ರಾಜಕೀಯ
ಆ ಮಹಾತ್ಯಾಗಿ ನುಡಿದ ಭವಿಷ್ಯ ಸುಳ್ಳಾಗಲಿಲ್ಲ
ಇಂದು ಅಕ್ಕ ಮಾಯಾವತಿಯವರ 64 ನೇ ಹುಟ್ಟು ಹಬ್ಬ. ಅವರಿಗೆ ಭೀಮ ಶುಭಾಶಯಗಳನ್ನು ಕೋರುತ್ತಾ..
- ಮಹೇಶ್ ಸರಗೂರು
ಅದು 1977 ರ ಚಳಿಗಾಲದ ಸಮಯ. ದೆಹಲಿಯ ಚಳಿ ಎಂದರೆ ಕೇಳಬೇಕೆ? ಚಳಿ ಎಂದರೆ ಅಂತಿಂಥ ಚಳಿಯಲ್ಲ. ಅತ್ಯಂತ ಭೀಕರವಾದ ಚಳಿ. ನರನಾಡಿಗಳಲ್ಲಿ ನಡುಕ ಹುಟ್ಟಿಸುವ ಚಳಿ.ಇಂತಹ ವಿಪರೀತ ಚಳಿಯ ಅವಧಿಯಲ್ಲೂ ಕಾನ್ಷೀರಾಮ್ ಸಾಹೇಬರು ಬಾಂಸೆಫ್ ಸಂಘಟನೆಯನ್ನು ಹುಟ್ಟುಹಾಕಲು ಹಗಲಿರುಳು ಹೆಣಗುತ್ತಿದ್ದರು.
ಇಂತಹ ಸಮಯದಲ್ಲಿ ಒಂದು ದಿನ ಕಾನ್ಷೀರಾಮ್ ಸಾಹೇಬರು ಮನದಲ್ಲಿ ಅದೇನೋ ಒಂದು ಗಟ್ಟಿ ನಿರ್ಧಾರ ಮಾಡಿಕೊಂಡು ಮೇಲಕ್ಕೆದ್ದರು. ಕಿವಿಗೆ ಮತ್ತು ಕುತ್ತಿಗೆಗೆ ಉಲ್ಲನ್ ಸ್ಕಾರ್ಫ್ ಸುತ್ತಿಕೊಂಡು ಸಹೊದ್ಯೋಗಿಯೊಬ್ಬನನ್ನು ಜೊತೆಗೆ ಕರೆದುಕೊಂಡು ಹೊರನಡೆದರು. ಆಗ ಸಮಯ ರಾತ್ರಿ ಒಂಭತ್ತು ಗಂಟೆ.
ದೆಹಲಿಯ ಬಹುತೇಕ ಜನರು ಆ ಕೊರೆಯುವ ಚಳಿಗೆ ಹೆದರಿಕೊಂಡು, ಬೆಚ್ಚನೆಯ ಹಾಸಿಗೆಯಲ್ಲಿ ಮೈ ತುಂಬಾ ಹೊದ್ದುಕೊಂಡು ಮಲಗಿದ್ದರು. ಇಂತಹ ಸಮಯದಲ್ಲಿ ದೆಹಲಿಯ ಇಂದ್ರಪುರಿ ಪ್ರದೇಶವನ್ನು ಪ್ರವೇಶಿಸಿದ ಕಾನ್ಷೀರಾಮ್ ಸಾಹೇಬರು ಮತ್ತು ಅವರ ಸಹೋದ್ಯೋಗಿ ಇಕ್ಕಟ್ಟಾದ ಓಣಿಯಲ್ಲಿ ನಡೆದು ಮನೆಯೊಂದರ ಬಾಗಿಲು ಬಡಿದರು.
ಅದೇ ತಾನೇ ಊಟ ಮುಗಿಸಿ ಓದುತ್ತಿದ್ದ ಹೆಣ್ಣುಮಗಳೊಬ್ಬಳು ಇಂತಹ ಅಪರಾತ್ರಿಯಲ್ಲಿ ಅದ್ಯಾರು ಬಾಗಿಲು ಬಡಿಯುತ್ತಿರಬಹುದೆಂದು ಯೋಚಿಸುತ್ತಲೇ ಬಾಗಿಲು ತೆರೆದು ನೋಡಿದರೆ ಎದುರಿಗೆ ಕಾನ್ಷೀರಾಮ್ ಸಾಹೇಬರು ನಿಂತಿದ್ದರು.
