ದಿನದ ಸುದ್ದಿ
ಬಡ್ತಿ ಮೀಸಲು : ‘ಸುಪ್ರೀಂ ’ ತೀರ್ಪು ಇಡೀ ದೇಶಕ್ಕೆ ಮಾದರಿ
“ಬಿ.ಕೆ.ಪವಿತ್ರ ಮತ್ತು ಇತರರು v/s ಭಾರತ ಸರ್ಕಾರ” ಪ್ರಕರಣಕ್ಕೆ ಸಂಬಂಧಿಸಿದಂತೆ 9-2-17ರಂದು ಸುಪ್ರೀಂ ಕೋರ್ಟ್ ನ ಪೀಠವೊಂದು ರಾಜ್ಯ ಸರ್ಕಾರದ ‘ಎಸ್ಸಿ/ಎಸ್ಟಿಗಳ ನೌಕರಿ ಬಡ್ತಿ ಮೀಸಲಾತಿ ಕಾಯಿದೆ-2002’ ಅನ್ನು ರದ್ದುಗೊಳಿಸಿ ತೀರ್ಪು ನೀಡಿದ್ದು ಎಲ್ಲರಿಗೂ ತಿಳಿದಿದೆ. ಈ ತೀರ್ಪಿನ ಸಂದರ್ಭದಲ್ಲಿ ಇದನ್ನು ರದ್ದುಗೊಳಿಸಲಿಕ್ಕೆ ನ್ಯಾಯಾಲಯ ನೀಡಿದ್ದ ಕಾರಣ ”ಸದರಿ ವರ್ಗಗಳ(ಎಸ್ಸಿ/ಎಸ್ಟಿ) ಹಿಂದುಳಿದಿರುವಿಕೆ, ಸೇವಾದಕ್ಷತೆ ಮತ್ತು ಸಮರ್ಪಕ ಪ್ರಾತಿನಿಧ್ಯದ ಕೊರತೆಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಸೂಕ್ತ ದಾಖಲೆಗಳನ್ನು ಸಂಗ್ರಹಿಸಿಲ್ಲ” ಎಂಬುದಾಗಿತ್ತು. ಈ ನಿಟ್ಟಿನಲ್ಲಿ ಈ ಸಂಬಂಧ ಸಾಕಷ್ಟು ಹೋರಾಟಗಳು ದಲಿತ ನೌಕರರು ಮತ್ತು ಇತರ ಸಂಘಗಳಿಂದ ನಡೆದು ಸರ್ಕಾರ ಕಡೆಗೆ ಅಂದಿನ ಅಪರ ಮುಖ್ಯ ಕಾರ್ಯದರ್ಶಿ ಕೆ.ರತ್ನಪ್ರಭಾರವರ ನೇತೃತ್ವದಲ್ಲಿ ಸಮಿತಿಯೊಂದನ್ನು ರಚಿಸಿ ಅವರು ನೀಡಿದ ವರದಿ ಆಧಾರದ ಮೇಲೆ ಮಸೂದೆಯೊಂದನ್ನು ಸಿದ್ಧಪಡಿಸಿ, ರಾಜ್ಯಪಾಲರಿಂದ ಅದು ತಿರಸ್ಕರಿಸಲ್ಪಟ್ಟು, ರಾಷ್ಟ್ರಪತಿಗಳ ಅಂಗಳಕ್ಕೆ ಅದು ತಲುಪಿ, ಅಲ್ಲಿಂದ ಅದು ಅಂಗೀಕಾರಗೊಂಡು ಕಾನೂನಾಗಿ ಜಾರಿಯಾಯಿತು.
ದುರಂತವೆಂದರೆ ಈ ನೂತನ ಕಾಯಿದೆಯ ಸಿಂಧುತ್ವ ಪ್ರಶ್ನಿಸಿ ಎಸ್ಸಿ/ಎಸ್ಟಿಗಳ ಬಡ್ತಿ ಮೀಸಲಾತಿ ವಿರೋಧಿಸುವ ‘ಅಹಿಂಸಾ’ ಸಂಘಟನೆ ಮತ್ತೆ ಸುಪ್ರೀಂ ಕೋರ್ಟಿನ ಮೊರೆ ಹೋಗಿ, ಈ ಸಂಬಂಧ ಅವರು ಸಲ್ಲಿಸಿದ ಅರ್ಜಿ ನ್ಯಾಯಮೂರ್ತಿಗಳಾದ ಡಿ.ವೈ.ಚಂದ್ರಚೂಡ್ ಮತ್ತು ಯು.ಯು.ಲಲಿತ್ರವರ ನೇತೃತ್ವದ ಪೀಠದಲ್ಲಿ ವಿಚಾರಣೆಗೊಂಡು ಈಗ ತೀರ್ಪನ್ನು ಕಂಡಿದೆ. ಸಂತಸದ ವಿಚಾರವೆಂದರೆ ನ್ಯಾಯಪೀಠ ಎಸ್ಸಿ/ಎಸ್ಟಿ ನೌಕರರ ಬಡ್ತಿ ಮೀಸಲಾತಿಗೆ ಒಪ್ಪಿಗೆಯ ಮುದ್ರೆಯೊತ್ತಿದೆ, ಅದಕ್ಕೊಂದು ನೈತಿಕ ಅರ್ಥವನ್ನು ನೀಡಿದೆ. ಈ ನಿಟ್ಟಿನಲ್ಲಿ ಹೇಳುವುದಾದರೆ ಬಡ್ತಿ ಮೀಸಲಾತಿ ಕುರಿತ ಸುಪ್ರೀಂ ಕೋರ್ಟ್ ಈ ತೀರ್ಪು ಅಕ್ಷರಶಃ ಸ್ವಾಗತಾರ್ಹ ಮತ್ತು ನ್ಯಾಯಾಂಗದ ವಿಶ್ವಾಸಾರ್ಹತೆಯನ್ನು ಈ ತೀರ್ಪು ಮತ್ತೊಮ್ಮೆ ಎತ್ತಿಹಿಡಿದಿದೆ. ಅಲ್ಲದೆ ಬಿಕ್ಕಟ್ಟಿನ ಸಂದರ್ಭಗಳಲ್ಲಿ ಭಾರತದ ಸಂವಿಧಾನವನ್ನು, ಅದರ ಮೂಲ ಅಂಶಗಳನ್ನು ನ್ಯಾಯಾಂಗ ರಕ್ಷಿಸುತ್ತದೆ ಎಂಬುದಕ್ಕೆ ಈ ತೀರ್ಪು ಮತ್ತೊಂದು ದಾಖಲೆಯಾಗಿ ಹೊರಬಂದಿದೆ.
ಯಾಕೆಂದರೆ ಎಸ್ಸಿ/ಎಸ್ಟಿ ನೌಕರರಿಗೆ ಬಡ್ತಿಯಲ್ಲೂ ಮೀಸಲಾತಿ, ಅದನ್ನು ಭಾರತದ ಸಂವಿಧಾನ ಅನುಚ್ಛೇದ 16(4)(ಎ) ಬಹಳ ಸ್ಪಷ್ಟವಾಗಿ ದಾಖಲಿಸುತ್ತದೆ. ಆ ಭಾಗವನ್ನು ಇಲ್ಲಿ ಯಥಾವತ್ ಉಲ್ಲೇಖಿಸುವುದಾದರೆ “ಅನುಚ್ಛೇದ 16(4)(ಎ): ಈ ಅನುಚ್ಛೇದದಲ್ಲಿರುವುದು ಯಾವುದೂ ರಾಜ್ಯದ ಅಧೀನದಲ್ಲಿರುವ ಸೇವೆಗಳಲ್ಲಿ ಅನುಸೂಚಿತ ಜಾತಿಗಳು ಮತ್ತು ಅನುಸೂಚಿತ ಬುಡಕಟ್ಟುಗಳವರು ಸಾಕಷ್ಟು ಪ್ರಾತಿನಿಧ್ಯವನ್ನು ಹೊಂದಿಲ್ಲವೆಂದು ರಾಜ್ಯವು ಅಭಿಪ್ರಾಯಪಟ್ಟಲ್ಲಿ, ರಾಜ್ಯದ ಅಧೀನದ ಸೇವೆಗಳಲ್ಲಿನ (ಯಾವುದೇ ವರ್ಗದ ಅಥವಾ ವರ್ಗಗಳ ಹುದ್ದೆಗಳಿಗೆ, ತತ್ಪರಿಣಾಮದ ಜ್ಯೇಷ್ಠತೆಯೊಂದಿಗೆ ಬಡ್ತಿ ವಿಷಯದಲ್ಲಿ) ಅಂಥವರಿಗಾಗಿ ಮೀಸಲಾತಿಯ ಯಾವುದೇ ಉಪಬಂಧವನ್ನು ಮಾಡಲು ರಾಜ್ಯಕ್ಕಿರುವ ಅಧಿಕಾರವನ್ನು ಪ್ರತಿಬಂಧಿಸತಕ್ಕದಲ್ಲ”. ಇದರ ಪ್ರಕಾರ ರಾಜ್ಯ ಸರ್ಕಾರ ರೂಪಿಸಿ ರಾಷ್ಟ್ರಪತಿಗಳಿಂದ ಅನುಮೋದನೆ ಪಡೆದ ಸದ್ಯ ಸುಪ್ರೀಂ ಅಸ್ತು ಎಂದಿರುವ ರಾಜ್ಯ ಸರ್ಕಾರದ ‘ಎಸ್ಸಿ/ಎಸ್ಟಿ ಬಡ್ತಿ ಮೀಸಲಾತಿ ಕಾಯಿದೆ-2018’ ಅನ್ನು ಯಾರೂ ಕೂಡ ಪ್ರತಿಬಂಧಿಸಲು ಸಾಧ್ಯವಿಲ್ಲ.
ಹಾಗೆಯೇ ಅನುಚ್ಛೇದ 16ಕ್ಕೆ 2002ರಲ್ಲಿ ಮಾಡಲಾದ 85ನೇ ತಿದ್ದುಪಡಿ ಕೂಡ “ಸದರಿ ನೌಕರ(ಎಸ್ಸಿ/ಎಸ್ಟಿ) ಬಡ್ತಿಗೊಂಡ ನಂತರವೂ ಬಡ್ತಿಗೊಂಡ ತನ್ನ ಸ್ಥಾನದಲ್ಲಿ ತತ್ಪರಿಣಾಮ ಉಂಟಾಗಬಹುದಾದ ಜ್ಯೇಷ್ಠತೆಗೆ ಅರ್ಹನಾಗುತ್ತಾನೆ” ಎಂದು ಸ್ಪಷ್ಟವಾಗಿ ಹೇಳುತ್ತದೆ. ಒಟ್ಟಾರೆ ಸಂವಿಧಾನದ ನಿಲುವುಗಳು ಇಷ್ಟೊಂದು ಸ್ಪಷ್ಟವಾಗಿರುವಾಗ ಮತ್ತು ಸಂಸತ್ತಿನ ತದನಂತರದ ಯಾವುದೇ ತಿದ್ದುಪಡಿಗಳ ಮೂಲಕವೂ ಅದು ರದ್ದುಗೊಂಡಿಲ್ಲದಿರುವಾಗ ಎಸ್ಸಿ/ಎಸ್ಟಿ ನೌಕರರಿಗೆ ಬಡ್ತಿಯಲ್ಲಿ ಮೀಸಲಾತಿ ನಿರಾಕರಿಸುವುದು ಯಾರಿಗಾದರೂ ಹೇಗೆ ತಾನೆ ಸಾಧ್ಯ?
ಈ ಸಂದರ್ಭದಲ್ಲಿ ತನ್ನ ಈ ತೀರ್ಪಿನಲ್ಲಿ ನ್ಯಾಯಮೂರ್ತಿಗಳಾದ ಡಿ.ವೈ.ಚಂದ್ರಚೂಡ್ ಮತ್ತು ಯು.ಯುಲಲಿತ್ರವರುಗಳ ನೇತೃತ್ವದ ಪೀಠ ಮೀಸಲಾತಿಗೊಂದು ಅಪರೂಪದ ವ್ಯಾಖ್ಯಾನ ನೀಡುತ್ತಾ “ಜನತೆಯು ಯಾವ(ಸಾಮಾಜಿಕ) ಮಟ್ಟದಲ್ಲಿ ಜನಿಸಿದ್ದಾರೆ ಎಂಬುದನ್ನು ಲೆಕ್ಕಕ್ಕೆ ತೆಗೆದುಕೊಂಡು ಪರಿಣಾಮಕಾರಿ ಮತ್ತು ನೈಜಸಮಾನತೆಯ ಆಶಯವನ್ನು ಪ್ರಾಮಾಣಿಕವಾಗಿ ಈಡೇರಿಸುವುದೇ ಎಸ್ಸಿ/ಎಸ್ಟಿಗಳ ಮೀಸಲಾತಿ” ಎಂದಿದೆ. ಹಾಗೆಯೇ ಅರ್ಜಿದಾರರು ಪ್ರಸ್ತಾಪಿಸಿದ್ದ ನೌಕರರ ದಕ್ಷತೆಗೆ ಸಂಬಂಧಿಸಿದಂತೆ ಹೇಳಿರುವ ನ್ಯಾಯಪೀಠ ಈ ಸಂಬಂಧದ ಸಂವಿಧಾನ ಅನುಚ್ಛೇದ 335ನ್ನು ಪ್ರಸ್ತಾಪಿಸುತ್ತಾ ದಕ್ಷತೆ ಅಳೆಯುವ ಒಂದೇ ಮಾನದಂಡ ಇತರರಂತೆ ಎಸ್ಸಿ/ಎಸ್ಟಿಗಳು ಕೂಡ ಆ ಹುದ್ದೆಯ ಸಂಬಂಧಿತ ಪದವಿ ಮತ್ತು ಪರೀಕ್ಷೆಗಳನ್ನು ಪಾಸುಮಾಡಿರುವುದಾಗಿರುತ್ತದೆ. ಆದ್ದರಿಂದ ಅದನ್ನು(ದಕ್ಷತೆ) ಎಲ್ಲರಿಗೂ ಅನ್ವಯಿಸುವಂತಹ ಒಂದು ತಟಸ್ಥ ಮಾನದಂಡ ಎಂದು ತೆಗೆದುಕೊಳ್ಳಬೇಕೆ ಹೊರತು ಎಸ್ಸಿ/ಎಸ್ಟಿಗಳಿಗೆ ವಿಶೇಷವಾಗಿ ಅಲ್ಲ ಎಂದಿದೆ. ಹಾಗೆಯೇ ಆಡಳಿತದಲ್ಲಿ ‘ದಕ್ಷತೆ’ ಎಂಬ ಪದವನ್ನು ಪ್ರಸ್ತಾಪಿಸುವ ಸಂವಿಧಾನದ ಅದೇ ಅನುಚ್ಛೇದ 335ರ ಮುಂದಿನ ಭಾಗಗಳನ್ನು ಪ್ರಸ್ತಾಪಿಸಿ ನ್ಯಾಯಪೀಠ, ಆ ಮುಂದಿನ ಅಂಶಗಳಾದ “1.ಎಸ್ಸಿ/ಎಸ್ಟಿಗಳಿಗೆ ಅರ್ಹತಾ ಪರೀಕ್ಷೆಗಳಲ್ಲಿ ಅಂಕದಲ್ಲಿ ರಿಯಾಯಿತಿ ನೀಡಬೇಕು. 2.ಮೌಲ್ಯಮಾಪನ ಮಟ್ಟದಲ್ಲೂ ರೀಯಾಯಿತಿ ನೀಡಬೇಕು 3.ಬಡ್ತಿಯಲ್ಲೂ ಮೀಸಲಾತಿ ನೀಡಬೇಕು” ಎಂದಿರುವುದನ್ನು ಒತ್ತಿ ಹೇಳುತ್ತಾ, ಜೊತೆಗೆ ಯಾವುದೇ ಕಾರಣಕ್ಕೂ ಅನುಚ್ಛೇದ 335ರಲ್ಲಿ ಪ್ರಸ್ತಾಪಿಸಿರುವ ‘ದಕ್ಷತೆ’ಯ ಆ ಅಂಶ ಎಸ್ಸಿ/ಎಸ್ಟಿಗಳ ಸದರಿ ರಿಯಾಯಿತಿಗಳಿಗೆ ಸಂಬಂಧಿಸಿದಂತೆ ಯಾವುದೇ ರೀತಿಯಲ್ಲೂ ತೊಂದರೆ ನೀಡತಕ್ಕದಲ್ಲ ಎಂದು ಸ್ಪಷ್ಟವಾಗಿ ತನ್ನ ಅಭಿಪ್ರಾಯ ದಾಖಲಿಸಿದೆ. ಆ ಮೂಲಕ ಬಡ್ತಿ ಮೀಸಲಿಗೆ ಸಹಜವಾಗಿ ಅಸ್ತು ಎಂದಿದೆ.
ಈ ಸಂದರ್ಭದಲ್ಲಿ ಸಂವಿಧಾನ ರಚನೆಯ ಸಮಯದಲ್ಲಿ ಅಂದರೆ 1948 ನವೆಂಬರ್ 30ರಂದು ಸಂವಿಧಾನ ಸಭೆಯೊಳಗೆ ಚರ್ಚೆಯಲ್ಲಿ ಪಾಲ್ಗೊಂಡು ಬಾಬಾಸಾಹೇಬ್ ಅಂಬೇಡ್ಕರರು ಹೇಳುವ ಮಾತೊಂದನ್ನು ಇಲ್ಲಿ ಉಲ್ಲೇಖಿಸಬೇಕಾಗುತ್ತದೆ. ಅದೆಂದರೆ “ಆಡಳಿತದಲ್ಲಿ ಸಮಾನತೆ ಇರಬೇಕು. ಅದೇ ಸಮಯದಲ್ಲಿ ಆಡಳಿತದಲ್ಲಿ ಇದುವರೆವಿಗೂ ಸೂಕ್ತ ಅವಕಾಶವನ್ನು ಪಡೆಯದ ಕೆಲವು ವರ್ಗಗಳಿಗೆ ಮೀಸಲಾತಿಯೂ ಇರಬೇಕು”(ಅಂಬೇಡ್ಕರ್ ಬರಹಗಳು, ಇಂಗ್ಲಿಷ್ ಸಂ.13, ಪು.392). ಅಂದಹಾಗೆ ಅಂಬೇಡ್ಕರ್ರವರು ಇಲ್ಲಿ ಹೇಳಿರುವಂತೆ ಉದಾಹರಣೆಗೆ ಎಸ್ಸಿ/ಎಸ್ಟಿಗಳಿಗೆ ಬಡ್ತಿಯಲ್ಲಿ ಮೀಸಲಾತಿಯೇ ಇದ್ದಿರಲಿಲ್ಲ ಎಂದುಕೊಳ್ಳುವುದಾದರೆ ಅಂತಹ ಸಮಯದಲ್ಲಿ ಗ್ರೂಪ್ ಎ ಮತ್ತು ಗ್ರೂಪ್ ಬಿ ನೌಕರಿಗಳೊಳಗೆ ಎಸ್ಸಿ/ಎಸ್ಟಿಗಳು ಬರುವುದು ಸಾಧ್ಯವಿತ್ತೇ? ಎಂದು ಕೇಳಬೇಕಾಗುತ್ತದೆ. ಯಾಕೆಂದರೆ ಸರ್ಕಾರಿ ನೌಕರಿ ಹೊರತುಪಡಿಸಿ ಮೀಸಲಾತಿ ಇಲ್ಲದ ಇತರೆ ಕ್ಷೇ ತ್ರಗಳಲ್ಲಿ ಅಂದರೆ ವ್ಯಾಪಾರ- ವ್ಯವಹಾರ, ಕೈಗಾರಿಕೆ, ಕೃಷಿ… ಇಲ್ಲೆಲ್ಲ ಎಸ್ಸಿ/ಎಸ್ಟಿಗಳ ಪಾಲು ಎಷ್ಟಿದೆ ಎಂದು ಯಾರಾದರೂ ಗಮನಿಸಿದರೆ ಖಂಡಿತ ಎಸ್ಸಿ/ಎಸ್ಟಿ ಬಡ್ತಿ ಮೀಸಲಾತಿಯ ಪ್ರಾಮುಖ್ಯತೆ ಏನು ಎಂದು ಅಂತಹವರಿಗೆ ಅರ್ಥ ಆಗಿಯೇ ಆಗುತ್ತದೆ.
ಹ್ಞಾಂ, ಈ ಸಂದರ್ಭದಲ್ಲಿ ಎಸ್ಸಿ/ಎಸ್ಟಿಗಳ ಬಡ್ತಿ ಮೀಸಲು ವಿರೋಧಿಸಿ ಸುಪ್ರಿಂ ಮೆಟ್ಟಿಲೇರಿರುವವರೂ ಗಮನಿಸಬೇಕಾದ ಒಂದು ವಿಷಯವೆಂದರೆ ಅಂಥಹವರು ‘ಇನ್ನೊಬ್ಬರಿಗೇಕೆ ಕೊಟ್ಟಿದ್ದೀರಿ ಎನ್ನುವ ಬದಲು ನಮಗೆ ಏಕೆ ಕೊಟ್ಟಿಲ್ಲ ಎಂದು ಕೇಳುವುದು ಸೂಕ್ತವಾಗುತ್ತದೆ” ಎಂಬುದು. ಏಕೆಂದರೆ ಎಸ್ಸಿ/ಎಸ್ಟಿಗಳಂತೆ ಹಿಂದುಳಿದ ವರ್ಗಗಳಿಗೂ(ಓಬಿಸಿಗಳು) ಮಂಡಲ್ ವರದಿ ಶೇ.27ರಷ್ಟು ಉದ್ಯೋಗ ನೇಮಕಾತಿಯಲ್ಲಿ ಮೀಸಲು ನೀಡುತ್ತದೆ. ಅಂದಹಾಗೆ ಸದರಿ ವರ್ಗಗಳವರು “ನಮಗೆ ನೇಮಕದಲ್ಲಿ ಮೀಸಲು ನೀಡಿರುವಂತೆ ಬಡ್ತಿಯಲ್ಲೂ ನೀಡಿ” ಎಂದು ಸರ್ಕಾರವನ್ನು ಒತ್ತಾಯಿಸಿದರೆ ಸಮಸ್ಯೆಯೇ ಇರುವುದಿಲ್ಲ! ಆದ್ದರಿಂದ ರಾಜ್ಯ ಸರ್ಕಾರದ ಎಸ್ಸಿ/ಎಸ್ಟಿ ನೌಕರರ ಬಡ್ತಿ ಮೀಸಲಾತಿಯ ನೂತನ ಕಾಯಿದೆಯ ಈ ನಿಟ್ಟಿನಲ್ಲಿ ಸುಪ್ರಿಂ ಕೋರ್ಟ್ ನೀಡಿರುವ ಈ ತೀರ್ಪು ಅಕ್ಷರಶಃ ಮಾದರಿಯಾದುದು. ಇಡೀ ದೇಶವೇ ಇದನ್ನು ಅನುಕರಿಸುವಂತಹದ್ದು ಎಂದು ನಿಸ್ಸಂಶಯವಾಗಿ ಹೇಳಬಹುದು.
–ರಘೋತ್ತಮ ಹೊ.ಬ
ಸುದ್ದಿದಿನ.ಕಾಂ|ವಾಟ್ಸಾಪ್|9980346243
ದಿನದ ಸುದ್ದಿ
ಸಂವಿಧಾನಕ್ಕೆ ಅಪಾಯವಾದರೆ, ಬಡವರ, ಶ್ರಮಿಕರ ಭವಿಷ್ಯಕ್ಕೆ ಅಪಾಯವಾದಂತೆ : ಸಿಎಂ ಸಿದ್ದರಾಮಯ್ಯ
ಸುದ್ದಿದಿನ,ಮಡಿಕೇರಿ : ದೇಶದ ಸಂವಿಧಾನಕ್ಕೆ ಅಪಾಯವಾದರೆ ಈ ದೇಶದ ಮಹಿಳೆಯರ, ಬಡವರ, ಮಧ್ಯಮ ವರ್ಗದವರ, ಶ್ರಮಿಕರ, ಬದುಕು-ಭವಿಷ್ಯಕ್ಕೆ ಅಪಾಯ ಎಂದರ್ಥ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಮಡಿಕೇರಿಯಲ್ಲಿ ನಡೆದ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ಈ ಲೋಕಸಭಾ ಚುನಾವಣೆ ನಮಗೊಂದು ಅವಕಾಶ. ಈ ಬಾರಿ ಬಿಜೆಪಿಯನ್ನು ಸೋಲಿಸಿ ಕಾಂಗ್ರೆಸ್ ಗೆಲ್ಲಿಸುವ ಮೂಲಕ ಪ್ರಜಾತಂತ್ರ ಉಳಿಸಬೇಕು ಎಂದು ಕರೆ ನೀಡಿದರು.
ಬಳಿಕ ತುಮಕೂರಿನಲ್ಲಿ ಮಾತನಾಡಿದ ಅವರು, ರಾಜ್ಯದ ಹಿತಾಸಕ್ತಿ ಕಾಪಾಡುವಲ್ಲಿ ಕಳೆದ ಲೋಕಸಭಾ ಚುನಾವಣೆಯಲ್ಲಿ ಆಯ್ಕೆಯಾಗಿದ್ದ ಬಿಜೆಪಿ ಸಂಸದರು ವಿಫಲರಾಗಿದ್ದಾರೆ ಎಂದು ಮುಖ್ಯಮಂತ್ರಿ ಆರೋಪಿಸಿದರು.
ಮಹಿಳೆಯರ ಅಭ್ಯುದಯಕ್ಕಾಗಿ ಪಂಚ ಗ್ಯಾರಂಟಿ ಯೋಜನೆಗಳನ್ನು ನುಡಿದಂತೆ ಜಾರಿಗೆ ತಂದಿದ್ದೇವೆ. ಇದರಿಂದಾಗಿ ಮಹಿಳೆಯರ ಜೀವನದಲ್ಲಿ ಸುಧಾರಣೆ ಕಂಡಿದೆ, ಈ ಯೋಜನೆಯ ಫಲಾನುಭವಿಗಳ ಬಗ್ಗೆ ಟೀಕಿಸುವುದು ಸರಿಯಲ್ಲ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಮಡಿಕೇರಿಯಲ್ಲಿ ನಡೆದ ಜನಧ್ವನಿ-2 ಬೃಹತ್ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದೆ.
ಸಂವಿಧಾನಕ್ಕೆ ಅಪಾಯ ಎಂದರೆ ದೇಶದ ಮಹಿಳೆಯರು, ಬಡವರು, ಮಧ್ಯಮ ವರ್ಗದವರು, ಶೂದ್ರರು, ಶ್ರಮಿಕರ ಬದುಕು-ಭವಿಷ್ಯಕ್ಕೆ ಅಪಾಯ ಎಂದರ್ಥ.
ಭಾರತದಲ್ಲಿ ಪ್ರಜಾತಂತ್ರ ಅಪಾಯದಲ್ಲಿದೆ. ಇದನ್ನು ಉಳಿಸುವ ಅನಿವಾರ್ಯತೆ ನಮ್ಮೆಲ್ಲರ ಮುಂದಿದೆ. ಈ ಲೋಕಸಭಾ ಚುನಾವಣೆ ನಮಗೊಂದು… pic.twitter.com/UapeRxBcZP
— Siddaramaiah (@siddaramaiah) April 14, 2024
ಸುದ್ದಿದಿನ.ಕಾಂ|ವಾಟ್ಸಾಪ್|9980346243
ದಿನದ ಸುದ್ದಿ
ದಾವಣಗೆರೆ | ದ್ವಿತೀಯ ಪಿ.ಯು.ಸಿ ಪರೀಕ್ಷೆ; ಜಿಲ್ಲೆಗೆ ಶೇ 80.96 ರಷ್ಟು ಫಲಿತಾಂಶ
ಸುದ್ದಿದಿನ,ದಾವಣಗೆರೆ : 2024 ರ ಮಾರ್ಚ್ನಲ್ಲಿ ನಡೆದ ದ್ವಿತೀಯ ಪಿ.ಯು.ಸಿ. ಫಲಿತಾಂಶ ಪ್ರಕಟವಾಗಿದ್ದು ಜಿಲ್ಲೆಗೆ ಶೇ 80.96 ರಷ್ಟು ಫಲಿತಾಂಶ ಬಂದಿದ್ದು ಶೇ 74.27 ಗಂಡು, ಶೇ 82.01 ರಷ್ಟು ಹೆಣ್ಣು ಮಕ್ಕಳು ಉತ್ತೀರ್ಣರಾಗಿದ್ದಾರೆ ಎಂದು ಜಿಲ್ಲಾಧಿಕಾರಿ ಡಾ; ವೆಂಕಟೇಶ್ ಎಂ.ವಿ ತಿಳಿಸಿದರು.
ಅವರು ಬುಧವಾರ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಚುನಾವಣಾ ಸಂಬಂಧ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು. ಏಪ್ರಿಲ್ 10 ರಂದು ಫಲಿತಾಂಶ ಪ್ರಕಟವಾಗಿದ್ದು ಹೆಚ್ಚಿನ ವಿವರಗಳು ಬರಬೇಕಾಗಿದೆ. ಈ ವರ್ಷ ಜಿಲ್ಲೆಯಲ್ಲಿ ದ್ವಿತೀಯ ಪಿ.ಯು.ಸಿ ಪರೀಕ್ಷೆಯನ್ನು 19644 ರೆಗ್ಯುಲರ್, 422 ಖಾಸಗಿ ಸೇರಿ 20066 ವಿದ್ಯಾರ್ಥಿಗಳು ತೆಗೆದುಕೊಂಡಿದ್ದರು. ಇದರಲ್ಲಿ 15904 ವಿದ್ಯಾರ್ಥಿಗಳು ಉತ್ತೀರ್ಣರಾಗುವ ಮೂಲಕ ಶೇ 80.96 ರಷ್ಟು ಫಲಿತಾಂಶ ಪಡೆದಿದ್ದಾರೆ.
ಕಳೆದ ವರ್ಷ ಶೇ 75.72 ರಷ್ಟು ಫಲಿತಾಂಶ ಬಂದಿತ್ತು, ಈ ವರ್ಷ ಶೇ 5.24 ರಷ್ಟು ಫಲಿತಾಂಶ ಹೆಚ್ಚಳವಾಗಿದೆ. ಜಿಲ್ಲೆಗೆ ಟಾಪ್ ಬಂದವರಲ್ಲಿ ಕಲಾ ವಿಭಾಗದಲ್ಲಿ ಹರಿಹರದ ಶ್ರೀಮತಿ ಗಿರಿಯಮ್ಮ ಕಾಂತಪ್ಪ ಮಹಿಳಾ ಪದವಿ ಪೂರ್ವ ಕಾಲೇಜಿನ ಹೀನಬಾನು ಪಿ.ಕೆ. 591 ಅಂಕ ಪಡೆದು ಶೇ 98.5, ವಾಣಿಜ್ಯ; ದಾವಣಗೆರೆ ತಾ; ಗೋಪನಾಳು ಸರ್ಕಾರಿ ಪದವಿ ಪೂರ್ವ ಕಾಲೇಜಿನ ರೇಷ್ಮಾ ಬಾನು 589 ಅಂಕ ಪಡೆದು ಶೇ 98.16 ರಷ್ಟು ಫಲಿತಾಂಶ ಪಡೆದು ಜಿಲ್ಲೆಗೆ ಮೊದಲಿಗರಾಗಿದ್ದಾರೆ.
ವಿಜ್ಞಾನ ವಿಭಾಗದಲ್ಲಿ ಲೋಕಿಕೆರೆ ರಸ್ತೆಯಲ್ಲಿನ ಸರ್ಎಂವಿ ಸಂಯುಕ್ತ ಪದವಿ ಪೂರ್ವ ಕಾಲೇಜಿನ ಮೊಹಮ್ಮದ್ ಸುಹೇಲ್, ಅಮೃತ ದೊಡ್ಡ ಬಸಪ್ಪನವರ್, ಅನನ್ಯ ಹೆಚ್.ಎಸ್, ಆಕಾಶ್ ಸಿ.ಪಾಟೀಲ್ ಇವರು 593 ಅಂಕ ಶೇ 98.83 ರಷ್ಟು ಸಮನಾದ ಫಲಿತಾಂಶ ಹಂಚಿಕೊಂಡಿದ್ದಾರೆ ಎಂದರು.
ವಿಭಾಗವಾರು ಫಲಿತಾಂಶ; ಕಲಾ ವಿಭಾಗದಲ್ಲಿ ಶೇ 57.83 ರಷ್ಟು ಫಲಿತಾಂಶ ಬಂದಿದ್ದು ಇದರಲ್ಲಿ ಗಂಡು ಶೇ 45, ಹೆಣ್ಣು ಶೇ 66.46 ರಷ್ಟು ಉತ್ತೀರ್ಣರಾಗಿದ್ದಾರೆ. ವಾಣಿಜ್ಯ ವಿಭಾಗದಲ್ಲಿ ಶೇ 76.22 ರಷ್ಟು ಫಲಿತಾಂಶ ಬಂದಿದ್ದು ಗಂಡು ಶೇ 65.5, ಹೆಣ್ಣು ಶೇ 80.8, ವಿಜ್ಞಾನ ವಿಭಾಗದಲ್ಲಿ ಶೇ 91.13 ರಷ್ಟು ಫಲಿತಾಂಶ ಬಂದಿದ್ದು ಗಂಡು ಶೇ 91.39 ಹಾಗೂ ಹೆಣ್ಣು ಶೇ 88.69 ರಷ್ಟು ಫಲಿತಾಂಶ ಬಂದಿದೆ.
ನಗರಕ್ಕಿಂತ ಗ್ರಾಮೀಣರ ಮೇಲುಗೈ; ಫಲಿತಾಂಶದಲ್ಲಿ ನಗರ ಪ್ರದೇಶಕ್ಕಿಂತ ಗ್ರಾಮೀಣ ವಿದ್ಯಾರ್ಥಿಗಳು ಶೇ 1.1 ರಷ್ಟು ಮೇಲುಗೈ ಸಾಧಿಸಿದ್ದಾರೆ. ಗ್ರಾಮೀಣ ಪ್ರದೇಶದಲ್ಲಿ ಶೇ 73.65 ಗಂಡು, ಶೇ 84.6 ಹೆಣ್ಣು ಉತ್ತೀರ್ಣರಾದರೆ ನಗರ ಪ್ರದೇಶದ ಒಟ್ಟು ಫಲಿತಾಂಶ ಶೇ 80.75 ರಲ್ಲಿ ಗಂಡು ಶೇ 74.41, ಹೆಣ್ಣು ಶೇ 81.37 ರಷ್ಟು ಫಲಿತಾಂಶ ಪಡೆದಿದ್ದಾರೆ.
ಶೇ 100 ರಷ್ಟು ಫಲಿತಾಂಶ ಪಡೆದ ಶಾಲೆಗಳು; ದಾವಣಗೆರೆ ಅಂಜುಂ ಪದವಿ ಪೂರ್ವ ಕಾಲೇಜು, ಲೇಬರ್ ಕಾಲೋನಿ, ಜೈನ್ ಟ್ರಿನಿಟಿ ಪದವಿ ಪೂರ್ವ ಕಾಲೇಜು, ಅನ್ಮೋಲ್ ಪದವಿ ಪೂರ್ವ ಕಾಲೇಜು, ಶ್ರೀ ಗೀತಂ ಪದವಿ ಪೂರ್ವ ಕಾಲೇಜು, ದಾವಣಗೆರೆ ಇವು ಶೇ 100 ರಷ್ಟು ಫಲಿತಾಂಶ ಪಡೆದ ಕಾಲೇಜುಗಳಾಗಿವೆ.
ಈ ವೇಳೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸುರೇಶ್ ಬಿ.ಇಟ್ನಾಳ್, ಜಿಲ್ಲಾ ರಕ್ಷಣಾಧಿಕಾರಿ ಉಮಾ ಪ್ರಶಾಂರ್, ಶಾಲಾ ಶಿಕ್ಷಣ, ಪದವಿ ಪೂರ್ವ ಇಲಾಖೆ ಉಪನಿರ್ದೇಶಕ ಕರಿಸಿದ್ದಪ್ಪ ಉಪಸ್ಥಿತರಿದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243
ದಿನದ ಸುದ್ದಿ
ಗ್ರಾಹಕರಿಂದ ಹೆಚ್ಚುವರಿಯಾಗಿ ಪೇಪರ್ ಬ್ಯಾಗ್ಗೆ ರೂ.10 ಪಡೆದ ಶಾಪಿಂಗ್ ಮಾಲ್ಗೆ ದಂಡ
ಸುದ್ದಿದಿನ ,ದಾವಣಗೆರೆ : ವಕೀಲ ವೃತ್ತಿಯಲ್ಲಿ ತೊಡಗಿಕೊಂಡಿರುವ ಆರ್. ಬಸವರಾಜ್ ಎಂಬುವವರು ದಾವಣಗೆರೆ ನಗರದ ಮ್ಯಾಕ್ಸ್ ರೀಟೈಲ್ ಅಂಗಡಿಯಲ್ಲಿ 2023 ರ ಅಕ್ಟೋಬರ್ 29 ರಂದು ರೂ.1,499 ಪಾವತಿಸಿ, ಡೆನಿವಾ ಪ್ಯಾಂಟ್ ಖರೀದಿಸಿದರು. ಈ ವೇಳೆಯಲ್ಲಿ ಇಲ್ಲಿಯೇ ಲೈಫ್ ಸ್ಟೈಲ್ ಇಂಟರ್ನ್ಯಾಷನಲ್ ವಾಣಿಜ್ಯ ಸಂಸ್ಥೆ ಪ್ಯಾಂಟ್ ಮಾರಾಟದ ವೇಳೆ ಹೆಚ್ಚುವರಿಯಾಗಿ ರೂ.10/- ಪೇಪರ್ ಬ್ಯಾಗ್ಗೆ ಪಡೆಯಲಾಯಿತು.
ಗ್ರಾಹಕರಾದ ಆರ್. ಬಸವರಾಜ್ ಇವರ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದಲ್ಲಿ ದೂರನ್ನು ದಾಖಲಿಸಿ ವಾಣಿಜ್ಯ ಸಂಸ್ಥೆ ವಿರುದ್ದ ರೂ.50,000 ಮಾನಸಿಕ ಕಿರುಕುಳ ಹಾಗೂ ದೂರು ದಾಖಲಿಸಲು ಖರ್ಚು ಮಾಡಿದ ಮೊ ರೂ.10,000 ಗಳನ್ನು ಪಾವತಿಸುವಂತೆ ದೂರನ್ನು ದಾಖಲಿಸಿದರು.
ವಾಣಿಜ್ಯ ಸಂಸ್ಥೆಗೆ ನೋಟಿಸ್ ಜಾರಿ ಮಾಡಿದ್ದು ಈ ಸಂಸ್ಥೆ ವಕೀಲರ ಮುಖಾಂತರ ಹಾಜರಾಗಿ ಬ್ಯಾಗ್ಗೆ ಹೆಚ್ಚುವರಿಯಾಗಿ ಪಡೆದ ಹಣಕ್ಕೆ ಸಮರ್ಥಿಸಿಕೊಂಡಿತ್ತು. ಆದರೆ ಗ್ರಾಹಕರ ಆಯೋಗ ಈ ಮೊದಲು ರಾಷ್ಟ್ರೀಯ ಗ್ರಾಹಕರ ಆಯೋಗ ಬಿಗ್ ಬಜಾರ್ ವಿರುದ್ಧ ಸಾಯಲ್ ದಾವ ಪ್ರಕರಣದ ನ್ಯಾಯ ನಿರ್ಣಯದ ತೀರ್ಪಿನ ಅನುಗುಣವಾಗಿ ವಾಣಿಜ್ಯ ಸಂಸ್ಥೆಗಳು ಕ್ಯಾರಿ ಬ್ಯಾಗ್ಗಳಿಗೆ ಹೆಚ್ಚಿನ ಹಣವನ್ನು ಪಡೆಯುವಂತಿಲ್ಲ ಎಂಬ ತೀರ್ಪನ್ನು ಉಲ್ಲೇಖಿಸಿ ಹೆಚ್ಚುವರಿಯಾಗಿ ರೂ.10 ಪಡೆದ ಸಂಸ್ಥೆಯ ಕ್ರಮವು ಗ್ರಾಹಕರ ಸಂರಕ್ಷಣಾ ಕಾಯ್ದೆಯ ಅಡಿಯಲ್ಲಿ ಅನುಚಿತ ವ್ಯಾಪಾರ ಪದ್ದತಿಯೆಂದು ಪರಿಗಣಿಸಿ ದಾವಣಗೆರೆ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷರಾದ ಮಹಂತೇಶ ಈರಪ್ಪ ಶಿಗ್ಲಿ, ಸದಸ್ಯರಾದ ತ್ಯಾಗರಾಜನ್ ಮತ್ತು ಮಹಿಳಾ ಸದಸ್ಯರಾದ ಶ್ರೀಮತಿ ಬಿ.ಯು. ಗೀತಾ ಇವರು ವಾಣಿಜ್ಯ ಸಂಸ್ಥೆಗೆ ರೂ.7000 ದಂಡವಿದಿಸಿ ಆದೇಶಿಸಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243