Connect with us

ಅಂತರಂಗ

ಅರಿಮೆಯ ಅರಿವಿರಲಿ-47 : ತನ್ನತನದ ತನ್ನ ಭಾಷೆ

Published

on

  • ಯೋಗೇಶ್ ಮಾಸ್ಟರ್

ಮಾನಸಿಕವಾಗಿಯಾಗಲಿ,ಆಧ್ಯಾತ್ಮಿಕವಾಗಿಯಾಗಲಿ ಅಥವಾ ಸಾಮಾಜಿಕವಾಗಿ ಸಹಜ ಮನುಷ್ಯನಂತೆಯಾಗಲಿ ತನ್ನತನವನ್ನು ಕಂಡುಕೊಂಡವರ ಕೆಲವು ಮುಖ್ಯ ಲಕ್ಷಣಗಳು ಹೀಗಿರುತ್ತವೆ.

ತನಗೆ ತಾನೇ ಸಾಕ್ಷಿ

ತನ್ನನ್ನು ತಾನು ಉನ್ಮತ್ತನಂತೆ ಪ್ರದರ್ಶಿಸಿಕೊಳ್ಳುವುದಿಲ್ಲ. ತನ್ನ ಎಲ್ಲಾ ಪ್ರತಿಕ್ರಿಯೆ ಮತ್ತು ಪ್ರತಿವರ್ತನೆಗಳನ್ನು ತಾನು ರೂಪಿಸಿಕೊಂಡಿರುವ ವ್ಯಕ್ತಿತ್ವದ ಅರಿವಿನಲ್ಲಿ ಪ್ರದರ್ಶನಕ್ಕಿಡುತ್ತಾನೆ. ಮುಖ್ಯವಾಗಿ ತನ್ನ ಪ್ರದರ್ಶನವನ್ನು ತಾನು ನೋಡಲು ಸಮರ್ಥನಿರುತ್ತಾನೆ. ಉದಾಹರಣೆಗೆ ಯಾರೋ ಒಬ್ಬ ವ್ಯಕ್ತಿಯು ತನ್ನ ಜೊತೆಗೆ ವ್ಯತ್ಯಾಸವಾಗಿ ನಡೆದುಕೊಂಡನೆಂದರೆ ಅವನಿಗೆ ಪ್ರತಿಕ್ರಿಯಿಸುವ ತನ್ನ ನಡೆ, ನುಡಿ, ನಡವಳಿಕೆ ಅವನಿಗೆ ಮತ್ತು ತಮ್ಮಿಬ್ಬರನ್ನು ನೋಡುವವರಿಗೆ ಹೇಗೆ ಕಾಣುತ್ತಿರುತ್ತದೆ ಎಂಬುದನ್ನು ತಾನು ನೋಡುತ್ತಿರುತ್ತಾನೆ. ತನ್ನನ್ನು ಪ್ರಕಟಗೊಳಿಸಿಕೊಳ್ಳುವಾಗ ಇದು ಬಹಳ ಮುಖ್ಯವಾದ ಮತ್ತು ಉಪಯುಕ್ತವಾದ ಸಾಧನ.

ತನ್ನ ತಾನು ನೋಡಿಕೊಳ್ಳುವ ತಂತ್ರಗಾರಿಕೆ ಸಿದ್ಧಿಯಾಯಿತೆಂದರೆ ಅವನು ಆಧ್ಯಾತ್ಮಿಕವಾಗಿ ಮತ್ತು ಧಾರ್ಮಿಕವಾಗಿಯೂ ಪ್ರಾಮಾಣಿಕನಾಗಿರುವವನಲ್ಲದೇ, ಮಾನಸಿಕವಾಗಿ ಯಾವುದೇ ಸಮಸ್ಯೆಗಳಿದ್ದರೂ ಅದರಿಂದ ಮುಕ್ತನಾಗಲು ಸಾಧ್ಯ. ಇನ್ನೂ ಚೆಂದದ ವಿಷಯವೆಂದರೆ, ಈ ತನ್ನ ತಾನು ನೋಡಿಕೊಳ್ಳುವ ತಂತ್ರಗಾರಿಕೆಯನ್ನು ಅಭ್ಯಾಸ ಮಾಡುವುದರಿಂದ ಸಾರ್ವಜನಿಕವಾಗಿ ಮಾತಾಡುವವರು, ಭಾಷಣ ಮಾಡುವವರು, ತರಗತಿಗಳನ್ನು ತೆಗೆದುಕೊಳ್ಳುವವರು ತಮ್ಮ ಪ್ರದರ್ಶನಗಳನ್ನು ಉತ್ತಮ ಪಡಿಸಿಕೊಳ್ಳಬಲ್ಲರು.

ಇನ್ನು ರಂಗಭೂಮಿ, ಕಿರುತೆರೆ ಮತ್ತು ಸಿನಿಮಾ ಕಲಾವಿದರಿಗೂ ತಮ್ಮ ಪ್ರದರ್ಶನವನ್ನು ಸಂವೇದನಾಶೀಲವನ್ನಾಗಿಸಿಕೊಳ್ಳಲು ಸಾಧ್ಯ.
ತನಗೆ ತಾನೇ ಸಾಕ್ಷಿಯಾಗುವುದು; ಈ ಪರಿಕಲ್ಪನೆಯನ್ನು ಸರಳವಾಗಿ ರಂಗಭೂಮಿ ಭಾಷೆಯಲ್ಲಿ ಹೇಳುವುದಾದರೆ, ನಾನೇ ರಂಗದ ಮೇಲೆ ಅಭಿನಯಿಸುತ್ತಿರುವುದು. ಅದನ್ನು ನಾನೇ ಪ್ರೇಕ್ಷಕರಲ್ಲಿ ಕುಳಿತು ನೋಡುವುದು.

ಅಧೀನನಾಗುವುದಿಲ್ಲ

ತನ್ನತನವನ್ನು ರೂಪಿಸಿಕೊಂಡವನು ಮತ್ತು ಆ ತನ್ನತನದಲ್ಲಿ ಹರಳು ನೆಟ್ಟಿರುವ ಮೌಲ್ಯಗಳ ಜ್ಞಾನೋದಯವಾಗಿರುವವನು ಯಾರನ್ನೂ ತನ್ನ ಅಂತಿಮ ಮಾದರಿ ಎಂದಾಗಲಿ, ಆರಾಧ್ಯ ವ್ಯಕ್ತಿಯೆಂದಾಗಲಿ ಎಂದಿಟ್ಟುಕೊಳ್ಳುವುದಿಲ್ಲ. ಒಟ್ಟಾರೆ ಹಾರ್ಡ್ ಕೋರ್ ಫ್ಯಾನ್ ಅಥವಾ ಕಟ್ಟಾ ಅಭಿಮಾನಿ ಆಗುವುದಿಲ್ಲ. ಅದೇ ರೀತಿಯಲ್ಲಿ ತನ್ನ ಮನೆಯಲ್ಲಾಗಲಿ, ಕೆಲಸ ಮಾಡುವ ಕಡೆಯಲ್ಲಾಗಲಿ ಯಾವುದೇ ಮುಲಾಜಿತೆ ಯಾರೊಬ್ಬರ ಅಧೀನವಾಗಿರುವುದಿಲ್ಲ. ಗೌರವಿಸುವುದು, ವಿನಯವಾಗಿರುವುದು, ಅನುಸರಿಸಿಕೊಳ್ಳುವುದು; ಈ ಎಲ್ಲವೂ ಇರುತ್ತದೆ. ಆದರೆ ಅದು ಕಾರ್ಯಕಾರಣವಾದ ಸರಿಸಿಕೊಳ್ಳುವಿಕೆಯೇ ಹೊರತು ಯಾರಿಗೂ ಅಧೀನವಾಗಿರುವುದಿಲ್ಲ. ತಮ್ಮತನವನ್ನು ಪಣಕ್ಕಿಡುವುದಿಲ್ಲ.

ತನ್ನನ್ನು ತಾನು ಯಾರೋ ಒಬ್ಬ ನಟನ, ರಾಜಕೀಯ ವ್ಯಕ್ತಿಯ, ಧಾರ್ಮಿಕ ಪುರುಷನ, ಸಮಾಜ ಸುಧಾರಕನ ಭಕ್ತನಾಗಿಸಿಕೊಳ್ಳುವುದಿಲ್ಲ. ಯಾರು ತಮ್ಮನ್ನು ಕಟ್ಟಾ ಅಭಿಮಾನಿಗಳು ಎಂದು ಘೋಷಿಸಿಕೊಳ್ಳುತ್ತಾರೋ, ಪ್ರಾಮಾಣಿಕವಾಗಿ ಅವರಲ್ಲಿ ಅಂತಹ ಭಾವ ಇರುತ್ತದೆಯೋ ಅವರಿಗೆ ತಮ್ಮತನದ ಸಾಕ್ಷಾತ್ಕಾರವಾಗಿಲ್ಲವೆಂದೇ ಅರ್ಥ.

ತಮ್ಮತನದ ಅರಿವುಳ್ಳವರು ತಮ್ಮತನವನ್ನು ರೂಪುಗೊಳಿಸಿರುವ ಮೌಲ್ಯ ಮತ್ತು ಗುಣಗಳ ಅನುಸಾರವಾಗಿ ತಾವು ಗಮನಿಸುವ ಮಹಾನ್ ವ್ಯಕ್ತಿಗಳ, ತಮ್ಮ ಸಹಜೀವಿಗಳ, ಗುರುಗಳ ಇತ್ಯಾದಿ ಬೋಧನೆ ಮಾಡುವ ಸ್ಥಾನದಲ್ಲಿರುವವರ ಗುಣಗಳನ್ನು, ಸಲಹೆಗಳನ್ನು, ಉದಾಹರಣೆಗಳನ್ನು ಅನುಮೋದಿಸುತ್ತಾರೆ. ಹಾಗೆ ಅನುಮೋದಿಸುವ ಮೂಲಕ ತಮ್ಮ ತನ್ನತನದಲ್ಲಿ ಇರುವ ಅದೇ ಮಾದರಿಯ ಗುಣ ಸ್ವಭಾವಗಳನ್ನು ಗಟ್ಟಿಗೊಳಿಸಿಕೊಳ್ಳುತ್ತಾರೆ.

ತಮ್ಮತನದ ಗುಣ ಸ್ವಭಾವಗಳಿಗೆ ಪೂರಕವಾಗಿರುವ ವಿಷಯಗಳನ್ನು ಅವರು ಎಲ್ಲಿಂದಾದರೂ, ಯಾರಿಂದಲಾದರೂ ಅವರು ಹೆಕ್ಕಿಕೊಳ್ಳುವರು. ಆದರೆ ಯಾವುದೇ ನಿರ್ಧಿಷ್ಟ ವ್ಯಕ್ತಿಗೆ ಅವರು ಸೀಮಿತವಾದರೆ ಅಥವಾ ವ್ಯಕ್ತಿಪೂಜೆ ಮಾಡುತ್ತಿದ್ದಾರೆಂದರೆ ಅವರು ತಮ್ಮತನದ ಸಾಕ್ಷಾತ್ಕಾರವನ್ನು ಪಡೆದಿಲ್ಲವೆಂದೋ ಅಥವಾ ತಮ್ಮತನವನ್ನು ರೂಪಿಸಿಕೊಳ್ಳುವುದರಲ್ಲಿ ಗೊಂದಲದಿಂದ ಕೂಡಿದ್ದಾರೆಂದೋ ತಿಳಿಯಬಹುದು.

ತಮ್ಮತನವೆನ್ನುವುದೇ ನೈತಿಕ ಮೌಲ್ಯ, ನಿರ್ಧಿಷ್ಟ ಗುಣಗಳಿಂದ ರೂಪುಗೊಂಡಿರುವುದು. ಯಾರೋ ಒಬ್ಬ ನಟರಾಗಲಿ, ರಾಜಕಾರಣಿಯಾಗಲಿ, ಸಾಹಿತಿಯಾಗಲಿ, ಕಲಾವಿದನಾಗಲಿ, ಅವರವರತನದ ಅಭಿವ್ಯಕ್ತಿಯಾಗಿ ತಮ್ಮ ಕ್ಷೇತ್ರದಲ್ಲಿ ತಮ್ಮ ಕೆಲಸದ ಮೂಲಕ ವ್ಯಕ್ತಪಡಿಸಿರುತ್ತಾರೆ.ಅವರು ಯಾವುದೇ ರೀತಿಯ ಕೊಡುಗೆಗಳನ್ನು ನಾಡು ನುಡಿ ಮತ್ತು ಸಮಾಜಕ್ಕೆ ಕೊಟ್ಟರೂ ಅವರ ಕೊಡುಗೆಗಳನ್ನು ಸ್ವೀಕರಿಸುವ ರೀತಿಯಲ್ಲಿ ಮತ್ತು ಕೊಟ್ಟಿರುವ ಅವರನ್ನು ಗೌರವಿಸುವ ರೀತಿಯಲ್ಲಿ ಉನ್ಮತ್ತನಾಗಿ ಮಾರು ಹೋಗುವ ಸಾಮೂಹಿಕ ಸನ್ನಿಯನ್ನು ಹೊಂದಿರುವುದಿಲ್ಲ. ಇಷ್ಟು ತಿಳಿದುಕೊಳ್ಳೋಣ.

