ದಿನದ ಸುದ್ದಿ
ಯಾರ ವಿರುದ್ಧ ದನಿ ಎತ್ತಬೇಕು ಸಂಸದರೇ..?
- ನಾ ದಿವಾಕರ
ಮುಂಬಯಿಯಲ್ಲಿರುವ ಡಾ ಬಿ ಆರ್ ಅಂಬೇಡ್ಕರ್ ಅವರ ರಾಜಗೃಹದ ಮೇಲೆ ಇತ್ತೀಚೆಗೆ ನಡೆದ ಆಕ್ರಮಣ ಬದಲಾಗುತ್ತಿರುವ ಭಾರತದ ಸೂಚನೆಯನ್ನು ನೀಡುತ್ತಿದೆ. ಈ ಕುರಿತು ಸ್ವಲ್ಪ ತಡವಾದರೂ ಮೌನ ಮುರಿದಿರುವ ದಲಿತ ಪ್ರತಿನಿಧಿಗಳು ತಮ್ಮ ವಿರೋಧ ವ್ಯಕ್ತಪಡಿಸುತ್ತಿದ್ದಾರೆ.
ಸಂಸದರಾದ ಸನ್ಮಾನ್ಯ ಶ್ರೀನಿವಾಸ ಪ್ರಸಾದ್ ಅವರು ಈ ದಾಳಿಯನ್ನು ಖಂಡಿಸಿದ್ದು “ ಅಂಬೇಡ್ಕರ್ ಮನೆ ಮೇಲೆ ಕಲ್ಲು ತೂರಿ ವಿಧ್ವಂಸಕ ಕೃತ್ಯ ಎಸಗಿರುವ ವಿಚಾರದಲ್ಲಿ ದಲಿತೇತರ ರಾಜಕಾರಣಿಗಳು ಮತ್ತು ಸಂಘ ಸಂಸ್ಥೆಗಳು ದನಿ ಎತ್ತದಿರುವುದು ಶೋಚನೀಯ ” (ಪ್ರವಾ 14-7-20) ಎಂದು ವಿಷಾದ ವ್ಯಕ್ತಪಡಿಸಿದ್ದಾರೆ. ದಲಿತರ ಮೇಲೆ ಯಾವುದೇ ರೀತಿಯ ದಾಳಿ ನಡೆದಾಗಲೂ ಈ ವಿಷಾದ ಇದ್ದೇ ಇರುತ್ತದೆ.
ಊನ, ಖೈರ್ಲಾಂಜಿ, ಕಂಬಾಲಪಲ್ಲಿ ನಡೆದಾಗಲೇ ಎಷ್ಟೋ ದಲಿತೇತರ ಸಂಘಟನೆಗಳು ಮೌನಕ್ಕೆ ಶರಣಾಗಿದ್ದವು. ಇಲ್ಲಿ ಯಾರು ಪ್ರತಿಭಟಿಸಬೇಕು ಎನ್ನುವುದಕ್ಕಿಂತಲೂ ಯಾವ ಶಕ್ತಿಗಳ ವಿರುದ್ಧ ದನಿ ಎತ್ತಬೇಕು ಎನ್ನುವುದು ಮುಖ್ಯವಾಗುತ್ತದೆ.
ಇದೇ ಪತ್ರಿಕಾಗೋಷ್ಠಿಯಲ್ಲಿ ಮಾನ್ಯ ಶ್ರೀನಿವಾಸ್ ಪ್ರಸಾದ್ ಅವರು ಈ ಕೃತ್ಯದ ಹಿಂದೆ ಕೆಲವು “ಕಿಡಿಗೇಡಿಗಳನ್ನು” ಗುರುತಿಸಿದ್ದಾರೆ. ಹಾಗಾಗಿ ದಲಿತ ಸಂಘಟನೆಗಳು ಪುರಾವೆ ಇಲ್ಲದೆ ಯಾರ ಮೇಲೂ ಆರೋಪ ಮಾಡಕೂಡದು, ರಾಜಕೀಯ ಬೆರೆಸಬಾರದು ಎಂದೂ ಹೇಳಿದ್ದಾರೆ. ಇದು ಸರಿಯೇ. ಈ ದೇಶದಲ್ಲಿ ಶಂಕಿತರನ್ನು ಗುರುತಿಸಲೂ ಅಸ್ಮಿತೆಗಳು ಮುಖ್ಯವಾಗುತ್ತವೆ.
