ರಾಜಕೀಯ
ಯುದ್ಧೋನ್ಮಾದ ಹೆಮ್ಮೆಯ ಅಮಲಿನ ವಿಲಕ್ಷಣ ಅಲೆ
ಸುದ್ದಿದಿನ ವಿಶೇಷ : ಇಬ್ಬರ ನಡುವೆ ಜಗಳವಾಗುತ್ತದೆ. ಕೈ ಕೈ ಮಿಲಾಯಿಸಿ ಒಬ್ಬರನ್ನೊಬ್ಬರು ಹೊಡೆದುಕೊಂಡು ರಕ್ತಸಿಕ್ತಗೊಂಡು ಘಾಸಿಗೊಳ್ಳುವ ಸಂದರ್ಭವದು.
ದೈಹಿಕ ಶಕ್ತಿಯ ಬಲದಲ್ಲಿ ಒಬ್ಬರು ಮತ್ತೊಬ್ಬರನ್ನು ಮಣಿಸಿಬಿಡುತ್ತಾರೆ. ಗೆದ್ದು ಬೀಗುತ್ತಾರೆ. ಆ ಗೆಲುವು ಗೆದ್ದವನೊಳಗೆ ಅಹಂಕಾರವನ್ನು ಶಾಶ್ವತವಾಗಿ ಬೇರೂರಿಸಿಬಿಡುತ್ತದೆ. ಅದರ ಜೊತೆಗೆ ಪ್ರತಿಯೊಂದು ಸಲವೂ ಆ ಗೆಲುವನ್ನು ನೆನಪಿಸುವಂಥ ರೀತಿಯ ನಡವಳಿಕೆಗಳೊಂದಿಗೆ ಉಳಿದವರೊಳಗೆ ಭಯಭೀತಿ ಉಂಟುಮಾಡುತ್ತಲೇ ತನ್ನ ಪ್ರಾಬಲ್ಯದ ಪ್ರದರ್ಶನದೊಂದಿಗೆ ವಿಜೃಂಭಿಸುತ್ತಾನೆ. ಅಂಥ ಕ್ಷಣಗಳನ್ನೇ ಸಂಭ್ರಮಿಸುತ್ತಾ ದೈಹಿಕವಾಗಿ ಪ್ರಬಲವಾಗಿರುವುದೇ ಎಲ್ಲರನ್ನು ಹದ್ದುಬಸ್ತಿನಲ್ಲಿಡುವ ಬಹುಮುಖ್ಯ ತಂತ್ರ ಎಂಬುದನ್ನು ಸಾರುತ್ತಲೇ ಇರುತ್ತಾನೆ. ತನ್ನನ್ನು ತೊಡವಿಕೊಂಡರೆ ಪರಿಣಾಮ ನೆಟ್ಟಗಿರದು ಎಂಬ ಭಯಾನಕ ಸಂದೇಶ ರವಾನಿಸುತ್ತಾನೆ.
ಅವನ ಬೆಂಬಲಿಗರ ಭಾವುಕ ಅಜ್ಞಾನವು ಅವರಲ್ಲಿ ಒಂದು ಬಗೆಯ ಹುಸಿ ಹೆಮ್ಮೆಯನ್ನು ಮೂಡಿಸಿಬಿಡುತ್ತದೆ. ಅದರ ಕತ್ತಲ ಬಂಧದೊಳಗೆ ಬೆಂಬಲಿಗ ಅಭಿಮಾನಿಗಳ ವಿವೇಕ ಉಸಿರುಗಟ್ಟುತ್ತಿರುತ್ತದೆ. ಅಂಥವರ ಸಂಖ್ಯೆಯೇ ಹೆಚ್ಚಾಗುತ್ತಾ ಒಂದು ಬಗೆಯ ಸ್ಥಗಿತತೆಯ ವಾತಾವರಣ ನೆಲೆಸಿಬಿಡುತ್ತದೆ.
ನಕಾರಾತ್ಮಕತೆಗೆ ಸಾಕ್ಷ್ಯ ಒದಗಿಸುವ ಯುದ್ಧ
ಕಾರ್ಗಿಲ್ ವಿಜಯೋತ್ಸವವು ದೇಶದಾದ್ಯಂತ ಇಂಥದ್ದೊಂದು ನಕಾರಾತ್ಮಕತೆಗೆ ಸಾಕ್ಷ್ಯ ಒದಗಿಸುತ್ತಿದೆ. ಯುದ್ಧ ಗೆದ್ದ ಸಂಭ್ರಮದಲ್ಲಿ ದೇಶದ ಕುರಿತಾದ ಹೆಮ್ಮೆ ಅಪವ್ಯಾಖ್ಯಾನಕ್ಕೀಡಾಗುತ್ತಿದೆ. ನಿಜದ ಹೆಮ್ಮೆಯ ಬದಲು ವಿಲಕ್ಷಣ ಅಭಿಮಾನದ ವಿಕೃತಿ ವ್ಯಾಪಕವಾಗುತ್ತಲೇ ಇದೆ.
ಒಂದು ದೇಶ ಮತ್ತೊಂದು ದೇಶದ ವಿರುದ್ಧ ಜಯ ಸಾಧಿಸಿದ ಘಳಿಗೆಯನ್ನು ನೆನಪಿಸಿಕೊಂಡು ಜಗತ್ತಿಗೆ ನಮ್ಮ ಶಕ್ತಿಯನ್ನು ತೋರ್ಪಡಿಸುವ ವಿಜಯೋತ್ಸವವು ಪ್ರಜೆಗಳ ಪ್ರಜ್ಞೆಯನ್ನು ಶತಮಾನಗಳಷ್ಟು ಹಿಂದಕ್ಕೆ ತಳ್ಳುವ ಹುನ್ನಾರದ ಭಾಗವಾಗಿಯೇ ಕಾಣಿಸುತ್ತಿದೆ. ನಮ್ಮವರೇ ಆಗಿದ್ದವರು ಹಿಂದೊಮ್ಮೆ ವಿಭಜನೆಯ ಸಾಂದರ್ಭಿಕ ಅನಿವಾರ್ಯತೆಯಲ್ಲಿ ಅಧಾರ್ಮಿಕ ತಿಳಿಗೇಡಿತನದ ಪರಮಾವಧಿಯ ಅತಿರೇಕದ ಕಾರಣಕ್ಕಾಗಿ ಬೇರೊಂದು ದೇಶದವರಾದರು. ನಂತರ ಒಬ್ಬರಿಗೊಬ್ಬರು ಜಗಳವಾಡಿಕೊಳ್ಳುವ ಧಾವಂತ ಒಬ್ಬರನ್ನೊಬ್ಬರು ಜಯಿಸುವ ಹಠವನ್ನು ಪ್ರತಿಷ್ಠಾಪಿಸಿಬಿಟ್ಟಿತು. ಈ ಹಠದೊಂದಿಗಿನ ದ್ವೇಷದ ಭಾವಗಳನ್ನು ರಾಜಕೀಯ ಸಂಕುಚಿತತೆ ಮತ್ತು ಅಧಿಕಾರ ದಾಹದ ಮನುಷ್ಯ ಸಹಜ ದೌರ್ಬಲ್ಯಗಳು ಮತ್ತಷ್ಟು ಪ್ರಬಲಗೊಳಿಸಿದವು.
ಅವು ಎಷ್ಟು ಪ್ರಖರವಾಗಿ ಮುಂದುವರೆದವು ಎಂದರೆ ಬಗೆಹರಿಸಿಕೊಳ್ಳಬಹುದಾಗಿದ್ದ ಭಿನ್ನಾಭಿಪ್ರಾಯಗಳನ್ನು ಕ್ರೌರ್ಯದ ಮೂಲಸರಕುಗಳನ್ನಾಗಿಸಿದವು. ಇಷ್ಟಿಷ್ಟಕ್ಕೆ ಗೆರೆಗೀಚಿ ಜಗಳಕ್ಕೆ ನಿಲ್ಲುವುದನ್ನೇ ಸ್ಥಾಯಿಯಾಗಿಸಿದವು. ಒಡೆದು ಆಳುವ ನೀತಿಯನ್ನೇ ಬಂಡವಾಳವಾಗಿಸಿಕೊಂಡವರನ್ನು ಮುಂಚೂಣಿಗೆ ತಂದುನಿಲ್ಲಿಸಿದವು. ಅವರ ಮೂಗಿನ ನೇರಕ್ಕೆ ರಾಷ್ಟ್ರವಾದವನ್ನು ಮುನ್ನೆಲೆಗೆ ತಂದವು. ಅಷ್ಟೇ ಅಲ್ಲದೇ ದೇಶವನ್ನು ಪ್ರೇಮಿಸುವ ಭ್ರಮಾತ್ಮಕ ಭಾವನೆ ಕೆರಳಿಸುವಂಥ ವಿಕೃತಿಗಳನ್ನು ಸೃಷ್ಟಿಸಿದವು. ಯುದ್ಧ, ಸಂಘರ್ಷಗಳ ಜೊತೆಗೆ ನಿಲ್ಲುವ ವಿಲಕ್ಷಣ ವಿತಂಡವಾದವನ್ನು ದಾಟಿಸಿದವು.
ಉದಾತ್ತ ಪದಗಳ ವರ್ತುಲದೊಳಗೆ ಬಂಧಿ
ದೇಶಾಭಿಮಾನವು ಅಧಿಕಾರವನ್ನು ದಕ್ಕಿಸಿಕೊಳ್ಳುವ ಹುನ್ನಾರಗಳೊಂದಿಗೆ ಗುರುತಿಸಿಕೊಂಡವರ ರಾಕ್ಷಸ ಹಸಿವನ್ನು ನೀಗಿಸುವ ಪಾತ್ರವನ್ನು ನಿಭಾಯಿಸಲಾರಂಭಿಸಿತು. ಸಾವು-ನೋವುಗಳು ತ್ಯಾಗ-ಬಲಿದಾನಗಳ ಉದಾತ್ತ ಪದಗಳ ವರ್ತುಲದೊಳಗೆ ಬಂಧಿಯಾಗಿ ತಮ್ಮ ನಿಜ ಅರ್ಥವನ್ನು ಕಳೆದುಕೊಂಡವು. ಈ ಹಂತದಲ್ಲಿಯೇ ಇತಿಹಾಸದಲ್ಲಿ ಆಗಿಹೋದ ಗಾಯಗಳನ್ನು ಜನಪ್ರಿಯ ಶೈಲಿಯಲ್ಲಿ ನೆನಪಿಸಿಕೊಂಡು ಅತ್ಯದ್ಭುತ ಎನ್ನಿಸುವ ಹಾಗೆ ಭಾಷಾಪಾಂಡಿತ್ಯ ಪ್ರದರ್ಶಿಸಿ ಇನ್ನೊಂದು ದೇಶದ ವಿರುದ್ಧ ಮಾತನಾಡುತ್ತಾ ಬೆಂಬಲ ಗಳಿಸಿಕೊಳ್ಳುವ ರಹಸ್ಯ ಕಾರ್ಯಸೂಚಿ ಪ್ರಯತ್ನಗಳು ಯಶಸ್ಸು ಕಂಡವು. ಆ ಯಶಸ್ಸೇ ಇಂದು ಹಿಂಸೆಯ ಪರವಾದ ಸೋಂಕಿನೊಂದಿಗಿನ ವರ್ತನೆಗಳನ್ನೇ ವ್ಯಾಪಕವಾಗಿಸಿಬಿಟ್ಟಿದೆ.
ಇಂಥವುಗಳನ್ನು ಪ್ರಶ್ನಿಸಿ ಚಿಗುರಿಕೊಳ್ಳಬೇಕಾಗಿದ್ದ ಪರ್ಯಾಯ ಪ್ರತಿರೋಧದ ರಾಜಕಾರಣ ಪಕ್ಷಗಳ ಸಂಕುಚಿತ ಸಾರ್ವಭೌಮತ್ವದ ಅಲೆಯ ಹೊಡೆತಕ್ಕೆ ಸಿಲುಕಿಬಿಟ್ಟಿದೆ. ಆ ಅಲೆಯು ನಟನೆಯನ್ನೇ ನಿಜವಾದ ನಾಯಕತ್ವ ಎಂದು ಬಿಂಬಿಸುತ್ತಿದೆ. ಹಿಂದಿನವರಿಗಿಂತ ಈಗಿನ ಭಾವುಕ ಕೃತಕತೆಯೇ ಯೋಗ್ಯ ಎನ್ನುವಂಥ ನಂಬಿಕೆಯನ್ನು ಬಿತ್ತುತ್ತಿದೆ. ಚಿಂತನೆಯ ಸಾರ್ವಜನಿಕ ಸಾಮಥ್ರ್ಯವನ್ನೇ ಮುಳುಗಿಸಿ ಅದರ ಜಾಗದಲ್ಲಿ ಆರಾಧನೆಯ ಮನೋಭಾವವನ್ನು ನೆಲೆಗೊಳಿಸಿಬಿಟ್ಟಿದೆ.
