Connect with us

ರಾಜಕೀಯ

ಆ ಮಹಾತ್ಯಾಗಿ ನುಡಿದ ಭವಿಷ್ಯ ಸುಳ್ಳಾಗಲಿಲ್ಲ

Published

on

ಕಾನ್ಷೀರಾಂ ಮತ್ತು ಮಾಯಾವತಿ

ಇಂದು ಅಕ್ಕ ಮಾಯಾವತಿಯವರ 64 ನೇ ಹುಟ್ಟು ಹಬ್ಬ. ಅವರಿಗೆ ಭೀಮ ಶುಭಾಶಯಗಳನ್ನು ಕೋರುತ್ತಾ..

  • ಮಹೇಶ್ ಸರಗೂರು

ಅದು 1977 ರ ಚಳಿಗಾಲದ ಸಮಯ. ದೆಹಲಿಯ ಚಳಿ ಎಂದರೆ ಕೇಳಬೇಕೆ? ಚಳಿ ಎಂದರೆ ಅಂತಿಂಥ ಚಳಿಯಲ್ಲ. ಅತ್ಯಂತ ಭೀಕರವಾದ ಚಳಿ. ನರನಾಡಿಗಳಲ್ಲಿ ನಡುಕ ಹುಟ್ಟಿಸುವ ಚಳಿ.ಇಂತಹ ವಿಪರೀತ ಚಳಿಯ ಅವಧಿಯಲ್ಲೂ ಕಾನ್ಷೀರಾಮ್ ಸಾಹೇಬರು ಬಾಂಸೆಫ್ ಸಂಘಟನೆಯನ್ನು ಹುಟ್ಟುಹಾಕಲು ಹಗಲಿರುಳು ಹೆಣಗುತ್ತಿದ್ದರು.

ಇಂತಹ ಸಮಯದಲ್ಲಿ ಒಂದು ದಿನ ಕಾನ್ಷೀರಾಮ್ ಸಾಹೇಬರು ಮನದಲ್ಲಿ ಅದೇನೋ ಒಂದು ಗಟ್ಟಿ ನಿರ್ಧಾರ ಮಾಡಿಕೊಂಡು ಮೇಲಕ್ಕೆದ್ದರು. ಕಿವಿಗೆ ಮತ್ತು ಕುತ್ತಿಗೆಗೆ ಉಲ್ಲನ್ ಸ್ಕಾರ್ಫ್ ಸುತ್ತಿಕೊಂಡು ಸಹೊದ್ಯೋಗಿಯೊಬ್ಬನನ್ನು ಜೊತೆಗೆ ಕರೆದುಕೊಂಡು ಹೊರನಡೆದರು. ಆಗ ಸಮಯ ರಾತ್ರಿ ಒಂಭತ್ತು ಗಂಟೆ.

ದೆಹಲಿಯ ಬಹುತೇಕ ಜನರು ಆ ಕೊರೆಯುವ ಚಳಿಗೆ ಹೆದರಿಕೊಂಡು, ಬೆಚ್ಚನೆಯ ಹಾಸಿಗೆಯಲ್ಲಿ ಮೈ ತುಂಬಾ ಹೊದ್ದುಕೊಂಡು ಮಲಗಿದ್ದರು. ಇಂತಹ ಸಮಯದಲ್ಲಿ ದೆಹಲಿಯ ಇಂದ್ರಪುರಿ ಪ್ರದೇಶವನ್ನು ಪ್ರವೇಶಿಸಿದ ಕಾನ್ಷೀರಾಮ್ ಸಾಹೇಬರು ಮತ್ತು ಅವರ ಸಹೋದ್ಯೋಗಿ ಇಕ್ಕಟ್ಟಾದ ಓಣಿಯಲ್ಲಿ ನಡೆದು ಮನೆಯೊಂದರ ಬಾಗಿಲು ಬಡಿದರು.

ಅದೇ ತಾನೇ ಊಟ ಮುಗಿಸಿ ಓದುತ್ತಿದ್ದ ಹೆಣ್ಣುಮಗಳೊಬ್ಬಳು ಇಂತಹ ಅಪರಾತ್ರಿಯಲ್ಲಿ ಅದ್ಯಾರು ಬಾಗಿಲು ಬಡಿಯುತ್ತಿರಬಹುದೆಂದು ಯೋಚಿಸುತ್ತಲೇ ಬಾಗಿಲು ತೆರೆದು ನೋಡಿದರೆ ಎದುರಿಗೆ ಕಾನ್ಷೀರಾಮ್ ಸಾಹೇಬರು ನಿಂತಿದ್ದರು.

