ದಿನದ ಸುದ್ದಿ
ಇದು ಭಂಡಗೆಟ್ಟ ಸರ್ಕಾರ, ಅಧಿಕಾರದ ಹೊರತಾಗಿ ಅವರಿಗೆ ಬೇರೇನೂ ಬೇಡ : ಬಿಜೆಪಿ ವಿರುದ್ಧ ಸಿದ್ದ ರಾಮಯ್ಯ ಕಿಡಿ
ಸುದ್ದಿದಿನ,ಬೆಂಗಳೂರು : ಮಹಾರಾಷ್ಟ್ರ ಚುನಾವಣಾ ಪ್ರಚಾರಕ್ಕೆಂದು ಹೋದಾಗ ಅಲ್ಲಿನ ಸರ್ಕಾರ ಐದು ವರ್ಷ ಏನು ಅಭಿವೃದ್ಧಿ ಮಾಡಿದೆ ಎಂಬ ಬಗ್ಗೆ ಅನುಮಾನ ಮೂಡಿತು. ಹೈದರಾಬಾದ್- ಪೂನಾ ಹೆದ್ದಾರಿಯಲ್ಲಿ ವಾಹನ ಸಂಚರಿಸಲು ಪರದಾಡಬೇಕಿದೆ. ಕೇಂದ್ರ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿಯವರ ತವರು ರಾಜ್ಯದ ಸ್ಥಿತಿಯೇ ಹೀಗೆ. ಆದರೂ ಜನ ಬಿಜೆಪಿಗೆ ಮತ ನೀಡುತ್ತಾರೆಯೇ? ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.
ಬಿಜೆಪಿಯವರು ಇವಿಎಂ ದುರುಪಯೋಗ ಮಾಡಿಕೊಂಡು ಚುನಾವಣೆಯಲ್ಲಿ ಗೆಲ್ಲುತ್ತಿರುವ ಸಾಧ್ಯತೆಗಳೂ ಇರಬಹುದು. ಅಭಿವೃದ್ಧಿ ಕಾರ್ಯಗಳನ್ನೇ ಮಾಡದಿದ್ದರೂ ಹೇಗೆ ಚುನಾವಣೆ ಗೆಲ್ಲಲು ಸಾಧ್ಯ? ಅಧಿಕಾರ ಹಿಡಿಯಲು ಚುನಾವಣಾ ಆಯೋಗ ಸೇರಿದಂತೆ ಎಲ್ಲ ಸ್ವಾಯತ್ತ ಸಂಸ್ಥೆಗಳನ್ನು ಬಿಜೆಪಿ ದುರ್ಬಳಕೆ ಮಾಡಿಕೊಳ್ಳತ್ತಿದೆ. ಚುನಾವಣೆ ಘೋಷಣೆಯಾದ ದಿನದಿಂದ ನೀತಿಸಂಹಿತೆ ಜಾರಿಯಾಗಬೇಕು. ಆದರೆ ರಾಜ್ಯದಲ್ಲಿ 70 ದಿನ ಮುಂಚಿತವಾಗಿ ಚುನಾವಣೆಯ ದಿನವನ್ನು ಘೋಷಿಸಿದರೂ ಇನ್ನೂ ನೀತಿಸಂಹಿತೆ ಜಾರಿಯಾಗಿಲ್ಲ. ಇವೆಲ್ಲ ಕೇಂದ್ರ ಸರ್ಕಾರ ಚುನಾವಣಾ ಆಯೋಗದ ಮೇಲೆ ಪ್ರಭಾವ ಬೀರುತ್ತಿರುವುದಕ್ಕೆ ಸ್ಪಷ್ಟ ನಿದರ್ಶನಗಳು. ಇವಿಎಂ ಯಂತ್ರಗಳು ನಂಬಿಕಾರ್ಹವಲ್ಲ ಎಂಬ ಕಾರಣದಿಂದ ಅಮೆರಿಕಾ, ಜಪಾನ್, ಜರ್ಮನಿಯಂತಹ ಮುಂದುವರೆದ ರಾಷ್ಟ್ರಗಳೇ ಸಾಂಪ್ರದಾಯಿಕ ಮತದಾನದ ಶೈಲಿಯಾದ ಮತಚೀಟಿ ಬಳಕೆಯನ್ನು ಮರು ಅಳವಡಿಕೆ ಮಾಡಿಕೊಂಡಿರುವಾಗ ಭಾರತ ಏಕೆ ಮಾಡಿಕೊಳ್ಳಬಾರದು? ಇಷ್ಟೊಂದು ಜನ ಇವಿಎಂ ವಿಶ್ವಾಸಾರ್ಹತೆ ಬಗ್ಗೆ ಪ್ರಶ್ನಿಸಿದರೂ ಅದರ ಮೇಲೆ ಬಿಜೆಪಿಗರ ಅತಿಯಾದ ಪ್ರೀತಿಗೆ ಕಾರಣವೇನು? ಎಂದಿದ್ದಾರೆ.