ಮಾತಿನ ಮೋಡಿಯೊಳಗೆ ಸಿಲುಕಿದ ಯುವಜನ
ಯಾರನ್ನು ನೆಚ್ಚಿಕೊಂಡಿದ್ದೇವೆ, ಯಾರನ್ನು ನೆಚ್ಚಿಕೊಳ್ಳಬೇಕಿತ್ತು ಎಂಬ ವಿವೇಚನೆಯನ್ನೇ ಮರೆಸಿ ಒಂದು ಬಗೆಯ ಅಸಹಾಯಕತೆಯನ್ನು ಸೃಷ್ಟಿಸಿಬಿಟ್ಟಿದೆ.
ಕಾರ್ಗಿಲ್ ಯುದ್ಧದ ವೇಳೆ ಭಾರತದ ಆಗಿನ ಪ್ರಧಾನಿ ಕಾವ್ಯಾತ್ಮಕ ಧಾಟಿಯ ಯುದ್ಧಪ್ರಚೋದಕ ಭಾವುಕ ಪರಿಭಾಷೆಯನ್ನು ನೆಚ್ಚಿಕೊಂಡಿದ್ದರು. ಈಗಿನ ಪ್ರಧಾನಿ ಭಾಷೆಗೆ ಇರುವ ಉದಾತ್ತ ದೃಷ್ಟಿಕೋನಗಳ ಬಹುಮುಖೀ ಪ್ರಭಾವೀ ಶಕ್ತಿಯನ್ನೇ ಆಧರಿಸಿಕೊಂಡ ಮಾತಿನ ಮೋಡಿಯೊಳಗೆ ಜನರನ್ನು ಸಿಲುಕಿಸುತ್ತಿದ್ದಾರೆ. ಮಾತನಾಡಲೇಬೇಕಾದ ಸಂಗತಿಗಳ ಬಗ್ಗೆ ಮೌನವಹಿಸುತ್ತಿದ್ದಾರೆ.
ಇದೇನು ಇಂದು ನಿನ್ನೆಯ ರಾಜಕೀಯ ಪ್ರವೃತ್ತಿಯಲ್ಲ. ಹಿಂದಿನಿಂದಲೂ ನಡೆದುಕೊಂಡು ಬಂದಿದ್ದು ಈಗ ಮಾತಿನ ಆಕರ್ಷಕ ಆಯಾಮ ಪಡೆದಿದೆ ಅಷ್ಟೇ. ಅವರ ಮೌನದ ಸ್ಪೇಸ್ನ್ನು ಅವರನ್ನು ಆರಾಧಿಸುವ ಬೆಂಬಲಿಗ ಪಡೆಯು ಸಂಘರ್ಷವನ್ನು, ಯದ್ಧೋನ್ಮಾದದ ಗುಂಗುಗಳನ್ನು ಶಾಶ್ವತವಾಗಿ ಬೇರೂರಿಬಿಡಿಸುವ ಪ್ರಯತ್ನಗಳಿಗಾಗಿ ದುರ್ಬಳಕೆ ಮಾಡಿಕೊಳ್ಳುತ್ತಿದೆ.
ಜನರೂ ರಾಜಕೀಯ ಮನರಂಜನೆಯ ಗ್ರಾಹಕರಾಗಿ ಮೂಕಪ್ರೇಕ್ಷಕರಾಗಿದ್ದಾರೆ. ಅವರ ಅಸಹಾಯಕತೆಯು ಯುದ್ಧೋನ್ಮಾದದ ಅಮಲನ್ನು ಹೆಮ್ಮೆ ಮತ್ತು ಅಭಿಮಾನ ಎಂಬ ಪದಗಳೊಂದಿಗೆ ಜೋಡಿಸಿ ಹಿಂಸೆಯ ಪರವಾದ ಅಲೆಯನ್ನು ಸೃಷ್ಟಿಸಲಾಗುತ್ತಿದೆ. ರಂಜನೆಯ ರೂಪದ ನುಡಿಗಳು ಮತ್ತು ಮಾತನಾಡಲೇಬೇಕಾದ ಸಂದರ್ಭದಲ್ಲಿ ಮೌನಕ್ಕೆ ಶರಣುಹೋಗುವ ತಂತ್ರಗಳ ಮೂಲಕ ಹಿಂಸೆಯೇ ಎಲ್ಲದಕ್ಕೂ ಪರಿಹಾರ ಎಂಬ ತಪ್ಪುಕಲ್ಪನೆಯನ್ನು ಬಿತ್ತಲಾಗುತ್ತಿದೆ. ತಪ್ಪು ತಿಳುವಳಿಕೆಗಳನ್ನು ನೆಲೆಗೊಳಿಸಿ ಅದರ ಆಧಾರದ ಮೇಲೆ ಅಧಿಕಾರದ ಮೇಲಿನ ಹಿಡಿತವನ್ನು ಪ್ರಬಲಗೊಳಿಸಿಕೊಳ್ಳುವ ಹೆಜ್ಜೆಗಳು ಹಿಂದೆಂದಿಗಿಂತಲೂ ದಟ್ಟವಾಗುತ್ತಿವೆ.
ಮನಮೋಹನ ಮೌನಕ್ಕಿಂತಲೂ ಈಗಿಮ ಮಾತಿನ ಅಬ್ಬರವೇ ಮೇಲು
ಹಿಂದಿನ ಮನಮೋಹನ ಮೌನಕ್ಕಿಂತಲೂ ಈಗಿನ ಮಾತಿನ ಅಬ್ಬರವೇ ಮೇಲು ಎಂದು ನಂಬಿಸಲಾಗುತ್ತಿದೆ. ಅತ್ಯಂತ ಹಳೆಯ ರಾಷ್ಟ್ರೀಯ ಪಕ್ಷವು ಪ್ರಬಲ ಪ್ರತಿರೋಧವನ್ನೊಡ್ಡುವ ಬದಲು ತನ್ನ ಮುಂಚೂಣಿ ಯುವ ನೇತಾರನ ತೊಳಲಾಟದ ಚಡಪಡಿಕೆಗೆ ಸಾಕ್ಷಿಯಾಗುತ್ತಿದೆ. ಇದೆಲ್ಲದರ ನಡುವೆ ಹಿಂಸೆಯು ಅಧಿಕಾರದ ಅಧಿಪತ್ಯದ ಇಂಧನವಾಗಿ ರಾಜಕೀಯ ಬೃಹದಾಕೃತಿಯನ್ನು ತಳೆದುಬಿಟ್ಟಿದೆ. ಅದೇ ಕಾರ್ಗಿಲ್ ಜಯಭೇರಿಯ ಕ್ಷಣಗಳಿಗೆ ಉತ್ಸವದ ಬಣ್ಣವನ್ನು ಲೇಪಿಸಿ ಜನರ ಮನೋಧರ್ಮವನ್ನು ಯುದ್ಧದ ಪರವಾಗಿ ತಿರುಗಿಸಿಬಿಟ್ಟಿದೆ.
