ದಿನದ ಸುದ್ದಿ
ಸಹಾಯ ಹಸ್ತದ ನಿರೀಕ್ಷೆಯಲ್ಲಿ ಈ ಉತ್ಸಾಹಿ ದಿವ್ಯಾಂಗ ಯುವ ಪ್ರತಿಭೆ
- ಗಂಗಾಧರ ಬಿ ಎಲ್ ನಿಟ್ಟೂರ್
ಮನೆಯಲ್ಲಿ ಎಲ್ಲರ ಮುದ್ದಿನ ಕಣ್ಮಣಿಯಾಗಿದ್ದ ಆತ ಎಲ್ಲಾ ಮಕ್ಕಳಂತೆ ಉಂಡುಟ್ಟು, ಆಯಾಗಿ ಓಡಾಡಿಕೊಂಡಿದ್ದ. 3 – 4 ವರ್ಷದವನಿದ್ದಾಗ ಒಮ್ಮೆ ಕಾಡಿದ ಅತಿಸಾರ ಭೇದಿ ಮತ್ತು ಜ್ವರಕ್ಕೆಂದು ಕೊಡಿಸಿದ ಚಿಕಿತ್ಸೆ ಓವರ್ ಡೋಸ್ ಆಗಿ ಕಾಲಿನ ಸ್ವಾಧೀನ ಕಿತ್ತುಕೊಂಡಿದ್ದಲ್ಲದೆ ದೃಷ್ಟಿಯನ್ನೂ ಪ್ರತಿಶತಃ ಮಂದಗೊಳಿಸಿ ಮೂಲೆ ಹಿಡಿಸಿ ಬಿಟ್ಟಿತು. ಆದರೂ ಅವನೊಳಗಿನ ಅದಮ್ಯ ಉತ್ಸಾಹವನ್ನು ಮಾತ್ರ ಕಸಿದುಕೊಳ್ಳಲಾಗಲಿಲ್ಲ ಆ ದುರ್ವಿಧಿಗೆ. ಆತನ ಜೀವನೋತ್ಸಾಹ, ಪಾಸಿಟಿವ್ ಎನರ್ಜಿಯನ್ನು ಕಂಡ ಯಾರಿಗಾದರೂ ಖಂಡಿತ ಅಚ್ಚರಿಯಾಗುತ್ತದೆ.
ಹುಟ್ಟು ಅನಕ್ಷರಸ್ಥನಾದ ಆತನಿಗೆ ಹಾಡುವುದೆಂದರೆ ಪಂಚಪ್ರಾಣ. ಟಿವಿ, ಮೊಬೈಲ್ ನಲ್ಲಿ ಒಮ್ಮೆ ಕೇಳಿದ ಹಾಡನ್ನು ಸೀದಾ ಮಸ್ತಕಕ್ಕೇರಿಸಿಕೊಂಡು ಬಿಡುತ್ತಾನೆ. ಕವ್ವಾಲಿ, ಶರೀಫರ ತತ್ವಪದಗಳನ್ನು ಹಾಡುವುದೆಂದರೆ ಬಲು ಪ್ರೀತಿ. ಹಿಂದಿ ಮತ್ತು ಕನ್ನಡ ಸಿನಿಮಾ ಗೀತೆಗಳು ಸೇರಿದಂತೆ ನೂರಾರು ಹಾಡುಗಳ ಜತೆ ಪ್ರಸಿದ್ಧ ನಟರುಗಳ ಹಲವಾರು ಡೈಲಾಗ್ ಗಳು ಸಹ ಬಾಯಿಪಾಠವಾಗಿವೆ. ಸಂಗೀತವನ್ನು ಶಾಸ್ತ್ರೀಯವಾಗಿ ಅಭ್ಯಾಸ ಮಾಡದಿದ್ದರೂ ಯಾವುದೇ ಗೀತೆಗಳಿಗೆ ಭಾವತುಂಬಿ ಹಾಡುವ ಕಲೆ ಆತನಿಗೆ ಒಲಿದಿದೆ.
ಇಂತಹ ವಿಶೇಷ ವಿಶಿಷ್ಟ ದಿವ್ಯಾಂಗ ಪ್ರತಿಭೆಯ ಹೆಸರು ಕೆ. ಮೊಹಮ್ಮದ್ ಬಾಷಾ. ದಾವಣಗೆರೆ ನಗರದ ನಿಟುವಳ್ಳಿ ಹೊಸ ಬಡಾವಣೆಯ 2ನೇ ಮೇನ್ 4 ನೇ ಕ್ರಾಸ್ ನಲ್ಲಿ ವಾಸ. ತಂದೆ ದಿವಂಗತ ಬಾಬು ಸಾಬ್, ತಾಯಿ ಎಂ. ಮಾಮಾಜಾನ್. ಬಡತನದ ಬೇಗೆಯಲ್ಲಿ ಬೇಯುತ್ತಿರುವ ಕುಟುಂಬದ ಭಾರವನ್ನು ಮೊಹಮ್ಮದ್ ನ ಅಣ್ಣನಾದ ವಲಿಬಾಷಾರ ಆಟೋ ರಿಕ್ಷಾ ಹೊತ್ತು ಸಾಗುತ್ತಿದೆ.
ನಿರ್ವಹಣೆಯ ತೊಂದರೆ ಹಿನ್ನೆಲೆಯಲ್ಲಿ ದಿವ್ಯಾಂಗನಾದರೂ ಕಲಿಕೆಯಲ್ಲಿ ಅಪಾರ ಶ್ರದ್ಧೆ ಮತ್ತು ಆಸಕ್ತಿ ಹೊಂದಿರುವ ಮೊಹಮ್ಮದ್ ನನ್ನು ಓದು – ಬರಹ ಅಥವಾ ಸಂಗೀತಭ್ಯಾಸಕ್ಕಾಗಿ ಯಾವುದಾದರೂ ಉಚಿತ ವಸತಿ ಶಾಲೆ ಅಥವಾ ಆಶ್ರಮಗಳಿಗಾದರೂ ಕಳಿಸಲು ಸಾಧ್ಯವಾಗಲಿಲ್ಲ ಎಂಬುದು ಮಾಮಾಜಾನ್ ರ ನೋವಿನ ನುಡಿ.
ಪ್ರಸ್ತುತ 27 ರ ಪ್ರಾಯದ ಈ ಉತ್ಸಾಹಿ ಯುವಕನ ಪ್ರತಿಭೆ ಬೆಳಕಿಗೆ ಬರಲು ಸದ್ಯ ವೇದಿಕೆಯನ್ನು ಕಲ್ಪಿಸಿಕೊಡುವವರು, ಆರ್ಥಿಕವಾಗಿ ಸಹಕಾರ ನೀಡುವ ಔದಾರ್ಯ ಉಳ್ಳವರು ಮುಂದೆ ಬಂದು ಗುರುತಿಸಬೇಕಿದೆ. ಈತನ ಸಂಗೀತ ಕಲಿಕೆಯನ್ನು ಕ್ರಮಬದ್ಧ ಮತ್ತು ಶಾಸ್ತ್ರೀಯಗೊಳಿಸಲು ಬಿಡುವಿನ ವೇಳೆಯಲ್ಲಿ ಆತನ ಮನೆಗೆ ಹೋಗಿ ಉಚಿತವಾಗಿ ಸಂಗೀತ ಹೇಳಿಕೊಡುವ ಸಹೃದಯತೆಯನ್ನು ಸಂಗೀತ ಶಿಕ್ಷಕರು ತೋರಬೇಕಿದೆ .
ಸದ್ಯದ ಪರಿಸ್ಥಿತಿಯಲ್ಲಿ ಹೃದಯ ಶ್ರೀಮಂತಿಕೆಯಿಂದ ಯಾರಾದರೂ ತಾವಾಗಿಯೇ ಒಂದಷ್ಟು ಸಹಾಯ ಹಸ್ತ ಚಾಚಿದರೆ ಆತನ ಕುಟುಂಬದ ಆರ್ಥಿಕ ಬವಣೆ ನೀಗಲು ಸಹಾಯವಾಗುವ ಜೊತೆ ಸಂಗೀತ ಕ್ಷೇತ್ರಕ್ಕೆ ಈ ಪ್ರತಿಭೆಯಿಂದ ಸಾಕಷ್ಟು ಕೊಡುಗೆ ಲಭಿಸುವುದರಲ್ಲಿಯೂ ಸಂದೇಹವಿಲ್ಲ.
ದಯವಿಟ್ಟು ಈ ನಂಬರ್ ಗೆ ಸಂಪರ್ಕಿಸಿ ಸಹಾಯ ಹಸ್ತ ಚಾಚಿ : ಮೊಹಮ್ಮದ್ ಬಾಷಾ ನ ಮೊ.ಸಂ : 8088644148
ದಿನದ ಸುದ್ದಿ
ಶಿವಮೊಗ್ಗಕ್ಕೆ ಇಂದು ಪ್ರಧಾನಿ ನರೇಂದ್ರ ಮೋದಿ
ಸುದ್ದಿದಿನ, ಶಿವಮೊಗ್ಗ : ಪ್ರಧಾನಮಂತ್ರಿ ನರೇಂದ್ರ ಮೋದಿ ಇಂದು ಮಧ್ಯಾಹ್ನ 2 ಗಂಟೆಗೆ ಶಿವಮೊಗ್ಗದಲ್ಲಿ ಬೃಹತ್ ಸಾರ್ವಜನಿಕ ಸಭೆಯನ್ನುದ್ದೇಶಿ ಮಾತನಾಡಲಿದ್ದಾರೆ.
ಯುವಜನರು, ಮಹಿಳೆಯರು, ರೈತರು ಸೇರಿ ಸುಮಾರು ಎರಡೂವರೆ ಲಕ್ಷಕ್ಕೂ ಹೆಚ್ಚು ಜನರು ಕಾರ್ಯಕ್ರಮದಲ್ಲಿ ಭಾಗವಹಿಸುವ ನಿರೀಕ್ಷೆ ಇದೆ ಎಂದು ವಿಧಾನಪರಿಷತ್ ಮುಖ್ಯ ಸಚೇತಕ ಎನ್.ರವಿಕುಮಾರ್ ಶಿವಮೊಗ್ಗದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243
ದಿನದ ಸುದ್ದಿ
ಚುನಾವಣಾ ಬಾಂಡ್ ಕುರಿತ ದತ್ತಾಂಶ ಬಿಡುಗಡೆ
ಸುದ್ದಿದಿನ,ನವದೆಹಲಿ : ಚುನಾವಣಾ ಬಾಂಡ್ ಕುರಿತಂತೆ ಸುಪ್ರೀಂಕೋರ್ಟ್ನ ರಿಜಿಸ್ಟ್ರಿ ಇಂದ ಲಭ್ಯವಾದ ಅಂಕಿಕೃತ ದತ್ತಾಂಶ ಮಾದರಿಯನ್ನು ಚುನಾವಣಾ ಆಯೋಗ ಭಾನುವಾರ ತನ್ನ ವೆಬ್ಸೈಟ್ನಲ್ಲಿ ಅಪ್ಲೋಡ್ ಮಾಡಿದೆ. www.eci.gov.in/candidate-politicalparty ವೆಬ್ಸೈಟ್ನಲ್ಲಿ ಈ ದತ್ತಾಂಶ ಲಭ್ಯವಿರುತ್ತದೆ.
ಸುಪ್ರೀಂಕೋರ್ಟ್ ನಿರ್ದೇಶಿಸಿದಂತೆ ರಾಜಕೀಯ ಪಕ್ಷಗಳು ಚುನಾವಣಾ ಬಾಂಡ್ ಕುರಿತ ದತ್ತಾಂಶಗಳನ್ನು ಮೊಹರು ಹಾಕಿದ ಲಕೋಟೆಯಲ್ಲಿ ಸಲ್ಲಿಸಿದ್ದವು ಎಂದು ಚುನಾವಣಾ ಆಯೋಗದ ಹೇಳಿಕೆ ತಿಳಿಸಿದೆ. ರಾಜಕೀಯ ಪಕ್ಷಗಳಿಂದ ಸ್ವೀಕರಿಸಿದ ಮೊಹರು ಹಾಕಿದ ಲಕೋಟೆಗಳನ್ನು ತೆರೆಯದೇ ಸುಪ್ರೀಂಕೋರ್ಟ್ಗೆ ಸಲ್ಲಿಸಲಾಗಿತ್ತು.
ಇದೇ 15ರಂದು ಸುಪ್ರೀಂಕೋರ್ಟ್ ನೀಡಿದ ಆದೇಶದ ಮೇರೆಗೆ ಸುಪ್ರೀಂಕೋರ್ಟ್ನ ರಿಜಿಸ್ಟ್ರಿ, ಭೌತಿಕ ಪ್ರತಿ ಹಾಗೂ ಅದರ ಡಿಜಿಟಲ್ ದಾಖಲೆಯಿರುವ ಪೆನ್ಡ್ರೈವ್ ಒಳಗೊಂಡ ಮೊಹರು ಹಾಕಿದ ಲಕೋಟೆಯನ್ನು ಹಿಂತಿರುಗಿಸಿತ್ತು.
ಸುದ್ದಿದಿನ.ಕಾಂ|ವಾಟ್ಸಾಪ್|9980346243
ದಿನದ ಸುದ್ದಿ
ರಶ್ಮಿ ಚಂದ್ರಗಿರಿ ಅವರಿಗೆ ಪಿಎಚ್.ಡಿ ಪದವಿ
ಸುದ್ದಿದಿನ,ಹಾವೇರಿ : ನಗರದ ರಶ್ಮಿ ಚಂದ್ರಗಿರಿ ಅವರು ಕರ್ನಾಟಕ ವಿಶ್ವವಿದ್ಯಾಲಯಕ್ಕೆ ಮಂಡಿಸಿದ “ದಲಿತ ಬಂಡಾಯ ಕಾದಂಬರಿಗಳಲ್ಲಿ ಸಾಂಸ್ಕೃತಿಕ ನೆಲೆಗಳು” ಎಂಬ ಮಹಾಪ್ರಬಂಧಕ್ಕೆ ಕರ್ನಾಟಕ ವಿಶ್ವವಿದ್ಯಾಲಯ ಪಿಎಚ್.ಡಿ ಪದವಿ ಪ್ರಧಾನ ಮಾಡಿದೆ.
ಇವರಿಗೆ ಡಾ.ಬಿಎಸ್.ಭಜಂತ್ರಿ , ಸಹಾಯಕ ಪ್ರಧ್ಯಾಪಕರು ಕರ್ನಾಟಕ ಕಲಾ ಮಹಾವಿದ್ಯಾಲಯ ಧಾರವಾಡ ಇವರು ಮಾರ್ಗದರ್ಶನ ಮಾಡಿದ್ದರು.
ಬರವಣಿಗೆಯಲ್ಲಿ ತೊಡಗಿಸಿಕೊಂಡಿರುವ ರಶ್ಮಿ ಚಂದ್ರಗಿರಿಯವರ ಹಲವು ಲೇಖನಗಳು ನಿಯತಕಾಲಿಕೆಗಳಲ್ಲಿ ಪ್ರಕಟಗೊಂಡಿವೆ. ಪ್ರಸ್ತುತ ಇವರು ಉಪನ್ಯಾಸಕಿಯಾಗಿ ಕಾರ್ಯನಿರ್ವಹಿಸಿತ್ತಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243