ತನ್ನತನದ ಸಾಕ್ಷಾತ್ಕಾರವಾಗಿರುವವನು ಸಾಮೂಹಿಕ ಸನ್ನಿಯಿಂದ, ಜನಪ್ರಿಯ ಅನುಸರಣೆಗಳಿಂದ ಮುಕ್ತನಾಗಿರುತ್ತಾರೆ. ಉತ್ಪ್ರೇಕ್ಷೆಗಳ ಅಮಲಿನಲ್ಲಿ ಮೈ ಮರೆಯುವುದಿಲ್ಲ. ಮಾಸ್ತಿ ಕನ್ನಡದ ಆಸ್ತಿ ಎಂಬುದೊಂದು ಮಾತು. ಅದನ್ನು ಕೇಳಿದಾಗ ಈ ತನ್ನತನದ ವ್ಯಕ್ತಿಯೊಬ್ಬ ಲೇಖಕನಾಗಿದ್ದರೆ ಅವನ ಆಂತರಿಕ ಪ್ರತಿಕ್ರಿಯೆಗಳು ಹೀಗಿದ್ದಿರಬಹುದು. “ಕನ್ನಡ ನುಡಿಯ ಅಸ್ತಿತ್ವಕ್ಕೆ ಅವರು ನೀಡಿರುವ ಕೊಡುಗೆಗಳು ನಿಜಕ್ಕೂ ಗೌರವಪೂರ್ಣವೇ. ಆದರೆ ಅವನ್ನು ಪ್ರಶಂಸಿಸುವ ಉತ್ಪ್ರೇಕ್ಷೆಯ ಧ್ವನಿ ಇದು. ಆಸ್ತಿ ಎಂದು ಕರೆಯಿಸಿಕೊಳ್ಳದಿದ್ದರೂ ಇತರ ಅನೇಕಾನೇಕರ ಕೊಡುಗೆಗಳು ಕನ್ನಡಕ್ಕೆ ಇವೆ. ಇದರಲ್ಲಿ ನಾನೂ ಹೊರತಲ್ಲ.”

ಏಕೈಕ, ನ ಭೂತೋ ನ ಭವಿಷ್ಯತಿ, ಹಿಂದೆ ಹುಟ್ಟಿಲ್ಲ ಮುಂದೆ ಹುಟ್ಟುವುದಿಲ್ಲ, ಸಮಸ್ತರ ಹೃದಯ ನಿವಾಸಿ, ನಮ್ಮೆಲ್ಲರ ಆಶಾಕಿರಣ; ಇತ್ಯಾದಿಗಳು ಅವರ ಪದ ಭಂಡಾರದಲ್ಲಿರುವುದಿಲ್ಲ. ಬಸವಣ್ಣಾ ರಾಜಾ ಬಿಜ್ಜಳನ ಗೌರವಿಸಿದರೂ, ಪ್ರೀತಿಸಿದರೂ ಅವನ ಅಧಿಕಾರದ ಹಂಗನ್ನು ತಿರಸ್ಕರಿಸಿದ್ದನ್ನು ನೆನಪಿಸಿಕೊಳ್ಳೋಣ. ಎನಗಿಂತ ಕಿರಿಯರಿಲ್ಲ ಎನ್ನುವ ಬಸವಣ್ಣ ತನ್ನ ಅನ್ನ, ಅಧಿಕಾರ ಮತ್ತು ಅಂತಸ್ತಿಗೆ ಆಶ್ರಯನಾಗಿರುವ ಬಿಜ್ಜಳನ ಓಲೈಸುವ ಹೊಗಳುಭಟ್ಟಂಗಿಯಂತಹ ಕವಿಯಾಗಿ ವಚನಗಳನ್ನು ರಚಿಸಲಿಲ್ಲ. ತಮ್ಮತನವನ್ನು ವ್ಯವಸ್ಥೆಯ ಅಧೀನಕ್ಕೆ ಬಿಟ್ಟುಕೊಡಲು ಸಿದ್ಧರಲ್ಲದ ಬಸವಣ್ಣ ಸಾಯಲೂ ಸಿದ್ಧವಾಗಿ ಮರಣವೇ ಮಹಾನವಮಿ ಎಂದರು.

ಜೋಳವಾಳಿಯವ ನಾನಲ್ಲ, ವೇಳವಾಳಿಯವ ನಾನಯ್ಯ” ಎನ್ನುವುದು ಅವರತನದ ಧೋರಣೆ.
‘ತನ್ನ ಜೀವಿತಕ್ಕೆ ಆಧಾರವಾಗಿರುವ ಆಹಾರಾದಿಗಳನ್ನು ಕೊಡುವ ಧಣಿಗಾಗಿ ಆತ್ಮಾರ್ಪಣೆ ಮಾಡಿಕೊಳ್ಳುವ ಪದ್ಧತಿಯನ್ನು ಜೋಳವಾಳಿ ಎಂದೂ, ಯುಕ್ತ ಸಮಯಕ್ಕೆ ಸರಿಯಾಗಿ ನೆರವಿಗೆ ಬರುವ ಪದ್ಧತಿಯನ್ನು ವೇಳವಾಳಿ ಎಂದೂ ಕರೆಯಲಾಗುತ್ತಿತ್ತು.’ ಒಟ್ಟಿನಲ್ಲಿ ಇಷ್ಟು ತಿಳಿಯೋಣ ತನ್ನತನದ ಮನುಷ್ಯರು ವೇಳವಾಳಿಯವರೇ ಹೊರತು ಜೋಳವಾಳಿಯವರಲ್ಲ.

ಗುಂಪಿನ ಧ್ವನಿಯಲ್ಲ

ಎಲ್ಲರ ಮಾತನ್ನು ತನ್ನದು ಎಂಬಂತೆಯೂ, ತನ್ನ ಮಾತೇ ಎಲ್ಲರದು ಎಂಬಂತೆಯೂ ತನ್ನತನದ ಅರಿವುಳ್ಳವರು ಹೇಳುವುದಿಲ್ಲ. ಒಂದು ವೇಳೆ ಸಮೂಹಗಳು, ಸಂಘಟನೆಗಳು ಧ್ವನಿ ಎತ್ತಿದರೆ ಅವು ಸಾಂಘಿಕವಾಗಿವೆ ಎಂದೋ, ಅವರ ಬೆಂಬಲ ತನಗೆ ಬೇಕಾಗುತ್ತದೆ ಎಂದೋ ಧ್ವನಿಗೂಡಿಸುವುದಿಲ್ಲ. ತಾವು ಅದನ್ನು ಒಪ್ಪಿದ್ದರೆ ಮಾತ್ರವೇ ದನಿಗೂಡಿಸುತ್ತಾರೆ ಮತ್ತು ತಮ್ಮದೇ ಆದ ರೀತಿಯಲ್ಲಿ ಅನುಮೋದಿಸುತ್ತಾರೆ. ಸಂಘಟನೆಗಳನ್ನು ಮಾಡಿದರೂ ಅದರಲ್ಲಿ ಪ್ರಜಾತಂತ್ರಾತ್ಮಕ ರೀತಿಯನ್ನು ಅನುಸರಿಸುತ್ತಾರೆ.

ನಾಯಕನೆಂದು ಅವರಿವರೆಂದರೂ ತಾನು ತನ್ನ ವೈಯಕ್ತಿಕ ಬದ್ಧತೆಯಿಂದ ಹೊತ್ತಿರುವ ಸಂಕಲಿತ ಜವಾಬ್ದಾರಿಯ ಮುಂದಾಳು, ಮೊದಲು ಕೆಲಸ ಮಾಡಬೇಕಾಗಿರುವ ಆಳೆಂಬ ಅರಿವಿರುತ್ತದೆಯೇ ಹೊರತು, ಹಲವರನ್ನು ಅಧೀನದಲ್ಲಿಟ್ಟುಕೊಂಡಿರುವ ನಾಯಕ ತಾನು ಎಂಬ ಮೇಲರಿಮೆಯ ಭಾವ ಇರುವುದಿಲ್ಲ. ಅಷ್ಟೇ ಅಲ್ಲ, ತಮ್ಮ ಒಲವು ಮತ್ತು ನಿಲುವುಗಳನ್ನು, ಅಭಿಪ್ರಾಯಗಳನ್ನು ಸಾಮಾನ್ಯೀಕರಿಸುವುದಿಲ್ಲ. ಮತ್ತು ಯಾವುದೇ ಸಾರ್ವಜನಿಕವಾದ ವಿಷಯಗಳಲ್ಲಿ ತಮ್ಮ ಅಭಿಪ್ರಾಯಗಳನ್ನು ಹೇಳುತ್ತಾರೆಯೇ ಹೊರತು ನಿರ್ಣಯಗಳನ್ನು ತೆಗೆದುಕೊಳ್ಳುವುದಿಲ್ಲ.

ತಮ್ಮತನದ ಅರಿವಿರುವವರು ಸದಾ ಇತರರಿಗೂ ಅವರತನವೊಂದಿರುತ್ತದೆ ಎಂಬ ಅರಿವಿನಲ್ಲಿ ಜಾಗೃತವಾಗಿರುತ್ತಾರೆ. ತಮ್ಮತನಕ್ಕೆ ಬದ್ಧವಾಗಿರುವವರು ಇತರರ ತಮ್ಮತನವನ್ನೂ ಗೌರವಿಸುತ್ತಾರೆ. ತಮ್ಮದನ್ನೇ ಹೇರುವ ಮತ್ತು ಒಪ್ಪಿಸುವ ಧಾವಂತ ಎಂದಿಗೂ ಅವರಲ್ಲಿ ಇರುವುದಿಲ್ಲ. ಒಂದು ವೇಳೆ ತಮ್ಮ ಮಾತು ಬಿದ್ದು ಹೋಗುವ ಅಥವಾ ನಗಣ್ಯವಾಗುವುದನ್ನು ಕಂಡರೂ ಭಾವೋದ್ರೇಕಗೊಳ್ಳುವುದಿಲ್ಲ.

ನಾನೆಷ್ಟು ಕಾಳಜಿ ಮತ್ತು ಪ್ರೀತಿಯಿಂದ ವಿಷಯವನ್ನು ಪ್ರಸ್ತುತ ಪಡಿಸಿದ್ದೇನೆ. ಆದರೆ ನೀವು ಅದನ್ನು ಪರಿಗಣಿಸಿಯೇ ಇಲ್ಲ. ನನಗೆ ತುಂಬಾ ನೋವಾಯಿತು. ದಯಮಾಡಿ ಇದನ್ನು ಪರಿಶೀಲಿಸಿ, ಒಪ್ಪಿಕೊಳ್ಳಬೇಕೆಂದು ವಿನಯಪೂರ್ವಕವಾಗಿ ಆಗ್ರಹಿಸುತ್ತೇನೆ.” ಇಂತವೆಲ್ಲಾ ಅವರ ವಾಕ್ಯಗಳಲ್ಲ. ಮನವರಿಕೆ ಮಾಡಿಕೊಡುವ, ಮನದಟ್ಟು ಮಾಡಿಸುವ, ಮನವೊಲಿಸುವ ಸಂದರ್ಭಗಳು ಬಂದಾಗ ಅದಕ್ಕೆ ತಮ್ಮ ಪ್ರಯತ್ನವನ್ನು ಮಾಡುವರು. ಆದರೆ ತಮ್ಮತನವನ್ನು ಒತ್ತೆಯಿಟ್ಟಲ್ಲ. ಸರಳವಾಗಿ ಹೇಳುವುದಾದರೆ ಬಕೆಟ್ ಹಿಡಿಯುವುದಿಲ್ಲ.

