ದಿನದ ಸುದ್ದಿ
ಬುದ್ಧರ ಬೋಧನೆಯ ಮಧ್ಯಮ ಮಾರ್ಗ
- ರಘೋತ್ತಮ ಹೊ.ಬ
ಭಗವಾನ್ ಬುದ್ಧನ ಬೋಧನೆಯ ಪ್ರಮುಖ ಅಂಶವೇನು? ಹೀಗೊಂದು ಪ್ರಶ್ನೆ ಇಟ್ಟರೆ ಎಲ್ಲರೂ ಕಣ್ಣುಮುಚ್ಚಿಕೊಂಡು ಹೇಳುವ ಉತ್ತರ ‘ಆಸೆಯೇ ದುಃಖಕ್ಕೆ ಮೂಲ’ ಎಂದು. ಇದು ಎಷ್ಟು ಸರಿ? ಬುದ್ಧನ ಬೋಧನೆ ಇಷ್ಟೊಂದು ಸರಳವೇ ಅಥವ ಆಸೆಯೇ ಬೇಡವೆನ್ನುವಷ್ಟು ಅತಿಯದ್ದೆ? ಖಂಡಿತ, ಇದೊಂದು ಬುದ್ಧನ ಬೋಧನೆಗೆ ಎಸಗುತ್ತಿರುವ ಅಪಪ್ರಚಾರ. ಹಾಗಿದ್ದರೆ ವಾಸ್ತವ? ಬುದ್ಧ ಹೇಳಿದ್ದು “ಆಸೆಯೇ ಬೇಡ ಎನ್ನುವ ಅತಿಯೂ ಅಲ್ಲದ, ಆಸೆಯೇ ತುಂಬಿರಬೇಕು ಎಂಬ ಆ ಅತಿಯೂ ಅಲ್ಲದ ಎರಡರ ನಡುವಿನ ಮಧ್ಯಮ ರೀತಿ”ಯದ್ದು. ಅದೇ ಮಧ್ಯಮ ಮಾರ್ಗ. ಪಾಳಿ ಬಾಷೆಯಲ್ಲಿ ಹೇಳುವುದಾದರೆ ‘ಮಜ್ಜಿಮ ಪತಿಪಾದ’.
ಮಧ್ಯಮ ಮಾರ್ಗ, ಹಾಗಿದ್ದರೆ ಇದು ಏನು? ಇದಕ್ಕೆ ಬುದ್ಧ ಕೊಡುವ ಉದಾಹರಣೆ “ಕೆಲವರು ಹೇಳುತ್ತಾರೆ ನಾಳೆಯೇ ನಾವು ಸಾಯುವುದರಿಂದ ಇಂದೇ ಕುಡಿದು ತಿಂದು ಮಜಾ ಮಾಡಿಬಿಡೋಣ. ಮತ್ತೂ ಕೆಲವರು ಹೇಳುತ್ತಾರೆ ಎಲ್ಲ ಆಸೆಗಳನ್ನು ಬಲಿಕೊಡೋಣ. ಯಾಕೆಂದರೆ ಅವು ಮರುಜನ್ಮ ತರುತ್ತವೆ”. ಬುದ್ಧ ಇವೆರಡನ್ನು ತಿರಸ್ಕರಿಸಿದ.
ಇದಕ್ಕೆ ಆತ ನೀಡಿದ ಕಾರಣ ಇವೆರಡೂ ಮಾನವ ಪರಿಪೂರ್ಣತೆ ಪಡೆಯುವುದಕ್ಕೆ ತೊಡಕಾಗುತ್ತವೆ ಎಂದು. ಅಂದರೆ “ಕುಡಿದು ತಿಂದು ಸಾಯುವ ಅತಿಯೂ ತಪ್ಪು, ಹಾಗೆಯೇ ಎಲ್ಲವನ್ನು ತ್ಯಜಿಸುವ ಆ ಅತಿಯೂ ತಪ್ಪು”. ಹಾಗಿದ್ದರೆ ಇವೆರಡರ ನಡುವಿನ ಮಧ್ಯಮದ್ದು ಎಂದರೆ? ಬುದ್ಧ ಹೇಳಿದ್ದು “ನಿನ್ನ ದೇಹದ ಅಗತ್ಯಕ್ಕೆ ತಕ್ಕಂತೆ ಕುಡಿ, ತಿನ್ನು. ಹಾಗೆಯೇ ಆಸೆಯನ್ನು ತ್ಯಜಿಸಬೇಡ. ಬದಲಿಗೆ ನಿನ್ನನ್ನು ನೀನು ನಿಯಂತ್ರಣದಲ್ಲಿಟ್ಟುಕೋ”.
ಅಂದಹಾಗೆ ಬುದ್ಧನ ಈ ಮಧ್ಯಮ ಮಾರ್ಗ ಇಷ್ಟೊಂದು ಸರಳವೇ? ಅಥವಾ ಅದರಲ್ಲಿ ಬೇರೇನು ಇಲ್ಲವೆ? ನಿಜ ಹೇಳಬೇಕೆಂದರೆ ಮಧ್ಯಮ ಮಾರ್ಗ ಎನ್ನುತ್ತಲೇ ಬುದ್ಧ ಮಾನವ ಪರಿಪೂರ್ಣತೆಯ ಮಾರ್ಗವನ್ನು ಪರಿಚಯಿಸುತ್ತಾ ಹೋಗುತ್ತಾನೆ. ಈ ಹಿನ್ನೆಲೆಯಲ್ಲಿ ಆತ “ತನ್ನ ಧರ್ಮದ ಕೇಂದ್ರ ಬಿಂದು ಮನುಷ್ಯ ಮತ್ತು ಪ್ರಾಪಂಚಿಕ ಜೀವನದಲ್ಲಿ ಮನುಷ್ಯ-ಮನುಷ್ಯರ ನಡುವಿನ ಸಂಬಂಧ” ಎಂದು ಸ್ಪಷ್ಟಪಡಿಸುತ್ತಾನೆ. ಹಾಗೆ ಹೇಳುವಾಗ ಬುದ್ಧ ಇದರ ನಡುವೆ ದೇವರುದಿಂಡಿರನ್ನು ತರುವುದಿಲ್ಲ ಎಂಬುದಿಲ್ಲಿ ಗಮನಾರ್ಹ.
ಧಮ್ಮದ ಕೇಂದ್ರ ಮನುಷ್ಯ ಯಾಕೆ? ಬುದ್ಧ ಹೇಳುವುದು “ಮನುಷ್ಯರು ದುಃಖ, ನೋವು ಮತ್ತು ಬಡತನದಲ್ಲಿ ಬದುಕುತ್ತಿದ್ದಾರೆ. ಈ ಪ್ರಪಂಚವು ನೋವಿನ ಸಾಗರದಲ್ಲಿ ಮುಳುಗಿದೆ ಮತ್ತು ಇಂತಹ ನೋವಿನಿಂದ ಪ್ರಪಂಚವನ್ನು ಹೇಗೆ ಮುಕ್ತಗೊಳಿಸಬೇಕು ಎಂಬುದೇ ನನ್ನ ಧಮ್ಮದ ಉದ್ದೇಶ. ಇದನ್ನು ಬಿಟ್ಟು ಬೇರೆ ಏನೂ ಇಲ್ಲ”. ದುಃಖ, ನೋವು, ಬಡತನದಿಂದ ಮನುಷ್ಯ ಮುಕ್ತಿ ಹೊಂದಿದಾಗ ಅಲ್ಲಿ ನೆಲೆಗೊಳ್ಳುವುದು ಸಂತಸ, ಸಂಭ್ರಮ, ಶ್ರೀಮಂತಿಕೆ ಎಂಬುದು ಕೂಡ ಇಲ್ಲಿ ಗಮನಿಸಬೇಕಾದ ಅಂಶ. ಅಂದರೆ ಮಾನವನ ನೆಮ್ಮದಿಯೇ ಬುದ್ಧನ ಧ್ಯೇಯ ಎಂಬುದು ಸ್ಪಷ್ಟ.
ಹಾಗಿದ್ದರೆ ಆ ನೆಮ್ಮದಿಯನ್ನು ಪಡೆಯಲು ಕೆಲವನ್ನಾದರೂ ತತ್ವಗಳನ್ನು ಮನುಷ್ಯರು ಆಚರಿಸಲೇಬೇಕಾಗುತ್ತದಲ್ಲವೆ? ಬುದ್ಧ ಹೇಳಿದ್ದು ಅದನ್ನೆ. ಪಂಚಶೀಲ ಎಂಬ ಆ ತತ್ವವನ್ನು. ಅದರಲ್ಲಿ ಮೊದಲನೆ ತತ್ವ ಹೇಳುವುದು “ಕೊಲೆ ಮಾಡಬೇಡ, ಯಾರನ್ನೂ ಗಾಯಗೊಳಿಸಬೇಡ”, ಎರಡನೆಯದು “ಬೇರೆಯವರಿಗೆ ಸೇರಿದ್ದನ್ನು ವಶಪಡಿಸಿಕೊಳ್ಳಬೇಡ ಅಥವಾ ಕಳ್ಳತನ ಮಾಡಬೇಡ’, ಮೂರನೆಯದು ‘ಅಸತ್ಯವನ್ನು ನುಡಿಯಬೇಡ’, ನಾಲ್ಕನೆಯದು ‘ಅತಿಯಾಸೆ ಅಥವಾ ಕಾಮಾತುರತೆಗೆ ಒಳಗಾಗಬೇಡ’ ಮತ್ತು ಐದನೆಯದು ‘ಮದ್ಯಪಾನಗಳಿಗೆ ದಾಸನಾಗಬೇಡ’.
ಬುದ್ಧರು ಈ ಐದು ತತ್ವಗಳನ್ನು ಮನುಷ್ಯನೊಬ್ಬ ತಾನು ಏನು ಮಾಡುತ್ತಿರುವೆನು ಎಂಬುದನ್ನು ನಿರ್ಧರಿಸಿಕೊಳ್ಳಲು ನಿರ್ದಿಷ್ಟ ಮಾದರಿಯಾಗಿ ಬಳಸಬೇಕು ಎಂದು ಸಲಹೆ ನೀಡುತ್ತಾರೆ. ಈ ಹಿನ್ನೆಲೆಯಲ್ಲಿ ವ್ಯಕ್ತಿಯೊಬ್ಬ ಎಲ್ಲವನ್ನು ಕಳೆದುಕೊಂಡಿದ್ದರೆ ಆಗ ಆತ ಮೇಲಿನ ಐದು ಶೀಲಗಳನ್ನು ಮಾದರಿಯಾಗಿಟ್ಟುಕೊಂಡು ತನ್ನನ್ನು ತಾನು ಗಮನಿಸಕೊಳ್ಳಬೇಕಾಗುತ್ತದೆ. ಈ ಐದು ಶೀಲಗಳನ್ನು ಅಥವ ತತ್ವಗಳನ್ನು ಆತ ಪಾಲಿಸುತ್ತಿಲ್ಲವೆಂದರೆ ಆಗ ಆತ ತನನ್ನು ತಾನು ಕಳೆದುಕೊಳ್ಳುತ್ತಿದ್ದಾನೆ ಎಂದೂ… ಇದನ್ನು ಗಮನಿಸಿ ಆತ ಪಾಲಿಸಲು ಪ್ರಾರಂಭಿಸಿದರೆ ಆಗ ಆತ ತನ್ನನ್ನು ತಾನು ನಿಯಂತ್ರಣದಲ್ಲಿಟ್ಟುಕೊಳ್ಳುತ್ತಿದ್ದಾನೆ ಎಂದರ್ಥ. ಅಂದಹಾಗೆ ಆತ ಹೀಗೆ ತನ್ನನ್ನು ತಾನು ನಿಯಂತ್ರಣದಲ್ಲಿಟ್ಟುಕೊಂಡರೆ ಆಗ ಆತ ಬುದ್ಧನ ಮಧ್ಯಮಾರ್ಗದಲ್ಲಿದ್ದಾನೆ ಅಥವ ಬುದ್ಧನನ್ನು ಅನುಸರಿಸುತ್ತಿದ್ದಾನೆ ಎಂದೇ ಅರ್ಥ.
ಮುಂದುವರಿದು ತನ್ನ ಈ ಮಧ್ಯಮಮಾರ್ಗಕ್ಕೆ ಪೂರಕವಾಗಿ ಬುದ್ಧ ಮತ್ತೊಂದು ಮಾರ್ಗವನ್ನು ಬೋಧಿಸುತ್ತಾರೆ. ಅದೇ ಅಷ್ಠಾಂಗ ಮಾರ್ಗ ಅಥವ ಎಂಟು ಶೇಷ್ಠ ಗುಣಗಳ ಮಾರ್ಗ. ಅವುಗಳೆಂದರೆ,
- ಸರಿಯಾದ ದೃಷ್ಟಿ: ಅಂದರೆ ಅಜ್ಞಾನದ ನಾಶವೇ ಸರಿಯಾದ ದೃಷ್ಟಿ. ಇದಕ್ಕೆ ವಿರುದ್ಧವಾದದ್ದು ಮಿಥ್ಯಾ ದೃಷ್ಟಿ.
- ಸರಿಯಾದ ಸಂಕಲ್ಪ: ಅಂದರೆ ಆಸೆ ಆಕಾಂಕ್ಷೆಗಳು ಶ್ರೇಷ್ಠ ಮಟ್ಟದ್ದಾಗಿರಬೇಕು, ಕೀಳು ದರ್ಜೆಯದ್ದಾಗಿರಬಾರದು.
- ಸರಿಯಾದ ಮಾತು: ಅಂದರೆ ನಾವಾಡುವ ಮಾತು ಬೇರೆಯವರ ಮನಸ್ಸನ್ನು ನೋಯಿಸದಂತಿರಬಾರದು.
- ಸರಿಯಾದ ವರ್ತನೆ: ನಮ್ಮ ವರ್ತನೆ ಬೇರೆಯವರ ಭಾವನೆಗಳನ್ನು ಗೌರವಿಸುವಂತಿರಬೇಕು
- ಸರಿಯಾದ ಸಂಪಾದನೆಯ ಮಾರ್ಗ: ವ್ಯಕ್ತಿಯೊಬ್ಬ ಅನ್ಯಾಯದ, ಬೇರೆಯವರಿಗೆ ನೋವು ತರುವ ಸಂಪಾದನೆಯ ಮಾರ್ಗವನ್ನು ಅನುಸರಿಸಬಾರದು.
- ಸರಿಯಾದ ಪ್ರಯತ್ನ: ಮನಸ್ಸಿನ ಅಜ್ಞಾನವನ್ನು ನಿರ್ಮೂಲನೆಗೊಳಿಸಿಕೊಳ್ಳುವ ಪ್ರಯತ್ನ.
- ಸರಿಯಾದ ಜಾಗ್ರತೆ: ಕೆಡುಕಿನ ವಿರುದ್ಧ ಮನಸ್ಸು ಸದಾ ಎಚ್ಚರದಿಂದಿರುವುದು.
- ಸರಿಯಾದ ಏಕಾಗ್ರತೆ: ಧನಾತ್ಮಕ ಧ್ಯಾನಸ್ಥ ಮನಸ್ಥಿತಿ
ಈ ಹಿನ್ನೆಲೆಯಲ್ಲಿ ಮನುಷ್ಯನ ಶ್ರೇಯಸ್ಸೇ, ಆತ ಉತ್ತಮ ಬದುಕನ್ನು ಹೊಂದುವಂತಾಗುವುದೇ ಬುದ್ಧನ ಬೋಧನೆಯ ಈ ಅಷ್ಟಾಂಗ ಮಾರ್ಗಗಳ, ಪಂಚಶೀಲಗಳ, ಒಟ್ಟಾರೆ ಮಧ್ಯಮ ಮಾರ್ಗದ ತಿರುಳು. ಈ ತಿರುಳನ್ನು ಅರ್ಥಮಾಡಿಕೊಂಡರೆ ಬುದ್ಧ ಅರ್ಥವಾಗುತ್ತಾನೆ. ಹಾಗೆಯೇ ಜಗತ್ತು ಕೂಡ ಅರ್ಥವಾಗುತ್ತದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243
ದಿನದ ಸುದ್ದಿ
ಸಂವಿಧಾನಕ್ಕೆ ಅಪಾಯವಾದರೆ, ಬಡವರ, ಶ್ರಮಿಕರ ಭವಿಷ್ಯಕ್ಕೆ ಅಪಾಯವಾದಂತೆ : ಸಿಎಂ ಸಿದ್ದರಾಮಯ್ಯ
ಸುದ್ದಿದಿನ,ಮಡಿಕೇರಿ : ದೇಶದ ಸಂವಿಧಾನಕ್ಕೆ ಅಪಾಯವಾದರೆ ಈ ದೇಶದ ಮಹಿಳೆಯರ, ಬಡವರ, ಮಧ್ಯಮ ವರ್ಗದವರ, ಶ್ರಮಿಕರ, ಬದುಕು-ಭವಿಷ್ಯಕ್ಕೆ ಅಪಾಯ ಎಂದರ್ಥ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಮಡಿಕೇರಿಯಲ್ಲಿ ನಡೆದ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ಈ ಲೋಕಸಭಾ ಚುನಾವಣೆ ನಮಗೊಂದು ಅವಕಾಶ. ಈ ಬಾರಿ ಬಿಜೆಪಿಯನ್ನು ಸೋಲಿಸಿ ಕಾಂಗ್ರೆಸ್ ಗೆಲ್ಲಿಸುವ ಮೂಲಕ ಪ್ರಜಾತಂತ್ರ ಉಳಿಸಬೇಕು ಎಂದು ಕರೆ ನೀಡಿದರು.
ಬಳಿಕ ತುಮಕೂರಿನಲ್ಲಿ ಮಾತನಾಡಿದ ಅವರು, ರಾಜ್ಯದ ಹಿತಾಸಕ್ತಿ ಕಾಪಾಡುವಲ್ಲಿ ಕಳೆದ ಲೋಕಸಭಾ ಚುನಾವಣೆಯಲ್ಲಿ ಆಯ್ಕೆಯಾಗಿದ್ದ ಬಿಜೆಪಿ ಸಂಸದರು ವಿಫಲರಾಗಿದ್ದಾರೆ ಎಂದು ಮುಖ್ಯಮಂತ್ರಿ ಆರೋಪಿಸಿದರು.
ಮಹಿಳೆಯರ ಅಭ್ಯುದಯಕ್ಕಾಗಿ ಪಂಚ ಗ್ಯಾರಂಟಿ ಯೋಜನೆಗಳನ್ನು ನುಡಿದಂತೆ ಜಾರಿಗೆ ತಂದಿದ್ದೇವೆ. ಇದರಿಂದಾಗಿ ಮಹಿಳೆಯರ ಜೀವನದಲ್ಲಿ ಸುಧಾರಣೆ ಕಂಡಿದೆ, ಈ ಯೋಜನೆಯ ಫಲಾನುಭವಿಗಳ ಬಗ್ಗೆ ಟೀಕಿಸುವುದು ಸರಿಯಲ್ಲ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಮಡಿಕೇರಿಯಲ್ಲಿ ನಡೆದ ಜನಧ್ವನಿ-2 ಬೃಹತ್ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದೆ.
ಸಂವಿಧಾನಕ್ಕೆ ಅಪಾಯ ಎಂದರೆ ದೇಶದ ಮಹಿಳೆಯರು, ಬಡವರು, ಮಧ್ಯಮ ವರ್ಗದವರು, ಶೂದ್ರರು, ಶ್ರಮಿಕರ ಬದುಕು-ಭವಿಷ್ಯಕ್ಕೆ ಅಪಾಯ ಎಂದರ್ಥ.
ಭಾರತದಲ್ಲಿ ಪ್ರಜಾತಂತ್ರ ಅಪಾಯದಲ್ಲಿದೆ. ಇದನ್ನು ಉಳಿಸುವ ಅನಿವಾರ್ಯತೆ ನಮ್ಮೆಲ್ಲರ ಮುಂದಿದೆ. ಈ ಲೋಕಸಭಾ ಚುನಾವಣೆ ನಮಗೊಂದು… pic.twitter.com/UapeRxBcZP
— Siddaramaiah (@siddaramaiah) April 14, 2024
ಸುದ್ದಿದಿನ.ಕಾಂ|ವಾಟ್ಸಾಪ್|9980346243
ದಿನದ ಸುದ್ದಿ
ದಾವಣಗೆರೆ | ದ್ವಿತೀಯ ಪಿ.ಯು.ಸಿ ಪರೀಕ್ಷೆ; ಜಿಲ್ಲೆಗೆ ಶೇ 80.96 ರಷ್ಟು ಫಲಿತಾಂಶ
ಸುದ್ದಿದಿನ,ದಾವಣಗೆರೆ : 2024 ರ ಮಾರ್ಚ್ನಲ್ಲಿ ನಡೆದ ದ್ವಿತೀಯ ಪಿ.ಯು.ಸಿ. ಫಲಿತಾಂಶ ಪ್ರಕಟವಾಗಿದ್ದು ಜಿಲ್ಲೆಗೆ ಶೇ 80.96 ರಷ್ಟು ಫಲಿತಾಂಶ ಬಂದಿದ್ದು ಶೇ 74.27 ಗಂಡು, ಶೇ 82.01 ರಷ್ಟು ಹೆಣ್ಣು ಮಕ್ಕಳು ಉತ್ತೀರ್ಣರಾಗಿದ್ದಾರೆ ಎಂದು ಜಿಲ್ಲಾಧಿಕಾರಿ ಡಾ; ವೆಂಕಟೇಶ್ ಎಂ.ವಿ ತಿಳಿಸಿದರು.
ಅವರು ಬುಧವಾರ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಚುನಾವಣಾ ಸಂಬಂಧ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು. ಏಪ್ರಿಲ್ 10 ರಂದು ಫಲಿತಾಂಶ ಪ್ರಕಟವಾಗಿದ್ದು ಹೆಚ್ಚಿನ ವಿವರಗಳು ಬರಬೇಕಾಗಿದೆ. ಈ ವರ್ಷ ಜಿಲ್ಲೆಯಲ್ಲಿ ದ್ವಿತೀಯ ಪಿ.ಯು.ಸಿ ಪರೀಕ್ಷೆಯನ್ನು 19644 ರೆಗ್ಯುಲರ್, 422 ಖಾಸಗಿ ಸೇರಿ 20066 ವಿದ್ಯಾರ್ಥಿಗಳು ತೆಗೆದುಕೊಂಡಿದ್ದರು. ಇದರಲ್ಲಿ 15904 ವಿದ್ಯಾರ್ಥಿಗಳು ಉತ್ತೀರ್ಣರಾಗುವ ಮೂಲಕ ಶೇ 80.96 ರಷ್ಟು ಫಲಿತಾಂಶ ಪಡೆದಿದ್ದಾರೆ.
ಕಳೆದ ವರ್ಷ ಶೇ 75.72 ರಷ್ಟು ಫಲಿತಾಂಶ ಬಂದಿತ್ತು, ಈ ವರ್ಷ ಶೇ 5.24 ರಷ್ಟು ಫಲಿತಾಂಶ ಹೆಚ್ಚಳವಾಗಿದೆ. ಜಿಲ್ಲೆಗೆ ಟಾಪ್ ಬಂದವರಲ್ಲಿ ಕಲಾ ವಿಭಾಗದಲ್ಲಿ ಹರಿಹರದ ಶ್ರೀಮತಿ ಗಿರಿಯಮ್ಮ ಕಾಂತಪ್ಪ ಮಹಿಳಾ ಪದವಿ ಪೂರ್ವ ಕಾಲೇಜಿನ ಹೀನಬಾನು ಪಿ.ಕೆ. 591 ಅಂಕ ಪಡೆದು ಶೇ 98.5, ವಾಣಿಜ್ಯ; ದಾವಣಗೆರೆ ತಾ; ಗೋಪನಾಳು ಸರ್ಕಾರಿ ಪದವಿ ಪೂರ್ವ ಕಾಲೇಜಿನ ರೇಷ್ಮಾ ಬಾನು 589 ಅಂಕ ಪಡೆದು ಶೇ 98.16 ರಷ್ಟು ಫಲಿತಾಂಶ ಪಡೆದು ಜಿಲ್ಲೆಗೆ ಮೊದಲಿಗರಾಗಿದ್ದಾರೆ.
ವಿಜ್ಞಾನ ವಿಭಾಗದಲ್ಲಿ ಲೋಕಿಕೆರೆ ರಸ್ತೆಯಲ್ಲಿನ ಸರ್ಎಂವಿ ಸಂಯುಕ್ತ ಪದವಿ ಪೂರ್ವ ಕಾಲೇಜಿನ ಮೊಹಮ್ಮದ್ ಸುಹೇಲ್, ಅಮೃತ ದೊಡ್ಡ ಬಸಪ್ಪನವರ್, ಅನನ್ಯ ಹೆಚ್.ಎಸ್, ಆಕಾಶ್ ಸಿ.ಪಾಟೀಲ್ ಇವರು 593 ಅಂಕ ಶೇ 98.83 ರಷ್ಟು ಸಮನಾದ ಫಲಿತಾಂಶ ಹಂಚಿಕೊಂಡಿದ್ದಾರೆ ಎಂದರು.
ವಿಭಾಗವಾರು ಫಲಿತಾಂಶ; ಕಲಾ ವಿಭಾಗದಲ್ಲಿ ಶೇ 57.83 ರಷ್ಟು ಫಲಿತಾಂಶ ಬಂದಿದ್ದು ಇದರಲ್ಲಿ ಗಂಡು ಶೇ 45, ಹೆಣ್ಣು ಶೇ 66.46 ರಷ್ಟು ಉತ್ತೀರ್ಣರಾಗಿದ್ದಾರೆ. ವಾಣಿಜ್ಯ ವಿಭಾಗದಲ್ಲಿ ಶೇ 76.22 ರಷ್ಟು ಫಲಿತಾಂಶ ಬಂದಿದ್ದು ಗಂಡು ಶೇ 65.5, ಹೆಣ್ಣು ಶೇ 80.8, ವಿಜ್ಞಾನ ವಿಭಾಗದಲ್ಲಿ ಶೇ 91.13 ರಷ್ಟು ಫಲಿತಾಂಶ ಬಂದಿದ್ದು ಗಂಡು ಶೇ 91.39 ಹಾಗೂ ಹೆಣ್ಣು ಶೇ 88.69 ರಷ್ಟು ಫಲಿತಾಂಶ ಬಂದಿದೆ.
ನಗರಕ್ಕಿಂತ ಗ್ರಾಮೀಣರ ಮೇಲುಗೈ; ಫಲಿತಾಂಶದಲ್ಲಿ ನಗರ ಪ್ರದೇಶಕ್ಕಿಂತ ಗ್ರಾಮೀಣ ವಿದ್ಯಾರ್ಥಿಗಳು ಶೇ 1.1 ರಷ್ಟು ಮೇಲುಗೈ ಸಾಧಿಸಿದ್ದಾರೆ. ಗ್ರಾಮೀಣ ಪ್ರದೇಶದಲ್ಲಿ ಶೇ 73.65 ಗಂಡು, ಶೇ 84.6 ಹೆಣ್ಣು ಉತ್ತೀರ್ಣರಾದರೆ ನಗರ ಪ್ರದೇಶದ ಒಟ್ಟು ಫಲಿತಾಂಶ ಶೇ 80.75 ರಲ್ಲಿ ಗಂಡು ಶೇ 74.41, ಹೆಣ್ಣು ಶೇ 81.37 ರಷ್ಟು ಫಲಿತಾಂಶ ಪಡೆದಿದ್ದಾರೆ.
ಶೇ 100 ರಷ್ಟು ಫಲಿತಾಂಶ ಪಡೆದ ಶಾಲೆಗಳು; ದಾವಣಗೆರೆ ಅಂಜುಂ ಪದವಿ ಪೂರ್ವ ಕಾಲೇಜು, ಲೇಬರ್ ಕಾಲೋನಿ, ಜೈನ್ ಟ್ರಿನಿಟಿ ಪದವಿ ಪೂರ್ವ ಕಾಲೇಜು, ಅನ್ಮೋಲ್ ಪದವಿ ಪೂರ್ವ ಕಾಲೇಜು, ಶ್ರೀ ಗೀತಂ ಪದವಿ ಪೂರ್ವ ಕಾಲೇಜು, ದಾವಣಗೆರೆ ಇವು ಶೇ 100 ರಷ್ಟು ಫಲಿತಾಂಶ ಪಡೆದ ಕಾಲೇಜುಗಳಾಗಿವೆ.
ಈ ವೇಳೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸುರೇಶ್ ಬಿ.ಇಟ್ನಾಳ್, ಜಿಲ್ಲಾ ರಕ್ಷಣಾಧಿಕಾರಿ ಉಮಾ ಪ್ರಶಾಂರ್, ಶಾಲಾ ಶಿಕ್ಷಣ, ಪದವಿ ಪೂರ್ವ ಇಲಾಖೆ ಉಪನಿರ್ದೇಶಕ ಕರಿಸಿದ್ದಪ್ಪ ಉಪಸ್ಥಿತರಿದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243
ದಿನದ ಸುದ್ದಿ
ಗ್ರಾಹಕರಿಂದ ಹೆಚ್ಚುವರಿಯಾಗಿ ಪೇಪರ್ ಬ್ಯಾಗ್ಗೆ ರೂ.10 ಪಡೆದ ಶಾಪಿಂಗ್ ಮಾಲ್ಗೆ ದಂಡ
ಸುದ್ದಿದಿನ ,ದಾವಣಗೆರೆ : ವಕೀಲ ವೃತ್ತಿಯಲ್ಲಿ ತೊಡಗಿಕೊಂಡಿರುವ ಆರ್. ಬಸವರಾಜ್ ಎಂಬುವವರು ದಾವಣಗೆರೆ ನಗರದ ಮ್ಯಾಕ್ಸ್ ರೀಟೈಲ್ ಅಂಗಡಿಯಲ್ಲಿ 2023 ರ ಅಕ್ಟೋಬರ್ 29 ರಂದು ರೂ.1,499 ಪಾವತಿಸಿ, ಡೆನಿವಾ ಪ್ಯಾಂಟ್ ಖರೀದಿಸಿದರು. ಈ ವೇಳೆಯಲ್ಲಿ ಇಲ್ಲಿಯೇ ಲೈಫ್ ಸ್ಟೈಲ್ ಇಂಟರ್ನ್ಯಾಷನಲ್ ವಾಣಿಜ್ಯ ಸಂಸ್ಥೆ ಪ್ಯಾಂಟ್ ಮಾರಾಟದ ವೇಳೆ ಹೆಚ್ಚುವರಿಯಾಗಿ ರೂ.10/- ಪೇಪರ್ ಬ್ಯಾಗ್ಗೆ ಪಡೆಯಲಾಯಿತು.
ಗ್ರಾಹಕರಾದ ಆರ್. ಬಸವರಾಜ್ ಇವರ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದಲ್ಲಿ ದೂರನ್ನು ದಾಖಲಿಸಿ ವಾಣಿಜ್ಯ ಸಂಸ್ಥೆ ವಿರುದ್ದ ರೂ.50,000 ಮಾನಸಿಕ ಕಿರುಕುಳ ಹಾಗೂ ದೂರು ದಾಖಲಿಸಲು ಖರ್ಚು ಮಾಡಿದ ಮೊ ರೂ.10,000 ಗಳನ್ನು ಪಾವತಿಸುವಂತೆ ದೂರನ್ನು ದಾಖಲಿಸಿದರು.
ವಾಣಿಜ್ಯ ಸಂಸ್ಥೆಗೆ ನೋಟಿಸ್ ಜಾರಿ ಮಾಡಿದ್ದು ಈ ಸಂಸ್ಥೆ ವಕೀಲರ ಮುಖಾಂತರ ಹಾಜರಾಗಿ ಬ್ಯಾಗ್ಗೆ ಹೆಚ್ಚುವರಿಯಾಗಿ ಪಡೆದ ಹಣಕ್ಕೆ ಸಮರ್ಥಿಸಿಕೊಂಡಿತ್ತು. ಆದರೆ ಗ್ರಾಹಕರ ಆಯೋಗ ಈ ಮೊದಲು ರಾಷ್ಟ್ರೀಯ ಗ್ರಾಹಕರ ಆಯೋಗ ಬಿಗ್ ಬಜಾರ್ ವಿರುದ್ಧ ಸಾಯಲ್ ದಾವ ಪ್ರಕರಣದ ನ್ಯಾಯ ನಿರ್ಣಯದ ತೀರ್ಪಿನ ಅನುಗುಣವಾಗಿ ವಾಣಿಜ್ಯ ಸಂಸ್ಥೆಗಳು ಕ್ಯಾರಿ ಬ್ಯಾಗ್ಗಳಿಗೆ ಹೆಚ್ಚಿನ ಹಣವನ್ನು ಪಡೆಯುವಂತಿಲ್ಲ ಎಂಬ ತೀರ್ಪನ್ನು ಉಲ್ಲೇಖಿಸಿ ಹೆಚ್ಚುವರಿಯಾಗಿ ರೂ.10 ಪಡೆದ ಸಂಸ್ಥೆಯ ಕ್ರಮವು ಗ್ರಾಹಕರ ಸಂರಕ್ಷಣಾ ಕಾಯ್ದೆಯ ಅಡಿಯಲ್ಲಿ ಅನುಚಿತ ವ್ಯಾಪಾರ ಪದ್ದತಿಯೆಂದು ಪರಿಗಣಿಸಿ ದಾವಣಗೆರೆ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷರಾದ ಮಹಂತೇಶ ಈರಪ್ಪ ಶಿಗ್ಲಿ, ಸದಸ್ಯರಾದ ತ್ಯಾಗರಾಜನ್ ಮತ್ತು ಮಹಿಳಾ ಸದಸ್ಯರಾದ ಶ್ರೀಮತಿ ಬಿ.ಯು. ಗೀತಾ ಇವರು ವಾಣಿಜ್ಯ ಸಂಸ್ಥೆಗೆ ರೂ.7000 ದಂಡವಿದಿಸಿ ಆದೇಶಿಸಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243