ರಾಜಗೃಹದ ಮೇಲೆ ನಡೆದ ದಾಳಿಯಲ್ಲಿ ಅಲ್ಪಸಂಖ್ಯಾತರು ಯಾರಾದರೂ ಇದ್ದಿದ್ದರೆ “ ಪುರಾವೆ ಇಲ್ಲದೆ ಆರೋಪ ಮಾಡಕೂಡದು” ಎನ್ನುವ ಉಪದೇಶ ಬರುತ್ತಿರಲಿಲ್ಲ. ಶಂಕಿತರು, ಉಗ್ರರು, ಕಿಡಿಗೇಡಿಗಳು, ದುಷ್ಕರ್ಮಿಗಳು, ಮಾನಸಿಕ ಅಸ್ವಸ್ಥರು, ತಿಳಿಗೇಡಿಗಳು ಈ ಎಲ್ಲ ಪದಗಳೂ ಸಾಪೇಕ್ಷ ನೆಲೆಯಲ್ಲಿ ರಾಜಕೀಯ ಅನುಕೂಲತೆಗೆ ತಕ್ಕಂತೆ ಬಳಕೆಯಾಗುತ್ತಿರುವುದನ್ನು ದಶಕಗಳಿಂದ ಗಮನಿಸುತ್ತಲೇ ಬಂದಿದ್ದೇವೆ.
ಇರಲಿ, ರಾಜಗೃಹದ ಮೇಲೆ ದಾಳಿ ನಡೆಸಿದವರು ಯಾರು ಎನ್ನುವುದು ವ್ಯಕ್ತಿಗತ ಪ್ರಶ್ನೆ. ಅಪರಾಧಿಗಳಿಗೆ ಶಿಕ್ಷೆಯಾಗುವುದೋ ಇಲ್ಲವೋ ಕಾದು ನೋಡೋಣ. ಆದರೆ ರಾಜಗೃಹದ ಘಟನೆ ಏಕಾಏಕಿ ನಡೆದ ವಿಕ್ಷಿಪ್ತ ಘಟನೆ ಅಲ್ಲ ಎನ್ನುವುದು ಸಂಸದರ ಗಮನಕ್ಕೆ ಬರಬೇಕಿತ್ತಲ್ಲವೇ ? ದಲಿತೇತರ ರಾಜಕಾರಣಿಗಳು, ಸಂಘಟನೆಗಳು ಈ ಘಟನೆಯನ್ನು ಖಂಡಿಸಿಲ್ಲ , ನಿಜ.
ಇದೇನೂ ಅಚ್ಚರಿಯ ವಿಚಾರ ಅಲ್ಲ. ರಾಜಗೃಹ ಬಾಬ್ರಿ ಮಸೀದಿಯಂತೆ, ರಾಮಮಂದಿರಂತೆ ಮತಗಳಿಕೆಯ ಸ್ಥಾವರ ಅಲ್ಲ. ಅದು ದಲಿತ ಸಮುದಾಯದ ಅಸ್ಮಿತೆಯನ್ನು ಬಿಂಬಿಸುವ ಸ್ಥಾವರ. ಈ ಅಸ್ಮಿತೆಯ ಮೇಲೆ ದಾಳಿ ನಡೆದಾಗ ದಲಿತ ರಾಜಕಾರಣಿಗಳಾದರೂ ಎಲ್ಲಿದ್ದಾರೆ ? ಕರ್ನಾಟಕದ ದಲಿತ ಸಂಸದರ ಮತ್ತು ಶಾಸಕರ ಒಕ್ಕೊರಲ ದನಿ ಏಕೆ ಕೇಳಿಸಿಯೇ ಇಲ್ಲ.
ಈ ದಾಳಿ ಏಕೆ ನಡೆದಿದೆ, ಅಂಬೇಡ್ಕರ್, ಪೆರಿಯಾರ್ ಮೇಲೆ ಈ ರೀತಿಯ ದಾಳಿ ಏಕೆ ನಡೆಯುತ್ತಿದೆ ಎನ್ನುವುದು ನುರಿತ ರಾಜಕಾರಣಿಯಾದ ಮಾನ್ಯ ಶ್ರೀನಿವಾಸಪ್ರಸಾದ್ ಅವರಿಗೆ ತಿಳಿದಿರಬೇಕಲ್ಲವೇ ? ಈ ದೇಶದ ಮತೀಯ ಮೂಲಭೂತವಾದಿಗಳಿಗೆ ಪ್ರೇರಣೆ ನೀಡುವ ಒಂದು ಸಿದ್ಧಾಂತ ಮತ್ತು ತತ್ವವನ್ನು ಅಪ್ಪಿಕೊಂಡು, ಈ ಮತೀಯ ಶಕ್ತಿಗಳು ನಿರಂತರವಾಗಿ ಭಾರತದ ಶೋಷಿತ, ದಮನಿತ ಜನಸಮುದಾಯಗಳ ಮೇಲೆ ನಡೆಸುತ್ತಿರುವ ದಾಳಿಯನ್ನು “ಕಿಡಿಗೇಡಿಗಳ” ಕೃತ್ಯ ಎಂದು ಬಣ್ಣಿಸುವುದರ ಔಚಿತ್ಯವನ್ನು ಪ್ರಶ್ನಿಸಲೇಬೇಕಾಗುತ್ತದೆ.
ರಾಜಗೃಹದ ಮೇಲಿನ ದಾಳಿಗೂ, ತಮಿಳುನಾಡಿನಲ್ಲಿ ಪೆರಿಯಾರ್ ಅಂಬೇಡ್ಕರ್ ಗ್ರಂಥಾಲಯದ ಮೇಲೆ ನಡೆದ ದಾಳಿಗೂ, ಹಲವೆಡೆ ಅಂಬೇಡ್ಕರ್ ಪ್ರತಿಮೆಗಳ ಮೇಲೆ ನಡೆಯುತ್ತಿರುವ ದಾಳಿಗೂ ಮತ್ತು ಅಂಬೇಡ್ಕರ್ ಅವರ ಸಾಂವಿಧಾನಿಕ ಮೌಲ್ಯಗಳ ವಿರುದ್ಧ ಆಡಳಿತ ನೀತಿಗಳನ್ನು ಜಾರಿಗೊಳಿಸುತ್ತಿರುವುದಕ್ಕೂ ಪರಸ್ಪರ ಸಂಬಂಧ ಇರುವುದನ್ನು ಮಾನ್ಯ ಶ್ರೀನಿವಾಸ ಪ್ರಸಾದ್ ಅವರಿಗೆ ತಿಳಿಸಿ ಹೇಳಬೇಕಿಲ್ಲ. ಅಲ್ಲವೇ ?
ತಮ್ಮ ಅಂತರಂಗದ ಅವ್ಯಕ್ತ ಭಾವನೆಯನ್ನು ರಾಜಕೀಯ ಅನಿವಾರ್ಯಗಳಿಂದ ಅದುಮಿಟ್ಟು ಮಾತನಾಡುವುದು ಹಿರಿಯ ನಾಯಕರಿಗೆ ಶೋಭೆ ತರುವಂತಹುದಲ್ಲ . ಅಂಬೇಡ್ಕರ್ ಆರಾಧನೆಗೊಳಗಾದಷ್ಟೇ ದಾಳಿಗೂ ಒಳಗಾಗುತ್ತಿರುವುದನ್ನು ಕಳೆದ ಹಲವು ದಶಕಗಳಿಂದ ನೋಡುತ್ತಲೇ ಇದ್ದೇವೆ.
ಪ್ರತಿಯೊಬ್ಬ ದಲಿತ ವ್ಯಕ್ತಿಯ ಮೇಲೆ ನಡೆಯುವ ದೌರ್ಜನ್ಯ, ಅತ್ಯಾಚಾರ, ಹಲ್ಲೆ, ಆಕ್ರಮಣವೂ ಸಹ ಅಂಬೇಡ್ಕರ್ ಪ್ರತಿಪಾದಿಸಿದ ದಲಿತ ಅಸ್ಮಿತೆಯ ಮೇಲಿನ ದಾಳಿಯೇ ಅಲ್ಲವೇ ? ಇಂತಹ ಅಮಾನುಷ ದಾಳಿಗಳಿಗೆ ದಲಿತ ರಾಜಕಾರಣಿಗಳು ಹೇಗೆ ಸ್ಪಂದಿಸಿದ್ದಾರೆ ? ಇತ್ತೀಚಿನ ಇತಿಹಾಸದ ಪುಟಗಳನ್ನು ತಿರುವಿಹಾಕಿದರೆ ನಿರಾಸೆ ಮೂಡುತ್ತದೆ. ಅಧಿಕಾರ ರಾಜಕಾರಣ ಮತ್ತು ರಾಜಕೀಯ ಅವಕಾಶವಾದ, ಅಸ್ಮಿತೆಗಳನ್ನು ನುಂಗಿ ವ್ಯಕ್ತಿಗತ ಅಸ್ತಿತ್ವವನ್ನು ಕಾಪಾಡಿಕೊಳ್ಳುವ ನೆಲೆಗಳಾಗಿ ರೂಪುಗೊಂಡು ದಶಕಗಳೇ ಕಳೆದಿವೆ.
ಈ ರಾಜಕಾರಣದ ರಾಡಿಯಲ್ಲಿ ನಿಂತು ವಾಸ್ತವಕ್ಕೆ ಬೆನ್ನು ತಿರುಗಿಸಿ ಅನುಕಂಪದ ಮಾತುಗಳನ್ನಾಡುವುದು ಬೇಕಿಲ್ಲ. ಅಂಬೇಡ್ಕರ್ ಅವರಿಗಾಗಲೀ, ದಲಿತ ಸಮುದಾಯಗಳಿಗಾಗಲೀ ಅನುಕಂಪ, ಮರುಕ ಅಗತ್ಯವಿಲ್ಲ. ಇದು ಶತಮಾನಗಳಿಂದಲೂ ವ್ಯಕ್ತವಾಗುತ್ತಲೇ ಇದೆ. ಈಗ ಬೇಕಿರುವುದು ಸಾಮಾಜಿಕ ಘನತೆ.
ಅಂಬೇಡ್ಕರ್ ಅವರನ್ನು ಪ್ರತಿನಿಧಿಸುವ ಸ್ಥಾವರಗಳ ಮೇಲಿನ ದಾಳಿಗಳು ಈ ಘನತೆಯನ್ನು ಪ್ರಶ್ನಿಸುವ ಒಂದು ವಿಧಾನ ಎನ್ನುವುದನ್ನು ಹೇಳಬೇಕಿಲ್ಲ. ಇದು ಅಸ್ಮಿತೆಯ ಪ್ರಶ್ನೆ. ಅಸ್ತಿತ್ವದ ಪ್ರಶ್ನೆ. ದಲಿತ ಅಸ್ಮಿತೆಯನ್ನು ನುಂಗಿಹಾಕಿ ತನ್ನದೇ ಆದ ಸಾಮ್ರಾಜ್ಯವನ್ನು ನಿರ್ಮಿಸಲು ಸಜ್ಜಾಗುತ್ತಿರುವ ಮತೀಯ ಶಕ್ತಿಗಳ ಮಡಿಲಲ್ಲಿ ಕುಳಿತು ನ್ಯಾಯ ಕೇಳುವುದು, ತೋಳದ ಬೆನ್ನ ಮೇಲೇರಿ ಸಿಂಹದ ಬಳಿ ನ್ಯಾಯ ಕೇಳಿದಂತಾಗುವುದಿಲ್ಲವೇ ? ಸಂಸದರೇ ಯೋಚಿಸಲಿ.