ಎಲ್ಲವನ್ನೂ, ಎಲ್ಲರನ್ನೂ ಭಳಿರೇ ಭಳಿರೇ ಎಂದಂತೂ ಮೆಚ್ಚುವ ನಟನೆ ಮಾಡುತ್ತಾ ಅವರ ಮೆಚ್ಚುಗೆಗೆ ಪಾತ್ರರಾಗಲು ಯತ್ನಿಸುವುದಿಲ್ಲ.  “ಸೂಳೆಗೆ ಹುಟ್ಟಿದ ಕೂಸಿನಂತೆ ಆರನಾದಡೆಯೂ ‘ಅಯ್ಯಾ ಅಯ್ಯಾ’ ಎನಲಾರೆ” ಎನ್ನುವ ಸ್ವಾಭಿಮಾನ. ಜೊತೆಗೆ, “ಚೆನ್ನಯ್ಯನೆಮ್ಮಯ್ಯನು, ಚೆನ್ನಯ್ಯನ ಮಗ ನಾನು. ಕೂಡಲಸಂಗನ ಮಹಾಮನೆಯಲಿ ಧರ್ಮಸಂತಾನಿ ಭಂಡಾರಿ ಬಸವಣ್ಣನು” ಎಂದು ಹೇಳಿಕೊಳ್ಳುವ ತನ್ನತನದ ಬದ್ಧತೆ.

ನನ್ನ ಭಾಷೆ ನನ್ನದು

ಫೇಸ್ಬುಕ್ ಮತ್ತು ವಾಟ್ಸಾಪ್‍ಗಳ ಅಂತರ್ಜಾಲ ವೇದಿಕೆಗಳಿಂದಾಗಿ ಸಾಮಾನ್ಯ, ಅಸಮಾನ್ಯ ಎನ್ನದೇ, ಪಂಡಿತ ಪಾಮರ ಎನ್ನದೇ ಯಾರಾದರೂ ತಮ್ಮ ಅಭಿಪ್ರಾಯಗಳನ್ನು ಮತ್ತು ಆಲೋಚನೆಗಳನ್ನು ಪ್ರಕಟಿಸಲು ಮತ್ತು ತಮ್ಮತನವನ್ನು ಪ್ರದರ್ಶಿಸಲು ಅವಕಾಶವಿದೆ. ಸಾಮಾನ್ಯವಾಗಿ ಇತರೇ ವಸ್ತುಗಳಿಗೆ ಮತ್ತು ವ್ಯವಸ್ಥೆಗಳಲ್ಲಿ ಇರುವಂತೆ ಇದರಲ್ಲಿಯೂ ಅನುಕೂಲಗಳು ಅನಾನುಕೂಲಗಳೂ ಇವೆ. ಬಳಸುವ ಬಗೆಯು ಅವರವರ ವಿವೇಚನೆಗೆ ಬಿಟ್ಟಿರುವುದೇ ಆಗಿರುತ್ತದೆ.

ವಿವೇಚನೆ ಎಂದರೇನು? ನಿಶ್ಚಿತವಾದ ತಿಳುವಳಿಕೆ ಮತ್ತು ಸ್ಪಷ್ಟವಾದ ಅರಿವು ಇದ್ದು ಅದನ್ನು ಸಾರಾಸಾರವನ್ನು ತಿಳಿದು, ಉಚಿತ ಅನುಚಿತವಾದುದು ಯಾವುದೆಂದು ಬಗೆದು ಆಲೋಚಿಸುವ, ಗ್ರಹಿಸುವ, ಪ್ರಕಟಗೊಳಿಸುವ, ಪ್ರದರ್ಶಿಸುವ ಒಬ್ಬನ ವಿವೇಕ. ತನ್ನತನದ ಸಾಕ್ಷಾತ್ಕಾರವುಳ್ಳವರಿಗೆ ಈ ವಿವೇಚನೆ ಅಥವಾ ವಿವೇಕ ಎನ್ನುವುದು ಸಹಜವಾದ ಗುಣವಾಗಿರುತ್ತದೆ ಅಥವಾ ಆಗಿರಬೇಕು.

ಫೇಸ್ಬುಕ್ಕಿನಲ್ಲಿ ಕೆಲವು ವಿಷಯಗಳು ಚರ್ಚೆಯಾಗುತ್ತಿರುತ್ತವೆ. ವಿಷಯದ ಪರವಾಗಿರುವವರೂ ಮತ್ತು ವಿರೋಧವಾಗಿರುವವರೂ ತಮ್ಮ ತಮ್ಮ ವಾದಗಳನ್ನು, ವಿಷಯಗಳನ್ನು ಮತ್ತು ಗ್ರಹಿಕೆಗಳನ್ನು ಪ್ರದರ್ಶಿಸುತ್ತಿರುತ್ತಾರೆ. ಆದರೆ ಅವರ ಮಾತುಗಳಲ್ಲಿ ಬಳಕೆಯಾಗುವ ಭಾಷೆಯನ್ನು ನೋಡಿದರೆ ಅವರ ಆಲೋಚನೆ, ಗ್ರಹಿಕೆ ಮತ್ತು ಅಧ್ಯಯನಗಳಿಗಿಂತ, ಅಥವಾ ಒಲವು ಮತ್ತು ನಿಲುವುಗಳಿಗಿಂತ ಅವರವರ ಪೂರ್ವಾಗ್ರಹಗಳು ಮತ್ತು ಮಾನಸಿಕ ಸಮಸ್ಯೆಗಳು ಪ್ರದರ್ಶನವಾಗುತ್ತಿರುತ್ತವೆ. ಆ ಪ್ರದರ್ಶನವಾಗುವುದು ಅವರು ಬಳಸುವ ಭಾಷೆಯಿಂದ.

ಬಹಳಷ್ಟು ಸಂದರ್ಭಗಳಲ್ಲಿ ವಿಷಯದ ವಿರೋಧಿಗಳೂ ಮತ್ತು ಪರವಾಗಿರುವವರಿಬ್ಬರೂ ಒಂದೇ ಭಾಷೆಯಲ್ಲಿ ಮಾತಾಡುತ್ತಿರುತ್ತಾರೆ. ಪರಸ್ಪರ ನಿಂದನೆಗಳಲ್ಲಿ, ಅವಹೇಳನಗಳಲ್ಲಿ ತೊಡಗಿರುವುದಲ್ಲದೇ ಅಭಿಪ್ರಾಯಗಳನ್ನು ಹೇಳುವ ಬದಲು ನಿರ್ಣಯಗಳನ್ನು ನೀಡುತ್ತಿರುತ್ತಾರೆ. ಅವುಗಳಲ್ಲಿ ಅವರು ವಿಷಯದ ಬಗ್ಗೆ ತಳೆದಿರುವ ಒಲವು ನಿಲುವುಗಳಿಗಿಂತ ವ್ಯಕ್ತಿಯಲ್ಲಿರುವ ಮೇಲರಿಮೆ, ಆತ್ಮರತಿ, ಕೀಳರಮೆ, ಬೈಪೋಲಾರ್ ಸಮಸ್ಯೆ, ಬಾರ್ಡರ್ ಲೈನ್ ಡಿಸಾರ್ಡರ್, ತನ್ನತನದ ಅರಿವಿಲ್ಲದೇ ಸಮೂಹ ಸನ್ನಿಗೆ ಒಳಗಾಗಿರುವ ಲಕ್ಷಣಗಳೇ ಪ್ರದರ್ಶಿತವಾಗುತ್ತಿರುತ್ತವೆ.

ಇಲ್ಲಿ ಗಮನಿಸಿ ನೋಡಿ. ಪರ ಅಥವಾ ವಿರೋಧವೇನೂ ಇಲ್ಲದ ಮೂರನೆಯ ವ್ಯಕ್ತಿಯೊಬ್ಬ ಈ ಚರ್ಚೆಯನ್ನು ಗಮನಿಸುತ್ತಿದ್ದಾಗ ಅವನಿಗೆ ಇಬ್ಬರ ಬಗ್ಗೆಯೂ ಒಲವುಂಟಾಗುವುದಿಲ್ಲ. ಬದಲಿಗೆ ಇಬ್ಬರ ಬಗ್ಗೆಯೂ ಜಿಗುಪ್ಸೆ ಹುಟ್ಟುತ್ತದೆ. ಹೀಗಾಗಿ ಅವನು ವಿಷಯದ ಪರವಾಗಿಯೂ ಮನವೊಲಿಯುವುದಿಲ್ಲ, ವಿರುದ್ಧವಾಗಿಯೂ ಮನವರಿಕೆಯಾಗುವುದಿಲ್ಲ. ಒಟ್ಟಾರೆ ಎರಡೂ ವರ್ಗಗಳ ನಡುವಿನ ಒಂದು ಸಂಘರ್ಷವಾಗಿ ಕಾಣುತ್ತದೆ.

ತನ್ನತನದ ಅರಿವಿರುವವರು ಎಂದಿಗೂ ತಮ್ಮ ಭಾಷೆಯನ್ನು ಸಡಿಲಬಿಡುವುದಾಗಲಿ, ತಾವೇ ಏಕಮೇವಾದ್ವಿತೀಯವೆಂಬಂತೆ ನಿರ್ಣಯ ತೆಗೆದುಕೊಂಡಂತೆ ಮಾತಾನಾಡುವುದಾಗಲಿ ಮಾಡುವುದಿಲ್ಲ. ನಿಂದನೆಯಂತೂ ದೂರದ ಮಾತು. ಉದಹರಿಸುವುದಾದರೆ, ಎಡಪಂಥ ಮತ್ತು ಬಲಪಂಥದವರು ಯಾವುದೋ ವಿಚಾರದ ಮೇಲೆ ಚರ್ಚೆ ಮಾಡುತ್ತಿದ್ದಾರೆಂದಿಟ್ಟುಕೊಳ್ಳಿ. ಯಾವ ಪಂಥದವರೂ ಅಲ್ಲದ ಬಹುದೊಡ್ಡ ಸಮೂಹವೊಂದು ಅದನ್ನು ನೋಡುತ್ತಿದೆ ಎಂದಿಟ್ಟುಕೊಳ್ಳಿ. ಇಬ್ಬರೂ ಬಳಸುವ ಭಾಷೆಗಳಲ್ಲಿ ಯಾರದು ಮುತ್ತಿನ ಹಾರದಂತೆ ತಾರ್ಕಿಕವಾಗಿ ಪೋಣಿಸಿಕೊಂಡು ಆಕರ್ಷಕವಾಗಿರುತ್ತದೋ, ಮಾಣಿಕ್ಯದ ದೀಪ್ತಿಯಂತೆ ಪ್ರಜ್ಞೆಯ ಬೆಳಕನ್ನು ಕೊಡುವುದೋ, ಸ್ಫಟಿಕದ ಸಲಾಕೆಯಂತೆ ವಿಷಯ ಸ್ಪಷ್ಟವಾಗಿ ಮತ್ತು ನೇರವಾಗಿರುತ್ತದೋ ಆಗ ಅಹುದಹುದು ಎಂದು ಒಪ್ಪಲಾಗುತ್ತದೆ.

ಅಲ್ಲಿ ಯಾರು ಘನತೆಯನ್ನು ಪ್ರದರ್ಶಿಸುತ್ತಾರೋ ಅವರ ಮಾತು ಘನವಾಗಿರುತ್ತದೆ. ತನ್ನತನದ ಘನತೆಯನ್ನು ಅರಿತವರು ಲಘುವಾದ ಭಾಷೆಗಳಿಂದ ಎದುರಾಳಿಯ ನಿಂದನೆಗಳನ್ನು ಮಾಡುತ್ತಾ ತನ್ನತನದ ಮೌಲ್ಯವನ್ನು, ತನ್ನತನವೆಂಬುದು ಬೆಂಬಲಿಸುವ ಮತ್ತು ಪೋಷಿಸುವ ವಿಷಯದ ಗೌರವವನ್ನು ಕಡೆಗಣಿಸುವುದಿಲ್ಲ.

ಬಹಳ ಎಚ್ಚರಿಕೆಯಿಂದ, ವಿವೇಕ ಮತ್ತು ವಿವೇಚನೆಗಳಿಂದ ಭಾಷೆಯನ್ನು ಬಳಸಲಾಗುತ್ತದೆ. ಏಕೆಂದರೆ ಅವರಿಗೆ ಸ್ಪಷ್ಟವಾಗಿ ಗೊತ್ತಿರುತ್ತದೆ ತಾವು ಗೌರವಿಸುವ ಮೌಲ್ಯವು, ಅವುಗಳಿಂದ ರೂಪುಗೊಂಡಿರುವ ತಮ್ಮತನವು ಅಮೂರ್ತವಾದದ್ದು. ಹಾಗೂ ಅದನ್ನು ಪ್ರಕಟಿಸುವ ಮೂರ್ತಸ್ವರೂಪವೆಂದರೆ ಭಾಷೆ. ವ್ಯಕ್ತಿಯು ಉಪಯೋಗಿಸುವ ಭಾಷೆ ಮತ್ತು ಪರಿಭಾಷೆಗಳ ಆಧಾರದಲ್ಲಿ ಆತನು ತನ್ನತನವನ್ನು ಅದೆಷ್ಟರಮಟ್ಟಿಗೆ ಪ್ರದರ್ಶಿಸುತ್ತಾನೆ, ಗೌರವಿಸಿಕೊಳ್ಳುತ್ತಾನೆ ಎಂಬುದು ನಿರ್ಣಯವಾಗುತ್ತದೆ.

ಬಹಳಷ್ಟು ಸಲ ಹೊಟ್ಟನ್ನು ತೂರುವುದೇ ಆಗಿರುತ್ತದೆ. ಕಾಳನ್ನು ಎರಚುವುದಾಗಿರುವುದೇ ಇಲ್ಲ. ವಿವೇಕಿಯು ಬೀಜಗಳನ್ನು ಅಥವಾ ಕಾಳುಗಳನ್ನು ಎರಚಬೇಕು. ಏಕೆಂದರೆ ಅವು ಮೊಳೆತಾವು, ಬೆಳೆದಾವು, ಮುಂದೊಂದು ದಿನ ಬೆಳೆ ಕೊಟ್ಟಾವು. ತನ್ನತನದ ಸತ್ಯವೆಂಬುದು ಕೂರಲಗಾಗಿದ್ದರೂ ಅದರಿಂದ ತೊಂದರೆ, ನಷ್ಟವಾಗಬಹುದೆಂಬ ಭಯವಿಲ್ಲದೇ ಅದನ್ನು ಹಿಡಿದಿರುವುದೇ ತನ್ನ ಗೆಲುವು ಎಂದು ತನ್ನತನದ ಪ್ರಜ್ಞೆಯುಳ್ಳವರು ಅರಿತಿರುತ್ತಾರೆ. ಅವರಿಗೆ ಸೋಲಿನ ಭಯವೋ ಆತಂಕವೋ ಇರುವುದಿಲ್ಲ. ತನ್ನ ದೌರ್ಬಲ್ಯಗಳ ಪ್ರದರ್ಶನವಾಗುವುದು ಅವರಿಗೆ ಬೇಕಿಲ್ಲ.

ಜಂಬೂದ್ವೀಪ ನವಖಂಡ ಪೃಥ್ವಿಯೊಳಗೆ ಕೇಳಿರಯ್ಯಾ,
ಎರಡಾಳಿನ ಭಾಷೆಯ ಕೊಲುವೆನೆಂಬ ಭಾಷೆ ದೇವನದು
ಗೆಲುವೆನೆಂಬ ಭಾಷೆ ಭಕ್ತನದು
ಸತ್ಯವೆಂಬ ಕೂರಲಗನೆ ಹಿಡಿದುಕೊಂಡು ಸದ್ಭಕ್ತರು ಗೆದ್ದರು ಕಾಣಾ ಕೂಡಲಸಂಗಮದೇವಾ.

ಒಟ್ಟಾರೆ ತನ್ನತನವ ಅರಿತವನ ಭಾಷೆ ಕೊಲುವೆನೆಂಬುದಾಗಿರುವುದಿಲ್ಲ. ಬದಲಿಗೆ ಗೆಲುವೆನೆಂದಾಗಿರುತ್ತದೆ. ಈ ಗೆಲುವೆಂಬುದು ಸವಾಲಿಗೆ ಸವಾಲೊಡ್ಡುವುದಲ್ಲ. ತನ್ನತನವನ್ನು ಕಳೆದುಕೊಳ್ಳುವ ಸೋಲನ್ನುಣ್ಣದಿರುವುದು. ಏಕೆಂದರೆ, “ನುಡಿಯೊಳಗಾಗಿ ನಡೆಯದಿದ್ದರೆ” ತಮ್ಮ ಆತ್ಮಸಾಕ್ಷಿಯು ಒಲಿಯುವುದಿಲ್ಲ ಎಂಬ ಅರಿವು ಅವರಿಗಿರುತ್ತದೆ.

(ಮುಂದುವರಿಯುವುದು)

ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂತರಂಗ

ಮರೆಯಾದ ಅಪೂರ್ವ ಚಿತ್ರಕಲಾ ಪ್ರತಿಭೆ ‘ಶೋಭಾ ಕರಣಿಕ್’

Published

on

ಶೋಭಾ ಕರಣಿಕ್
  • ಡಾ.ಎನ್.ಕೆ.ಪದ್ಮನಾಭ, ಸಹಾಯಕ ಪ್ರಾಧ್ಯಾಪಕರು, ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ,ಎಸ್.ಡಿ.ಎಂ ಸ್ನಾತಕೋತ್ತರ ಕೇಂದ್ರ,ಉಜಿರೆ

ವರು ಬಿಡಿಸುತ್ತಿದ್ದ ರೇಖೆಗಳು ನಮ್ಮ ದೇಶೀ ಸಂಸ್ಕೃತಿಯ ವಕ್ತಾರಿಕೆಯ ಪಾತ್ರ ನಿರ್ವಹಿಸುತ್ತಿದ್ದವು. ಕನ್ನಡದ್ದೇ ಆದ ಕಲಾತ್ಮಕ ಪರಂಪರೆಯನ್ನು ಸೂಕ್ಷ್ಮವಾಗಿ ಗ್ರಹಿಸಿದ್ದ ಅವರ ಚಿತ್ರಗಳು ಜೀವಂತಿಕೆಯ ಗುಣಲಕ್ಷಣದೊಂದಿಗೆ ಕಂಗೊಳಿಸುತ್ತಿದ್ದವು.

ಸಾಂಪ್ರದಾಯಿಕ ಚಿತ್ರಶೈಲಿಯನ್ನು ಆಧುನಿಕ ಅಗತ್ಯಗಳಿಗೆ ತಕ್ಕಂತೆ ಮಣಿಸಿ ಪರಂಪರೆಯೊಳಗೇ ಅಡಗಿದ್ದ ಮೌಲಿಕ ಮಾದರಿಗಳನ್ನು ಮನಗಾಣಿಸುವ ಶ್ರದ್ಧೆಯೊಂದಿಗೇ ಅವರು ಚಿತ್ರವಿನ್ಯಾಸ ರೂಪಿಸುತ್ತಿದ್ದರು. ಇನ್ಸ್ಟಾಗ್ರಾಮ್, ಫೇಸ್‌ಬುಕ್ ಮತ್ತಿತರ ಮಾಧ್ಯಮಗಳ ಮೂಲಕ ತಮ್ಮ ಚಿತ್ರಗಳನ್ನು ಕಾಣಿಸುತ್ತಿದ್ದರು. ಪರಂಪರೆ ಮತ್ತು ವರ್ತಮಾನವನ್ನು ಬೆಸೆದು ಹೊಸ ಬಗೆಯ ಚಿತ್ರಪ್ರಯೋಗಗಳನ್ನು ನಡೆಸುವ ಹುಮ್ಮಸ್ಸಿನೊಂದಿಗೆ ಚಿತ್ರಕಲಾಯಾನ ಮುಂದುವರೆಸಿದ್ದರು. ಅವರ ಹೆಸರು ಶೋಭಾ ಕರಣಿಕ್.

ಇತ್ತೀಚೆಗಷ್ಟೇ ಅವರ ಚಿತ್ರಕಲಾಯಾನ ನಿಂತಿತು. ಅವರ ನಿಧನವು ವಿನೂತನವಾದ ಪ್ರಯೋಗಶೀಲ ಚಿತ್ರಕಲಾ ಸಾಧ್ಯತೆಗಳನ್ನು ತಡೆದು ನಿಲ್ಲಿಸಿತು. ಪುರಾಣದ ಕಥನ ಪ್ರಸಂಗಗಳಲ್ಲಿ ಉಲ್ಲೇಖಿತ ದೇವರು-ದೇವತೆಗಳ ಅಸ್ಮಿತೆ ಮತ್ತು ದೇಸೀ ಸಂಸ್ಕೃತಿಯನ್ನು ಬಿಂಬಿಸುವ ವಿನ್ಯಾಸಗಳನ್ನು ಸಮನ್ವಯಗೊಳಿಸಿ ಚಿತ್ರಕಲೆಗೆ ಹೊಸ ಆಯಾಮ ತಂದುಕೊಟ್ಟ ಪ್ರತಿಭೆಯಾಗಿ ಶೋಭಾ ಕರಣಿಕ್ ಅವರದ್ದು ವಿಶೇಷ ವ್ಯಕ್ತಿತ್ವವಾಗಿತ್ತು. ಮ್ಯೂರಲ್ ಪೇಂಟಿಂಗ್‌ನಲ್ಲಿ ಅವರಿಗಿದ್ದ ಪರಿಣತಿ, ಉತ್ತರ ಕನ್ನಡದ ಕಾವಿ ಕಲೆಯ ಕುರಿತಾದ ವಿಸ್ತೃತ ಜ್ಞಾನವು ಚಿತ್ರಕಲೆಯನ್ನು ಉನ್ನತೀಕರಿಸುವುದಕ್ಕೆ ಅವರಿಗೆ ನೆರವಾಗಿತ್ತು.

ಕಲೆಯ ಜೊತೆಗಿನ ಅನುಸಂಧಾನದ ಕ್ಷಣಗಳು ಅಪೂರ್ವ. ಒಂದು ನಿರ್ದಿಷ್ಟ ನಿರ್ಣಾಯಕ ಸಂದರ್ಭ, ಸಮಯದಲ್ಲಿ ಕಲೆಯೊಂದು ವ್ಯಕ್ತಿತ್ವವನ್ನು ಪ್ರಭಾವಿಸಿ ಸೃಜನಶೀಲತೆಯ ಹಸಿವನ್ನು ನೆಲೆಗೊಳಿಸುವುದಕ್ಕೆ ಪ್ರೇರಣೆಯಾಗುತ್ತದೆ. ಕಲೆಯ ಪ್ರಭಾವ ಎರಡು ಬಗೆಯದ್ದು. ಸಹೃದಯರನ್ನು ತನ್ನ ಕಲಾತ್ಮಕ ಮಾದರಿಗಳಿಂದ ಸೆಳೆದು ಅವರೊಳಗೆ ವಿಶೇಷ ಅನುಭೂತಿ ಧಾರೆ ಎರೆಯುವಂಥದ್ದು ಒಂದು ಬಗೆಯಾದರೆ ಹೀಗೆ ಸೆಳೆದುಕೊಂಡು ಮತ್ತೆ ಮತ್ತೆ ಪ್ರಭಾವಿಸುತ್ತಾ ಸಹೃದಯರನ್ನೇ ಕಲಾವಿದರನ್ನಾಗಿಸುವ ಸಾಧ್ಯತೆ ಮತ್ತೊಂದು ತೆರನಾದದ್ದು.

ಈ ಕಾರಣಕ್ಕಾಗಿಯೇ ಕಲಾತ್ಮಕ ಸಂಭವನೀಯತೆಯು ಅನನ್ಯವೆನ್ನಿಸಿಕೊಂಡಿದೆ. ಇಂಥ ಅನನ್ಯತೆಯೊಂದಿಗೇ ಶೋಭಾ ಕರಣಿಕ್ ಗುರುತಿಸಿಕೊಂಡಿದ್ದರು. ಅವರು ಓದಿದ್ದು ತಾಂತ್ರಿಕ ವಿಜ್ಞಾನ. ಆದರೆ, ಅವರ ನಿಜದ ಪ್ರತಿಭೆ ಅಭಿವ್ಯಕ್ತವಾದದ್ದು ಚಿತ್ರಕಲೆಯ ಮೂಲಕ.

ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದ ಪರಿಸರದಲ್ಲಿ ಬೆಳೆದ ಶೋಭಾ ಕರಣಿಕ್ ಮೊದಲಿನಿಂದಲೂ ದೇಶೀ ಕಲೆಯ ಕುರಿತು ವಿಶೇಷ ಆಸಕ್ತಿಯನ್ನು ಬೆಳೆಸಿಕೊಂಡು ಬಂದಿದ್ದರು. ಹೈಸ್ಕೂಲ್ ಓದುತ್ತಿರುವಾಗಲೇ ಕಾವಿಕಲೆಯ ವಿನ್ಯಾಸ ಅವರನ್ನು ಸೆಳೆದಿತ್ತು. ಇವುಗಳನ್ನು ಮತ್ತೆ ಮತ್ತೆ ನೋಡುತ್ತಾ ಹೋದಂತೆಲ್ಲಾ ಕಾವಿ ಕಲೆಯ ಕುರಿತ ಆಕರ್ಷಣೆ ಕಲಿಕೆಯ ಹಂಬಲವಾಗಿ ಮಾರ್ಪಟ್ಟಿತು. ಉತ್ತರ ಕನ್ನಡದ ಟೆಂಪಲ್ ರ‍್ಟ್ ಪ್ರಕಾರದ ಭಾಗವಾಗಿ ಕಾವಿ ಕಲೆಯನ್ನು ಪರಿಚಯಿಸುವ ದೃಷ್ಟಿಯಿಂದ ಅವರು ರಚಿಸಿದ್ದ ತರಹೇವಾರಿ ವಿನ್ಯಾಸಗಳು ವಿವಿಧ ಚಿತ್ರಕಲಾ ಪ್ರದರ್ಶನ ಕಾರ್ಯಕ್ರಮಗಳಲ್ಲಿ ಗಮನ ಸೆಳೆದಿದ್ದವು.

ಕಾವಿ ಕಲೆಯೂ ಸೇರಿದಂತೆ ನಮ್ಮ ಸಾಂಪ್ರದಾಯಿಕ ಕಲೆಗಳು ಈ ಹಿಂದಿನ ಕಾಲದ ತಲೆಮಾರನ್ನಷ್ಟೇ ಪ್ರಭಾವಿಸಿದ್ದಲ್ಲದೇ ನಂತರದ ಹೊಸ ಪೀಳಿಗೆಯನ್ನೂ ಆಕರ್ಷಿಸುವ ಗುಣ ಹೊಂದಿವೆ. ಮೂಲ ಅಂತಃಸತ್ವಕ್ಕೆ ಧಕ್ಕೆಯೊದಗದ ಹಾಗೆ ಹೊಸ ಕಾಲದ ಅಗತ್ಯಗಳಿಗೆ ಅನುಗುಣವಾಗಿ ಈ ಸಾಂಪ್ರದಾಯಿಕ ಚಿತ್ರಕಲಾ ವಿನ್ಯಾಸಗಳನ್ನು ಮರುರೂಪಿಸಬಹುದು. ಹೊಸ ಕಾಲದಲ್ಲಿ ಅವುಗಳ ಮಹತ್ವವನ್ನು ಮನಗಾಣಿಸಬಹುದು ಎಂಬುದು ಅವರ ಆಶಯವಾಗಿತ್ತು.

ಕಲೆಯೊಂದು ಒಂದು ಕಾಲದಿಂದ ಮತ್ತೊಂದು ಕಾಲಕ್ಕೆ ದಾಟಿಕೊಳ್ಳುವಾಗ ಪಲ್ಲಟಗಳು ಸಹಜ. ಈ ಪಲ್ಲಟಗಳನ್ನು ದೃಷ್ಟಿಯಲ್ಲಿರಿಸಿಕೊಂಡು ಇಂತಹ ಕಲೆಗಳಿಗೆ ಹೊಸಕಾಲದಲ್ಲೂ ಜೀವಂತಿಕೆಯನ್ನು ತಂದುಕೊಡುವ ಪ್ರಯತ್ನದ ಅಗತ್ಯವನ್ನು ಮನಗಾಣಿಸುವುದಕ್ಕಾಗಿಯೇ ಶೋಭಾ ಕರಣಿಕ್ ಅವರು ಚಿತ್ರಕಲಾ ರಚನೆಯ ವೈವಿಧ್ಯಮಯ ಪ್ರಯೋಗಗಳಲ್ಲಿ ತೊಡಗಿಸಿಕೊಂಡಿದ್ದರು.

ಅವರ ನಿಧನದಿಂದ ಈ ಪ್ರಯೋಗಶೀಲ ಹೆಜ್ಜೆಗಳು ನಿಂತಂತಾಗಿವೆ. ಆದರೆ, ಅವರು ಪರಂಪರೆ ಮತ್ತು ವರ್ತಮಾನವನ್ನು ಸಮನ್ವಯಗೊಳಿಸಿ ಸಾಬೀತುಪಡಿಸಿದ ಅಪೂರ್ವ ಚಿತ್ರಕಲಾ ಪ್ರಯೋಗಶೀಲತೆಯ ಜೀವಂತಿಕೆ ಹೊಸ ಪೀಳಿಗೆಗೆ ಸದಾ ಸ್ಫೂರ್ತಿಯ ಸೆಲೆಯಾಗಿರುತ್ತದೆ. ಅವರ ಹೆಸರಿನ ಇನಸ್ಟಾಗ್ರಾಂನಲ್ಲಿ ಕಾಣಿಸಿಕೊಂಡಿರುವ ಚಿತ್ರಗಳು ಇಂಥ ಸ್ಫೂರ್ತಿಯ ಪ್ರಭೆಯನ್ನು ದಾಟಿಸುತ್ತಿವೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ಅಂತರಂಗ

ಹೊಸತನದ ಹೊಸ್ತಿಲಲ್ಲಿ..!

Published

on

ಬರಹ : ಮೀನಾಕ್ಷಿ. ಬಿ
  • ಮೀನಾಕ್ಷಿ .ಬಿ, ಎಂ. ಎ ವಿದ್ಯಾರ್ಥಿನಿ, ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ, ದಾವಣಗೆರೆ ವಿಶ್ವವಿದ್ಯಾಲಯ

ಹೊಸವರ್ಷ ವೆಂಬುದು ಪ್ರತಿಯೊಬ್ಬರ ಬಾಳಲ್ಲಿ ವರ್ಷಕ್ಕೊಮ್ಮೆ ಬರುವ ಹೊಸದಿನಗಳ ಆಗಮನ ಯಾಕೆಂದರೆ ಹೊಸತನವನ್ನು ತರುತ್ತಾ ಇರುವ ಹೊಸವರ್ಷ ಕೂಡ ಒಂದು ಜೀವನದ ಭರವಸೆ, ನಿರೀಕ್ಷೆ ಕನಸುಗಳ ಬಂಡಿಯ ಮೇಲೆ ಸಾಗುವ ಪ್ರಯಾಣ ನಮ್ಮ ಜೀವನ.

ವ್ಯಕ್ತಿಯ ನಂಬಿಕೆಯ ಆಧಾರದ ಮೇಲೆಯೇ ಜೀವನ ಸಾಗುಸುತ್ತಿರುವುದು.ಯಾಕೆಂದರೆ ಪ್ರತಿಯೊಬ್ಬ ವ್ಯಕ್ತಿಯ ಜೀವನದಲ್ಲಿಯೂ ಕೂಡ ಕಷ್ಟ -ಸುಖ ದುಃಖದ ಸಂಗತಿಗಳು ಇದ್ದೆ ಇರುತ್ತದೆ. ಕೆಲವೊಂದು ಬಾರಿ ಹತಾಶೆಯನ್ನು ಹೊಂದಿ ಜೀವನದಲ್ಲಿ ಜಿಗುಪ್ಸೆ ಒಂದು ಕೆಟ್ಟ ನಿರ್ಧಾರಕ್ಕೆ ಮನಸ್ಸು ದಾರಿ ಮಾಡಿಕೊಡುತ್ತದೆ. ಹಾಗೆಯೇ ಕಷ್ಟ ಇದ್ದಲ್ಲಿ ಸುಖವಿರುವುದುಂಟು ಅನ್ನುವ ಹಾಗೇ ಇವತ್ತಲ್ಲ ನಾಳೆ ಒಳ್ಳೆಯ ದಿನಗಳು ನಮ್ಮ ಜೀವನದಲ್ಲಿ ಬರಬಹುದೆಂಬ ಭರವಸೆ,ಆತ್ಮವಿಶ್ವಾಸವನ್ನು ಇಟ್ಟುಕೊಂಡು ಜೀವನ ನಡೆಸುತ್ತಲೇ ಇದ್ದೇವೆ.

ಈ ವರ್ಷ ಒಳ್ಳೆಯದಾಗಿಲ್ಲ ಅಂದರೆ ಏನು ಮುಂದಿನ ವರ್ಷ ಆದರೂ ನನ್ನ ಬದುಕು ಬದಲಾಗಬಹುದು ಎಂಬ ಹೊಸತನವನ್ನು ನಮ್ಮಲ್ಲಿ ಭರವಸೆ,ನಂಬಿಕೆಯ ಬೇರಿನೊಂದಿಗೆ ಬೆರೆಸಿಕೊಂಡು ಬದುಕಬೇಕು.ನಾಳೆಯ ದಿನಗಳ ಮೇಲಿನ ಅನಿರೀಕ್ಷಿತ ತೀರಿವಿನಿಂದಾಗುವ ಬದುಕಿನಲ್ಲಾಗುವ ಬದಲಾವಣೆ ಹೊಸತನದ ಚಾಪನ್ನು ಮೂಡಿಸುತ್ತದೆ.
ಎಂಥ ಹತಾಶ ಮನಸ್ಥಿತಿಯವರಲ್ಲೂ ಹೊಸವರ್ಷ ಭರವಸೆಯ ಅಭಯ ಹಸ್ತವನ್ನು ಚಾಚುತ್ತದೆ. ಅದೆಲ್ಲಿಂದಲೇ ಆತ್ಮ ವಿಶ್ವಾಸದ ಬೆಳಕಿನ ಕಿಡಿಯೊಂದು ಕಾಣಿಸಿಕೊಳ್ಳುತ್ತದೆ.

ಹೊಸವರ್ಷವೆಂಬುದು ಕೇವಲ ಸಂಭ್ರಮದ ಕಾಲ ಮಾತ್ರವಲ್ಲ. ಕಳೆದ ದಿನಗಳತ್ತ ಹಿಂತಿರುಗಿ ನೋಡುವ ಸಮಯ ಕೂಡ ಹಿಂದಿನ ದಿನಗಳ ಪುಟಗಳನ್ನು ತೆಗೆದು ನೋಡಿದರೆ. ಉತ್ಸಾಹದ ಗಳಿಗೆಗಳು ಮುಂದಿನ ಕೆಲಸಗಳಿಗೆ ಚೈತನ್ಯ, ಉತ್ಸಾಹ ನೀಡಬಲ್ಲದು.ನಮ್ಮ ದಿಕ್ಕಿಲ್ಲದ ದಾರಿಗೆ ಖಚಿತ ದಿಕ್ಕು ದಾರಿಯನ್ನು ತೋರಬಲ್ಲದು.

ಜೀವನದ ಪ್ರಯಾಣಕ್ಕೆ ಒಂದು ನಿಲ್ದಾಣವಾಗಿದೆ. ನಾವು ಕಾಣುವ ಕನಸಗಳು ಕನಸಾಗಿಯೇ ಉಳಿದಿದೆ ಯಾಕೆಂದರೆ ನಮ್ಮಲ್ಲಿನ ಬೇಜವಾಬ್ದಾರಿ, ನಿರ್ಲಕ್ಷತನ ಆಮೇಲೆ ಮಾಡಿದರೆ ಆಯ್ತು ಅನ್ನೋ ಮನೋಭಾವನೆ ಯಾವುದರ ಬಗ್ಗೆಯೂ ಆಸಕ್ತಿ ಕೊಡದೆ ಇರೋದು ಎಲ್ಲವು ನಮ್ಮ ಕನಸಿನ ಜೀವನ ರೂಪಿಸಿಕೊಳ್ಳುವಲ್ಲಿ ಸಫಲರಾಗದೆ ಉಳಿಯಲು ಕಾರಣ.

ಮೊದಲು ಆತ್ಮವಿಶ್ವಾಸ ಬೇಕು ನಾನು ಈ ಕೆಲಸವನ್ನು ಮಾಡುವೆ ಎಂಬ ಒಂದು ನಿರ್ಧಿಷ್ಟ ಗುರಿ ಇರಬೇಕು ಅಂಗಿದ್ರೆ ಅಷ್ಟೇ ಜೀವನದ ಪಯಣದ ಹಾದಿಯಲ್ಲಿ ಯಶಸ್ಸನ್ನು ಕಾಣಲು ಸಾಧ್ಯ ಇಲ್ಲವಾದಲ್ಲಿ ಸೋಲನ್ನು ಅನುಭವಿಸುವ ಪರಿಸ್ಥಿತಿ ಎದುರಾಗುತ್ತದೆ. ಮುಂದಿನ ದಿನಗಳ ಆಗಮನದೊಂದಿಗೆ ನಾವು ಕಂಡ ಕನಸನ್ನು ಈಡೇರಿಸಿಕೊಳ್ಳುವ ಸತತ ಪ್ರಯತ್ನದೊಂದಿಗೆ ಬರುವ ದಿನವನ್ನು ಸ್ವಾಗತಿಸಿಕೊಳ್ಳೋಣ.
ಎಲ್ಲರ ಬಾಳಲಿ ಹರುಷ ,ಸಂತೋಷ ಮನೆಮಾಡಲಿ ಎಂದು ಆಶಿಸುತ್ತಾ ಎಲ್ಲರಿಗೂ ಹೊಸವರ್ಷದ ಶುಭಾಶಯಗಳು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ಅಂತರಂಗ

ಕಾಮರೂಪದ ಪ್ರಭಾಕರ

Published

on

  • ಪ್ರೊ.ರಹಮತ್ ತರೀಕೆರೆ

ನಾನು ಕೋಲಾರಕ್ಕೆ ಹೋದಾಗೆಲ್ಲ ಎರಡು ಜಾಗಗಳಿಗೆ ತಪ್ಪದೆ ಭೇಟಿ ಕೊಡುತ್ತೇನೆ. ಒಂದು-ಕೆ.ರಾಮಯ್ಯ ಮತ್ತವರ ಸಂಗಾತಿಗಳು ಸೇರಿ ತೇರುಹಳ್ಳಿ ಬೆಟ್ಟದ ಮೇಲೆ ಕಟ್ಟಿರುವ `ಆದಿಮ’ಕ್ಕೆ; ಇನ್ನೊಂದು-`ಕಾಮರೂಪಿ’ ಎಂಬ ಹೆಸರಲ್ಲಿ ಬರೆಯುತ್ತಿದ್ದ ಕನ್ನಡ ಲೇಖಕ ಡಾ. ಎಂ.ಎಸ್. ಪ್ರಭಾಕರ ಅವರಿರುವ ಕಠಾರಿಪಾಳ್ಯದ ಮನೆಗೆ. 50ರ ದಶಕದ ಕೊನೆಯಲ್ಲಿ ಕರ್ನಾಟಕ ಬಿಟ್ಟುಹೋದ ಪ್ರಭಾಕರ, ‘ಹಿಂದೂ’ ಪತ್ರಿಕೆಯ ವರದಿಗಾರರಾಗಿ ಆಫ್ರಿಕಾ ಅಮೇರಿಕ ಬಾಂಗ್ಲಾದೇಶ ಈಶಾನ್ಯ ಭಾರತವನ್ನೆಲ್ಲ ಅಲೆದಾಡಿ, ಕಡೆಗೆ ಕಾಮರೂಪದಲ್ಲಿ (ಅಸ್ಸಾಮಿನ ಪುರಾತನ ಹೆಸರಿದು) ನೆಲೆಸಿಬಿಟ್ಟರು.

`ಕಾಮರೂಪ’ ಶಬ್ದಕ್ಕೆ ಬಯಸಿದ ರೂಪಧಾರಣೆ ಮಾಡುವ ಮಾಯಾವಿ ವಿದ್ಯೆ ಎಂಬರ್ಥವೂ ಇದೆ. ಎಂಬತ್ತರ ಪ್ರಾಯದಲ್ಲಿ ಕರ್ನಾಟಕಕ್ಕೆ ಮರಳಿ ಬಂದಿರುವ ಪ್ರಭಾಕರ ಅವರು, ತಾವು ಹುಟ್ಟಿಬೆಳೆದ ಮನೆಯಲ್ಲಿ ಬಿಡಾರ ಹೂಡಿದ್ದಾರೆ. ಹಿರೀಕರು ಕಟ್ಟಿದ ದೊಡ್ಡಮನೆ. ಮನೆಯೊಳಗೊಂದೇ ಜೀವ; ಮನೆ ತುಂಬ ಪುಸ್ತಕದ ರಾಶಿ (ಹೆಚ್ಚಿನವು ಇಂಗ್ಲೀಶ್ ಬಂಗಾಳಿ ಅಸ್ಸಾಮಿ). ನಟ್ಟನಡುವಿರುವ ಹಾಲಿನ ಮೂಲೆಯಲ್ಲಿ ಬೀದಿಗೆ ಬೆನ್ನುಕೊಟ್ಟಂತೆ ಕೂತು, ಲ್ಯಾಪ್‌ಟಾಪಿನಲ್ಲಿ ಬರೆಯುತ್ತ, ವೆಬ್‌ಸೈಟುಗಳನ್ನು ಜಾಲಾಡುತ್ತ, ಬ್ಲಾಗುಗಳನ್ನೋದುತ್ತ ಪ್ರಭಾಕರ ಕುಳಿತಿರುತ್ತಾರೆ.

ಅವರ ಮನಗೆ ಹೋದಾಗಲೆಲ್ಲ ನನಗೆ ರಾಗಿಮುದ್ದೆ ಸೊಪ್ಪಿನ ಸಾರಿನ ಊಟ ಸಿಗುತ್ತದೆ. ಅವರು ಉಣ್ಣುವುದೊಂದು ಅಪೂರ್ವ ದೃಶ್ಯ. ತಣಿಗೆಯ ನಡುವೆ ಹದವಾಗಿ ಬೆಂದು ಕಂಪು ಬೀರುವ ಗೋಂದಿನಂತಹ ಕೆಂಗಪ್ಪು ಬಣ್ಣದ ಬಿಸಿಮುದ್ದೆಯನ್ನಿಟ್ಟು, ಅದರ ತಲೆಯ ಮೇಲೆ ಶಿಖರವನ್ನು ಹಿಮವು ಅಲಂಕರಿಸುವಂತೆ ಬೆಣ್ಣೆಯ ಚೂರನ್ನಿಡುತ್ತಾರೆ; ಬೆಣ್ಣೆಯು ಮುದ್ದೆ ಕಾವಿಗೆ ಕರಗಿ ಇಡೀ ಚೆಂಡನ್ನು ಆವರಿಸಿ ಅಭಿಷೇಕ ಮಾಡಿಸಿಕೊಂಡ ಮೂರುತಿಯಂತೆ ಥಳಥಳ ಹೊಳೆಯುತ್ತದೆ. ಆಗ ಘಮಿಸುವ ಮುದ್ದೆಯನ್ನು ಚೆನ್ನಾಗಿ ಮಿದ್ದು, ಒಂದು ಬದಿಯಿಂದ ಇಷ್ಟಿಷ್ಟೇ ಮುರಿದು ತುತ್ತು ಮಾಡಿ, ಸೊಪ್ಪಿನ ಗಟ್ಟಿಸಾರಲ್ಲಿ ಹೊರಳಾಡಿಸಿ ಗುಕ್ಕನೆ ನುಂಗಿ ಕಣ್ಮುಚ್ಚಿ ಕೊಳ್ಳುತ್ತಾರೆ. ತರುವಾಯ ಶ್ರೀಯುತರು ಜ್ಞಾನೋದಯವಾದ ಸಿದ್ಧನಂತೆ ಅವರ ಮುಖದಲ್ಲಿ ಪರಮಾನಂದದ ಒಂದು ಕಳೆ ಆವಿರ್ಭವಿಸುತ್ತದೆ. ಇದನ್ನೆಲ್ಲ ಕಾಣುವಾಗ, ಲೋಕವನ್ನೆಲ್ಲ ಸುತ್ತಾಡಿರುವ ಇವರು ಕೋಲಾರಕ್ಕೆ ಮುದ್ದೆಸುಖಕ್ಕಾಗಿಯೆ ಬಂದರೇನೊ ಎಂದು ಶಂಕೆ ಬರುತ್ತದೆ. ಪ್ರಭಾಕರ ಅವರಿಗೆ ಆಧುನಿಕ ಕನ್ನಡ ಸಾಹಿತ್ಯದ ಮೇಲೆ ಅನೇಕ ದೂರುಗಳಿವೆ. ಅವುಗಳಲ್ಲಿ ಆಹಾರ ತಯಾರಿಕೆ ಮತ್ತು ಸೇವನೆ ಕುರಿತು ಅದರಲ್ಲಿ ವಿವರಗಳೇ ಇಲ್ಲ ಎಂಬುದೂ ಒಂದು.

ಕನ್ನಡದ ಅತಿಹಿರಿಯ ಮತ್ತು ಹೆಚ್ಚು ಬರೆಯದ ಲೇಖಕರಲ್ಲಿ ಪ್ರಭಾಕರ ಅವರೂ ಒಬ್ಬರು. ನಾನು ಅವರ ‘ಕುದುರೆಮೊಟ್ಟೆ’ ಕಾದಂಬರಿಯನ್ನೂ ‘ಒಂದು ತೊಲ ಪುನುಗು ಮತ್ತು ಇತರ ಕತೆಗಳು’ ಸಂಕಲನವನ್ನೂ ಓದಿದ್ದೆ. ಇವುಗಳಲ್ಲಿ ‘ಕುದುರೆ ಮೊಟ್ಟೆ’ ಈಗಲೂ ಪ್ರಿಯವಾದ ಪುಸ್ತಕ. ಅದರಲ್ಲಿರುವ ಕೆಲವು ಪಾತ್ರಗಳು ಕೊಂಚ ವಿಕ್ಷಿಪ್ತವಾಗಿವೆ; ಅಲ್ಲಿನ ಬಾಳಿನ ಸನ್ನಿವೇಶಗಳೂ ಅನಿರೀಕ್ಷಿತವಾಗಿವೆ. ಆದರೆ ಎಲ್ಲಿಯೂ ಹುಸಿ ಅನಿಸದಂತೆ, ಒಂದೇ ಶಬ್ದ ಅಪವ್ಯಯವಾಗದಂತೆ ಅದನ್ನು ಬರೆಯಲಾಗಿದೆ. ಪಾತ್ರಗಳನ್ನು ತಮ್ಮ ಸಿದ್ಧಾಂತಕ್ಕೆ ತಕ್ಕಂತೆ ಮಣಿಸಿ ಕೈಗೊಂಬೆಯಂತೆ ಆಡಿಸುತ್ತ, ಕೆಲವನ್ನು ಮುದ್ದಾಮಾಗಿ ದುರುಳಗೊಳಿಸಿ ಕಲೆಯ ಜಾಣಮುಸುಕಿನಲ್ಲಿ ಅಡಗಿಸುತ್ತ, ಕೆಲವು ಕಾದಂಬರಿಗಳು ಕನ್ನಡದಲ್ಲಿ ಪ್ರಕಟವಾಗುತ್ತಿವೆ. ಇಂತಹ ಹೊತ್ತಲ್ಲಿ ಅರ್ಧ ಶತಮಾನದ ಹಿಂದೆ ಪ್ರಕಟವಾದ ಈ ಕಾದಂಬರಿ, ಬಾಳನ್ನು ಕುರಿತು ತೋರುವ ಕಕ್ಕುಲಾತಿ ಕಂಡು ಖುಶಿಯಾಗುತ್ತದೆ. ಕತೆಗಾರರಿಗೆ ತಾವು ಸೃಷ್ಟಿಸುವ ಕೆಲವು ಪಾತ್ರಗಳ ಮೇಲೆ ಕೊಂಚ ಭಾವ ಪಕ್ಷಪಾತವಿರುತ್ತದೆ. ಆದರೆ ತಾವು ಸೃಜಿಸುವ ಎಲ್ಲ ಪಾತ್ರಗಳನ್ನು ತಾಯಿಯಂತೆ ನೋಡುವುದು ಬರೆಹದ ನೈತಿಕತೆ. ಈ ಸಂಗತಿ ಕುವೆಂಪು ಮತ್ತು ಟಾಲ್ ಸ್ಟಾಯ್ ಕಾದಂಬರಿ ಓದಿದವರಿಗೆ ಗೊತ್ತಿದೆ.

ಕಾಮವನ್ನು ಇಟ್ಟುಕೊಂಡು ಜೀವನದ ಸತ್ಯಗಳನ್ನು ಶೋಧಿಸುವ ವಿಷಯದಲ್ಲಿ ಕಾಮರೂಪಿಯವರು, ಒಬ್ಬ ಟಿಪಿಕಲ್ ನವ್ಯಲೇಖಕರೇ. ಆದರೆ ನವ್ಯದ ಕೆಲವು ಲೇಖಕರಲ್ಲಿ ಕಾಣುವಂತೆ, ಅದಕ್ಕವರು ಅನಗತ್ಯ ಪ್ರಾಮುಖ್ಯ ಕೊಡುವುದಿಲ್ಲ. ಅದನ್ನು ಚಪ್ಪರಿಸುವುದಿಲ್ಲ. ವೈಭವೀಕರಿಸುವುದಿಲ್ಲ. ಬದಲಿಗೆ, ಮನುಷ್ಯರಾದವರು ಜೀವನದ ಇಕ್ಕಟ್ಟುಗಳಲ್ಲಿ ಸಿಲುಕಿ ಅನಿವಾರ್ಯವಾಗಿ ವರ್ತಿಸುವ ಪರಿಯನ್ನು ತಣ್ಣಗೆ ವ್ಯಂಗ್ಯವಾಗಿ ಚಿತ್ರಿಸುತ್ತಾ ಹೋಗುತ್ತಾರೆ. ಸತ್ಯಕ್ಕಿರುವ ಹಲವು ಮುಖಗಳನ್ನು ಹಿಡಿಯುವಂತಹ ಕುರುಸೋವಾನ ‘ರಶೋಮನ್’ ಸಿನಿಮಾ ನೆನಪಿಸುವ ಈ ಕಾದಂಬರಿ, ಮತ್ತೆಮತ್ತೆ ಓದಬೇಕು ಎನಿಸುವಷ್ಟು ತಾಜಾ ಆಗಿದೆ. ‘ಉಪಪತ್ತಿಯೋಗ’ ಎಂಬುದನ್ನು ಬಿಟ್ಟರೆ, ಉಳಿದಂತೆ ವ್ಯಕ್ತಿವಾದವನ್ನು ಅತಿಯಾಗಿ ಬಿಂಬಿಸುವ ತಂತ್ರದ ಬಿಗಿತದಲ್ಲಿರುವ ಅವರ ಕತೆಗಳು ಅಷ್ಟು ಆಪ್ತವೆನಿಸಿಲ್ಲ.

ನನಗೆ ಪ್ರಭಾಕರ್ ಕುರಿತು ಆಸಕ್ತಿ ಮೂಡಿಸಿದವರು ಮಾರ್ಕ್ಸ್‌ವಾದಿ ಚಿಂತಕ ಕೆ.ರಾಘವೇಂದ್ರರಾವ್ ಅವರು. ಅಮೆರಿಕೆಯ ವಿಶ್ವವಿದ್ಯಾಲಯಗಳಲ್ಲಿ ಕೆಲಸ ಮಾಡುತ್ತಿದ್ದ ಎ.ಕೆ.ರಾಮಾನುಜನರ ಹೊಂದಾಣಿಕೆಯ ಗುಣವನ್ನು ಕಟುವಾಗಿ ವಿಮರ್ಶಿಸುತ್ತ, ಅಲ್ಲಿನ ಶೈಕ್ಷಣಿಕ ಕ್ಷೇತ್ರದಲ್ಲಿರುವ ಬಿಳಿಯರ ಯಜಮಾನಿಕೆಗೆ ಬಾಗದೆ ಹೊರಬಂದ ಪ್ರಭಾಕರ ಅವರ ದಿಟ್ಟ ಸ್ವಭಾವವನ್ನು ಅವರು ತಮ್ಮ ಸಂದರ್ಶನದಲ್ಲಿ ಪ್ರಸ್ತಾಪಿಸಿದ್ದರು. ಪ್ರಭಾಕರ ಅವರನ್ನು ಭೇಟಿಯಾಗಬೇಕು ಎಂದು ಅನಿಸುತ್ತಿತ್ತು. ಅದರಲ್ಲೂ ಭಾರತದ ಶಾಕ್ತಪೀಠಗಳಲ್ಲಿ ಮುಖ್ಯವಾಗಿರುವ ಅಸ್ಸಾಮಿನ ಕಾಮಾಖ್ಯಕ್ಕೆ ಹೋಗಲು ಯತ್ನಿಸುತ್ತಿದ್ದ ನಾನು, ಅಲ್ಲೇ ಸಮೀಪದ ಗೌಹಾತಿಯಲ್ಲಿರುವ ಅವರನ್ನು ಕಾಣಲು ಹವಣಿಕೆ ಮಾಡಿಕೊಂಡಿದ್ದೆ. ಆದರೆ ಸಾರ್ವಜನಿಕ ವ್ಯಕ್ತಿಯಾಗಲು ನಿರಾಕರಿಸಿ ಅಜ್ಞಾತವಾಗಿಯೇ ಬಾಳುವ ಅವರು ಸುಲಭವಾಗಿ ಸಿಗುತ್ತಿರಲಿಲ್ಲ.

ನನ್ನ ತವಕವನ್ನರಿತಿದ್ದ ಕೆ.ರಾಮಯ್ಯ, ‘ಪ್ರಭಾಕರ್ ಕರ್ನಾಟಕಕ್ಕೆ ಬಂದಿದ್ದಾರೆ. ಬನ್ನಿ’ ಎಂದು ಅವರ ಮನೆಗೆ ಕರೆದುಕೊಂಡು ಹೋದರು. ಮಧ್ಯಾಹ್ನದ ಸುಡುಹೊತ್ತು. ಪ್ರಭಾಕರ ಪ್ರೀತಿಯಿಂದ ಬರಮಾಡಿಕೊಂಡು ನೊರೆ ತುಂಬಿದ ಒಗರು ಬೀರಿನ ಮಗ್ಗನ್ನು ಕೈಗೆ ಕೊಟ್ಟು, ಕಾಮಾಖ್ಯದ ಬಗ್ಗೆಯೂ ತಂತ್ರ ಪಂಥದ ಬಗ್ಗೆಯೂ ಇರುವ ಕೃತಿಗಳನ್ನು ತೋರಿಸುತ್ತ, ಗಂಟೆಗಟ್ಟಳೆ ಮಾತಾಡಿದರು. ಅರಿವಿನ ಕಿಡಿಗಳು ಹಾರುವ ಅದೊಂದು ವಿದ್ವತ್‌ಪೂರ್ಣ ಹರಟೆ.

ನಾನು ಅವರಲ್ಲಿ ಶಿಷ್ಯವೃತ್ತಿ ಸ್ವೀಕರಿಸಿ ಹಲವಾರು ಸಲ ಕೋಲಾರಕ್ಕೆ ಹೋಗಿ ಬಂದಿದ್ದೇನೆ. ಅವರ ಮಾತುಕತೆಗಳಲ್ಲಿ ನನಗೆ ಮುಖ್ಯವಾಗಿ ಕಂಡಿದ್ದು, ಜಾತ್ಯತೀತವಾದ ಮನಸ್ಸು; ಸಣ್ಣಪುಟ್ಟ ಸಂಗತಿಗಳ ಮೇಲೂ ಕಾಳಜಿಯಿಂದ ಸೂಕ್ಷ್ಮವಾಗಿ ಚಿಂತಿಸುವ ಮಾನವೀಯತೆ; ಗತಕಾಲದ ಬಗ್ಗೆ ಹಳಹಳಿಕೆಯಿಲ್ಲದೆ ವರ್ತಮಾನದ ಸಮಸ್ಯೆಗಳನ್ನು ಕುರಿತು ಚಿಂತಿಸುವ ಪ್ರಖರವೂ ನಿಷ್ಠುರವೂ ಆದ ರಾಜಕೀಯ ಪ್ರಜ್ಞೆ. ಸಾರ್ವಜನಿಕ ಬದುಕಿನಲ್ಲಿ ಜಾತಿಪದ್ಧತಿ ಎಲ್ಲೆಮೀರಿ ನಿರತವಾಗಿರುವ ಕುರಿತ ಹೇವರಿಕೆ. ಹಿರಿಯ ಲೇಖಕರಲ್ಲಿ ಸಾಮಾನ್ಯವಾಗಿ ಎರಡು ಸ್ವಭಾವಗಳಿರುತ್ತವೆ. ಒಂದು- ಕಳೆದುಹೋದ ಕಾಲದ ಬಗ್ಗೆ ಭಾವುಕ ಮರುಕಳಿಕೆ. ಎರಡು-ವರ್ತಮಾನದ ಸಾಮಾಜಿಕ ರಾಜಕೀಯ ವೈರುಧ್ಯಗಳನ್ನು ಉದಾರವಾಗಿ ನೋಡುತ್ತ, ಚಿಂತನೆಯ ಮೊನಚನ್ನು ಕಳೆದುಕೊಳ್ಳುವುದು. ಆದರೆ ಆತ್ಮಕ್ಕೆ ಸದಾ ಬೆಂಕಿ ಹತ್ತಿಸಿಕೊಂಡಂತೆ ಉರಿಯುವ ಕೆಲವರಿದ್ದಾರೆ. ಕೋಚೆ, ಕುಸುಮಾಕರ ದೇವರಗೆಣ್ಣೂರ, ಎಂ.ಡಿ. ನಂಜುಂಡಸ್ವಾಮಿ, ನೀಲಗಂಗಯ್ಯ ಪೂಜಾರ, ಕೆ.ರಾಘವೇಂದ್ರರಾವ್, ಅಬ್ಬಿಗೇರಿ ವಿರೂಪಾಕ್ಷಪ್ಪ, ಸಾರಾ ಅಬೂಬಕರ್, ಕಾಮರೂಪಿ ಪ್ರಭಾಕರ-ಇವರೆಲ್ಲ ಇಂತಹವರು. ಈ ಹಿರಿಯರ ಜತೆ ಮಾತಾಡುವಾಗ ಇವರ ಹಠಮಾರಿತನ, ಜಗಳಗಂಟಿತನ, ಆದರ್ಶವಾದ, ನೈತಿಕ ಪ್ರಜ್ಞೆ ಹಾಗೂ ಭಿನ್ನಮತ ಇಷ್ಟವಾಗುತ್ತದೆ.

ಕರ್ನಾಟಕದಿಂದ ಬಹುಕಾಲ ದೂರವಿದ್ದ ಕಾರಣದಿಂದ ಏರ್ಪಟ್ಟಿರುವ ಅಪರಿಚಿತತೆಯಿಂದಲೊ ಅಥವಾ ಕರ್ನಾಟಕದ ಒಳಗೇ ಇದ್ದೂಇದ್ದೂ ನಮಗೆ ಕಾಣದಂತಾಗಿರುವ ವೈರುಧ್ಯಗಳು ‘ಹೊರಗಿನಿಂದ’ ಬಂದಿರುವ ಅವರಿಗೆ ಒಡೆದು ಕಾಣುತ್ತಿರುವುದರಿಂದಲೊ, ಪ್ರಭಾಕರ ಕರ್ನಾಟಕದ ಸಮಕಾಲೀನ ಸಾಂಸ್ಕೃತಿಕ ರಾಜಕಾರಣದ ವೈರುಧ್ಯಗಳ ಬಗ್ಗೆ ತೀಕ್ಷ್ಣವಾದ ಟಿಪ್ಪಣಿ ಮಾಡುತ್ತಿರುತ್ತಾರೆ; ಕನ್ನಡಿಗರ ಸ್ವಭಾವದಲ್ಲೇ ವ್ಯಕ್ತಿನಿಷ್ಠೆಗಾಗಿ ವಿಮರ್ಶೆಯ ನಿಷ್ಠುರತೆ ಬಿಟ್ಟುಕೊಡುವ, ಸಜ್ಜನಿಕೆಯ ಭಾಷೆಯಲ್ಲಿ ವಾಸ್ತವವನ್ನು ಅಡಗಿಸುವ ಪ್ರವೃತ್ತಿಯಿದೆ ಎಂದು ಹೇಳುತ್ತಿರುತ್ತಾರೆ. ಸಂಘಟಕರೊಬ್ಬರು ಕಾರ್ಯಕ್ರಮವೊಂದಕ್ಕೆ ಕರೆಸಿಕೊಂಡು ಪರಿಚಯ ಭಾಷಣದಲ್ಲಿ ತಮ್ಮನ್ನು ಅತಿಯಾಗಿ ಹೊಗಳಿದ್ದನ್ನು ನೆನೆಯುತ್ತ ಅವರೊಮ್ಮೆ ಹೇಳಿದರು: “ಏನ್ ಸ್ವಾಮಿ ಕನ್ನಡಿಗರು? ಎಷ್ಟು ಉದಾರತೆ! ನನ್ನ ಬಗ್ಗೆ ಅವರಿಗೆ ಏನೂ ಗೊತ್ತಿಲ್ಲ. ನಾನು ಎಲ್ಲ ಸೇರಿದರೆ ನೂರೈವತ್ತು ಪುಟಗಳನ್ನೂ ಬರೆದಿಲ್ಲ. ಕನ್ನಡಕ್ಕೆ ದೊಡ್ಡ ಕೊಡುಗೆಯನ್ನು ಕೊಟ್ಟಿಲ್ಲ. ಆದರೂ ವಾಚಾಮಗೋಚರ ಹೊಗಳಿಬಿಟ್ಟರು. ಕರ್ನಾಟಕದಲ್ಲಿ ಮಾತಿಗೆ ಬೆಲೆಯೇ ಇದ್ದಂತಿಲ್ಲ.’’