ಬಾಗಿಲು ತೆರೆದ ಆ ಹೆಣ್ಣು ಮಗಳು ಬೇರಾರೂ ಆಗಿರಲಿಲ್ಲ. ಅವರೇ ಮಾಯಾವತಿ.
ಆಧುನಿಕ ಭಾರತದ ರಾಜಕೀಯ ಇತಿಹಾಸದಲ್ಲಿಯೇ ಅಚ್ಚರಿಯ ಪವಾಡ ಸೃಷ್ಟಿಸಿದ ಆ ಇಬ್ಬರು ಮಹಾಮಹಿಮರು ಒಬ್ಬರಿಗೊಬ್ಬರು ಎದುರುಗೊಂಡ ಮೊದಲ ಕ್ಷಣ ಅದಾಗಿತ್ತು.
ಅಕ್ಕ ಮಾಯಾವತಿಯವರಿಗೆ ಒಂದು ಕ್ಷಣ ಉಸಿರು ನಿಂತಂತಾಯಿತು. ಕಾರಣ ಅಲ್ಲಿ ನಿಂತವರು ವಾಸ್ತವವಾಗಿ ಕಾನ್ಷೀರಾಮ್ ಸಾಹೇಬರಾಗಿದ್ದರೂ ಅವರ ರೂಪ, ಪ್ರತಿರೂಪ ಸಾಕ್ಷಾತ್ ಭಗವಾನ್ ಬುದ್ದನಂತಿತ್ತು. ಭೋಧಿಸತ್ವ ಬಾಬಾಸಾಹೇಬ್ ಅಂಬೇಡ್ಕರ್ ರವರನ್ನು ಹೋಲುತ್ತಿತ್ತು.
ತನ್ನ ಕಣ್ಣನ್ನು ತಾನೇ ನಂಬದಾದ ಮಾಯಾವತಿಯವರು ಸಾವರಿಸಿಕೊಂಡು ಕಾನ್ಷೀರಾಮ್ ಸಾಹೇಬರನ್ನು ಮನೆಯೊಳಗೆ ಬರಮಾಡಿಕೊಂಡರು. ಕಾನ್ಷೀರಾಮ್ ಸಾಹೇಬರ ಆಕಸ್ಮಿಕ ಆಗಮನ ಮಾಯಾವತಿಯವರ ಮನೆಯಲ್ಲಿ ಮಿಂಚಿನ ಸಂಚಾರವನ್ನುಂಟುಮಾಡಿತ್ತು.
ಮಾಯಾವತಿಯವರ ತಂದೆತಾಯಿಗಳು ಗಡಬಡಿಸಿ ಬಂದು, ಆದರದಿಂದ ಸ್ವಾಗತಿಸಿ, ಪರಸ್ಪರ ಕ್ಷೇಮ ಸಮಾಚಾರ ವಿನಿಮಯ ಮಾಡಿಕೊಂಡರು. ಬಾಂಸೆಫ್ ಕೆಲಸದ ಮೂಲಕ ಅದಾಗಲೇ ಉತ್ತರ ಭಾರತದಾದ್ಯಂತ ಮನೆಮಾತಾಗಿದ್ದ ಕಾನ್ಷೀರಾಮ್ ಸಾಹೇಬರು ಇಂತಹ ಅಪರಾತ್ರಿ ಹೊತ್ತಲ್ಲಿ ಮನೆಗೆ ಬಂದಿದ್ದು ಪ್ರಭುದಾಸ್ ದಯಾಳ್ ಮತ್ತು ರಾಮರತಿಯವರಿಗೆ ಬಿಡಿಸಲಾಗದ ಒಗಟಿನಂತಾಗಿತ್ತು. ಏತಕ್ಕೆ ಬಂದಿದ್ದಾರೋ, ಏನು ಸುದ್ದಿ ತಂದಿದ್ದಾರೋ ಎಂಬ ಅಳುಕು ಅವರದಾಗಿತ್ತು.
ಅಂಬೇಡ್ಕರ್ ಆಶಯಗಳಿಗೆ ದ್ರೋಹವೆಸಗಿದ್ದೀರಿ
ಕಾನ್ಷೀರಾಮ್ ಸಾಹೇಬರು ಆ ಅಪರಾತ್ರಿಯಲ್ಲಿ ಮಾಯಾವತಿಯವರನ್ನು ಹುಡುಕಿಕೊಂಡು ಬರಲು ಕಾರಣವೊಂದಿತ್ತು. ಆ ಕಾರಣವೇನೆಂದರೆ, 1977 ರ ಸೆಪ್ಟೆಂಬರ್ ನಲ್ಲಿ ಸರ್ಕಾರದ ವತಿಯಿಂದ ದೆಹಲಿಯ Constitution club ನಲ್ಲಿ ಮೂರು ದಿನಗಳ ಕಾಲ ‘ಜಾತಿ ವಿನಾಶ’ ಸಮ್ಮೇಳನವನ್ನು ಆಯೋಜಿಸಲಾಗಿತ್ತು. ಆ ಕಾರ್ಯಕ್ರಮದಲ್ಲಿ ಅಂದಿನ ಕೇಂದ್ರ ಆರೋಗ್ಯ ಸಚಿವರಾಗಿದ್ದ ಮತ್ತು ಹೆಸರಾಂತ ಸಮಾಜವಾದಿ ನಾಯಕರಾಗಿದ್ದ ರಾಜ್ ನಾರಾಯಣ್ ರವರು ತಮ್ಮ ಭಾಷಣದಲ್ಲಿ ಅವಹೇಳನಕಾರಿಯಾದ ‘ಹರಿಜನ’ ಪದವನ್ನು ಪದೇ ಪದೇ ಬಳಸಿ ಮಾತನಾಡುತ್ತಿದ್ದರು.
ಅಲ್ಲೇ ಹಾಜರಿದ್ದ ಸರ್ಕಾರಿ ಶಿಕ್ಷಕಿ ಮಾಯಾವತಿಯವರು ಎದ್ದು ನಿಂತು ರಾಜ್ ನಾರಾಯಣ್ ರವರನ್ನು ತರಾಟೆಗೆ ತೆಗೆದುಕೊಂಡರು. ಪರಿಶಿಷ್ಟ ಜಾತಿಯವರಿಗೆ ಹರಿಜನರೆಂದು ಕರೆದು ಅಂಬೇಡ್ಕರ್ ಆಶಯಗಳಿಗೆ ದ್ರೋಹವೆಸಗಿದ್ದೀರಿ. ನಿಮ್ಮ ಘನತೆ ಮತ್ತು ಗೌರವಗಳನ್ನು ಮರೆತು ಬೇಜವಾಬ್ದಾರಿಯಿಂದ ಮಾತನಾಡಿದ್ದೀರಿ. ನೀವು ಈ ಕೂಡಲೇ ಬಹಿರಂಗ ಕ್ಷಮೆ ಕೇಳಬೇಕು ಎಂದು ಸಭೆಯಲ್ಲಿ ಕ್ಷಮೆ ಕೇಳಿಸಿ ಎಲ್ಲರ ಗಮನ ಸೆಳೆದಿದ್ದರು. ಈ ಘಟನೆಯಿಂದ ಮಾಯಾವತಿಯವರು ಎಲ್ಲರ ಕೇಂದ್ರ ಬಿಂದುವಾದರು.
ಇದೇ ಸಭೆಯಲ್ಲಿದ್ದ ಕೆಲವು ಬಾಂಸೆಫ್ ಕಾರ್ಯಕರ್ತರು ಮಾಯಾವತಿಯವರ ವಿಷಯವನ್ನು ಕಾನ್ಷೀರಾಮ್ ಸಾಹೇಬರಿಗೆ ವಿವರಿಸಿ, ಮಾಯಾವತಿಯವರು ನಮ್ಮ ಸಂಘಟನೆಯಲ್ಲಿದ್ದರೆ ಬಾಂಸೆಫ್ ಗೆ ಹೆಚ್ಚು ಬಲ ಬರುತ್ತದೆ ಎಂದು ತಿಳಿಸಿದರು. ಬಾಂಸೆಫ್ ಕಾರ್ಯಕರ್ತರ ಮಾತಿನಿಂದ ಉತ್ತೇಜಿತರಾದ ಕಾನ್ಷೀರಾಮ್ ಸಾಹೇಬರು ಮಾಯಾವತಿಯವರ ಅರಿವಿಗೆ ಬಾರದಂತೆ ಅವರ ಹಲವಾರು ಕಾರ್ಯಕ್ರಮಗಳಲ್ಲಿ ಭಾಗಿಯಾದರು. ಮಾಯಾವತಿಯವರ ಚಿಂತನೆಗಳನ್ನು ಗಮನವಿಟ್ಟು ಆಲಿಸಿದರು. ಅದಕ್ಕಾಗಿ ಮಾಯಾವತಿಯವರನ್ನು ಹುಡುಕಿಕೊಂಡು ಬಂದಿದ್ದರು.
ಐಎಎಸ್ ಅಧಿಕಾರಿಯಾಗಿ ಶೋಷಿತ ಜನಾಂಗಗಳ ಸೇವೆ ಮಾಡಬೇಕು
ಕಾನ್ಷೀರಾಮ್ ಸಾಹೇಬರು ಮಾಯಾವತಿಯವರ ಜೊತೆ ಸುಮಾರು ಒಂದು ಗಂಟೆಗಳ ಕಾಲ ಭಾರತದ ಸಾಮಾಜಿಕ ಮತ್ತು ರಾಜಕೀಯ ಸ್ಥಿತಿಗತಿಗಳ ಬಗ್ಗೆ ಸುದೀರ್ಘವಾಗಿ ಮಾತನಾಡಿದರು. ಮಹಾತ್ಮ ಜ್ಯೋತಿಭಾಫುಲೆಯವರಿಂದಿಡಿದು ಬಾಬಾಸಾಹೇಬ್ ಅಂಬೇಡ್ಕರ್ ವರೆಗಿನ ಎಲ್ಲಾ ಮಹಾಪುರುಷರ ಹೋರಾಟವನ್ನು ಮತ್ತು ಅದರ ಮುಂದುವರಿಕೆಯ ಮಹತ್ವವನ್ನು ಮನಮುಟ್ಟುವಂತೆ ವಿವರಿಸಿ ಹೇಳಿದರು.
ಇದಾದ ಬಳಿಕ ಮಾಯಾವತಿಯವರ ಜೀವನದ ಆಸೆ ಆಕಾಂಕ್ಷೆಗಳನ್ನು, ದ್ಯೇಯೋದ್ದೇಶಗಳನ್ನು ಕೇಳಿ ತಿಳಿದುಕೊಂಡರು. ಸರ್ಕಾರಿ ಶಾಲೆಯಲ್ಲಿ ಶಿಕ್ಷಕಿಯಾಗಿರುವ ತಾನು ಐಎಎಸ್ ಅಧಿಕಾರಿಯಾಗಿ ಶೋಷಿತ ಜನಾಂಗಗಳ ಸೇವೆ ಮಾಡಬೇಕು ಎನ್ನುವುದು ನನ್ನ ಗುರಿ ಎಂದು ಮಾಯಾವತಿಯವರು ತಿಳಿಸಿದರು.
ನಂತರ ಹೊರಡುವ ಸಮಯದಲ್ಲಿ ಅಂತಿಮವಾಗಿ ಒಂದು ನಿರ್ಧಾರಕ್ಕೆ ಬಂದ ಕಾನ್ಷೀರಾಮ್ ಸಾಹೇಬರು ” ನೀನು ಅಂದುಕೊಂಡಂತೆ ಖಂಡಿತವಾಗಿ ನೀನು ಐಎಎಸ್ ಅಧಿಕಾರಿ ಆಗಬಹುದು. ಆ ಅರ್ಹತೆ ನಿನಗಿದೆ. ಅದರಲ್ಲಿ ಯಾವುದೇ ಸಂಶಯವಿಲ್ಲ. ಆದರೆ ನೀನು ಅಂದುಕೊಂಡಂತೆ ನಿನ್ನ ಜನರ ಸೇವೆ ಮಾಡುವುದು ಮಾತ್ರ ನಿಮ್ಮಿಂದ ಸಾಧ್ಯವಾಗುವುದಿಲ್ಲ.
ಕಾರಣ, ಒಬ್ಬ ಸರ್ಕಾರಿ ಅಧಿಕಾರಿಯಾಗಿ ನೀನು ಸರಕಾರ ನಡೆಸುವ ರಾಜಕಾರಿಣಿಗಳ ಇಚ್ಚೆಯಂತೆ ನಡೆಯಬೇಕಾಗುತ್ತದೆ. ಶ್ರೀಮಂತರ ನೋಟುಗಳಿಂದ ಬಡವರ ಓಟುಗಳನ್ನು ಖರೀದಿಸುವುದನ್ನೇ ಪ್ರಜಾಪ್ರಭುತ್ವ ಎಂದು ಪರಿಗಣಿಸಿರುವ ಭಾರತದಲ್ಲಿ ರಾಜಕೀಯ ನಾಯಕರ ಯೋಜನೆಗಳು ಮತ್ತು ಯೋಚನೆಗಳು ಜಾರಿಯಾಗುತ್ತವೆಯೇ ಹೊರತು ಐಎಎಸ್ ಅಧಿಕಾರಿಗಳ ಯೋಜನೆಗಳು ಮತ್ತು ಯೋಚನೆಗಳಲ್ಲ.
ಈಗ ನಮ್ಮ ಸಮಾಜದಲ್ಲಿ ಬೇಕಾದಷ್ಟು ಮಂದಿ ಐಎಎಸ್ ಅಧಿಕಾರಿಗಳಿದ್ದಾರೆ. ಆದರೆ ಅವರೆಲ್ಲ ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬಂತಿದ್ದಾರೆ. ಅವರಿಂದ ಏನನ್ನೂ ನಿರೀಕ್ಷಿಸುವಂತಿಲ್ಲ. ಇದು ಎಲ್ಲರಿಗೂ ತಿಳಿದಿರುವ ಸಂಗತಿ. ಹೀಗಾಗಿ ನಮಗೆ ಬೇಕಾಗಿರುವುದು ಐಎಎಸ್ ಅಧಿಕಾರಿಗಳಲ್ಲ. ರಾಜಕೀಯ ನಾಯಕರು. ಐಎಎಸ್ ಅಧಿಕಾರಿಗಳಿಂದ ಸರಿಯಾಗಿ ಕೆಲಸ ಮಾಡಿಸಬಲ್ಲ, ವಿಧಾನಸಭೆ ಮತ್ತು ಲೋಕಸಭೆಗಳಲ್ಲಿ ಕುಳಿತು ಜನಪರ ಶಾಸನಗಳನ್ನು ರೂಪಿಸಬಲ್ಲ , ಅವುಗಳನ್ನು ಜಾರಿಗೊಳಿಸಬಲ್ಲ ಸಮರ್ಥ ರಾಜಕೀಯ ನಾಯಕರು.
ನಮ್ಮ ಸಮಾಜದಲ್ಲಿ ಇಂಥ ನಾಯಕರ ಕೊರತೆ ಇದೆ. ನೀನು ಆ ಕೊರತೆಯನ್ನು ನೀಗಿಸಬೇಕು. ನಿನ್ನಲ್ಲಿ ಆ ಶಕ್ತಿಯಿದೆ. ನನ್ನ ಮಾತನ್ನು ನೀನು ನಂಬುವುದಾದರೆ, ನಿನ್ನಲ್ಲಿ ಇಂತದ್ದೊಂದು ಬಯಕೆ ಇದ್ದುದಾದರೆ ನಾನು ನಿನ್ನನ್ನು ಅಂಥ ಒಬ್ಬ ಸಮರ್ಥ ನಾಯಕಿಯನ್ನಾಗಿ ತಯಾರು ಮಾಡುತ್ತೇನೆ. ಆಗ ನೂರಾರು ಜನ ಐಎಎಸ್ ಅಧಿಕಾರಿಗಳು ತಮ್ಮ ಫೈಲುಗಳನ್ನು ಹಿಡಿದುಕೊಂಡು ಬಂದು ನಿನ್ನ ಆದೇಶಕ್ಕಾಗಿ ಕಾಯುತ್ತಾರೆ.
ಒಳ್ಳೆಯ ಮತ್ತು ಕೆಟ್ಟ ಕೆಲಸ ಎರಡನ್ನೂ ಮಾಡುವ ಶಕ್ತಿ ಹೊಂದಿರುವ ಐಎಎಸ್ ಅಧಿಕಾರಿಗಳಿಂದ ನೀನು ನಿನ್ನೆಲ್ಲ ಒಳ್ಳೆಯ ಕೆಲಸಗಳನ್ನೇ ಮಾಡಿಸಬಹುದು. ಅದಕ್ಕಾಗಿ ನೀನು ಒಬ್ಬ ಐಎಎಸ್ ಅಧಿಕಾರಿಯಾಗುವ ಬದಲು ಒಬ್ಬ ಸಮರ್ಥ ರಾಜಕೀಯ ನಾಯಕಿಯಾಗುವುದು ಒಳ್ಳೆಯದು. ಯಾವುದಕ್ಕೂ ಯೋಚಿಸಿ ಒಂದು ಸರಿಯಾದ ನಿರ್ಧಾರಕ್ಕೆ ಬಾ… ನೀನು ತೆಗೆದುಕೊಳ್ಳುವ ನಿರ್ಧಾರದಲ್ಲಿ ಬಹುಜನರ ಭವಿಷ್ಯ ಅಡಗಿದೆ ಎಂದು ಹೇಳಿ ಅಲ್ಲಿಂದ ಹೊರಟು ಹೋದರು.
ಮುಂದೆ ನಡೆದಿದ್ದೆಲ್ಲವೂ ನಮ್ಮ ಕಣ್ಣ ಮುಂದಿರುವ ಇತಿಹಾಸ. ನುಡಿದಂತೆ ನಡೆದು, ಯಕಶ್ಚಿತ್ ಶಾಲಾ ಶಿಕ್ಷಕಿಯೊಬ್ಬಳನ್ನು ಉತ್ತರಪ್ರದೇಶದಂತಹ ಅತಿದೊಡ್ಡ ರಾಜ್ಯದಲ್ಲಿ ನಾಲ್ಕು ಬಾರಿ ಮುಖ್ಯಮಂತ್ರಿಯನ್ನಾಗಿ ಮಾಡಿ, ದೇಶವೇ ಕೊಂಡಾಡುವಂತೆ ಅದ್ಬುತ ಕಾರ್ಯಗಳನ್ನು ಸಾಧಿಸಿ ತೋರಿಸಿದ ಪವಾಡ ಪುರುಷ ಕಾನ್ಷೀರಾಮ್. ಅಂದು ಆ ಮಹಾತ್ಯಾಗಿ ನುಡಿದ ಭವಿಷ್ಯ ಸುಳ್ಳಾಗಲಿಲ್ಲ. ಕಾರಣ, ಮಹಾಜ್ಞಾನಿಗಳ ಮಾತುಗಳು ಸುಳ್ಳಾಗಲು ಸಾದ್ಯವೇ ಇಲ್ಲ..!
ಸುದ್ದಿದಿನ.ಕಾಂ|ವಾಟ್ಸಾಪ್|9980346243
ದಿನದ ಸುದ್ದಿ
ಶಿವಮೊಗ್ಗಕ್ಕೆ ಇಂದು ಪ್ರಧಾನಿ ನರೇಂದ್ರ ಮೋದಿ
ಸುದ್ದಿದಿನ, ಶಿವಮೊಗ್ಗ : ಪ್ರಧಾನಮಂತ್ರಿ ನರೇಂದ್ರ ಮೋದಿ ಇಂದು ಮಧ್ಯಾಹ್ನ 2 ಗಂಟೆಗೆ ಶಿವಮೊಗ್ಗದಲ್ಲಿ ಬೃಹತ್ ಸಾರ್ವಜನಿಕ ಸಭೆಯನ್ನುದ್ದೇಶಿ ಮಾತನಾಡಲಿದ್ದಾರೆ.
ಯುವಜನರು, ಮಹಿಳೆಯರು, ರೈತರು ಸೇರಿ ಸುಮಾರು ಎರಡೂವರೆ ಲಕ್ಷಕ್ಕೂ ಹೆಚ್ಚು ಜನರು ಕಾರ್ಯಕ್ರಮದಲ್ಲಿ ಭಾಗವಹಿಸುವ ನಿರೀಕ್ಷೆ ಇದೆ ಎಂದು ವಿಧಾನಪರಿಷತ್ ಮುಖ್ಯ ಸಚೇತಕ ಎನ್.ರವಿಕುಮಾರ್ ಶಿವಮೊಗ್ಗದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243
ದಿನದ ಸುದ್ದಿ
ಚುನಾವಣಾ ಬಾಂಡ್ ಕುರಿತ ದತ್ತಾಂಶ ಬಿಡುಗಡೆ
ಸುದ್ದಿದಿನ,ನವದೆಹಲಿ : ಚುನಾವಣಾ ಬಾಂಡ್ ಕುರಿತಂತೆ ಸುಪ್ರೀಂಕೋರ್ಟ್ನ ರಿಜಿಸ್ಟ್ರಿ ಇಂದ ಲಭ್ಯವಾದ ಅಂಕಿಕೃತ ದತ್ತಾಂಶ ಮಾದರಿಯನ್ನು ಚುನಾವಣಾ ಆಯೋಗ ಭಾನುವಾರ ತನ್ನ ವೆಬ್ಸೈಟ್ನಲ್ಲಿ ಅಪ್ಲೋಡ್ ಮಾಡಿದೆ. www.eci.gov.in/candidate-politicalparty ವೆಬ್ಸೈಟ್ನಲ್ಲಿ ಈ ದತ್ತಾಂಶ ಲಭ್ಯವಿರುತ್ತದೆ.
ಸುಪ್ರೀಂಕೋರ್ಟ್ ನಿರ್ದೇಶಿಸಿದಂತೆ ರಾಜಕೀಯ ಪಕ್ಷಗಳು ಚುನಾವಣಾ ಬಾಂಡ್ ಕುರಿತ ದತ್ತಾಂಶಗಳನ್ನು ಮೊಹರು ಹಾಕಿದ ಲಕೋಟೆಯಲ್ಲಿ ಸಲ್ಲಿಸಿದ್ದವು ಎಂದು ಚುನಾವಣಾ ಆಯೋಗದ ಹೇಳಿಕೆ ತಿಳಿಸಿದೆ. ರಾಜಕೀಯ ಪಕ್ಷಗಳಿಂದ ಸ್ವೀಕರಿಸಿದ ಮೊಹರು ಹಾಕಿದ ಲಕೋಟೆಗಳನ್ನು ತೆರೆಯದೇ ಸುಪ್ರೀಂಕೋರ್ಟ್ಗೆ ಸಲ್ಲಿಸಲಾಗಿತ್ತು.
ಇದೇ 15ರಂದು ಸುಪ್ರೀಂಕೋರ್ಟ್ ನೀಡಿದ ಆದೇಶದ ಮೇರೆಗೆ ಸುಪ್ರೀಂಕೋರ್ಟ್ನ ರಿಜಿಸ್ಟ್ರಿ, ಭೌತಿಕ ಪ್ರತಿ ಹಾಗೂ ಅದರ ಡಿಜಿಟಲ್ ದಾಖಲೆಯಿರುವ ಪೆನ್ಡ್ರೈವ್ ಒಳಗೊಂಡ ಮೊಹರು ಹಾಕಿದ ಲಕೋಟೆಯನ್ನು ಹಿಂತಿರುಗಿಸಿತ್ತು.
ಸುದ್ದಿದಿನ.ಕಾಂ|ವಾಟ್ಸಾಪ್|9980346243
ದಿನದ ಸುದ್ದಿ
ಕಾಟನ್ ಕ್ಯಾಂಡಿ ಮತ್ತು ಗೋಬಿ ಮಂಚೂರಿ ನಿಷೇಧ : ಸಚಿವ ದಿನೇಶ್ ಗುಂಡೂರಾವ್
ಸುದ್ದಿದಿನ, ಬೆಂಗಳೂರು : ಕೃತಕ ಬಣ್ಣ ಬಳಸಿದ ಕಾಟನ್ ಕ್ಯಾಂಡಿ ಮತ್ತು ಗೋಬಿ ಮಂಚೂರಿ ಮಾರಾಟವನ್ನು ತಕ್ಷಣದಿಂದ ಜಾರಿಗೆ ಬರುವಂತೆ ರಾಜ್ಯಾದ್ಯಂತ ನಿಷೇಧಿಸಲಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ. ಆದಾಗ್ಯೂ, ಬಣ್ಣ ಹಾಗೂ ರಾಸಾಯನಿಕ ಹಾಕದೇ ಇರುವ ಈ ತಿನಿಸುಗಳ ಮಾರಾಟಕ್ಕೆ ನಿರ್ಬಂಧ ಇಲ್ಲ ಎಂದು ಹೇಳಿದ್ದಾರೆ.
ಬೆಂಗಳೂರಿನಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಕ್ಕಳು ಸೇರಿದಂತೆ ಎಲ್ಲ ವಯೋಮಾನದವರಿಗೂ ಅಚ್ಚುಮೆಚ್ಚಾದ ಈ ಎರಡು ತಿನಿಸುಗಳನ್ನು ಆಕರ್ಷಕವಾಗಿ ಕಾಣುವಂತೆ ಮಾಡಲು ಬಳಸುವ ಕೃತಕ ಬಣ್ಣಗಳಲ್ಲಿ ಅಪಾಯಕಾರಿ ರಾಸಾಯನಿಕಗಳು ಇರುವುದು ಪರೀಕ್ಷೆಗಳಿಂದ ದೃಢಪಟ್ಟಿದೆ ಎಂದರು. ರಾಜ್ಯದ ಹಲವೆಡೆ ಬೀದಿಬದಿಯ ಗಾಡಿಗಳು, ಹೋಟೆಲ್ಗಳಲ್ಲಿ ತಯಾರಿಸಿದ ಗೋಬಿ ಮಂಚೂರಿ ತಿನಿಸಿನ 171ಮಾದರಿಗಳನ್ನು ಪರೀಕ್ಷಿಸಲಾಗಿದೆ. ಈ ಪೈಕಿ 107ಮಾದರಿಗಳಲ್ಲಿ ಅಸುರಕ್ಷಿತ ರಾಸಾಯನಿಕಗಳು ಪತ್ತೆಯಾಗಿರುವುದು ಆತಂಕಕಾರಿಯಾಗಿದೆ ಎಂದರು.
ಕೃತಕ ಬಣ್ಣಗಳಲ್ಲಿರುವ ರೋಡೊಮೈನ್-ಬಿ ಮತ್ತು ಟಾಟ್ರಝೀನ್ ರಾಸಾಯನಿಕಗಳು ಕ್ಯಾನ್ಸರ್ ರೋಗಕ್ಕೆ ಕಾರಣವಾಗಬಹುದು ಎನ್ನುವ ಅಂಶ ತಿಳಿದುಬಂದಿದೆ. ಬಣ್ಣ ಹಾಕಿದ ಗೋಬಿಮಂಚೂರಿ ಮತ್ತು ಕಾಟನ್ಕ್ಯಾಂಡಿಗಳನ್ನು ಮಾರಾಟ ಮಾಡುವವರ ಮೇಲೆ ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಾಗುವುದು. ಏಳು ವರ್ಷದರೆಗೆ ಜೈಲು ಶಿಕ್ಷೆ, 10 ಲಕ್ಷ ರೂಪಾಯಿವರೆಗೆ ದಂಡ ಅಥವಾ ಜೀವಾವಧಿ ಶಿಕ್ಷೆಗೂ ಅವಕಾಶವಿದೆ ಎಂದು ಸಚಿವರು ಎಚ್ಚರಿಕೆ ನೀಡಿದರು.
ಹೇಳಿಕೆ
- ಬಣ್ಣ ಹಾಕಿರುವ ಈ ಎರಡು ತಿನಿಸುಗಳನ್ನು ಸೇವಿಸಬಾರದು ಎಂದು ಸಾರ್ವಜನಿಕರಿಗೂ ಎಚ್ಚರಿಕೆ ನೀಡಲಾಗಿದೆ. ಸಾರ್ವಜನಿಕರ ಆರೋಗ್ಯ ರಕ್ಷಣೆ ದೃಷ್ಟಿಯಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಇದಲ್ಲದೇ, ಕಬಾಬ್, ಪಾನಿಪೂರಿ ಮೊದಲಾದ ತಿನಿಸುಗಳಲ್ಲೂ ಕೃತಕ ಬಣ್ಣಗಳ ಬಳಕೆ ಆಗುತ್ತಿದೆಯೇ ಎಂದು ಪರಿಶೀಲಿಸಲಾಗುತ್ತಿದೆ.
| ಸಚಿವ ದಿನೇಶ್ ಗುಂಡೂರಾವ್
ಟ್ವೀಟ್
In consideration of public health, we are banning the use of artificial colours in Gobi Manchurian and cotton candy. Violation of this ban may result in imprisonment for up to 7 years and a fine of up to 10 lakhs.
Following reports of substandard quality and the presence of… pic.twitter.com/z2KWHi8Jbd
— Dinesh Gundu Rao/ದಿನೇಶ್ ಗುಂಡೂರಾವ್ (@dineshgrao) March 11, 2024
ಸುದ್ದಿದಿನ.ಕಾಂ|ವಾಟ್ಸಾಪ್|9980346243