ಬಾಗಿಲು ತೆರೆದ ಆ ಹೆಣ್ಣು ಮಗಳು ಬೇರಾರೂ ಆಗಿರಲಿಲ್ಲ. ಅವರೇ ಮಾಯಾವತಿ.
ಆಧುನಿಕ ಭಾರತದ ರಾಜಕೀಯ ಇತಿಹಾಸದಲ್ಲಿಯೇ ಅಚ್ಚರಿಯ ಪವಾಡ ಸೃಷ್ಟಿಸಿದ ಆ ಇಬ್ಬರು ಮಹಾಮಹಿಮರು ಒಬ್ಬರಿಗೊಬ್ಬರು ಎದುರುಗೊಂಡ ಮೊದಲ ಕ್ಷಣ ಅದಾಗಿತ್ತು.

ಅಕ್ಕ ಮಾಯಾವತಿಯವರಿಗೆ ಒಂದು ಕ್ಷಣ ಉಸಿರು ನಿಂತಂತಾಯಿತು. ಕಾರಣ ಅಲ್ಲಿ ನಿಂತವರು ವಾಸ್ತವವಾಗಿ ಕಾನ್ಷೀರಾಮ್ ಸಾಹೇಬರಾಗಿದ್ದರೂ ಅವರ ರೂಪ, ಪ್ರತಿರೂಪ ಸಾಕ್ಷಾತ್ ಭಗವಾನ್ ಬುದ್ದನಂತಿತ್ತು. ಭೋಧಿಸತ್ವ ಬಾಬಾಸಾಹೇಬ್ ಅಂಬೇಡ್ಕರ್ ರವರನ್ನು ಹೋಲುತ್ತಿತ್ತು.

ತನ್ನ ಕಣ್ಣನ್ನು ತಾನೇ ನಂಬದಾದ ಮಾಯಾವತಿಯವರು ಸಾವರಿಸಿಕೊಂಡು ಕಾನ್ಷೀರಾಮ್ ಸಾಹೇಬರನ್ನು ಮನೆಯೊಳಗೆ ಬರಮಾಡಿಕೊಂಡರು. ಕಾನ್ಷೀರಾಮ್ ಸಾಹೇಬರ ಆಕಸ್ಮಿಕ ಆಗಮನ ಮಾಯಾವತಿಯವರ ಮನೆಯಲ್ಲಿ ಮಿಂಚಿನ ಸಂಚಾರವನ್ನುಂಟುಮಾಡಿತ್ತು.

ಮಾಯಾವತಿಯವರ ತಂದೆತಾಯಿಗಳು ಗಡಬಡಿಸಿ ಬಂದು, ಆದರದಿಂದ ಸ್ವಾಗತಿಸಿ, ಪರಸ್ಪರ ಕ್ಷೇಮ ಸಮಾಚಾರ ವಿನಿಮಯ ಮಾಡಿಕೊಂಡರು. ಬಾಂಸೆಫ್ ಕೆಲಸದ ಮೂಲಕ ಅದಾಗಲೇ ಉತ್ತರ ಭಾರತದಾದ್ಯಂತ ಮನೆಮಾತಾಗಿದ್ದ ಕಾನ್ಷೀರಾಮ್ ಸಾಹೇಬರು ಇಂತಹ ಅಪರಾತ್ರಿ ಹೊತ್ತಲ್ಲಿ ಮನೆಗೆ ಬಂದಿದ್ದು ಪ್ರಭುದಾಸ್ ದಯಾಳ್ ಮತ್ತು ರಾಮರತಿಯವರಿಗೆ ಬಿಡಿಸಲಾಗದ ಒಗಟಿನಂತಾಗಿತ್ತು. ಏತಕ್ಕೆ ಬಂದಿದ್ದಾರೋ, ಏನು ಸುದ್ದಿ ತಂದಿದ್ದಾರೋ ಎಂಬ ಅಳುಕು ಅವರದಾಗಿತ್ತು.

ಅಂಬೇಡ್ಕರ್ ಆಶಯಗಳಿಗೆ ದ್ರೋಹವೆಸಗಿದ್ದೀರಿ

ಕಾನ್ಷೀರಾಮ್ ಸಾಹೇಬರು ಆ ಅಪರಾತ್ರಿಯಲ್ಲಿ ಮಾಯಾವತಿಯವರನ್ನು ಹುಡುಕಿಕೊಂಡು ಬರಲು ಕಾರಣವೊಂದಿತ್ತು. ಆ ಕಾರಣವೇನೆಂದರೆ, 1977 ರ ಸೆಪ್ಟೆಂಬರ್ ನಲ್ಲಿ ಸರ್ಕಾರದ ವತಿಯಿಂದ ದೆಹಲಿಯ Constitution club ನಲ್ಲಿ ಮೂರು ದಿನಗಳ ಕಾಲ ‘ಜಾತಿ ವಿನಾಶ’ ಸಮ್ಮೇಳನವನ್ನು ಆಯೋಜಿಸಲಾಗಿತ್ತು. ಆ ಕಾರ್ಯಕ್ರಮದಲ್ಲಿ ಅಂದಿನ ಕೇಂದ್ರ ಆರೋಗ್ಯ ಸಚಿವರಾಗಿದ್ದ ಮತ್ತು ಹೆಸರಾಂತ ಸಮಾಜವಾದಿ ನಾಯಕರಾಗಿದ್ದ ರಾಜ್ ನಾರಾಯಣ್ ರವರು ತಮ್ಮ ಭಾಷಣದಲ್ಲಿ ಅವಹೇಳನಕಾರಿಯಾದ ‘ಹರಿಜನ’ ಪದವನ್ನು ಪದೇ ಪದೇ ಬಳಸಿ ಮಾತನಾಡುತ್ತಿದ್ದರು.

ಅಲ್ಲೇ ಹಾಜರಿದ್ದ ಸರ್ಕಾರಿ ಶಿಕ್ಷಕಿ ಮಾಯಾವತಿಯವರು ಎದ್ದು ನಿಂತು ರಾಜ್ ನಾರಾಯಣ್ ರವರನ್ನು ತರಾಟೆಗೆ ತೆಗೆದುಕೊಂಡರು. ಪರಿಶಿಷ್ಟ ಜಾತಿಯವರಿಗೆ ಹರಿಜನರೆಂದು ಕರೆದು ಅಂಬೇಡ್ಕರ್ ಆಶಯಗಳಿಗೆ ದ್ರೋಹವೆಸಗಿದ್ದೀರಿ. ನಿಮ್ಮ ಘನತೆ ಮತ್ತು ಗೌರವಗಳನ್ನು ಮರೆತು ಬೇಜವಾಬ್ದಾರಿಯಿಂದ ಮಾತನಾಡಿದ್ದೀರಿ. ನೀವು ಈ ಕೂಡಲೇ ಬಹಿರಂಗ ಕ್ಷಮೆ ಕೇಳಬೇಕು ಎಂದು ಸಭೆಯಲ್ಲಿ ಕ್ಷಮೆ ಕೇಳಿಸಿ ಎಲ್ಲರ ಗಮನ ಸೆಳೆದಿದ್ದರು. ಈ ಘಟನೆಯಿಂದ ಮಾಯಾವತಿಯವರು ಎಲ್ಲರ ಕೇಂದ್ರ ಬಿಂದುವಾದರು.

ಇದೇ ಸಭೆಯಲ್ಲಿದ್ದ ಕೆಲವು ಬಾಂಸೆಫ್ ಕಾರ್ಯಕರ್ತರು ಮಾಯಾವತಿಯವರ ವಿಷಯವನ್ನು ಕಾನ್ಷೀರಾಮ್ ಸಾಹೇಬರಿಗೆ ವಿವರಿಸಿ, ಮಾಯಾವತಿಯವರು ನಮ್ಮ ಸಂಘಟನೆಯಲ್ಲಿದ್ದರೆ ಬಾಂಸೆಫ್ ಗೆ ಹೆಚ್ಚು ಬಲ ಬರುತ್ತದೆ ಎಂದು ತಿಳಿಸಿದರು. ಬಾಂಸೆಫ್ ಕಾರ್ಯಕರ್ತರ ಮಾತಿನಿಂದ ಉತ್ತೇಜಿತರಾದ ಕಾನ್ಷೀರಾಮ್ ಸಾಹೇಬರು ಮಾಯಾವತಿಯವರ ಅರಿವಿಗೆ ಬಾರದಂತೆ ಅವರ ಹಲವಾರು ಕಾರ್ಯಕ್ರಮಗಳಲ್ಲಿ ಭಾಗಿಯಾದರು. ಮಾಯಾವತಿಯವರ ಚಿಂತನೆಗಳನ್ನು ಗಮನವಿಟ್ಟು ಆಲಿಸಿದರು. ಅದಕ್ಕಾಗಿ ಮಾಯಾವತಿಯವರನ್ನು ಹುಡುಕಿಕೊಂಡು ಬಂದಿದ್ದರು.

ಐಎಎಸ್ ಅಧಿಕಾರಿಯಾಗಿ ಶೋಷಿತ ಜನಾಂಗಗಳ ಸೇವೆ ಮಾಡಬೇಕು

ಕಾನ್ಷೀರಾಮ್ ಸಾಹೇಬರು ಮಾಯಾವತಿಯವರ ಜೊತೆ ಸುಮಾರು ಒಂದು ಗಂಟೆಗಳ ಕಾಲ ಭಾರತದ ಸಾಮಾಜಿಕ ಮತ್ತು ರಾಜಕೀಯ ಸ್ಥಿತಿಗತಿಗಳ ಬಗ್ಗೆ ಸುದೀರ್ಘವಾಗಿ ಮಾತನಾಡಿದರು. ಮಹಾತ್ಮ ಜ್ಯೋತಿಭಾಫುಲೆಯವರಿಂದಿಡಿದು ಬಾಬಾಸಾಹೇಬ್ ಅಂಬೇಡ್ಕರ್ ವರೆಗಿನ ಎಲ್ಲಾ ಮಹಾಪುರುಷರ ಹೋರಾಟವನ್ನು ಮತ್ತು ಅದರ ಮುಂದುವರಿಕೆಯ ಮಹತ್ವವನ್ನು ಮನಮುಟ್ಟುವಂತೆ ವಿವರಿಸಿ ಹೇಳಿದರು.

ಇದಾದ ಬಳಿಕ ಮಾಯಾವತಿಯವರ ಜೀವನದ ಆಸೆ ಆಕಾಂಕ್ಷೆಗಳನ್ನು, ದ್ಯೇಯೋದ್ದೇಶಗಳನ್ನು ಕೇಳಿ ತಿಳಿದುಕೊಂಡರು. ಸರ್ಕಾರಿ ಶಾಲೆಯಲ್ಲಿ ಶಿಕ್ಷಕಿಯಾಗಿರುವ ತಾನು ಐಎಎಸ್ ಅಧಿಕಾರಿಯಾಗಿ ಶೋಷಿತ ಜನಾಂಗಗಳ ಸೇವೆ ಮಾಡಬೇಕು ಎನ್ನುವುದು ನನ್ನ ಗುರಿ ಎಂದು ಮಾಯಾವತಿಯವರು ತಿಳಿಸಿದರು.

ನಂತರ ಹೊರಡುವ ಸಮಯದಲ್ಲಿ ಅಂತಿಮವಾಗಿ ಒಂದು ನಿರ್ಧಾರಕ್ಕೆ ಬಂದ ಕಾನ್ಷೀರಾಮ್ ಸಾಹೇಬರು ” ನೀನು ಅಂದುಕೊಂಡಂತೆ ಖಂಡಿತವಾಗಿ ನೀನು ಐಎಎಸ್ ಅಧಿಕಾರಿ ಆಗಬಹುದು. ಆ ಅರ್ಹತೆ ನಿನಗಿದೆ. ಅದರಲ್ಲಿ ಯಾವುದೇ ಸಂಶಯವಿಲ್ಲ. ಆದರೆ ನೀನು ಅಂದುಕೊಂಡಂತೆ ನಿನ್ನ ಜನರ ಸೇವೆ ಮಾಡುವುದು ಮಾತ್ರ ನಿಮ್ಮಿಂದ ಸಾಧ್ಯವಾಗುವುದಿಲ್ಲ.

ಕಾರಣ, ಒಬ್ಬ ಸರ್ಕಾರಿ ಅಧಿಕಾರಿಯಾಗಿ ನೀನು ಸರಕಾರ ನಡೆಸುವ ರಾಜಕಾರಿಣಿಗಳ ಇಚ್ಚೆಯಂತೆ ನಡೆಯಬೇಕಾಗುತ್ತದೆ. ಶ್ರೀಮಂತರ ನೋಟುಗಳಿಂದ ಬಡವರ ಓಟುಗಳನ್ನು ಖರೀದಿಸುವುದನ್ನೇ ಪ್ರಜಾಪ್ರಭುತ್ವ ಎಂದು ಪರಿಗಣಿಸಿರುವ ಭಾರತದಲ್ಲಿ ರಾಜಕೀಯ ನಾಯಕರ ಯೋಜನೆಗಳು ಮತ್ತು ಯೋಚನೆಗಳು ಜಾರಿಯಾಗುತ್ತವೆಯೇ ಹೊರತು ಐಎಎಸ್ ಅಧಿಕಾರಿಗಳ ಯೋಜನೆಗಳು ಮತ್ತು ಯೋಚನೆಗಳಲ್ಲ.

ಈಗ ನಮ್ಮ ಸಮಾಜದಲ್ಲಿ ಬೇಕಾದಷ್ಟು ಮಂದಿ ಐಎಎಸ್ ಅಧಿಕಾರಿಗಳಿದ್ದಾರೆ. ಆದರೆ ಅವರೆಲ್ಲ ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬಂತಿದ್ದಾರೆ. ಅವರಿಂದ ಏನನ್ನೂ ನಿರೀಕ್ಷಿಸುವಂತಿಲ್ಲ. ಇದು ಎಲ್ಲರಿಗೂ ತಿಳಿದಿರುವ ಸಂಗತಿ. ಹೀಗಾಗಿ ನಮಗೆ ಬೇಕಾಗಿರುವುದು ಐಎಎಸ್ ಅಧಿಕಾರಿಗಳಲ್ಲ. ರಾಜಕೀಯ ನಾಯಕರು. ಐಎಎಸ್ ಅಧಿಕಾರಿಗಳಿಂದ ಸರಿಯಾಗಿ ಕೆಲಸ ಮಾಡಿಸಬಲ್ಲ, ವಿಧಾನಸಭೆ ಮತ್ತು ಲೋಕಸಭೆಗಳಲ್ಲಿ ಕುಳಿತು ಜನಪರ ಶಾಸನಗಳನ್ನು ರೂಪಿಸಬಲ್ಲ , ಅವುಗಳನ್ನು ಜಾರಿಗೊಳಿಸಬಲ್ಲ ಸಮರ್ಥ ರಾಜಕೀಯ ನಾಯಕರು.

ನಮ್ಮ ಸಮಾಜದಲ್ಲಿ ಇಂಥ ನಾಯಕರ ಕೊರತೆ ಇದೆ. ‌ನೀನು ಆ ಕೊರತೆಯನ್ನು ನೀಗಿಸಬೇಕು. ನಿನ್ನಲ್ಲಿ ಆ ಶಕ್ತಿಯಿದೆ. ನನ್ನ ಮಾತನ್ನು ನೀನು ನಂಬುವುದಾದರೆ, ನಿನ್ನಲ್ಲಿ ಇಂತದ್ದೊಂದು ಬಯಕೆ ಇದ್ದುದಾದರೆ ನಾನು ನಿನ್ನನ್ನು ಅಂಥ ಒಬ್ಬ ಸಮರ್ಥ ನಾಯಕಿಯನ್ನಾಗಿ ತಯಾರು ಮಾಡುತ್ತೇನೆ. ಆಗ ನೂರಾರು ಜನ ಐಎಎಸ್ ಅಧಿಕಾರಿಗಳು ತಮ್ಮ ಫೈಲುಗಳನ್ನು ಹಿಡಿದುಕೊಂಡು ಬಂದು ನಿನ್ನ ಆದೇಶಕ್ಕಾಗಿ ಕಾಯುತ್ತಾರೆ.

ಒಳ್ಳೆಯ ಮತ್ತು ಕೆಟ್ಟ ಕೆಲಸ ಎರಡನ್ನೂ ಮಾಡುವ ಶಕ್ತಿ ಹೊಂದಿರುವ ಐಎಎಸ್ ಅಧಿಕಾರಿಗಳಿಂದ ನೀನು ನಿನ್ನೆಲ್ಲ ಒಳ್ಳೆಯ ಕೆಲಸಗಳನ್ನೇ ಮಾಡಿಸಬಹುದು. ಅದಕ್ಕಾಗಿ ನೀನು ಒಬ್ಬ ಐಎಎಸ್ ಅಧಿಕಾರಿಯಾಗುವ ಬದಲು ಒಬ್ಬ ಸಮರ್ಥ ರಾಜಕೀಯ ನಾಯಕಿಯಾಗುವುದು ಒಳ್ಳೆಯದು. ಯಾವುದಕ್ಕೂ ಯೋಚಿಸಿ ಒಂದು ಸರಿಯಾದ ನಿರ್ಧಾರಕ್ಕೆ ಬಾ… ನೀನು ತೆಗೆದುಕೊಳ್ಳುವ ನಿರ್ಧಾರದಲ್ಲಿ ಬಹುಜನರ ಭವಿಷ್ಯ ಅಡಗಿದೆ ಎಂದು ಹೇಳಿ ಅಲ್ಲಿಂದ ಹೊರಟು ಹೋದರು.

ಮುಂದೆ ನಡೆದಿದ್ದೆಲ್ಲವೂ ನಮ್ಮ ಕಣ್ಣ ಮುಂದಿರುವ ಇತಿಹಾಸ. ನುಡಿದಂತೆ ನಡೆದು, ಯಕಶ್ಚಿತ್ ಶಾಲಾ ಶಿಕ್ಷಕಿಯೊಬ್ಬಳನ್ನು ಉತ್ತರಪ್ರದೇಶದಂತಹ ಅತಿದೊಡ್ಡ ರಾಜ್ಯದಲ್ಲಿ ನಾಲ್ಕು ಬಾರಿ ಮುಖ್ಯಮಂತ್ರಿಯನ್ನಾಗಿ ಮಾಡಿ, ದೇಶವೇ ಕೊಂಡಾಡುವಂತೆ ಅದ್ಬುತ ಕಾರ್ಯಗಳನ್ನು ಸಾಧಿಸಿ ತೋರಿಸಿದ ಪವಾಡ ಪುರುಷ ಕಾನ್ಷೀರಾಮ್. ಅಂದು ಆ ಮಹಾತ್ಯಾಗಿ ನುಡಿದ ಭವಿಷ್ಯ ಸುಳ್ಳಾಗಲಿಲ್ಲ. ಕಾರಣ, ಮಹಾಜ್ಞಾನಿಗಳ ಮಾತುಗಳು ಸುಳ್ಳಾಗಲು ಸಾದ್ಯವೇ ಇಲ್ಲ..!

ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ

ಸಂವಿಧಾನಕ್ಕೆ ಅಪಾಯವಾದರೆ, ಬಡವರ, ಶ್ರಮಿಕರ ಭವಿಷ್ಯಕ್ಕೆ ಅಪಾಯವಾದಂತೆ : ಸಿಎಂ ಸಿದ್ದರಾಮಯ್ಯ

Published

on

ಸುದ್ದಿದಿನ,ಮಡಿಕೇರಿ : ದೇಶದ ಸಂವಿಧಾನಕ್ಕೆ ಅಪಾಯವಾದರೆ ಈ ದೇಶದ ಮಹಿಳೆಯರ, ಬಡವರ, ಮಧ್ಯಮ ವರ್ಗದವರ, ಶ್ರಮಿಕರ, ಬದುಕು-ಭವಿಷ್ಯಕ್ಕೆ ಅಪಾಯ ಎಂದರ್ಥ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಮಡಿಕೇರಿಯಲ್ಲಿ ನಡೆದ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ಈ ಲೋಕಸಭಾ ಚುನಾವಣೆ ನಮಗೊಂದು ಅವಕಾಶ. ಈ ಬಾರಿ ಬಿಜೆಪಿಯನ್ನು ಸೋಲಿಸಿ ಕಾಂಗ್ರೆಸ್ ಗೆಲ್ಲಿಸುವ ಮೂಲಕ ಪ್ರಜಾತಂತ್ರ ಉಳಿಸಬೇಕು ಎಂದು ಕರೆ ನೀಡಿದರು.

ಬಳಿಕ ತುಮಕೂರಿನಲ್ಲಿ ಮಾತನಾಡಿದ ಅವರು, ರಾಜ್ಯದ ಹಿತಾಸಕ್ತಿ ಕಾಪಾಡುವಲ್ಲಿ ಕಳೆದ ಲೋಕಸಭಾ ಚುನಾವಣೆಯಲ್ಲಿ ಆಯ್ಕೆಯಾಗಿದ್ದ ಬಿಜೆಪಿ ಸಂಸದರು ವಿಫಲರಾಗಿದ್ದಾರೆ ಎಂದು ಮುಖ್ಯಮಂತ್ರಿ ಆರೋಪಿಸಿದರು.

ಮಹಿಳೆಯರ ಅಭ್ಯುದಯಕ್ಕಾಗಿ ಪಂಚ ಗ್ಯಾರಂಟಿ ಯೋಜನೆಗಳನ್ನು ನುಡಿದಂತೆ ಜಾರಿಗೆ ತಂದಿದ್ದೇವೆ. ಇದರಿಂದಾಗಿ ಮಹಿಳೆಯರ ಜೀವನದಲ್ಲಿ ಸುಧಾರಣೆ ಕಂಡಿದೆ, ಈ ಯೋಜನೆಯ ಫಲಾನುಭವಿಗಳ ಬಗ್ಗೆ ಟೀಕಿಸುವುದು ಸರಿಯಲ್ಲ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ವಿವಿಧ ಜಿಲ್ಲೆಗಳಲ್ಲಿ ಡಾ. ಬಾಬು ಜಗಜೀವನ್ ರಾಮ್ 117ನೇ ಜನ್ಮ ದಿನಾಚರಣೆ

Published

on

ಸುದ್ದಿದಿನ ಡೆಸ್ಕ್ : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಡಾ. ಬಾಬು ಜಗಜೀವನ್ ರಾಮ್ ಅವರ 117ನೇ ಜನ್ಮ ದಿನಾಚರಣೆ ಪ್ರಯುಕ್ತ ವಿಧಾನ ಸೌದದಲ್ಲಿರುವ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು.

ಸಮಾಜ ಕಲ್ಯಾಣ ಸಚಿವ ಹೆಚ್.ಸಿ. ಮಹದೇವಪ್ಪ್ಪ, ಹಿರಿಯ ಶಾಸಕ ಈ. ತುಕಾರಾಮ್, ಮಾಜಿ ಸಚಿವ ಹೆಚ್.ಆಂಜನೇಯ, ವಿಧಾನ ಪರಿಷತ್ ಸದಸ್ಯ ಸುದಾಮ ದಾಸ್, ಮಹಿಳಾ ಆಯೋಗದ ಅದ್ಯಕ್ಷೆ ಡಾ. ನಾಗಲಕ್ಷ್ಮಿ ಸೇರಿ ಹಲವರು ಉಪಸ್ಥಿತರಿದ್ದರು. ದಾವಣಗೆರೆ ಜಿಲ್ಲಾಧಿಕಾರಿ ಕಚೇರಿಯಲ್ಲಿಂದು ಹಸಿರು ಕ್ರಾಂತಿಯ ಹರಿಕಾರ ಡಾ.ಬಾಬು ಜಗಜೀವನ ರಾಂ ಅವರ ಜನ್ಮ ಜಯಂತಿಯನ್ನು ಸಾಂಕೇತಿಕವಾಗಿ ಆಚರಿಸಲಾಯಿತು.

ಲೋಕಸಭಾ ಚುನಾವಣೆ ನೀತಿ ಸಂಹಿತೆ ಹಿನ್ನೆಲೆಯಲ್ಲಿ ಸರಳವಾಗಿ ನಡೆದ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್ ಜಗಜೀವನರಾಂ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು. ಮಂಡ್ಯದ ಡಿಸಿ ಪಾರ್ಕ್ ಎದುರು ಇರುವ ಜಗಜೀವನ್‌ರಾಮ್ ಪ್ರತಿಮೆಗೆ ಜಿಲ್ಲಾಡಳಿತದ ವತಿಯಿಂದ ಮಾಲಾರ್ಪಣೆ ಮಾಡಲಾಯಿತು. ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಡಾ.ಕುಮಾರ, ಎಸ್ಪಿ ಎನ್.ಯತೀಶ್ ಸೇರಿದಂತೆ ಅಧಿಕಾರಿಗಳ ವರ್ಗ ಹಾಗೂ ಜಗಜೀವನ್‌ರಾಮ್ ಅನುಯಾಯಿಗಳು ಭಾಗವಹಿಸಿದ್ದರು.

ಹಸಿರು ಕ್ರಾಂತಿಯ ಹರಿಕಾರ, ಮಾಜಿ ಉಪ ಪ್ರಧಾನಿ ಬಾಬು ಜಗಜೀವನ ರಾಂ ಅವರ ಅವರ 117ನೇ ಜಯಂತಿಯನ್ನು ಹಾವೇರಿ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸಾಂಕೇತಿಕವಾಗಿ ಆಚರಿಸಲಾಯಿತು. ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಬಾಬು ಜಗಜೀವನ್ ರಾಂ ಅವರ ಭಾವಚಿತ್ರಕ್ಕೆ ಜಿಲ್ಲಾಧಿಕಾರಿ ಜಿಲ್ಲಾಧಿಕಾರಿ ರಘುನಂದನ ಮೂರ್ತಿ ಪುಷ್ಪಾರ್ಚನೆ ಮಾಡಿ ಗೌರವ ನಮನ ಸಲ್ಲಿಸಿದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಇಂದು ಚುನಾವಣಾ ಆಯೋಗ ಸಮಾವೇಶ

Published

on

ಸುದ್ದಿದಿನ ಡೆಸ್ಕ್ : ಕಳೆದ ಲೋಕಸಭಾ ಚುನಾವಣೆಯಲ್ಲಿ ಕಡಿಮೆ ಮತದಾನವಾಗಿರುವ 11 ರಾಜ್ಯಗಳ ನಗರ ಪಾಲಿಕೆ ಆಯುಕ್ತರು ಮತ್ತು ಆಯ್ದ ಜಿಲ್ಲಾ ಚುನಾವಣಾ ಅಧಿಕಾರಿಗಳೊಂದಿಗೆ ಕೇಂದ್ರ ಚುನಾವಣಾ ಆಯೋಗ ಇಂದು ದೆಹಲಿಯಲ್ಲಿ ಸಮಾವೇಶ ನಡೆಸಲಿದೆ.

ಈ ಸಮಾವೇಶದಲ್ಲಿ ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಮತದಾನದ ಪ್ರಮಾಣವನ್ನು ಹೆಚ್ಚಿಸುವ ಮಾರ್ಗಗಳ ಕುರಿತು ಚರ್ಚಿಸಲಾಗುವುದು ಮತ್ತು ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಕಡಿಮೆ ಮತದಾನದ ಸಮಸ್ಯೆಯನ್ನು ಪರಿಹರಿಸಲು ಉದ್ದೇಶಿತ ಮತ್ತು ನಿರ್ದಿಷ್ಟ ಕ್ರಿಯಾ ಯೋಜನೆಗಳನ್ನು ಸಿದ್ಧಪಡಿಸಲಾಗುವುದು.

ದೆಹಲಿ, ಮುಂಬೈ, ಚೆನ್ನೈ, ಬೆಂಗಳೂರು, ಹೈದರಾಬಾದ್, ಅಹಮದಾಬಾದ್, ಪುಣೆ, ಥಾಣೆ, ನಾಗ್ಪುರ, ಪಾಟ್ನಾ ಸಾಹಿಬ್, ಲಖನೌ ಮತ್ತು ಕಾನ್ಪುರ ನಗರ ಪಾಲಿಕೆಯ ಆಯುಕ್ತರು ಮತ್ತು ಬಿಹಾರ ಮತ್ತು ಉತ್ತರದ ಆಯ್ದ ಜಿಲ್ಲಾ ಚುನಾವಣಾ ಅಧಿಕಾರಿಗಳು ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ. ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಮತ್ತು ಚುನಾವಣಾ ಆಯುಕ್ತರುಗಳಾದ ಜ್ಞಾನೇಶ್ ಕುಮಾರ್ ಮತ್ತು ಸುಖಬೀರ್ ಸಿಂಗ್ ಸಂಧು ಸಮಾವೇಶದ ಅಧ್ಯಕ್ಷತೆ ವಹಿಸಲಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending