ರಾಜಕೀಯ
ಹಿಂದಕ್ಕೆಳೆಸುವ ಸ್ಥಾವರ ಧ್ವನಿಗಳ ಅಬ್ಬರ..!
ಒಬ್ಬ ಸಣ್ಣ ಹುಡುಗ. ಅವನ ಕೈಯಲ್ಲಿ ದೊಡ್ಡ ದೊಡ್ಡ ನಾಲ್ಕು ಕಲ್ಲುಗಳು. ಆ ಫೋಟೋದೊಂದಿಗೆ ರಾರಾಜಿಸುತ್ತಿರುವ ಸಾಲುಗಳು – ‘ನಾನು ರಾಹುಲ್ ಗಾಂಧಿಯನ್ನು ಭೇಟಿ ಮಾಡಬೇಕಿದೆ’. ಫೇಸ್ಬುಕ್ನಲ್ಲಿ ಈಚೆಗೆ ಕಾಣಿಸಿಕೊಂಡ ಈ ಚಿತ್ರದೊಂದಿಗಿನ ಸಾಲುಗಳು ಭವಿಷ್ಯದ ಪೀಳಿಗೆಯ ಹೆಜ್ಜೆಗಳು ಏನಾಗಬಹುದು ಎಂಬುದರ ಸ್ಪಷ್ಟ ಸುಳಿವನ್ನು ನೀಡುವಂತೆಯೇ ಇವೆ. ಅವುಗಳು ಹಿಂಸೆಯೊಂದಿಗೇ ಗುರುತಿಸಿಕೊಳ್ಳಬೇಕು ಎಂಬ ಕಾರ್ಯಸೂಚಿಯ ಯಶಸ್ಸಿನ ದ್ಯೋತಕವಾಗಿಯೇ ಕಾಣಿಸುತ್ತಿವೆ. ಅಂಬೆಗಾಲಿಟ್ಟು, ಆ ಹಂತವನ್ನು ದಾಟಿಕೊಂಡು ಇದೀಗ ತಾನೆ ನಡೆಯುವುದನ್ನು ಕಲಿತಿರುವ ಅತ್ಯಂತ ಕಿರಿಯ ವಯಸ್ಸಿನ ಸಣ್ಣ ಹುಡುಗನಿಗೆ ಹಿಂಸೆಯ ಭಾಷೆ, ಪರಿಭಾಷೆ ಮತ್ತು ಸ್ವರೂಪವನ್ನು ಪರಿಚಯಿಸುವ ವಿಚಿತ್ರವಾದ ನಡೆಯೊಂದನ್ನು ಸಂಕೇತಿಸುತ್ತಿವೆ.
ಭ್ರಮಾತ್ಮಕ ಚೌಕಟ್ಟುಗಳು
ನಮ್ಮ ದೃಷ್ಟಿಕೋನಗಳು ಈ ಪರಿ ದುರವಸ್ಥೆ ತಲುಪಿಕೊಳ್ಳುವ ಅನಿವಾರ್ಯತೆ ಸೃಷ್ಟಿಯಾದದ್ದಾದರೂ ಏಕೆ? ಉದ್ದೇಶಪೂರ್ವಕವಾಗಿ ಸೃಷ್ಟಿಸಲಾಯಿತೇ? ಆ ಉದ್ದೇಶದ ಹಿಂದೆ ಕಾರ್ಯೋನ್ಮುಖವಾಗಿರುವ ಶಕ್ತಿಗಳು ಯಾವುವು? ಈ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳುವ ಮೊದಲು ಈ ದೇಶದ ರಾಜಕಾರಣ ಮತ್ತು ಆಡಳಿತ ನೆಚ್ಚಿಕೊಂಡ ಹೊಸದನ್ನು ಬಹುಬೇಗ ಸ್ವೀಕರಿಸದ, ಸ್ವೀಕರಿಸಿದರೂ ನಿರಾಕರಣೆಯ ಭಾವವ ಸಾಂಪ್ರದಾಯಿಕತೆಯ ಚೌಕಟ್ಟುಗಳನ್ನು ಗೊತ್ತುಮಾಡಿಕೊಳ್ಳಬೇಕಾಗುತ್ತದೆ. ಸ್ವಾತಂತ್ರ್ಯಪೂರ್ವ ಮತ್ತು ಸ್ವಾತಂತ್ರ್ಯಾನಂತರದ ಇತಿಹಾಸದ ಪುಟಗಳನ್ನು ತಿರುವಿ ಹಾಕಿದರೆ ಭಾರತೀಯ ರಾಜಕಾರಣದ ವಿವಿಧ ಮಗ್ಗಲುಗಳು ಪರಿಚಯವಾಗುವುದರೊಂದಿಗೇ ಅಹಿಂಸೆಯ ಆಲೋಚನಾ ಕ್ರಮಗಳು ಹಿಂಸೆಯ ಸಂಕುಚಿತತೆಯೊಂದಿಗೆ ಮುಖಾಮುಖಿಯಾದ ವಿವಿಧ ಸಂದರ್ಭಗಳ ಚಾರಿತ್ರಿಕ ಹಿನ್ನೆಲೆ ಗಮನಕ್ಕೆ ಬರುತ್ತದೆ. ಅಹಿಂಸೆಯ ಮಾರ್ಗವು ಸ್ವಾತಂತ್ರ್ಯವನ್ನು ಕಂಡುಕೊಳ್ಳಲು ಸಹಾಯಕವಾದ ನಂತರ ಭಾರತೀಯ ಆಡಳಿತ ಅಳವಡಿಸಿಕೊಂಡ ನಿರ್ವಹಣೆಯ ಮಾದರಿಗೆ ಸಂಬಂಧಿಸಿದ ಸಂಗತಿಗಳು ತಿಳಿಯುತ್ತವೆ.
ಸಾರ್ಥಕತೆಯ ಹಾದಿಯ ನೆನಪು
ಬಾಲ್ಯದಲ್ಲಿ ನಮಗೆ ಹಲವು ಮಹನೀಯರ ತ್ಯಾಗದ ಕಾರಣಕ್ಕಾಗಿಯೇ ಸ್ವಾತಂತ್ರ್ಯ ಲಭಿಸಿರುವುದನ್ನು ಹಿರಿಯರ ಭಾಷಣಗಳು ಮನವರಿಕೆ ಮಾಡಿಕೊಡುತ್ತಿದ್ದವು. ಗಾಂಧಿ ಸೇರಿದಂತೆ ಹಲವರ ಹೋರಾಟದ ಪ್ರತಿಫಲವಾಗಿ ಸ್ವಾತಂತ್ರ್ಯ ನಮ್ಮೊಂದಿಗಿರುವುದನ್ನು ದೃಢೀಕರಿಸುತ್ತಿದ್ದವು. ಆಗ ನಮಗೆ ಹಿಂಸೆಯೇ ಶ್ರೇಷ್ಠ ಎಂಬಂಥ ದಾರಿತಪ್ಪಿಸುವ ದುರ್ಮಾರ್ಗದ ವೈಭವೀಕರಣ ಕಣ್ಣಮುಂದೆ ಬರುತ್ತಲೇ ಇರಲಿಲ್ಲ. ಬದಲಾಗಿ ಎಲ್ಲ ಭಾಷಣಗಳ ಚಿಂತನೆಗಳು ಪಡೆದುಕೊಂಡ ಸ್ವಾತಂತ್ರ್ಯವನ್ನು ಸಾರ್ಥಕಗೊಳಿಸಿಕೊಳ್ಳುವ ಹಾದಿ ಯಾವುದಾಗಿರಬೇಕು ಎಂಬುದನ್ನು ಹೊಳೆಸುವುದರ ಕಡೆಗೇ ಕೇಂದ್ರೀಕೃತವಾಗಿರುತ್ತಿದ್ದವು.ಬಾಲ್ಯದ ಅನುಭವವು ಹಲವು ಪಾಠಗಳನ್ನು ಕಲಿಸುತ್ತಿತ್ತು. ಮಕ್ಕಳು ಹೊಡೆದಾಡಿಕೊಂಡು ಬಂದರೆ ದೊಡ್ಡವರು ಬುದ್ಧಿವಾದ ಹೇಳುತ್ತಿದ್ದರು. ಹೊಡೆದಾಟ ಯಾಕೆ ಸರಿಯಲ್ಲ ಸ್ಪಷ್ಟಪಡಿಸುತ್ತಿದ್ದರು. ಹೊಡೆದವನು ಹೊಡೆತ ತಿಂದವನ ಮುಂದೆ ನಿಂತು ಕ್ಷಮೆ ಕೇಳಬೇಕಾಗುತ್ತಿತ್ತು. ಆ ಕ್ಷಮೆಯ ಪ್ರಸ್ತಾಪದೊಂದಿಗೇ ಇಬ್ಬರ ನಡುವೆ ಸ್ನೇಹ ಮತ್ತೆ ಚಿಗುರೊಡೆಯುತ್ತಿತ್ತು. ಸಣ್ಣ ಭಿನ್ನಾಭಿಪ್ರಾಯದ ಜಾಗವನ್ನು ಆಕ್ರಮಿಸಿಕೊಂಡು ಹೊಡೆದಾಡುವಷ್ಟರ ಮಟ್ಟಿಗೆ ಪ್ರಚೋದಿಸಿದ ದ್ವೇಷದ ದಟ್ಟ ಭಾವನೆಯನ್ನು ಆ ಕ್ಷಣವೇ ಅಳಿಸಿಹಾಕಿಬಿಡುತ್ತಿತ್ತು. ಆಮೇಲಾಮೇಲೆ ಸಣ್ಣ ಸಣ್ಣ ಭಿನ್ನಾಭಿಪ್ರಾಯಗಳು, ಸಣ್ಣ ಸಣ್ಣ ಜಗಳಗಳು, ಮತ್ತೆ ಒಂದಾಗಿ ಮಾತನಾಡಿಕೊಳ್ಳುವ ಸೊಗಡಿನೊಂದಿಗೇ ಬಾಲ್ಯ ಕಳೆದುಬಿಡುತ್ತಿತ್ತು. ದೊಡ್ಡವರಾಗುತ್ತಿದ್ದಂತೆಯೇ ಸಣ್ಣವರಾಗಿದ್ದಾಗಿನ ಕೆಲವು ಸಣ್ಣತನಗಳ ಪೊರೆಗಳನ್ನು ಕಳಚಿಕೊಳ್ಳುತ್ತಾ ಸಾಗಬೇಕಾಗಿತ್ತು. ಮಕ್ಕಳಾಗಿದ್ದಾಗ ಸಾಧ್ಯವಾಗಿದ್ದ ಈ ವಿವೇಕ ದೊಡ್ಡವರ ಬದುಕಿನೊಳಗೆ ಇಲ್ಲವಾಗುತ್ತದೆ. ಅವಿವೇಕತನದ ಪರಮಾವಧಿಯನ್ನು ಮತ್ತೆ ಮತ್ತೆ ಸಾಬೀತುಪಡಿಸುವ ಹಾಗೆಯೇ ಅವರು ವಿಕೃತಿಗಳೊಂದಿಗೇ ಗುರುತಿಸಿಕೊಳ್ಳುತ್ತಾರೆ. ಈಗಿನ ರಾಜಕಾರಣ ಮತ್ತು ಅದು ಪೋಷಿಸುವ ಆಡಳಿತ ವ್ಯವಸ್ಥೆಯು ಆ ವಿಕೃತಿಗಳನ್ನು ದಟ್ಟವಾಗಿಸುವ ನಕಾರಾತ್ಮಕ ಪಾತ್ರವನ್ನು ಅತ್ಯಂತ ಚಾಣಾಕ್ಷಯುತವಾಗಿ ನಿಭಾಯಿಸುತ್ತಿದೆ.
ಧೀಮಂತಿಕೆಯ ಗೈರುಹಾಜರಿ
ರಾಜಕಾರಣ ಮತ್ತು ಆಡಳಿತ ಒಂದನ್ನೊಂದು ನೆಚ್ಚಿಕೊಂಡಿರುವ ಪರಸ್ಪರ ಪೂರಕವಾದ ಕ್ಷೇತ್ರಗಳು. ಒಂದು ಶಾಸಕಾಂಗಕ್ಕೆ ಬೇಕಾದ ನಾಯಕತ್ವದ ಸಂಪನ್ಮೂಲವನ್ನು ಒದಗಿಸಿಕೊಡುವ ವಲಯವಾದರೆ, ಮತ್ತೊಂದು ಆ ಸಂಪನ್ಮೂಲದ ಆಧಾರದಲ್ಲಿ ಬಹುಮುಖೀ ಪಾತ್ರವನ್ನು ನಿರ್ವಹಿಸುವ ಕ್ರಿಯಾತ್ಮಕ ವ್ಯವಸ್ಥೆ. ಇವೆರಡನ್ನೂ ಪ್ರತಿನಿಧಿಸುವವರು ದೊಡ್ಡವರಾಗಿರಬೇಕು. ಅವರ ದೊಡ್ಡತನವು ಕೇವಲ ವಯಸ್ಸಲ್ಲಷ್ಟೇ ಅಲ್ಲ, ಅವರ ಧೀಮಂತಿಕೆಯ ಮೂಲಕ ಸಾಬೀತಾಗುತ್ತಿರಬೇಕು.ರಾಜಕಾರಣದಲ್ಲಿ ಹಿರಿವಯಸ್ಕ ರಾಜಕಾರಣಿಗಳಿದ್ದಾರೆ. ಆಡಳಿತ ವಲಯದಲ್ಲಿ ಅನುಭವಿ ಅಧಿಕಾರಿಗಳಿದ್ದಾರೆ. ಆದರೆ ಈ ಹಿರಿತನ ಮತ್ತು ಅನುಭವ ಇಡೀ ಸಮಾಜವನ್ನು ಹೊಸ ಹಾದಿಯ ಕಡೆಗೆ ಕೊಂಡೊಯ್ಯುವ ಬದಲು ಹಿಂದಿನ ಅನಾಗರಿಕ ಜಗತ್ತಿನ ಕ್ರೌರ್ಯದ ಕಡೆಗೇ ಹಿಂತಿರುಗಿಸುತ್ತಿದೆಯೇನೋ ಎಂಬ ಆತಂಕ ಆವರಿಸಿಕೊಳ್ಳುತ್ತಿದೆ. ಒಬ್ಬ ರಾಜಕಾರಣಿ ಮತ್ತೊಬ್ಬ ರಾಜಕಾರಣಿಯ ಬಗ್ಗೆ ಕೆಟ್ಟದಾಗಿ ಮಾತನಾಡುವಿಕೆ, ಒಬ್ಬರ ವಿರುದ್ಧ ಮತ್ತೊಬ್ಬರನ್ನು ಎತ್ತಿಕಟ್ಟುವ ಭರದಲ್ಲಿ ಹಿಂಸೆಯ ಮನಸ್ಥಿತಿಯನ್ನೇ ಕಾಡಿಸಿಕೊಂಡು ಪ್ರಚೋದಿಸುವ ಬಗೆ – ಇವೆಲ್ಲವೂ ಹಿರಿತನದ ಸಂಕೇತಗಳಾಗುವುದೂ ಇಲ್ಲ. ಅನುಭವ ಶ್ರೇಷ್ಠತೆಯನ್ನೂ ನಿರೂಪಿಸುವುದಿಲ್ಲ.
ನಂಬಿಕೆಯ ನಡಿಗೆ ಮತ್ತು ನಿಜದ ಅರಿವು
ನಂಬಿಕೆಯ ತಂತಿ ಮೇಲಿನ ನಡಿಗೆಯ ಹಾಗೆಯೇ ಸೂಕ್ಷ್ಮಾತಿಸೂಕ್ಷ್ಮ ಸ್ವರೂಪದೊಂದಿಗೆ ಈ ದೇಶದ ಜನರ ತಿಳುವಳಿಕೆಯು ನಿಕಟನಂಟು ಹೊಂದಿದೆ. ಇದು ಅರಿವಿನ ಎತ್ತರ ತಲುಪಿಕೊಳ್ಳುವ ಮುನ್ನವೇ ಇಲ್ಲಿಯ ರಾಜಕಾರಣ ಅವರ ಮನೋಲೋಕವನ್ನುಆವರಿಸಿಕೊಂಡುಬಿಡುತ್ತದೆ. ನಂಬಿಸಿ ಆ ಮೂಲಕ ಸೃಷ್ಟಿಯಾಗುವ ಪರವಾದ ಅಲೆಯ ಮೇಲೆ ಅದು ಯಾವತ್ತೂ ತನ್ನನ್ನು ಪ್ರತಿಷ್ಠಾಪಿಸಿಕೊಳ್ಳುತ್ತದೆ. ಇಲ್ಲಿಯ ವೈಚಾರಿಕತೆಯು ನಂಬಿಕೆಯೊಂದಿಗೆ ಆರೋಗ್ಯಕರ ಸಂವಾದವನ್ನು ಏರ್ಪಡಿಸಿಕೊಂಡು ಜನಸಮುದಾಯವನ್ನು ಒಂದು ಹೆಜ್ಜೆ ಮುಂದಕ್ಕೆ ಕರೆದೊಯ್ದರೆ, ಅದೇ ನಂಬಿಕೆಯ ಜಗತ್ತನ್ನು ಪ್ರತಿನಿಧಿಸುವ ಧಾರ್ಮಿಕ ಯಜಮಾನಿಕೆಯ ಪ್ರತಿನಿಧಿಗಳು ಮತ್ತು ಅವರೊಂದಿಗೆ ಗುರುತಿಸಿಕೊಂಡ ರಾಜಕೀಯ ಶಕ್ತಿಗಳು ಒಂದು ಹೆಜ್ಜೆ ಹಿಂದಕ್ಕೆ ಕರೆದೊಯ್ಯುತ್ತವೆ.
ಹಿಂದಕ್ಕೆಳೆಸುವ ಸ್ಥಾವರ ಧ್ವನಿಗಳು
ಈಗ ಏನಾಗಿದೆ ಎಂದರೆ ನಮ್ಮನ್ನು ಮುನ್ನಡೆಸುವ ಬೌದ್ಧಿಕ ಚಲನೆಯ ಜಂಗಮ ಶಕ್ತಿಗಳಿಗಿಂತ ನಮ್ಮನ್ನು ಹಿಂದೆಯೇ ಉಳಿಸಿ ತಟಸ್ಥವಾಗಿ ಉಳಿಸಿ ಸ್ಥಾವರಗೊಳಿಸುವ ಧ್ವನಿಗಳ ಅಬ್ಬರದ ಕಡೆಗಿನ ವ್ಯಾಮೋಹವೇ ಸಾಮೂಹಿಕ ಕಾಯಿಲೆಯಾಗಿ ಸಾರ್ವಜನಿಕ ವಲಯದಲ್ಲಿ ಬೇರೂರಿಬಿಟ್ಟಿದೆ. ಈ ಊನದ ಕಾರಣಕ್ಕಾಗಿಯೇ ಅರಿವಿನ ಆಂದೋಲನದ ಬದಲು ಇಲ್ಲೀಗ ಹಿಂಸೆಯ ದೃಷ್ಟಿಕೋನಗಳು ಹಿಂದೆಂದಿಗಿಂತಲೂ ಹೆಚ್ಚಾಗಿ ಪ್ರಾಮುಖ್ಯತೆ ಪಡೆಯುತ್ತಿವೆ. ಯಾರೊಳಗೂ ತಿಳಿದುಕೊಳ್ಳುವ ಸಂಯಮವಿಲ್ಲ. ಸಹನೆಯಿಂದ ಯೋಚಿಸುವ ತಾಳ್ಮೆಯಿಲ್ಲ. ತಕ್ಷಣವೇ ಪ್ರತಿಕ್ರಿಯಿಸುವ, ಹಾಗೆ ಪ್ರತಿಕ್ರಿಯಿಸುತ್ತಲೇ ಕ್ರೌರ್ಯ ಮೆರೆಯುವ ಪ್ರಚೋದಕ ಉತ್ಸಾಹ ಎಲ್ಲೆಲ್ಲೂ ಕಂಡುಬರುತ್ತಿದೆ. ಇದರ ಭಾಗವಾಗಿಯೇ ಸಣ್ಣ ಮಗುವಿನ ಕೈಯಲ್ಲಿ ದೊಡ್ಡ ದೊಡ್ಡ ಕಲ್ಲುಗಳನ್ನಿಟ್ಟು ‘ನಾನು ರಾಹುಲ್ ಗಾಂಧಿಯನ್ನು ಭೇಟಿಯಾಗಲು ಇಚ್ಛಿಸುತ್ತಿದ್ದೇನೆ’ ಎಂಬ ಒಕ್ಕಣೆಯ ಫೋಟೋ ಫೇಸ್ಬುಕ್ನ ಆವರಣದಲ್ಲಿ ಕಾಣಿಸಿಕೊಳ್ಳುತ್ತದೆ. ದಿಢೀರನೆ ಅದು ಹಂಚಲ್ಪಡುತ್ತದೆ. ನಾಳಿನ ಪೀಳಿಗೆಯನ್ನು ಪ್ರತಿನಿಧಿಸುವ ಪೋರನ ಹಿಂಸಾಪರ ಫೋಟೋಕ್ಕೆ ಅಸಂಖ್ಯಾತ ಲೈಕ್ಗಳು ಹರಿದುಬರುತ್ತವೆ. ಇದು ಅರಿವನ್ನು ಎತ್ತರಿಸಿಕೊಳ್ಳುವ ಲಕ್ಷಣವಲ್ಲ. ಬದಲಾಗಿ ಜನರ ಸ್ವಯಂತಿಳುವಳಿಕೆಯ ಶಕ್ತಿಯ ಮೇಲೆ ತಣ್ಣಗೆ ಆಗುವ ಗದಾಪ್ರಹಾರ.
ರೂಢಿಗತ ಸಂಕುಚಿತ ವಿಧಾನ
ನಂಬಿಕೆಯ ಜಗತ್ತು ಆಧ್ಯಾತ್ಮಿಕ ತಾತ್ವಿಕತೆಯ ಪ್ರಖರತೆಯನ್ನು ತೀವ್ರಗೊಳಿಸುವುದು ಒಂದು ಸಾಧ್ಯತೆ. ಆದರೆ, ಇದೇ ಜಗತ್ತು ದೈವಿಕ ಮತ್ತು ಧಾರ್ಮಿಕ ಮೌಢ್ಯವನ್ನು ಪ್ರತಿಷ್ಠಾಪಿಸುವುದಕ್ಕೆ ಸಹಾಯಕವಾಗುತ್ತದೆ. ಅಷ್ಟೇ ಅಲ್ಲ, ರಾಜಕೀಯದ ಸ್ವರೂಪವನ್ನು ನಿರ್ಧರಿಸುವಷ್ಟರ ಮಟ್ಟಿಗೆ ತನ್ನ ಪ್ರಭಾವವನ್ನು ಪ್ರಬಲವಾಗಿ ಬೇರೂರಿಸಿಬಿಡುತ್ತದೆ. ಇದರ ಪರಿಣಾಮವು ಜನರ ಮನೋಧರ್ಮದ ಮೇಲಾಗುತ್ತದೆ. ಅಧಿಕಾರದಲ್ಲಿರುವ ಮತ್ತು ಅಧಿಕಾರದಲ್ಲಿ ಇಲ್ಲದೇ ಇರುವ ನಾಯಕರೆನ್ನಿಸಿಕೊಂಡವರನ್ನು ಗ್ರಹಿಸುವ ಸಂಕುಚಿತ ವಿಧಾನವನ್ನೂ ರೂಢಿಸಿಬಿಡುತ್ತದೆ. ರಾಹುಲ್ ಗಾಂಧಿ ಅವರನ್ನು ಭೇಟಿಯಾಗಬೇಕಿದೆ ಎನ್ನುವ ಪುಟ್ಟ ಪೋರನ ಕೈಯಲ್ಲಿನ ದೊಡ್ಡ ದೊಡ್ಡ ಕಲ್ಲುಗಳ ಫೋಟೋ ಈ ವಿಧಾನ ಎಂಥದ್ದು ಎಂಬುದನ್ನು ನಿರೂಪಿಸಿದೆ. ಲೋಕಸಭೆಯಲ್ಲಿ ನಿರರ್ಗಳವಾಗಿ ಮಾತನಾಡಿ ಭಾಷಿಕ ಪ್ರೌಢಿಮೆ ಮೆರೆದು ಅಧಿಕಾರದಲ್ಲಿರುವವರ ಊನಗಳ ಮೇಲೆ ಬೆಳಕು ಚೆಲ್ಲುವ ಪ್ರಬುದ್ಧ ನಡೆಯನ್ನು ಪ್ರದರ್ಶಿಸುವವರು ಉತ್ತಮ ಸಂಸದೀಯ ಪಟು ಎಂಬ ಹಿರಿಮೆ ಪಾತ್ರರಾಗುವ ಪರಂಪರೆ ಇದೆ. ಆದರೆ, ಇದಕ್ಕೆ ತದ್ವಿರುದ್ಧವಾದ ನಡೆಗಳೊಂದಿಗಿನ ಹೀನ ಸಂಪ್ರದಾಯವನ್ನು ರಾಜಕಾರಣಿಗಳು ಈಗಾಗಲೇ ಆರಂಭಿಸಿಬಿಟ್ಟಿದ್ದಾರೆ. ಅಷ್ಟಕ್ಕೇ ಅವರು ಸಮಾಧಾನಗೊಳ್ಳದೇ, ಸಾಮಾಜಿಕ ಜಾಲತಾಣಗಳ ವೇದಿಕೆಯ ತಾರ್ಕಿಕ ಸಾಧ್ಯತೆಗಳ ಆಯಾಮಕ್ಕೇ ಧಕ್ಕೆಯೊದಗಿಸುವ ಹಾಗೆ ನಡೆದುಕೊಳ್ಳುತ್ತಿದ್ದಾರೆ. ಸದ್ಯದ ಮತ್ತು ಭವಿಷ್ಯದ ಹಿಂಸಾಪ್ರವೃತ್ತಿಗಳ ವಾತಾವರಣ ಸೃಷ್ಟಿಗೆ ಹೊಸ ಪೀಳಿಗೆಯ ಎಳೆ ಜೀವಗಳನ್ನು ಬಳಸಿಕೊಳ್ಳುತ್ತಿದ್ದಾರೆ. ಈ ಬಿಂಬಗಳು ನಕಾರಾತ್ಮಕ ಸಂದೇಶವನ್ನು ಸಾರುತ್ತಿವೆ.
ದ್ವೇಷದ ವಿಷ
ಒಬ್ಬರನ್ನೊಬ್ಬರು ಹಿಂಸಿಸಿಕೊಳ್ಳುವ, ದ್ವೇಷ ಸಾಧಿಸುವ, ಆ ಮೂಲಕ ನೆಮ್ಮದಿಯನ್ನು ತಂದುಕೊಳ್ಳುವ ಭ್ರಮಾತ್ಮಕತೆಯೇ ಶ್ರೇಷ್ಠ ಎಂದು ನಂಬಿಸುವ ಆಟ ಈಗೀಗ ಅಧಿಕೃತತೆಯನ್ನು ಪಡೆದುಕೊಂಡಿದೆ. ಈ ಆಟದ ಓಟವು ಹಲವು ಜೀವಗಳ ಬಲಿಬೇಡುತ್ತದೆ ಎಂಬ ಸತ್ಯದ ಕಡೆಗೆ ಯಾರ ಗಮನವೂ ಇಲ್ಲ. ಅದು ನಮ್ಮನ್ನು ಯಾವ ಕೂಪಕ್ಕೆ ತಳ್ಳುತ್ತದೆ ಎಂಬ ಪರಿಜ್ಞಾನವಿಲ್ಲದೇ ದ್ವೇಷಕ್ಕೆ ಮನಸ್ಸನ್ನು ತಿರುಗಿಸಿಕೊಳ್ಳುವ ರಣೋತ್ಸಾಹವು ಪೀಳಿಗೆಯನ್ನು ಸರ್ವನಾಶದ ಕಡೆಗೆ ಕೊಂಡೊಯ್ಯುತ್ತಿದೆ. ನಮ್ಮ ನಾಯಕರ ಕುರಿತು ಅಸಮಾಧಾನಗೊಳ್ಳುವ, ಭಿನ್ನಾಭಿಪ್ರಾಯ ವ್ಯಕ್ತಪಡಿಸುವ, ಆ ಮೂಲಕ ಅವರು ನಮ್ಮ ಅಗತ್ಯಗಳೇನೇನು ಎಂಬುದರ ಬಗ್ಗೆ ಆಲೋಚಿಸುವಂತೆ ಒತ್ತಡ ಹಾಕುವುದರ ಬದಲು ವಿರೋಧ ಪಕ್ಷಗಳವರ ಬಗ್ಗೆ ದ್ವೇಷ ಹುಟ್ಟುಹಾಕುವಂಥ ವಿಷದ ಬೀಜಗಳನ್ನು ಬಿತ್ತುವ ಪ್ರಯತ್ನಗಳು ಸಾಮಾಜಿಕ ಜಾಲತಾಣಗಳ ಮೂಲಕ ಮುನ್ನೆಲೆಗೆ ಬರುತ್ತಿರುವುದು ಭವಿಷ್ಯದ ಕರಾಳತೆಯ ಬಗ್ಗೆ ಮುನ್ಸೂಚನೆ ನೀಡುತ್ತಿವೆ.
ನಮಗೆ ಅಧಿಕಾರದಲ್ಲಿರುವವರೂ ಮುಖ್ಯ. ಅವರನ್ನು ಪ್ರಶ್ನಿಸುವ ವಿರೋಧ ಪಕ್ಷಗಳವರೂ ಮುಖ್ಯ. ಜೊತೆಗೆ ತಾರ್ಕಿಕವಾಗಿ ಅಧಿಕಾರದಲ್ಲಿರುವವರನ್ನು ಪ್ರಶ್ನಿಸುವ ವೈಚಾರಿಕ ಚಿಂತಕರೂ ಪ್ರಧಾನ ಪಾತ್ರ ನಿರ್ವಹಿಸುತ್ತಾರೆ. ಈ ಮೂರೂ ವಲಯಗಳವರನ್ನೂ ಪರಸ್ಪರ ದ್ವೇಷದ ನೆಲೆಗಳಲ್ಲಿ ನೋಡುವಂತೆ ಪ್ರಚೋದಿಸುವ ಸಣ್ಣತನದ ರಾಜಕಾರಣ ತನ್ನ ವ್ಯತಿರಿಕ್ತತೆಯನ್ನು ಈಗಾಗಲೇ ಪ್ರದರ್ಶಿಸುತ್ತಿದೆ. ಅಧಿಕಾರ, ಹಣ ಮತ್ತು ಅದಕ್ಕನುಗುಣವಾದ ಎಲ್ಲ ಸೌಲಭ್ಯಗಳನ್ನು ದಕ್ಕಿಸಿಕೊಳ್ಳುವುದರಲ್ಲಿ ಒಂದಾಗುವ ಅಧಿಕಾರರೂಢರು ಮತ್ತು ವಿರೋಧ ಪಕ್ಷಗಳವರಿಗೆ ನಾವು ಸ್ಪಷ್ಟ ಸಂದೇಶ ರವಾನಿಸಬೇಕಿದೆ. ನೀವಿಬ್ಬರೂ ಈ ದೇಶದ ನಿಜವಾದ ಬೆಳವಣಿಗೆಯ ಬಗ್ಗೆ ಆಲೋಚಿಸಿ ಎಂದು ದಿಟ್ಟವಾಗಿ ಕಿವಿಮಾತು ಹೇಳಬೇಕಿದೆ. ಒಬ್ಬರಿಗೊಬ್ಬರು ಹೇಳಿಕೆಗಳ ಮೂಲಕ ಕಚ್ಚಾಡುತ್ತಾ, ಆ ಮೂಲಕವೇ ಹಿಂಸೆಗೆ ಪ್ರಚೋದನೆ ನೀಡುತ್ತಾ, ಬೀದಿಬದಿಯಲ್ಲಿ ಅಮಾಯಕ ಜೀವಗಳ ಮಾರಣಹೋಮಕ್ಕೆ ಕಾರಣವಾಗುವ ರಾಜಕೀಯ ಪ್ರವೃತ್ತಿಗಳನ್ನು ಗಟ್ಟಿದನಿಯಲ್ಲಿ ಖಂಡಿಸಬೇಕಿದೆ. ಹಾಗಾಗದಿದ್ದರೆ ನಮ್ಮ ದೇಶ ಮಹಾನ್ ಆಗುವುದಿಲ್ಲ. ಸಮೃದ್ಧ ಭಾರತದ ಕನಸುಗಳೂ ಸಾಕಾರಗೊಳ್ಳುವುದಿಲ್ಲ.
-ಡಾ.ಎನ್.ಕೆ.ಪದ್ಮನಾಭ
ದಿನದ ಸುದ್ದಿ
ಲೋಕಸಭಾ ಚುನಾವಣೆಯ ಮೊದಲ ಹಂತಕ್ಕೆ ನಾಮಪತ್ರ ಸಲ್ಲಿಕೆಗೆ ಇಂದು ಕೊನೆಯ ದಿನ
ಸುದ್ದಿದಿನ ಡೆಸ್ಕ್ : ಲೋಕಸಭಾ ಚುನಾವಣೆಯ ಮೊದಲ ಹಂತಕ್ಕೆ ನಾಮಪತ್ರ ಸಲ್ಲಿಸಲು ಇಂದು ಕೊನೆಯ ದಿನವಾಗಿದೆ.
ನಾಳೆ ನಾಮಪತ್ರಗಳ ಪರಿಶೀಲನೆ ನಡೆಯಲಿದ್ದು, ಇದೇ 30 ನಾಮಪತ್ರ ಹಿಂಪಡೆಯಲು ಕಡೆಯ ದಿನವಾಗಿದೆ. ಇದೇ ವೇಳೆ ಬಿಹಾರದಲ್ಲಿ ನಾಮಪತ್ರ ಸಲ್ಲಿಕೆಗೆ ನಾಳೆ ಕಡೆ ದಿನವಾಗಿದ್ದು, ಈ ತಿಂಗಳ 30 ರಂದು ನಾಮಪತ್ರಗಳ ಪರಿಶೀಲನೆ ಹಾಗೂ ಏಪ್ರಿಲ್ 2ರಂದು ನಾಮತ್ರ ಹಿಂಪಡೆಯುವಿಕೆಗೆ ಕೊನೆಯ ದಿನವಾಗಿರುತ್ತದೆ.
ಏಪ್ರಿಲ್ 19 ರಂದು 17 ರಾಜ್ಯಗಳು ಮತ್ತು ನಾಲ್ಕು ಕೇಂದ್ರಾಡಳಿತ ಪ್ರದೇಶಗಳಲ್ಲಿನ 102ಲೋಕಸಭಾ ಕ್ಷೇತ್ರಗಳಿಗೆ ಮೊದಲ ಹಂತದಲ್ಲಿ ಚುನಾವಣೆ ನಡೆಯಲಿದೆ. ಅದರಂತೆ ತಮಿಳುನಾಡಿನಲ್ಲಿ 39, ರಾಜಸ್ಥಾನದಲ್ಲಿ 12, ಉತ್ತರ ಪ್ರದೇಶದಲ್ಲಿ 8, ಮಧ್ಯಪ್ರದೇಶದಲ್ಲಿ 6, ಉತ್ತರಾಖಂಡ, ಅಸ್ಸಾಂ ಮತ್ತು ಮಹಾರಾಷ್ಟ್ರದಲ್ಲಿ ತಲಾ 5 , ಬಿಹಾರದಲ್ಲಿ 4, ಪಶ್ಚಿಮ ಬಂಗಾಳದಲ್ಲಿ 3, ಅರುಣಾಚಲ ಪ್ರದೇಶ, ಮಣಿಪುರ, ಮೆಘಾಲಯದಲ್ಲಿ ತಲಾ 2 ಮತ್ತು ಛತ್ತೀಸ್ಗಢ, ಮಿಜೋರಾಂ, ನಾಗಾಲ್ಯಾಂಡ್, ಸಿಕ್ಕಿಂ, ತ್ರಿಪುರ, ಅಂಡಮಾನ್-ನಿಕೋಬಾರ್ ದ್ವೀಪಗಳು, ಜಮ್ಮು-ಕಾಶ್ಮೀರ, ಲಕ್ಷದ್ವೀಪ ಮತ್ತು ಪುದುಚೇರಿಯಲ್ಲಿ ತಲಾ ಒಂದು ಕ್ಷೇತ್ರದಲ್ಲಿ ಮೊದಲ ಹಂತದಲ್ಲಿ ಚುನಾವಣೆ ನಡೆಯಲಿದೆ.
ಎರಡನೇ ಹಂತದಲ್ಲಿ 89 ಲೋಕಸಭಾ ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದ್ದು, ಚುನಾವಣಾ ಆಯೋಗ ನಾಳೆ ಅಧಿಸೂಚನೆ ಹೊರಡಿಸಲಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243
ದಿನದ ಸುದ್ದಿ
ಲೋಕಸಭಾ ಚುನಾವಣೆ | ಹೊಸ ಮತದಾರರೆಷ್ಟು ಗೊತ್ತಾ..?
ಸುದ್ದಿದಿನ ಡೆಸ್ಕ್ : 2024ರ ಲೋಕಸಭಾ ಚುನಾವಣೆಯಲ್ಲಿ ಅಂದಾಜು ಒಂದು ಕೋಟಿ 80 ಲಕ್ಷ ಹೊಸ ಮತದಾರರು ತಮ್ಮ ಅಮೂಲ್ಯ ಹಕ್ಕನ್ನು ಮೊದಲ ಬಾರಿಗೆ ಚಲಾಯಿಸಲಿದ್ದಾರೆ. ಇವರೆಲ್ಲ 18-19ರ ಪ್ರಾಯದವರು.
ಮೊದಲ ಬಾರಿಗೆ ಮತ ಚಲಾಯಿಸುವ ಯುವಕರಿಗೆ ಅವರ ಈ ಪವಿತ್ರ ಕರ್ತವ್ಯದ ಮಹತ್ವವನ್ನು ಮನಗಾಣಿಸುವ ಸಲುವಾಗಿ ಸಾಮಾಜಿಕ ಜಾಲತಾಣಗಳಲ್ಲಿ ’ನಾನು ಖಂಡಿತ ಮತ ಚಲಾಯಿಸುತ್ತೇನೆ’ ಎನ್ನುವ ಪ್ರಚಾರ ಆಂದೋಲನಗಳು ನಡೆಯುತ್ತಿವೆ.
ಈ ಬಾರಿ ಚುನಾವಣೆಯಲ್ಲಿ ಭಾಗವಹಿಸುವ ಯುವ ಮತದಾರರ ಪೈಕಿ 20ರಿಂದ 29ವರ್ಷ ವಯೋಮಾನದ ಅಂದಾಜು 19 ಕೋಟಿ 74 ಲಕ್ಷ ಮತದಾರರು ಪಾಲ್ಗೊಳ್ಳಲಿದ್ದಾರೆ. 18 ವರ್ಷಕ್ಕೆ ಮತದಾನದ ಹಕ್ಕು ದೊರೆಯುವುದಾದರೂ ಈಗ 17 ವರ್ಷ ತುಂಬಿರುವ ಯುವಜನ ಸಮೂಹದಿಂದ 13.4ಲಕ್ಷಕ್ಕೂ ಅಧಿಕ ಅರ್ಜಿಗಳನ್ನು ಮುಂಚಿತವಾಗಿಯೇ ಸ್ವೀಕರಿಸಲಾಗಿದೆ.
ಕೇಂದ್ರ ಚುನಾವಣಾ ಆಯೋಗ ಯುವ ಜನರಿಗೆ ಮತದಾನಕ್ಕೆ ಪ್ರೋತ್ಸಾಹ ನೀಡುವ ಸಲುವಾಗಿ ಸಚಿನ್ ತೆಂಡುಲ್ಕರ್ ಮತ್ತು ರಾಜಕುಮಾರ್ ರಾವ್ ಅವರಂತಹ ರಾಷ್ಟ್ರೀಯ ದಿಗ್ಗಜರಿಂದ ಸಂದೇಶಗಳನ್ನು ಪ್ರಸಾರ ಮಾಡುತ್ತಿದೆ. ಸಾಮಾಜಿಕ ಮಾಧ್ಯಮ ಅಭಿಯಾನಗಳು ಮತ್ತು ರೇಡಿಯೋ ಮೂಲಕವೂ ಸಂದೇಶಗಳನ್ನು ಪ್ರಸಾರ ಮಾಡಲಾಗುತ್ತದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243
ದಿನದ ಸುದ್ದಿ
ಬೆಂಗಳೂರಿನಲ್ಲಿ ಬಿಜೆಪಿ ನೂತನ ಮಾಧ್ಯಮಕೇಂದ್ರ ಆರಂಭ
ಸುದ್ದಿದಿನ,ಬೆಂಗಳೂರು : ದಕ್ಷಿಣ ಭಾರತದಲ್ಲಿ ಭಾರತೀಯ ಜನತಾಪಕ್ಷಕ್ಕೆ, ಕರ್ನಾಟಕ ಹೆಬ್ಬಾಗಿಲಿನಂತಿದ್ದು, ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಪಕ್ಷ ಅತಿ ಹೆಚ್ಚು ಸ್ಥಾನಗಳನ್ನು ಗೆಲ್ಲಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿದ್ದಾರೆ.
ಬರಲಿರುವ ಮಹಾಚುನಾವಣೆಗೆ ಪಕ್ಷದ ಕೇಂದ್ರಬಿಂದುವಾಗಿ ಕಾರ್ಯನಿರ್ವಹಿಸಲಿರುವ ನೂತನ ಮಾಧ್ಯಮ ಕೇಂದ್ರದಲ್ಲಿ ಪಕ್ಷದ ರಾಜ್ಯ ನಾಯಕರು ಇಂದು ಬೆಳಿಗ್ಗೆ ನಡೆಸಿದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ, ಜನಪರ ಆಡಳಿತ ನೀಡುವಲ್ಲಿ ಮತ್ತು ಬರಪರಿಸ್ಥಿತಿ ನಿರ್ವಹಣೆಯಲ್ಲಿ ಸಂಪೂರ್ಣ ವಿಫಲವಾಗಿದೆ ಎಂದು ಆಪಾದಿಸಿದರು.
ಜನವಿರೋಧಿ ಕ್ರಮಗಳಿಂದಾಗಿ ರಾಜ್ಯದ ಜನತೆ ಈ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ತಕ್ಕ ಪಾಠ ಕಲಿಸಲಿದ್ದಾರೆ ಎಂದರು.
ಲೋಕಸಭಾ ಚುನಾವಣೆಗೆ ರಾಜ್ಯದಲ್ಲಿ ಅತಿಹೆಚ್ಚು ಸ್ಥಾನಗಳನ್ನು ಗೆಲ್ಲುವ ಉದ್ದೇಶದಿಂದ ಕಾರ್ಯತಂತ್ರ ರೂಪಿಸಲು ತನ್ನ 200ಕ್ಕೂ ಹೆಚ್ಚು ಕಾರ್ಯಕರ್ತರಿಗೆ ಕಾರ್ಯಾಗಾರ ನಡೆಸಲು ಬಿಜೆಪಿ ನಿರ್ಧರಿಸಿದೆ. ಈ ನಡುವೆ ಲೋಕಸಭಾ ಚುನಾವಣೆ ಕುರಿತಂತೆ ದೆಹಲಿಯಲ್ಲಿ ಇಂದು ಬಿಜೆಪಿ ಕೇಂದ್ರೀಯ ಚುನಾವಣಾ ಸಮಿತಿಯ ಸಭೆ ನಡೆಯಲಿದೆ.
ಚುನಾವಣೆಗೆ ಪಕ್ಷದ ಕಾರ್ಯತಂತ್ರಗಳನ್ನು ಕುರಿತು ಸಮಾಲೋಚಿಸಲು ಪ್ರಧಾನಮಂತ್ರಿ ನರೇಂದ್ರ ಮೋದಿ, ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ, ಗೃಹ ಸಚಿವ ಅಮಿತ್ ಶಾ ಹಾಗೂ ಚುನಾವಣಾ ಸಮಿತಿಯ ಸದಸ್ಯರು ಮತ್ತಿತರ ಪದಾಧಿಕಾರಿಗಳು ಈ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ.
"ವಿಕಸಿತ ಭಾರತಕ್ಕಾಗಿ
ಮತ್ತೊಮ್ಮೆ ಮೋದಿ ಸರ್ಕಾರ"ಮಲ್ಲೇಶ್ವರಂನ ಜಿ.ಎಂ. ರಿಜಾಯ್ಸ್ ಹೋಟೆಲ್ನಲ್ಲಿ ಬಿಜೆಪಿ ಲೋಕಸಭಾ ಚುನಾವಣಾ 2024ರ ಮಾಧ್ಯಮ ಕೇಂದ್ರದ ಉದ್ಘಾಟನೆ ನೆರವೇರಿಸಲಾಯಿತು. ರಾಜ್ಯದೆಲ್ಲೆಡೆ ಪ್ರಧಾನಿ ಮೋದಿ ಜೀ ಅವರ ಪರವಾದ ಅಲೆ ವ್ಯಾಪಕವಾಗಿದ್ದು 'ಮೋದಿ ಮತ್ತೊಮ್ಮೆ' ಎಂಬುದು ಜನಸಾಮಾನ್ಯರ ಸಂಕಲ್ಪವಾಗಿದೆ. ದೇಶದಲ್ಲಿ 400 ಹಾಗೂ… pic.twitter.com/gYbNmo1Poo
— Vijayendra Yediyurappa (Modi Ka Parivar) (@BYVijayendra) March 23, 2024
ಸುದ್ದಿದಿನ.ಕಾಂ|ವಾಟ್ಸಾಪ್|9980346243
-
ದಿನದ ಸುದ್ದಿ7 days ago
ನಾಯಕನ ಹಟ್ಟಿ | ಶ್ರೀಗುರು ತಿಪ್ಪೇರುದ್ರಸ್ವಾಮಿ ರಥೋತ್ಸವಕ್ಕೆ ವಿಶೇಷ ಬಸ್ ಸೌಲಭ್ಯ
-
ದಿನದ ಸುದ್ದಿ6 days ago
ಲೋಕಸಭಾ ಚುನಾವಣೆ : ಚುನಾವಣಾ ಚಟುವಟಿಕೆಗಳ ಕುರಿತ ಜಿಲ್ಲಾವಾರು ಮಾಹಿತಿ
-
ದಿನದ ಸುದ್ದಿ6 days ago
ವಿಜಯಪುರ ಜಿಲ್ಲಾ ಸಾಹಿತ್ಯ ಸಮ್ಮೇಳನದ ಕವಿಗೋಷ್ಠಿಗೆ ಮೈಬೂಬಸಾಹೇಬ.ವೈ.ಜೆ ಆಯ್ಕೆ
-
ದಿನದ ಸುದ್ದಿ6 days ago
ಬೆಂಗಳೂರಿನಲ್ಲಿ ಬಿಜೆಪಿ ನೂತನ ಮಾಧ್ಯಮಕೇಂದ್ರ ಆರಂಭ
-
ದಿನದ ಸುದ್ದಿ5 days ago
ಲೋಕಸಭಾ ಚುನಾವಣೆ | ಹೊಸ ಮತದಾರರೆಷ್ಟು ಗೊತ್ತಾ..?
-
ದಿನದ ಸುದ್ದಿ5 days ago
ಕವಿತೆ | ನೆನಪು
-
ದಿನದ ಸುದ್ದಿ3 days ago
ಚುನಾವಣಾ ಅಕ್ರಮ ; ಸಾರ್ವಜನಿಕರು ದೂರು ಸಲ್ಲಿಸಲು ಆಯೋಗದಿಂದ ಸಿ-ವಿಜಿಲ್ ಆಪ್ ಅಭಿವೃದ್ಧಿ
-
ದಿನದ ಸುದ್ದಿ2 days ago
ಲೋಕಸಭಾ ಚುನಾವಣೆಯ ಮೊದಲ ಹಂತಕ್ಕೆ ನಾಮಪತ್ರ ಸಲ್ಲಿಕೆಗೆ ಇಂದು ಕೊನೆಯ ದಿನ