ಸುದ್ದಿದಿನ.ಕಾಂ|ವಾಟ್ಸಾಪ್|9980346243
ದಿನದ ಸುದ್ದಿ
ಇಂದಿನಿಂದ ಏ.3 ರವರೆಗೆ ಸೂಳೆಕೆರೆಗೆ ನೀರು ಬಿಡುಗಡೆ
ಸುದ್ದಿದಿನ,ದಾವಣಗೆರೆ: ಭದ್ರಾ ಜಲಾಶಯ ಯೋಜನೆ ವ್ಯಾಪ್ತಿಗೆ ಬರುವ ದೇವರಬೆಳಕೆರೆ ಪಿಕ್ಅಪ್ ಅಣೆಕಟ್ಟಿನ ಸ್ಕವರಿಂಗ್ ಸ್ಪೂಯೀಸ್ ಗೇಟ್ ಮುಖಾಂತರ ಜಲಾಶಯದ ಡೆಡ್ ಸ್ಟೋರೇಜ್ ನೀರನ್ನು ಸೂಳೆಕೆರೆ ಹಳ್ಳಕ್ಕೆ ಮಾರ್ಚ್ 28 ರಿಂದ ಏಪ್ರಿಲ್ 3 ರವರೆಗೆ ಪ್ರತಿದಿನ 20 ಕ್ಯೂಸೆಕ್ಸ್ಗಳಲ್ಲಿ ಜನ-ಜಾನುವಾರು ಪಕ್ಷಿಗಳಿಗೆ ಕುಡಿಯುವ ನೀರು ಒದಗಿಸಲು ಹಾಗೂ ಅಕ್ಕಪಕ್ಕದ ಗ್ರಾಮಗಳ ಕುಡಿಯುವ ನೀರಿನ ಉದ್ದೇಶಕ್ಕೆ ಬಿಡಲಾಗುತ್ತಿದೆ.
ಈ ವೇಳೆ ಹಳ್ಳಕ್ಕೆ ದನ ಕರಗಳನ್ನು ಇಳಿಸುವುದಾಗಲಿ, ಪಂಪ್ಸೆಟ್ಗಳಿಂದ ನೀರೆತ್ತುವುದುನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ ಎಂದು ಕನೀನಿನಿ ಕಾರ್ಯಪಾಲಕ ಇಂಜಿನಿಯರ್ ತಿಳಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243
ದಿನದ ಸುದ್ದಿ
ಲೋಕಸಭಾ ಚುನಾವಣೆಯ ಮೊದಲ ಹಂತಕ್ಕೆ ನಾಮಪತ್ರ ಸಲ್ಲಿಕೆಗೆ ಇಂದು ಕೊನೆಯ ದಿನ
ಸುದ್ದಿದಿನ ಡೆಸ್ಕ್ : ಲೋಕಸಭಾ ಚುನಾವಣೆಯ ಮೊದಲ ಹಂತಕ್ಕೆ ನಾಮಪತ್ರ ಸಲ್ಲಿಸಲು ಇಂದು ಕೊನೆಯ ದಿನವಾಗಿದೆ.
ನಾಳೆ ನಾಮಪತ್ರಗಳ ಪರಿಶೀಲನೆ ನಡೆಯಲಿದ್ದು, ಇದೇ 30 ನಾಮಪತ್ರ ಹಿಂಪಡೆಯಲು ಕಡೆಯ ದಿನವಾಗಿದೆ. ಇದೇ ವೇಳೆ ಬಿಹಾರದಲ್ಲಿ ನಾಮಪತ್ರ ಸಲ್ಲಿಕೆಗೆ ನಾಳೆ ಕಡೆ ದಿನವಾಗಿದ್ದು, ಈ ತಿಂಗಳ 30 ರಂದು ನಾಮಪತ್ರಗಳ ಪರಿಶೀಲನೆ ಹಾಗೂ ಏಪ್ರಿಲ್ 2ರಂದು ನಾಮತ್ರ ಹಿಂಪಡೆಯುವಿಕೆಗೆ ಕೊನೆಯ ದಿನವಾಗಿರುತ್ತದೆ.
ಏಪ್ರಿಲ್ 19 ರಂದು 17 ರಾಜ್ಯಗಳು ಮತ್ತು ನಾಲ್ಕು ಕೇಂದ್ರಾಡಳಿತ ಪ್ರದೇಶಗಳಲ್ಲಿನ 102ಲೋಕಸಭಾ ಕ್ಷೇತ್ರಗಳಿಗೆ ಮೊದಲ ಹಂತದಲ್ಲಿ ಚುನಾವಣೆ ನಡೆಯಲಿದೆ. ಅದರಂತೆ ತಮಿಳುನಾಡಿನಲ್ಲಿ 39, ರಾಜಸ್ಥಾನದಲ್ಲಿ 12, ಉತ್ತರ ಪ್ರದೇಶದಲ್ಲಿ 8, ಮಧ್ಯಪ್ರದೇಶದಲ್ಲಿ 6, ಉತ್ತರಾಖಂಡ, ಅಸ್ಸಾಂ ಮತ್ತು ಮಹಾರಾಷ್ಟ್ರದಲ್ಲಿ ತಲಾ 5 , ಬಿಹಾರದಲ್ಲಿ 4, ಪಶ್ಚಿಮ ಬಂಗಾಳದಲ್ಲಿ 3, ಅರುಣಾಚಲ ಪ್ರದೇಶ, ಮಣಿಪುರ, ಮೆಘಾಲಯದಲ್ಲಿ ತಲಾ 2 ಮತ್ತು ಛತ್ತೀಸ್ಗಢ, ಮಿಜೋರಾಂ, ನಾಗಾಲ್ಯಾಂಡ್, ಸಿಕ್ಕಿಂ, ತ್ರಿಪುರ, ಅಂಡಮಾನ್-ನಿಕೋಬಾರ್ ದ್ವೀಪಗಳು, ಜಮ್ಮು-ಕಾಶ್ಮೀರ, ಲಕ್ಷದ್ವೀಪ ಮತ್ತು ಪುದುಚೇರಿಯಲ್ಲಿ ತಲಾ ಒಂದು ಕ್ಷೇತ್ರದಲ್ಲಿ ಮೊದಲ ಹಂತದಲ್ಲಿ ಚುನಾವಣೆ ನಡೆಯಲಿದೆ.
ಎರಡನೇ ಹಂತದಲ್ಲಿ 89 ಲೋಕಸಭಾ ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದ್ದು, ಚುನಾವಣಾ ಆಯೋಗ ನಾಳೆ ಅಧಿಸೂಚನೆ ಹೊರಡಿಸಲಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243
ದಿನದ ಸುದ್ದಿ
ಚುನಾವಣಾ ಅಕ್ರಮ ; ಸಾರ್ವಜನಿಕರು ದೂರು ಸಲ್ಲಿಸಲು ಆಯೋಗದಿಂದ ಸಿ-ವಿಜಿಲ್ ಆಪ್ ಅಭಿವೃದ್ಧಿ
ಸುದ್ದಿದಿನ ಡೆಸ್ಕ್ : 18ನೇ ಲೋಕಸಭೆಗೆ ಸದಸ್ಯರನ್ನು ಆಯ್ಕೆ ಮಾಡಲು ನಡೆಯಲಿರುವ ಸಾರ್ವತ್ರಿಕ ಚುನಾವಣೆಗೆ ಭಾರತ ಚುನಾವಣಾ ಆಯೋಗ, ಸಕಲ ಸಿದ್ಧತೆಯೊಂದಿಗೆ ಸಜ್ಜಾಗಿದೆ.
ದೇಶದಲ್ಲಿ ಚುನಾವಣೆಗಳನ್ನು ಪಾರದರ್ಶಕವಾಗಿ ಹಾಗೂ ಅತ್ಯಂತ ವಿಶ್ವಾಸಾರ್ಹ ರೀತಿಯಲ್ಲಿ ನಡೆಸುವ ಸಂಕಲ್ಪದೊಂದಿಗೆ ಚುನಾವಣಾ ಆಯೋಗ, ಸಮಸ್ತ ಚುನಾವಣಾ ಪ್ರಕ್ರಿಯೆಗಳನ್ನು ಸುಗಮಗೊಳಿಸಲು ತಂತ್ರಜ್ಞಾನದ ನೆರವನ್ನು ಬಳಸಿಕೊಳ್ಳುತ್ತಿದೆ. ಈ ನಿಟ್ಟಿನಲ್ಲಿ ಮತದಾರರು, ಚುನಾವಣಾ ಸಿಬ್ಬಂದಿ ಹಾಗೂ ಆಯೋಗಕ್ಕೆ ನೆರವಾಗುವ ಹಲವು ಆಪ್ಗಳನ್ನು ಚುನಾವಣಾ ಆಯೋಗ ಅಭಿವೃದ್ಧಿಪಡಿಸಿದೆ.
ಈ ಪೈಕಿ ಇಂದು ಸಿ-ವಿಜಿಲ್ ಆಪ್ ಬಗ್ಗೆ ಮಾಹಿತಿ.
ದೇಶದಲ್ಲಿ ಚುನಾವಣೆಗಳ ವೇಳೆ ನಡೆಯುವ ಅಕ್ರಮಗಳು, ಮಾದರಿ ನೀತಿ ಸಂಹಿತೆಯ ಉಲ್ಲಂಘನೆ ಪ್ರಕರಣಗಳ ಮೇಲೆ ಕಣ್ಣಿಡುವುದು ಕೇವಲ ಚುನಾವಣಾ ಸಿಬ್ಬಂದಿಯ ಕೆಲಸವಲ್ಲ. ಇದು ಪ್ರತಿಯೊಬ್ಬ ನಾಗರಿಕನ ಕರ್ತವ್ಯವೂ ಹೌದು. ಹಾಗಾಗಿ ಚುನಾವಣಾ ಅಕ್ರಮಗಳ ಬಗ್ಗೆ ಸಾರ್ವಜನಿಕರು ಆಯೋಗಕ್ಕೆ ದೂರು ತಲುಪಿಸಲು ಭಾರತ ಚುನಾವಣಾ ಆಯೋಗ ಸಿ-ವಿಜಿಲ್ ಆಪ್ ಅನ್ನು ಅಭಿವೃದ್ಧಿ ಪಡಿಸಿದೆ.
ದೂರುಗಳನ್ನು ಆನ್ಲೈನ್ ಮೂಲಕ ಆಯೋಗಕ್ಕೆ ರವಾನಿಸಲು ಈ ಆಪ್ ನೆರವಾಗುವುದು. ಯಾವುದೇ ಚುನಾವಣಾ ಅಕ್ರಮಗಳ ಬಗ್ಗೆ ಧ್ವನಿಮುದ್ರಣ, ವಿಡಿಯೋ ಚಿತ್ರದ ತುಣುಕುಗಳು ಮತ್ತು ಫೋಟೊ ಮೊದಲಾದ ದಾಖಲೆಗಳನ್ನು ಸಾರ್ವಜನಿಕರು ಇದರ ಮೂಲಕ ಕಳುಹಿಸಬಹುದು.
ಚುನಾವಣೆಗಳಲ್ಲಿ ರಾಜಕೀಯ ಪಕ್ಷಗಳು, ಅಭ್ಯರ್ಥಿಗಳು ಮಾಡುವ ಖರ್ಚು-ವೆಚ್ಚ, ಮತದಾರರ ಮನವೊಲಿಕೆಗೆ ಆಮಿಷಗಳ ಬಳಕೆ ಮೊದಲಾದ ಅಕ್ರಮಗಳ ಬಗ್ಗೆ ದೂರು ನೀಡಲು ಇದನ್ನು ಬಳಸಬಹುದು. ಒಂದುನೂರು ನಿಮಿಷಗಳಲ್ಲಿ ಚುನಾವಣಾಧಿಕಾರಿಗಳು ಅಗತ್ಯ ಕ್ರಮ ಕೈಗೊಳ್ಳುತ್ತಾರೆ ಎಂದು ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಹೇಳಿದ್ದಾರೆ.
ದೇಶದ ಯಾವ ಮೂಲೆಯಲ್ಲೇ ಆಗಲಿ ನಡೆಯುವ ಚುನಾವಣಾ ಅಕ್ರಮ ಅಥವಾ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣಗಳ ಬಗ್ಗೆ ತಾವು ನೀಡಿದ ದೂರುಗಳನ್ನು ಆಯೋಗ ಪರಿಗಣಿಸಿದೆಯೇ ಎನ್ನುವ ವಿವರಗಳನ್ನು ಸಹ ಸಾರ್ವಜನಿಕರು ಸಿ-ವಿಜಿಲ್-ಆಪ್ ಮೂಲಕ ವೀಕ್ಷಿಸಬಹುದು.
ಸುದ್ದಿದಿನ.ಕಾಂ|ವಾಟ್ಸಾಪ್|9980346243
-
ದಿನದ ಸುದ್ದಿ6 days ago
ಲೋಕಸಭಾ ಚುನಾವಣೆ : ಚುನಾವಣಾ ಚಟುವಟಿಕೆಗಳ ಕುರಿತ ಜಿಲ್ಲಾವಾರು ಮಾಹಿತಿ
-
ದಿನದ ಸುದ್ದಿ6 days ago
ವಿಜಯಪುರ ಜಿಲ್ಲಾ ಸಾಹಿತ್ಯ ಸಮ್ಮೇಳನದ ಕವಿಗೋಷ್ಠಿಗೆ ಮೈಬೂಬಸಾಹೇಬ.ವೈ.ಜೆ ಆಯ್ಕೆ
-
ದಿನದ ಸುದ್ದಿ6 days ago
ಬೆಂಗಳೂರಿನಲ್ಲಿ ಬಿಜೆಪಿ ನೂತನ ಮಾಧ್ಯಮಕೇಂದ್ರ ಆರಂಭ
-
ದಿನದ ಸುದ್ದಿ6 days ago
ಲೋಕಸಭಾ ಚುನಾವಣೆ | ಹೊಸ ಮತದಾರರೆಷ್ಟು ಗೊತ್ತಾ..?
-
ದಿನದ ಸುದ್ದಿ6 days ago
ಕವಿತೆ | ನೆನಪು
-
ದಿನದ ಸುದ್ದಿ3 days ago
ಚುನಾವಣಾ ಅಕ್ರಮ ; ಸಾರ್ವಜನಿಕರು ದೂರು ಸಲ್ಲಿಸಲು ಆಯೋಗದಿಂದ ಸಿ-ವಿಜಿಲ್ ಆಪ್ ಅಭಿವೃದ್ಧಿ
-
ದಿನದ ಸುದ್ದಿ2 days ago
ಲೋಕಸಭಾ ಚುನಾವಣೆಯ ಮೊದಲ ಹಂತಕ್ಕೆ ನಾಮಪತ್ರ ಸಲ್ಲಿಕೆಗೆ ಇಂದು ಕೊನೆಯ ದಿನ
-
ದಿನದ ಸುದ್ದಿ2 days ago
ಇಂದಿನಿಂದ ಏ.3 ರವರೆಗೆ ಸೂಳೆಕೆರೆಗೆ ನೀರು ಬಿಡುಗಡೆ