ದಿನದ ಸುದ್ದಿ
ಅಮೇರಿಕಾದ ಅಧ್ಯಕ್ಷರಾಗಿ ಬಿಡೆನ್ ಪ್ರಮಾಣವಚನ ಸ್ವೀಕರಿಸುತ್ತಾರೋ..? ಟ್ರಂಪ್ ಇನ್ನೊಂದು ಕೆಟ್ಟ ಪರಂಪರೆಯನ್ನು ಹುಟ್ಟು ಹಾಕುತ್ತಾರೋ..?
- ಅಲ್ಮೆಡಾ ಗ್ಲಾಡ್ಸನ್
ಅಮೇರಿಕಾದ ಅಧ್ಯಕ್ಷೀಯ ಚುನಾವಣೆಯ ಫಲಿತಾಂಶಕ್ಕೆ ಕೊನೆಗೂ ಓರ್ವ ಖಚಿತ ವಿನ್ನರ್ ಅನ್ನು ಕೊಡುವ ಮಟ್ಟಕ್ಕೆ ಬಂದು ನಿಂತಿದೆ. ಡೆಮೋಕ್ರಾಟಿಕ್ ಪಕ್ಷದ ಜೋ ಬೈಡನ್ ವಿಶ್ವದ ಅತೀ ಪುರಾತನ ಪ್ರಜಾಪ್ರಭುತ್ವದ 46 ನೇ ಅಧ್ಯಕ್ಷರಾಗುವುದು ಖಚಿತವಾದಂತಿದೆ.
ಬೈಡನ್ ಅವರನ್ನು ಅಧಿಕೃತವಾಗಿ ವಿನ್ನರ್ ಎಂದು ಘೋಷಿಸಿದರೂ, ಪ್ರಸಕ್ತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸುಲಭದಲ್ಲಿ ಸೋಲನ್ನುಪ್ಪುತ್ತಾರೆಂದು ನನಗನಿಸುವುದಿಲ್ಲ. ಹೇಗೂ ಅಮೇರಿಕಾದ ಪದ್ಧತಿಯಂತೆ ಜೋ ಬೈಡನ್ ಅಧಿಕಾರ ಸ್ವೀಕರಿಸುವುದು ಜನವರಿ ಎರಡನೆಯ ವಾರದಲ್ಲಿ. ಅಷ್ಟರವರೆಗೆ ಟ್ರಂಪಾತಿಗಳು ಏನೆಲ್ಲಾ ಡ್ರಾಮಾ ಮಾಡುತ್ತಾರೋ ಎಂದು ಕಾದುನೋಡಬೇಕು.
ಮೂರ್ನಾಲ್ಕು ರಾಜ್ಯಗಳಲ್ಲಿ ಅವರು ಈಗಾಗಲೇ ಸುಪ್ರೀಂ ಕೋರ್ಟ್ ಮೊರೆಹೋಗಿದ್ದಾರೆ, ಅವರಿಗೆ ಒಮ್ಮೆ ಲೀಡ್ ಸಿಕ್ಕ ನಂತರ ಉಳಿದ ಮತಗಳ ಎಣಿಕೆ ಆಗಬಾರದಿತ್ತೆಂದು ಹೇಳಿ. ಇದೆಂಥಾ ಹುಚ್ಚುತನ ಎಂದು ಹುಬ್ಬೇರಿಸಬೇಡಿ. ಟ್ರಂಪ್ ಇದಕ್ಕಿಂತ ನೀಚ ಮಟ್ಟಕ್ಕಿಳಿಯಬಲ್ಲರೆಂದು ನಾಲ್ಕು ವರುಷಗಳಲ್ಲಿ ನೋಡಿಯಾಗಿದೆ.
ಅಷ್ಟಕ್ಕೂ ಆತನಿಗೆ ಮುಳುವಾಗಿರುವುದು ಕೊರೋನಾ ಹಾಗೂ ಈ ಕೊರೋನಾದ ಕಾರಣದಿಂದ ಆಗಿರುವ ಅಂಚೆ ಮತದಾನ. ಟ್ರಂಪು ಹಾಗು ಆತನ ಬೆಂಬಲಿಗರು ಕೊರೋನಾ-ಗಿರೋನಾ ಏನೂ ಇಲ್ಲ, ಎಲ್ಲಾ ಸುಳ್ಳು (ನಮ್ಮಲ್ಲೂ ಅನಂತ್ಮಾಣಿ ಹಾಗೆಯೇ ಹೇಳಿ ಕೊನೆಗೆ ಕ್ವಾರಂಟೀನ್ ಆಗಿದ್ದು) ಎಂದು ಹೇಳುತ್ತಲೇ ಬಂದಿದ್ದರು. ಹಾಗಾಗಿ ಟ್ರಂಪ್ ಬೆಂಬಲಿಗರಲ್ಲಿ ಹೆಚ್ಚಿನವರು ಮತಗಟ್ಟೆಗೆ ಹೋಗಿ ತಮ್ಮ ಮತ ಹಾಕಿ ಬಂದಿದ್ದರು.
ಆದರೆ ಬೈಡನ್ ಹಾಗೂ ಡೆಮೋಕ್ರಾಟಿಕ್ ಪಕ್ಷ ಕೊರೋನಾದ ಬಗ್ಗೆ ಜಾಗ್ರತೆ ವಹಿಸಬೇಕು, ಕೊರೋನಾದಿಂದ ಅಮೇರಿಕಾಕ್ಕೆ ಬಲುದೊಡ್ಡ ಹೊಡೆತ ಬೀಳಲಿದೆ ಎಂದು ಹೇಳುತ್ತಾ ಬಂದವರು. ಹಾಗಾಗಿ ಲಾಕ್ಡೌನ್ ಇಲ್ಲದಿದ್ದರೂ ಡೆಮೋಕ್ರಾಟಿಕ್ ಪಕ್ಷದ ಹೆಚ್ಚಿನ ಬೆಂಬಲಿಗರು ಅಂಚೆ ಮತದಾನಕ್ಕೆ ಮೊರೆಹೋಗಿದ್ದರು. ಪೆನ್ಸಿಲೇನ್ವಿಯಾ ಒಂದರಲ್ಲೇ ಟ್ರಂಪ್ಗೆ ಆರು ಲಕ್ಷ ಮತಗಳ ಲೀಡ್ ಇರುವಾಗ, ಸುಮಾರು 15 ಲಕ್ಷ ಮತಗಳ ಎಣಿಕೆ ಬಾಕಿಯಿದ್ದು, ಇದರಲ್ಲಿ ಹೆಚ್ಚಿನವು ಬೈಡನ್ ಬೆಂಬಲಿಗರ ಮತಗಳೆಂದು ಹೇಳಲಾಗುತಿತ್ತು.
ಇವತ್ತು ಮತ ಎಣಿಕೆ ಮುಗಿದಾಗ ಬೈಡನ್ ತನ್ನ ಸ್ವಂತ ರಾಜ್ಯವಾದ ಪೆನ್ಸಿಲೇನ್ವಿಯಾದಲ್ಲಿ ಟ್ರಂಪ್ಗಿಂತ ಮೂವತ್ತು ಸಾವಿರಕ್ಕಿಂತ ಹೆಚ್ಚು ಮತ ಪಡೆದು ಅಲ್ಲಿನ ಇಪ್ಪತ್ತೂ ಎಲೆಕ್ಟೋರಲ್ ಸೀಟುಗಳನ್ನು ಪಡೆದುಕೊಂಡಿದ್ದಾರೆ. ಜಾರ್ಜಿಯಾ, ಅರಿಝೋನಾ, ನೆವಾಡಾ, ಮಿಚಿಗನ್, ವಿಸ್ಕೋನ್ಸಿನ್ ಮುಂತಾದೆಡೆಯೂ ಇದೇ ಕಥೆ. ಹಾಗಾಗಿಯೇ ಟ್ರಂಪ್ ಒಮ್ಮೆ ಸ್ವಲ್ಪ ಅಂತರದ ಲೀಡ್ ಪಡೆಯುತ್ತಿದ್ದಂತೆ ಮತ ಎಣಿಕೆಯನ್ನು ನಿಲ್ಲಿಸಬೇಕೆಂದು ಕೇಳಿಕೊಂಡು ಸುಪ್ರೀಂ ಕೋರ್ಟ್ ಮೆಟ್ಟಲೇರಿದ್ದು.
ಅಮೇರಿಕಾದ ಚುನಾವಣಾ ಪ್ರಕ್ರಿಯೆಯಲ್ಲಿ ಯಾವುದೇ ರಾಜ್ಯದಲ್ಲಿ ಮತ ಎಣಿಕೆಯ ಕೊನೆಗೆ 51% ಅಥವಾ ತನ್ನ ಎದುರಾಳಿಗಿಂತ ಹೆಚ್ಚು ಮತ ಪಡೆದ ವ್ಯಕ್ತಿ/ಪಕ್ಷ ಆ ರಾಜ್ಯದಲ್ಲಿರುವ ಎಲ್ಲಾ ಸೀಟುಗಳನ್ನು ತನ್ನದಾಗಿಸಿಕೊಳ್ಳುತ್ತದೆ. ಉದಾಹರಣೆಗೆ ಪೆನ್ಸಿಲೇನ್ವಿಯಾದಲ್ಲಿ 20 ಸೀಟುಗಳಿವೆ. ಬೈಡನ್ ಅಲ್ಲಿ 3,345,906 ಮತ ಪಡೆದರೆ, ಟ್ರಂಪ್ 3,311,448 ಮತ ಪಡೆದಿದ್ದರೆ.
ಕೇವಲ .4% ವ್ಯತ್ಯಾಸ. ಹಾಗಾಗಿ ನಿಮ್ಮ ಪ್ರಕಾರ ಟ್ರಂಪ್ ಒಂಬತ್ತು ಸೀಟು ಗೆದ್ದು ಬೈಡನ್ ಹನ್ನೊಂದು ಗೆದ್ದಿದ್ದಾರೆಂದರೆ, ಅದು ತಪ್ಪು. ಬೈಡನ್ಗೆ ಜಾಸ್ತಿ ಮತ ಬಂದಿರುವುದರಿಂದ ಅಲ್ಲಿನ 20 ಸೀಟುಗಳೂ ಬೈಡನ್ ಪಾಲಾಗಿವೆ. ಹಾಗಾಗಿಯೇ ಎರಡು ದಿನಗಳಿಂದ ಬೈಡನ್ 264 ಸೀಟುಗಳಿಂದ ಮುನ್ನಡೆಯಲ್ಲಿದ್ದಾರೆಂದು ತೋರಿಸುತ್ತಿದ್ದ ಫಲಿತಾಂಶ, ಇವತ್ತು ಪೆನ್ಸಿಲೇನ್ವಿಯಾದ ಮತ ಎಣಿಕೆ ಕೊನೆಗೊಳ್ಳುತ್ತಿದ್ದಂತೆ ಬೈಡನ್-284 ಎಂದು ತೋರಿಸುತ್ತಿದೆ, ಅಂದರೆ ಪೆನ್ಸಿಲೇನ್ವಿಯಾದ ಎಲ್ಲಾ ಇಪ್ಪತ್ತು ಸೀಟುಗಳು ಡೆಮೋಕ್ರಟಿಕ್ ಪಕ್ಷದ ಪಾಲಾಗಿವೆ.
ಆದರೆ ಈಗಲೇ ಹೇಳಿದಂತೆ ಟ್ರಂಪ್ ಬಹಳ ಸುಲಭದಲ್ಲಿ ಸೋಲುಪ್ಪುವ ಮನುಷ್ಯ ಅಲ್ಲ. ಕೋರ್ಟ್ ನಲ್ಲಿ ಏನಾಗುತ್ತೋ ನೋಡೋಣ. 2000 ನೇ ಇಸವಿಯಲ್ಲಿ ಜಾರ್ಜ್ ಬುಶ್ ಜೂನಿಯರ್ ಅಲ್ ಗೋರ್ ಎದುರು ಜಯಗಳಿಸಿದ್ದು ಹೀಗೆಯೇ. ಜಿದ್ದಾಜಿದ್ದಿನ ಚುನಾವಣೆಯಲ್ಲಿ ಡೆಮೋಕ್ರಾಟಿಕ್ ಪಕ್ಷದ ಅಲ್ ಗೋರ್ ಹಾಗೂ ರಿಪಬ್ಲಿಕ್ ಜಾರ್ಜ್ ಬುಶ್ ನಡುವೆ ಬಿರುಸಿನ ಪೈಪೋಟಿ ಇದ್ದರೂ, ಮೊದಲನೆಯ ದಿನದ ಎಣಿಕೆ ಕೊನೆಗೊಂಡಾಗ ಅಲ್ ಗೋರ್ ಬಳಿ 255 ಎಲೆಕ್ಟೋರಲ್ ಸೀಟಿದ್ದು, ಬುಶ್ ಬಳಿ 246 ಸೀಟಿತ್ತು. 5 ಸೀಟಿದ್ದ ನ್ಯೂ ಮೆಕ್ಸಿಕೋ, 7 ಸೀಟಿದ್ದ ಓರೆಗಾನ್ ಹಾಗೂ 29 ಸೀಟುಗಳ ಫ್ಲೊರೀಡಾದ ಫಲಿತಾಂಶ ಬಾಕಿಯಿತ್ತು. ಮರುದಿನ ಬಂದ ಫಲಿತಾಂಶದಲ್ಲಿ ಅಲ್ ಗೋರ್ ನ್ಯೂ ಮೆಕ್ಸಿಕೋ ಹಾಗೂ ಓರೆಗಾನ್ ಎರಡನ್ನೂ ಗೆದ್ದು 267 ಸೀಟುಗಳನ್ನು ಪಡೆದು, ಬಹುಮತಕ್ಕೆ ಕೇವಲ ಮೂರು ಸೀಟುಗಳಷ್ಟೇ ದೂರದಲ್ಲಿದ್ದರು.
ಹಾಗಾಗಿ 29 ಸೀಟುಗಳಿದ್ದ ಫ್ಲೊರೀಡಾದ ಫಲಿತಾಂಶವೇ ಹೊಸ ಅಧ್ಯಕ್ಷ ಯಾರೆಂದು ನಿರ್ಧರಿಸಲಿದೆಯೆಂದು ಖಚಿತವಾಗಿತ್ತು. ಎರಡನೆಯ ದಿನದ ಎಣಿಕೆ ಮುಗಿದಾಗ ಬುಶ್ ಒಂದು ಸಾವಿರ ಚಿಲ್ಲರೆ ಮತಗಳಿಂದ ಮುನ್ನಡೆಯಲ್ಲಿದ್ದರು. ಆ ಹೊತ್ತಿಗೆ ಜಾರ್ಜ್ ಬುಶ್ನ ಸಹೋದರ ಜೆಬ್ ಫ್ಲೊರೀಡಾದ ರಾಜ್ಯಪಾಲ. ಐವತ್ತು ಲಕ್ಷಕ್ಕಿಂತ ಹೆಚ್ಚಿನ ಮತ ಚಲಾವಣೆಯಾದ ರಾಜ್ಯದಲ್ಲಿ ಮುನ್ನಡೆ ಕೇವಲ ಒಂದು ಸಾವಿರ ಚಿಲ್ಲರೆಯಾಗಿದ್ದರಿಂದ ಮರು ಎಣಿಕೆಗೆ ಆದೇಶ ಬಂತು.
ಇದನ್ನು ಪ್ರಶ್ನಿಸಿ ಬುಶ್ ಕೋರ್ಟ್ ಮೆಟ್ಟಲೇರಿದರು. ಗೋರ್ ಕೂಡಾ ಕೋರ್ಟ್ ಕದ ತಟ್ಟಿದರು. ಸುಮಾರು ಒಂದು ತಿಂಗಳು ನಡೆದ ಕಾನೂನು ಪ್ರಕ್ರಿಯೆ, ಮರು ಎಣಿಕೆಯಲ್ಲಿ ಕೊನೆಗೂ ಸುಪ್ರೀಂ ಕೋರ್ಟ್ ಬುಶ್ ಅವರನ್ನು 537 ಮತಗಳಿಂದ ವಿಜಯಿ ಎಂದು ಘೋಷಿಸಿ, ಫ್ಲೊರೀಡಾದ ಇಪ್ಪತ್ತೊಂಬತ್ತು ಸೀಟುಗಳನ್ನು ಅವರ ಪಕ್ಷಕ್ಕೆ ಕೊಟ್ಟಿತು. ಹೀಗೆ ಬುಶ್ ಅಧ್ಯಕ್ಷರಾದರು.
ಅಂದು ಮರು ಎಣಿಕೆಯಲ್ಲಿ, ಮತ ಎಣಿಕೆಯಲ್ಲಿ ತೀವ್ರವಾದ ಹಸ್ತಕ್ಷೇಪ ಹಾಗೂ ಮೋಸ ನಡೆದಿದೆಯೆಂದು ಜನರ ಆರೋಪವಾಗಿತ್ತು. ಅಲ್ಲಿನ ರಾಜ್ಯಪಾಲರಾಗಿದ್ದ ಬುಶ್ ಸಹೋದರ ಹಾಗೂ ಸುಪ್ರೀಂ ಕೋರ್ಟ್ ನಲ್ಲಿದ್ದ ರಿಪಬ್ಲಿಕನ್ ಪಕ್ಷದ ನ್ಯಾಯಮೂರ್ತಿಗಳು ಕಳ್ಳ ಮಾರ್ಗದಿಂದ ಬುಶ್ರನ್ನು ಅಧ್ಯಕ್ಷರನ್ನಾಗಿ ಮಾಡಿದರು ಎಂದು ಇವತ್ತಿಗೂ ಅಮೇರಿಕಾ ಹೇಳುತ್ತಿದೆ.
ಈವಾಗ ಟ್ರಂಪ್ ಅಂಥಹದ್ದೇ ದುಸ್ಸಾಹಕ್ಕೆ ಕೈಹಾಕಿದ್ದಾರೆ. ಏನಾಗುತ್ತೋ ನೋಡಬೇಕು. ಸದ್ಯ ಅಮೇರಿಕದ ಸುಪ್ರೀಂ ಕೋರ್ಟ್ನಲ್ಲಿ ನ್ಯಾಯಮೂರ್ತಿಗಳ ಬಲಾಬಲ 6-3 ರಿಂದ ರಿಪಬ್ಲಿಕ ಪಕ್ಷದ ಪರವಾಗಿದೆಯೆಂದು ಹೇಳುತ್ತಿದ್ದಾರೆ. ಹಾಗಾಗಿ ಇವತ್ತು ವಿಜಯಿಯೆಂದು ಘೋಷಿಸಲ್ಪಟ್ಟಿರುವ ಜೋ ಬೈಡನ್ ಜನವರಿ ಎರಡನೆಯ ವಾರದಲ್ಲಿ ಅಮೇರಿಕಾದ ಅಧ್ಯಕ್ಷರಾಗಿ ಪ್ರಮಾಣವಚನ ಸ್ವೀಕರಿಸುತ್ತಾರೋ ಇಲ್ಲ ಅದರ ಮೊದಲು ಟ್ರಂಪ್ ಇನ್ನೊಂದು ಕೆಟ್ಟ ಪರಂಪರೆಯನ್ನು ಹುಟ್ಟು ಹಾಕುತ್ತಾರೋ, ಕಾದು ನೋಡಬೇಕು.
I WON THIS ELECTION, BY A LOT!
— Donald J. Trump (@realDonaldTrump) November 7, 2020
America, I’m honored that you have chosen me to lead our great country.
The work ahead of us will be hard, but I promise you this: I will be a President for all Americans — whether you voted for me or not.
I will keep the faith that you have placed in me. pic.twitter.com/moA9qhmjn8
— Joe Biden (@JoeBiden) November 7, 2020
ಸುದ್ದಿದಿನ.ಕಾಂ|ವಾಟ್ಸಾಪ್|9980346243
ದಿನದ ಸುದ್ದಿ
ಸಂವಿಧಾನಕ್ಕೆ ಅಪಾಯವಾದರೆ, ಬಡವರ, ಶ್ರಮಿಕರ ಭವಿಷ್ಯಕ್ಕೆ ಅಪಾಯವಾದಂತೆ : ಸಿಎಂ ಸಿದ್ದರಾಮಯ್ಯ
ಸುದ್ದಿದಿನ,ಮಡಿಕೇರಿ : ದೇಶದ ಸಂವಿಧಾನಕ್ಕೆ ಅಪಾಯವಾದರೆ ಈ ದೇಶದ ಮಹಿಳೆಯರ, ಬಡವರ, ಮಧ್ಯಮ ವರ್ಗದವರ, ಶ್ರಮಿಕರ, ಬದುಕು-ಭವಿಷ್ಯಕ್ಕೆ ಅಪಾಯ ಎಂದರ್ಥ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಮಡಿಕೇರಿಯಲ್ಲಿ ನಡೆದ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ಈ ಲೋಕಸಭಾ ಚುನಾವಣೆ ನಮಗೊಂದು ಅವಕಾಶ. ಈ ಬಾರಿ ಬಿಜೆಪಿಯನ್ನು ಸೋಲಿಸಿ ಕಾಂಗ್ರೆಸ್ ಗೆಲ್ಲಿಸುವ ಮೂಲಕ ಪ್ರಜಾತಂತ್ರ ಉಳಿಸಬೇಕು ಎಂದು ಕರೆ ನೀಡಿದರು.
ಬಳಿಕ ತುಮಕೂರಿನಲ್ಲಿ ಮಾತನಾಡಿದ ಅವರು, ರಾಜ್ಯದ ಹಿತಾಸಕ್ತಿ ಕಾಪಾಡುವಲ್ಲಿ ಕಳೆದ ಲೋಕಸಭಾ ಚುನಾವಣೆಯಲ್ಲಿ ಆಯ್ಕೆಯಾಗಿದ್ದ ಬಿಜೆಪಿ ಸಂಸದರು ವಿಫಲರಾಗಿದ್ದಾರೆ ಎಂದು ಮುಖ್ಯಮಂತ್ರಿ ಆರೋಪಿಸಿದರು.
ಮಹಿಳೆಯರ ಅಭ್ಯುದಯಕ್ಕಾಗಿ ಪಂಚ ಗ್ಯಾರಂಟಿ ಯೋಜನೆಗಳನ್ನು ನುಡಿದಂತೆ ಜಾರಿಗೆ ತಂದಿದ್ದೇವೆ. ಇದರಿಂದಾಗಿ ಮಹಿಳೆಯರ ಜೀವನದಲ್ಲಿ ಸುಧಾರಣೆ ಕಂಡಿದೆ, ಈ ಯೋಜನೆಯ ಫಲಾನುಭವಿಗಳ ಬಗ್ಗೆ ಟೀಕಿಸುವುದು ಸರಿಯಲ್ಲ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಮಡಿಕೇರಿಯಲ್ಲಿ ನಡೆದ ಜನಧ್ವನಿ-2 ಬೃಹತ್ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದೆ.
ಸಂವಿಧಾನಕ್ಕೆ ಅಪಾಯ ಎಂದರೆ ದೇಶದ ಮಹಿಳೆಯರು, ಬಡವರು, ಮಧ್ಯಮ ವರ್ಗದವರು, ಶೂದ್ರರು, ಶ್ರಮಿಕರ ಬದುಕು-ಭವಿಷ್ಯಕ್ಕೆ ಅಪಾಯ ಎಂದರ್ಥ.
ಭಾರತದಲ್ಲಿ ಪ್ರಜಾತಂತ್ರ ಅಪಾಯದಲ್ಲಿದೆ. ಇದನ್ನು ಉಳಿಸುವ ಅನಿವಾರ್ಯತೆ ನಮ್ಮೆಲ್ಲರ ಮುಂದಿದೆ. ಈ ಲೋಕಸಭಾ ಚುನಾವಣೆ ನಮಗೊಂದು… pic.twitter.com/UapeRxBcZP
— Siddaramaiah (@siddaramaiah) April 14, 2024
ಸುದ್ದಿದಿನ.ಕಾಂ|ವಾಟ್ಸಾಪ್|9980346243
ದಿನದ ಸುದ್ದಿ
ದಾವಣಗೆರೆ | ದ್ವಿತೀಯ ಪಿ.ಯು.ಸಿ ಪರೀಕ್ಷೆ; ಜಿಲ್ಲೆಗೆ ಶೇ 80.96 ರಷ್ಟು ಫಲಿತಾಂಶ
ಸುದ್ದಿದಿನ,ದಾವಣಗೆರೆ : 2024 ರ ಮಾರ್ಚ್ನಲ್ಲಿ ನಡೆದ ದ್ವಿತೀಯ ಪಿ.ಯು.ಸಿ. ಫಲಿತಾಂಶ ಪ್ರಕಟವಾಗಿದ್ದು ಜಿಲ್ಲೆಗೆ ಶೇ 80.96 ರಷ್ಟು ಫಲಿತಾಂಶ ಬಂದಿದ್ದು ಶೇ 74.27 ಗಂಡು, ಶೇ 82.01 ರಷ್ಟು ಹೆಣ್ಣು ಮಕ್ಕಳು ಉತ್ತೀರ್ಣರಾಗಿದ್ದಾರೆ ಎಂದು ಜಿಲ್ಲಾಧಿಕಾರಿ ಡಾ; ವೆಂಕಟೇಶ್ ಎಂ.ವಿ ತಿಳಿಸಿದರು.
ಅವರು ಬುಧವಾರ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಚುನಾವಣಾ ಸಂಬಂಧ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು. ಏಪ್ರಿಲ್ 10 ರಂದು ಫಲಿತಾಂಶ ಪ್ರಕಟವಾಗಿದ್ದು ಹೆಚ್ಚಿನ ವಿವರಗಳು ಬರಬೇಕಾಗಿದೆ. ಈ ವರ್ಷ ಜಿಲ್ಲೆಯಲ್ಲಿ ದ್ವಿತೀಯ ಪಿ.ಯು.ಸಿ ಪರೀಕ್ಷೆಯನ್ನು 19644 ರೆಗ್ಯುಲರ್, 422 ಖಾಸಗಿ ಸೇರಿ 20066 ವಿದ್ಯಾರ್ಥಿಗಳು ತೆಗೆದುಕೊಂಡಿದ್ದರು. ಇದರಲ್ಲಿ 15904 ವಿದ್ಯಾರ್ಥಿಗಳು ಉತ್ತೀರ್ಣರಾಗುವ ಮೂಲಕ ಶೇ 80.96 ರಷ್ಟು ಫಲಿತಾಂಶ ಪಡೆದಿದ್ದಾರೆ.
ಕಳೆದ ವರ್ಷ ಶೇ 75.72 ರಷ್ಟು ಫಲಿತಾಂಶ ಬಂದಿತ್ತು, ಈ ವರ್ಷ ಶೇ 5.24 ರಷ್ಟು ಫಲಿತಾಂಶ ಹೆಚ್ಚಳವಾಗಿದೆ. ಜಿಲ್ಲೆಗೆ ಟಾಪ್ ಬಂದವರಲ್ಲಿ ಕಲಾ ವಿಭಾಗದಲ್ಲಿ ಹರಿಹರದ ಶ್ರೀಮತಿ ಗಿರಿಯಮ್ಮ ಕಾಂತಪ್ಪ ಮಹಿಳಾ ಪದವಿ ಪೂರ್ವ ಕಾಲೇಜಿನ ಹೀನಬಾನು ಪಿ.ಕೆ. 591 ಅಂಕ ಪಡೆದು ಶೇ 98.5, ವಾಣಿಜ್ಯ; ದಾವಣಗೆರೆ ತಾ; ಗೋಪನಾಳು ಸರ್ಕಾರಿ ಪದವಿ ಪೂರ್ವ ಕಾಲೇಜಿನ ರೇಷ್ಮಾ ಬಾನು 589 ಅಂಕ ಪಡೆದು ಶೇ 98.16 ರಷ್ಟು ಫಲಿತಾಂಶ ಪಡೆದು ಜಿಲ್ಲೆಗೆ ಮೊದಲಿಗರಾಗಿದ್ದಾರೆ.
ವಿಜ್ಞಾನ ವಿಭಾಗದಲ್ಲಿ ಲೋಕಿಕೆರೆ ರಸ್ತೆಯಲ್ಲಿನ ಸರ್ಎಂವಿ ಸಂಯುಕ್ತ ಪದವಿ ಪೂರ್ವ ಕಾಲೇಜಿನ ಮೊಹಮ್ಮದ್ ಸುಹೇಲ್, ಅಮೃತ ದೊಡ್ಡ ಬಸಪ್ಪನವರ್, ಅನನ್ಯ ಹೆಚ್.ಎಸ್, ಆಕಾಶ್ ಸಿ.ಪಾಟೀಲ್ ಇವರು 593 ಅಂಕ ಶೇ 98.83 ರಷ್ಟು ಸಮನಾದ ಫಲಿತಾಂಶ ಹಂಚಿಕೊಂಡಿದ್ದಾರೆ ಎಂದರು.
ವಿಭಾಗವಾರು ಫಲಿತಾಂಶ; ಕಲಾ ವಿಭಾಗದಲ್ಲಿ ಶೇ 57.83 ರಷ್ಟು ಫಲಿತಾಂಶ ಬಂದಿದ್ದು ಇದರಲ್ಲಿ ಗಂಡು ಶೇ 45, ಹೆಣ್ಣು ಶೇ 66.46 ರಷ್ಟು ಉತ್ತೀರ್ಣರಾಗಿದ್ದಾರೆ. ವಾಣಿಜ್ಯ ವಿಭಾಗದಲ್ಲಿ ಶೇ 76.22 ರಷ್ಟು ಫಲಿತಾಂಶ ಬಂದಿದ್ದು ಗಂಡು ಶೇ 65.5, ಹೆಣ್ಣು ಶೇ 80.8, ವಿಜ್ಞಾನ ವಿಭಾಗದಲ್ಲಿ ಶೇ 91.13 ರಷ್ಟು ಫಲಿತಾಂಶ ಬಂದಿದ್ದು ಗಂಡು ಶೇ 91.39 ಹಾಗೂ ಹೆಣ್ಣು ಶೇ 88.69 ರಷ್ಟು ಫಲಿತಾಂಶ ಬಂದಿದೆ.
ನಗರಕ್ಕಿಂತ ಗ್ರಾಮೀಣರ ಮೇಲುಗೈ; ಫಲಿತಾಂಶದಲ್ಲಿ ನಗರ ಪ್ರದೇಶಕ್ಕಿಂತ ಗ್ರಾಮೀಣ ವಿದ್ಯಾರ್ಥಿಗಳು ಶೇ 1.1 ರಷ್ಟು ಮೇಲುಗೈ ಸಾಧಿಸಿದ್ದಾರೆ. ಗ್ರಾಮೀಣ ಪ್ರದೇಶದಲ್ಲಿ ಶೇ 73.65 ಗಂಡು, ಶೇ 84.6 ಹೆಣ್ಣು ಉತ್ತೀರ್ಣರಾದರೆ ನಗರ ಪ್ರದೇಶದ ಒಟ್ಟು ಫಲಿತಾಂಶ ಶೇ 80.75 ರಲ್ಲಿ ಗಂಡು ಶೇ 74.41, ಹೆಣ್ಣು ಶೇ 81.37 ರಷ್ಟು ಫಲಿತಾಂಶ ಪಡೆದಿದ್ದಾರೆ.
ಶೇ 100 ರಷ್ಟು ಫಲಿತಾಂಶ ಪಡೆದ ಶಾಲೆಗಳು; ದಾವಣಗೆರೆ ಅಂಜುಂ ಪದವಿ ಪೂರ್ವ ಕಾಲೇಜು, ಲೇಬರ್ ಕಾಲೋನಿ, ಜೈನ್ ಟ್ರಿನಿಟಿ ಪದವಿ ಪೂರ್ವ ಕಾಲೇಜು, ಅನ್ಮೋಲ್ ಪದವಿ ಪೂರ್ವ ಕಾಲೇಜು, ಶ್ರೀ ಗೀತಂ ಪದವಿ ಪೂರ್ವ ಕಾಲೇಜು, ದಾವಣಗೆರೆ ಇವು ಶೇ 100 ರಷ್ಟು ಫಲಿತಾಂಶ ಪಡೆದ ಕಾಲೇಜುಗಳಾಗಿವೆ.
ಈ ವೇಳೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸುರೇಶ್ ಬಿ.ಇಟ್ನಾಳ್, ಜಿಲ್ಲಾ ರಕ್ಷಣಾಧಿಕಾರಿ ಉಮಾ ಪ್ರಶಾಂರ್, ಶಾಲಾ ಶಿಕ್ಷಣ, ಪದವಿ ಪೂರ್ವ ಇಲಾಖೆ ಉಪನಿರ್ದೇಶಕ ಕರಿಸಿದ್ದಪ್ಪ ಉಪಸ್ಥಿತರಿದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243
ದಿನದ ಸುದ್ದಿ
ಗ್ರಾಹಕರಿಂದ ಹೆಚ್ಚುವರಿಯಾಗಿ ಪೇಪರ್ ಬ್ಯಾಗ್ಗೆ ರೂ.10 ಪಡೆದ ಶಾಪಿಂಗ್ ಮಾಲ್ಗೆ ದಂಡ
ಸುದ್ದಿದಿನ ,ದಾವಣಗೆರೆ : ವಕೀಲ ವೃತ್ತಿಯಲ್ಲಿ ತೊಡಗಿಕೊಂಡಿರುವ ಆರ್. ಬಸವರಾಜ್ ಎಂಬುವವರು ದಾವಣಗೆರೆ ನಗರದ ಮ್ಯಾಕ್ಸ್ ರೀಟೈಲ್ ಅಂಗಡಿಯಲ್ಲಿ 2023 ರ ಅಕ್ಟೋಬರ್ 29 ರಂದು ರೂ.1,499 ಪಾವತಿಸಿ, ಡೆನಿವಾ ಪ್ಯಾಂಟ್ ಖರೀದಿಸಿದರು. ಈ ವೇಳೆಯಲ್ಲಿ ಇಲ್ಲಿಯೇ ಲೈಫ್ ಸ್ಟೈಲ್ ಇಂಟರ್ನ್ಯಾಷನಲ್ ವಾಣಿಜ್ಯ ಸಂಸ್ಥೆ ಪ್ಯಾಂಟ್ ಮಾರಾಟದ ವೇಳೆ ಹೆಚ್ಚುವರಿಯಾಗಿ ರೂ.10/- ಪೇಪರ್ ಬ್ಯಾಗ್ಗೆ ಪಡೆಯಲಾಯಿತು.
ಗ್ರಾಹಕರಾದ ಆರ್. ಬಸವರಾಜ್ ಇವರ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದಲ್ಲಿ ದೂರನ್ನು ದಾಖಲಿಸಿ ವಾಣಿಜ್ಯ ಸಂಸ್ಥೆ ವಿರುದ್ದ ರೂ.50,000 ಮಾನಸಿಕ ಕಿರುಕುಳ ಹಾಗೂ ದೂರು ದಾಖಲಿಸಲು ಖರ್ಚು ಮಾಡಿದ ಮೊ ರೂ.10,000 ಗಳನ್ನು ಪಾವತಿಸುವಂತೆ ದೂರನ್ನು ದಾಖಲಿಸಿದರು.
ವಾಣಿಜ್ಯ ಸಂಸ್ಥೆಗೆ ನೋಟಿಸ್ ಜಾರಿ ಮಾಡಿದ್ದು ಈ ಸಂಸ್ಥೆ ವಕೀಲರ ಮುಖಾಂತರ ಹಾಜರಾಗಿ ಬ್ಯಾಗ್ಗೆ ಹೆಚ್ಚುವರಿಯಾಗಿ ಪಡೆದ ಹಣಕ್ಕೆ ಸಮರ್ಥಿಸಿಕೊಂಡಿತ್ತು. ಆದರೆ ಗ್ರಾಹಕರ ಆಯೋಗ ಈ ಮೊದಲು ರಾಷ್ಟ್ರೀಯ ಗ್ರಾಹಕರ ಆಯೋಗ ಬಿಗ್ ಬಜಾರ್ ವಿರುದ್ಧ ಸಾಯಲ್ ದಾವ ಪ್ರಕರಣದ ನ್ಯಾಯ ನಿರ್ಣಯದ ತೀರ್ಪಿನ ಅನುಗುಣವಾಗಿ ವಾಣಿಜ್ಯ ಸಂಸ್ಥೆಗಳು ಕ್ಯಾರಿ ಬ್ಯಾಗ್ಗಳಿಗೆ ಹೆಚ್ಚಿನ ಹಣವನ್ನು ಪಡೆಯುವಂತಿಲ್ಲ ಎಂಬ ತೀರ್ಪನ್ನು ಉಲ್ಲೇಖಿಸಿ ಹೆಚ್ಚುವರಿಯಾಗಿ ರೂ.10 ಪಡೆದ ಸಂಸ್ಥೆಯ ಕ್ರಮವು ಗ್ರಾಹಕರ ಸಂರಕ್ಷಣಾ ಕಾಯ್ದೆಯ ಅಡಿಯಲ್ಲಿ ಅನುಚಿತ ವ್ಯಾಪಾರ ಪದ್ದತಿಯೆಂದು ಪರಿಗಣಿಸಿ ದಾವಣಗೆರೆ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷರಾದ ಮಹಂತೇಶ ಈರಪ್ಪ ಶಿಗ್ಲಿ, ಸದಸ್ಯರಾದ ತ್ಯಾಗರಾಜನ್ ಮತ್ತು ಮಹಿಳಾ ಸದಸ್ಯರಾದ ಶ್ರೀಮತಿ ಬಿ.ಯು. ಗೀತಾ ಇವರು ವಾಣಿಜ್ಯ ಸಂಸ್ಥೆಗೆ ರೂ.7000 ದಂಡವಿದಿಸಿ ಆದೇಶಿಸಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243