ ನಡವಳಿಕೆ ಬಹಳ ಸಂವೇದನೆಯಿಂದ ಕೂಡಿರಬೇಕು. ಸೂಕ್ಷ್ಮದೃಷ್ಟಿ ಮತ್ತುದೂರದೃಷ್ಟಿಯನ್ನು ಹೊಂದಿರದ ಹಿರಿಯರು ಮಕ್ಕಳ ಮನಸ್ಸನ್ನು ಘಾಸಿ ಮಾಡುವುದು ಮಾತ್ರವಲ್ಲದೇ, ತಪ್ಪಾಗಿ ತರಬೇತಿಗಳ ಮೂಲಕ ಪ್ರಮಾದಕರ ವ್ಯಕ್ತಿತ್ವಗಳನ್ನು ರೂಪಿಸುತ್ತಾರೆ.
ಶಕ್ತಿಶಾಲಿಯಾದ ಮನಸ್ಸಿರುವ ಕಾರಣದಿಂದ ಅವರಿಗೆ ಒಲ್ಲದ ಮತ್ತು ಒಗ್ಗದ ವಿಷಯಗಳಿಗೆ ಪ್ರತಿರೋಧವನ್ನು ಒಡ್ಡುತ್ತವೆ.

ಬಂಡಾಯವೇಳುತ್ತವೆ. ಗ್ರಹಣಶಕ್ತಿಯು ಚೆನ್ನಾಗಿರುವುದರಿಂದ ಬೋಧನೆಗಳನ್ನು ಮೀರಿದ ಮಾದರಿಗಳನ್ನು ಗ್ರಹಿಸಿ ತಮ್ಮದಾಗಿಸಿಕೊಳ್ಳುತ್ತವೆ. ಮನಸ್ಸು ಫಲವತ್ತಾದ ಕ್ಷೇತ್ರವಾದ್ದರಿಂದ ಒಳಿತನದೋ, ಕೆಡುಕಿನದೋ, ಬೇಕಾದ್ದೋ, ಬೇಡದ್ದೋ; ಯಾವುದೇ ರೀತಿಯ ಬಿತ್ತನೆಯಾದರೂ ಹುಲುಸಾಗಿ ಬೆಳೆದು ಫಲಕೊಡುತ್ತವೆ. ಸಲಿಲತೆಯು ಮಕ್ಕಳ ಮನಸ್ಸಿನ ಗುಣವಾದ್ದರಿಂದ ಯಾವುದೇ ವಾತಾವರಣದ ಗುಣಾವಗುಣಗಳಿಗೆ ಒಗ್ಗಿಕೊಂಡು ಆಯಾ ಪರಿಸರದ ಪ್ರಭಾವಗಳಿಂದ ವ್ಯಕ್ತಿತ್ವವನ್ನು ರೂಪಿಸಿಕೊಳ್ಳುತ್ತವೆ.

ಮುಗ್ಧವಾಗಿರುವುದರಿಂದ ತಾರ್ಕಿಕವಾಗಿ ವಿಷಯಗಳನ್ನು ವಿಶ್ಲೇಷಿಸದೇ ಸುಳ್ಳು, ನಿಜ, ಅಗತ್ಯ, ಅನಗತ್ಯಗಳ ಪರಿವೇ ಇಲ್ಲದೇ, ಮನವೊಲಿಸುವ ಆಧಾರದ ಮೇಲೆ ಎಲ್ಲವನ್ನೂ ನಿಜವೆಂದೇ ಒಪ್ಪಿಕೊಳ್ಳುತ್ತವೆ. ಸಂವೇದನಾಶೀಲಗುಣವೂ ಮಕ್ಕಳ ಮನಸ್ಸಿನ ಸಹಜವಾದ ಗುಣವಾದ್ದರಿಂದ ಅವರಿಗೆ ನಿಲುಕದ, ತರಬೇತಿ ನೀಡಲಾಗದ, ಅರ್ಥ ಮಾಡಿಸಲಾಗದ ವಿಷಯಗಳೇನೂ ಇಲ್ಲ. ಆದರೆ ಅವುಗಳನ್ನು ಮುಟ್ಟಿಸುವ ಕ್ರಮದ ಬಗ್ಗೆ ಹಿರಿಯರಿಗೆ ಅರಿವಿರಬೇಕು. ಕೊನೆಯದಾಗಿ ಮಕ್ಕಳ ಮನಸ್ಸು ಸೂಕ್ಷ್ಮ. ತೆಳುವಾದ ಗಾಜಿನ ಪರೆಯಷ್ಟು ಸೂಕ್ಷ್ಮ. ಅದನ್ನು ಘಾಸಿಗೊಳಿಸಿದರೆ ಅದರ ಪರಿಣಾಮ ಎಷ್ಟು ದಾರುಣವಾಗಿರುತ್ತದೆ ಎಂದು ಹೇಳಲಾಗುವುದಿಲ್ಲ.

ಮಕ್ಕಳ ಮನಸ್ಸಿನ ಸಮಸ್ಯೆ ಹಲವಾರು ಮೂಲಗಳು. ಕೆಲವು ಶಾರೀರಿಕ ಸಮಸ್ಯೆಯಾದರೆ, ಮತ್ತೆ ಕೆಲವಕ್ಕೆ ಕೌಟುಂಬಿಕ ಮತ್ತು ಸಾಮಾಜಿಕ ಕಾರಣಗಳು. ಆದರೆ ಅರಿತವರಿಗೆ ಪರಿಹಾರವಿದೆ.

ಶಿಶುತನ ವರ್ಸಸ್ ತನ್ನತನ

ಮಗುವೊಂದರ ಶಿಶುತನ ಮತ್ತು ವ್ಯಕ್ತಿಯೊಬ್ಬನ ತನ್ನತನಕ್ಕೆ ಒಂದು ಮುಖ್ಯವಾದ ವ್ಯತ್ಯಾಸವಿದೆ. ಶಿಶುತನವು ನೈಸರ್ಗಿಕವಾಗಿ ರೂಪುಗೊಂಡಿರುವುದು. ವ್ಯಕ್ತಿಯ ತನ್ನತನವು ತಾನೇ ರೂಪಿಸಿಕೊಳ್ಳುವುದು. ಮಗುವು ತನ್ನ ಶಿಶುತನದ ಸಹಜತೆಯಿಂದ ವರ್ತಿಸಿದರೆ, ವ್ಯಕ್ತಿಯು ತನ್ನತನವನ್ನು ತನ್ನ ವ್ಯಕ್ತಿತ್ವದ ಮೂಲಕ ಪ್ರಕಟಗೊಳಿಸಬೇಕಾಗುತ್ತದೆ. ಆದರೆ ಎರಡೂ ಸಂಸ್ಕಾರಕ್ಕೆ ಒಳಗಾಗುತ್ತಾ ತಮ್ಮ ಪ್ರಕಟಗೊಳ್ಳುವ ಪ್ರಕ್ರಿಯೆಯಲ್ಲಿ ಬದಲಾವಣೆಗಳನ್ನು ಹೊಂದುತ್ತಾ ಹೋಗುತ್ತದೆ. ಇದು ಅವುಗಳಿಗಿರುವ ಸಾಮ್ಯತೆ.

ಶಿಶುತನದ ಪ್ರಕಟಣೆ ಅನೈಚ್ಛಿಕವಾದ ಪ್ರಕ್ರಿಯೆಯಾದರೆ, ತನ್ನತನ ಐಚ್ಛಿಕ. ಶಿಶುತನದ ಪ್ರಕಟಣೆಯಲ್ಲಿ ಮುಗ್ಧತೆ ಇದ್ದರೆ, ತನ್ನತನದಲ್ಲಿ ಪ್ರಜ್ಞಾವಂತಿಕೆ ಇರುತ್ತದೆ. ಶಿಶುತನದ ಸೌಂದರ್ಯವು ಮುದ ತರುವ ಕಾರಣವೇ ಅದು ಸಹಜವಾಗಿ ಸೂಸುವ ಮುಗ್ಧತೆ. ತನ್ನತನದ ಪ್ರಕಟಣೆಯು ಮೂರ್ಖತೆಯಿಂದಲೂ ಕೂಡಿರಬಹುದು. ಏಕೆಂದರೆ ಅದು ತರ್ಕ, ಲೆಕ್ಕಾಚಾರ, ಉದ್ಧೇಶಿತ ಶ್ರದ್ಧೆ ಮತ್ತು ನಂಬಿಕೆಗಳಿಂದ ಕೂಡಿರುತ್ತದೆ. ಅದು ನಿರ್ಬಂಧಕ್ಕೆ ಒಳಗಾಗಿರುತ್ತದೆ.

ಆದರೆ ಶಿಶುತನಕ್ಕೆ ನಿರ್ಬಂಧವಿರುವುದಿಲ್ಲ. ಯಾವುದೇ ಬಗೆಯ ಪೂರ್ವಾಗ್ರಹಗಳಿರುವುದಿಲ್ಲ. ಸೈದ್ಧಾಂತಿಕ ಅಥವಾ ತಾತ್ವಿಕ ನೆಲೆಗಟ್ಟಿರುವುದಿಲ್ಲ. ಬರಿಯ ಹಿತ ಮತ್ತು ಆನಂದದ ಅಪೇಕ್ಷೆಯಿರುವ ಮಗುವಿಗೆ ಯಾವ ಗೊಂದಲಗಳು ಇರುವುದಿಲ್ಲ. ಅದೇ ಅವರಿಗೆ ವರ. ಹಾಗಾಗಿಯೇ ಯೇಸುಕ್ರಿಸ್ತ ಹೇಳುವುದು. “ನೀವು ಮಕ್ಕಳಂತಾಗದಿದ್ದರೆ ನಿಮಗೆ ಸ್ವರ್ಗಸಾಮ್ರಾಜ್ಯವು ಇರುವುದಿಲ್ಲ.”

ಶಿಶುತನವು ಪಶುತನದಂತೆಯೇ ಪ್ರಕೃತಿಯಲ್ಲಿ ನೈಸರ್ಗಿಕ. ಅವನನ್ನು ಸಾಮಾಜಿಕವಾಗಿ ಸಂಘ ಜೀವನಕ್ಕೆ ಒಳಪಡಿಸುವಾಗ ಆ ಶಿಶುತನದ ಲಾಲಿತ್ಯ ಮತ್ತು ಸೌಂದರ್ಯಕ್ಕೆ ಧಕ್ಕೆಯಾಗದ ಹಾಗೆ ಎಚ್ಚರಿಕೆ ವಹಿಸುವುದರಲ್ಲಿ ಹಿರಿಯರ ಕೌಶಲ್ಯವಿದೆ.
ಹಿರಿಯರ ಸಮಸ್ಯೆ ಎಂದರೆ ರೂಢಿಸಿಕೊಂಡ ಅಥವಾ ರೂಪಿಸಿಕೊಂಡ ತಮ್ಮತನದ ಪ್ರಭಾವದಲ್ಲಿ ತಾವು ದಾಟಿ ಬಂದ ಶಿಶುತನವನ್ನು ಮರೆತಿರುತ್ತಾರೆ. ಆ ವಿಸ್ಮೃತಿಯೇ ತಮ್ಮ ಜೊತೆಗಿರುವ ಮಕ್ಕಳ ಶಿಶುತನದ ನಾಶಕ್ಕೆ ಹಲವು ಕಾರಣಗಳಲ್ಲೊಂದು. ಶಿಶುತನವೆಂಬುದರ ಸೌಂದರ್ಯ, ಪ್ರಾಮಾಣಿಕತೆ, ಮುಗ್ಧತೆ ಮತ್ತು ಸೂಕ್ಷ್ಮತೆಯನ್ನು ತಮ್ಮತನದಲ್ಲಿ ಜೀವಂತವಾಗಿರಿಸಿಕೊಂಡಾಗಲೇ ನಿಜವಾದ ಆನಂದ.

(ಮುಂದುವರಿಯುವುದು)

ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂತರಂಗ

ಮರೆಯಾದ ಅಪೂರ್ವ ಚಿತ್ರಕಲಾ ಪ್ರತಿಭೆ ‘ಶೋಭಾ ಕರಣಿಕ್’

Published

on

ಶೋಭಾ ಕರಣಿಕ್
  • ಡಾ.ಎನ್.ಕೆ.ಪದ್ಮನಾಭ, ಸಹಾಯಕ ಪ್ರಾಧ್ಯಾಪಕರು, ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ,ಎಸ್.ಡಿ.ಎಂ ಸ್ನಾತಕೋತ್ತರ ಕೇಂದ್ರ,ಉಜಿರೆ

ವರು ಬಿಡಿಸುತ್ತಿದ್ದ ರೇಖೆಗಳು ನಮ್ಮ ದೇಶೀ ಸಂಸ್ಕೃತಿಯ ವಕ್ತಾರಿಕೆಯ ಪಾತ್ರ ನಿರ್ವಹಿಸುತ್ತಿದ್ದವು. ಕನ್ನಡದ್ದೇ ಆದ ಕಲಾತ್ಮಕ ಪರಂಪರೆಯನ್ನು ಸೂಕ್ಷ್ಮವಾಗಿ ಗ್ರಹಿಸಿದ್ದ ಅವರ ಚಿತ್ರಗಳು ಜೀವಂತಿಕೆಯ ಗುಣಲಕ್ಷಣದೊಂದಿಗೆ ಕಂಗೊಳಿಸುತ್ತಿದ್ದವು.

ಸಾಂಪ್ರದಾಯಿಕ ಚಿತ್ರಶೈಲಿಯನ್ನು ಆಧುನಿಕ ಅಗತ್ಯಗಳಿಗೆ ತಕ್ಕಂತೆ ಮಣಿಸಿ ಪರಂಪರೆಯೊಳಗೇ ಅಡಗಿದ್ದ ಮೌಲಿಕ ಮಾದರಿಗಳನ್ನು ಮನಗಾಣಿಸುವ ಶ್ರದ್ಧೆಯೊಂದಿಗೇ ಅವರು ಚಿತ್ರವಿನ್ಯಾಸ ರೂಪಿಸುತ್ತಿದ್ದರು. ಇನ್ಸ್ಟಾಗ್ರಾಮ್, ಫೇಸ್‌ಬುಕ್ ಮತ್ತಿತರ ಮಾಧ್ಯಮಗಳ ಮೂಲಕ ತಮ್ಮ ಚಿತ್ರಗಳನ್ನು ಕಾಣಿಸುತ್ತಿದ್ದರು. ಪರಂಪರೆ ಮತ್ತು ವರ್ತಮಾನವನ್ನು ಬೆಸೆದು ಹೊಸ ಬಗೆಯ ಚಿತ್ರಪ್ರಯೋಗಗಳನ್ನು ನಡೆಸುವ ಹುಮ್ಮಸ್ಸಿನೊಂದಿಗೆ ಚಿತ್ರಕಲಾಯಾನ ಮುಂದುವರೆಸಿದ್ದರು. ಅವರ ಹೆಸರು ಶೋಭಾ ಕರಣಿಕ್.

ಇತ್ತೀಚೆಗಷ್ಟೇ ಅವರ ಚಿತ್ರಕಲಾಯಾನ ನಿಂತಿತು. ಅವರ ನಿಧನವು ವಿನೂತನವಾದ ಪ್ರಯೋಗಶೀಲ ಚಿತ್ರಕಲಾ ಸಾಧ್ಯತೆಗಳನ್ನು ತಡೆದು ನಿಲ್ಲಿಸಿತು. ಪುರಾಣದ ಕಥನ ಪ್ರಸಂಗಗಳಲ್ಲಿ ಉಲ್ಲೇಖಿತ ದೇವರು-ದೇವತೆಗಳ ಅಸ್ಮಿತೆ ಮತ್ತು ದೇಸೀ ಸಂಸ್ಕೃತಿಯನ್ನು ಬಿಂಬಿಸುವ ವಿನ್ಯಾಸಗಳನ್ನು ಸಮನ್ವಯಗೊಳಿಸಿ ಚಿತ್ರಕಲೆಗೆ ಹೊಸ ಆಯಾಮ ತಂದುಕೊಟ್ಟ ಪ್ರತಿಭೆಯಾಗಿ ಶೋಭಾ ಕರಣಿಕ್ ಅವರದ್ದು ವಿಶೇಷ ವ್ಯಕ್ತಿತ್ವವಾಗಿತ್ತು. ಮ್ಯೂರಲ್ ಪೇಂಟಿಂಗ್‌ನಲ್ಲಿ ಅವರಿಗಿದ್ದ ಪರಿಣತಿ, ಉತ್ತರ ಕನ್ನಡದ ಕಾವಿ ಕಲೆಯ ಕುರಿತಾದ ವಿಸ್ತೃತ ಜ್ಞಾನವು ಚಿತ್ರಕಲೆಯನ್ನು ಉನ್ನತೀಕರಿಸುವುದಕ್ಕೆ ಅವರಿಗೆ ನೆರವಾಗಿತ್ತು.

ಕಲೆಯ ಜೊತೆಗಿನ ಅನುಸಂಧಾನದ ಕ್ಷಣಗಳು ಅಪೂರ್ವ. ಒಂದು ನಿರ್ದಿಷ್ಟ ನಿರ್ಣಾಯಕ ಸಂದರ್ಭ, ಸಮಯದಲ್ಲಿ ಕಲೆಯೊಂದು ವ್ಯಕ್ತಿತ್ವವನ್ನು ಪ್ರಭಾವಿಸಿ ಸೃಜನಶೀಲತೆಯ ಹಸಿವನ್ನು ನೆಲೆಗೊಳಿಸುವುದಕ್ಕೆ ಪ್ರೇರಣೆಯಾಗುತ್ತದೆ. ಕಲೆಯ ಪ್ರಭಾವ ಎರಡು ಬಗೆಯದ್ದು. ಸಹೃದಯರನ್ನು ತನ್ನ ಕಲಾತ್ಮಕ ಮಾದರಿಗಳಿಂದ ಸೆಳೆದು ಅವರೊಳಗೆ ವಿಶೇಷ ಅನುಭೂತಿ ಧಾರೆ ಎರೆಯುವಂಥದ್ದು ಒಂದು ಬಗೆಯಾದರೆ ಹೀಗೆ ಸೆಳೆದುಕೊಂಡು ಮತ್ತೆ ಮತ್ತೆ ಪ್ರಭಾವಿಸುತ್ತಾ ಸಹೃದಯರನ್ನೇ ಕಲಾವಿದರನ್ನಾಗಿಸುವ ಸಾಧ್ಯತೆ ಮತ್ತೊಂದು ತೆರನಾದದ್ದು.

ಈ ಕಾರಣಕ್ಕಾಗಿಯೇ ಕಲಾತ್ಮಕ ಸಂಭವನೀಯತೆಯು ಅನನ್ಯವೆನ್ನಿಸಿಕೊಂಡಿದೆ. ಇಂಥ ಅನನ್ಯತೆಯೊಂದಿಗೇ ಶೋಭಾ ಕರಣಿಕ್ ಗುರುತಿಸಿಕೊಂಡಿದ್ದರು. ಅವರು ಓದಿದ್ದು ತಾಂತ್ರಿಕ ವಿಜ್ಞಾನ. ಆದರೆ, ಅವರ ನಿಜದ ಪ್ರತಿಭೆ ಅಭಿವ್ಯಕ್ತವಾದದ್ದು ಚಿತ್ರಕಲೆಯ ಮೂಲಕ.

ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದ ಪರಿಸರದಲ್ಲಿ ಬೆಳೆದ ಶೋಭಾ ಕರಣಿಕ್ ಮೊದಲಿನಿಂದಲೂ ದೇಶೀ ಕಲೆಯ ಕುರಿತು ವಿಶೇಷ ಆಸಕ್ತಿಯನ್ನು ಬೆಳೆಸಿಕೊಂಡು ಬಂದಿದ್ದರು. ಹೈಸ್ಕೂಲ್ ಓದುತ್ತಿರುವಾಗಲೇ ಕಾವಿಕಲೆಯ ವಿನ್ಯಾಸ ಅವರನ್ನು ಸೆಳೆದಿತ್ತು. ಇವುಗಳನ್ನು ಮತ್ತೆ ಮತ್ತೆ ನೋಡುತ್ತಾ ಹೋದಂತೆಲ್ಲಾ ಕಾವಿ ಕಲೆಯ ಕುರಿತ ಆಕರ್ಷಣೆ ಕಲಿಕೆಯ ಹಂಬಲವಾಗಿ ಮಾರ್ಪಟ್ಟಿತು. ಉತ್ತರ ಕನ್ನಡದ ಟೆಂಪಲ್ ರ‍್ಟ್ ಪ್ರಕಾರದ ಭಾಗವಾಗಿ ಕಾವಿ ಕಲೆಯನ್ನು ಪರಿಚಯಿಸುವ ದೃಷ್ಟಿಯಿಂದ ಅವರು ರಚಿಸಿದ್ದ ತರಹೇವಾರಿ ವಿನ್ಯಾಸಗಳು ವಿವಿಧ ಚಿತ್ರಕಲಾ ಪ್ರದರ್ಶನ ಕಾರ್ಯಕ್ರಮಗಳಲ್ಲಿ ಗಮನ ಸೆಳೆದಿದ್ದವು.

ಕಾವಿ ಕಲೆಯೂ ಸೇರಿದಂತೆ ನಮ್ಮ ಸಾಂಪ್ರದಾಯಿಕ ಕಲೆಗಳು ಈ ಹಿಂದಿನ ಕಾಲದ ತಲೆಮಾರನ್ನಷ್ಟೇ ಪ್ರಭಾವಿಸಿದ್ದಲ್ಲದೇ ನಂತರದ ಹೊಸ ಪೀಳಿಗೆಯನ್ನೂ ಆಕರ್ಷಿಸುವ ಗುಣ ಹೊಂದಿವೆ. ಮೂಲ ಅಂತಃಸತ್ವಕ್ಕೆ ಧಕ್ಕೆಯೊದಗದ ಹಾಗೆ ಹೊಸ ಕಾಲದ ಅಗತ್ಯಗಳಿಗೆ ಅನುಗುಣವಾಗಿ ಈ ಸಾಂಪ್ರದಾಯಿಕ ಚಿತ್ರಕಲಾ ವಿನ್ಯಾಸಗಳನ್ನು ಮರುರೂಪಿಸಬಹುದು. ಹೊಸ ಕಾಲದಲ್ಲಿ ಅವುಗಳ ಮಹತ್ವವನ್ನು ಮನಗಾಣಿಸಬಹುದು ಎಂಬುದು ಅವರ ಆಶಯವಾಗಿತ್ತು.

ಕಲೆಯೊಂದು ಒಂದು ಕಾಲದಿಂದ ಮತ್ತೊಂದು ಕಾಲಕ್ಕೆ ದಾಟಿಕೊಳ್ಳುವಾಗ ಪಲ್ಲಟಗಳು ಸಹಜ. ಈ ಪಲ್ಲಟಗಳನ್ನು ದೃಷ್ಟಿಯಲ್ಲಿರಿಸಿಕೊಂಡು ಇಂತಹ ಕಲೆಗಳಿಗೆ ಹೊಸಕಾಲದಲ್ಲೂ ಜೀವಂತಿಕೆಯನ್ನು ತಂದುಕೊಡುವ ಪ್ರಯತ್ನದ ಅಗತ್ಯವನ್ನು ಮನಗಾಣಿಸುವುದಕ್ಕಾಗಿಯೇ ಶೋಭಾ ಕರಣಿಕ್ ಅವರು ಚಿತ್ರಕಲಾ ರಚನೆಯ ವೈವಿಧ್ಯಮಯ ಪ್ರಯೋಗಗಳಲ್ಲಿ ತೊಡಗಿಸಿಕೊಂಡಿದ್ದರು.

ಅವರ ನಿಧನದಿಂದ ಈ ಪ್ರಯೋಗಶೀಲ ಹೆಜ್ಜೆಗಳು ನಿಂತಂತಾಗಿವೆ. ಆದರೆ, ಅವರು ಪರಂಪರೆ ಮತ್ತು ವರ್ತಮಾನವನ್ನು ಸಮನ್ವಯಗೊಳಿಸಿ ಸಾಬೀತುಪಡಿಸಿದ ಅಪೂರ್ವ ಚಿತ್ರಕಲಾ ಪ್ರಯೋಗಶೀಲತೆಯ ಜೀವಂತಿಕೆ ಹೊಸ ಪೀಳಿಗೆಗೆ ಸದಾ ಸ್ಫೂರ್ತಿಯ ಸೆಲೆಯಾಗಿರುತ್ತದೆ. ಅವರ ಹೆಸರಿನ ಇನಸ್ಟಾಗ್ರಾಂನಲ್ಲಿ ಕಾಣಿಸಿಕೊಂಡಿರುವ ಚಿತ್ರಗಳು ಇಂಥ ಸ್ಫೂರ್ತಿಯ ಪ್ರಭೆಯನ್ನು ದಾಟಿಸುತ್ತಿವೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ಅಂತರಂಗ

ಹೊಸತನದ ಹೊಸ್ತಿಲಲ್ಲಿ..!

Published

on

ಬರಹ : ಮೀನಾಕ್ಷಿ. ಬಿ
  • ಮೀನಾಕ್ಷಿ .ಬಿ, ಎಂ. ಎ ವಿದ್ಯಾರ್ಥಿನಿ, ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ, ದಾವಣಗೆರೆ ವಿಶ್ವವಿದ್ಯಾಲಯ

ಹೊಸವರ್ಷ ವೆಂಬುದು ಪ್ರತಿಯೊಬ್ಬರ ಬಾಳಲ್ಲಿ ವರ್ಷಕ್ಕೊಮ್ಮೆ ಬರುವ ಹೊಸದಿನಗಳ ಆಗಮನ ಯಾಕೆಂದರೆ ಹೊಸತನವನ್ನು ತರುತ್ತಾ ಇರುವ ಹೊಸವರ್ಷ ಕೂಡ ಒಂದು ಜೀವನದ ಭರವಸೆ, ನಿರೀಕ್ಷೆ ಕನಸುಗಳ ಬಂಡಿಯ ಮೇಲೆ ಸಾಗುವ ಪ್ರಯಾಣ ನಮ್ಮ ಜೀವನ.

ವ್ಯಕ್ತಿಯ ನಂಬಿಕೆಯ ಆಧಾರದ ಮೇಲೆಯೇ ಜೀವನ ಸಾಗುಸುತ್ತಿರುವುದು.ಯಾಕೆಂದರೆ ಪ್ರತಿಯೊಬ್ಬ ವ್ಯಕ್ತಿಯ ಜೀವನದಲ್ಲಿಯೂ ಕೂಡ ಕಷ್ಟ -ಸುಖ ದುಃಖದ ಸಂಗತಿಗಳು ಇದ್ದೆ ಇರುತ್ತದೆ. ಕೆಲವೊಂದು ಬಾರಿ ಹತಾಶೆಯನ್ನು ಹೊಂದಿ ಜೀವನದಲ್ಲಿ ಜಿಗುಪ್ಸೆ ಒಂದು ಕೆಟ್ಟ ನಿರ್ಧಾರಕ್ಕೆ ಮನಸ್ಸು ದಾರಿ ಮಾಡಿಕೊಡುತ್ತದೆ. ಹಾಗೆಯೇ ಕಷ್ಟ ಇದ್ದಲ್ಲಿ ಸುಖವಿರುವುದುಂಟು ಅನ್ನುವ ಹಾಗೇ ಇವತ್ತಲ್ಲ ನಾಳೆ ಒಳ್ಳೆಯ ದಿನಗಳು ನಮ್ಮ ಜೀವನದಲ್ಲಿ ಬರಬಹುದೆಂಬ ಭರವಸೆ,ಆತ್ಮವಿಶ್ವಾಸವನ್ನು ಇಟ್ಟುಕೊಂಡು ಜೀವನ ನಡೆಸುತ್ತಲೇ ಇದ್ದೇವೆ.

ಈ ವರ್ಷ ಒಳ್ಳೆಯದಾಗಿಲ್ಲ ಅಂದರೆ ಏನು ಮುಂದಿನ ವರ್ಷ ಆದರೂ ನನ್ನ ಬದುಕು ಬದಲಾಗಬಹುದು ಎಂಬ ಹೊಸತನವನ್ನು ನಮ್ಮಲ್ಲಿ ಭರವಸೆ,ನಂಬಿಕೆಯ ಬೇರಿನೊಂದಿಗೆ ಬೆರೆಸಿಕೊಂಡು ಬದುಕಬೇಕು.ನಾಳೆಯ ದಿನಗಳ ಮೇಲಿನ ಅನಿರೀಕ್ಷಿತ ತೀರಿವಿನಿಂದಾಗುವ ಬದುಕಿನಲ್ಲಾಗುವ ಬದಲಾವಣೆ ಹೊಸತನದ ಚಾಪನ್ನು ಮೂಡಿಸುತ್ತದೆ.
ಎಂಥ ಹತಾಶ ಮನಸ್ಥಿತಿಯವರಲ್ಲೂ ಹೊಸವರ್ಷ ಭರವಸೆಯ ಅಭಯ ಹಸ್ತವನ್ನು ಚಾಚುತ್ತದೆ. ಅದೆಲ್ಲಿಂದಲೇ ಆತ್ಮ ವಿಶ್ವಾಸದ ಬೆಳಕಿನ ಕಿಡಿಯೊಂದು ಕಾಣಿಸಿಕೊಳ್ಳುತ್ತದೆ.

ಹೊಸವರ್ಷವೆಂಬುದು ಕೇವಲ ಸಂಭ್ರಮದ ಕಾಲ ಮಾತ್ರವಲ್ಲ. ಕಳೆದ ದಿನಗಳತ್ತ ಹಿಂತಿರುಗಿ ನೋಡುವ ಸಮಯ ಕೂಡ ಹಿಂದಿನ ದಿನಗಳ ಪುಟಗಳನ್ನು ತೆಗೆದು ನೋಡಿದರೆ. ಉತ್ಸಾಹದ ಗಳಿಗೆಗಳು ಮುಂದಿನ ಕೆಲಸಗಳಿಗೆ ಚೈತನ್ಯ, ಉತ್ಸಾಹ ನೀಡಬಲ್ಲದು.ನಮ್ಮ ದಿಕ್ಕಿಲ್ಲದ ದಾರಿಗೆ ಖಚಿತ ದಿಕ್ಕು ದಾರಿಯನ್ನು ತೋರಬಲ್ಲದು.

ಜೀವನದ ಪ್ರಯಾಣಕ್ಕೆ ಒಂದು ನಿಲ್ದಾಣವಾಗಿದೆ. ನಾವು ಕಾಣುವ ಕನಸಗಳು ಕನಸಾಗಿಯೇ ಉಳಿದಿದೆ ಯಾಕೆಂದರೆ ನಮ್ಮಲ್ಲಿನ ಬೇಜವಾಬ್ದಾರಿ, ನಿರ್ಲಕ್ಷತನ ಆಮೇಲೆ ಮಾಡಿದರೆ ಆಯ್ತು ಅನ್ನೋ ಮನೋಭಾವನೆ ಯಾವುದರ ಬಗ್ಗೆಯೂ ಆಸಕ್ತಿ ಕೊಡದೆ ಇರೋದು ಎಲ್ಲವು ನಮ್ಮ ಕನಸಿನ ಜೀವನ ರೂಪಿಸಿಕೊಳ್ಳುವಲ್ಲಿ ಸಫಲರಾಗದೆ ಉಳಿಯಲು ಕಾರಣ.

ಮೊದಲು ಆತ್ಮವಿಶ್ವಾಸ ಬೇಕು ನಾನು ಈ ಕೆಲಸವನ್ನು ಮಾಡುವೆ ಎಂಬ ಒಂದು ನಿರ್ಧಿಷ್ಟ ಗುರಿ ಇರಬೇಕು ಅಂಗಿದ್ರೆ ಅಷ್ಟೇ ಜೀವನದ ಪಯಣದ ಹಾದಿಯಲ್ಲಿ ಯಶಸ್ಸನ್ನು ಕಾಣಲು ಸಾಧ್ಯ ಇಲ್ಲವಾದಲ್ಲಿ ಸೋಲನ್ನು ಅನುಭವಿಸುವ ಪರಿಸ್ಥಿತಿ ಎದುರಾಗುತ್ತದೆ. ಮುಂದಿನ ದಿನಗಳ ಆಗಮನದೊಂದಿಗೆ ನಾವು ಕಂಡ ಕನಸನ್ನು ಈಡೇರಿಸಿಕೊಳ್ಳುವ ಸತತ ಪ್ರಯತ್ನದೊಂದಿಗೆ ಬರುವ ದಿನವನ್ನು ಸ್ವಾಗತಿಸಿಕೊಳ್ಳೋಣ.
ಎಲ್ಲರ ಬಾಳಲಿ ಹರುಷ ,ಸಂತೋಷ ಮನೆಮಾಡಲಿ ಎಂದು ಆಶಿಸುತ್ತಾ ಎಲ್ಲರಿಗೂ ಹೊಸವರ್ಷದ ಶುಭಾಶಯಗಳು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ಅಂತರಂಗ

ಕಾಮರೂಪದ ಪ್ರಭಾಕರ

Published

on

  • ಪ್ರೊ.ರಹಮತ್ ತರೀಕೆರೆ

ನಾನು ಕೋಲಾರಕ್ಕೆ ಹೋದಾಗೆಲ್ಲ ಎರಡು ಜಾಗಗಳಿಗೆ ತಪ್ಪದೆ ಭೇಟಿ ಕೊಡುತ್ತೇನೆ. ಒಂದು-ಕೆ.ರಾಮಯ್ಯ ಮತ್ತವರ ಸಂಗಾತಿಗಳು ಸೇರಿ ತೇರುಹಳ್ಳಿ ಬೆಟ್ಟದ ಮೇಲೆ ಕಟ್ಟಿರುವ `ಆದಿಮ’ಕ್ಕೆ; ಇನ್ನೊಂದು-`ಕಾಮರೂಪಿ’ ಎಂಬ ಹೆಸರಲ್ಲಿ ಬರೆಯುತ್ತಿದ್ದ ಕನ್ನಡ ಲೇಖಕ ಡಾ. ಎಂ.ಎಸ್. ಪ್ರಭಾಕರ ಅವರಿರುವ ಕಠಾರಿಪಾಳ್ಯದ ಮನೆಗೆ. 50ರ ದಶಕದ ಕೊನೆಯಲ್ಲಿ ಕರ್ನಾಟಕ ಬಿಟ್ಟುಹೋದ ಪ್ರಭಾಕರ, ‘ಹಿಂದೂ’ ಪತ್ರಿಕೆಯ ವರದಿಗಾರರಾಗಿ ಆಫ್ರಿಕಾ ಅಮೇರಿಕ ಬಾಂಗ್ಲಾದೇಶ ಈಶಾನ್ಯ ಭಾರತವನ್ನೆಲ್ಲ ಅಲೆದಾಡಿ, ಕಡೆಗೆ ಕಾಮರೂಪದಲ್ಲಿ (ಅಸ್ಸಾಮಿನ ಪುರಾತನ ಹೆಸರಿದು) ನೆಲೆಸಿಬಿಟ್ಟರು.

`ಕಾಮರೂಪ’ ಶಬ್ದಕ್ಕೆ ಬಯಸಿದ ರೂಪಧಾರಣೆ ಮಾಡುವ ಮಾಯಾವಿ ವಿದ್ಯೆ ಎಂಬರ್ಥವೂ ಇದೆ. ಎಂಬತ್ತರ ಪ್ರಾಯದಲ್ಲಿ ಕರ್ನಾಟಕಕ್ಕೆ ಮರಳಿ ಬಂದಿರುವ ಪ್ರಭಾಕರ ಅವರು, ತಾವು ಹುಟ್ಟಿಬೆಳೆದ ಮನೆಯಲ್ಲಿ ಬಿಡಾರ ಹೂಡಿದ್ದಾರೆ. ಹಿರೀಕರು ಕಟ್ಟಿದ ದೊಡ್ಡಮನೆ. ಮನೆಯೊಳಗೊಂದೇ ಜೀವ; ಮನೆ ತುಂಬ ಪುಸ್ತಕದ ರಾಶಿ (ಹೆಚ್ಚಿನವು ಇಂಗ್ಲೀಶ್ ಬಂಗಾಳಿ ಅಸ್ಸಾಮಿ). ನಟ್ಟನಡುವಿರುವ ಹಾಲಿನ ಮೂಲೆಯಲ್ಲಿ ಬೀದಿಗೆ ಬೆನ್ನುಕೊಟ್ಟಂತೆ ಕೂತು, ಲ್ಯಾಪ್‌ಟಾಪಿನಲ್ಲಿ ಬರೆಯುತ್ತ, ವೆಬ್‌ಸೈಟುಗಳನ್ನು ಜಾಲಾಡುತ್ತ, ಬ್ಲಾಗುಗಳನ್ನೋದುತ್ತ ಪ್ರಭಾಕರ ಕುಳಿತಿರುತ್ತಾರೆ.

ಅವರ ಮನಗೆ ಹೋದಾಗಲೆಲ್ಲ ನನಗೆ ರಾಗಿಮುದ್ದೆ ಸೊಪ್ಪಿನ ಸಾರಿನ ಊಟ ಸಿಗುತ್ತದೆ. ಅವರು ಉಣ್ಣುವುದೊಂದು ಅಪೂರ್ವ ದೃಶ್ಯ. ತಣಿಗೆಯ ನಡುವೆ ಹದವಾಗಿ ಬೆಂದು ಕಂಪು ಬೀರುವ ಗೋಂದಿನಂತಹ ಕೆಂಗಪ್ಪು ಬಣ್ಣದ ಬಿಸಿಮುದ್ದೆಯನ್ನಿಟ್ಟು, ಅದರ ತಲೆಯ ಮೇಲೆ ಶಿಖರವನ್ನು ಹಿಮವು ಅಲಂಕರಿಸುವಂತೆ ಬೆಣ್ಣೆಯ ಚೂರನ್ನಿಡುತ್ತಾರೆ; ಬೆಣ್ಣೆಯು ಮುದ್ದೆ ಕಾವಿಗೆ ಕರಗಿ ಇಡೀ ಚೆಂಡನ್ನು ಆವರಿಸಿ ಅಭಿಷೇಕ ಮಾಡಿಸಿಕೊಂಡ ಮೂರುತಿಯಂತೆ ಥಳಥಳ ಹೊಳೆಯುತ್ತದೆ. ಆಗ ಘಮಿಸುವ ಮುದ್ದೆಯನ್ನು ಚೆನ್ನಾಗಿ ಮಿದ್ದು, ಒಂದು ಬದಿಯಿಂದ ಇಷ್ಟಿಷ್ಟೇ ಮುರಿದು ತುತ್ತು ಮಾಡಿ, ಸೊಪ್ಪಿನ ಗಟ್ಟಿಸಾರಲ್ಲಿ ಹೊರಳಾಡಿಸಿ ಗುಕ್ಕನೆ ನುಂಗಿ ಕಣ್ಮುಚ್ಚಿ ಕೊಳ್ಳುತ್ತಾರೆ. ತರುವಾಯ ಶ್ರೀಯುತರು ಜ್ಞಾನೋದಯವಾದ ಸಿದ್ಧನಂತೆ ಅವರ ಮುಖದಲ್ಲಿ ಪರಮಾನಂದದ ಒಂದು ಕಳೆ ಆವಿರ್ಭವಿಸುತ್ತದೆ. ಇದನ್ನೆಲ್ಲ ಕಾಣುವಾಗ, ಲೋಕವನ್ನೆಲ್ಲ ಸುತ್ತಾಡಿರುವ ಇವರು ಕೋಲಾರಕ್ಕೆ ಮುದ್ದೆಸುಖಕ್ಕಾಗಿಯೆ ಬಂದರೇನೊ ಎಂದು ಶಂಕೆ ಬರುತ್ತದೆ. ಪ್ರಭಾಕರ ಅವರಿಗೆ ಆಧುನಿಕ ಕನ್ನಡ ಸಾಹಿತ್ಯದ ಮೇಲೆ ಅನೇಕ ದೂರುಗಳಿವೆ. ಅವುಗಳಲ್ಲಿ ಆಹಾರ ತಯಾರಿಕೆ ಮತ್ತು ಸೇವನೆ ಕುರಿತು ಅದರಲ್ಲಿ ವಿವರಗಳೇ ಇಲ್ಲ ಎಂಬುದೂ ಒಂದು.

ಕನ್ನಡದ ಅತಿಹಿರಿಯ ಮತ್ತು ಹೆಚ್ಚು ಬರೆಯದ ಲೇಖಕರಲ್ಲಿ ಪ್ರಭಾಕರ ಅವರೂ ಒಬ್ಬರು. ನಾನು ಅವರ ‘ಕುದುರೆಮೊಟ್ಟೆ’ ಕಾದಂಬರಿಯನ್ನೂ ‘ಒಂದು ತೊಲ ಪುನುಗು ಮತ್ತು ಇತರ ಕತೆಗಳು’ ಸಂಕಲನವನ್ನೂ ಓದಿದ್ದೆ. ಇವುಗಳಲ್ಲಿ ‘ಕುದುರೆ ಮೊಟ್ಟೆ’ ಈಗಲೂ ಪ್ರಿಯವಾದ ಪುಸ್ತಕ. ಅದರಲ್ಲಿರುವ ಕೆಲವು ಪಾತ್ರಗಳು ಕೊಂಚ ವಿಕ್ಷಿಪ್ತವಾಗಿವೆ; ಅಲ್ಲಿನ ಬಾಳಿನ ಸನ್ನಿವೇಶಗಳೂ ಅನಿರೀಕ್ಷಿತವಾಗಿವೆ. ಆದರೆ ಎಲ್ಲಿಯೂ ಹುಸಿ ಅನಿಸದಂತೆ, ಒಂದೇ ಶಬ್ದ ಅಪವ್ಯಯವಾಗದಂತೆ ಅದನ್ನು ಬರೆಯಲಾಗಿದೆ. ಪಾತ್ರಗಳನ್ನು ತಮ್ಮ ಸಿದ್ಧಾಂತಕ್ಕೆ ತಕ್ಕಂತೆ ಮಣಿಸಿ ಕೈಗೊಂಬೆಯಂತೆ ಆಡಿಸುತ್ತ, ಕೆಲವನ್ನು ಮುದ್ದಾಮಾಗಿ ದುರುಳಗೊಳಿಸಿ ಕಲೆಯ ಜಾಣಮುಸುಕಿನಲ್ಲಿ ಅಡಗಿಸುತ್ತ, ಕೆಲವು ಕಾದಂಬರಿಗಳು ಕನ್ನಡದಲ್ಲಿ ಪ್ರಕಟವಾಗುತ್ತಿವೆ. ಇಂತಹ ಹೊತ್ತಲ್ಲಿ ಅರ್ಧ ಶತಮಾನದ ಹಿಂದೆ ಪ್ರಕಟವಾದ ಈ ಕಾದಂಬರಿ, ಬಾಳನ್ನು ಕುರಿತು ತೋರುವ ಕಕ್ಕುಲಾತಿ ಕಂಡು ಖುಶಿಯಾಗುತ್ತದೆ. ಕತೆಗಾರರಿಗೆ ತಾವು ಸೃಷ್ಟಿಸುವ ಕೆಲವು ಪಾತ್ರಗಳ ಮೇಲೆ ಕೊಂಚ ಭಾವ ಪಕ್ಷಪಾತವಿರುತ್ತದೆ. ಆದರೆ ತಾವು ಸೃಜಿಸುವ ಎಲ್ಲ ಪಾತ್ರಗಳನ್ನು ತಾಯಿಯಂತೆ ನೋಡುವುದು ಬರೆಹದ ನೈತಿಕತೆ. ಈ ಸಂಗತಿ ಕುವೆಂಪು ಮತ್ತು ಟಾಲ್ ಸ್ಟಾಯ್ ಕಾದಂಬರಿ ಓದಿದವರಿಗೆ ಗೊತ್ತಿದೆ.

ಕಾಮವನ್ನು ಇಟ್ಟುಕೊಂಡು ಜೀವನದ ಸತ್ಯಗಳನ್ನು ಶೋಧಿಸುವ ವಿಷಯದಲ್ಲಿ ಕಾಮರೂಪಿಯವರು, ಒಬ್ಬ ಟಿಪಿಕಲ್ ನವ್ಯಲೇಖಕರೇ. ಆದರೆ ನವ್ಯದ ಕೆಲವು ಲೇಖಕರಲ್ಲಿ ಕಾಣುವಂತೆ, ಅದಕ್ಕವರು ಅನಗತ್ಯ ಪ್ರಾಮುಖ್ಯ ಕೊಡುವುದಿಲ್ಲ. ಅದನ್ನು ಚಪ್ಪರಿಸುವುದಿಲ್ಲ. ವೈಭವೀಕರಿಸುವುದಿಲ್ಲ. ಬದಲಿಗೆ, ಮನುಷ್ಯರಾದವರು ಜೀವನದ ಇಕ್ಕಟ್ಟುಗಳಲ್ಲಿ ಸಿಲುಕಿ ಅನಿವಾರ್ಯವಾಗಿ ವರ್ತಿಸುವ ಪರಿಯನ್ನು ತಣ್ಣಗೆ ವ್ಯಂಗ್ಯವಾಗಿ ಚಿತ್ರಿಸುತ್ತಾ ಹೋಗುತ್ತಾರೆ. ಸತ್ಯಕ್ಕಿರುವ ಹಲವು ಮುಖಗಳನ್ನು ಹಿಡಿಯುವಂತಹ ಕುರುಸೋವಾನ ‘ರಶೋಮನ್’ ಸಿನಿಮಾ ನೆನಪಿಸುವ ಈ ಕಾದಂಬರಿ, ಮತ್ತೆಮತ್ತೆ ಓದಬೇಕು ಎನಿಸುವಷ್ಟು ತಾಜಾ ಆಗಿದೆ. ‘ಉಪಪತ್ತಿಯೋಗ’ ಎಂಬುದನ್ನು ಬಿಟ್ಟರೆ, ಉಳಿದಂತೆ ವ್ಯಕ್ತಿವಾದವನ್ನು ಅತಿಯಾಗಿ ಬಿಂಬಿಸುವ ತಂತ್ರದ ಬಿಗಿತದಲ್ಲಿರುವ ಅವರ ಕತೆಗಳು ಅಷ್ಟು ಆಪ್ತವೆನಿಸಿಲ್ಲ.

ನನಗೆ ಪ್ರಭಾಕರ್ ಕುರಿತು ಆಸಕ್ತಿ ಮೂಡಿಸಿದವರು ಮಾರ್ಕ್ಸ್‌ವಾದಿ ಚಿಂತಕ ಕೆ.ರಾಘವೇಂದ್ರರಾವ್ ಅವರು. ಅಮೆರಿಕೆಯ ವಿಶ್ವವಿದ್ಯಾಲಯಗಳಲ್ಲಿ ಕೆಲಸ ಮಾಡುತ್ತಿದ್ದ ಎ.ಕೆ.ರಾಮಾನುಜನರ ಹೊಂದಾಣಿಕೆಯ ಗುಣವನ್ನು ಕಟುವಾಗಿ ವಿಮರ್ಶಿಸುತ್ತ, ಅಲ್ಲಿನ ಶೈಕ್ಷಣಿಕ ಕ್ಷೇತ್ರದಲ್ಲಿರುವ ಬಿಳಿಯರ ಯಜಮಾನಿಕೆಗೆ ಬಾಗದೆ ಹೊರಬಂದ ಪ್ರಭಾಕರ ಅವರ ದಿಟ್ಟ ಸ್ವಭಾವವನ್ನು ಅವರು ತಮ್ಮ ಸಂದರ್ಶನದಲ್ಲಿ ಪ್ರಸ್ತಾಪಿಸಿದ್ದರು. ಪ್ರಭಾಕರ ಅವರನ್ನು ಭೇಟಿಯಾಗಬೇಕು ಎಂದು ಅನಿಸುತ್ತಿತ್ತು. ಅದರಲ್ಲೂ ಭಾರತದ ಶಾಕ್ತಪೀಠಗಳಲ್ಲಿ ಮುಖ್ಯವಾಗಿರುವ ಅಸ್ಸಾಮಿನ ಕಾಮಾಖ್ಯಕ್ಕೆ ಹೋಗಲು ಯತ್ನಿಸುತ್ತಿದ್ದ ನಾನು, ಅಲ್ಲೇ ಸಮೀಪದ ಗೌಹಾತಿಯಲ್ಲಿರುವ ಅವರನ್ನು ಕಾಣಲು ಹವಣಿಕೆ ಮಾಡಿಕೊಂಡಿದ್ದೆ. ಆದರೆ ಸಾರ್ವಜನಿಕ ವ್ಯಕ್ತಿಯಾಗಲು ನಿರಾಕರಿಸಿ ಅಜ್ಞಾತವಾಗಿಯೇ ಬಾಳುವ ಅವರು ಸುಲಭವಾಗಿ ಸಿಗುತ್ತಿರಲಿಲ್ಲ.

ನನ್ನ ತವಕವನ್ನರಿತಿದ್ದ ಕೆ.ರಾಮಯ್ಯ, ‘ಪ್ರಭಾಕರ್ ಕರ್ನಾಟಕಕ್ಕೆ ಬಂದಿದ್ದಾರೆ. ಬನ್ನಿ’ ಎಂದು ಅವರ ಮನೆಗೆ ಕರೆದುಕೊಂಡು ಹೋದರು. ಮಧ್ಯಾಹ್ನದ ಸುಡುಹೊತ್ತು. ಪ್ರಭಾಕರ ಪ್ರೀತಿಯಿಂದ ಬರಮಾಡಿಕೊಂಡು ನೊರೆ ತುಂಬಿದ ಒಗರು ಬೀರಿನ ಮಗ್ಗನ್ನು ಕೈಗೆ ಕೊಟ್ಟು, ಕಾಮಾಖ್ಯದ ಬಗ್ಗೆಯೂ ತಂತ್ರ ಪಂಥದ ಬಗ್ಗೆಯೂ ಇರುವ ಕೃತಿಗಳನ್ನು ತೋರಿಸುತ್ತ, ಗಂಟೆಗಟ್ಟಳೆ ಮಾತಾಡಿದರು. ಅರಿವಿನ ಕಿಡಿಗಳು ಹಾರುವ ಅದೊಂದು ವಿದ್ವತ್‌ಪೂರ್ಣ ಹರಟೆ.

ನಾನು ಅವರಲ್ಲಿ ಶಿಷ್ಯವೃತ್ತಿ ಸ್ವೀಕರಿಸಿ ಹಲವಾರು ಸಲ ಕೋಲಾರಕ್ಕೆ ಹೋಗಿ ಬಂದಿದ್ದೇನೆ. ಅವರ ಮಾತುಕತೆಗಳಲ್ಲಿ ನನಗೆ ಮುಖ್ಯವಾಗಿ ಕಂಡಿದ್ದು, ಜಾತ್ಯತೀತವಾದ ಮನಸ್ಸು; ಸಣ್ಣಪುಟ್ಟ ಸಂಗತಿಗಳ ಮೇಲೂ ಕಾಳಜಿಯಿಂದ ಸೂಕ್ಷ್ಮವಾಗಿ ಚಿಂತಿಸುವ ಮಾನವೀಯತೆ; ಗತಕಾಲದ ಬಗ್ಗೆ ಹಳಹಳಿಕೆಯಿಲ್ಲದೆ ವರ್ತಮಾನದ ಸಮಸ್ಯೆಗಳನ್ನು ಕುರಿತು ಚಿಂತಿಸುವ ಪ್ರಖರವೂ ನಿಷ್ಠುರವೂ ಆದ ರಾಜಕೀಯ ಪ್ರಜ್ಞೆ. ಸಾರ್ವಜನಿಕ ಬದುಕಿನಲ್ಲಿ ಜಾತಿಪದ್ಧತಿ ಎಲ್ಲೆಮೀರಿ ನಿರತವಾಗಿರುವ ಕುರಿತ ಹೇವರಿಕೆ. ಹಿರಿಯ ಲೇಖಕರಲ್ಲಿ ಸಾಮಾನ್ಯವಾಗಿ ಎರಡು ಸ್ವಭಾವಗಳಿರುತ್ತವೆ. ಒಂದು- ಕಳೆದುಹೋದ ಕಾಲದ ಬಗ್ಗೆ ಭಾವುಕ ಮರುಕಳಿಕೆ. ಎರಡು-ವರ್ತಮಾನದ ಸಾಮಾಜಿಕ ರಾಜಕೀಯ ವೈರುಧ್ಯಗಳನ್ನು ಉದಾರವಾಗಿ ನೋಡುತ್ತ, ಚಿಂತನೆಯ ಮೊನಚನ್ನು ಕಳೆದುಕೊಳ್ಳುವುದು. ಆದರೆ ಆತ್ಮಕ್ಕೆ ಸದಾ ಬೆಂಕಿ ಹತ್ತಿಸಿಕೊಂಡಂತೆ ಉರಿಯುವ ಕೆಲವರಿದ್ದಾರೆ. ಕೋಚೆ, ಕುಸುಮಾಕರ ದೇವರಗೆಣ್ಣೂರ, ಎಂ.ಡಿ. ನಂಜುಂಡಸ್ವಾಮಿ, ನೀಲಗಂಗಯ್ಯ ಪೂಜಾರ, ಕೆ.ರಾಘವೇಂದ್ರರಾವ್, ಅಬ್ಬಿಗೇರಿ ವಿರೂಪಾಕ್ಷಪ್ಪ, ಸಾರಾ ಅಬೂಬಕರ್, ಕಾಮರೂಪಿ ಪ್ರಭಾಕರ-ಇವರೆಲ್ಲ ಇಂತಹವರು. ಈ ಹಿರಿಯರ ಜತೆ ಮಾತಾಡುವಾಗ ಇವರ ಹಠಮಾರಿತನ, ಜಗಳಗಂಟಿತನ, ಆದರ್ಶವಾದ, ನೈತಿಕ ಪ್ರಜ್ಞೆ ಹಾಗೂ ಭಿನ್ನಮತ ಇಷ್ಟವಾಗುತ್ತದೆ.

ಕರ್ನಾಟಕದಿಂದ ಬಹುಕಾಲ ದೂರವಿದ್ದ ಕಾರಣದಿಂದ ಏರ್ಪಟ್ಟಿರುವ ಅಪರಿಚಿತತೆಯಿಂದಲೊ ಅಥವಾ ಕರ್ನಾಟಕದ ಒಳಗೇ ಇದ್ದೂಇದ್ದೂ ನಮಗೆ ಕಾಣದಂತಾಗಿರುವ ವೈರುಧ್ಯಗಳು ‘ಹೊರಗಿನಿಂದ’ ಬಂದಿರುವ ಅವರಿಗೆ ಒಡೆದು ಕಾಣುತ್ತಿರುವುದರಿಂದಲೊ, ಪ್ರಭಾಕರ ಕರ್ನಾಟಕದ ಸಮಕಾಲೀನ ಸಾಂಸ್ಕೃತಿಕ ರಾಜಕಾರಣದ ವೈರುಧ್ಯಗಳ ಬಗ್ಗೆ ತೀಕ್ಷ್ಣವಾದ ಟಿಪ್ಪಣಿ ಮಾಡುತ್ತಿರುತ್ತಾರೆ; ಕನ್ನಡಿಗರ ಸ್ವಭಾವದಲ್ಲೇ ವ್ಯಕ್ತಿನಿಷ್ಠೆಗಾಗಿ ವಿಮರ್ಶೆಯ ನಿಷ್ಠುರತೆ ಬಿಟ್ಟುಕೊಡುವ, ಸಜ್ಜನಿಕೆಯ ಭಾಷೆಯಲ್ಲಿ ವಾಸ್ತವವನ್ನು ಅಡಗಿಸುವ ಪ್ರವೃತ್ತಿಯಿದೆ ಎಂದು ಹೇಳುತ್ತಿರುತ್ತಾರೆ. ಸಂಘಟಕರೊಬ್ಬರು ಕಾರ್ಯಕ್ರಮವೊಂದಕ್ಕೆ ಕರೆಸಿಕೊಂಡು ಪರಿಚಯ ಭಾಷಣದಲ್ಲಿ ತಮ್ಮನ್ನು ಅತಿಯಾಗಿ ಹೊಗಳಿದ್ದನ್ನು ನೆನೆಯುತ್ತ ಅವರೊಮ್ಮೆ ಹೇಳಿದರು: “ಏನ್ ಸ್ವಾಮಿ ಕನ್ನಡಿಗರು? ಎಷ್ಟು ಉದಾರತೆ! ನನ್ನ ಬಗ್ಗೆ ಅವರಿಗೆ ಏನೂ ಗೊತ್ತಿಲ್ಲ. ನಾನು ಎಲ್ಲ ಸೇರಿದರೆ ನೂರೈವತ್ತು ಪುಟಗಳನ್ನೂ ಬರೆದಿಲ್ಲ. ಕನ್ನಡಕ್ಕೆ ದೊಡ್ಡ ಕೊಡುಗೆಯನ್ನು ಕೊಟ್ಟಿಲ್ಲ. ಆದರೂ ವಾಚಾಮಗೋಚರ ಹೊಗಳಿಬಿಟ್ಟರು. ಕರ್ನಾಟಕದಲ್ಲಿ ಮಾತಿಗೆ ಬೆಲೆಯೇ ಇದ್ದಂತಿಲ್ಲ.’’

ಇದನ್ನು ಕೇಳುವಾಗ ಈಚೆಗೆ ಕಲ್ಕತ್ತಾದಲ್ಲಿ ನಾನು ಕಂಡ, ಹಿರಿಯ ಲೇಖಕ ರುದ್ರಪ್ರತಾಪ ಸೇನರ ಸನ್ಮಾನ ಕಾರ್ಯಕ್ರಮ ನೆನಪಾಯಿತು. ಸೇನರಿಗೆ 75ವರ್ಷ ತುಂಬಿದ ನೆಪದಲ್ಲಿ ಇರಿಸಿಕೊಂಡಿದ್ದ ಆ ಕಾರ್ಯಕ್ರಮ ಎಷ್ಟು ವಿಮರ್ಶಾತ್ಮಕವಾಗಿತ್ತು ಎಂದರೆ, ಅವರ ಶಿಷ್ಯರು ತಮ್ಮ ಗುರುವಿನ ಜತೆ ಕೋರ್ಟ್ಮಾರ್ಶಲ್ ನಡೆಸುವವರ ಹಾಗೆ ಪ್ರಶ್ನೆ ಕೇಳುತ್ತಿದ್ದರು. ಸೇನರು ಆ ಕಟುತರ ಪ್ರಶ್ನೆಗಳಿಗೆಲ್ಲ ಪ್ರಾಮಾಣಿಕವಾಗಿ ದ್ವಂದ್ವವಿಲ್ಲದೆ ಉತ್ತರಿಸುತ್ತಿದ್ದರು. ಹಿರಿಯರ ತಲೆಗೆ ಅಭಿನಂದನ ಗ್ರಂಥಗಳ ಸರಮಾಲೆಯನ್ನು ತಂದು ಕಟ್ಟಿ, ಎಗ್ಗಿಲದೆ ಹೊಗಳಿ ವೈಭವೀಕರಿಸುವ ಪದ್ಧತಿಯಿರುವ ಕರ್ನಾಟಕದಲ್ಲಿ, ಈ ಪರಿಯ ನಿಷ್ಠುರತೆ ಕಲ್ಪಿಸಿಕೊಳ್ಳುವುದೇ ಕಷ್ಟ.

ತೋರುಗಾಣಿಕೆಯನ್ನು ಸದಾ ನಿರಾಕರಿಸುವ ಪ್ರಭಾಕರ ಅವರಲ್ಲಿ, ಅವರ ಖಂಡಿತವಾದಿ ನಿಲುವಿಗೆ ಅಷ್ಟೊಂದು ತಾಳೆಯಾಗದ ಇನ್ನೊಂದು ಮುಖವಿದೆ. ಅದೆಂದರೆ, ಜೀವನಪ್ರೀತಿಯ ಸಂಕೇತದಂತಿರುವ ತಮಾಶೆ ಮತ್ತು ಪೋಲಿತನ. ಈ ತಮಾಶೆಯ ಗುಣ ಅದ್ಭುತ ನಾಟಕೀಯ ಶೈಲಿಯಾಗಿ ಅವರ ಕಥೆ ಕಾದಂಬರಿಗಳಲ್ಲೆಲ್ಲ ಆವರಿಸಿಕೊಂಡಿದೆ. ತಮಗೆ ಪಾಠ ಹೇಳಿದ ಗುರುಗಳ ವೈಯಕ್ತಿಕ ಬದುಕಿನಲ್ಲಿದ್ದ ಸನಾತನವಾದ ಮತ್ತು ತರಗತಿಗಳಲ್ಲಿ ಕನ್ನಡ ಬಳಸದ ಅವರ ಇಂಗ್ಲಿಷಿನ ವ್ಯಾಮೋಹ ಕುರಿತಂತೆ, ಅವರಲ್ಲಿ ಸ್ವಾರಸ್ಯಕರ ಮಾಹಿತಿಗಳಿವೆ. ಪ್ರಭಾಕರ ಅವರು ಆಪ್ತರ ಎದುರು ತಾವು ಬರೆದಿರುವ ಅಪ್ರಕಟಿತ ಪೋಲಿ ಪದ್ಯಗಳನ್ನು ವಾಚಿಸುವುದುಂಟು. ಬಹುಶಃ ಇದು ಅವರ ಗೆಳೆಯರಾಗಿದ್ದ ಎಚ್.ಎಸ್. ಬಿಳಿಗಿರಿಯವರ ಸಹವಾಸ ಫಲವಿರಬೇಕು.

ಒಂದೇ ವ್ಯಕ್ತಿತ್ವದಲ್ಲಿ ಒಟ್ಟಿಗೇ ಇರಲು ಕಷ್ಟವೆನಿಸಬಹುದಾದ ಇನ್ನೂ ಅನೇಕ ಸಂಗತಿಗಳು ಅವರಲ್ಲಿ ಸಹಜವಾಗಿ ನಿರಾಳವಾಗಿ ಇವೆ. ಉದಾ.ಗೆ, ಬಹುಭಾಷಿಕರಾದ ಅವರ ಮನೆಮಾತು ತಮಿಳುಗನ್ನಡ; ಬರವಣಿಗೆ ಕನ್ನಡ ಮತ್ತು ಇಂಗ್ಲೀಶಿನಲ್ಲಿ; ಸಂಸ್ಕೃತ ಅಸ್ಸಾಮಿ ಬಂಗಾಳಿ ಭಾಷೆಗಳಲ್ಲಿ ದೊಡ್ಡ ವಿದ್ವತ್ತು. (ಅವರ ಅಸ್ಸಾಮಿ ಬಂಗಾಳಿ ತಿಳಿವಳಿಕೆಯಿಂದ ಕನ್ನಡಕ್ಕೆ ಪ್ರಯೋಜನವಿನ್ನೂ ಆಗಿಲ್ಲ). ಪಂಪ ಅವರ ಇಷ್ಟದ ಕವಿ. ಮೂಲತಃ ಇಂಗ್ಲೀಶ್ ಸಾಹಿತ್ಯದ ವಿದ್ಯಾರ್ಥಿಯಾದರೂ ಸಾಹಿತ್ಯಕ್ಕಿಂತ ಹೆಚ್ಚಾಗಿ ಅಂತರಾಷ್ಟ್ರೀಯ ರಾಷ್ಟ್ರೀಯ ರಾಜಕಾರಣದ ಮೇಲೆ ಹೆಚ್ಚು ಬರೆವಣಿಗೆ. ಅದರಲ್ಲೂ ಈಶಾನ್ಯ ಭಾರತದ ರಾಜಕಾರಣ ಭಾಷೆ ಧರ್ಮ ಸಂಸ್ಕೃತಿ ಕುರಿತ ಅವರ ತಿಳಿವಳಿಕೆ ಅಪರೂಪದ್ದು. ಇವನ್ನೆಲ್ಲ ಒಟ್ಟಿಗೆ ಹೇಗೆ ಕಲ್ಪಿಸಿಕೊಳ್ಳುವುದು? ಪ್ರಭಾಕರ ತಮ್ಮ ಕಾದಂಬರಿಯ ಒಂದು ಪಾತ್ರದ ಹಾಗೇ ಬದುಕಿದ್ದಾರೆ.

ಅವರು ಈಚೆಗೆ ಮಾತಾಡುತ್ತ ಕೊಂಚ ದಣಿದ ದನಿಯಲ್ಲಿ “ಸ್ವಾಮಿ, ಕರ್ನಾಟಕ ನನಗೆ ಸಾಕಾಗಿದೆ. ಗೌಹಾಟಿಗೆ ಹೋಗಬೇಕು ಅನಿಸುತ್ತಿದೆ’ ಎಂದು ಗೊಣಗಿದರು. “ಹೋಗಿ. ಆದರೆ ಮತ್ತೆಬನ್ನಿ’’ ಎಂದೆ. ಅವರಲ್ಲಿ ಕೋಲಾರ-ಗೌಹಾತಿಗಳ ನಡುವೆ ವಿಚಿತ್ರವಾದ ಆಕರ್ಷಣೆ ವಿಕರ್ಷಣೆಯಿದೆ. ಇದು ಬಹುಕಾಲ ಬೇರೆಡೆ ಬೆಳೆದ ಮರ ತನ್ನ ಮೂಲನೆಲಕ್ಕೆ ಬಂದು ನಾಟಿಗೊಂಡರೆ ಬೇರೂರುವ ಕಷ್ಟ. ಮರಳಿ ಹುಟ್ಟಿದೂರಿಗೆ ಬರುವಿಕೆ ಬಾಲ್ಯದ ನೆನಪುಗಳನ್ನು ಎಚ್ಚರಿಸಿ ಸುಖ ಕೊಡುತ್ತದೆ; ಆದರೆ ಹೊಚ್ಚ ಹೊಸತೆೆನಿಸುವಷ್ಟು ಬದಲಾಗಿರುವ ಪರಿಸರವು, ಕಾಡುವ ಏಕಾಂಗಿತನವನ್ನೂ ತಂದಿಡುತ್ತದೆ. ಯಾರ ಮರುಕವನ್ನೂ ಬಯಸದೆ ಏಕಾಂತದಲ್ಲಿ ಘನತೆಯಿಂದ ಕೊನೆಯ ದಿನಗಳನ್ನು ಕಳೆಯ ಬಯಸುವ ಇಂತಹ ಹಠಮಾರಿ ಜೀವಗಳು, ಒಳಗೇ ಮೃದ್ವಂಗಿಗಳಾಗಿ ಆಪ್ತಸಂಗಾತಕ್ಕೆ ಹಾತೊರೆಯುತ್ತಿರುತ್ತವೆ.

ಆ ಸಂಗಾತದ ಸ್ವರೂಪ ಎಂತಹುದು ಎಂದು ಸ್ಪಷ್ಟವಾಗುವುದಿಲ್ಲ. ನಾನು ‘ಕಾಮರೂಪಕ್ಕೆ ಯಾವಾಗ ಹೋಗುತ್ತೀರಿ’ ಎಂದು ಕೇಳಿದೆ: ‘ಆದಿಮದ 50ನೇ ಬೆಳುದಿಂಗಳ ಕಾರ್ಯಕ್ರಮ ಮುಗಿಸಿಕೊಂಡು’ ಎಂದರು.
ಪ್ರತಿಯೊಬ್ಬರಿಗೂ ಬಾಳಿನಲ್ಲಿ ಬಹುರೂಪಧಾರಣೆ ಮಾಡಬೇಕಾದ ಒತ್ತಡಗಳು ಎದುರಾಗಬಹುದು. ಆದರೆ ಈ ರೂಪಧಾರಣೆಗೆ ಕಾರಣ, ನಮ್ಮ ಇಚ್ಛಾನಿಚ್ಛೆಗಳು ಮಾತ್ರವಲ್ಲ, ಬಾಳಿನ ಅನೂಹ್ಯ ಒತ್ತಡಗಳು ಸಹ. ಈ ಒತ್ತಡಗಳು ಬರೆಹ ಇಲ್ಲವೇ ಮಾತಿನ ವ್ಯಾಖ್ಯಾನಕ್ಕೆ ಕೆಲವೊಮ್ಮೆ ನಿಲುಕುವಂತೆ ಇರುವುದಿಲ್ಲ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending