ದಿನದ ಸುದ್ದಿ
ಎಲ್ಲ ರೀತಿಯಿಂದ ದೊಡ್ಡವರು ‘ಜಿ.ಎಸ್.ಆಮೂರ’
ಜಿ ಎಸ್ ಆಮೂರ ಎಲ್ಲ ರೀತಿಯಿಂದಲೂ ದೊಡ್ಡವರು. ಕಳೆದ ಮೇ ತಿಂಗಳಲ್ಲಿ 95 ಮುಗಿಸಿ ನೂರರೆಡೆಗೆ ಹೆಜ್ಜೆ ಹಾಕುತ್ತಿದ್ದರು. ಕನ್ನಡಕ್ಕೆ ಇಂಗ್ಲಿಷ್ ಮೇಷ್ಟ್ರುಗಳ ಲಿಂಕ್ (ಸಂಬಂಧ, ಕೊಡುಗೆ, ಬಾಂಧವ್ಯ ಈ ಪದಗಳಿಗಿಂತ ಉತ್ತಮ) ದೊಡ್ಡದು. ಮೇಷ್ಟ್ರುಗಳಷ್ಟೇ ಅಲ್ಲ ಬೇರೆ ಬೇರೆ ನೌಕರಿಗಳಲ್ಲಿದ್ದವರೂ ಇದ್ದರು. ಇರಲಿ. ನವೋದಯ, ನವೋದಯಪೂರ್ವ ಕಾಲದಿಂದಲೂ ಈ ಇತಿಹಾಸವಿದೆ. ಆ ಪರಂಪರೆಯ ಕೊಂಡಿಯಾಗಿದ್ದ ಅಮೂರ ಕಳಚಿಕೊಂಡು ಕನ್ನಡ ಸಾಹಿತ್ಯ ಚರಿತ್ರೆಯ ಭಾಗವಾದರು.
ಕನ್ನಡಕ್ಕೆ ಗಂಟುಬೀಳುವ ಇಂಗ್ಲಿಷ್ ಮೇಷ್ಟ್ರುಗಳ ಲಿಂಕೂ ಇದೆ ! ಅವರಲ್ಲಿ ಬಹುತೇಕರಿಗೆ ಅತ್ತ ಇಂಗ್ಲಷ್ಷೂ ಐಬು ಇತ್ತ ಅವರ ತಾಯ್ನುಡಿಯೂ ಐಬು. ಅವರು ಇಂಗ್ಲಿಷ್ ಡಿಗ್ರಿ ಸರ್ಟಿಫಿಕೇಟ್ ಇಟ್ಟುಕೊಂಡು ಕನ್ನಡದೊಳಗೆ ಓಡಾಡ್ತಾ ಇರ್ತಾರೆ. ಸ್ವಲ್ಪ ಬೆದರಿಕೆ, ಸ್ವಲ್ಪ ಬೂಟಾಟಿಕೆ ತೋರ್ತಾರೆ ! ಕೆಲವು ಕನ್ನಡದವು ಬೆದರೋದೂ ಉಂಟು !
ಆದರೆ ಕನ್ನಡಕ್ಕೆ ಕಾಮಧೇನುವಿನಂತೆ ಬರುವ ಇಂಗ್ಲಿಷ್ ಮೇಷ್ಟ್ರುಗಳ ಲಿಂಕ್ ಇದ್ಯಲ್ಲಾ ಅದು ಮಹತ್ವದ್ದು. ‘ ಶ್ರೀ ‘ ಯವರಿಂದಲೇ ಶ್ರೀಕಾರಗೊಂಡ ಆ ಪರಂಪರೆಗೆ ಸೇರಿದವರು ಅಮೂರ. ಮುಂದುವರೆದ ಹೊಸ ತಲೆಮಾರಿನಲ್ಲೂ ಕೆಲವರು ಆ ಪರಂಪರೆಯನ್ನು ಕಾಪಾಡಿಕೊಂಡು ಬರುತ್ತಿದ್ದಾರೆ.
ಇಂಥವರು ಕನ್ನಡವನ್ನು ಪ್ರೀತಿ ಗೌರವದಿಂದ ಕಾಣುತ್ತಾರೆ. ಕನ್ನಡವೆಂಬುದು ಇಂಗ್ಲಿಷಿನಂತೆಯೇ ಒಂದು ದೊಡ್ಡ ಭಾಷೆಯೆಂಬ ಅರಿವಿನಲ್ಲಿ ಒಡನಾಡುತ್ತಾರೆ, ಕೆಲಸ ಮಾಡುತ್ತಾರೆ. ಅಂಥವರಿಂದಲೇ ಇವಳ ಒಡವೆ ಅವಳಿಗಿಡುವ ಶಕ್ತಿ ಬರುವುದು. ಆಮೂರ ಇಂಗ್ಲಿಷ್ ಮತ್ತು ಕನ್ನಡ ಎರಡನ್ನೂ ಅರಗಿಸಿಕೂಂಡ ವಿಮರ್ಶಕರು. ಯಾವ ವಿಷಯವೇ ಆಗಲಿ ಅವರು ಬುಡಮಟ್ಟ ಶೋಧಿಸಿ ಬರೆಯುತ್ತಿದ್ದರು.
ಕನ್ನಡ ಕಥನ ಪರಂಪರೆ, ಮಹಿಳೆಯರ ಕಾವ್ಯ, ನವೋದಯ ಸಾಹಿತ್ಯ, ಜನಪ್ರಿಯ ಸಾಹಿತ್ಯ ಎಲ್ಲದರ ಬಗ್ಗೆಯೂ ಸಮಾನ ಆಸಕ್ತಿಯಿಂದ ಅಧ್ಯಯನಶೀಲರಾಗುತ್ತಿದ್ದರು. ಬೇಂದ್ರೆ, ಶ್ರೀರಂಗರ ಬಗ್ಗೆ ಎಂಥ ತಾದಾತ್ಮ್ಯ ಹೊಂದುತ್ತಿದ್ದರೋ ಅಷ್ಟೇ ತಾದಾತ್ಮ್ಯದಲ್ಲಿ ಜನಪ್ರಿಯ ಕಾದಂಬರಿಕಾರ ಅನಕೃ ಬಗ್ಗೆ ಚಿಂತಿಸಿ ಬರೆಯುತ್ತಿದ್ದರು. ಜನಪ್ರಿಯ ಸಾಹಿತ್ಯದ ಬಗ್ಗೆ ಸದಭಿರುಚಿಯ ಅಭಿಪ್ರಾಯ ಮೂಡಿಸುತ್ತಿದ್ದರು.
ಇಂಗ್ಲಿಷ್ ಭಾಷೆಯಲ್ಲಿ ಹಲವಾರು ಮೌಲಿಕ ಕೃತಿಗಳನ್ನು ರಚಿಸಿದ್ದಾರೆ. ಮಳಗಾಂವಕರ್, ಮುಲ್ಕ್ ರಾಜ್ ಆನಂದ, ರಾಜಾರಾವ್, ನಾಯ್ಪಾಲ್, ಸಲ್ಮಾನ್ ರುಶ್ದಿ ( ನಾನು ನೈಪಾಲ್, ರಶ್ದಿ ಅಂದಾಗಲೆಲ್ಲ ಅವರು ನಾಯ್ಪಾಲ್, ರುಶ್ದಿ ಅಂತ ಸರಿಮಾಡುತ್ತಿದ್ದರು ! ) ಅವರೆಲ್ಲರ ಕೃತಿಗಳ ವಿಸ್ತೃತ ಓದು ಅವರದಾಗಿತ್ತು. ಕುವೆಂಪು ಅವರ ರಾಮಾಯಣ ದರ್ಶನಂ ಕುರಿತ ಅವರ ಇಂಗ್ಲಿಷ್ ಲೇಖನ ಬಹಳ ಮೌಲಿಕವಾದುದು.
ಪ್ರಾಚೀನ ಸಾಹಿತ್ಯದ ಬಗ್ಗೆ ಇರುವಷ್ಟೇ ಆಸಕ್ತಿಯನ್ನು ಹೊಸದಾಗಿ ಬರೆಯುವವರ ಕತೆ ಕವಿತೆಗಳನ್ನು ಸಂಕಲನಗಳಲ್ಲಿ ಸೇರಿಸುತ್ತಿದ್ದರು. ಬೇರೆ ಬೇರೆ ರೀತಿಯ ಸಂಕಲನಗಳನ್ನು ಸಂಪಾದಿಸುವುದಕ್ಕೆ ಬೇಕಾದ ಅಪಾರ ಓದನ್ನು ಅವರು ಸಂತೋಷದಿಂದ ಮತ್ತು ಪರಿಪೂರ್ಣತೆಯಿಂದ ಮಾಡುತ್ತಿದ್ದರು.
ಬೆಂಗಳೂರಿಗೆ ಬಂದರೆ ಲಂಕೇಶ್ ಅವರಲ್ಲಿಗೆ ಭೇಟಿ ಕೊಟ್ಟು ಅವರೊಡನೆ ಗಂಭೀರ ಸಾಹಿತ್ಯ ಚರ್ಚೆ ಮಾಡುತ್ತಿದ್ದರು. ಹಾಗೆ ಒಮ್ಮೆ ಚರ್ಚಿಸುತ್ತಿದ್ದ ಹೊತ್ತಿನಲ್ಲಿ ಅವರು, ‘ ವರ್ಷಕ್ಕೆ ಒಂದು ಸಾರಿ ತಪ್ಪದೇ War and Peace ಮತ್ತು Anna Karenina ಓದೇ ಓದ್ತೀನಿ ‘ ಅಂತ ಹೇಳಿದ್ದು ನನ್ನ ನೆನಪಿನಲ್ಲಿದೆ. ಅವರ ‘ಭುವನದ ಭಾಗ್ಯ’ ಕುರಿತು ಆಗ ನಾನು ಲಂಕೇಶ್ ಪತ್ರಿಕೆ ಯಲ್ಲಿ ಬರೆದಿದ್ದೆ.
ಅವರು ಬಹುಶೃತ ವಿದ್ವಾಂಸರಾಗಿದ್ದರು. ನಿಷ್ಠುರ ವಿಮರ್ಶಕರಾಗಿದ್ದರು. ಒಮ್ಮೆ ಒಂದು ಪ್ರತಿಷ್ಠಿತ ಪ್ರಶಸ್ತಿ ತೀರ್ಮಾನ ಮಾಡಲು ಒಂದು ಸಭೆ ನಡೆಯಿತು. ಮೂವರು ತೀರ್ಪುಗಾರರಲ್ಲಿ ಅಮೂರ ಒಬ್ಬರು. ಇನ್ನೊಬ್ಬರು ಅವರ ವಯಸ್ಸಿನವರೇ. ಮೂರನೆಯವರು ಇನ್ನೂ ಯುವಕರು. ತೀರ್ಮಾನ ವಿವಾದದಲ್ಲಿ ಆಯಿತು. ಆ ಪ್ರಶಸ್ತಿಗೆ ಯಾವ ರೀತಿಯಿಂದಲೂ ಅರ್ಹವಲ್ಲದ ಕೃತಿಯನ್ನು ಅಮೂರ ಒಪ್ಪಲಿಲ್ಲ.
ಆದರೆ ಉಳಿದಿಬ್ಬರ ಬಹುಮತವಿತ್ತು. ಅದು ಆಯ್ಕೆಯಾಗಬೇಕಾಯ್ತು. ಎಲ್ಲ ಮುಗಿದಮೇಲೆ ಹೊರಡುವಾಗ ಆ ಯುವಕರನ್ನು ಪಕ್ಕಕ್ಕೆ ಕರೆದು ಆಮೂರ ಹೇಳಿದರು, ” ನೀವಿನ್ನೂ ಚಿಕ್ಕ ವಯಸ್ಸಿನವರಿದ್ದೀರಿ, ಇನ್ನು ಮುಂದೆ ಎಂದೂ ಇಂಥ ಲಿಟರರಿ ಪೊಲಿಟಿಕ್ಸ್ ಮಾಡಬೇಡಿ, ” ಅಂದ ಅವರ ಮಾತಿಗೆ ನಾನು ಸಾಕ್ಷಿಯಾಗಿದ್ದೆ. ಆ ಯುವ ಪ್ರಭೃತಿ ತಲೆತಗ್ಗಿಸಿ ನಿಂತಿದ್ದರು.
ಅದು ಸಾಹಿತ್ಯ ಲೋಕದಲ್ಲಿರಬೇಕಾದ ದೊಡ್ಡತನ. ಅಮೂರ ಅಂಥ ಅಪರೂಪದ ದೊಡ್ಡವರು. ನಮಗೆ ಬಹಳಷ್ಟು ಕಲಿಸಿದ್ದಾರೆ. ಅಂಥ ಮೌಲ್ಯಗಳನ್ನು ಕಲಿತು ದೊಡ್ಡವರಾಗಲು ಬದುಕೋಣ. ಅವರ ನೆನಪಿಗೆ ನಮನಗಳು.
-ಅಗ್ರಹಾರ ಕೃಷ್ಣಮೂರ್ತಿ
ಸುದ್ದಿದಿನ.ಕಾಂ|ವಾಟ್ಸಾಪ್|9980346243
ದಿನದ ಸುದ್ದಿ
ಇಂದಿನಿಂದ ಏ.3 ರವರೆಗೆ ಸೂಳೆಕೆರೆಗೆ ನೀರು ಬಿಡುಗಡೆ
ಸುದ್ದಿದಿನ,ದಾವಣಗೆರೆ: ಭದ್ರಾ ಜಲಾಶಯ ಯೋಜನೆ ವ್ಯಾಪ್ತಿಗೆ ಬರುವ ದೇವರಬೆಳಕೆರೆ ಪಿಕ್ಅಪ್ ಅಣೆಕಟ್ಟಿನ ಸ್ಕವರಿಂಗ್ ಸ್ಪೂಯೀಸ್ ಗೇಟ್ ಮುಖಾಂತರ ಜಲಾಶಯದ ಡೆಡ್ ಸ್ಟೋರೇಜ್ ನೀರನ್ನು ಸೂಳೆಕೆರೆ ಹಳ್ಳಕ್ಕೆ ಮಾರ್ಚ್ 28 ರಿಂದ ಏಪ್ರಿಲ್ 3 ರವರೆಗೆ ಪ್ರತಿದಿನ 20 ಕ್ಯೂಸೆಕ್ಸ್ಗಳಲ್ಲಿ ಜನ-ಜಾನುವಾರು ಪಕ್ಷಿಗಳಿಗೆ ಕುಡಿಯುವ ನೀರು ಒದಗಿಸಲು ಹಾಗೂ ಅಕ್ಕಪಕ್ಕದ ಗ್ರಾಮಗಳ ಕುಡಿಯುವ ನೀರಿನ ಉದ್ದೇಶಕ್ಕೆ ಬಿಡಲಾಗುತ್ತಿದೆ.
ಈ ವೇಳೆ ಹಳ್ಳಕ್ಕೆ ದನ ಕರಗಳನ್ನು ಇಳಿಸುವುದಾಗಲಿ, ಪಂಪ್ಸೆಟ್ಗಳಿಂದ ನೀರೆತ್ತುವುದುನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ ಎಂದು ಕನೀನಿನಿ ಕಾರ್ಯಪಾಲಕ ಇಂಜಿನಿಯರ್ ತಿಳಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243
ದಿನದ ಸುದ್ದಿ
ಲೋಕಸಭಾ ಚುನಾವಣೆಯ ಮೊದಲ ಹಂತಕ್ಕೆ ನಾಮಪತ್ರ ಸಲ್ಲಿಕೆಗೆ ಇಂದು ಕೊನೆಯ ದಿನ
ಸುದ್ದಿದಿನ ಡೆಸ್ಕ್ : ಲೋಕಸಭಾ ಚುನಾವಣೆಯ ಮೊದಲ ಹಂತಕ್ಕೆ ನಾಮಪತ್ರ ಸಲ್ಲಿಸಲು ಇಂದು ಕೊನೆಯ ದಿನವಾಗಿದೆ.
ನಾಳೆ ನಾಮಪತ್ರಗಳ ಪರಿಶೀಲನೆ ನಡೆಯಲಿದ್ದು, ಇದೇ 30 ನಾಮಪತ್ರ ಹಿಂಪಡೆಯಲು ಕಡೆಯ ದಿನವಾಗಿದೆ. ಇದೇ ವೇಳೆ ಬಿಹಾರದಲ್ಲಿ ನಾಮಪತ್ರ ಸಲ್ಲಿಕೆಗೆ ನಾಳೆ ಕಡೆ ದಿನವಾಗಿದ್ದು, ಈ ತಿಂಗಳ 30 ರಂದು ನಾಮಪತ್ರಗಳ ಪರಿಶೀಲನೆ ಹಾಗೂ ಏಪ್ರಿಲ್ 2ರಂದು ನಾಮತ್ರ ಹಿಂಪಡೆಯುವಿಕೆಗೆ ಕೊನೆಯ ದಿನವಾಗಿರುತ್ತದೆ.
ಏಪ್ರಿಲ್ 19 ರಂದು 17 ರಾಜ್ಯಗಳು ಮತ್ತು ನಾಲ್ಕು ಕೇಂದ್ರಾಡಳಿತ ಪ್ರದೇಶಗಳಲ್ಲಿನ 102ಲೋಕಸಭಾ ಕ್ಷೇತ್ರಗಳಿಗೆ ಮೊದಲ ಹಂತದಲ್ಲಿ ಚುನಾವಣೆ ನಡೆಯಲಿದೆ. ಅದರಂತೆ ತಮಿಳುನಾಡಿನಲ್ಲಿ 39, ರಾಜಸ್ಥಾನದಲ್ಲಿ 12, ಉತ್ತರ ಪ್ರದೇಶದಲ್ಲಿ 8, ಮಧ್ಯಪ್ರದೇಶದಲ್ಲಿ 6, ಉತ್ತರಾಖಂಡ, ಅಸ್ಸಾಂ ಮತ್ತು ಮಹಾರಾಷ್ಟ್ರದಲ್ಲಿ ತಲಾ 5 , ಬಿಹಾರದಲ್ಲಿ 4, ಪಶ್ಚಿಮ ಬಂಗಾಳದಲ್ಲಿ 3, ಅರುಣಾಚಲ ಪ್ರದೇಶ, ಮಣಿಪುರ, ಮೆಘಾಲಯದಲ್ಲಿ ತಲಾ 2 ಮತ್ತು ಛತ್ತೀಸ್ಗಢ, ಮಿಜೋರಾಂ, ನಾಗಾಲ್ಯಾಂಡ್, ಸಿಕ್ಕಿಂ, ತ್ರಿಪುರ, ಅಂಡಮಾನ್-ನಿಕೋಬಾರ್ ದ್ವೀಪಗಳು, ಜಮ್ಮು-ಕಾಶ್ಮೀರ, ಲಕ್ಷದ್ವೀಪ ಮತ್ತು ಪುದುಚೇರಿಯಲ್ಲಿ ತಲಾ ಒಂದು ಕ್ಷೇತ್ರದಲ್ಲಿ ಮೊದಲ ಹಂತದಲ್ಲಿ ಚುನಾವಣೆ ನಡೆಯಲಿದೆ.
ಎರಡನೇ ಹಂತದಲ್ಲಿ 89 ಲೋಕಸಭಾ ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದ್ದು, ಚುನಾವಣಾ ಆಯೋಗ ನಾಳೆ ಅಧಿಸೂಚನೆ ಹೊರಡಿಸಲಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243
ದಿನದ ಸುದ್ದಿ
ಚುನಾವಣಾ ಅಕ್ರಮ ; ಸಾರ್ವಜನಿಕರು ದೂರು ಸಲ್ಲಿಸಲು ಆಯೋಗದಿಂದ ಸಿ-ವಿಜಿಲ್ ಆಪ್ ಅಭಿವೃದ್ಧಿ
ಸುದ್ದಿದಿನ ಡೆಸ್ಕ್ : 18ನೇ ಲೋಕಸಭೆಗೆ ಸದಸ್ಯರನ್ನು ಆಯ್ಕೆ ಮಾಡಲು ನಡೆಯಲಿರುವ ಸಾರ್ವತ್ರಿಕ ಚುನಾವಣೆಗೆ ಭಾರತ ಚುನಾವಣಾ ಆಯೋಗ, ಸಕಲ ಸಿದ್ಧತೆಯೊಂದಿಗೆ ಸಜ್ಜಾಗಿದೆ.
ದೇಶದಲ್ಲಿ ಚುನಾವಣೆಗಳನ್ನು ಪಾರದರ್ಶಕವಾಗಿ ಹಾಗೂ ಅತ್ಯಂತ ವಿಶ್ವಾಸಾರ್ಹ ರೀತಿಯಲ್ಲಿ ನಡೆಸುವ ಸಂಕಲ್ಪದೊಂದಿಗೆ ಚುನಾವಣಾ ಆಯೋಗ, ಸಮಸ್ತ ಚುನಾವಣಾ ಪ್ರಕ್ರಿಯೆಗಳನ್ನು ಸುಗಮಗೊಳಿಸಲು ತಂತ್ರಜ್ಞಾನದ ನೆರವನ್ನು ಬಳಸಿಕೊಳ್ಳುತ್ತಿದೆ. ಈ ನಿಟ್ಟಿನಲ್ಲಿ ಮತದಾರರು, ಚುನಾವಣಾ ಸಿಬ್ಬಂದಿ ಹಾಗೂ ಆಯೋಗಕ್ಕೆ ನೆರವಾಗುವ ಹಲವು ಆಪ್ಗಳನ್ನು ಚುನಾವಣಾ ಆಯೋಗ ಅಭಿವೃದ್ಧಿಪಡಿಸಿದೆ.
ಈ ಪೈಕಿ ಇಂದು ಸಿ-ವಿಜಿಲ್ ಆಪ್ ಬಗ್ಗೆ ಮಾಹಿತಿ.
ದೇಶದಲ್ಲಿ ಚುನಾವಣೆಗಳ ವೇಳೆ ನಡೆಯುವ ಅಕ್ರಮಗಳು, ಮಾದರಿ ನೀತಿ ಸಂಹಿತೆಯ ಉಲ್ಲಂಘನೆ ಪ್ರಕರಣಗಳ ಮೇಲೆ ಕಣ್ಣಿಡುವುದು ಕೇವಲ ಚುನಾವಣಾ ಸಿಬ್ಬಂದಿಯ ಕೆಲಸವಲ್ಲ. ಇದು ಪ್ರತಿಯೊಬ್ಬ ನಾಗರಿಕನ ಕರ್ತವ್ಯವೂ ಹೌದು. ಹಾಗಾಗಿ ಚುನಾವಣಾ ಅಕ್ರಮಗಳ ಬಗ್ಗೆ ಸಾರ್ವಜನಿಕರು ಆಯೋಗಕ್ಕೆ ದೂರು ತಲುಪಿಸಲು ಭಾರತ ಚುನಾವಣಾ ಆಯೋಗ ಸಿ-ವಿಜಿಲ್ ಆಪ್ ಅನ್ನು ಅಭಿವೃದ್ಧಿ ಪಡಿಸಿದೆ.
ದೂರುಗಳನ್ನು ಆನ್ಲೈನ್ ಮೂಲಕ ಆಯೋಗಕ್ಕೆ ರವಾನಿಸಲು ಈ ಆಪ್ ನೆರವಾಗುವುದು. ಯಾವುದೇ ಚುನಾವಣಾ ಅಕ್ರಮಗಳ ಬಗ್ಗೆ ಧ್ವನಿಮುದ್ರಣ, ವಿಡಿಯೋ ಚಿತ್ರದ ತುಣುಕುಗಳು ಮತ್ತು ಫೋಟೊ ಮೊದಲಾದ ದಾಖಲೆಗಳನ್ನು ಸಾರ್ವಜನಿಕರು ಇದರ ಮೂಲಕ ಕಳುಹಿಸಬಹುದು.
ಚುನಾವಣೆಗಳಲ್ಲಿ ರಾಜಕೀಯ ಪಕ್ಷಗಳು, ಅಭ್ಯರ್ಥಿಗಳು ಮಾಡುವ ಖರ್ಚು-ವೆಚ್ಚ, ಮತದಾರರ ಮನವೊಲಿಕೆಗೆ ಆಮಿಷಗಳ ಬಳಕೆ ಮೊದಲಾದ ಅಕ್ರಮಗಳ ಬಗ್ಗೆ ದೂರು ನೀಡಲು ಇದನ್ನು ಬಳಸಬಹುದು. ಒಂದುನೂರು ನಿಮಿಷಗಳಲ್ಲಿ ಚುನಾವಣಾಧಿಕಾರಿಗಳು ಅಗತ್ಯ ಕ್ರಮ ಕೈಗೊಳ್ಳುತ್ತಾರೆ ಎಂದು ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಹೇಳಿದ್ದಾರೆ.
ದೇಶದ ಯಾವ ಮೂಲೆಯಲ್ಲೇ ಆಗಲಿ ನಡೆಯುವ ಚುನಾವಣಾ ಅಕ್ರಮ ಅಥವಾ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣಗಳ ಬಗ್ಗೆ ತಾವು ನೀಡಿದ ದೂರುಗಳನ್ನು ಆಯೋಗ ಪರಿಗಣಿಸಿದೆಯೇ ಎನ್ನುವ ವಿವರಗಳನ್ನು ಸಹ ಸಾರ್ವಜನಿಕರು ಸಿ-ವಿಜಿಲ್-ಆಪ್ ಮೂಲಕ ವೀಕ್ಷಿಸಬಹುದು.
ಸುದ್ದಿದಿನ.ಕಾಂ|ವಾಟ್ಸಾಪ್|9980346243
-
ದಿನದ ಸುದ್ದಿ7 days ago
ನಾಯಕನ ಹಟ್ಟಿ | ಶ್ರೀಗುರು ತಿಪ್ಪೇರುದ್ರಸ್ವಾಮಿ ರಥೋತ್ಸವಕ್ಕೆ ವಿಶೇಷ ಬಸ್ ಸೌಲಭ್ಯ
-
ದಿನದ ಸುದ್ದಿ6 days ago
ಲೋಕಸಭಾ ಚುನಾವಣೆ : ಚುನಾವಣಾ ಚಟುವಟಿಕೆಗಳ ಕುರಿತ ಜಿಲ್ಲಾವಾರು ಮಾಹಿತಿ
-
ದಿನದ ಸುದ್ದಿ6 days ago
ವಿಜಯಪುರ ಜಿಲ್ಲಾ ಸಾಹಿತ್ಯ ಸಮ್ಮೇಳನದ ಕವಿಗೋಷ್ಠಿಗೆ ಮೈಬೂಬಸಾಹೇಬ.ವೈ.ಜೆ ಆಯ್ಕೆ
-
ದಿನದ ಸುದ್ದಿ6 days ago
ಬೆಂಗಳೂರಿನಲ್ಲಿ ಬಿಜೆಪಿ ನೂತನ ಮಾಧ್ಯಮಕೇಂದ್ರ ಆರಂಭ
-
ದಿನದ ಸುದ್ದಿ5 days ago
ಲೋಕಸಭಾ ಚುನಾವಣೆ | ಹೊಸ ಮತದಾರರೆಷ್ಟು ಗೊತ್ತಾ..?
-
ದಿನದ ಸುದ್ದಿ5 days ago
ಕವಿತೆ | ನೆನಪು
-
ದಿನದ ಸುದ್ದಿ3 days ago
ಚುನಾವಣಾ ಅಕ್ರಮ ; ಸಾರ್ವಜನಿಕರು ದೂರು ಸಲ್ಲಿಸಲು ಆಯೋಗದಿಂದ ಸಿ-ವಿಜಿಲ್ ಆಪ್ ಅಭಿವೃದ್ಧಿ
-
ದಿನದ ಸುದ್ದಿ2 days ago
ಲೋಕಸಭಾ ಚುನಾವಣೆಯ ಮೊದಲ ಹಂತಕ್ಕೆ ನಾಮಪತ್ರ ಸಲ್ಲಿಕೆಗೆ ಇಂದು ಕೊನೆಯ ದಿನ