Connect with us

ರಾಜಕೀಯ

ದೇವೇಗೌಡರ ಅರೋಪ , “ಐ ಡೋಂಟ್ ಕೇರ್” ಅಂದ್ರು ಸಿದ್ದರಾಮಯ್ಯ : ಸುದ್ದಿಗೋಷ್ಠಿಯ ಡೀಟೇಲ್ಸ್ ಇಲ್ಲಿದೆ ಓದಿ..!

Published

on

  • ಹೆಚ್.ಡಿ. ದೇವೇಗೌಡ ಹಾಗೂ ಕುಮಾರಸ್ವಾಮಿ ಆರೋಪಿಸಿರುವ ಹಿನ್ನೆಲೆಯಲ್ಲಿ ‌ಮಾಜಿ ಮುಖ್ಯಮಂತ್ರಿ ‌ಸಿದ್ದರಾಮಯ್ಯ ಶುಕ್ರವಾರ (ಇಂದು) ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ಸಿದ್ದರಾಮಯ್ಯರ ಮಾತುಗಳು ಈ ಕೆಳಗಿನಂತಿವೆ.

ಜೆಡಿಎಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾಗಿರುವ ಎಚ್.ಡಿ.ದೇವೇಗೌಡರು ಇತ್ತೀಚೆಗೆ ಪತ್ರಿಕೆಯೊಂದಕ್ಕೆ ಸಂದರ್ಶನ ನೀಡಿ ನನ್ನ ವಿರುದ್ಧ ಕೆಲವು ಆರೋಪಗಳನ್ನು ಮಾಡಿದ್ದಾರೆ. ಅವುಗಳಿಗೆ ಪ್ರತಿಕ್ರಿಯಿಸುವುದು ಬೇಡ ಎಂದು ಸುಮ್ಮನಿದ್ದೆ. ಆದರೆ ಇದು ಗಂಭೀರ ಸ್ವರೂಪದ ಆರೋಪಗಳಾಗಿರುವುದರಿಂದ ಮೌನಕ್ಕೆ ಬೇರೆ ಅರ್ಥ ಬರಬಹುದೆಂಬ ಕಾರಣಕ್ಕೆ ಕೆಲವು ವಿಷಯಗಳನ್ನು ಸಾರ್ವಜನಿಕರ ಗಮನಕ್ಕೆ ತರುವುದು ಅನಿವಾರ್ಯವಾಗಿದೆ.

ವರ್ತಮಾನದಲ್ಲಿ ನಮ್ಮ ದೊಡ್ಡ ಶತ್ರು ಕೋಮುವಾದಿ ಬಿಜೆಪಿ. ಅದು ಅಧಿಕಾರದ ಸೊಕ್ಕಿನಿಂದ ಜಾತ್ಯತೀತ ಶಕ್ತಿಗಳನ್ನು ನಾಶ ಮಾಡಲು ಹೊರಟಿರುವ ಈ ಹೊತ್ತಿನಲ್ಲಿ ಜಾತ್ಯತೀತ ಶಕ್ತಿಗಳೆಲ್ಲ ಒಗ್ಗಟ್ಟಿನಿಂದ ಎದುರಿಸಬೇಕು ಎನ್ನುವುದು ನನ್ನ ನಿಲುವು ಕೂಡಾ. ಆದರೆ ಜಾತ್ಯತೀತರೆಂದು ಹೇಳಿಕೊಳ್ಳುವವರು ಪರೋಕ್ಷವಾಗಿ ಕೋಮುವಾದಿ ಶಕ್ತಿಗಳಿಗೆ ನೆರವಾಗುತ್ತಿರುವ ಪ್ರಯತ್ನ ಮಾಡುತ್ತಿರುವಾಗ ಅದನ್ನು ಕೂಡಾ ನಾವು ಖಂಡಿಸಬೇಕಾಗುತ್ತದೆ, ಅವರ ಸಂಚುಗಳನ್ನು ಬಯಲುಮಾಡಬೇಕಾಗುತ್ತದೆ.

ಸಮ್ಮಿಶ್ರ ಸರ್ಕಾರದ ಪತನಕ್ಕೆ ನಾನು ಕಾರಣ ಎಂದು ದೇವೇಗೌಡರು ಆರೋಪಿಸಿದ್ದಾರೆ. ಈ ರೀತಿಯ ಆರೋಪಗಳಿಂದ ಯಾರಿಗೆ, ಯಾವ ಪಕ್ಷಕ್ಕೆ ಖುಷಿಯಾಗುತ್ತದೆ ಎನ್ನುವುದು ಸಾಮಾನ್ಯ ಮನುಷ್ಯರಿಗೂ ತಿಳಿಯುತ್ತದೆ. ಕೇಂದ್ರ ಮತ್ತು ರಾಜ್ಯದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ತನ್ನ ವಿರೋಧಿಗಳನ್ನು ಹತ್ತಿಕ್ಕಲು ಮಾಡುತ್ತಿರುವ ಪ್ರಯತ್ನಗಳನ್ನು ಕಂಡು ದೇವೇಗೌಡರು ಹೆದರಿರುವಂತೆ ಕಾಣಿಸುತ್ತಿದೆ. ಇದಕ್ಕಾಗಿ ಅವರನ್ನು ಖುಷಿಪಡಿಸಲು ನನ್ನ ಮೇಲೆ ಈ ರೀತಿಯ ಆಧಾರರಹಿತ ಆರೋಪ ಮಾಡಿದ್ದಾರೆ ಎನ್ನುವುದು ಸ್ಪಷ್ಷವಾಗುತ್ತದೆ.

ಕಳೆದ ಐದು ವರ್ಷಗಳಲ್ಲಿ ಬಿಜೆಪಿ ತನ್ನ ನಿಯಂತ್ರಣದಲ್ಲಿರುವ ಸಿಬಿಐ,ಇಡಿ ಮತ್ತು ಐಟಿ ಇಲಾಖೆಗಳನ್ನು ಛೂಬಿಟ್ಟು ವಿರೋಧ ಪಕ್ಷಗಳ ನಾಯಕರನ್ನು ಬೆದರಿಸುವ ಪ್ರಯತ್ನ ಮಾಡುತ್ತಾ ಬಂದಿರುವುದನ್ನು ದೇಶ ಕಂಡಿದೆ. ಇತ್ತೀಚೆಗೆ ಎಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದ ಕಾಲದ ಪೋನ್ ಕದ್ದಾಲಿಕೆಯನ್ನು ಸಿಬಿಐಗೆ ಒಪ್ಪಿಸುವ ನಿರ್ಧಾರ ಪ್ರಕಟಿಸಿದ ಕೂಡಲೇ ಗೌಡರು ಯಾಕೋ ಚಿಂತಾಕ್ರಾಂತರಾದಂತೆ ಕಾಣಿಸುತ್ತಿದೆ. ಯಡಿಯೂರಪ್ಪನವರು ದೆಹಲಿಗೆ ಹೋಗಿ ಬಂದಮರುದಿನವೇ ಪೋನ್ ಕದ್ದಾಲಿಕೆಯನ್ನು ಸಿಬಿಐಗೆ ಒಪ್ಪಿಸುತ್ತಿದ್ದೇವೆ ಎಂದು ಪ್ರಕಟಿಸಿದ ನಂತರವೂ, ಗೌಡರಿಗೆ ಮಾತ್ರ ಈ ನಿರ್ಧಾರದಲ್ಲಿ ನರೇಂದ್ರ ಮೋದಿ ಮತ್ತು ಅಮಿತ್ ಶಾ ಕೈವಾಡ ಕಾಣಿಸುತ್ತಿಲ್ಲವಂತೆ. ಗೌಡರು ಯಾರನ್ನು ಖುಷಿಪಡಿಸಲು ಈ ರೀತಿ ಅಮಾಯಕರಂತೆ ಮಾತನಾಡುತ್ತಿದ್ದಾರೆ?

ಯಡಿಯೂರಪ್ಪನವರನ್ನು ಮುಖ್ಯಮಂತ್ರಿ ಮಾಡಿ ನಾನು ವಿರೋಧಪಕ್ಷ ನಾಯಕರಾಗುವ ಉದ್ದೇಶದಿಂದ ಸಮ್ಮಿಶ್ರ ಸರ್ಕಾರವನ್ನು ನಾನು ಉರುಳಿಸಿದೆ ಎಂದು ಗೌಡರು ಆರೋಪಿಸಿದ್ದಾರೆ. ತಾವು ಮುಖ್ಯಮಂತ್ರಿಯಾಗಲು ಒಂದು ಸರ್ಕಾರವನ್ನು ಉರುಳಿಸುವುದನ್ನು ನಾವು-ನೀವೆಲ್ಲ ಕೇಳಿದ್ದೇವೆ. ಆದರೆ ವಿರೋಧ ಪಕ್ಷದ ನಾಯಕನಾಗಲು ಸರ್ಕಾರವನ್ನು ಉರುಳಿಸುವುದನ್ನು ನಾನೆಂದೂ ಕೇಳಿಲ್ಲ. ಇಂತಹದ್ದೊಂದು ಕಲ್ಪನಾ ವಿಲಾಸದಲ್ಲಿ ತೇಲಾಡುವಂತೆ ಮಾಡಲು ದೇವೇಗೌಡರಿಂದ ಮಾತ್ರ ಸಾಧ್ಯ. ಗೌಡರ ಎಲ್ಲ ಆರೋಪಗಳಿಗೆ ಉತ್ತರಿಸಲು ನಾನು ಹೋಗುವುದಿಲ್ಲ. ಆದರೆ ಯಡಿಯೂರಪ್ಪನವರನ್ನು ಮುಖ್ಯಮಂತ್ರಿ ಮಾಡುವುದು ನನ್ನ ಉದ್ದೇಶವಾಗಿತ್ತು ಎಂಬ ಕಪೋಲಕಲ್ಪಿತ, ನಿರಾಧಾರವಾದ ಆರೋಪದ ಬಗ್ಗೆ ಪ್ರತಿಕ್ರಿಯಿಸಲೇಬೇಕಾಗಿದೆ.

ಸಮ್ಮಿಶ್ರ ಸರ್ಕಾರದ ಪತನಕ್ಕೆ ಎಚ್.ಡಿ.ದೇವೇಗೌಡರು ಮತ್ತು ಅವರ ಆದೇಶದಂತೆಯೇ ಕೆಲಸ ಮಾಡುತ್ತಿದ್ದ ಎಚ್.ಡಿ.ಕುಮಾರಸ್ವಾಮಿ ಮತ್ತು ಎಚ್.ಡಿ.ರೇವಣ್ಣ ಕಾರಣ. ಜೆಡಿಎಸ್ ಜೊತೆ ಮೈತ್ರಿಗೆ ನನ್ನ ಸಹಮತ ಇರಲಿಲ್ಲ ಎನ್ನುವುದನ್ನು ಒಪ್ಪಿಕೊಳ್ಳಲು ನನಗೆ ಯಾವ ಹಿಂಜರಿಕೆಯೂ ಇಲ್ಲ. ಯಾಕೆಂದರೆ ದೇವೇಗೌಡರ ರಾಜಕೀಯದ ಆಟಗಳನ್ನೆಲ್ಲ ನೋಡಿ ಅನುಭವಿಸಿದವನು ನಾನು. ನನ್ನಂತೆಯೇ ಬಹುತೇಕ ಕಾಂಗ್ರೆಸ್ ಶಾಸಕರಿಗೆ ಜೆಡಿಎಸ್ ಜೊತೆ ಮೈತ್ರಿ ಅಷ್ಟೊಂದು ಇಷ್ಟ ಇರಲಿಲ್ಲ. ಆದರೆ ಪಕ್ಷದ ಹೈಕಮಾಂಡ್ ಆದೇಶಕ್ಕೆ ಶಿರಬಾಗಿ ನಾವು ಒಪ್ಪಿಕೊಂಡೆವು. ಕುಮಾರಸ್ವಾಮಿ ಸರ್ಕಾರಕ್ಕೆ ಸಂಪೂರ್ಣ ಸಹಕಾರವನ್ನೂ ನೀಡಿದೆವು. ಸರ್ಕಾರಕ್ಕೆ ಯಾವುದಾದರೂ ರೀತಿಯ ಕಿರುಕುಳ ನೀಡಿದ್ದಕ್ಕೆ ಒಂದೇ ಒಂದು ಉದಾಹರಣೆ ಅವರು ಕೊಡಲಿ. ಆದರೆ ಕುಮಾರಸ್ವಾಮಿಯವರು ನಮ್ಮೆಲ್ಲ ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವಲ್ಲಿ ವಿಫಲರಾದರು. ಸಮನ್ವಯ ಸಮಿತಿಯಲ್ಲಿ ಕೈಗೊಂಡ ನಿರ್ಧಾರಗಳನ್ನು ಕೂಡಾ ಕುಮಾರಸ್ವಾಮಿ ಜಾರಿ ಮಾಡಲಿಲ್ಲ. ಮೈತ್ರಿ ಧರ್ಮಕ್ಕೆ ಕಟ್ಟುಬಿದ್ದು ನಾವು ಬಹಿರಂಗವಾಗಿ ಪ್ರತಿಕ್ರಿಯಿಸಲು ಹೋಗಲಿಲ್ಲ. ನಮ್ಮದೇ ಪಕ್ಷದಲ್ಲಿದ್ದ ಎಚ್.ವಿಶ್ವನಾಥ್ ಅವರನ್ನು ತಮ್ಮ ಪಕ್ಷಕ್ಕೆ ಸೇರಿಸಿಕೊಂಡು ಅವರ ಮೂಲಕ ನನ್ನ ವಿರುದ್ಧ ಇಲ್ಲಸಲ್ಲದ ಆರೋಪಗಳನ್ನು ಮಾಡಿಸಿದರು. ಈಗ ಅದೇ ವಿಶ್ವನಾಥ್ ಅಪ್ಪ ಮತ್ತು ಮಕ್ಕಳ ವಿರುದ್ಧ ಆರೋಪಗಳನ್ನು ಮಾಡುತ್ತಿದ್ದಾರೆ.

ಇವತ್ತು ರಾಜ್ಯದಲ್ಲಿ ಬಿಜೆಪಿ ಅಧಿಕಾರದಲ್ಲಿದ್ದರೆ ಅದಕ್ಕೆ ದೇವೇಗೌಡ ಮತ್ತು ಅವರ ಮಗ ಕುಮಾರಸ್ವಾಮಿಯವರು ಕೂಡಿ ಮಾಡಿದ್ದ ಕಪಟನಾಟಕವೇ ಮೂಲ ಕಾರಣ. ಕುಮಾರಸ್ವಾಮಿಯವರು ಕಾಂಗ್ರೆಸ್ ಜೊತೆಗಿನ ಮೈತ್ರಿಗೆ ದ್ರೋಹ ಬಗೆದು ರಾತೋರಾತ್ರಿ ಜೆಡಿಎಸ್ ಶಾಸಕರ ಜೊತೆಗೂಡಿ ಹೋಗಿ ಬಿಜೆಪಿಗೆ ಶರಣಾದರಲ್ಲಾ, ಅದೇ ದಿನ ರಾಜ್ಯದಲ್ಲಿ ಬಿಜೆಪಿ ಒಂದು ಕಾಲು ಊರಿತ್ತು. ಆಗಲೂ ದೇವೇಗೌಡರು ತಮ್ಮ ಮಗನ ನಡವಳಿಕೆಯನ್ನು ದೂರಲಿಲ್ಲ, ಬದಲಿಗೆ ಕಾಂಗ್ರೆಸ್ ಪಕ್ಷದ ವಿರುದ್ಧ ಆರೋಪ ಮಾಡಿದ್ದರು. ಆಗಲೂ ಮಾಧ್ಯಮದವರ ಮುಂದೆ ಬಂದು ಮಗ ನನ್ನ ಮಾತು ಕೇಳಲಿಲ್ಲ ಎಂದು ಬಹಿರಂಗವಾಗಿ ಕಣ್ಣೀರು ಹಾಕಿದ್ದರು. ಒಳಗಿಂದೊಳಗೆ ಕುಮಾರಸ್ವಾಮಿಯವರಿಗೆ ಎಲ್ಲ ರೀತಿಯ ಬೆಂಬಲ ನೀಡಿದ್ದರು.

ಬೆಂಬಲಿಸಿದ ಪಕ್ಷಕ್ಕೆ ದ್ರೋಹ ಬಗೆಯುವುದು ದೇವೇಗೌಡ ಮತ್ತು ಕುಮಾರಸ್ವಾಮಿಯವರ ಹುಟ್ಟುಗುಣ. ರಾಮಕೃಷ್ಣ ಹೆಗಡೆಯವರನ್ನು ಹಣಿಯಲು ಯತ್ನಿಸಿದವರು ಯಾರು? ತಾನೇ ಮುಖ್ಯಮಂತ್ರಿ ಮಾಡಿದ ಜೆ.ಎಚ್.ಪಟೇಲ್ ಅವರಿಗೆ ಕಿರುಕುಳ ಕೊಟ್ಟವರು ಯಾರು? ಎಸ್.ಆರ್.ಬೊಮ್ಮಾಯಿ ಸರ್ಕಾರವನ್ನು ಉರುಳಿಸಿದವರು ಯಾರು? 20-20 ತಿಂಗಳ ಅಧಿಕಾರ ಹಂಚಿಕೆಯ ಒಪ್ಪಂದ ಮಾಡಿಕೊಂಡ ಎಚ್ .ಡಿ. ಕುಮಾರಸ್ವಾಮಿ, ತನ್ನ ಅಧಿಕಾರವಧಿ ಮುಗಿದ ನಂತರ ವಚನ ಪಾಲನೆ ಮಾಡದೆ ದ್ರೋಹ ಬಗೆದರು. ಆಗ ಮಗನನ್ನು ವಚನಭ್ರಷ್ಟರಾಗಿ ಮಾಡಿದವರು ಇದೇ ದೇವೇಗೌಡರು. ಆ ವಚನಭ್ರಷ್ಟತೆಯ ಒಂದೇ ಕಾರಣಕ್ಕಾಗಿ ಸಿಡಿದೆದ್ದ ರಾಜ್ಯದ ಜನ ಯಡಿಯೂರಪ್ಪನವರನ್ನು ಬೆಂಬಲಿಸಿ ರಾಜ್ಯದ ಮುಖ್ಯಮಂತ್ರಿಯನ್ನಾಗಿ ಮಾಡಿದರು. ರಾಜ್ಯದಲ್ಲಿ ಮೊದಲ ಬಾರಿ ಬಿಜೆಪಿ ಅಧಿಕಾರಕ್ಕೆ ಬರಲು ಮತ್ತು ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಲು ಕಾರಣಕರ್ತರಾದ ದೇವೇಗೌಡರು ಈಗ ನನ್ನ ಮೇಲೆ ಆರೋಪ ಮಾಡುತ್ತಿದ್ದಾರೆ.

ಕಳೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಗೆದ್ದಿದೆ, ನರೇಂದ್ರಮೋದಿಯವರು ಮತ್ತೆ ಪ್ರಧಾನಿಯಾಗಿದ್ದಾರೆ, ಕೋಮುವಾದಿ ಪಕ್ಷ ಮತ್ತೆ ಅಧಿಕಾರ ಹಿಡಿದಿದೆ ಎನ್ನುವುದಕ್ಕೆ ದೇವೇಗೌಡರಿಗೆ ಬೇಸರ ಇಲ್ಲ. ಅವರ ಚಿಂತೆ ತಮ್ಮ ಮತ್ತು ತಮ್ಮ ಮೊಮ್ಮಗನ ಸೋಲು ಮಾತ್ರ. ಸೋತಿರುವುದು ದೇವೇಗೌಡ ಮತ್ತು ನಿಖಿಲ್ ಕುಮಾರಸ್ವಾಮಿ ಮಾತ್ರವಲ್ಲ. ರಾಜ್ಯದ 26 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳ ಅಭ್ಯರ್ಥಿಗಳು ಸೋತಿದ್ದಾರೆ. ಆ ಎಲ್ಲ ಅಭ್ಯರ್ಥಿಗಳ ಸೋಲು ಗೌಡರನ್ನು ಕಾಡುವುದಿಲ್ಲ. ಜೆಡಿಎಸ್ ಪಕ್ಷದ ಮತದಾರರಿರುವ ಮೈಸೂರು, ಚಾಮರಾಜನಗರ, ಚಿಕ್ಕಬಳ್ಳಾಪುರ, ಕೋಲಾರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಸೋಲಿಗೆ ಯಾರು ಕಾರಣ? ಅಲ್ಲಿನ ಜೆಡಿಎಸ್ ಮತದಾರರೆಲ್ಲ ಈ ಬಾರಿ ಯಾರಿಗೆ ಮತ ಹಾಕಿದ್ದಾರೆ? ಅವರೆಲ್ಲ ಬಿಜೆಪಿ ಅಭ್ಯರ್ಥಿಯನ್ನು ಬೆಂಬಲಿಸುವಂತೆ ಹೇಳಿದವರು ಯಾರು? ಈ ಪ್ರಶ್ನೆಗಳಿಗೂ ಗೌಡರು ಉತ್ತರ ನೀಡಬೇಕಲ್ಲಾ?

ಮೊದಲ ಒಪ್ಪಂದದ ಪ್ರಕಾರ ದೇವೇಗೌಡರು ಬೆಂಗಳೂರು ಉತ್ತರದಿಂದ ಸ್ಪರ್ಧಿಸಬೇಕಿತ್ತು. ಯಾಕೆ ಅಲ್ಲಿಂದ ಹೋಗಿ ತುಮಕೂರಿನಲ್ಲಿ ಸ್ಪರ್ಧಿಸಿದರು? ತಮ್ಮ ಪಕ್ಷಕ್ಕೆ ಎಂಟು ಕ್ಷೇತ್ರಗಳು ಬೇಕೇಬೇಕು ಎಂದು ಹಠ ಹಿಡಿದಿದ್ದು ತಾವು ಗೆಲ್ಲಲ್ಲಿಕ್ಕೋ? ಇಲ್ಲವೇ ಬಿಜೆಪಿ ಅಭ್ಯರ್ಥಿಗಳನ್ನು ಗೆಲ್ಲಿಸಲಿಕ್ಕೋ? ಉಡುಪಿ – ಚಿಕ್ಕಮಗಳೂರು ಕ್ಷೇತ್ರದಲ್ಲಿ ಜೆಡಿಎಸ್ ಗೆ ನೆಟ್ಟಗೆ ಪಕ್ಷದ ಕಚೇರಿ ಇಲ್ಲ, ಅಲ್ಲಿ ನಮ್ಮ ಪಕ್ಷದ ಅಭ್ಯರ್ಥಿಯನ್ನು ಪಕ್ಷಾಂತರ ಮಾಡಿಸಿ ಟಿಕೆಟ್ ಕೊಟ್ಟದ್ದು ತಮ್ಮ ಪಕ್ಷ ಗೆಲ್ಲಲ್ಲಿಕ್ಕೋ? ಇಲ್ಲವೇ ಶೋಭಾ ಕರಂದ್ಲಾಜೆಯವರನ್ನು ಗೆಲ್ಲಿಸಲಿಕ್ಕೋ? ಕಾರವಾರ, ವಿಜಯಪುರ ಕ್ಷೇತ್ರಗಳಲ್ಲಿ ತಮ್ಮ ಪಕ್ಷಕ್ಕೆ ಯಾವುದೇ ನೆಲೆ ಇಲ್ಲದೆ ಇದ್ದರೂ ದುರ್ಬಲ ಅಭ್ಯರ್ಥಿಗಳನ್ನು ಹಾಕಿ ಬಿಜೆಪಿ ಗೆಲುವಿಗೆ ದಾರಿ ಮಾಡಿಕೊಟ್ಟಿದ್ದು ಯಾರು?
ಮೈಸೂರು ಮತ್ತು ಚಾಮರಾಜನಗರ ಲೋಕಸಭಾ ಕ್ಷೇತ್ರಗಳಲ್ಲಿ ಜೆಡಿಎಸ್ ನಾಯಕರು ಕಾಂಗ್ರೆಸ್ ಅಭ್ಯರ್ಥಿ ಪರ ಕೆಲಸ ಮಾಡಿದ್ದಾರೆಂದು ತಮ್ಮ ಆತ್ಮ ಮುಟ್ಟಿಕೊಂಡು ಹೇಳಲಿ. ಮೈಸೂರು ಲೋಕಸಭಾ ಕ್ಷೇತ್ರದಲ್ಲಿ ಜೆಡಿಎಸ್ ಮತದಾರರು ಕಾಂಗ್ರೆಸ್ ಅಭ್ಯರ್ಥಿಗೆ ಮತ ಹಾಕಿಲ್ಲ ಎಂದು ಜಿ.ಟಿ.ದೇವೇಗೌಡರು ಬಹಿರಂಗವಾಗಿ ಹೇಳಿದ್ದಾರಲ್ಲಾ? ದೇವೇಗೌಡರು ಯಾರ ವಿರುದ್ಧ ಕ್ರಮ ಕೈಗೊಂಡಿದ್ದಾರೆ?

ನಾನು ಜೆಡಿಎಸ್ ಪಕ್ಷದಲ್ಲಿದ್ದವನು, ದೇವೇಗೌಡರ ರಾಜಕೀಯವನ್ನು ಹತ್ತಿರದಿಂದ ನೋಡಿದವನು. ಅವರ ನಡೆ-ನುಡಿಗಳನ್ನು, ಸಂಚು-ಹುನ್ನಾರಗಳನ್ನು ನನಗಿಂತ ಚೆನ್ನಾಗಿ ಉಳಿದವರು ಅರ್ಥಮಾಡಿಕೊಳ್ಳಲಾರರು. ಲೋಕಸಭಾ ಚುನಾವಣೆಯಲ್ಲಿ ಹೀಗೆಯೇ ಆಗುತ್ತೆ ಎಂದು ನನಗೆ ಗೊತ್ತಿತ್ತು. ಆದರೆ ಪಕ್ಷದ ಹೈಕಮಾಂಡ್ ಆದೇಶಕ್ಕೆ ತಲೆಬಾಗಿ ಜೆಡಿಎಸ್ ಜತೆ ಮೈತ್ರಿ ಮಾಡಿಕೊಳ್ಳಬೇಕಾಯಿತು. ಈ ಫಲಿತಾಂಶದ ನಿರೀಕ್ಷೆ ಇತ್ತು.

ಕಳೆದ ವಿಧಾನಸಭಾ ಚುನಾವಣೆಯ ಕಾಲದಲ್ಲಿ ನಾನು ಜೆಡಿಎಸ್ ವಿರುದ್ಧ ದೇವೇಗೌಡರ ವಿರುದ್ಧ ಮಾತನಾಡಿದ್ದೇನೆ, ರಾಹುಲ್ ಗಾಂಧಿಯವರಿಂದಲೂ ಮಾತನಾಡಿಸಿದ್ದೇನೆ ಎಂದು ದೇವೇಗೌಡರು ಆರೋಪ ಮಾಡಿದ್ದಾರೆ. ಆ ಚುನಾವಣೆಯಲ್ಲಿ ದೇವೇಗೌಡರು, ಕುಮಾರಸ್ವಾಮಿಯವರು ಕಾಂಗ್ರೆಸ್ ಪರವಾಗಿ ಮಾತನಾಡಿದ್ದಾರೆಯೇ? ದಕ್ಷಿಣ ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷದ ಪ್ರಮುಖ ಎದುರಾಳಿಯೇ ಜೆಡಿಎಸ್. ಚುನಾವಣಾ ಪ್ರಚಾರದ ಕಾಲದಲ್ಲಿ ಜೆಡಿಎಸ್ ವಿರುದ್ದ ಮಾತನಾಡದೆ ಮತ್ತೆ ಯಾರ ವಿರುದ್ಧ ಮಾತನಾಡಬೇಕು?

ನಾನು ಒಕ್ಕಲಿಗ ವಿರೋಧಿ ಎಂಬಂತೆ ದೇವೇಗೌಡರು ಮತ್ತು ಅವರ ಕುಟುಂಬ ಅಪಪ್ರಚಾರ ಮಾಡುತ್ತಾ ಬಂದಿದೆ. ನಾನು ಒಕ್ಕಲಿಗ ಸಮುದಾಯದ ವಿರೋಧಿ ಅಲ್ಲ. ಜೆಡಿಎಸ್ ನಲ್ಲಿ ಒಕ್ಕಲಿಗ ನಾಯಕರ ಜೊತೆಯಲ್ಲಿಯೇ ರಾಜಕೀಯ ಮಾಡುತ್ತಾ ಬಂದವನು. ಈಗಲೂ ನನ್ನ ಬಹಳಷ್ಟು ಸ್ನೇಹಿತರು ಒಕ್ಕಲಿಗ ಸಮುದಾಯವರೇ ಆಗಿದ್ದಾರೆ. ದೇವೇಗೌಡರು ನನ್ನನ್ನು ಜೆಡಿಎಸ್ ನಿಂದ ಉಚ್ಚಾಟನೆ ಮಾಡಿದ ನಂತರ ಆ ಪಕ್ಷವನ್ನು ವಿರೋಧಿಸುತ್ತಾ ಬಂದಿದ್ದೇನೆ. ಜೆಡಿಎಸ್ ಎನ್ನುವುದು ಒಕ್ಕಲಿಗರ ಪಕ್ಷವೇ? ಜೆಡಿಎಸ್ ವಿರೋಧಿಸಿದರೆ, ದೇವೇಗೌಡರನ್ನು ವಿರೋಧಿಸಿದರೆ ನಾನು ಹೇಗೆ ಒಕ್ಕಲಿಗ ವಿರೋಧಿಯಾಗುತ್ತೇನೆ?
ತಮ್ಮ ವಿರೋಧಿಗಳನ್ನು ಒಕ್ಕಲಿಗ ವಿರೋಧಿ ಎಂದು ಸುಳ್ಳು ಆರೋಪ ಮಾಡುವ ದೇವೇಗೌಡರು ತಮ್ಮ ಮಕ್ಕಳನ್ನು ಹೊರತುಪಡಿಸಿ ಎಷ್ಟು ಮಂದಿ ಒಕ್ಕಲಿಗ ನಾಯಕರನ್ನು ಬೆಳೆಸಿದ್ದಾರೆ? ದೇವೇಗೌಡರು ರಾಜಕೀಯವಾಗಿ ನಾಶಮಾಡಿದವರ ಪಟ್ಟಿಯಲ್ಲಿ ಶೇಕಡಾ 90ರಷ್ಟು ಮಂದಿ ಒಕ್ಕಲಿಗರೇ ಆಗಿದ್ದಾರೆ. ಇದಕ್ಕೆಲ್ಲ ಗೌಡರು ಉತ್ತರ ಕೊಡುವುದಿಲ್ಲ. ಹೆಚ್ಚಿನ ಮಾಹಿತಿಬೇಕಾದರೆ ಈಗ ಬಿಜೆಪಿಯಲ್ಲಿರುವ ಬಚ್ಚೇಗೌಡರನ್ನು ಕೇಳಿ, ಅವರು ವಿವರವಾಗಿ ಹೇಳ್ತಾರೆ.
ಒಕ್ಕಲಿಗರಲ್ಲಿ ಯಾರಾದರೂ ಮುಖ್ಯಮಂತ್ರಿಯಾಗಿದ್ದರೆ ಅದು ಕಾಂಗ್ರೆಸ್ ಪಕ್ಷದಲ್ಲಿ ಮಾತ್ರ. ಕೆಂಗಲ್ ಹನುಮಂತಯ್ಯ, ಎಸ್.ಎಂ.ಕೃಷ್ಣ ಅವರಿಂದ ಹಿಡಿದು ಈಗಿನ ಡಿ.ಕೆ.ಶಿವಕುಮಾರ್, ಕೃಷ್ಣಬೈರೇಗೌಡರ ವರೆಗೆ ಒಕ್ಕಲಿಗ ನಾಯಕರಿಗೆ ಅವಕಾಶ ನೀಡಿ ಬೆಳೆಸಿದ್ದು ಕಾಂಗ್ರೆಸ್ ಪಕ್ಷ. ದೇವೇಗೌಡರು ತಮ್ಮ ಕುಟುಂಬದ ಸದಸ್ಯರನ್ನು ಹೊರತುಪಡಿಸಿ ಎಷ್ಟು ಮಂದಿ ಒಕ್ಕಲಿಗ ನಾಯಕರನ್ನು ಬೆಳೆಸಿದ್ದಾರೆ?

1996ರಲ್ಲಿ, 2004ರಲ್ಲಿ ಏನಾಯಿತು ಎನ್ನುವುದನ್ನು ಹಿಂದೆ ಬಹಳಷ್ಟು ಬಾರಿ ಹೇಳಿದ್ದೇನೆ. ನಾನು ಮುಖ್ಯಮಂತ್ರಿಯಾಗದಂತೆ ಮಾಡಲು ದೇವೇಗೌಡರು ಮತ್ತು ಕುಮಾರ ಸ್ವಾಮಿಯವರು ಏನೆಲ್ಲಾ ಮಾಡಿದರು ಎನ್ನುವುದು ರಾಜ್ಯದ ಜನರಿಗೆ ತಿಳಿದಿದೆ. ವಿಧಾನಸಭೆಯಲ್ಲಿಯೇ ಈ ಬಗ್ಗೆ ಮಾತನಾಡಿದ್ದೇನೆ, ಕುಮಾರಸ್ವಾಮಿವಯರೇ ಇದನ್ನೆಲ್ಲ ಒಪ್ಪಿಕೊಂಡಿದ್ದಾರೆ. ಇದು ವಿಧಾನಸಭೆಯ ದಾಖಲೆಯಲ್ಲಿಯೇ ಇದೆ. ಈಗ ದೇವೇಗೌಡರು ಇದ್ದಕ್ಕಿದ್ದ ಹಾಗೆ ನನ್ನ ಮೇಲೆ ಈ ರೀತಿಯ ಸುಳ್ಳು ಆರೋಪಗಳನ್ನು ಮಾಡಲು ಕಾರಣಗಳೇನು ಎನ್ನುವುದು ತಿಳಿಯದಷ್ಟು ನಾನು ದಡ್ಡನಲ್ಲ. ಇದರ ಹಿಂದೆ ಗೌಡರ ಜೊತೆ ಯಾರೆಲ್ಲ ಷಾಮೀಲಾಗಿದ್ದಾರೆ ಎನ್ನುವುದು ತಿಳಿದಿದೆ. ಅದಕ್ಕೆಲ್ಲ ಮುಂದೆ ಉತ್ತರ ಕೊಡ್ತೇನೆ.

ನಾನೇನಾದರೂ ವಿರೋಧಪಕ್ಷದ ನಾಯಕನಾಗಿಬಿಟ್ಟರೆ ಹೇಗೆ ಎಂಬ ಚಿಂತೆ ಕಾಡುತ್ತಿರುವ ಕಾರಣಕ್ಕಾಗಿಯೇ ದೇವೇಗೌಡರು ಈಗ ಹೊಸ ನಾಟಕ ಶುರು ಮಾಡಿದ್ದಾರೆ. ಈ ಹೊಸ ನಾಟಕದ ಮೂಲ ಉದ್ದೇಶವೇ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವನ್ನು ನಾಶಮಾಡಿ, ಆ ಸ್ಥಾನದಲ್ಲಿ ತಮ್ಮ ಪಕ್ಷವನ್ನು ಬೆಳೆಸುವುದು. ಇದೆಲ್ಲ ದೇವೇಗೌಡರಿಗೆ ಹೊಸದೇನಲ್ಲ. ಪ್ರಧಾನಿ ಮಾಡಲು ಬೆಂಬಲಿಸಿದ ಪಕ್ಷಕ್ಕೆ ದ್ರೋಹ ಬಗೆದವರು ದೇವೇಗೌಡರು. ಆಗಿನ ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾಗಿದ್ದ ಸೀತಾರಾಮ್ ಕೇಸರಿಯವರ ವಿರುದ್ಧದ ಹಳೆಪ್ರಕರಣವನ್ನು ಹುಡುಕಿ ಅವರನ್ನೇ ಜೈಲಿಗೆ ಕಳುಹಿಸುವ ಸಂಚು ಮಾಡಿದವರು ದೇವೇಗೌಡರು. ಆದ್ದರಿಂದ ನಂಬಿದವರಿಗೆ ಕೈಕೊಡುವುದು, ವಿರೋಧಿಗಳ ಮೇಲೆ ಸುಳ್ಳು ಆರೋಪ ಮಾಡುವುದು, ರಾಜಕೀಯ ಲಾಭಕ್ಕಾಗಿ, ಅನುಕಂಪ ಗಿಟ್ಟಿಸಿಕೊಳ್ಳಲು ಅಳುವುದು, ಕೊರಗುವುದು ಇವೆಲ್ಲ ದೇವೇಗೌಡರ ಹಳೆ ಗಿಮಿಕ್ ಗಳು. ಇದನ್ನೆಲ್ಲ ರಾಜ್ಯದ ಜನ ನೋಡುತ್ತಾ ಬಂದಿದ್ದಾರೆ.

ಹಿಂದೆ – ಮುಂದೆ ರಾಜಕೀಯ ಮಾಡುವ ಅಭ್ಯಾಸ ನನಗಿಲ್ಲ. ನೇರ ರಾಜಕಾರಣ ಮಾಡುತ್ತೇನೆ. ತಾತ, ಮೊಮ್ಮಕ್ಕಳು ಸೇರಿ ಇಡೀ ಕುಟುಂಬವೇ ಚುನಾವಣೆಗೆ ನಿಂತಿದ್ದರಿಂದ ಅವರು ಸೋತಿದ್ದು. ಈಗ ನನ್ನ ಮೇಲೆ ಸುಮ್ಮನೆ ಗೂಬೆ ಕೂರಿಸುತ್ತಿದ್ದಾರೆ. ಲಿಂಗಾಯತ ವಿರೋಧಿ, ಅಲ್ಪಸಂಖ್ಯಾತರ ವಿರೋಧಿ ಹೀಗೆ ನನ್ನನ್ನು ತಪ್ಪಾಗಿ ಬಿಂಬಿಸಿದ್ದೆ ಹೆಚ್ಚು. 5 ವರ್ಷದ ನನ್ನ ಕಾರ್ಯಕ್ರಮ ಎಲ್ಲ ಜಾತಿ, ಧರ್ಮಗಳನ್ನು ಮೀರಿ ವಿಸ್ತರಿಸಿದೆ. ನನಗೆ ಸರ್ಟಿಫಿಕೇಟ್ ಕೊಡುವುದು ಜನರೇ ಹೊರತು, ದೇವೇಗೌಡರಲ್ಲ.
ಬಿಜೆಪಿಯನ್ನು ಮೆಚ್ಚಿಸಲು ದೇವೇಗೌಡರು ನನ್ನ ಮೇಲೆ ಸುಳ್ಳು ಆರೋಪ ಮಾಡಿರಬಹುದು.

ಐ ಡೋಂಟ್ ಕೇರ್!!

ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ

ಸಂವಿಧಾನಕ್ಕೆ ಅಪಾಯವಾದರೆ, ಬಡವರ, ಶ್ರಮಿಕರ ಭವಿಷ್ಯಕ್ಕೆ ಅಪಾಯವಾದಂತೆ : ಸಿಎಂ ಸಿದ್ದರಾಮಯ್ಯ

Published

on

ಸುದ್ದಿದಿನ,ಮಡಿಕೇರಿ : ದೇಶದ ಸಂವಿಧಾನಕ್ಕೆ ಅಪಾಯವಾದರೆ ಈ ದೇಶದ ಮಹಿಳೆಯರ, ಬಡವರ, ಮಧ್ಯಮ ವರ್ಗದವರ, ಶ್ರಮಿಕರ, ಬದುಕು-ಭವಿಷ್ಯಕ್ಕೆ ಅಪಾಯ ಎಂದರ್ಥ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಮಡಿಕೇರಿಯಲ್ಲಿ ನಡೆದ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ಈ ಲೋಕಸಭಾ ಚುನಾವಣೆ ನಮಗೊಂದು ಅವಕಾಶ. ಈ ಬಾರಿ ಬಿಜೆಪಿಯನ್ನು ಸೋಲಿಸಿ ಕಾಂಗ್ರೆಸ್ ಗೆಲ್ಲಿಸುವ ಮೂಲಕ ಪ್ರಜಾತಂತ್ರ ಉಳಿಸಬೇಕು ಎಂದು ಕರೆ ನೀಡಿದರು.

ಬಳಿಕ ತುಮಕೂರಿನಲ್ಲಿ ಮಾತನಾಡಿದ ಅವರು, ರಾಜ್ಯದ ಹಿತಾಸಕ್ತಿ ಕಾಪಾಡುವಲ್ಲಿ ಕಳೆದ ಲೋಕಸಭಾ ಚುನಾವಣೆಯಲ್ಲಿ ಆಯ್ಕೆಯಾಗಿದ್ದ ಬಿಜೆಪಿ ಸಂಸದರು ವಿಫಲರಾಗಿದ್ದಾರೆ ಎಂದು ಮುಖ್ಯಮಂತ್ರಿ ಆರೋಪಿಸಿದರು.

ಮಹಿಳೆಯರ ಅಭ್ಯುದಯಕ್ಕಾಗಿ ಪಂಚ ಗ್ಯಾರಂಟಿ ಯೋಜನೆಗಳನ್ನು ನುಡಿದಂತೆ ಜಾರಿಗೆ ತಂದಿದ್ದೇವೆ. ಇದರಿಂದಾಗಿ ಮಹಿಳೆಯರ ಜೀವನದಲ್ಲಿ ಸುಧಾರಣೆ ಕಂಡಿದೆ, ಈ ಯೋಜನೆಯ ಫಲಾನುಭವಿಗಳ ಬಗ್ಗೆ ಟೀಕಿಸುವುದು ಸರಿಯಲ್ಲ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ವಿವಿಧ ಜಿಲ್ಲೆಗಳಲ್ಲಿ ಡಾ. ಬಾಬು ಜಗಜೀವನ್ ರಾಮ್ 117ನೇ ಜನ್ಮ ದಿನಾಚರಣೆ

Published

on

ಸುದ್ದಿದಿನ ಡೆಸ್ಕ್ : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಡಾ. ಬಾಬು ಜಗಜೀವನ್ ರಾಮ್ ಅವರ 117ನೇ ಜನ್ಮ ದಿನಾಚರಣೆ ಪ್ರಯುಕ್ತ ವಿಧಾನ ಸೌದದಲ್ಲಿರುವ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು.

ಸಮಾಜ ಕಲ್ಯಾಣ ಸಚಿವ ಹೆಚ್.ಸಿ. ಮಹದೇವಪ್ಪ್ಪ, ಹಿರಿಯ ಶಾಸಕ ಈ. ತುಕಾರಾಮ್, ಮಾಜಿ ಸಚಿವ ಹೆಚ್.ಆಂಜನೇಯ, ವಿಧಾನ ಪರಿಷತ್ ಸದಸ್ಯ ಸುದಾಮ ದಾಸ್, ಮಹಿಳಾ ಆಯೋಗದ ಅದ್ಯಕ್ಷೆ ಡಾ. ನಾಗಲಕ್ಷ್ಮಿ ಸೇರಿ ಹಲವರು ಉಪಸ್ಥಿತರಿದ್ದರು. ದಾವಣಗೆರೆ ಜಿಲ್ಲಾಧಿಕಾರಿ ಕಚೇರಿಯಲ್ಲಿಂದು ಹಸಿರು ಕ್ರಾಂತಿಯ ಹರಿಕಾರ ಡಾ.ಬಾಬು ಜಗಜೀವನ ರಾಂ ಅವರ ಜನ್ಮ ಜಯಂತಿಯನ್ನು ಸಾಂಕೇತಿಕವಾಗಿ ಆಚರಿಸಲಾಯಿತು.

ಲೋಕಸಭಾ ಚುನಾವಣೆ ನೀತಿ ಸಂಹಿತೆ ಹಿನ್ನೆಲೆಯಲ್ಲಿ ಸರಳವಾಗಿ ನಡೆದ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್ ಜಗಜೀವನರಾಂ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು. ಮಂಡ್ಯದ ಡಿಸಿ ಪಾರ್ಕ್ ಎದುರು ಇರುವ ಜಗಜೀವನ್‌ರಾಮ್ ಪ್ರತಿಮೆಗೆ ಜಿಲ್ಲಾಡಳಿತದ ವತಿಯಿಂದ ಮಾಲಾರ್ಪಣೆ ಮಾಡಲಾಯಿತು. ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಡಾ.ಕುಮಾರ, ಎಸ್ಪಿ ಎನ್.ಯತೀಶ್ ಸೇರಿದಂತೆ ಅಧಿಕಾರಿಗಳ ವರ್ಗ ಹಾಗೂ ಜಗಜೀವನ್‌ರಾಮ್ ಅನುಯಾಯಿಗಳು ಭಾಗವಹಿಸಿದ್ದರು.

ಹಸಿರು ಕ್ರಾಂತಿಯ ಹರಿಕಾರ, ಮಾಜಿ ಉಪ ಪ್ರಧಾನಿ ಬಾಬು ಜಗಜೀವನ ರಾಂ ಅವರ ಅವರ 117ನೇ ಜಯಂತಿಯನ್ನು ಹಾವೇರಿ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸಾಂಕೇತಿಕವಾಗಿ ಆಚರಿಸಲಾಯಿತು. ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಬಾಬು ಜಗಜೀವನ್ ರಾಂ ಅವರ ಭಾವಚಿತ್ರಕ್ಕೆ ಜಿಲ್ಲಾಧಿಕಾರಿ ಜಿಲ್ಲಾಧಿಕಾರಿ ರಘುನಂದನ ಮೂರ್ತಿ ಪುಷ್ಪಾರ್ಚನೆ ಮಾಡಿ ಗೌರವ ನಮನ ಸಲ್ಲಿಸಿದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಇಂದು ಚುನಾವಣಾ ಆಯೋಗ ಸಮಾವೇಶ

Published

on

ಸುದ್ದಿದಿನ ಡೆಸ್ಕ್ : ಕಳೆದ ಲೋಕಸಭಾ ಚುನಾವಣೆಯಲ್ಲಿ ಕಡಿಮೆ ಮತದಾನವಾಗಿರುವ 11 ರಾಜ್ಯಗಳ ನಗರ ಪಾಲಿಕೆ ಆಯುಕ್ತರು ಮತ್ತು ಆಯ್ದ ಜಿಲ್ಲಾ ಚುನಾವಣಾ ಅಧಿಕಾರಿಗಳೊಂದಿಗೆ ಕೇಂದ್ರ ಚುನಾವಣಾ ಆಯೋಗ ಇಂದು ದೆಹಲಿಯಲ್ಲಿ ಸಮಾವೇಶ ನಡೆಸಲಿದೆ.

ಈ ಸಮಾವೇಶದಲ್ಲಿ ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಮತದಾನದ ಪ್ರಮಾಣವನ್ನು ಹೆಚ್ಚಿಸುವ ಮಾರ್ಗಗಳ ಕುರಿತು ಚರ್ಚಿಸಲಾಗುವುದು ಮತ್ತು ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಕಡಿಮೆ ಮತದಾನದ ಸಮಸ್ಯೆಯನ್ನು ಪರಿಹರಿಸಲು ಉದ್ದೇಶಿತ ಮತ್ತು ನಿರ್ದಿಷ್ಟ ಕ್ರಿಯಾ ಯೋಜನೆಗಳನ್ನು ಸಿದ್ಧಪಡಿಸಲಾಗುವುದು.

ದೆಹಲಿ, ಮುಂಬೈ, ಚೆನ್ನೈ, ಬೆಂಗಳೂರು, ಹೈದರಾಬಾದ್, ಅಹಮದಾಬಾದ್, ಪುಣೆ, ಥಾಣೆ, ನಾಗ್ಪುರ, ಪಾಟ್ನಾ ಸಾಹಿಬ್, ಲಖನೌ ಮತ್ತು ಕಾನ್ಪುರ ನಗರ ಪಾಲಿಕೆಯ ಆಯುಕ್ತರು ಮತ್ತು ಬಿಹಾರ ಮತ್ತು ಉತ್ತರದ ಆಯ್ದ ಜಿಲ್ಲಾ ಚುನಾವಣಾ ಅಧಿಕಾರಿಗಳು ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ. ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಮತ್ತು ಚುನಾವಣಾ ಆಯುಕ್ತರುಗಳಾದ ಜ್ಞಾನೇಶ್ ಕುಮಾರ್ ಮತ್ತು ಸುಖಬೀರ್ ಸಿಂಗ್ ಸಂಧು ಸಮಾವೇಶದ ಅಧ್ಯಕ್ಷತೆ ವಹಿಸಲಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending