ದಿನದ ಸುದ್ದಿ
ಭಾರತದ ದಿವ್ಯ ಮೌನವೇ ಗಟ್ಟಿಯಾದ ಧ್ವನಿ
- ಮೂಲ : ಗೋಪಾಲಕೃಷ್ಣ ಗಾಂಧಿ (ದ ಹಿಂದೂ 15-9-20),ಅನುವಾದ : ನಾ ದಿವಾಕರ
1918-20ರ ಸ್ಪಾನಿಷ್ ಫ್ಲೂ, 1958, 66, 73 ಮತ್ತು 1980ರ ಆರ್ಥಿಕ ಹಿಂಜರಿತ ಮತ್ತು 1962ರ ಭಾರತ-ಚೀನಾ ಯುದ್ಧ ಇವೆಲ್ಲವೂ ಮತ್ತೊಮ್ಮೆ ಭಾರತವನ್ನು, ಭಾರತೀಯರನ್ನು ಕಾಡುತ್ತಿದೆ. ಈ ಬಹುಮುಖಿ ಸಮಸ್ಯೆಯನ್ನು ಹೇಗೆ ನಿಭಾಯಿಸುವುದು ಎಂದು ಬಹುಶಃ ಯಾರಿಗೂ ತಿಳಿಯುತ್ತಿಲ್ಲ. ವಾಸ್ತವ ಎಂದರೆ ವಸ್ತುಸ್ಥಿತಿ ಹೇಗಿದೆ ಎಂದೂ ಯಾರಿಗೂ ಸ್ಪಷ್ಟವಾಗಿ ತಿಳಿದಿಲ್ಲ.
ಕೋವಿದ್ 19 ಕುರಿತಂತೆ ನಮಗೆ ಕರಾರುವಾಕ್ಕಾಗಿ, ವಸ್ತುನಿಷ್ಠವಾಗಿ, ಅಧಿಕಾರಯುತವಾಗಿ, ಸಮಾಧಾನಕರವಾಗಿ ನಿರ್ದಿಷ್ಟ ಮಾಹಿತಿಯನ್ನು ನಮಗೆ ಯಾರೂ ನೀಡುತ್ತಿಲ್ಲ. ಸಾಂಕ್ರಾಮಿಕ ರೋಗಗಳ ತಜ್ಞ ಡಾ ಟಿ ಜಾಕಬ್ ಜಾನ್ ಅವರು ಹೇಳುವಂತೆ ಭಾರತ ಬ್ರೆಜಿಲ್ ಮತ್ತು ಅಮೆರಿಕವನ್ನೂ ಹಿಂದಿಕ್ಕಿ , ವಿಶ್ವದಲ್ಲೇ ಅತಿ ಹೆಚ್ಚು ಕೊರೋನಾ ಸೋಂಕಿತರನ್ನು ಹೊಂದಿರುವ ದೇಶವಾಗಿ ಹೊರಹೊಮ್ಮುತ್ತಿದೆ.
ದಿನನಿತ್ಯ ವರದಿಯಾಗುವ ಕೊರೋನಾ ಸೋಂಕಿತರ ಸಂಖ್ಯೆಯಲ್ಲಿ ಭಾರತ ವಿಶ್ವದಲ್ಲೇ ಪ್ರಥಮ ಸ್ಥಾನದಲ್ಲಿದೆ. ಆದರೆ ಈ ಕುರಿತು ಸವಿವರವಾಗಿ ತಿಳಿದುಕೊಳ್ಳುವುದು ಸಾಕಷ್ಟಿದೆ. ಸರ್ಕಾರಿ ಮೂಲಗಳಿಂದ ಅಧಿಕೃತ ಮಾಹಿತಿಯನ್ನು ಈ ದೇಶದ ನಾಗರಿಕರು ಪಡೆಯಬೇಕಿದೆ. ಇದು ಸಾಧ್ಯವಾಗುತ್ತಿಲ್ಲ.
ಭಾರತದಲ್ಲಿ ಕೋವಿದ್ 19 ಸಾಮುದಾಯಿಕವಾಗಿ ಹರಡುತ್ತಿದೆಯೇ? (ಸಮುದಾಯ ಪ್ರಸರಣ ಏಪ್ರಿಲ್ ತಿಂಗಳಲ್ಲೇ ಆರಂಭವಾಗಿದೆ ಎಂದು ಆಗಲೇ ತಜ್ಞರು, ವೈದ್ಯರು ಎಚ್ಚರಿಸಿದ್ದರು-ಅನು) ಇದು ಹೌದಾದರೆ ದಿನನಿತ್ಯದ ಪರೀಕ್ಷೆ ಮತ್ತು ತಪಾಸಣೆಯ ಪ್ರಮಾಣವನ್ನು ಹೆಚ್ಚಿಸಬೇಕು. ಅವಶ್ಯಕತೆಗೆ ಅನುಗುಣವಾಗಿ ಆಸ್ಪತ್ರೆಯಲ್ಲಿ ಹಾಸಿಗೆ ಸೌಲಭ್ಯಗಳು ಮತ್ತು ವೆಂಟಿಲೇಟರ್ಗಳನ್ನು ಒದಗಿಸಬೇಕು.
ಅಥವಾ ಜನರು ತಮ್ಮ ಮನೆಯಲ್ಲಿದ್ದುಕೊಂಡೇ ತಾವೇ ಪರೀಕ್ಷೆ ಮಾಡಿಸಿಕೊಂಡು, ಚಿಕಿತ್ಸೆ ಪಡೆದು ಈ ವೈರಾಣುವಿನಿಂದ ಪಾರಾಗಬೇಕು ಎಂದು ಅಪೇಕ್ಷಿಸಲಾಗುತ್ತಿದೆಯೇ ? ಈಗ ಕೊರೋನಾ ವೈರಾಣು ನಗರ ಪ್ರದೇಶಗಳನ್ನು ತೊರೆದು ಭಾರತದ ಹಳ್ಳಿ ಹಳ್ಳಿಗಳನ್ನು ತಲುಪುತ್ತಿದೆಯೇ ? ಇದು ಹೌದಾದರೆ ಗ್ರಾಮೀಣ ಭಾರತದ ಜನತೆಗೆ ತಮ್ಮ ಮೇಲೆ ಎರಗಿರುವ ಈ ಅಪಾಯದ ಅರಿವು ಇದೆಯೇ ? ಭಾರತದ ಗ್ರಾಮಗಳು ಈ ಸೋಂಕಿನ ಪರಿಣಾಮವನ್ನು ಎದುರಿಸಲು ಕನಿಷ್ಟ ಮಟ್ಟದ ತಯಾರಿ ನಡೆಸಿವೆಯೇ ?
ಈ ಸವಾಲನ್ನು ಸಮರ್ಥವಾಗಿ ಎದುರಿಸಲು ಆರೋಗ್ಯ ಕೇಂದ್ರಗಳು ಮತ್ತು ವೈದ್ಯಕೀಯ ಸೌಲಭ್ಯಗಳನ್ನು ಹೊಂದಿವೆಯೇ ? ನಮ್ಮ ಆಲೋಚನೆಯಾದರೂ ಏನು ? ಏನಾದರೂ ಯೋಚಿಸಿರಲೇಬೇಕಲ್ಲವೇ ? ಸೋಂಕಿನ ಪ್ರಮಾಣ ಮತ್ತು ಪ್ರಸರಣ ಗಗನಕ್ಕೇರುತ್ತಿರುವ ಸಂದರ್ಭದಲ್ಲಿ ದೇಶಾದ್ಯಂತ ಎಲ್ಲ ರೀತಿಯ ಚಟುವಟಿಕೆಗಳಿಗೂ ಅವಕಾಶ ನೀಡುತ್ತಿರುವ ಅಧಿಕಾರ ವರ್ಗದಲ್ಲಿ ಈ ಆಲೋಚನೆ ಬಂದಿರಬೇಕಲ್ಲವೇ ? ಇದಕ್ಕೆ ತಾರ್ಕಿಕ ವಿವರಣೆ ಖಂಡಿತವಾಗಿಯೂ ಬೇಕಿದೆ.
ಶೋಧಿಸಬೇಕಾದ ಪ್ರಶ್ನೆಗಳು ಹಲವು
ಇದೇ ರೀತಿ ಲಾಕ್ ಡೌನ್ ಪರಿಣಾಮದಿಂದ ಮತ್ತು ಆರ್ಥಿಕ ಹಿಂಜರಿತದ ಪರಿಣಾಮ ದೇಶಾದ್ಯಂತ ವೇತನ ಪಡೆಯುವಂತಹ ನೌಕರರ ಮತ್ತು ಕೂಲಿಯಿಲ್ಲದ ಜನರ ಜೀವನೋಪಾಯ ಸತತವಾಗಿ ಕುಸಿಯುತ್ತಿರುವುದರ ಪರಿಣಾಮ ಏನು ಎನ್ನುವುದು ನಮಗೆ ತಿಳಿದಿಲ್ಲ. ದೇಶದಲ್ಲಿ ಜನಸಾಮಾನ್ಯರ ಕೊಳ್ಳುವ ಸಾಮರ್ಥ್ಯ ಕ್ಷೀಣಿಸುತ್ತಿರುವ ಹಿನ್ನೆಲೆಯಲ್ಲಿ, ರಫ್ತು ಪ್ರಮಾಣ ಕುಸಿಯುತ್ತಿರುವ ಹಿನ್ನೆಲೆಯಲ್ಲಿ ಗ್ರಾಮೀಣ ಪ್ರದೇಶಗಳಲ್ಲಿನ ರೈತರು ಮತ್ತು ಕೃಷಿ ಕಾರ್ಮಿಕರು ತಮ್ಮ ಫಸಲನ್ನು ಏನು ಮಾಡಬಹುದು ಎನ್ನುವುದೂ ನಮಗೆ ತಿಳಿದಿಲ್ಲ.
ನಮ್ಮ ಗೋದಾಮುಗಳಲ್ಲಿ ಭರ್ತಿ ದವಸ ಧಾನ್ಯಗಳು ತುಂಬಿದ್ದರೂ ಇತ್ತ ಜನಸಾಮಾನ್ಯರು ಹಸಿವಿನಿಂದ ಸಾಯುತ್ತಿರುವ ವಿಡಂಬನೆಯನ್ನು ನಾವು ಕಾಣಲಿದ್ದೇವೆಯೇ ? ನಗರಗಳಲ್ಲಿರುವ ಹಿತವಲಯದ ಜನರು ನಿತ್ಯ ಹಾಲು ಖರೀದಿಸುತ್ತಿದ್ದಾರೆ ಆದರೆ ಹಾಲು ಪೂರೈಸುವವರಿಗೆ ಸೂಕ್ತ ಬೆಲೆಯಲ್ಲಿ ಹಣ ಪಾವತಿಸಲಾಗುತ್ತಿದೆಯೇ ? ಈ ವಿಚಾರದಲ್ಲಿ ನಾಗರಿಕರಿಗೆ ಮನದಟ್ಟಾಗುವಂತೆ ತಿಳಿಸಿ ಹೇಳುವ ಹಣಕಾಸು ತಜ್ಞರು ಸರ್ಕಾರದಲ್ಲಿ ಇಲ್ಲವೇ ಇಲ್ಲ.
ಇನ್ನೂ ಮುಖ್ಯವಾದ ಸಂಗತಿ ಎಂದರೆ, ನಮ್ಮ ನಡುವೆ ವಿಶ್ಲೇಷಕರು ಮತ್ತು ಚರ್ಚಾಪಟುಗಳು ಹೇರಳವಾಗಿ ಲಭ್ಯವಿದ್ದರೂ, ವಿದ್ವತ್ ಪೂರ್ಣ ಎನ್ನಬಹುದಾದ ಸಾಮಾಜಿಕ ತತ್ವಶಾಸ್ತ್ರಜ್ಞರು ಇಲ್ಲ. ಭಾರತ ಇಂದು ಎದುರಿಸುತ್ತಿರುವ ವೈದ್ಯಕೀಯ, ಆರ್ಥಿಕ ಮತ್ತು ಪರಿಸರ ಸಂಬಂಧಿತ ಬಿಕ್ಕಟ್ಟಿನ ಎಲ್ಲ ಅಂಶಗಳನ್ನೂ ಪರಸ್ಪರ ಸಂಪರ್ಕಿಸಿ ಇದರ ಜಾಗತಿಕ ಪರಿಣಾಮಗಳನ್ನು ಅರ್ಥಮಾಡಿಕೊಳ್ಳಲು ಭಾರತದ ಪ್ರಜೆಗಳಿಗೆ ಸಾಧ್ಯವಾಗುತ್ತಿಲ್ಲ.
ದೇಶದ ನೈಸರ್ಗಿಕ ಸಂಪತ್ತು ಮತ್ತು ಸಂಪನ್ಮೂಲಗಳನ್ನು, ಮಾನವ ಸಂಪನ್ಮೂಲಗಳನ್ನು ಏಕಸ್ವಾಮ್ಯ ಕಾರ್ಪೋರೇಟ್ ಉದ್ಯಮಿಗಳ ಲಾಭಗಳಿಕೆಗಾಗಿ ಲೂಟಿ ಮಾಡಲಾಗುತ್ತಿರುವುದರಿಂದಲೇ ಭಾರತದ ಪ್ರಜೆಗಳು ಕೋವಿದ್ 19ನಿಂದ ಹೆಚ್ಚಿನ ಬಿಕ್ಕಟ್ಟು ಎದುರಿಸುತ್ತಿದ್ದಾರೆ ಎಂದು ಸುಸ್ಪಷ್ಟವಾಗಿ, ಧೈರ್ಯದಿಂದ ಹೇಳಲು ನಮ್ಮ ನಡುವೆ ದಿ. ಅನಿಲ್ ಅಗರ್ವಾಲ್ ಅವರಂತಹ ತಜ್ಞರು ಇಲ್ಲ.
ಈ ಬಿಕ್ಕಟ್ಟು ಎಲ್ಲರನ್ನೂ ಬಾಧಿಸಿದೆ. ಸರ್ಕಾರಕ್ಕೂ ಇದರ ಬಿಸಿ ತಟ್ಟಿದೆ. ಸಿಡಿಲಿನಂತೆ ಎರಗಿದೆ. ಎಲ್ಲರೂ ಸಹ, ವಿಶೇಷವಾಗಿ ಆಡಳಿತಾರೂಢ ಸರ್ಕಾರ ದಿನನಿತ್ಯ ಇದರಿಂದ ಪಾಠ ಕಲಿಯುವಂತಾಗಿದೆ. ಆದರೆ ಜ್ಞಾನದ ಕೊರತೆ ನಮ್ಮೊಳಗಿನ ಪೊಳ್ಳುತನವನ್ನು ಹೊರಗೆಡಹುತ್ತಿದೆ.
ಕುತೂಹಲಕಾರಿ ಸಂಗತಿ ಎಂದರೆ ಕೋವಿದ್ 19 ನಿವಾರಣೆಗೆ ಲಸಿಕೆ ಕಂಡುಹಿಡಿಯುವ ಬಗ್ಗೆ ಪುಂಖಾನುಪುಂಖವಾಗಿ ಊಹೆಗೂ ನಿಲುಕದಂತಹ ವಿಚಾರಗಳನ್ನು ಹಂಚಿಕೊಳ್ಳಲಾಗುತ್ತಿದೆ. 6 ರಿಂದ 12 ತಿಂಗಳಲ್ಲಿ ಲಸಿಕೆ ಸಿದ್ಧವಾಗುತ್ತಿದೆ ಎಂದವರೇ ಈಗ ಭಾರತದ 130 ಕೋಟಿ ಜನರನ್ನು ತಲುಪುವಷ್ಟು ಲಸಿಕೆಗೆ ಇನ್ನೂ ಐದಾರು ವರ್ಷ ಬೇಕಾಗುತ್ತದೆ ಎಂದು ಹೇಳುತ್ತಿದ್ದಾರೆ. ಬಹುಶಃ ನಾವು ಕೊರೋನಾ ಯುಗದಲ್ಲಿ ಊಹೆಗಳಲ್ಲೇ ಬದುಕುತ್ತೇವೆ ಎನಿಸುತ್ತದೆ.
ನಮ್ಮನ್ನು ರಕ್ಷಿಸುವವರು ಎಂದು ಅವತರಿಸುತ್ತಾರೋ ಎನ್ನುವ ಕುತೂಹಲ ಸಮಸ್ತ ಜನತೆಯಲ್ಲೂ ಕಂಡುಬರುತ್ತಿದೆ. ಆದರೆ ಅಂತಹ ಸಂರಕ್ಷಕನೊಬ್ಬ ಅವತರಿಸುತ್ತಾನೆ ಎಂಬ ನಿರೀಕ್ಷೆಯಲ್ಲಿರುವುದು ಮಾನವ ಸಮಾಜದ ಜ್ಞಾನ ಪರಂಪರೆಗೆ ಮತ್ತು ಆತ್ಮಗೌರವಕ್ಕೆ ಸಲ್ಲುವುದಲ್ಲ. ಸಾಂಕ್ರಾಮಿಕ ಪಿಡುಗಿನ ಕಬಂಧ ಬಾಹುಗಳಲ್ಲಿ ಸಿಲುಕಿ, ಆರ್ಥಿಕ ಹಿಂಜರಿತವನ್ನು ಎದುರಿಸಿ, ಯುದ್ಧದ ವಾತಾವರಣವನ್ನು ಎದುರಿಸುತ್ತಿರುವ ಈ ಸಂದರ್ಭದಲ್ಲಿ, ಈ ದೇಶದ ನಾಗರಿಕರಾದ ನಾವು ಏನು ಮಾಡಬೇಕು ?
ಪ್ರಭುತ್ವದ ಆಧಾರ ಸ್ತಂಭಗಳು
ವಸ್ತುಸ್ಥಿತಿಯನ್ನು ಅರಿಯುವುದೆಂದರೆ ಪರಿಸ್ಥಿತಿಯನ್ನು ನಿಯಂತ್ರಿಸಲು ಶಕ್ತರಾಗಿರುವುದು ಎಂದರ್ಥ. ಈಗಿನ ವಾಸ್ತವ ಸನ್ನಿವೇಶ, ಪರಿಸ್ಥಿತಿ ಹೇಗಿದೆ ಎಂದು ನಮಗೆ ತಿಳಿಯಬೇಕಿದೆ ಎಂದು ನಾವು ಆಗ್ರಹಿಸಲು ಇದು ಸಕಾಲ. ಕೊರೋನಾ ವೈರಾಣು ಮತ್ತು ಅದರ ಪರಿಣಾಮವನ್ನು ಮುಚ್ಚಿಟ್ಟಿದ್ದಕ್ಕಾಗಿ ಚೀನಾ ತೀವ್ರ ಖಂಡನೆಗೊಳಗಾಗಿದೆ.
ನಾವೂ ಸಹ ಇದೇ ಆರೋಪವನ್ನು ಎದುರಿಸಬೇಕಿಲ್ಲ. ಪ್ರಭುತ್ವದ ಮೂರು ಪ್ರಮುಖ ಆಧಾರ ಸ್ತಂಭಗಳ ಪೈಕಿ ಜ್ಞಾನವನ್ನು ಹಂಚಿಕೊಳ್ಳುವ ಹೊಣೆಗಾರಿಕೆ ಕಾರ್ಯಾಂಗದ ಮೇಲಿರುತ್ತದೆ. ಇದು ಕಾರ್ಯಾಂಗದ ಕರ್ತವ್ಯವೂ ಹೌದು. ದೇಶವನ್ನು ಕಾಡುತ್ತಿರುವ ಕೊರೋನಾ ಸಾಂಕ್ರಾಮಿಕ ಪಿಡುಗಿನ ಬಗ್ಗೆ, ಆರ್ಥಿಕ ಕುಸಿತ ಮತ್ತು ಹಿಂಜರಿತದ ಬಗ್ಗೆ ಹಾಗೂ ಗಡಿ ಪ್ರದೇಶದಲ್ಲಿ ಚೀನಾದೊಡನೆ ನಡೆಯುತ್ತಿರುವ ಸಂಘರ್ಷದ ಬಗ್ಗೆ , ಭಾರತದ ಪ್ರಜೆಗಳಾದ ನಾವು ಸಮಗ್ರ ಮಾಹಿತಿ ಪಡೆಯುವ ಹಕ್ಕು ಹೊಂದಿದ್ದೇವೆ, ಪಡೆಯಬೇಕಿದೆ.
ಇದಕ್ಕೆ ಈ ದೇಶ ಸಿದ್ಧವಾಗಿದೆಯೇ ? ಅಥವಾ ವೈರಾಣು ಮತ್ತು ಯುದ್ಧ ಎರಡೂ ಅಪಾಯಗಳನ್ನು, ಸವಾಲುಗಳನ್ನು ಎದುರಿಸಲು ದೇಶ ಸಜ್ಜಾಗಿದೆಯೇ ? ಸೆಪ್ಟಂಬರ್ 11ರಂದು ನಮ್ಮ ವಿದೇಶಾಂಗ ಸಚಿವರಾದ ಜೈಶಂಕರ್ ಮತ್ತು ಚೀನಾದ ವಿದೇಶಾಂಗ ಸಚಿವ ವಾಂಗ್ ಯಿ ನಡುವೆ ಏರ್ಪಟ್ಟಿರುವ ಒಪ್ಪಂದ ನಿಜಕ್ಕೂ ಶ್ಲಾಘನೀಯವಾದುದು. ಇದು ಉಭಯ ದೇಶಗಳನ್ನು ಯುದ್ಧದ ಸನ್ನಿವೇಶದಿಂದ ಮುಕ್ತಗೊಳಿಸಿದೆ.
ಆದರೆ ಈ ಮಾಸ್ಕೋ ಒಮ್ಮತದ ಒಪ್ಪಂದವನ್ನು ಉಲ್ಲಂಘಿಸುವ ಸನ್ನಿವೇಶ ಎದುರಾದರೆ, ಗಡಿಯಲ್ಲಿ ಕ್ಷಿಪಣಿಗಳು ಸದ್ದುಮಾಡಲಾರಂಭಿಸುತ್ತವೆ. ಯುದ್ಧ ಮತ್ತು ಕೊರೋನಾ ವೈರಾಣು ಭಾರತಕ್ಕೆ ಮಾರಣಾಂತಿಕವಾಗಿ ಪರಿಣಮಿಸುತ್ತದೆ. ಮೊದಲ ವಿಶ್ವ ಮಹಾ ಯುದ್ಧ ಸಂಭವಿಸಿದ ಬೆನ್ನಲ್ಲೇ 1918-20ರ ಸ್ಪಾನಿಷ್ ಫ್ಲೂ ಭಾರತವನ್ನು ಹಿಂಡಿ ಹಿಪ್ಪೇಕಾಯಿ ಮಾಡಿದ್ದನ್ನು ಕಂಡಿದ್ದೇವೆ. ಯುದ್ಧಭೂಮಿಯಿಂದ ಸೋಂಕು ಹೊತ್ತುಕೊಂಡೇ ಹಿಂದಿರುಗಿದ ಭಾರತದ ಯೋಧರು ಸಾಂಕ್ರಾಮಿಕ ಸೋಂಕನ್ನು ಹಳ್ಳಿ ಹಳ್ಳಿಗೂ ವ್ಯಾಪಿಸಲು ಕಾರಣರಾಗಿಬಿಟ್ಟರು. 1 ಕೋಟಿ 70 ಲಕ್ಷ ಭಾರತೀಯರು ಬಲಿಯಾಗಬೇಕಾಯಿತು.
ಒಂದು ವೇಳೆ ಈ ಯುದ್ಧ ಸಂಭವಿಸಿದ್ದೇ ಆದಲ್ಲಿ ಅದರಿಂದ ಸಾರ್ವಜನಿಕ ಆರೋಗ್ಯ, ಸಾರ್ವಜನಿಕ ಹಣಕಾಸು ಪರಿಸ್ಥಿತಿಯ ಮೇಲೆ ಯಾವ ರೀತಿಯ ಪರಿಣಾಮ ಉಂಟಾಗುತ್ತದೆ ಎಂದು ಕಾರ್ಯಾಂಗ ಈ ದೇಶದ ಪ್ರಜೆಗಳಿಗೆ ಸ್ಪಷ್ಟಪಡಿಸಬೇಕು. ಭಾರತ ಚೀನಾ ಗಡಿ ವಿವಾದಕ್ಕೆ ಇಂದು ಅಗತ್ಯವಾಗಿ ಬೇಕಿರುವುದು ದೇಶಪ್ರೇಮದ ಯುದ್ಧೋನ್ಮಾದವಲ್ಲ ಬದಲಾಗಿ ರಾಜತಾಂತ್ರಿಕ ಮಾತುಕತೆಗಳು ಬೇಕಿವೆ. ಈ ನಿಟ್ಟಿನಲ್ಲಿ ದೇಶದ ಸಮಸ್ತ ಪ್ರಜೆಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವುದು ಕಾರ್ಯಾಂಗದ ಕರ್ತವ್ಯ.
ಸಂಸತ್ತಿನಲ್ಲಿ ವಾತಾವರಣ
ಇಲ್ಲಿ ಪ್ರಭುತ್ವದ ಎರಡನೆ ಆಧಾರ ಸ್ತಂಭ, ಶಾಸಕಾಂಗದ ಪಾತ್ರ ಮುಖ್ಯವಾಗುತ್ತದೆ. ಅರ್ಧ ಹೆಜ್ಜೆ ಮುಂದಿಟ್ಟಿರುವ ಭಾರತದ ಸಂಸತ್ತಿನ ಕಲಾಪ ನಡೆಯುತ್ತಿದೆ. ಹದಿನೈದು ದಿನಗಳ ಕಾಲ ಸಂಸದರು ಖುದ್ದು ಹಾಜರಾಗಲಿದ್ದಾರೆ. ಇದು ಸಾಮಾನ್ಯವಾಗಿ ನಡೆಯುವ ಅವಧಿಯಲ್ಲಿ ಅರ್ಧದಷ್ಟು ಅವಧಿ ಮಾತ್ರ ನಡೆಯುವ ಕಲಾಪವಾಗಲಿದೆ.
ಕೊರೋನಾ ಕುರಿತ ನಮ್ಮ ಕಾಳಜಿಯ ಹಿನ್ನೆಲೆಯಲ್ಲಿ ಇದು ಉತ್ತಮ ಹೆಜ್ಜೆ. ಆದರೆ ಸಂಸತ್ತಿನ ಕಲಾಪವೇ ಬೇರೆ, ಸಂಸತ್ತಿನ ಉತ್ಸಾಹ ಮತ್ತು ಕಾಳಜಿಯೇ ಬೇರೆ. ಸಂಸತ್ ಕಲಾಪದ ವೇಳೆ ಪ್ರಶ್ನೋತ್ತರ ಅವಧಿಯನ್ನು ರದ್ದುಪಡಿಸುವ ಮೂಲಕ, ಸರ್ಕಾರದಿಂದ ಮಾಹಿತಿ ಪಡೆಯಲು ಸಂಸದರಿಗೆ ಇರುವ ಬ್ರಹ್ಮಾಸ್ತ್ರವೊಂದನ್ನು ಕಸಿದುಕೊಂಡಿರುವುದು ದುರಂತ. ಇದಕ್ಕೂ ಹೆಚ್ಚಿನ ದುರಂತಗಳನ್ನು ನಾವು ಸಂಸತ್ತಿನಲ್ಲಿ ಕಾಣುವ ಸಾಧ್ಯತೆಗಳಿವೆ.
ಬ್ರಿಟೀಷರ ಆಳ್ವಿಕೆಯಲ್ಲಿ ಶಾಸಕಾಂಗವೇ ಇರಲಿಲ್ಲ. ಆದರೂ ದೆಹಲಿಯಲ್ಲಿದ್ದ ಇಂಪೀರಿಯಲ್ ಶಾಸಕಾಂಗ ಸಮಿತಿ ಈ ದೇಶದ ಜನಕ್ಕೆ ಅನ್ಯಾಯ ಮಾಡಿತ್ತು. 1919ರ ಅರಾಜಕತೆ ಹಾಗೂ ಕ್ರಾಂತಿಕಾರಿ ಅಪರಾಧಗಳ ಕಾಯ್ದೆ, ರೌಲಟ್ ಕಾಯ್ದೆಯೆಂದು ಜನಪ್ರಿಯವಾಗಿದೆ, ಈ ಸಮಿತಿಯಲ್ಲಿ 1919ರ ಮಾರ್ಚ್ 18ರಂದು ಅಂಗೀಕೃತವಾಗಿತ್ತು. ಇದು ಮೂಲತಃ ಮಹಾಯುದ್ಧಕ್ಕೆ ನೆರವಾಗಲು ರೂಪಿಸಲಾದ ಕಾಯ್ದೆಯಾಗಿತ್ತು.
ಆದರೆ ಇದರ ಪರಿಣಾಮ ದೇಶದಲ್ಲಿ ವ್ಯಕ್ತಿಗತ ಸ್ವಾತಂತ್ರ್ಯವನ್ನು ಕಸಿದುಕೊಳ್ಳಲಾಯಿತು. ವಾಕ್ ಸ್ವಾತಂತ್ರ್ಯ ಮತ್ತು ಸಭೆ ಸೇರುವ ಸ್ವಾತಂತ್ರ್ಯವನ್ನು ಕಸಿದುಕೊಳ್ಳಲಾಯಿತು. 1975-77ರ ತುರ್ತುಪರಿಸ್ಥಿತಿ ಹೇರುವ ಸಂದರ್ಭದಲ್ಲೂ ಸಹ ಸಂಸತ್ತಿನ ಅನುಮೋದನೆ ಪಡೆಯಲಾಗಿತ್ತು.
ಈ ಹಿನ್ನೆಲೆಯಲ್ಲಿ ನೋಡಿದಾಗ ಪ್ರಸಕ್ತ ಸಂಸತ್ತಿನಿಂದ ಹೆಚ್ಚಿನ ಎಚ್ಚರಿಕೆ ಮತ್ತು ವಿವೇಕಯುತ ನಡೆಯನ್ನು ನಿರೀಕ್ಷಿಸಬೇಕಾಗುತ್ತದೆ. ದೇಶ ಒಂದು ಮಾರಣಾಂತಿಕ ವೈರಾಣುವಿನ ಅಪಾಯ ಎದುರಿಸುತ್ತಿರುವಾಗ, ಎಂದೂ ಕಾಣದಂತಹ ಆರ್ಥಿಕ ಹಿನ್ನಡೆ ಎದುರಿಸುತ್ತಿರುವಾಗ, ಯುದ್ಧದ ಕಾರ್ಮೋಡ ಕವಿಯುತ್ತಿರುವಾಗ ರೌಲಟ್ ಕಾಯ್ದೆಯ ಚಿಂತನೆಗಳು ಸರ್ಕಾರದ ಕಲ್ಪನೆಯಲ್ಲೂ ಇರಕೂಡದು.
ಇಲ್ಲಿ ಪ್ರಭುತ್ವದ ಮೂರನೆಯ ಆಧಾರ ಸ್ತಂಭ ನ್ಯಾಯಾಂಗದ ಪಾತ್ರ ಮುನ್ನೆಲೆಗೆ ಬರುತ್ತದೆ. ವಿಧಿ 370, ಪೌರತ್ವ ತಿದ್ದುಪಡಿ ಕಾಯ್ದೆ ಮತ್ತು ಜಮ್ಮು ಕಾಶ್ಮೀರ ಹೈಕೋರ್ಟಿನಲ್ಲಿದ್ದ ಹೇಬಿಯಸ್ ಕಾರ್ಪಸ್ ಅರ್ಜಿಯ ಸಂದರ್ಭದಲ್ಲಿ ಭಾರತದ ನ್ಯಾಯಾಂಗ ತನ್ನ ಸ್ವಾಯತ್ತತೆಯನ್ನು ಸಾಧಿಸಿ ತೋರಿಸಬಹುದಿತ್ತು.
ತನ್ನ ಸ್ವಾತಂತ್ರ್ಯ ಮತ್ತು ಅಭಿಪ್ರಾಯ ವ್ಯಕ್ತಪಡಿಸುವ ಸಾಮಥ್ರ್ಯವನ್ನು ಪ್ರದರ್ಶಿಸಬಹುದಿತ್ತು. ಏನು ಹೇಳಬೇಕಾಗಿದೆಯೋ, ಏನನ್ನು ಮನದಟ್ಟು ಮಾಡಬೇಕಾಗಿದೆಯೋ ಅದನ್ನು ಹೇಳಲು ಕೆಲವೇ ಪದಗಳು ಸಾಕಾಗುತ್ತವೆ. ನ್ಯಾ ಚಂದ್ರಚೂಡ್ ಹೇಳಿರುವಂತೆ “ ಪ್ರತಿರೋಧ ಎನ್ನುವುದು ಪ್ರಜಾತಂತ್ರ ವ್ಯವಸ್ಥೆಯ ರಕ್ಷಣಾ ಕವಚ ಇದ್ದಂತೆ ”.
ಇಂದು ಪ್ರಭುತ್ವದ ಸಾಂಸ್ಥಿಕ ನೆಲೆಯ ಸುತ್ತ ಜಡತ್ವದ ಲಕ್ಷಣಗಳು ಗೋಚರಿಸುತ್ತಿವೆ. ಇದು ಈ ಸಾಂಸ್ಥಿಕ ನೆಲೆಯ ಉಸಿರನ್ನು ಕಟ್ಟಿಸುತ್ತದೆ, ಹಾಗೆಯೇ ನಮ್ಮ ಉಸಿರನ್ನೂ ಸಹ. ಮಾಧ್ಯಮಗಳು ನಮ್ಮನ್ನು, ಅಂದರೆ ಭಾರತದ ಪ್ರಜೆಗಳನ್ನು, ಮುನ್ನಡೆಸುತ್ತಿರುವ ಸಂದರ್ಭದಲ್ಲಿ ನಾವು ಸ್ವಾತಂತ್ರ್ಯಕ್ಕೆ ಜೀವ ಕೊಡುವ ಸಾಧನಗಳಾಗಬೇಕು.
ಸುದ್ದಿದಿನ.ಕಾಂ|ವಾಟ್ಸಾಪ್|9980346243
ದಿನದ ಸುದ್ದಿ
ಇಂದಿನಿಂದ ಏ.3 ರವರೆಗೆ ಸೂಳೆಕೆರೆಗೆ ನೀರು ಬಿಡುಗಡೆ
ಸುದ್ದಿದಿನ,ದಾವಣಗೆರೆ: ಭದ್ರಾ ಜಲಾಶಯ ಯೋಜನೆ ವ್ಯಾಪ್ತಿಗೆ ಬರುವ ದೇವರಬೆಳಕೆರೆ ಪಿಕ್ಅಪ್ ಅಣೆಕಟ್ಟಿನ ಸ್ಕವರಿಂಗ್ ಸ್ಪೂಯೀಸ್ ಗೇಟ್ ಮುಖಾಂತರ ಜಲಾಶಯದ ಡೆಡ್ ಸ್ಟೋರೇಜ್ ನೀರನ್ನು ಸೂಳೆಕೆರೆ ಹಳ್ಳಕ್ಕೆ ಮಾರ್ಚ್ 28 ರಿಂದ ಏಪ್ರಿಲ್ 3 ರವರೆಗೆ ಪ್ರತಿದಿನ 20 ಕ್ಯೂಸೆಕ್ಸ್ಗಳಲ್ಲಿ ಜನ-ಜಾನುವಾರು ಪಕ್ಷಿಗಳಿಗೆ ಕುಡಿಯುವ ನೀರು ಒದಗಿಸಲು ಹಾಗೂ ಅಕ್ಕಪಕ್ಕದ ಗ್ರಾಮಗಳ ಕುಡಿಯುವ ನೀರಿನ ಉದ್ದೇಶಕ್ಕೆ ಬಿಡಲಾಗುತ್ತಿದೆ.
ಈ ವೇಳೆ ಹಳ್ಳಕ್ಕೆ ದನ ಕರಗಳನ್ನು ಇಳಿಸುವುದಾಗಲಿ, ಪಂಪ್ಸೆಟ್ಗಳಿಂದ ನೀರೆತ್ತುವುದುನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ ಎಂದು ಕನೀನಿನಿ ಕಾರ್ಯಪಾಲಕ ಇಂಜಿನಿಯರ್ ತಿಳಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243
ದಿನದ ಸುದ್ದಿ
ಲೋಕಸಭಾ ಚುನಾವಣೆಯ ಮೊದಲ ಹಂತಕ್ಕೆ ನಾಮಪತ್ರ ಸಲ್ಲಿಕೆಗೆ ಇಂದು ಕೊನೆಯ ದಿನ
ಸುದ್ದಿದಿನ ಡೆಸ್ಕ್ : ಲೋಕಸಭಾ ಚುನಾವಣೆಯ ಮೊದಲ ಹಂತಕ್ಕೆ ನಾಮಪತ್ರ ಸಲ್ಲಿಸಲು ಇಂದು ಕೊನೆಯ ದಿನವಾಗಿದೆ.
ನಾಳೆ ನಾಮಪತ್ರಗಳ ಪರಿಶೀಲನೆ ನಡೆಯಲಿದ್ದು, ಇದೇ 30 ನಾಮಪತ್ರ ಹಿಂಪಡೆಯಲು ಕಡೆಯ ದಿನವಾಗಿದೆ. ಇದೇ ವೇಳೆ ಬಿಹಾರದಲ್ಲಿ ನಾಮಪತ್ರ ಸಲ್ಲಿಕೆಗೆ ನಾಳೆ ಕಡೆ ದಿನವಾಗಿದ್ದು, ಈ ತಿಂಗಳ 30 ರಂದು ನಾಮಪತ್ರಗಳ ಪರಿಶೀಲನೆ ಹಾಗೂ ಏಪ್ರಿಲ್ 2ರಂದು ನಾಮತ್ರ ಹಿಂಪಡೆಯುವಿಕೆಗೆ ಕೊನೆಯ ದಿನವಾಗಿರುತ್ತದೆ.
ಏಪ್ರಿಲ್ 19 ರಂದು 17 ರಾಜ್ಯಗಳು ಮತ್ತು ನಾಲ್ಕು ಕೇಂದ್ರಾಡಳಿತ ಪ್ರದೇಶಗಳಲ್ಲಿನ 102ಲೋಕಸಭಾ ಕ್ಷೇತ್ರಗಳಿಗೆ ಮೊದಲ ಹಂತದಲ್ಲಿ ಚುನಾವಣೆ ನಡೆಯಲಿದೆ. ಅದರಂತೆ ತಮಿಳುನಾಡಿನಲ್ಲಿ 39, ರಾಜಸ್ಥಾನದಲ್ಲಿ 12, ಉತ್ತರ ಪ್ರದೇಶದಲ್ಲಿ 8, ಮಧ್ಯಪ್ರದೇಶದಲ್ಲಿ 6, ಉತ್ತರಾಖಂಡ, ಅಸ್ಸಾಂ ಮತ್ತು ಮಹಾರಾಷ್ಟ್ರದಲ್ಲಿ ತಲಾ 5 , ಬಿಹಾರದಲ್ಲಿ 4, ಪಶ್ಚಿಮ ಬಂಗಾಳದಲ್ಲಿ 3, ಅರುಣಾಚಲ ಪ್ರದೇಶ, ಮಣಿಪುರ, ಮೆಘಾಲಯದಲ್ಲಿ ತಲಾ 2 ಮತ್ತು ಛತ್ತೀಸ್ಗಢ, ಮಿಜೋರಾಂ, ನಾಗಾಲ್ಯಾಂಡ್, ಸಿಕ್ಕಿಂ, ತ್ರಿಪುರ, ಅಂಡಮಾನ್-ನಿಕೋಬಾರ್ ದ್ವೀಪಗಳು, ಜಮ್ಮು-ಕಾಶ್ಮೀರ, ಲಕ್ಷದ್ವೀಪ ಮತ್ತು ಪುದುಚೇರಿಯಲ್ಲಿ ತಲಾ ಒಂದು ಕ್ಷೇತ್ರದಲ್ಲಿ ಮೊದಲ ಹಂತದಲ್ಲಿ ಚುನಾವಣೆ ನಡೆಯಲಿದೆ.
ಎರಡನೇ ಹಂತದಲ್ಲಿ 89 ಲೋಕಸಭಾ ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದ್ದು, ಚುನಾವಣಾ ಆಯೋಗ ನಾಳೆ ಅಧಿಸೂಚನೆ ಹೊರಡಿಸಲಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243
ದಿನದ ಸುದ್ದಿ
ಚುನಾವಣಾ ಅಕ್ರಮ ; ಸಾರ್ವಜನಿಕರು ದೂರು ಸಲ್ಲಿಸಲು ಆಯೋಗದಿಂದ ಸಿ-ವಿಜಿಲ್ ಆಪ್ ಅಭಿವೃದ್ಧಿ
ಸುದ್ದಿದಿನ ಡೆಸ್ಕ್ : 18ನೇ ಲೋಕಸಭೆಗೆ ಸದಸ್ಯರನ್ನು ಆಯ್ಕೆ ಮಾಡಲು ನಡೆಯಲಿರುವ ಸಾರ್ವತ್ರಿಕ ಚುನಾವಣೆಗೆ ಭಾರತ ಚುನಾವಣಾ ಆಯೋಗ, ಸಕಲ ಸಿದ್ಧತೆಯೊಂದಿಗೆ ಸಜ್ಜಾಗಿದೆ.
ದೇಶದಲ್ಲಿ ಚುನಾವಣೆಗಳನ್ನು ಪಾರದರ್ಶಕವಾಗಿ ಹಾಗೂ ಅತ್ಯಂತ ವಿಶ್ವಾಸಾರ್ಹ ರೀತಿಯಲ್ಲಿ ನಡೆಸುವ ಸಂಕಲ್ಪದೊಂದಿಗೆ ಚುನಾವಣಾ ಆಯೋಗ, ಸಮಸ್ತ ಚುನಾವಣಾ ಪ್ರಕ್ರಿಯೆಗಳನ್ನು ಸುಗಮಗೊಳಿಸಲು ತಂತ್ರಜ್ಞಾನದ ನೆರವನ್ನು ಬಳಸಿಕೊಳ್ಳುತ್ತಿದೆ. ಈ ನಿಟ್ಟಿನಲ್ಲಿ ಮತದಾರರು, ಚುನಾವಣಾ ಸಿಬ್ಬಂದಿ ಹಾಗೂ ಆಯೋಗಕ್ಕೆ ನೆರವಾಗುವ ಹಲವು ಆಪ್ಗಳನ್ನು ಚುನಾವಣಾ ಆಯೋಗ ಅಭಿವೃದ್ಧಿಪಡಿಸಿದೆ.
ಈ ಪೈಕಿ ಇಂದು ಸಿ-ವಿಜಿಲ್ ಆಪ್ ಬಗ್ಗೆ ಮಾಹಿತಿ.
ದೇಶದಲ್ಲಿ ಚುನಾವಣೆಗಳ ವೇಳೆ ನಡೆಯುವ ಅಕ್ರಮಗಳು, ಮಾದರಿ ನೀತಿ ಸಂಹಿತೆಯ ಉಲ್ಲಂಘನೆ ಪ್ರಕರಣಗಳ ಮೇಲೆ ಕಣ್ಣಿಡುವುದು ಕೇವಲ ಚುನಾವಣಾ ಸಿಬ್ಬಂದಿಯ ಕೆಲಸವಲ್ಲ. ಇದು ಪ್ರತಿಯೊಬ್ಬ ನಾಗರಿಕನ ಕರ್ತವ್ಯವೂ ಹೌದು. ಹಾಗಾಗಿ ಚುನಾವಣಾ ಅಕ್ರಮಗಳ ಬಗ್ಗೆ ಸಾರ್ವಜನಿಕರು ಆಯೋಗಕ್ಕೆ ದೂರು ತಲುಪಿಸಲು ಭಾರತ ಚುನಾವಣಾ ಆಯೋಗ ಸಿ-ವಿಜಿಲ್ ಆಪ್ ಅನ್ನು ಅಭಿವೃದ್ಧಿ ಪಡಿಸಿದೆ.
ದೂರುಗಳನ್ನು ಆನ್ಲೈನ್ ಮೂಲಕ ಆಯೋಗಕ್ಕೆ ರವಾನಿಸಲು ಈ ಆಪ್ ನೆರವಾಗುವುದು. ಯಾವುದೇ ಚುನಾವಣಾ ಅಕ್ರಮಗಳ ಬಗ್ಗೆ ಧ್ವನಿಮುದ್ರಣ, ವಿಡಿಯೋ ಚಿತ್ರದ ತುಣುಕುಗಳು ಮತ್ತು ಫೋಟೊ ಮೊದಲಾದ ದಾಖಲೆಗಳನ್ನು ಸಾರ್ವಜನಿಕರು ಇದರ ಮೂಲಕ ಕಳುಹಿಸಬಹುದು.
ಚುನಾವಣೆಗಳಲ್ಲಿ ರಾಜಕೀಯ ಪಕ್ಷಗಳು, ಅಭ್ಯರ್ಥಿಗಳು ಮಾಡುವ ಖರ್ಚು-ವೆಚ್ಚ, ಮತದಾರರ ಮನವೊಲಿಕೆಗೆ ಆಮಿಷಗಳ ಬಳಕೆ ಮೊದಲಾದ ಅಕ್ರಮಗಳ ಬಗ್ಗೆ ದೂರು ನೀಡಲು ಇದನ್ನು ಬಳಸಬಹುದು. ಒಂದುನೂರು ನಿಮಿಷಗಳಲ್ಲಿ ಚುನಾವಣಾಧಿಕಾರಿಗಳು ಅಗತ್ಯ ಕ್ರಮ ಕೈಗೊಳ್ಳುತ್ತಾರೆ ಎಂದು ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಹೇಳಿದ್ದಾರೆ.
ದೇಶದ ಯಾವ ಮೂಲೆಯಲ್ಲೇ ಆಗಲಿ ನಡೆಯುವ ಚುನಾವಣಾ ಅಕ್ರಮ ಅಥವಾ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣಗಳ ಬಗ್ಗೆ ತಾವು ನೀಡಿದ ದೂರುಗಳನ್ನು ಆಯೋಗ ಪರಿಗಣಿಸಿದೆಯೇ ಎನ್ನುವ ವಿವರಗಳನ್ನು ಸಹ ಸಾರ್ವಜನಿಕರು ಸಿ-ವಿಜಿಲ್-ಆಪ್ ಮೂಲಕ ವೀಕ್ಷಿಸಬಹುದು.
ಸುದ್ದಿದಿನ.ಕಾಂ|ವಾಟ್ಸಾಪ್|9980346243
-
ದಿನದ ಸುದ್ದಿ7 days ago
ಭಾನುವಾರದಂದು ಕಾರ್ಯನಿರ್ವಹಿಸುವಂತೆ ಬ್ಯಾಂಕ್ಗಳಿಗೆ ಆರ್ ಬಿ ಐ ಸೂಚನೆ
-
ದಿನದ ಸುದ್ದಿ6 days ago
ನಾಯಕನ ಹಟ್ಟಿ | ಶ್ರೀಗುರು ತಿಪ್ಪೇರುದ್ರಸ್ವಾಮಿ ರಥೋತ್ಸವಕ್ಕೆ ವಿಶೇಷ ಬಸ್ ಸೌಲಭ್ಯ
-
ದಿನದ ಸುದ್ದಿ7 days ago
ಕಾಂಗ್ರೆಸ್ ಪಕ್ಷದ ಬ್ಯಾಂಕ್ ಖಾತೆಗಳು ಸ್ಥಗಿತ ; ಬಿಜೆಪಿ ಅಧಿಕಾರ ದುರುಪಯೋಗ : ಖರ್ಗೆ ಕಿಡಿ
-
ದಿನದ ಸುದ್ದಿ5 days ago
ಲೋಕಸಭಾ ಚುನಾವಣೆ : ಚುನಾವಣಾ ಚಟುವಟಿಕೆಗಳ ಕುರಿತ ಜಿಲ್ಲಾವಾರು ಮಾಹಿತಿ
-
ದಿನದ ಸುದ್ದಿ5 days ago
ವಿಜಯಪುರ ಜಿಲ್ಲಾ ಸಾಹಿತ್ಯ ಸಮ್ಮೇಳನದ ಕವಿಗೋಷ್ಠಿಗೆ ಮೈಬೂಬಸಾಹೇಬ.ವೈ.ಜೆ ಆಯ್ಕೆ
-
ದಿನದ ಸುದ್ದಿ5 days ago
ಬೆಂಗಳೂರಿನಲ್ಲಿ ಬಿಜೆಪಿ ನೂತನ ಮಾಧ್ಯಮಕೇಂದ್ರ ಆರಂಭ
-
ದಿನದ ಸುದ್ದಿ5 days ago
ಲೋಕಸಭಾ ಚುನಾವಣೆ | ಹೊಸ ಮತದಾರರೆಷ್ಟು ಗೊತ್ತಾ..?
-
ದಿನದ ಸುದ್ದಿ5 days ago
ಕವಿತೆ | ನೆನಪು