ಯುದ್ಧವೆಂದರೆ ಎರಡು ದೇಶಗಳ ಸಂಘರ್ಷದ ಹಿಂಸಾತ್ಮಕ ಕ್ರಿಯೆ. ಕಳೆದುಕೊಳ್ಳುವ ನೋವುಗಳನ್ನು ಮನುಷ್ಯ ವಲಯದೊಳಗೆ ಸೇರ್ಪಡೆಗೊಳಿಸುವ ರಾಕ್ಷಸದಾಹದ ಅಖಾಡ. ಸೈನಿಕರ ಜೀವಗಳನ್ನು ಬಲಿ ಪಡೆದು ತಂದೆ, ತಾಯಿ, ಅಜ್ಜ, ಅಜ್ಜಿ, ಪತ್ನಿ, ಅಕ್ಕ, ತಂಗಿ ಸೇರಿದಂತೆ ಸಂಬಂಧಿಗಳೊಳಗೆ ಅಲ್ಲೋಲ ಕಲ್ಲೋಲ ಸೃಷ್ಟಿಸುವ ಭಯಾನಕ ಸ್ವರೂಪಿ. ಜೀವ ಕಳೆದುಕೊಂಡ ಸೈನಿಕರ ತ್ಯಾಗ ನೆನಪಿಸಿಕೊಂಡು ದೇಶದ ಆಡಳಿತಾತ್ಮಕ ಪ್ರತಿನಿಧಿಗಳು ಅಧಿಕಾರಕ್ಕೆ ಮತ್ತಷ್ಟು ಹತ್ತಿರಾಗುವ ಪ್ರಯತ್ನಗಳಿಗೆ ಕುಮ್ಮಕ್ಕು ನೀಡುವ ಸಂದರ್ಭ. ಜೊತೆಗೆ ಯುದ್ಧ ನಡೆಯಲೇಬೇಕು, ಎದುರಾಳಿಗಳ ಸೊಕ್ಕು ಮುರಿಯಲೇಬೇಕು ಎಂಬ ಆವೇಶಭರಿತ ವಿಕೃತಿಗಳನ್ನು ವಿಜೃಂಭಿಸಿಕೊಳ್ಳಲು ಬೇಕಾಗುವ ಮಾಹಿತಿಯ ನಮೂನೆಗಳನ್ನು ನೆನಪಿಸಿಕೊಳ್ಳಲು ಪೂರಕವಾಗುವ ಬೀತಿಯ ಮೂಲ.
ಸದ್ಯದ ಕಾರ್ಗಿಲ್ ವಿಜಯೋತ್ಸವದೊಂದಿಗಿನ ರಹಸ್ಯ ಕಾರ್ಯಸೂಚಿ ಮತ್ತು ಅದನ್ನು ದೃಷ್ಟಿಯಲ್ಲಿರಿಸಿಕೊಂಡ ಸಂಕುಚಿತ ರಾಜಕಾರಣ ಯುದ್ಧವನ್ನು ಹೀಗೆ ಮರುವ್ಯಾಖ್ಯಾನಿಸಿಕೊಳ್ಳುವ ಒತ್ತಡವನ್ನು ಸೃಷ್ಟಿಸಿದೆ.
ಆದರೆ, ನಮ್ಮ ಯುವಶಕ್ತಿ ನಾಲ್ಕು ಗೋಡೆಗಳ ಮಧ್ಯೆ ಕುಳಿತುಕೊಂಡು ಮಾಧ್ಯಮಗಳಲ್ಲಿ ಕಾಣಿಸಿಕೊಳ್ಳುವ ಭಾವುಕತೆಯ ಲೇಪನೆಯೊಂದಿಗಿನ ವಿಕೃತ ಬಿಂಬಗಳನ್ನೇ ಆರಾಧಿಸುತ್ತಾ ಸೈನಿಕರನ್ನು ನೆನಪಿಸಿಕೊಳ್ಳುವುದಷ್ಟನ್ನೇ ದೇಶಪ್ರೇಮ ಎಂದುಕೊಂಡಿವೆ. ಯುದ್ಧ ಆಗಲೇಬೇಕು, ಯುದ್ಧದಿಂದಲೇ ಪರಿಹಾರ ಎಂಬ ಅಧಿಕಾರಕೇಂದ್ರದ ಮೂಲಭೂತವಾದಿ ದೃಷ್ಟಿಕೋನವನ್ನೇ ಆರಾಧಿಸುತ್ತಾ, ಆ ಆರಾಧನೆಯ ಭಾವಗಳನ್ನೇ ವಿಸ್ತರಿಸುವ ಪ್ರಚೋದಕ ಮಾಹಿತಿ, ಮಾತುಗಳನ್ನು ಶೇರ್ ಮಾಡುತ್ತಾ ತಮ್ಮೊಳಗಿನ ಯೋಚನೆಯ ಶಕ್ತಿಯನ್ನೇ ಕ್ರಮೇಣ ಕಳಚಿಕೊಳ್ಳುತ್ತಾ ಸಾಗಿದೆ.
ಗೇಲಿ ಮಾಡುವ ಪ್ರವೃತ್ತಿ
ಯೋಚಿಸುವವರನ್ನು ‘ಬುದ್ಧಿಜೀವಿಗಳು’ ಎಂಬ ಪಟ್ಟ ಕಟ್ಟಿ ಅದೊಂದು ಅಸ್ಪೃಶ್ಯ ವರ್ಗ ಎನ್ನುವಂತೆ ಗೇಲಿಮಾಡುತ್ತಿದೆ. ಬುದ್ಧಿ ಮತ್ತು ಜೀವ ಎರಡೂ ಮನುಷ್ಯ ಬದುಕನ್ನು ಚಲನಶೀಲಗೊಳಿಸುವಂಥವು. ಬುದ್ಧಿಯು ವಿವೇಕ ತಂದುಕೊಳ್ಳುವ ಮೂಲವಾದರೆ ಜೀವ ಅಂಥ ವಿವೇಕವನ್ನು ದಾಟಿಸುವ ಚಲನೆಯನ್ನೇ ಸಂಕೇತಿಸುತ್ತದೆ. ಆ ಮೂಲಕ ಸಾಮಾಜಿಕ ಚಲನಶೀಲತೆಯ ಜೀವಂತಿಕೆಯನ್ನು ಹೆಚ್ಚಿಸುವುದಕ್ಕೆ ಸಾಧ್ಯವಾಗುತ್ತದೆ. ಅದಕ್ಕೆ ಮೌಲಿಕ ಚಿಂತನೆಗಳನ್ನು ಕೊಡುಗೆಗಳನ್ನಾಗಿ ನೀಡುವವರು ಬುದ್ಧಿಜೀವಿಗಳೆನ್ನಿಸಿಕೊಳ್ಳುತ್ತಾರೆ. ತಾವು ಬುದ್ಧಿಜೀವಿಗಳೆಂದುಕೊಂಡು ಬೀಗುವವರು, ತಮ್ಮ ಬುದ್ಧಿಯನ್ನು ಅಧಿಕಾರದಲ್ಲಿರುವವರ ಕೈಗೊಪ್ಪಿಸುವವರು, ಸಮಾಜದ ಜೀವಂತಿಕೆಗೆ ತದ್ವಿರುದ್ಧದ ನಡವಳಿಕೆಯವರು ಬುದ್ಧಿ ಅಥವಾ ವಿವೇಕದೊಂದಿಗಿನ ಜೀವಗಳಲ್ಲ. ಆದರೆ, ಸಮಾಜಕ್ಕೆ ಈ ಕ್ಷಣಕ್ಕೆ ಬೇಕಾದದ್ದನ್ನು ಪ್ರಸ್ತಾಪಿಸಿ ಅಧಿಕಾರದಲ್ಲಿರುವವರನ್ನು ಎಚ್ಚರಿಸುವ ಮಾತುಗಳನ್ನಾಡಿ ಬೆಳವಣಿಗೆಗೆ ಅರ್ಥಪೂರ್ಣ ತೀವ್ರತೆ ತಂದುಕೊಡುವ ಚಿಂತನಶೀಲರು ಬುದ್ಧಿಜೀವಿಗಳು.
ನಮ್ಮ ರಾಜಕಾರಣ ಮತ್ತು ಮಾಧ್ಯಮದ ಆಕ್ರಾಮಕ ಭಾಷಿಕ ವಿಕೃತಿಗಳು ಬುದ್ಧಿಜೀವಿಗಳ ವೈವಿಧ್ಯಮಯ ಶಕ್ತಿಯನ್ನು ಹಿನ್ನೆಲೆಗೆ ಸರಿಸಿ ಅವರನ್ನು ದೇಶದ್ರೋಹಿಗಳು ಎಂದು ಬಿಂಬಿಸುವುದರ ಕಡೆಗೆ ಹೆಚ್ಚು ವಾಲಿಕೊಂಡಿವೆ. ನಾಯಕರೆನ್ನಿಸಿಕೊಂಡ ಅಪ್ರಬುದ್ಧರು ‘ನಾನು ಗೃಹಸಚಿವನಾಗಿದ್ದರೆ ಇಂಥವರನ್ನು ಒಟ್ಟಿಗೆ ನಿಲ್ಲಿಸಿ ಗುಂಡು ಹಾರಿಸುವಂತೆ ಹೇಳುತ್ತಿದ್ದೆ’ ಎಂಬ ಯುದ್ಧದ ಪರಿಭಾಷೆಯಲ್ಲಿಯೇ ಮಾತನಾಡಿಬಿಡುತ್ತಾರೆ. ಆ ಮಾತನ್ನು ಸುದ್ದಿಮಾಧ್ಯಮಗಳು ಬಹುದೊಡ್ಡ ದಾರ್ಶನಿಕ ನುಡಿ ಎಂಬಂತೆ ಚಿತ್ರಿಸಿಬಿಡುತ್ತವೆ. ಮತ್ತೊಂದು ರಾಷ್ಟ್ರದ ವಿರುದ್ಧದ ಯುದ್ಧಸನ್ನದ್ಧತೆಯ ವಿಕೃತಿಗಳು ಮತ್ತು ದೇಶದ ಒಳಗೇ ಇರುವ ಯೋಚಿಸುವ ಶಕ್ತಿಯುಳ್ಳವರ ವಿರುದ್ಧದ ಹಿಂಸಾತ್ಮಕ ದಾಳಿಗಳು ಸಂಕುಚಿತತೆಯನ್ನು ವಿಸ್ತಾರಗೊಳಿಸಲು ಬೇಕಾದ ಜನಸಮ್ಮತಿಯನ್ನು ಉತ್ಪಾದಿಸಿಕೊಳ್ಳುತ್ತಿವೆ. ಹಾಗಾಗುವಂತೆ ಮೂಲಭೂತವಾದಿ ಚಾಣಾಕ್ಷ ನಡೆಗಳು ಸಂವಹನ ತಂತ್ರಗಳನ್ನು ಹೆಣೆದು ಯಶಸ್ಸು ಕಾಣುತ್ತಿವೆ.
ಮೂಲಭೂತವಾದಿ ಕಾರ್ಯತಂತ್ರಗಳು ಗಾಂಧಿ ಚಿಂತನೆಯನ್ನು ಪರೋಕ್ಷವಾಗಿ ಮತ್ತು ನೇರವಾಗಿ ಅಪ್ರಸ್ತುತ ಎಂದು ನಂಬಿಸುತ್ತಿವೆ. ಉಪವಾಸದ ನಡೆಗಿಂತ ಹಿಂಸೆಯೊಂದಿಗಿನ ನಡೆಗಳಿಗೆ ಬ್ರಿಟಿಷರು ಹೆದರಿದರು ಎಂದು ಈಗಾಗಲೇ ಆಗಿಹೋದ ಇತಿಹಾಸವನ್ನು ಸಂಕುಚಿತ ದೃಷ್ಟಿಕೋನಗಳ ಮಟ್ಟಕ್ಕಿಳಿಸಿ ವಿವರಿಸುತ್ತಿವೆ. ಇಂಥವುಗಳನ್ನು ಅಲ್ಲಗಳೆಯಬೇಕಿದ್ದ ಸುದ್ದಿಮಾಧ್ಯಮಗಳು ವೈಭವೀಕರಣದ ತಂತ್ರಗಾರಿಕೆಯೊಂದಿಗೆ ಪ್ರಜೆಗಳನ್ನು ವೀಕ್ಷಕ ಗ್ರಾಹಕರನ್ನಾಗಿಸಿಕೊಂಡು ಹಣಗಳಿಕೆಯ ಲೆಕ್ಕಾಚಾರದ ಗುಂಗಿನೊಂದಿಗೇ ಸಂಭ್ರಮಿಸುತ್ತಿವೆ. ಈ ನಕಾರಾತ್ಮಕತೆಗೆ ಕಡಿವಾಣ ಹೇಗೆ? ಸಾಧ್ಯವೇ ಇಲ್ಲ ಎನ್ನುವಂತಿಲ್ಲ.
ಮತ್ತೆ ಬುದ್ಧಿ ಮತ್ತು ಜೀವಗಳೆರಡೂ ಸಂಯೋಜಿತಗೊಂಡು ಚಲನಶೀಲತೆಯೆಡಗಿನ ಪಯಣ ಹಿಂದೆಂದಿಗಿಂತಲೂ ತೀವ್ರಗೊಳ್ಳಬೇಕು. ಪ್ರಶ್ನೆಗಳು ಹುಟ್ಟಿಕೊಳ್ಳಬೇಕು. ಪ್ರಶ್ನಿಸುವವರ ಸ್ಥೈರ್ಯ ಹೆಚ್ಚಿಸುವ ಪ್ರಜಾಸತ್ತಾತ್ಮಕ ವಾತಾವರಣ ರೂಪುಗೊಳ್ಳಬೇಕು. ಬುದ್ಧಿ ಜೀವಗಳನ್ನು ಕೊಲ್ಲುವ ಪರಿಭಾಷೆಯನ್ನು ಎದುರುಗೊಳ್ಳುವ ಸೌಹಾರ್ದಯುತ ಸಂವಾದದ ಆರೋಗ್ಯಕರ ಆಂದೋಲನ ದೇಶವ್ಯಾಪಿಯಾಗಬೇಕು. ಯುದ್ಧೋನ್ಮೋದ ಮತ್ತು ಸಂಘರ್ಷದ ಭಾಷಿಕ ವಿಕೃತಿಗಳಿಗಿಂತ ಮಾನವೀಯತೆಯೇ ದೇಶದ ಶ್ರೇಷ್ಠ ಗುಣಲಕ್ಷಣವಾಗಬೇಕು ಎಂಬ ಕಾಳಜಿಗಳು ಮುನ್ನೆಲೆಗೆ ಬರಬೇಕು. ದೇಶದ ಕುರಿತಾದ ಹೆಮ್ಮೆಯ ಭಾವಗಳು ಮನುಷ್ಯತ್ವದ ಮೌಲಿಕತೆಯೊಂದಿಗೇ ಸಂಯೋಜಿತಗೊಳ್ಳಬೇಕು. ದೇಶದ ಬಗೆಗಿನ ಪ್ರೇಮವು ಅಂಧಾಭಿಮಾನದ ಮಿತಿಗಳನ್ನು ದಾಟಿಕೊಂಡು ಗಂಭೀರ ಚಿಂತನೆಗಳ ಬಲದಲ್ಲಿ ಗಟ್ಟಿಗೊಳ್ಳಬೇಕು.
(ಲೇಖಕರು: ಡಾ.ಎನ್.ಕೆ.ಪದ್ಮನಾಭ,
ಸಹಾಯಕ ಪ್ರಾಧ್ಯಾಪಕರು, ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ, ಎಸ್ಡಿಎಂ ಸ್ನಾತಕೋತ್ತರ ಕೇಂದ್ರ, ಉಜಿರೆ)
ದಿನದ ಸುದ್ದಿ
ಲೋಕಸಭಾ ಚುನಾವಣೆಯ ಮೊದಲ ಹಂತಕ್ಕೆ ನಾಮಪತ್ರ ಸಲ್ಲಿಕೆಗೆ ಇಂದು ಕೊನೆಯ ದಿನ
ಸುದ್ದಿದಿನ ಡೆಸ್ಕ್ : ಲೋಕಸಭಾ ಚುನಾವಣೆಯ ಮೊದಲ ಹಂತಕ್ಕೆ ನಾಮಪತ್ರ ಸಲ್ಲಿಸಲು ಇಂದು ಕೊನೆಯ ದಿನವಾಗಿದೆ.
ನಾಳೆ ನಾಮಪತ್ರಗಳ ಪರಿಶೀಲನೆ ನಡೆಯಲಿದ್ದು, ಇದೇ 30 ನಾಮಪತ್ರ ಹಿಂಪಡೆಯಲು ಕಡೆಯ ದಿನವಾಗಿದೆ. ಇದೇ ವೇಳೆ ಬಿಹಾರದಲ್ಲಿ ನಾಮಪತ್ರ ಸಲ್ಲಿಕೆಗೆ ನಾಳೆ ಕಡೆ ದಿನವಾಗಿದ್ದು, ಈ ತಿಂಗಳ 30 ರಂದು ನಾಮಪತ್ರಗಳ ಪರಿಶೀಲನೆ ಹಾಗೂ ಏಪ್ರಿಲ್ 2ರಂದು ನಾಮತ್ರ ಹಿಂಪಡೆಯುವಿಕೆಗೆ ಕೊನೆಯ ದಿನವಾಗಿರುತ್ತದೆ.
ಏಪ್ರಿಲ್ 19 ರಂದು 17 ರಾಜ್ಯಗಳು ಮತ್ತು ನಾಲ್ಕು ಕೇಂದ್ರಾಡಳಿತ ಪ್ರದೇಶಗಳಲ್ಲಿನ 102ಲೋಕಸಭಾ ಕ್ಷೇತ್ರಗಳಿಗೆ ಮೊದಲ ಹಂತದಲ್ಲಿ ಚುನಾವಣೆ ನಡೆಯಲಿದೆ. ಅದರಂತೆ ತಮಿಳುನಾಡಿನಲ್ಲಿ 39, ರಾಜಸ್ಥಾನದಲ್ಲಿ 12, ಉತ್ತರ ಪ್ರದೇಶದಲ್ಲಿ 8, ಮಧ್ಯಪ್ರದೇಶದಲ್ಲಿ 6, ಉತ್ತರಾಖಂಡ, ಅಸ್ಸಾಂ ಮತ್ತು ಮಹಾರಾಷ್ಟ್ರದಲ್ಲಿ ತಲಾ 5 , ಬಿಹಾರದಲ್ಲಿ 4, ಪಶ್ಚಿಮ ಬಂಗಾಳದಲ್ಲಿ 3, ಅರುಣಾಚಲ ಪ್ರದೇಶ, ಮಣಿಪುರ, ಮೆಘಾಲಯದಲ್ಲಿ ತಲಾ 2 ಮತ್ತು ಛತ್ತೀಸ್ಗಢ, ಮಿಜೋರಾಂ, ನಾಗಾಲ್ಯಾಂಡ್, ಸಿಕ್ಕಿಂ, ತ್ರಿಪುರ, ಅಂಡಮಾನ್-ನಿಕೋಬಾರ್ ದ್ವೀಪಗಳು, ಜಮ್ಮು-ಕಾಶ್ಮೀರ, ಲಕ್ಷದ್ವೀಪ ಮತ್ತು ಪುದುಚೇರಿಯಲ್ಲಿ ತಲಾ ಒಂದು ಕ್ಷೇತ್ರದಲ್ಲಿ ಮೊದಲ ಹಂತದಲ್ಲಿ ಚುನಾವಣೆ ನಡೆಯಲಿದೆ.
ಎರಡನೇ ಹಂತದಲ್ಲಿ 89 ಲೋಕಸಭಾ ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದ್ದು, ಚುನಾವಣಾ ಆಯೋಗ ನಾಳೆ ಅಧಿಸೂಚನೆ ಹೊರಡಿಸಲಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243
ದಿನದ ಸುದ್ದಿ
ಲೋಕಸಭಾ ಚುನಾವಣೆ | ಹೊಸ ಮತದಾರರೆಷ್ಟು ಗೊತ್ತಾ..?
ಸುದ್ದಿದಿನ ಡೆಸ್ಕ್ : 2024ರ ಲೋಕಸಭಾ ಚುನಾವಣೆಯಲ್ಲಿ ಅಂದಾಜು ಒಂದು ಕೋಟಿ 80 ಲಕ್ಷ ಹೊಸ ಮತದಾರರು ತಮ್ಮ ಅಮೂಲ್ಯ ಹಕ್ಕನ್ನು ಮೊದಲ ಬಾರಿಗೆ ಚಲಾಯಿಸಲಿದ್ದಾರೆ. ಇವರೆಲ್ಲ 18-19ರ ಪ್ರಾಯದವರು.
ಮೊದಲ ಬಾರಿಗೆ ಮತ ಚಲಾಯಿಸುವ ಯುವಕರಿಗೆ ಅವರ ಈ ಪವಿತ್ರ ಕರ್ತವ್ಯದ ಮಹತ್ವವನ್ನು ಮನಗಾಣಿಸುವ ಸಲುವಾಗಿ ಸಾಮಾಜಿಕ ಜಾಲತಾಣಗಳಲ್ಲಿ ’ನಾನು ಖಂಡಿತ ಮತ ಚಲಾಯಿಸುತ್ತೇನೆ’ ಎನ್ನುವ ಪ್ರಚಾರ ಆಂದೋಲನಗಳು ನಡೆಯುತ್ತಿವೆ.
ಈ ಬಾರಿ ಚುನಾವಣೆಯಲ್ಲಿ ಭಾಗವಹಿಸುವ ಯುವ ಮತದಾರರ ಪೈಕಿ 20ರಿಂದ 29ವರ್ಷ ವಯೋಮಾನದ ಅಂದಾಜು 19 ಕೋಟಿ 74 ಲಕ್ಷ ಮತದಾರರು ಪಾಲ್ಗೊಳ್ಳಲಿದ್ದಾರೆ. 18 ವರ್ಷಕ್ಕೆ ಮತದಾನದ ಹಕ್ಕು ದೊರೆಯುವುದಾದರೂ ಈಗ 17 ವರ್ಷ ತುಂಬಿರುವ ಯುವಜನ ಸಮೂಹದಿಂದ 13.4ಲಕ್ಷಕ್ಕೂ ಅಧಿಕ ಅರ್ಜಿಗಳನ್ನು ಮುಂಚಿತವಾಗಿಯೇ ಸ್ವೀಕರಿಸಲಾಗಿದೆ.
ಕೇಂದ್ರ ಚುನಾವಣಾ ಆಯೋಗ ಯುವ ಜನರಿಗೆ ಮತದಾನಕ್ಕೆ ಪ್ರೋತ್ಸಾಹ ನೀಡುವ ಸಲುವಾಗಿ ಸಚಿನ್ ತೆಂಡುಲ್ಕರ್ ಮತ್ತು ರಾಜಕುಮಾರ್ ರಾವ್ ಅವರಂತಹ ರಾಷ್ಟ್ರೀಯ ದಿಗ್ಗಜರಿಂದ ಸಂದೇಶಗಳನ್ನು ಪ್ರಸಾರ ಮಾಡುತ್ತಿದೆ. ಸಾಮಾಜಿಕ ಮಾಧ್ಯಮ ಅಭಿಯಾನಗಳು ಮತ್ತು ರೇಡಿಯೋ ಮೂಲಕವೂ ಸಂದೇಶಗಳನ್ನು ಪ್ರಸಾರ ಮಾಡಲಾಗುತ್ತದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243
ದಿನದ ಸುದ್ದಿ
ಬೆಂಗಳೂರಿನಲ್ಲಿ ಬಿಜೆಪಿ ನೂತನ ಮಾಧ್ಯಮಕೇಂದ್ರ ಆರಂಭ
ಸುದ್ದಿದಿನ,ಬೆಂಗಳೂರು : ದಕ್ಷಿಣ ಭಾರತದಲ್ಲಿ ಭಾರತೀಯ ಜನತಾಪಕ್ಷಕ್ಕೆ, ಕರ್ನಾಟಕ ಹೆಬ್ಬಾಗಿಲಿನಂತಿದ್ದು, ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಪಕ್ಷ ಅತಿ ಹೆಚ್ಚು ಸ್ಥಾನಗಳನ್ನು ಗೆಲ್ಲಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿದ್ದಾರೆ.
ಬರಲಿರುವ ಮಹಾಚುನಾವಣೆಗೆ ಪಕ್ಷದ ಕೇಂದ್ರಬಿಂದುವಾಗಿ ಕಾರ್ಯನಿರ್ವಹಿಸಲಿರುವ ನೂತನ ಮಾಧ್ಯಮ ಕೇಂದ್ರದಲ್ಲಿ ಪಕ್ಷದ ರಾಜ್ಯ ನಾಯಕರು ಇಂದು ಬೆಳಿಗ್ಗೆ ನಡೆಸಿದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ, ಜನಪರ ಆಡಳಿತ ನೀಡುವಲ್ಲಿ ಮತ್ತು ಬರಪರಿಸ್ಥಿತಿ ನಿರ್ವಹಣೆಯಲ್ಲಿ ಸಂಪೂರ್ಣ ವಿಫಲವಾಗಿದೆ ಎಂದು ಆಪಾದಿಸಿದರು.
ಜನವಿರೋಧಿ ಕ್ರಮಗಳಿಂದಾಗಿ ರಾಜ್ಯದ ಜನತೆ ಈ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ತಕ್ಕ ಪಾಠ ಕಲಿಸಲಿದ್ದಾರೆ ಎಂದರು.
ಲೋಕಸಭಾ ಚುನಾವಣೆಗೆ ರಾಜ್ಯದಲ್ಲಿ ಅತಿಹೆಚ್ಚು ಸ್ಥಾನಗಳನ್ನು ಗೆಲ್ಲುವ ಉದ್ದೇಶದಿಂದ ಕಾರ್ಯತಂತ್ರ ರೂಪಿಸಲು ತನ್ನ 200ಕ್ಕೂ ಹೆಚ್ಚು ಕಾರ್ಯಕರ್ತರಿಗೆ ಕಾರ್ಯಾಗಾರ ನಡೆಸಲು ಬಿಜೆಪಿ ನಿರ್ಧರಿಸಿದೆ. ಈ ನಡುವೆ ಲೋಕಸಭಾ ಚುನಾವಣೆ ಕುರಿತಂತೆ ದೆಹಲಿಯಲ್ಲಿ ಇಂದು ಬಿಜೆಪಿ ಕೇಂದ್ರೀಯ ಚುನಾವಣಾ ಸಮಿತಿಯ ಸಭೆ ನಡೆಯಲಿದೆ.
ಚುನಾವಣೆಗೆ ಪಕ್ಷದ ಕಾರ್ಯತಂತ್ರಗಳನ್ನು ಕುರಿತು ಸಮಾಲೋಚಿಸಲು ಪ್ರಧಾನಮಂತ್ರಿ ನರೇಂದ್ರ ಮೋದಿ, ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ, ಗೃಹ ಸಚಿವ ಅಮಿತ್ ಶಾ ಹಾಗೂ ಚುನಾವಣಾ ಸಮಿತಿಯ ಸದಸ್ಯರು ಮತ್ತಿತರ ಪದಾಧಿಕಾರಿಗಳು ಈ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ.
"ವಿಕಸಿತ ಭಾರತಕ್ಕಾಗಿ
ಮತ್ತೊಮ್ಮೆ ಮೋದಿ ಸರ್ಕಾರ"ಮಲ್ಲೇಶ್ವರಂನ ಜಿ.ಎಂ. ರಿಜಾಯ್ಸ್ ಹೋಟೆಲ್ನಲ್ಲಿ ಬಿಜೆಪಿ ಲೋಕಸಭಾ ಚುನಾವಣಾ 2024ರ ಮಾಧ್ಯಮ ಕೇಂದ್ರದ ಉದ್ಘಾಟನೆ ನೆರವೇರಿಸಲಾಯಿತು. ರಾಜ್ಯದೆಲ್ಲೆಡೆ ಪ್ರಧಾನಿ ಮೋದಿ ಜೀ ಅವರ ಪರವಾದ ಅಲೆ ವ್ಯಾಪಕವಾಗಿದ್ದು 'ಮೋದಿ ಮತ್ತೊಮ್ಮೆ' ಎಂಬುದು ಜನಸಾಮಾನ್ಯರ ಸಂಕಲ್ಪವಾಗಿದೆ. ದೇಶದಲ್ಲಿ 400 ಹಾಗೂ… pic.twitter.com/gYbNmo1Poo
— Vijayendra Yediyurappa (Modi Ka Parivar) (@BYVijayendra) March 23, 2024
ಸುದ್ದಿದಿನ.ಕಾಂ|ವಾಟ್ಸಾಪ್|9980346243
-
ದಿನದ ಸುದ್ದಿ7 days ago
ಭಾನುವಾರದಂದು ಕಾರ್ಯನಿರ್ವಹಿಸುವಂತೆ ಬ್ಯಾಂಕ್ಗಳಿಗೆ ಆರ್ ಬಿ ಐ ಸೂಚನೆ
-
ದಿನದ ಸುದ್ದಿ7 days ago
ನಾಯಕನ ಹಟ್ಟಿ | ಶ್ರೀಗುರು ತಿಪ್ಪೇರುದ್ರಸ್ವಾಮಿ ರಥೋತ್ಸವಕ್ಕೆ ವಿಶೇಷ ಬಸ್ ಸೌಲಭ್ಯ
-
ದಿನದ ಸುದ್ದಿ7 days ago
ಕಾಂಗ್ರೆಸ್ ಪಕ್ಷದ ಬ್ಯಾಂಕ್ ಖಾತೆಗಳು ಸ್ಥಗಿತ ; ಬಿಜೆಪಿ ಅಧಿಕಾರ ದುರುಪಯೋಗ : ಖರ್ಗೆ ಕಿಡಿ
-
ದಿನದ ಸುದ್ದಿ5 days ago
ಲೋಕಸಭಾ ಚುನಾವಣೆ : ಚುನಾವಣಾ ಚಟುವಟಿಕೆಗಳ ಕುರಿತ ಜಿಲ್ಲಾವಾರು ಮಾಹಿತಿ
-
ದಿನದ ಸುದ್ದಿ5 days ago
ಬೆಂಗಳೂರಿನಲ್ಲಿ ಬಿಜೆಪಿ ನೂತನ ಮಾಧ್ಯಮಕೇಂದ್ರ ಆರಂಭ
-
ದಿನದ ಸುದ್ದಿ5 days ago
ಲೋಕಸಭಾ ಚುನಾವಣೆ | ಹೊಸ ಮತದಾರರೆಷ್ಟು ಗೊತ್ತಾ..?
-
ದಿನದ ಸುದ್ದಿ5 days ago
ವಿಜಯಪುರ ಜಿಲ್ಲಾ ಸಾಹಿತ್ಯ ಸಮ್ಮೇಳನದ ಕವಿಗೋಷ್ಠಿಗೆ ಮೈಬೂಬಸಾಹೇಬ.ವೈ.ಜೆ ಆಯ್ಕೆ
-
ದಿನದ ಸುದ್ದಿ5 days ago
ಕವಿತೆ | ನೆನಪು