ಪ್ರವಾಹದಲ್ಲಿ ಮನೆ ಕಳೆದುಕೊಂಡವರಿಗೆ ಪರಿಹಾರಧನ ನೀಡಿಲ್ಲ, ತಾತ್ಕಾಲಿಕ ಶೆಡ್ ಹಾಕಿಕೊಟ್ಟಿಲ್ಲ, ಕೆಲವರಿಗೆ ಹತ್ತು ಸಾವಿರ ಕೊಟ್ಟಿದ್ದು ಬಿಟ್ಟರೆ ಇದುವರೆಗೂ ರಾಜ್ಯ ಸರ್ಕಾರ ಬೇರಾವ ಗಮನಾರ್ಹ ಕೆಲಸವನ್ನು ಮಾಡಿಲ್ಲ. ಈಗ ಮತ್ತೆ ಪ್ರವಾಹ ಪರಿಸ್ಥಿತಿ ಎದುರಾಗಿದೆ. ಸರ್ಕಾರ ಜನರ ಕಷ್ಟಕ್ಕೆ ಸ್ಪಂದಿಸುತ್ತಿಲ್ಲ. ಹೀಗಾದರೆ ಸಂತ್ರಸ್ತರ ಗತಿಯೇನು? ಯು.ಪಿ.ಎ ಅವಧಿಯಲ್ಲಿ ದೊರೆತ ಪರಿಹಾರಕ್ಕೂ, ಎನ್ಡಿಎ ಅವಧಿಯಲ್ಲಿ ದೊರೆತ ಪರಿಹಾರದ ಮೊತ್ತಕ್ಕು ತಾಳೆ ಹಾಕುವುದು ಮೂರ್ಖತನ. ಹಿಂದೆ ಸಂಭವಿಸಿದ ಪ್ರವಾಹಕ್ಕೂ, ಈ ಬಾರಿಯ ಪ್ರವಾಹಕ್ಕೂ ಸಾಕಷ್ಟು ವ್ಯತ್ಯಾಸವಿದೆ. ಸಾವು, ನೋವು, ನಷ್ಟದ ಪ್ರಮಾಣ ಈ ಬಾರಿ ಅತಿ ಹೆಚ್ಚಾಗಿದೆ. ನಾನು ಮೊದಲ ಬಜೆಟ್ ಮಂಡಿಸಿದಾಗ ಒಂದು ಲಕ್ಷ ಕೋಟಿಯಿದ್ದ ಬಜೆಟ್ ಗಾತ್ರ, ಕೊನೆಯ ಬಜೆಟ್ಗೆ ರೂ.2 ಲಕ್ಷ ಕೋಟಿ ಮೀರಿತ್ತು. ಅಂದರೆ ಹಣದ ಮೌಲ್ಯ ಒಂದೇ ಪ್ರಕಾರವಾಗಿ ಇಲ್ಲ. ಹಾಗಾಗಿ ಕೇಂದ್ರ ನೀಡಿರುವ ಪರಿಹಾರ ಹಣದ ಪ್ರಮಾಣದಲ್ಲಿ ಸ್ವಲ್ಪ ಹೆಚ್ಚಿರಬಹುದು. ಹಾಗೆಂದ ಮಾತ್ರಕ್ಕೆ ಅಗತ್ಯ ಪ್ರಮಾಣದ ನೆರವು ದೊರೆತಿದೆ ಎಂದಲ್ಲ ಎಂದು ಹೇಳಿದ್ದಾರೆ.