ಇದನ್ನು ಕೇಳುವಾಗ ಈಚೆಗೆ ಕಲ್ಕತ್ತಾದಲ್ಲಿ ನಾನು ಕಂಡ, ಹಿರಿಯ ಲೇಖಕ ರುದ್ರಪ್ರತಾಪ ಸೇನರ ಸನ್ಮಾನ ಕಾರ್ಯಕ್ರಮ ನೆನಪಾಯಿತು. ಸೇನರಿಗೆ 75ವರ್ಷ ತುಂಬಿದ ನೆಪದಲ್ಲಿ ಇರಿಸಿಕೊಂಡಿದ್ದ ಆ ಕಾರ್ಯಕ್ರಮ ಎಷ್ಟು ವಿಮರ್ಶಾತ್ಮಕವಾಗಿತ್ತು ಎಂದರೆ, ಅವರ ಶಿಷ್ಯರು ತಮ್ಮ ಗುರುವಿನ ಜತೆ ಕೋರ್ಟ್ಮಾರ್ಶಲ್ ನಡೆಸುವವರ ಹಾಗೆ ಪ್ರಶ್ನೆ ಕೇಳುತ್ತಿದ್ದರು. ಸೇನರು ಆ ಕಟುತರ ಪ್ರಶ್ನೆಗಳಿಗೆಲ್ಲ ಪ್ರಾಮಾಣಿಕವಾಗಿ ದ್ವಂದ್ವವಿಲ್ಲದೆ ಉತ್ತರಿಸುತ್ತಿದ್ದರು. ಹಿರಿಯರ ತಲೆಗೆ ಅಭಿನಂದನ ಗ್ರಂಥಗಳ ಸರಮಾಲೆಯನ್ನು ತಂದು ಕಟ್ಟಿ, ಎಗ್ಗಿಲದೆ ಹೊಗಳಿ ವೈಭವೀಕರಿಸುವ ಪದ್ಧತಿಯಿರುವ ಕರ್ನಾಟಕದಲ್ಲಿ, ಈ ಪರಿಯ ನಿಷ್ಠುರತೆ ಕಲ್ಪಿಸಿಕೊಳ್ಳುವುದೇ ಕಷ್ಟ.

ತೋರುಗಾಣಿಕೆಯನ್ನು ಸದಾ ನಿರಾಕರಿಸುವ ಪ್ರಭಾಕರ ಅವರಲ್ಲಿ, ಅವರ ಖಂಡಿತವಾದಿ ನಿಲುವಿಗೆ ಅಷ್ಟೊಂದು ತಾಳೆಯಾಗದ ಇನ್ನೊಂದು ಮುಖವಿದೆ. ಅದೆಂದರೆ, ಜೀವನಪ್ರೀತಿಯ ಸಂಕೇತದಂತಿರುವ ತಮಾಶೆ ಮತ್ತು ಪೋಲಿತನ. ಈ ತಮಾಶೆಯ ಗುಣ ಅದ್ಭುತ ನಾಟಕೀಯ ಶೈಲಿಯಾಗಿ ಅವರ ಕಥೆ ಕಾದಂಬರಿಗಳಲ್ಲೆಲ್ಲ ಆವರಿಸಿಕೊಂಡಿದೆ. ತಮಗೆ ಪಾಠ ಹೇಳಿದ ಗುರುಗಳ ವೈಯಕ್ತಿಕ ಬದುಕಿನಲ್ಲಿದ್ದ ಸನಾತನವಾದ ಮತ್ತು ತರಗತಿಗಳಲ್ಲಿ ಕನ್ನಡ ಬಳಸದ ಅವರ ಇಂಗ್ಲಿಷಿನ ವ್ಯಾಮೋಹ ಕುರಿತಂತೆ, ಅವರಲ್ಲಿ ಸ್ವಾರಸ್ಯಕರ ಮಾಹಿತಿಗಳಿವೆ. ಪ್ರಭಾಕರ ಅವರು ಆಪ್ತರ ಎದುರು ತಾವು ಬರೆದಿರುವ ಅಪ್ರಕಟಿತ ಪೋಲಿ ಪದ್ಯಗಳನ್ನು ವಾಚಿಸುವುದುಂಟು. ಬಹುಶಃ ಇದು ಅವರ ಗೆಳೆಯರಾಗಿದ್ದ ಎಚ್.ಎಸ್. ಬಿಳಿಗಿರಿಯವರ ಸಹವಾಸ ಫಲವಿರಬೇಕು.

ಒಂದೇ ವ್ಯಕ್ತಿತ್ವದಲ್ಲಿ ಒಟ್ಟಿಗೇ ಇರಲು ಕಷ್ಟವೆನಿಸಬಹುದಾದ ಇನ್ನೂ ಅನೇಕ ಸಂಗತಿಗಳು ಅವರಲ್ಲಿ ಸಹಜವಾಗಿ ನಿರಾಳವಾಗಿ ಇವೆ. ಉದಾ.ಗೆ, ಬಹುಭಾಷಿಕರಾದ ಅವರ ಮನೆಮಾತು ತಮಿಳುಗನ್ನಡ; ಬರವಣಿಗೆ ಕನ್ನಡ ಮತ್ತು ಇಂಗ್ಲೀಶಿನಲ್ಲಿ; ಸಂಸ್ಕೃತ ಅಸ್ಸಾಮಿ ಬಂಗಾಳಿ ಭಾಷೆಗಳಲ್ಲಿ ದೊಡ್ಡ ವಿದ್ವತ್ತು. (ಅವರ ಅಸ್ಸಾಮಿ ಬಂಗಾಳಿ ತಿಳಿವಳಿಕೆಯಿಂದ ಕನ್ನಡಕ್ಕೆ ಪ್ರಯೋಜನವಿನ್ನೂ ಆಗಿಲ್ಲ). ಪಂಪ ಅವರ ಇಷ್ಟದ ಕವಿ. ಮೂಲತಃ ಇಂಗ್ಲೀಶ್ ಸಾಹಿತ್ಯದ ವಿದ್ಯಾರ್ಥಿಯಾದರೂ ಸಾಹಿತ್ಯಕ್ಕಿಂತ ಹೆಚ್ಚಾಗಿ ಅಂತರಾಷ್ಟ್ರೀಯ ರಾಷ್ಟ್ರೀಯ ರಾಜಕಾರಣದ ಮೇಲೆ ಹೆಚ್ಚು ಬರೆವಣಿಗೆ. ಅದರಲ್ಲೂ ಈಶಾನ್ಯ ಭಾರತದ ರಾಜಕಾರಣ ಭಾಷೆ ಧರ್ಮ ಸಂಸ್ಕೃತಿ ಕುರಿತ ಅವರ ತಿಳಿವಳಿಕೆ ಅಪರೂಪದ್ದು. ಇವನ್ನೆಲ್ಲ ಒಟ್ಟಿಗೆ ಹೇಗೆ ಕಲ್ಪಿಸಿಕೊಳ್ಳುವುದು? ಪ್ರಭಾಕರ ತಮ್ಮ ಕಾದಂಬರಿಯ ಒಂದು ಪಾತ್ರದ ಹಾಗೇ ಬದುಕಿದ್ದಾರೆ.

ಅವರು ಈಚೆಗೆ ಮಾತಾಡುತ್ತ ಕೊಂಚ ದಣಿದ ದನಿಯಲ್ಲಿ “ಸ್ವಾಮಿ, ಕರ್ನಾಟಕ ನನಗೆ ಸಾಕಾಗಿದೆ. ಗೌಹಾಟಿಗೆ ಹೋಗಬೇಕು ಅನಿಸುತ್ತಿದೆ’ ಎಂದು ಗೊಣಗಿದರು. “ಹೋಗಿ. ಆದರೆ ಮತ್ತೆಬನ್ನಿ’’ ಎಂದೆ. ಅವರಲ್ಲಿ ಕೋಲಾರ-ಗೌಹಾತಿಗಳ ನಡುವೆ ವಿಚಿತ್ರವಾದ ಆಕರ್ಷಣೆ ವಿಕರ್ಷಣೆಯಿದೆ. ಇದು ಬಹುಕಾಲ ಬೇರೆಡೆ ಬೆಳೆದ ಮರ ತನ್ನ ಮೂಲನೆಲಕ್ಕೆ ಬಂದು ನಾಟಿಗೊಂಡರೆ ಬೇರೂರುವ ಕಷ್ಟ. ಮರಳಿ ಹುಟ್ಟಿದೂರಿಗೆ ಬರುವಿಕೆ ಬಾಲ್ಯದ ನೆನಪುಗಳನ್ನು ಎಚ್ಚರಿಸಿ ಸುಖ ಕೊಡುತ್ತದೆ; ಆದರೆ ಹೊಚ್ಚ ಹೊಸತೆೆನಿಸುವಷ್ಟು ಬದಲಾಗಿರುವ ಪರಿಸರವು, ಕಾಡುವ ಏಕಾಂಗಿತನವನ್ನೂ ತಂದಿಡುತ್ತದೆ. ಯಾರ ಮರುಕವನ್ನೂ ಬಯಸದೆ ಏಕಾಂತದಲ್ಲಿ ಘನತೆಯಿಂದ ಕೊನೆಯ ದಿನಗಳನ್ನು ಕಳೆಯ ಬಯಸುವ ಇಂತಹ ಹಠಮಾರಿ ಜೀವಗಳು, ಒಳಗೇ ಮೃದ್ವಂಗಿಗಳಾಗಿ ಆಪ್ತಸಂಗಾತಕ್ಕೆ ಹಾತೊರೆಯುತ್ತಿರುತ್ತವೆ.

ಆ ಸಂಗಾತದ ಸ್ವರೂಪ ಎಂತಹುದು ಎಂದು ಸ್ಪಷ್ಟವಾಗುವುದಿಲ್ಲ. ನಾನು ‘ಕಾಮರೂಪಕ್ಕೆ ಯಾವಾಗ ಹೋಗುತ್ತೀರಿ’ ಎಂದು ಕೇಳಿದೆ: ‘ಆದಿಮದ 50ನೇ ಬೆಳುದಿಂಗಳ ಕಾರ್ಯಕ್ರಮ ಮುಗಿಸಿಕೊಂಡು’ ಎಂದರು.
ಪ್ರತಿಯೊಬ್ಬರಿಗೂ ಬಾಳಿನಲ್ಲಿ ಬಹುರೂಪಧಾರಣೆ ಮಾಡಬೇಕಾದ ಒತ್ತಡಗಳು ಎದುರಾಗಬಹುದು. ಆದರೆ ಈ ರೂಪಧಾರಣೆಗೆ ಕಾರಣ, ನಮ್ಮ ಇಚ್ಛಾನಿಚ್ಛೆಗಳು ಮಾತ್ರವಲ್ಲ, ಬಾಳಿನ ಅನೂಹ್ಯ ಒತ್ತಡಗಳು ಸಹ. ಈ ಒತ್ತಡಗಳು ಬರೆಹ ಇಲ್ಲವೇ ಮಾತಿನ ವ್ಯಾಖ್ಯಾನಕ್ಕೆ ಕೆಲವೊಮ್ಮೆ ನಿಲುಕುವಂತೆ ಇರುವುದಿಲ್ಲ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending