ದಿನದ ಸುದ್ದಿ
ಆರ್ಥಿಕ ಹಿಂಜರಿತದ ಬಿರು ಮೋಡಗಳು ದಟ್ಟೈಸುತ್ತಿವೆ
- ನವ ಉದಾರವಾದವೇ ಅವಸಾನದ ಅಂಚಿನಲ್ಲಿದೆ. ಅದರ ಹಿಡಿತಕ್ಕೆ ಒಳಪಟ್ಟಿರುವ ಭಾರತದ ಅರ್ಥವ್ಯವಸ್ಥೆಯಲ್ಲಿ ಹಾಲಿ ಪರಿಸ್ಥಿತಿಯನ್ನು ಬದಲಿಸುವಂತಹ ಆಂತರಿಕ ಮಾರುಕಟ್ಟೆ ಆಧರಿತ ಯಾವ ಬದಲಿ ಆರ್ಥಿಕ ಆಳ್ವಿಕೆವೂ ಮುಂದೆ ಬರುತ್ತಿಲ್ಲ. ಹಾಗಾಗಿ, ಭಾರತದ ಅರ್ಥವ್ಯವಸ್ಥೆಯು ಒಂದು ತ್ರಿಶಂಕು ಸ್ಥಿತಿಯಲ್ಲಿದೆ. ಆದರೆ, ನವ ಉದಾರವಾದವು ತನ್ನ ಅಂತ್ಯವನ್ನು ತಲುಪಿದೆ ಎಂಬ ಅರಿವು ಮೋದಿ ಸರ್ಕಾರಕ್ಕೆ ಇದ್ದಂತಿಲ್ಲ. ನವ ಉದಾರವಾದಕ್ಕೆ ಮುಂದಕ್ಕೆ ಸಾಗಲು ದಾರಿ ಕಾಣದಾಗಿರುವಾಗ ಮೋದಿ ಸರ್ಕಾರಕ್ಕೆ ಅದನ್ನು ಧಿಕ್ಕರಿಸುವ ನೀತಿಗಳನ್ನು ಅನುಸರಿಸುವ ಧೈರ್ಯವಿಲ್ಲ. ಆದ್ದರಿಂದ, ಕೈಗಾರಿಕಾ ಹಿಂಜರಿತವು ಉಲ್ಬಣಗೊಳ್ಳುವ ಸಂಭವವಿದೆ.
ಜೂನ್ 2013 ರ ನಂತರ, ಕೈಗಾರಿಕಾ ಉತ್ಪಾದನೆಯ ಸೂಚ್ಯಂಕದಲ್ಲಿ ಮೊದಲ ಬಾರಿಗೆ 2019ರ ಮಾರ್ಚ್ನಲ್ಲಿ ಅದರ ಹಿಂದಿನ ಮಾರ್ಚ್ಗೆ ಹೋಲಿಸಿದರೆ 0.1% ಇಳಿಕೆಯಾಗಿದೆ. ಹಿಂದಿನ ನವೆಂಬರ್, ಡಿಸೆಂಬರ್, ಜನವರಿ ಮತ್ತು ಫೆಬ್ರವರಿ ತಿಂಗಳುಗಳಲ್ಲಿ ಕಂಡ ತುಸು ಏರಿಕೆಯ ನಂತರ ಸೂಚ್ಯಂಕದಲ್ಲಿ ಇಳಿಕೆಯಾಗಿದೆ. ಇತ್ತೀಚಿನ ಅವಧಿಯಲ್ಲಿ ಕೈಗಾರಿಕಾ ಬೆಳವಣಿಗೆ ಮಂದವಾಗುತ್ತಿದೆ ಎಂಬ ಅಂಶವನ್ನು ಈ ಅಂಕಿಗಳು ಗಟ್ಟಿಯಾಗಿಯೇ ದೃಢಪಡಿಸುತ್ತವೆ.
ಈ ಸೂಚ್ಯಂಕದಲ್ಲಿ, 77.6 ಗಣನೆ ಹೊಂದಿರುವ ತಯಾರಿಕಾ ವಲಯದ ಬೆಳವಣಿಗೆಯು 2019ರ ಮಾರ್ಚ್ನಲ್ಲಿ ಅದರ ಹಿಂದಿನ ಮಾರ್ಚ್ಗೆ ಹೋಲಿಸಿದರೆ 0.4% ಇಳಿದಿದೆ. ತಯಾರಿಕಾ ವಲಯದ ಉಪ ವಿಭಾಗಗಳಾದ ಮೂಲ ವಸ್ತುಗಳ ಉತ್ಪಾದನೆಯಲ್ಲಿ 8.7%ಗೃಹ ಬಳಕೆ ವಸ್ತುಗಳ ಉತ್ಪಾದನೆಯಲ್ಲಿ 5.1%,ಮಧ್ಯವರ್ತಿ ವಸ್ತುಗಳ ಉತ್ಪಾದನೆಯಲ್ಲಿ 2.5%ಇಳಿಕೆಯಾಗಿದೆ ಮತ್ತು ಗೃಹ ಬಳಕೆಯೇತರ ವಸ್ತುಗಳ ಉತ್ಪಾದನೆಯಲ್ಲಿ 0.3% ಏರಿಕೆಯಾಗಿದೆ. ಇಡೀ 2018-19 ವರ್ಷದಲ್ಲಿ ಒಟ್ಟಾರೆ ಆಗಿರುವ 3.6% ಕೈಗಾರಿಕಾ ಉತ್ಪಾದನೆಯ ಬೆಳವಣಿಗೆಯು ಅದರ ಹಿಂದಿನ 2017-18 ವರ್ಷದಲ್ಲಿದ್ದ 4.4% ಬೆಳವಣಿಗೆಗಿಂತಲೂ ಕಡಿಮೆ ಇದೆ. ಹಾಗಾಗಿ, 2018-19 ವರ್ಷದ ಕೊನೆಯ ತಿಂಗಳುಗಳಲ್ಲಿ ಆರ್ಥಿಕ ಹಿಂಜರಿತ ಬಲಿಯಲಾರಂಭಿಸಿತು.
ಒಂದು ರೀತಿಯಲ್ಲಿ ಈ ಹಿಂಜರಿತವು ಅನಿವಾರ್ಯವೇ. ಏಕೆಂದರೆ, ಭಾರತದ ಅರ್ಥವ್ಯವಸ್ಥೆಯು, ವಿಶ್ವದ ಇತರ ಅರ್ಥವ್ಯವಸ್ಥೆಗಳಂತಲ್ಲದೆ, ತ್ರಿಶಂಕು ಸ್ಥಿತಿಗೊಳಗಾಗಿದೆ. ಇದು, ರೋಗ ತಟ್ಟಿದೆ ಎಂಬುದರ ಒಂದು ಸೂಚನೆ. ನವ ಉದಾರವಾದವೇ ಅವಸಾನದ ಅಂಚಿನಲ್ಲಿದೆ. ಅದರ ಹಿಡಿತಕ್ಕೆ ಒಳಪಟ್ಟಿರುವ ಭಾರತದ ಅರ್ಥವ್ಯವಸ್ಥೆಯಲ್ಲಿ ಹಾಲಿ ಪರಿಸ್ಥಿತಿಯನ್ನು ಬದಲಿಸುವಂತಹ ಆಂತರಿಕ ಮಾರುಕಟ್ಟೆ ಆಧರಿತ ಯಾವ ಬದಲಿ ಆರ್ಥಿಕ ಆಳ್ವಿಕೆವೂ ಮುಂದೆ ಬರುತ್ತಿಲ್ಲ. ಹಾಗಾಗಿ, ಭಾರತದ ಅರ್ಥವ್ಯವಸ್ಥೆಯು ಒಂದು ತ್ರಿಶಂಕು ಸ್ಥಿತಿಯಲ್ಲಿದೆ.
ಜಾಗತಿಕ ಅರ್ಥವ್ಯವಸ್ಥೆಯ ಮಂದಗತಿಯ ಪರಿಣಾಮವಾಗಿ ಭಾರತ ಮತ್ತು ಚೀನಾದಂತಹ ಅರ್ಥವ್ಯವಸ್ಥೆಗಳು ಈಗ ನಲುಗುತ್ತಿವೆ. ಈ ದೇಶಗಳ ರಫ್ತು ದರಗಳು ಇಳಿಮುಖವಾಗುತ್ತಿವೆ. ರಫ್ತುಗಳ ಈ ಇಳಿಕೆಯನ್ನು ಸರಿದೂಗಿಸಿಕೊಳ್ಳಲು ಬೇಕಾಗುವ ಮಟ್ಟದಲ್ಲಿ ಆಂತರಿಕ ಮಾರುಕಟ್ಟೆಗಳನ್ನು ಬೆಳೆಸುವ ಕ್ರಮಗಳನ್ನೇ ದೇಶದಲ್ಲಿ ಕೈಗೊಂಡಿಲ್ಲ. ಹಾಗಾಗಿ, ದೇಶದ ಆಂತರಿಕ ಮಾರುಕಟ್ಟೆಯೂ ಕುಗ್ಗುತ್ತಿದೆ.
ಗ್ರಾಮೀಣ ಪರಿಸ್ಥಿತಿಯ ಯಾತನಾಮಯ ಕಾರಣದಿಂದಾಗಿ ಮತ್ತು ರಫ್ತು ದರ ಇಳಿಕೆಯ ಅಡ್ಡ ಪರಿಣಾಮಗಳ ಕಾರಣಗಳಿಂದಾಗಿ ಕೈಗಾರಿಕಾ ಬೆಳವಣಿಗೆ ಕುಂಠಿತವಾಗಿದೆ. ಜೊತೆಗೆ, ವಸೂಲಾಗದ ಸಾಲಗಳು ಹೆಚ್ಚಿದ ಕಾರಣದಿಂದಾಗಿ ಹೊಸ ಸಾಲಗಳು ದುರ್ಲಭವಾಗುತ್ತಿವೆ. ಇದರಿಂದಾಗಿ ಕೈಗಾರಿಕಾ ಬೆಳವಣಿಗೆಗೆ ಹೆಚ್ಚಿನ ಖರ್ಚು ಮಾಡುವುದು ಸಾಧ್ಯವಾಗುತ್ತಿಲ್ಲ. ಅಂದರೆ, ರಫ್ತುಗಳ ಇಳಿಕೆಯು, ಅದನ್ನು ಸರಿದೂಗಿಸಿಕೊಳ್ಳುವ ಮಾತು ಒತ್ತಟ್ಟಿಗಿರಲಿ, ದೇಶದ ಆಂತರಿಕ ಮಾರುಕಟ್ಟೆಯ ಕುಗ್ಗುವಿಕೆಗೂ ಕಾರಣವಾಗಿದೆ.
ಗೃಹ ಬಳಕೆ ವಸ್ತುಗಳ ತಯಾರಿಕೆ ಕುಗ್ಗುತ್ತಿರುವ ಅಂಶವು ದೇಶದ ಆಂತರಿಕ ಮಾರುಕಟ್ಟೆ ಕುಗ್ಗಿರುವ ಅಂಶವನ್ನು ಸ್ಪಷ್ಟಪಡಿಸುತ್ತದೆ. ಮತ್ತು, ಗೃಹ ಬಳಕೆಯೇತರ ವಸ್ತುಗಳ ಉತ್ಪಾದನಾ ವಲಯವು ಎಪ್ರಿಲ್ನಲ್ಲಿ ಅದರ ಹಿಂದಿನ ಎಪ್ರಿಲ್ಗೆ ಹೋಲಿಸಿದರೆ ಸ್ಥಗಿತವಾಗಿತ್ತು. ಅರ್ಥವ್ಯವಸ್ಥೆಯಲ್ಲಿ ಹೂಡಿಕೆ ಇಳಿಯುತ್ತಿದೆ ಎಂಬುದನ್ನು ಅದಾಗಲೇ ಫೆಬ್ರವರಿಯಲ್ಲಿಯೇ ಮೂಲ ಸರಕು ಉತ್ಪಾದನಾ ವಲಯವು ಸ್ಥಗಿತಗೊಂಡಿದ್ದ ಪರಿಸ್ಥಿತಿಯೇ ಸೂಚಿಸುತ್ತದೆ.
ಭಾರತೀಯ ರಿಸರ್ವ್ ಬ್ಯಾಂಕ್ ಈಗಾಗಲೇ ಎರಡು ಬಾರಿ, ಪ್ರತಿ ಸಲವೂ 25 ಮೂಲಾಂಶದಷ್ಟು (ಅಂದರೆ, ಒಟ್ಟು 0.5%) ಬಡ್ಡಿ ದರ ಇಳಿಸಿದೆ. ಈ ಕ್ರಮದಿಂದಾಗಿ ಪರಿಸ್ಥಿತಿ ಹೆಚ್ಚು ಸುಧಾರಿಸುವ ಸಂಭವವಿಲ್ಲ. ಏಕೆಂದರೆ, ಸಾಲದ ಮೇಲಿನ ಬಡ್ಡಿ ದರ ಎಷ್ಟು ಎಂಬುದಕ್ಕಿಂತಲೂ ಸಾಲ ಕೊಡಲು ಬ್ಯಾಂಕ್ಗಳ ಬಳಿ ಎಷ್ಟು ಹಣ ಲಭ್ಯವಿದೆ ಎಂಬುದೇ ಸಾಲ ಕೊಡುವಿಕೆಯನ್ನು ತಡೆ ಹಿಡಿದಿರುವ ಅಂಶ.
ಹಿಂದಿನ ಸಾಲಗಳು ವಸೂಲಾಗದೇ ಉಳಿದ ಕಾರಣದಿಂದಾಗಿ ಬ್ಯಾಂಕ್ಗಳ ಬಳಿ ಹೊಸ ಸಾಲ ಕೊಡಲು ಹಣ ಲಭ್ಯವಿಲ್ಲ. ಒಂದು ವೇಳೆ ಹೊಸ ಸಾಲಗಳು ಲಭ್ಯವಿದ್ದರೂ ಅದರಿಂದ ಪರಿಸ್ಥಿತಿ ಎಷ್ಟರಮಟ್ಟಿಗೆ ಸುಧಾರಿಸುತ್ತಿತ್ತು ಎಂಬುದು ಸ್ಪಷ್ಟವಿಲ್ಲ. ಅದೇನಿದ್ದರೂ, ಸಾಲ ಲಭ್ಯತೆಯೇ ಬಿಗಿತಗೊಂಡಿರುವ ಪರಿಸ್ಥಿತಿಯಲ್ಲಿ ಬಡ್ಡಿ ದರ ಇಳಿಸುವುದರಿಂದಾಗಿ ಸಾಲ ಲಭ್ಯತೆ ಗಣನೀಯ ಎನ್ನುವಷ್ಟು ಹೆಚ್ಚುವುದಿಲ್ಲ.
ಈ ಪರಿಸ್ಥಿತಿಯಲ್ಲಿ ಅಗತ್ಯವಿರುವುದು ಏನೆಂದರೆ, ವಿತ್ತೀಯ ವಿಸ್ತರಣೆ. ಇಡೀ ಈ ವಿಷಯದ ಸಾರಾಂಶ ಇರುವುದು ಇಲ್ಲೇ. ಚುನಾವಣೆಗಳ ಈ ಕಾಲದಲ್ಲಿ, ಗ್ರಾಮೀಣ ಬಡವರಿಗೆ ದೊಡ್ಡ ಮೊತ್ತದ ಹಣವನ್ನು ಅವರ ಖಾತೆಗೆ ನೇರವಾಗಿ ವರ್ಗಾಯಿಸುವ ಭರವಸೆಯನ್ನು ಬೇರೆ ಬೇರೆ ರಾಜಕೀಯ ಪಕ್ಷಗಳು ಕೊಟ್ಟಿವೆ. ಈ ಕಾರ್ಯಕ್ರಮವು ಖಂಡಿತವಾಗಿಯೂ ದೇಶದ ಆಂತರಿಕ ಮಾರುಕಟ್ಟೆಯನ್ನು ವಿಸ್ತರಿಸುತ್ತದೆ ಮತ್ತು ಸೊರಗುತ್ತಿರುವ ಕೈಗಾರಿಕೆಗಳ ಉತ್ಪಾದನೆಗೆ ಚೈತನ್ಯ ತುಂಬುತ್ತದೆ. ಮೋದಿ ಸರ್ಕಾರವು ತನ್ನ ಕೊನೆಯ ಬಜೆಟ್ನಲ್ಲಿ, ಬಡ ಕುಟುಂಬಗಳಿಗೆ ಸೇರಿದ 12 ಕೋಟಿ ವ್ಯಕ್ತಿಗಳಿಗೆ ತಲಾ ವಾರ್ಷಿಕ 6,000 ರೂಗಳನ್ನು ಕೊಡುವುದಾಗಿ ಭರವಸೆ ಕೊಟ್ಟಿತ್ತು. ಕಾಂಗ್ರೆಸ್ ಅದಕ್ಕಿಂತಲೂ ಮುಂದೆ ಹೋಗಿ, ತನ್ನ ನ್ಯಾಯ ಯೋಜನೆಯಡಿಯಲ್ಲಿ, ಐದು ಕೋಟಿ ಬಡ ಕುಟುಂಬಗಳಿಗೆ ತಿಂಗಳಿಗೆ 6,000 ರೂಗಳಂತೆ ವರ್ಷಕ್ಕೆ 72,000 ರೂಗಳನ್ನು ಕೊಡುವುದಾಗಿ ಭರವಸೆ ಕೊಟ್ಟಿತ್ತು.
ಇಂತಹ ಯೋಜನೆಗಳು, ಅದರಲ್ಲೂ ವಿಶೇಷವಾಗಿ ಭಾರೀ ಮಹತ್ವಾಕಾಂಕ್ಷೆಯ ನ್ಯಾಯ ಯೋಜನೆಯು ದೇಶದ ಆಂತರಿಕ ಮಾರುಕಟ್ಟೆಯನ್ನು ಹಿಗ್ಗಿಸುವಲ್ಲಿ ಸಹಾಯವಾಗುತ್ತಿತ್ತು. ಆದರೆ, ಇಂತಹ ಯೋಜನೆಗೆ ಹಣ ಎಲ್ಲಿದೆ ಎಂಬ ಪ್ರಶ್ನೆ ಏಳುತ್ತದೆ. ಶ್ರೀಮಂತರಿಗೆ ತೆರಿಗೆ ವಿಧಿಸುವ ಮೂಲಕ, ಅಂದರೆ ಅವರ ಸಂಪತ್ತಿನ ಮೇಲೆ ತೆರಿಗೆ ಹಾಕುವ ಮೂಲಕ ಈ ಯೋಜನೆಗೆ ಬೇಕಾಗುವಷ್ಟು ಹಣವನ್ನು ಹೊಂದಿಸಿಕೊಳ್ಳಬಹುದು. ಈ ದೇಶದಲ್ಲಿ ಸಂಪತ್ತಿನ ಮೇಲೆ ತೆರಿಗೆಯೇ ಇಲ್ಲ. ಹಿಂದೆ ಇದ್ದ ಇಂತಹ ಒಂದು ಕಾನೂನನ್ನು ಕಿತ್ತುಹಾಕಿ ವರ್ಷಗಳೇ ಕಳೆದಿವೆ.
ಸಂಪತ್ತು ತೆರಿಗೆಯಂತಹ ಒಂದು ಕಾನೂನನ್ನು ಅಂತಾರಾಷ್ಟ್ರೀಯ ಹಣಕಾಸು ಬಂಡವಾಳವು ಶತಾಯು ಗತಾಯು ವಿರೋಧಿಸುತ್ತದೆ. ನ್ಯಾಯ ಯೋಜನೆಯ ಘೋಷಣೆ ಮಾಡುವಾಗ, ಅದಕ್ಕೆ ಬೇಕಾಗುವ ಹಣ ಹೊಂದಿಸಿಕೊಳ್ಳುವುದು ಕಷ್ಟವಾಗಲಾರದು ಎಂಬ ಬಹಳ ಚಾತುರ್ಯದ ಉತ್ತರ ಕೊಟ್ಟಿದ್ದರು ಮನಮೋಹನ ಸಿಂಗ್. ಆದರೆ, ನವ ಉದಾರ ಆರ್ಥಿಕ ಆಳ್ವಿಕೆಯಲ್ಲಿ ಇಂತಹ ಯೋಜನೆಗೆ ಹಣ ಹೊಂದಿಸಿಕೊಳ್ಳುವುದು ಅತ್ಯಂತ ಕಷ್ಟಕರವಾದ ಕೆಲಸವೇ.
ಅದೇ ರೀತಿಯಲ್ಲಿ ಇಂತಹ ಯೋಜನೆಗೆ ಸರ್ಕಾರವು ವಿತ್ತೀಯ ಕೊರತೆಯ ಮೂಲಕ ಭಾಗಶಃ ಹಣ ಒದಗಿಸಿದರೂ ಅದು ವಿತ್ತೀಯ ಕೊರತೆಯನ್ನು ಹೆಚ್ಚಿಸಿ ಜೊತೆಗೆ, ಈ ಕೊರತೆಯ ಮೇಲೆ ವಿಧಿಸಿರುವ ಮಿತಿಯನ್ನು (ಜಿಡಿಪಿಯ 3.4%) ತಪ್ಪದೇ ಮೀರುತ್ತದೆ. ಆಗ, ಭಾರತದ ಕ್ರೆಡಿಟ್ ರೇಟಿಂಗ್ಅನ್ನು ಕೆಳ ದರ್ಜೆಗೆ ಇಳಿಸುವ ಸಂಭವವಿದೆ. ಅಂತಹ ಸಂದರ್ಭದಲ್ಲಿ, ವಿದೇಶ ವ್ಯಾಪಾರದಿಂದ ಉಂಟಾದ ಕೊರತೆಯನ್ನು ತೀರಿಸುವ ಸಲುವಾಗಿ ಚಾಲ್ತಿ ಖಾತೆಯ(ವಿದೇಶಿ ವಿನಿಮಯ) ಕೊರತೆ ತುಂಬಿಸಿಕೊಳ್ಳುವುದು ಭಾರೀ ಕಷ್ಟದ ಕೆಲಸವಾಗುತ್ತದೆ.
ಚಾಲ್ತಿ ಖಾತೆ ಕೊರತೆ ಸಮಸ್ಯೆಯು ಅಮೇರಿಕಾದ ಒತ್ತಾಯಕ್ಕೆ ಕಟ್ಟುಬಿದ್ದು ಮಾರುಕಟ್ಟೆಯ ದೈನಿಕ ದರದಲ್ಲಿ ತೈಲ ಕೊಂಡಾಗಲೂ ಉಂಟಾಗುತ್ತದೆ. ಈಗ ದೇಶವು ಇರಾನಿನಿಂದ ಅಗ್ಗದ ದರದಲ್ಲಿ ತೈಲ ಕೊಳ್ಳುತ್ತಿದೆ, ಬೇರೊಂದು ಕಾರಣದ ಮೇಲೆ, ಇರಾನಿನಿಂದ ತೈಲ ಕೊಳ್ಳಕೂಡದು ಎಂದು ಅಮೇರಿಕಾ ಒತ್ತಾಯಿಸುತ್ತಿದೆ. ಅಮೇರಿಕಾದ ಒತ್ತಡಕ್ಕೆ ಮೋದಿ ಸರ್ಕಾರವು ಈಗಾಗಲೇ ತಲೆಬಾಗಿದೆ. ಅಧಿಕಾರಕ್ಕೆ ಮರಳಿದ ನಂತರವೂ ಇದೇ ನಿಲುವಿಗೆ ಆತುಕೊಳ್ಳುತ್ತದೆ.
ಈಗಾಗಲೇ ಖಚಿತ ಏರು ಮುಖಿಯಾಗಿರುವ ತೈಲ ಬೆಲೆಗಳಿಂದಾಗಿ ಚಾಲ್ತಿ ಖಾತೆಯಲ್ಲಿ ಕೊರತೆ ಹೆಚ್ಚಲಿದೆ. ಇರಾನಿನ ಮೇಲೆ ಅಮೇರಿಕಾ ಹೇರಿರುವ ನಿರ್ಬಂಧಗಳು ಜಾರಿಯಾದಾಗ ಚಾಲ್ತಿ ಖಾತೆಯಲ್ಲಿ ಕೊರತೆ ಮತ್ತಷ್ಟು ಹೆಚ್ಚಲಿದೆ. ಅದರ ಜೊತೆಗೆ ವಿತ್ತೀಯ ಕೊರತೆಯು ಗರಿಷ್ಠ ಮಿತಿಗಿಂತಲೂ ಹೆಚ್ಚಿಗೆ ಇದ್ದರೆ, ಕ್ರೆಡಿಟ್ ರೇಟಿಂಗ್ ಕೆಳ ದರ್ಜೆಗೆ ಇಳಿಯುತ್ತದೆ. ಅದರ ಪರಿಣಾಮವಾಗಿ ಬಂಡವಾಳದ ಒಳಹರಿವೂ ಬತ್ತುತ್ತದೆ. ಆಗ, ಚಾಲ್ತಿ ಖಾತೆ (ವಿದೇಶಿ ವಿನಿಮಯ) ಕೊರತೆ ನಿಭಾಯಿಸುವುದು ವಾಡಿಕೆಯ ಪ್ರಕಾರ ಸಾಧ್ಯವಾಗುವುದಿಲ್ಲ.
ನಾವೀಗ ಒಂದು ವಿಲಕ್ಷಣ ಪರಿಸ್ಥಿತಿಯಲ್ಲಿದ್ದೇವೆ. ಬಲಿಯುತ್ತಿರುವ ಹಿಂಜರಿತವನ್ನು ತಡೆಯಲು ಒಂದು ಕಡೆ ಪ್ರಯತ್ನಿಸಿದರೆ ಚಾಲ್ತಿ ಖಾತೆ ಕೊರತೆ ನಿಭಾಯಿಸುವುದು ಕಷ್ಟವಾಗುತ್ತದೆ. ಇನ್ನೊಂದು ಕಡೆ ಹಿಂಜರಿತವನ್ನು ತಡೆಯುವ ಯಾವ ಪ್ರಯತ್ನವನ್ನೂ ಮಾಡದಿದ್ದರೆ, ಈಗಾಗಲೇ ಭೀಕರವಾಗಿರುವ ನಿರುದ್ಯೋಗವು ಇನ್ನಷ್ಟು ಭೀಕರವಾಗಗುತ್ತದೆ.
ನಿರುದ್ಯೋಗದ ಭೀಕರತೆ ಸಾರ್ವಜನಿಕರ ಗಮನಕ್ಕೆ ಬರದಿರಲಿ ಎಂಬ ದುರುದ್ದೇಶದಿಂದ ಸರ್ಕಾರವು ನಿರುದ್ಯೋಗ ಪರಿಸ್ಥಿತಿಯ ಬಗ್ಗೆ ಯಾವ ಅಂಕಿ ಅಂಶಗಳನ್ನು ಅಧಿಕೃತವಾಗಿ ಪ್ರಕಟಿಸಲು ಎರಡು ವರ್ಷಗಳಿಂದಲೂ ನಿರಾಕರಿಸಿದೆ. ಆದರೆ, ಸರ್ಕಾರದ ಅಂಕಿ ಸಂಖ್ಯೆಗಳ ಸಂಸ್ಥೆಯು ಬಚ್ಚಿಟ್ಟಿದ್ದ ಒಂದು ವರದಿಯು ಸೋರಿಕೆಯಾಗಿದೆ. ಈ ವರದಿಯ ಪ್ರಕಾರ, 6.1%ನಿರುದ್ಯೋಗ ದರ ಏರಿಕೆ ಕಳೆದ 45ವರ್ಷಗಳಲ್ಲೇ ಅತಿ ಹೆಚ್ಚಿನದು.
ಭಾರತದ ಅರ್ಥವ್ಯವಸ್ಥೆಯ ಬೆಳವಣಿಗೆಗಳನ್ನು ಗಮನಿಸುತ್ತಿರುವ ಸಿಎಂಐಇ ಸಂಸ್ಥೆಯ ಪ್ರಕಾರ 2019ರ ಎಪ್ರಿಲ್ನಲ್ಲಿ ನಿರುದ್ಯೋಗ ದರ 7.6% ಇತ್ತು. ನಿರುದ್ಯೋಗ ದರವು ನಿರುದ್ಯೋಗದ ಏರಿಕೆ ಅಥವಾ ಇಳಿಕೆಯ ದಿಕ್ಕನ್ನು ಸೂಚಿಸುತ್ತದೆಯಲ್ಲದೆ ಅದರ ಅಗಾಧತೆಯನ್ನು ತೋರಿಸುವುದಿಲ್ಲ. ಏಕೆಂದರೆ, ಉದ್ಯೋಗಗಳ ಹರವು ಏಕ ರೂಪದಲ್ಲಿಲ್ಲ. ಎಲ್ಲೋ ಕೆಲವರು ಪೂರ್ಣಾವಧಿ ಉದ್ಯೋಗದಲ್ಲಿದ್ದರೆ, ಹೆಚ್ಚಿನ ಮಂದಿ ಅರೆ ಕಾಲಿಕ ಉದ್ಯೋಗದಲ್ಲಿದ್ದಾರೆ, ಉಳಿದವರು ಪೂರಾ ನಿರುದ್ಯೋಗಿಗಳು.
ಆದ್ದರಿಂದ, ಸರ್ಕಾರವು ನಿರುದ್ಯೋಗ ಪರಿಸ್ಥಿತಿಯನ್ನು ತಕ್ಕಮಟ್ಟಿಗಾದರೂ ಸುಧಾರಿಸುವ ಕೆಲಸ ಮಾಡಬೇಕು. ಆದರೆ, ಈ ನಿಟ್ಟಿನಲ್ಲಿ ಏನು ಮಾಡಲು ಹೊರಟರೂ, ನವ ಉದಾರ ಮಾದರಿಯ ಆರ್ಥಿಕ ಆಳ್ವಿಕೆಯ ಸಂದರ್ಭದಲ್ಲಿ, ಅದು ವಿದೇಶ ವ್ಯಾಪಾರದ ಬಾಕಿ ಚುಕ್ತಾ (ಪಾವತಿ ಶೇಷ) ಪರಿಸ್ಥಿತಿಯನ್ನು ಅಸ್ಥಿರಗೊಳಿಸುತ್ತದೆ. ಮಾಡಿದ್ದುಣ್ಣೋ ಮಹರಾಯ ಎಂಬಂತಾಗಿದೆ ನವ ಉದಾರ ಆರ್ಥಿಕ ಮಾದರಿಯ ಪರಿಸ್ಥಿತಿ.
ನವ ಉದಾರವಾದವೇ ತನ್ನ ಅಂತ್ಯವನ್ನು ತಲುಪಿರುವ ಪರಿಸ್ಥಿತಿಯಲ್ಲಿ ಅದರ ಹಿಡಿತದಿಂದ ಕಳಚಿಕೊಳ್ಳುವ ಒಂದು ಅವಕಾಶವಿದೆ. ವಿದೇಶ ವ್ಯಾಪಾರ ಮತ್ತು ಬಂಡವಾಳದ ಹರಿವಿನ ಮೇಲೆ ನಿಯಂತ್ರಣ ಹೇರುವ ಮೂಲಕ ನವ ಉದಾರವಾದದ ಹಿಡಿತದಿಂದ ಕಳಚಿಕೊಳ್ಳುವ ಅವಕಾಶವನ್ನು ಸದುಪಯೋಗಿಸಿ ಕೊಳ್ಳಬಹುದು. ಅಮೇರಿಕಾ ಈಗಾಗಲೇ ವಿದೇಶ ವ್ಯಾಪಾರದ ಮೇಲೆ ನಿಯಂತ್ರಣ ಹೇರಿದೆ.
ಭಾರತವೂ ಅದನ್ನು ಅನುಸರಿಸಬಹುದಿತ್ತು. ಅಂತಹ ಒಂದು ತೀರ್ಮಾನ ಕೈಗೊಂಡಾಗ, ಸಂಪತ್ತು ತೆರಿಗೆ ಮತ್ತು ಅನುವಂಶಿಕ ಆಸ್ತಿ ತೆರಿಗೆ ವಿಧಿಸುವುದು ಸಾಧ್ಯವಾಗುತ್ತಿತ್ತು. ಅಂತಹ ಪರಿಸ್ಥಿತಿಯಲ್ಲಿ, ಚುನಾವಣೆಗಳ ಸಮಯದಲ್ಲಿ ಗ್ರಾಮೀಣ ಬಡವರಿಗೆ ದೊಡ್ಡ ಮೊತ್ತದ ಹಣವನ್ನು ಅವರ ಖಾತೆಗೆ ನೇರವಾಗಿ ವರ್ಗಾಯಿಸುವುದಾಗಿ ಕೊಟ್ಟಿದ್ದ ಭರವಸೆಯನ್ನು ಈಡೇರಿಸುವುದು ಸಾಧ್ಯವಿತ್ತು. ವರ್ಗಾವಣೆಯ ಈ ಕಾರ್ಯಕ್ರಮವು ಖಂಡಿತವಾಗಿಯೂ ದೇಶದ ಆಂತರಿಕ ಮಾರುಕಟ್ಟೆಯನ್ನು ವಿಸ್ತರಿಸುತ್ತಿತ್ತು. ತರುವಾಯ ಆಹಾರ ಧಾನ್ಯಗಳ ಉತ್ಪಾದನೆ ಹೆಚ್ಚಿಸುವ ಕ್ರಮ ಕೈಗೊಳ್ಳಬಹುದಿತ್ತು.
ಈ ರೀತಿಯಲ್ಲಿ ನೀತಿಗಳನ್ನು ಬದಲಾಯಿಸಿಕೊಂಡಿದ್ದರೆ, ಬಂಡವಾಳದ ಒಳ ಹರಿವು ಬತ್ತಿದರೂ ತಲೆ ಕೆಡಿಸಿಕೊಳ್ಳುವ ಅಗತ್ಯವಿಲ್ಲ. ಏಕೆಂದರೆ, ವಿದೇಶ ವ್ಯಾಪಾರದ ಮೇಲೆ ನಿಯಂತ್ರಣ ಹೇರಿದಾಗ ಚಾಲ್ತಿ ಖಾತೆಯ ಕೊರತೆಯೂ ಹದ್ದುಬಸ್ತಿನಲ್ಲಿರುತ್ತದೆ. ಹಾಗಾಗಿ, ವಿದೇಶ ವ್ಯಾಪಾರದ ಬಾಕಿ ಚುಕ್ತಾ ಮಾಡುವುದೂ ಸಮಸ್ಯೆಯಾಗುವುದಿಲ್ಲ.
ಆದರೆ, ನವ ಉದಾರವಾದವು ತನ್ನ ಅಂತ್ಯವನ್ನು ತಲುಪಿದೆ ಎಂಬ ಅರಿವು ಮೋದಿ ಸರ್ಕಾರಕ್ಕೆ ಇದ್ದಂತಿಲ್ಲ. ನವ ಉದಾರವಾದೀ ಸುಧಾರಣೆಗಳ ವಿನ್ಯಾಸಕಾರನಾದ ಕಾಂಗ್ರೆಸ್ ಪಕ್ಷಕ್ಕೆ, ನ್ಯಾಯ ಯೋಜನೆಯ ಬಗ್ಗೆ ಕೊಟ್ಟ ಭರವಸೆಯ ಹೊರತಾಗಿಯೂ, ನವ ಉದಾರವಾದಕ್ಕೆ ಮುಂದಕ್ಕೆ ಸಾಗಲು ದಾರಿ ಕಾಣದಾಗಿರುವಾಗ ಅದನ್ನು ಧಿಕ್ಕರಿಸುವ ನೀತಿಗಳನ್ನು ಅನುಸರಿಸುವ ಧೈರ್ಯವಿಲ್ಲ. ಆದ್ದರಿಂದ, ಕೈಗಾರಿಕಾ ಹಿಂಜರಿತವು ಉಲ್ಬಣಗೊಳ್ಳುವ ಸಂಭವವಿದೆ.
–ಪ್ರೊ. ಪ್ರಭಾತ್ ಪಟ್ನಾಯಕ್
ಅನು: ಕೆ.ಎಂ.ನಾಗರಾಜ್
(ಈ ವಾರದ ಜನಶಕ್ತಿ ವಾರಪತ್ರಿಕೆಯಲ್ಲಿ ಪ್ರಕಟವಾದ ಲೇಖನ)
ಸುದ್ದಿದಿನ.ಕಾಂ|ವಾಟ್ಸಾಪ್|9980346243
ದಿನದ ಸುದ್ದಿ
ಇಂದಿನಿಂದ ಏ.3 ರವರೆಗೆ ಸೂಳೆಕೆರೆಗೆ ನೀರು ಬಿಡುಗಡೆ
ಸುದ್ದಿದಿನ,ದಾವಣಗೆರೆ: ಭದ್ರಾ ಜಲಾಶಯ ಯೋಜನೆ ವ್ಯಾಪ್ತಿಗೆ ಬರುವ ದೇವರಬೆಳಕೆರೆ ಪಿಕ್ಅಪ್ ಅಣೆಕಟ್ಟಿನ ಸ್ಕವರಿಂಗ್ ಸ್ಪೂಯೀಸ್ ಗೇಟ್ ಮುಖಾಂತರ ಜಲಾಶಯದ ಡೆಡ್ ಸ್ಟೋರೇಜ್ ನೀರನ್ನು ಸೂಳೆಕೆರೆ ಹಳ್ಳಕ್ಕೆ ಮಾರ್ಚ್ 28 ರಿಂದ ಏಪ್ರಿಲ್ 3 ರವರೆಗೆ ಪ್ರತಿದಿನ 20 ಕ್ಯೂಸೆಕ್ಸ್ಗಳಲ್ಲಿ ಜನ-ಜಾನುವಾರು ಪಕ್ಷಿಗಳಿಗೆ ಕುಡಿಯುವ ನೀರು ಒದಗಿಸಲು ಹಾಗೂ ಅಕ್ಕಪಕ್ಕದ ಗ್ರಾಮಗಳ ಕುಡಿಯುವ ನೀರಿನ ಉದ್ದೇಶಕ್ಕೆ ಬಿಡಲಾಗುತ್ತಿದೆ.
ಈ ವೇಳೆ ಹಳ್ಳಕ್ಕೆ ದನ ಕರಗಳನ್ನು ಇಳಿಸುವುದಾಗಲಿ, ಪಂಪ್ಸೆಟ್ಗಳಿಂದ ನೀರೆತ್ತುವುದುನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ ಎಂದು ಕನೀನಿನಿ ಕಾರ್ಯಪಾಲಕ ಇಂಜಿನಿಯರ್ ತಿಳಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243
ದಿನದ ಸುದ್ದಿ
ಲೋಕಸಭಾ ಚುನಾವಣೆಯ ಮೊದಲ ಹಂತಕ್ಕೆ ನಾಮಪತ್ರ ಸಲ್ಲಿಕೆಗೆ ಇಂದು ಕೊನೆಯ ದಿನ
ಸುದ್ದಿದಿನ ಡೆಸ್ಕ್ : ಲೋಕಸಭಾ ಚುನಾವಣೆಯ ಮೊದಲ ಹಂತಕ್ಕೆ ನಾಮಪತ್ರ ಸಲ್ಲಿಸಲು ಇಂದು ಕೊನೆಯ ದಿನವಾಗಿದೆ.
ನಾಳೆ ನಾಮಪತ್ರಗಳ ಪರಿಶೀಲನೆ ನಡೆಯಲಿದ್ದು, ಇದೇ 30 ನಾಮಪತ್ರ ಹಿಂಪಡೆಯಲು ಕಡೆಯ ದಿನವಾಗಿದೆ. ಇದೇ ವೇಳೆ ಬಿಹಾರದಲ್ಲಿ ನಾಮಪತ್ರ ಸಲ್ಲಿಕೆಗೆ ನಾಳೆ ಕಡೆ ದಿನವಾಗಿದ್ದು, ಈ ತಿಂಗಳ 30 ರಂದು ನಾಮಪತ್ರಗಳ ಪರಿಶೀಲನೆ ಹಾಗೂ ಏಪ್ರಿಲ್ 2ರಂದು ನಾಮತ್ರ ಹಿಂಪಡೆಯುವಿಕೆಗೆ ಕೊನೆಯ ದಿನವಾಗಿರುತ್ತದೆ.
ಏಪ್ರಿಲ್ 19 ರಂದು 17 ರಾಜ್ಯಗಳು ಮತ್ತು ನಾಲ್ಕು ಕೇಂದ್ರಾಡಳಿತ ಪ್ರದೇಶಗಳಲ್ಲಿನ 102ಲೋಕಸಭಾ ಕ್ಷೇತ್ರಗಳಿಗೆ ಮೊದಲ ಹಂತದಲ್ಲಿ ಚುನಾವಣೆ ನಡೆಯಲಿದೆ. ಅದರಂತೆ ತಮಿಳುನಾಡಿನಲ್ಲಿ 39, ರಾಜಸ್ಥಾನದಲ್ಲಿ 12, ಉತ್ತರ ಪ್ರದೇಶದಲ್ಲಿ 8, ಮಧ್ಯಪ್ರದೇಶದಲ್ಲಿ 6, ಉತ್ತರಾಖಂಡ, ಅಸ್ಸಾಂ ಮತ್ತು ಮಹಾರಾಷ್ಟ್ರದಲ್ಲಿ ತಲಾ 5 , ಬಿಹಾರದಲ್ಲಿ 4, ಪಶ್ಚಿಮ ಬಂಗಾಳದಲ್ಲಿ 3, ಅರುಣಾಚಲ ಪ್ರದೇಶ, ಮಣಿಪುರ, ಮೆಘಾಲಯದಲ್ಲಿ ತಲಾ 2 ಮತ್ತು ಛತ್ತೀಸ್ಗಢ, ಮಿಜೋರಾಂ, ನಾಗಾಲ್ಯಾಂಡ್, ಸಿಕ್ಕಿಂ, ತ್ರಿಪುರ, ಅಂಡಮಾನ್-ನಿಕೋಬಾರ್ ದ್ವೀಪಗಳು, ಜಮ್ಮು-ಕಾಶ್ಮೀರ, ಲಕ್ಷದ್ವೀಪ ಮತ್ತು ಪುದುಚೇರಿಯಲ್ಲಿ ತಲಾ ಒಂದು ಕ್ಷೇತ್ರದಲ್ಲಿ ಮೊದಲ ಹಂತದಲ್ಲಿ ಚುನಾವಣೆ ನಡೆಯಲಿದೆ.
ಎರಡನೇ ಹಂತದಲ್ಲಿ 89 ಲೋಕಸಭಾ ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದ್ದು, ಚುನಾವಣಾ ಆಯೋಗ ನಾಳೆ ಅಧಿಸೂಚನೆ ಹೊರಡಿಸಲಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243
ದಿನದ ಸುದ್ದಿ
ಚುನಾವಣಾ ಅಕ್ರಮ ; ಸಾರ್ವಜನಿಕರು ದೂರು ಸಲ್ಲಿಸಲು ಆಯೋಗದಿಂದ ಸಿ-ವಿಜಿಲ್ ಆಪ್ ಅಭಿವೃದ್ಧಿ
ಸುದ್ದಿದಿನ ಡೆಸ್ಕ್ : 18ನೇ ಲೋಕಸಭೆಗೆ ಸದಸ್ಯರನ್ನು ಆಯ್ಕೆ ಮಾಡಲು ನಡೆಯಲಿರುವ ಸಾರ್ವತ್ರಿಕ ಚುನಾವಣೆಗೆ ಭಾರತ ಚುನಾವಣಾ ಆಯೋಗ, ಸಕಲ ಸಿದ್ಧತೆಯೊಂದಿಗೆ ಸಜ್ಜಾಗಿದೆ.
ದೇಶದಲ್ಲಿ ಚುನಾವಣೆಗಳನ್ನು ಪಾರದರ್ಶಕವಾಗಿ ಹಾಗೂ ಅತ್ಯಂತ ವಿಶ್ವಾಸಾರ್ಹ ರೀತಿಯಲ್ಲಿ ನಡೆಸುವ ಸಂಕಲ್ಪದೊಂದಿಗೆ ಚುನಾವಣಾ ಆಯೋಗ, ಸಮಸ್ತ ಚುನಾವಣಾ ಪ್ರಕ್ರಿಯೆಗಳನ್ನು ಸುಗಮಗೊಳಿಸಲು ತಂತ್ರಜ್ಞಾನದ ನೆರವನ್ನು ಬಳಸಿಕೊಳ್ಳುತ್ತಿದೆ. ಈ ನಿಟ್ಟಿನಲ್ಲಿ ಮತದಾರರು, ಚುನಾವಣಾ ಸಿಬ್ಬಂದಿ ಹಾಗೂ ಆಯೋಗಕ್ಕೆ ನೆರವಾಗುವ ಹಲವು ಆಪ್ಗಳನ್ನು ಚುನಾವಣಾ ಆಯೋಗ ಅಭಿವೃದ್ಧಿಪಡಿಸಿದೆ.
ಈ ಪೈಕಿ ಇಂದು ಸಿ-ವಿಜಿಲ್ ಆಪ್ ಬಗ್ಗೆ ಮಾಹಿತಿ.
ದೇಶದಲ್ಲಿ ಚುನಾವಣೆಗಳ ವೇಳೆ ನಡೆಯುವ ಅಕ್ರಮಗಳು, ಮಾದರಿ ನೀತಿ ಸಂಹಿತೆಯ ಉಲ್ಲಂಘನೆ ಪ್ರಕರಣಗಳ ಮೇಲೆ ಕಣ್ಣಿಡುವುದು ಕೇವಲ ಚುನಾವಣಾ ಸಿಬ್ಬಂದಿಯ ಕೆಲಸವಲ್ಲ. ಇದು ಪ್ರತಿಯೊಬ್ಬ ನಾಗರಿಕನ ಕರ್ತವ್ಯವೂ ಹೌದು. ಹಾಗಾಗಿ ಚುನಾವಣಾ ಅಕ್ರಮಗಳ ಬಗ್ಗೆ ಸಾರ್ವಜನಿಕರು ಆಯೋಗಕ್ಕೆ ದೂರು ತಲುಪಿಸಲು ಭಾರತ ಚುನಾವಣಾ ಆಯೋಗ ಸಿ-ವಿಜಿಲ್ ಆಪ್ ಅನ್ನು ಅಭಿವೃದ್ಧಿ ಪಡಿಸಿದೆ.
ದೂರುಗಳನ್ನು ಆನ್ಲೈನ್ ಮೂಲಕ ಆಯೋಗಕ್ಕೆ ರವಾನಿಸಲು ಈ ಆಪ್ ನೆರವಾಗುವುದು. ಯಾವುದೇ ಚುನಾವಣಾ ಅಕ್ರಮಗಳ ಬಗ್ಗೆ ಧ್ವನಿಮುದ್ರಣ, ವಿಡಿಯೋ ಚಿತ್ರದ ತುಣುಕುಗಳು ಮತ್ತು ಫೋಟೊ ಮೊದಲಾದ ದಾಖಲೆಗಳನ್ನು ಸಾರ್ವಜನಿಕರು ಇದರ ಮೂಲಕ ಕಳುಹಿಸಬಹುದು.
ಚುನಾವಣೆಗಳಲ್ಲಿ ರಾಜಕೀಯ ಪಕ್ಷಗಳು, ಅಭ್ಯರ್ಥಿಗಳು ಮಾಡುವ ಖರ್ಚು-ವೆಚ್ಚ, ಮತದಾರರ ಮನವೊಲಿಕೆಗೆ ಆಮಿಷಗಳ ಬಳಕೆ ಮೊದಲಾದ ಅಕ್ರಮಗಳ ಬಗ್ಗೆ ದೂರು ನೀಡಲು ಇದನ್ನು ಬಳಸಬಹುದು. ಒಂದುನೂರು ನಿಮಿಷಗಳಲ್ಲಿ ಚುನಾವಣಾಧಿಕಾರಿಗಳು ಅಗತ್ಯ ಕ್ರಮ ಕೈಗೊಳ್ಳುತ್ತಾರೆ ಎಂದು ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಹೇಳಿದ್ದಾರೆ.
ದೇಶದ ಯಾವ ಮೂಲೆಯಲ್ಲೇ ಆಗಲಿ ನಡೆಯುವ ಚುನಾವಣಾ ಅಕ್ರಮ ಅಥವಾ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣಗಳ ಬಗ್ಗೆ ತಾವು ನೀಡಿದ ದೂರುಗಳನ್ನು ಆಯೋಗ ಪರಿಗಣಿಸಿದೆಯೇ ಎನ್ನುವ ವಿವರಗಳನ್ನು ಸಹ ಸಾರ್ವಜನಿಕರು ಸಿ-ವಿಜಿಲ್-ಆಪ್ ಮೂಲಕ ವೀಕ್ಷಿಸಬಹುದು.
ಸುದ್ದಿದಿನ.ಕಾಂ|ವಾಟ್ಸಾಪ್|9980346243
-
ದಿನದ ಸುದ್ದಿ7 days ago
ನಾಯಕನ ಹಟ್ಟಿ | ಶ್ರೀಗುರು ತಿಪ್ಪೇರುದ್ರಸ್ವಾಮಿ ರಥೋತ್ಸವಕ್ಕೆ ವಿಶೇಷ ಬಸ್ ಸೌಲಭ್ಯ
-
ದಿನದ ಸುದ್ದಿ6 days ago
ಲೋಕಸಭಾ ಚುನಾವಣೆ : ಚುನಾವಣಾ ಚಟುವಟಿಕೆಗಳ ಕುರಿತ ಜಿಲ್ಲಾವಾರು ಮಾಹಿತಿ
-
ದಿನದ ಸುದ್ದಿ6 days ago
ವಿಜಯಪುರ ಜಿಲ್ಲಾ ಸಾಹಿತ್ಯ ಸಮ್ಮೇಳನದ ಕವಿಗೋಷ್ಠಿಗೆ ಮೈಬೂಬಸಾಹೇಬ.ವೈ.ಜೆ ಆಯ್ಕೆ
-
ದಿನದ ಸುದ್ದಿ6 days ago
ಬೆಂಗಳೂರಿನಲ್ಲಿ ಬಿಜೆಪಿ ನೂತನ ಮಾಧ್ಯಮಕೇಂದ್ರ ಆರಂಭ
-
ದಿನದ ಸುದ್ದಿ5 days ago
ಲೋಕಸಭಾ ಚುನಾವಣೆ | ಹೊಸ ಮತದಾರರೆಷ್ಟು ಗೊತ್ತಾ..?
-
ದಿನದ ಸುದ್ದಿ5 days ago
ಕವಿತೆ | ನೆನಪು
-
ದಿನದ ಸುದ್ದಿ3 days ago
ಚುನಾವಣಾ ಅಕ್ರಮ ; ಸಾರ್ವಜನಿಕರು ದೂರು ಸಲ್ಲಿಸಲು ಆಯೋಗದಿಂದ ಸಿ-ವಿಜಿಲ್ ಆಪ್ ಅಭಿವೃದ್ಧಿ
-
ದಿನದ ಸುದ್ದಿ2 days ago
ಲೋಕಸಭಾ ಚುನಾವಣೆಯ ಮೊದಲ ಹಂತಕ್ಕೆ ನಾಮಪತ್ರ ಸಲ್ಲಿಕೆಗೆ ಇಂದು ಕೊನೆಯ ದಿನ