ನೆರೆ ಪರಿಹಾರ ಕಾರ್ಯಕ್ಕೆ ಸಂಬಂಧಿಸಿದಂತೆ ವಿರೋಧ ಪಕ್ಷವಾಗಿ ನಾವು ನಿತ್ಯವೂ ಸರ್ಕಾರವನ್ನು ಎಚ್ಚರಿಸುವ ಕಾರ್ಯ ಮಾಡುತ್ತಿದ್ದೇವೆ. ಆದರೆ ಇದು ಭಂಡಗೆಟ್ಟ ಸರ್ಕಾರ, ಅಧಿಕಾರದ ಹೊರತಾಗಿ ಅವರಿಗೆ ಬೇರೇನೂ ಬೇಡ. “ನಿದ್ರಿಸುತ್ತಿರುವವರನ್ನು ಎಬ್ಬಿಸಬಹುದು, ನಿದ್ರಿಸುತ್ತಿರುವಂತೆ ನಟಿಸುವವರನ್ನು ಎಬ್ಬಿಸುವುದು ಅಸಾಧ್ಯದ ಮಾತು” ಎಂದು ಕೆಂಡಾ ಮಂಡಲವಾಗಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243
ದಿನದ ಸುದ್ದಿ
ಶಿವಮೊಗ್ಗಕ್ಕೆ ಇಂದು ಪ್ರಧಾನಿ ನರೇಂದ್ರ ಮೋದಿ
ಸುದ್ದಿದಿನ, ಶಿವಮೊಗ್ಗ : ಪ್ರಧಾನಮಂತ್ರಿ ನರೇಂದ್ರ ಮೋದಿ ಇಂದು ಮಧ್ಯಾಹ್ನ 2 ಗಂಟೆಗೆ ಶಿವಮೊಗ್ಗದಲ್ಲಿ ಬೃಹತ್ ಸಾರ್ವಜನಿಕ ಸಭೆಯನ್ನುದ್ದೇಶಿ ಮಾತನಾಡಲಿದ್ದಾರೆ.
ಯುವಜನರು, ಮಹಿಳೆಯರು, ರೈತರು ಸೇರಿ ಸುಮಾರು ಎರಡೂವರೆ ಲಕ್ಷಕ್ಕೂ ಹೆಚ್ಚು ಜನರು ಕಾರ್ಯಕ್ರಮದಲ್ಲಿ ಭಾಗವಹಿಸುವ ನಿರೀಕ್ಷೆ ಇದೆ ಎಂದು ವಿಧಾನಪರಿಷತ್ ಮುಖ್ಯ ಸಚೇತಕ ಎನ್.ರವಿಕುಮಾರ್ ಶಿವಮೊಗ್ಗದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243
ದಿನದ ಸುದ್ದಿ
ಚುನಾವಣಾ ಬಾಂಡ್ ಕುರಿತ ದತ್ತಾಂಶ ಬಿಡುಗಡೆ
ಸುದ್ದಿದಿನ,ನವದೆಹಲಿ : ಚುನಾವಣಾ ಬಾಂಡ್ ಕುರಿತಂತೆ ಸುಪ್ರೀಂಕೋರ್ಟ್ನ ರಿಜಿಸ್ಟ್ರಿ ಇಂದ ಲಭ್ಯವಾದ ಅಂಕಿಕೃತ ದತ್ತಾಂಶ ಮಾದರಿಯನ್ನು ಚುನಾವಣಾ ಆಯೋಗ ಭಾನುವಾರ ತನ್ನ ವೆಬ್ಸೈಟ್ನಲ್ಲಿ ಅಪ್ಲೋಡ್ ಮಾಡಿದೆ. www.eci.gov.in/candidate-politicalparty ವೆಬ್ಸೈಟ್ನಲ್ಲಿ ಈ ದತ್ತಾಂಶ ಲಭ್ಯವಿರುತ್ತದೆ.
ಸುಪ್ರೀಂಕೋರ್ಟ್ ನಿರ್ದೇಶಿಸಿದಂತೆ ರಾಜಕೀಯ ಪಕ್ಷಗಳು ಚುನಾವಣಾ ಬಾಂಡ್ ಕುರಿತ ದತ್ತಾಂಶಗಳನ್ನು ಮೊಹರು ಹಾಕಿದ ಲಕೋಟೆಯಲ್ಲಿ ಸಲ್ಲಿಸಿದ್ದವು ಎಂದು ಚುನಾವಣಾ ಆಯೋಗದ ಹೇಳಿಕೆ ತಿಳಿಸಿದೆ. ರಾಜಕೀಯ ಪಕ್ಷಗಳಿಂದ ಸ್ವೀಕರಿಸಿದ ಮೊಹರು ಹಾಕಿದ ಲಕೋಟೆಗಳನ್ನು ತೆರೆಯದೇ ಸುಪ್ರೀಂಕೋರ್ಟ್ಗೆ ಸಲ್ಲಿಸಲಾಗಿತ್ತು.
ಇದೇ 15ರಂದು ಸುಪ್ರೀಂಕೋರ್ಟ್ ನೀಡಿದ ಆದೇಶದ ಮೇರೆಗೆ ಸುಪ್ರೀಂಕೋರ್ಟ್ನ ರಿಜಿಸ್ಟ್ರಿ, ಭೌತಿಕ ಪ್ರತಿ ಹಾಗೂ ಅದರ ಡಿಜಿಟಲ್ ದಾಖಲೆಯಿರುವ ಪೆನ್ಡ್ರೈವ್ ಒಳಗೊಂಡ ಮೊಹರು ಹಾಕಿದ ಲಕೋಟೆಯನ್ನು ಹಿಂತಿರುಗಿಸಿತ್ತು.
ಸುದ್ದಿದಿನ.ಕಾಂ|ವಾಟ್ಸಾಪ್|9980346243
ದಿನದ ಸುದ್ದಿ
ರಶ್ಮಿ ಚಂದ್ರಗಿರಿ ಅವರಿಗೆ ಪಿಎಚ್.ಡಿ ಪದವಿ
ಸುದ್ದಿದಿನ,ಹಾವೇರಿ : ನಗರದ ರಶ್ಮಿ ಚಂದ್ರಗಿರಿ ಅವರು ಕರ್ನಾಟಕ ವಿಶ್ವವಿದ್ಯಾಲಯಕ್ಕೆ ಮಂಡಿಸಿದ “ದಲಿತ ಬಂಡಾಯ ಕಾದಂಬರಿಗಳಲ್ಲಿ ಸಾಂಸ್ಕೃತಿಕ ನೆಲೆಗಳು” ಎಂಬ ಮಹಾಪ್ರಬಂಧಕ್ಕೆ ಕರ್ನಾಟಕ ವಿಶ್ವವಿದ್ಯಾಲಯ ಪಿಎಚ್.ಡಿ ಪದವಿ ಪ್ರಧಾನ ಮಾಡಿದೆ.
ಇವರಿಗೆ ಡಾ.ಬಿಎಸ್.ಭಜಂತ್ರಿ , ಸಹಾಯಕ ಪ್ರಧ್ಯಾಪಕರು ಕರ್ನಾಟಕ ಕಲಾ ಮಹಾವಿದ್ಯಾಲಯ ಧಾರವಾಡ ಇವರು ಮಾರ್ಗದರ್ಶನ ಮಾಡಿದ್ದರು.
ಬರವಣಿಗೆಯಲ್ಲಿ ತೊಡಗಿಸಿಕೊಂಡಿರುವ ರಶ್ಮಿ ಚಂದ್ರಗಿರಿಯವರ ಹಲವು ಲೇಖನಗಳು ನಿಯತಕಾಲಿಕೆಗಳಲ್ಲಿ ಪ್ರಕಟಗೊಂಡಿವೆ. ಪ್ರಸ್ತುತ ಇವರು ಉಪನ್ಯಾಸಕಿಯಾಗಿ ಕಾರ್ಯನಿರ್ವಹಿಸಿತ್ತಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243