ದಿನದ ಸುದ್ದಿ
ಕೋವಿದ್19-ಪಾಠ ಕಲಿಯದ ಸಮಾಜ, ದಾರಿ ತಿಳಿಯದ ಸರ್ಕಾರ..!
- ನಾ ದಿವಾಕರ
ಕೊರೊನಾ ಸೋಂಕು ವ್ಯಾಪಕವಾಗಿ ಹರಡುತ್ತಿರುವ ಸಂದರ್ಭದಲ್ಲೇ ಭಾರತ ಮತ್ತೊಮ್ಮೆ ಸಾಂಕೇತಿಕ ಆಚರಣೆಗಳಿಗೆ ಮೊರೆ ಹೋಗುತ್ತಿದೆ. ಕರ್ನಾಟಕ ಸರ್ಕಾರ ಮಾಸ್ಕ್ ದಿನಾಚರಣೆ ಆಚರಿಸುವ ಮೂಲಕ ಜಾಗೃತಿ ಮೂಡಿಸಲು ಮುಂದಾಗುತ್ತಿದೆ. ಕೇಂದ್ರ ಸರ್ಕಾರ ಯೋಗದಿನವನ್ನು ಮನೆಯಲ್ಲೇ ಆಚರಿಸಲು ನಿರ್ಧರಿಸಿದೆ.
ಜೂನ್ 1 ರಿಂದ ಆರ್ಥಿಕ ಪುನಶ್ಚೇತನದ ದೃಷ್ಟಿಯಿಂದ ಲಾಕ್ ಡೌನ್ ಸಡಿಲಗೊಳಿಸಿರುವುದು ಕೊರೋನಾ ಕ್ಷಿಪ್ರ ಗತಿಯಲ್ಲಿ ವ್ಯಾಪಿಸಲು ನೆರವಾಗುತ್ತಿರುವುದು ಸ್ಪಷ್ಟ. ಅರ್ಥವ್ಯವಸ್ಥೆಯನ್ನು ಸುಸ್ಥಿತಿಯಲ್ಲಿಡುವ ದೃಷ್ಟಿಯಿಂದ ಲಾಕ್ ಡೌನ್ ಸಡಿಲಗೊಳಿಸಿರುವುದನ್ನು ಆಕ್ಷೇಪಿಸಲಾಗುವುದಿಲ್ಲ. ಆದರೆ ಜನಸಾಮಾನ್ಯರ ಬದುಕು ದುಸ್ತರವಾಗಿರುವ ಸಂದರ್ಭದಲ್ಲಿ ಆರೋಗ್ಯ ರಕ್ಷಣೆಯ ಬಗ್ಗೆಯೂ ಗಮನಹರಿಸುವುದು ಅತ್ಯವಶ್ಯ.
ಎರಡು ತಿಂಗಳ ಕಟ್ಟುನಿಟ್ಟಿನ ಲಾಕ್ ಡೌನ್ ಅವಧಿಯಲ್ಲಿ ಜನರು ಮತ್ತು ಸರ್ಕಾರಗಳು ಸಾಕಷ್ಟು ಪಾಠ ಕಲಿಯಬಹುದಿತ್ತು. ಒಂದು ಸಾಂಕ್ರಾಮಿಕ ರೋಗ ಹೇಗೆ ಇಡೀ ವ್ಯವಸ್ಥೆಯ ಬುಡವನ್ನೇ ಅಲುಗಾಡಿಸಿಬಿಡುತ್ತದೆ ಎನ್ನುವುದನ್ನು ಸರ್ಕಾರ ಈ ವೇಳೆಗೆ ಅರ್ಥಮಾಡಿಕೊಂಡಿರಬೇಕು. ಸ್ವತಂತ್ರ ಭಾರತದಲ್ಲಿ ಯಾವ ಸರ್ಕಾರಗಳೂ ಎದುರಿಸದ ಸಂದರ್ಭವನ್ನು ಇಂದು ನಾವು ಎದುರಿಸುತ್ತಿದ್ದೇವೆ.
ಈ ನಿಟ್ಟಿನಲ್ಲಿ ಆಡಳಿತ ವ್ಯವಸ್ಥೆಗೆ ಅನುಭವದ ಕೊರತೆ ಎದ್ದು ಕಾಣುವುದು ಸಹಜ. ಅಧಿಕಾರದಲ್ಲಿರುವ ಸರ್ಕಾರಗಳಲ್ಲಿ ಗೊಂದಲ ಇರುವುದೂ ಸಹಜ. ಈ ಆತಂಕ ಮತ್ತು ಗೊಂದಲಗಳನ್ನು ನಿವಾರಿಸುವ ಮಾರ್ಗೋಪಾಯಗಳು ನಮ್ಮ ನಡುವೆಯೇ ಇವೆ. ಸರ್ಕಾರದ ಮತ್ತು ಜನತೆಯ ಕಣ್ಣು ಕಿವಿ ಸಕ್ರಿಯವಾಗಿರಬೇಕಷ್ಟೇ.
ಕೊರೋನಾ ಹರಡುವಿಕೆಯನ್ನು ನಿಯಂತ್ರಿಸುವಲ್ಲಿ ಮಾಸ್ಕ್ ಧರಿಸುವುದು, ದೈಹಿಕ ಅಂತರ ಕಾಪಾಡಿಕೊಳ್ಳುವುದು ಅತಿ ಮುಖ್ಯವಾದ ಎಚ್ಚರಿಕೆಯ ಮಾರ್ಗ. ಆದರೆ ಲಾಕ್ ಡೌನ್ ಸಡಿಲಿಕೆಯಾದ ಕೂಡಲೇ ಜನರು ಧರಿಸುತ್ತಿರುವ ಮಾಸ್ಕ್ ಸಹ ಸಡಿಲವಾಗಿ, ಕುತ್ತಿಗೆಗೆ ಜಾರುತ್ತಿರುವುದನ್ನು ಎಲ್ಲೆಡೆ ಕಾಣಬಹುದು. ಯುವ ಜನತೆ ಈ ನಿಟ್ಟಿನಲ್ಲಿ ಬಹುದೊಡ್ಡ ಅಪರಾಧಿಗಳಂತೆ ಕಾಣುತ್ತಾರೆ.
ಶೇ 80ರಷ್ಟು ಜನರು ಮಾಸ್ಕ್ ಧರಿಸದೆಯೇ ಓಡಾಡುವುದನ್ನು ಎಲ್ಲೆಡೆ ಕಾಣಬಹುದು. ಮಾರುಕಟ್ಟೆಗಳಲ್ಲಿ, ಸಂತೆಪೇಟೆಗಳಲ್ಲಿ ಯಾವುದೇ ವ್ಯಾಪಾರಿ ಮಾಸ್ಕ್ ಧರಿಸುವುದನ್ನು ಕಾಣಲಾಗುವುದಿಲ್ಲ. ಹೆಚ್ಚು ಜಾಗೃತರಾಗಬೇಕಾದ ವಿದ್ಯಾರ್ಥಿ ಯುವಜನರು ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸುವಲ್ಲಿ ವಿಫಲರಾಗುತ್ತಿದ್ದಾರೆ. ಮಾಸ್ಕ್ ಧರಿಸದಿದ್ದರೆ ದಂಡ ವಿಧಿಸಲಾಗುವುದು ಎನ್ನುವ ಎಚ್ಚರಿಕೆ ಬಹುಶಃ ಹಾಳೆಯ ಮೇಲೆ ಉಳಿದಿದೆ. ಮಾರುಕಟ್ಟೆಯ ಮಳಿಗೆಗಳತ್ತ ಒಮ್ಮೆ ಗಮನ ಹರಿಸಿದರೆ ದಂಡದ ಹೊಳೆಯೇ ಹರಿದುಬಿಡುತ್ತದೆ.
ಲಾಕ್ ಡೌನ್ ಅವಧಿಯಲ್ಲಿ ಗಸ್ತು ತಿರುಗುತ್ತಿದ್ದ ಪೊಲೀಸ್ ವಾಹನಗಳು ಈಗ ಸ್ತಬ್ಧವಾಗಿವೆ. ಅಂಗಡಿ ಮುಂಗಟ್ಟುಗಳ ಮುಂದೆ ಅನುಸರಿಸಬೇಕಾದ ದೈಹಿಕ ಅಂತರದ ನಿಯಮಗಳು ಮಾಯವಾಗಿವೆ. ಸಮಾರಂಭಗಳಿಗೆ ವಿಧಿಸಿದ್ದ ನಿರ್ದಿಷ್ಟ ಜನರ ಹಾಜರಿಯ ನಿಯಮ ಬಹುಶಃ ಅಧಿಕಾರಶಾಹಿಯ ನಿರ್ಲಕ್ಷ್ಯತೆ ಮತ್ತು ಪಕ್ಷಪಾತ ಧೋರಣೆಗೆ ಬಲಿಯಾಗಿದೆ.
ಸುತ್ತಲೂ ನಡೆಯುತ್ತಿರುವ ವಿವಾಹ, ನಿಶ್ಚಿತಾರ್ಥ ಮುಂತಾದ ಸಮಾರಂಭಗಳನ್ನು ಗಮನಿಸಿದರೆ ಸರ್ಕಾರದ ನಿಯಮಗಳು ಜಾರಿಯಲ್ಲಿವೆಯೇ ಎಂದು ಅನುಮಾನ ಮೂಡುತ್ತದೆ. ಇನ್ನು ಈ ನಿಯಮಗಳನ್ನು ಉಲ್ಲಂಘಿಸುವುದರಲ್ಲಿ ನಮ್ಮ ರಾಜಕೀಯ ನಾಯಕರೇ ಮುಂಚೂಣಿಯಲ್ಲಿದ್ದಾರೆ. ರಾಜ್ಯ ಆರೋಗ್ಯ ಸಚಿವರೇ ಮುಂದಾಳತ್ವ ವಹಿಸಿರುವುದನ್ನು ಕಂಡಿದ್ದೇವೆ.
ಕಾನೂನು ನಿಯಮ ರೂಪಿಸುವ ಜನಪ್ರತಿನಿಧಿಗಳೇ ನಿಯಮ ಉಲ್ಲಂಘಿಸಿದರೆ ಜನಸಾಮಾನ್ಯರು ಹೇಗೆ ಪಾಲಿಸಲು ಸಾಧ್ಯ ? ಮಾಸ್ಕ್ ದಿನಾಚರಣೆ ಆಚರಿಸುವ ಮುನ್ನ ಮಾನ್ಯ ಮುಖ್ಯಮಂತ್ರಿ ಯಡಿಯೂರಪ್ಪನವರು ಈ ಕುರಿತು ಯೋಚಿಸಬೇಕಲ್ಲವೇ ? ಸರ್ಕಾರ ಒಂದಾದಮೇಲೊಂದರಂತೆ ಕರಾಳ ಶಾಸನಗಳನ್ನು ಜಾರಿಗೊಳಿಸುತ್ತಾ ರೈತರ, ಕಾರ್ಮಿಕರ, ಬಡ ಜನರ ಕತ್ತುಹಿಸುಕುತ್ತಿರುವ ಸಂದರ್ಭದಲ್ಲಿ ಪ್ರತಿಭಟನಕಾರರು ಸರ್ಕಾರದ ನಿಯಮಗಳನ್ನು ಬದ್ಧತೆಯಿಂದ ಅನುಸರಿಸುತ್ತಿದ್ದಾರೆ. ಆದರೆ ನಿಯಮ ರೂಪಿಸುವ ಸಚಿವರು, ರಾಜಕೀಯ ನಾಯಕರು ಉಲ್ಲಂಘಿಸುತ್ತಿದ್ದಾರೆ. ಇದು ಹೊಣೆಗೇಡಿತನದ ಪರಮಾವಧಿ ಅಲ್ಲವೇ ?
ಕೃಷಿ ಕ್ಷೇತ್ರವನ್ನೇ ಸಾರಾ ಸಗಟಾಗಿ ಹರಾಜು ಹಾಕಲು ಸಜ್ಜಾಗಿರುವ ಸರ್ಕಾರದ ನೀತಿಯ ವಿರುದ್ಧ ದನಿ ಎತ್ತುವ ರೈತ ಸಮುದಾಯದ ಪ್ರತಿಭಟನೆಗೆ , ಲಾಕ್ ಡೌನ್ ನಿಯಮ ಮುಂದಿಟ್ಟುಕೊಂಡು, ಅವಕಾಶ ನೀಡದ ಸರ್ಕಾರ ರಾಜಕೀಯ ನಾಯಕರ ಕೌಟುಂಬಿಕ ಸಮಾರಂಭಗಳಿಗೆ, ಪಕ್ಷದ ಕಾರ್ಯಕ್ರಮಗಳಿಗೆ ಅವಕಾಶ ನೀಡುವುದು ಸರ್ಕಾರದ ಹೊಣೆಗೇಡಿತನ ಅಲ್ಲವೇ ?
ಕೋವಿದ್ ವಿರುದ್ಧದ ಹೋರಾಟದಲ್ಲಿ ಮುಂದಾಳತ್ವ ವಹಿಸಬೇಕಾದ ಆರೋಗ್ಯ ಸಚಿವರು ಯಾವುದೇ ಲಾಕ್ ಡೌನ್ ನಿಯಮ ಪಾಲಿಸದೆ ಮೆರವಣಿಗೆ ನಡೆಸುತ್ತಾರೆ. ಮತ್ತೊಬ್ಬ ಶಾಸಕರು ನೂರಾರು ಜನರನ್ನು ಸೇರಿಸಿ ಮಗಳ ಮದುವೆ ನಡೆಸುತ್ತಾರೆ. ಮುಖ್ಯಮಂತ್ರಿಯೇ ಕೊರೋನಾ ಹೋಗಲಾಡಿಸಲು ಧನ್ವಂತರಿ ಹೋಮ ನಡೆಸುತ್ತಾರೆ. ಈ ರೀತಿಯ ಹೊಣೆಗೇಡಿತನದ ನಡುವೆ ಜನಸಾಮಾನ್ಯರಿಂದ ನಿಯಮ ಪಾಲನೆ ಅಪೇಕ್ಷಿಸುವುದಾದರೂ ಹೇಗೆ ?
ಲಾಕ್ ಡೌನ್ ಕೊರೋನಾ ಹರಡುವುದನ್ನು ತಡೆಗಟ್ಟುವ ಒಂದು ಮಾರ್ಗ ಮಾತ್ರ ಎನ್ನುವುದು ಸರ್ಕಾರಕ್ಕೂ ತಿಳಿದಿದೆ. ಕೊರೋನಾ ವಿರುದ್ಧ ಹೋರಾಡಲು ಬೇಕಿರುವುದು ವೈದ್ಯಕೀಯ ಸೌಲಭ್ಯ ಮತ್ತು ಜನಸಾಮಾನ್ಯರ ಜಾಗೃತಿ. ಈ ಜಾಗೃತಿ ಮೂಡಿಸಲು ಸಾಕಷ್ಟು ಮಾನವ ಶ್ರಮವೂ ಅಗತ್ಯ. ಒಂದು ದಿನ ಎಲ್ಲರೂ ಮಾಸ್ಕ್ ಧರಿಸಿದರೆ ಅಂದು ಶಂಖ ಜಾಗಟೆ ಸದ್ದು ಮಾಡಿದಂತೆಯೇ ಆಗುತ್ತದೆ.
ಅಥವಾ ಧನ್ವಂತರಿ ಹೋಮದಿಂದ ಕೊರೋನಾ ಹೋಗುವುದೇ ಆಗಿದ್ದರೆ ಎರಡು ತಿಂಗಳ ಕಾಲ ದೇವಸ್ಥಾನಗಳ ಬಾಗಿಲು ಬಡಿದಿದ್ದೇಕೆ ? ಮೊದಲ ದಿನವೇ ಎಲ್ಲೆಡೆ ಹೋಮ ನಡೆಸಿದ್ದರೆ ಭಾರತದಲ್ಲಿ 9000 ಜನರ ಪ್ರಾಣವಾದರೂ ಉಳಿಯುತ್ತಿತ್ತಲ್ಲವೇ ? ದೇವಸ್ಥಾನದ ದರ್ಶನವಿಲ್ಲದೆಯೂ ಮನುಷ್ಯ ಬದುಕಬಹುದು ಎಂದು ನಿರೂಪಿಸಿರುವ ಆ ಸೂಕ್ಷ್ಮ ವೈರಾಣುವಿನ ವಿರುದ್ಧ ಹೋಮ ಯಜ್ಞದ ಮೂಲಕ ಹೋರಾಡುವುದನ್ನು ನೋಡಿದರೆ ನಮಗಿಂತಲೂ ಕೊರೋನಾ ಹೆಚ್ಚು ಬುದ್ಧಿಮತ್ತೆ ಹೊಂದಿದೆ ಎನ್ನಬಹುದೇನೋ !
ಯಾವುದೇ ಸರ್ಕಾರಕ್ಕೆ ಒಂದು ಸಾರ್ವಜನಿಕ ನೀತಿ ನಿಯಮಗಳನ್ನು ರೂಪಿಸುವ ಮುನ್ನ ಸಮಾಜದ ಗ್ರಹಿಕೆಯ ಸಾಮಥ್ರ್ಯದ ಅರಿವೂ ಇರಬೇಕು. ನಮ್ಮ ಸುತ್ತಲಿನ ಸಮಾಜ ವೈಜ್ಞಾನಿಕ ಅಂಶಗಳನ್ನು ಎಷ್ಟರ ಮಟ್ಟಿಗೆ ಅರ್ಥಮಾಡಿಕೊಳ್ಳುತ್ತದೆ ಎನ್ನುವ ಪ್ರಜ್ಞೆಯೂ ಆಡಳಿತ ವ್ಯವಸ್ಥೆಗೆ ಇರಬೇಕು.
ಸರ್ಕಾರದ ವತಿಯಿಂದ ಕೊರೋನಾ ಹೋಗಲಾಡಿಸಲು ಹೋಮ ಯಜ್ಞ ನಡೆಸಿ, ಸಾಮಾನ್ಯ ಜನರಿಗೆ ಮಾಸ್ಕ್ ಧರಿಸಿ, ದೈಹಿಕ ಅಂತರ ಕಾಪಾಡಿಕೊಳ್ಳಿ ಎಂದು ಹೇಳಿದರೆ ಹೇಗೆ ತಾನೇ ಕೇಳಿಯಾರು ? ಅವರೂ ದೇವಸ್ಥಾನಗಳ ಮೊರೆ ಹೋಗುತ್ತಾರೆ.
ಜ್ಯೋತಿಷಿಗಳ, ಪಂಡಿತರ ಮೊರೆ ಹೋಗುತ್ತಾರೆ. ಮೂರು ತಿಂಗಳಿಂದ ವ್ಯಾಪಾರ ಇಲ್ಲದೆ ಬಸವಳಿದಿರುವ ದೇವಾಲಯಗಳಿಗೆ ಲಾಭ ಹೆಚ್ಚಾಗುತ್ತದೆ. ವೈಚಾರಿಕತೆ ಸಾಯುತ್ತದೆ. ಕೊರೋನಾ ಶಾಶ್ವತವಾಗಿ ನಮ್ಮ ನಡುವೆ ಉಳಿಯುತ್ತದೆ. ಈ ಪರಿಜ್ಞಾನ ಸರ್ಕಾರಕ್ಕೆ, ಅಧಿಕಾರಶಾಹಿಗೆ ಇರಬೇಕಲ್ಲವೇ ?
ಮೂರು ತಿಂಗಳ ನಂತರ ಕೊರೋನಾ ಸಮಾಜದ ಎಲ್ಲ ವರ್ಗಗಳನ್ನೂ ಕಾಡುತ್ತಿದೆ. ಭಾರತದ 600ಕ್ಕೂ ಹೆಚ್ಚು ಜಿಲ್ಲೆಗಳಿಗೆ ವ್ಯಾಪಿಸಿದೆ. ಗ್ರಾಮಗಳಿಗೂ ವ್ಯಾಪಿಸುತ್ತಿದೆ. ನಗರ ಪ್ರದೇಶಗಳಲ್ಲಿ ಹಿತವಲಯಗಳನ್ನೂ ಪ್ರವೇಶಿಸಿದೆ. ಇತ್ತೀಚಿನ ದಿನಗಳಲ್ಲಿ ಸಿ ಆರ್ ಪಿ ಎಫ್ ಯೋಧರು, ಪೊಲೀಸ್ ಸಿಬ್ಬಂದಿ, ಸರ್ಕಾರಿ ನೌಕರರು, ಆಶಾ ಕಾರ್ಯಕರ್ತೆಯರು, ವೈದ್ಯರು, ಶುಶ್ರೂಷಕಿಯರು ಹೀಗೆ ಕೊರೋನಾ ವಾರಿಯರ್ಸ್ ಎಂದು ಹೆಮ್ಮೆಯಿಂದ ಕರೆಯಲ್ಪಡುವವರಿಗೂ ಕೊರೋನಾ ಸೋಂಕು ಕಾಡುತ್ತಿದೆ.
ಇದು ಆಡಳಿತ ವ್ಯವಸ್ಥೆಯ ನಿರ್ಲಜ್ಜ ನಿರ್ಲಕ್ಷ್ಯದ ದ್ಯೋತಕ ಎನಿಸುವುದಿಲ್ಲವೇ ? ಮುಂಚೂಣಿಯಲ್ಲಿ ನಿಂತು ಕೊರೋನಾ ಹರಡದಂತೆ ಎಚ್ಚರ ವಹಿಸುವ ಸಿಬ್ಬಂದಿಗೆ ಸೂಕ್ತ ರಕ್ಷಣಾ ಉಪಕರಣಗಳನ್ನು ಒದಗಿಸಿದ್ದಲ್ಲಿ ಈ ಸೋಂಕಿನ ಪ್ರಮಾಣ ಕಡಿಮೆಯಾಗುತ್ತಿತ್ತಲ್ಲವೇ ?
ತನ್ನೊಳಗಿನ ಕೊರತೆಯ ಪರಿಜ್ಞಾನ ಇಲ್ಲದಿದ್ದರೆ ಅಥವಾ ಇದ್ದರೂ ಸ್ವೀಕರಿಸುವ ಮನಸ್ಥಿತಿ ಇಲ್ಲದಿದ್ದರೆ ಯಾವುದೇ ವ್ಯಕ್ತಿಯೂ ಊರ್ಜಿತವಾಗುವುದಿಲ್ಲ. ಇದು ಒಂದು ದೇಶದ ಸರ್ಕಾರ, ಆಡಳಿತ ವ್ಯವಸ್ಥೆಗೂ ಅನ್ವಯಿಸುತ್ತದೆ. ಭಾರತ ಸರ್ಕಾರ ಇದೇ ಪ್ರಮಾದ ಎಸಗುತ್ತಿದೆ.
ಕೊರೋನ ವೈರಾಣುವಿನ ಸಮುದಾಯ ಪ್ರಸರಣ ಮಾರ್ಚ್ ತಿಂಗಳಲ್ಲೇ ಅರಂಭವಾಗಿದೆ ಎಂದು ಹಲವಾರು ವೈದ್ಯಕೀಯ ತಜ್ಞ ವರದಿಗಳು ಹೇಳುತ್ತಲೇ ಇದ್ದರೂ ನಿರಾಕರಿಸುತ್ತಲೇ ಇರುವ ಸರ್ಕಾರ , ಸಮುದಾಯ ಪ್ರಸರಣದ ವಿರುದ್ಧ ಹೋರಾಡಲು ಅಗತ್ಯವಾದ ರೂಪುರೇಷೆಗಳನ್ನೂ ರೂಪಿಸದೆ ಜನಸಾಮಾನ್ಯರನ್ನು ಅಪಾಯದ ಕೂಪಕ್ಕೆ ತಳ್ಳುತ್ತಿದೆ. ಭಾರತದಲ್ಲಿ ಅಥವಾ ಕರ್ನಾಟಕದಲ್ಲಿ ಇತರೆಡೆಗೆ ಹೋಲಿಸಿದರೆ ಸಾವಿನ ಪ್ರಮಾಣ, ಸೋಂಕಿನ ಪ್ರಮಾಣ ಕಡಿಮೆ ಇದೆ ಎಂದು ಬೆನ್ನುತಟ್ಟಿಕೊಳ್ಳಲು ಇದು ಐಪಿಎಲ್ ಕ್ರಿಕೆಟ್ ಪಂದ್ಯ ಅಲ್ಲ, ಅಲ್ಲವೇ ?
ಇದು ಅಮಾಯಕ ಜೀವಗಳ ಪ್ರಶ್ನೆ. ಅಸಹಜ ಸಾವಿನ ಪ್ರಶ್ನೆ. 9000 ಸಾವುಗಳು ಸಾವೇ ಅಲ್ಲ ಎನ್ನಲಾಗುವುದೇ ? ಒಂದು ಜೀವ ಅಸಹಜವಾಗಿ ಅಸುನೀಗಿದರೂ ಮಿಡಿಯುವ ಮನಸು ಮಾತ್ರ ಸಂಯಮಶೀಲ ಸಮಾಜವನ್ನು ಕಟ್ಟಲು ಸಾಧ್ಯ, ಸಂವೇದನಾಶೀಲ ಸಮಾಜವನ್ನು ರೂಪಿಸಲು ಸಾಧ್ಯ. ಒಂದು ಚುನಾಯಿತ ಸರ್ಕಾರಕ್ಕೂ ಇದೇ ವ್ಯವಧಾನ, ಸಂಯಮ, ಸಂವೇದನೆ ಇರಬೇಕು.
ಸಾವನ್ನು ಲೆಕ್ಕಿಸದ ಸರ್ಕಾರ ಮಾರುಕಟ್ಟೆಯ ದಲ್ಲಾಳಿಯಂತೆ ಕಾಣುತ್ತವೆ. ಭಾರತದಂತಹ ಸಮಾಜದಲ್ಲಿ ಇಂತಹ ಸರ್ಕಾರಗಳು ಇನ್ನೂ ಹೆಚ್ಚು ಅಪಾಯಕಾರಿಯಾಗಿ ಪರಿಣಮಿಸುತ್ತವೆ. ಪ್ರಾಥಮಿಕ ಆರೋಗ್ಯ ರಕ್ಷಣೆಯ ಪರಿವೆಯೇ ಇಲ್ಲದ ಅಸಂಖ್ಯಾತ ಜನಸಮುದಾಯ ನಮ್ಮ ನಡುವೆ ಇದೆ ಏಕೆಂದರೆ ಈ ಅರಿವು ಮೂಡಿಸುವ ಪ್ರಯತ್ನವನ್ನು ನಮ್ಮ ಸರ್ಕಾರಗಳು ಮಾಡಿಯೇ ಇಲ್ಲ.
ಇಂತಹ ಒಂದು ಸಂದರ್ಭದಲ್ಲಿ ನಾವು ಕೊರೋನಾದಂತಹ ಮಾರಣಾಂತಿಕ ಪಿಡುಗು ಎದುರಿಸುತ್ತಿದ್ದೇವೆ. ಮೂರು ತಿಂಗಳ ಅವಧಿಯಲ್ಲಿ ಜನಸಾಮಾನ್ಯರೂ ಸಾಕಷ್ಟು ಪಾಠ ಕಲಿಯಬಹುದಿತ್ತು. ಆದರೆ ಸುಶಿಕ್ಷಿತರೂ ಪಾಠ ಕಲಿತಿಲ್ಲ ಎನ್ನುವುದು ಮೇಲ್ನೋಟಕ್ಕೇ ತಿಳಿಯುತ್ತಿದೆ. ಸಭೆ, ಸಮಾರಂಭ, ಕೌಟುಂಬಿಕ ಸಂಭ್ರಮಗಳಿಗೆ ಸೇರುವ ಜನದಟ್ಟಣೆಯನ್ನು ನೋಡಿದರೆ ಇದು ಸ್ಪಷ್ಟವಾಗುತ್ತದೆ.
ಜಿಲ್ಲಾಧಿಕಾರಿಗಳೋ, ಪೊಲೀಸ್ ಆಯುಕ್ತರೋ ಶಿಫಾರಸು ಮಾಡಿಬಿಟ್ಟರೆ ಎಷ್ಟು ಜನರನ್ನು ಬೇಕಾದರೂ ಜಮಾಯಿಸಬಹುದು ಎನ್ನುವ ಭ್ರಷ್ಟ ಚಿಂತನೆಯ ನಡುವೆಯೇ ಈ ಸಮಾರಂಭಗಳು ನಡೆಯುತ್ತಿವೆ. ಆದರೆ ಕೊರೋನಾ ವೈರಾಣುವಿಗೆ ಇದರ ಪರಿಜ್ಞಾನ ಇರುವುದಿಲ್ಲ. ಮದುವೆ ಮನೆಯಲ್ಲಿ ಹರಡುವ ವೈರಾಣು ಧನ್ವಂತರಿ ಹೋಮದ ನಡುವೆಯೂ ಹರಡುತ್ತದೆ ರಾಜಕೀಯ ಸಭೆಯಲ್ಲೂ ಹರಡುತ್ತದೆ. ಬಹುಪಾಲು ಜನರು ಮಾಸ್ಕ್ ಧರಿಸುವುದನ್ನು ಮರೆತಿದ್ದಾರೆ, ದೈಹಿಕ ಅಂತರ ಸಂಪೂರ್ಣ ಇಲ್ಲವಾಗಿದೆ.
ಇದನ್ನು ಜಾರಿಗೊಳಿಸುವುದು ಹೇಗೆ ? ಇದು ಸರ್ಕಾರದ ಮುಂದಿರುವ ಸವಾಲು. ಮಾಸ್ಕ್ ಧರಿಸದಿದ್ದರೆ ದಂಡ ವಿಧಿಸುವುದಾಗಿ ಘೋಷಿಸಲಾಗಿದ್ದರೂ ಇದನ್ನು ಗಮನಿಸುವವರಾರು ? ಅಷ್ಟು ಪೊಲೀಸ್ ಸಿಬ್ಬಂದಿ ನಮ್ಮಲ್ಲಿದೆಯೇ ? ಲಾಕ್ ಡೌನ್ ಅವಧಿಯಲ್ಲಿ ಲಭ್ಯವಿದ್ದ ಪೊಲೀಸ್ ಸಿಬ್ಬಂದಿ ಈಗ ತಮ್ಮ ನಿತ್ಯ ಕರ್ತವ್ಯದಲ್ಲಿ ನಿರತರಾಗಿರುತ್ತಾರೆ.
ಆಸ್ಪತ್ರೆಗಳಲ್ಲೂ ಈ ನಿಯಮಗಳ ಉಲ್ಲಂಘನೆಯಾಗುತ್ತಿರುವುದನ್ನು ಗಮನಿಸಬಹುದು. ಇಲ್ಲಿ ಜನತೆಗೆ ಬುದ್ಧಿ ಇಲ್ಲ ಎನ್ನುವುದೊಂದೇ ಮಂತ್ರವಾಗಬಾರದು. ಜನರಲ್ಲಿ ವಿಶ್ವಾಸ ಮೂಡಿಸುವಂತಹ ಜಾಗೃತಿಯ ಪ್ರಯತ್ನಗಳು ನಡೆಯುತ್ತಿವೆಯೇ ಎಂದು ಯೋಚಿಸಬೇಕಾಗುತ್ತದೆ. ನಿಯಮ ಪಾಲನೆಯನ್ನು ಗಮನಿಸುವ ಸಿಬ್ಬಂದಿಯನ್ನು ನಿಯೋಜಿಸಲಾಗಿದೆಯೇ ಎನ್ನುವುದೂ ಮುಖ್ಯವಾಗುತ್ತದೆ.
ಸರ್ಕಾರಕ್ಕೆ ಎಲ್ಲೆಡೆಯೂ ಕಾಡುವುದು ಸಿಬ್ಬಂದಿಯ ಕೊರತೆ. ಆರೋಗ್ಯ ಕ್ಷೇತ್ರದಲ್ಲಿ ವೈದ್ಯರ ಕೊರತೆಯೇ ತೀವ್ರವಾಗಿದೆ. ಇಡೀ ಭಾರತದಲ್ಲಿ ಒಟ್ಟು 19 ಲಕ್ಷ ಆಸ್ಪತ್ರೆಯ ಹಾಸಿಗೆಗಳಿವೆ, 95 ಸಾವಿರ ಐಸಿಯು ಹಾಸಿಗೆಗಳಿವೆ, 47 ಸಾವಿರ ವೆಂಟಿಲೇಟರ್ ಗಳಿವೆ. ಇವುಗಳ ಪೈಕಿ ಶೇ 60ರಷ್ಟು ಖಾಸಗಿ ಆಸ್ಪತ್ರೆಗಳಲ್ಲಿವೆ. ಶೇ 74ರಷ್ಟು ವೈದ್ಯರು ನಗರಗಳಲ್ಲಿನ ಶೇ 28ರಷ್ಟು ಜನತೆಗೆ ಸೇವೆ ಸಲ್ಲಿಸುತ್ತಿದ್ದಾರೆ.
ಇನ್ನುಳಿದ ಶೇ 26ರಷ್ಟು ವೈದ್ಯರು ಶೇ 72 ಜನರ ಕಾಳಜಿ ವಹಿಸಬೇಕಿದೆ. ಒಂದು ಅಂದಾಜಿನ ಪ್ರಕಾರ ಭಾರತದ ಗ್ರಾಮೀಣ ಪ್ರದೇಶಗಳಲ್ಲಿ ಹತ್ತು ಲಕ್ಷಕ್ಕೂ ಹೆಚ್ಚು ನಕಲಿ ವೈದ್ಯರಿದ್ದಾರೆ. ಯಾವುದೇ ಸರ್ಕಾರಿ ಆಸ್ಪತ್ರೆಗಳಲ್ಲೂ ಸಿಬ್ಬಂದಿಯ ಸಂಖ್ಯೆ ಅವಶ್ಯಕತೆಗೆ ಅನುಗುಣವಾಗಿಲ್ಲ ಎನ್ನುವುದು ಸ್ಪಷ್ಟ. ಈ ಕೊರತೆಯನ್ನು ನೀಗಿಸುವ ನಿಟ್ಟಿನಲ್ಲಿ ಕೊರೋನಾ ಸಂದರ್ಭದಲ್ಲೂ ಯಾವುದೇ ಪ್ರಯತ್ನ ನಡೆಯದಿರುವುದು ಈ ದೇಶದ ದುರಂತ.
ಈ ಗೊಂದಲಗಳು ಮತ್ತು ನಿರಾಕರಣೆಯ ರಾಜಕಾರಣದ ನಡುವೆಯೇ ದೇಶ ಸಹಜ ಸ್ಥಿತಿಗೆ ಮರಳುತ್ತಿದೆ. ಜನಸಾಮಾನ್ಯರ ಆತಂಕಗಳನ್ನು ಎಂದಿಗೂ ಗಂಭೀರವಾಗಿ ಪರಿಗಣಿಸದ ನಮ್ಮ ದೇಶದ ಆಡಳಿತ ವ್ಯವಸ್ಥೆ ಕೊರೊನಾ ಸಂದರ್ಭದಲ್ಲೂ ಇದೇ ನೀತಿ ಅನುಸರಿಸುತ್ತಿದೆ. ಗಡಿ ಸಂಘರ್ಷ, ಯುದ್ಧೋನ್ಮಾದ, ಆತ್ಮನಿರ್ಭರತೆ ಇವೆಲ್ಲದರ ನಡುವೆಯೂ ನಾವು ಒಂದು ವಿನಾಶಕಾರಿ ವೈರಾಣುವಿನೊಡನೆ ಸೆಣಸಬೇಕಿದೆ.
ಹೆಚ್ಚುತ್ತಿರುವ ಸಾವು, ಸೋಂಕಿತರ ಸಂಖ್ಯೆ ಜನಸಾಮಾನ್ಯರನ್ನು ಆತಂಕಕ್ಕೆ ದೂಡಿದೆ. ಈ ಆತಂಕದ ನಡುವೆಯೇ ಜನರು ಬದುಕು ಸವೆಸಬೇಕಿದೆ. ಬಹುಶಃ ಶಾಲಾ ಮಕ್ಕಳೂ ಈ ಸನ್ನಿವೇಶವನ್ನು ಎದುರಿಸಲಿದ್ದಾರೆ. ಒಂದು ದೇಶದ ಆರೋಗ್ಯ ವ್ಯವಸ್ಥೆ ಸುಸ್ಥಿತಿಯಲ್ಲಿ ಇಲ್ಲದಿದ್ದರೆ ಏನಾಗುತ್ತದೆ ಎಂಬ ಪ್ರಶ್ನೆಗೆ ಕೊರೋನಾ ಉತ್ತರ ನೀಡಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243
ದಿನದ ಸುದ್ದಿ
ಇಂದಿನಿಂದ ಏ.3 ರವರೆಗೆ ಸೂಳೆಕೆರೆಗೆ ನೀರು ಬಿಡುಗಡೆ
ಸುದ್ದಿದಿನ,ದಾವಣಗೆರೆ: ಭದ್ರಾ ಜಲಾಶಯ ಯೋಜನೆ ವ್ಯಾಪ್ತಿಗೆ ಬರುವ ದೇವರಬೆಳಕೆರೆ ಪಿಕ್ಅಪ್ ಅಣೆಕಟ್ಟಿನ ಸ್ಕವರಿಂಗ್ ಸ್ಪೂಯೀಸ್ ಗೇಟ್ ಮುಖಾಂತರ ಜಲಾಶಯದ ಡೆಡ್ ಸ್ಟೋರೇಜ್ ನೀರನ್ನು ಸೂಳೆಕೆರೆ ಹಳ್ಳಕ್ಕೆ ಮಾರ್ಚ್ 28 ರಿಂದ ಏಪ್ರಿಲ್ 3 ರವರೆಗೆ ಪ್ರತಿದಿನ 20 ಕ್ಯೂಸೆಕ್ಸ್ಗಳಲ್ಲಿ ಜನ-ಜಾನುವಾರು ಪಕ್ಷಿಗಳಿಗೆ ಕುಡಿಯುವ ನೀರು ಒದಗಿಸಲು ಹಾಗೂ ಅಕ್ಕಪಕ್ಕದ ಗ್ರಾಮಗಳ ಕುಡಿಯುವ ನೀರಿನ ಉದ್ದೇಶಕ್ಕೆ ಬಿಡಲಾಗುತ್ತಿದೆ.
ಈ ವೇಳೆ ಹಳ್ಳಕ್ಕೆ ದನ ಕರಗಳನ್ನು ಇಳಿಸುವುದಾಗಲಿ, ಪಂಪ್ಸೆಟ್ಗಳಿಂದ ನೀರೆತ್ತುವುದುನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ ಎಂದು ಕನೀನಿನಿ ಕಾರ್ಯಪಾಲಕ ಇಂಜಿನಿಯರ್ ತಿಳಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243
ದಿನದ ಸುದ್ದಿ
ಲೋಕಸಭಾ ಚುನಾವಣೆಯ ಮೊದಲ ಹಂತಕ್ಕೆ ನಾಮಪತ್ರ ಸಲ್ಲಿಕೆಗೆ ಇಂದು ಕೊನೆಯ ದಿನ
ಸುದ್ದಿದಿನ ಡೆಸ್ಕ್ : ಲೋಕಸಭಾ ಚುನಾವಣೆಯ ಮೊದಲ ಹಂತಕ್ಕೆ ನಾಮಪತ್ರ ಸಲ್ಲಿಸಲು ಇಂದು ಕೊನೆಯ ದಿನವಾಗಿದೆ.
ನಾಳೆ ನಾಮಪತ್ರಗಳ ಪರಿಶೀಲನೆ ನಡೆಯಲಿದ್ದು, ಇದೇ 30 ನಾಮಪತ್ರ ಹಿಂಪಡೆಯಲು ಕಡೆಯ ದಿನವಾಗಿದೆ. ಇದೇ ವೇಳೆ ಬಿಹಾರದಲ್ಲಿ ನಾಮಪತ್ರ ಸಲ್ಲಿಕೆಗೆ ನಾಳೆ ಕಡೆ ದಿನವಾಗಿದ್ದು, ಈ ತಿಂಗಳ 30 ರಂದು ನಾಮಪತ್ರಗಳ ಪರಿಶೀಲನೆ ಹಾಗೂ ಏಪ್ರಿಲ್ 2ರಂದು ನಾಮತ್ರ ಹಿಂಪಡೆಯುವಿಕೆಗೆ ಕೊನೆಯ ದಿನವಾಗಿರುತ್ತದೆ.
ಏಪ್ರಿಲ್ 19 ರಂದು 17 ರಾಜ್ಯಗಳು ಮತ್ತು ನಾಲ್ಕು ಕೇಂದ್ರಾಡಳಿತ ಪ್ರದೇಶಗಳಲ್ಲಿನ 102ಲೋಕಸಭಾ ಕ್ಷೇತ್ರಗಳಿಗೆ ಮೊದಲ ಹಂತದಲ್ಲಿ ಚುನಾವಣೆ ನಡೆಯಲಿದೆ. ಅದರಂತೆ ತಮಿಳುನಾಡಿನಲ್ಲಿ 39, ರಾಜಸ್ಥಾನದಲ್ಲಿ 12, ಉತ್ತರ ಪ್ರದೇಶದಲ್ಲಿ 8, ಮಧ್ಯಪ್ರದೇಶದಲ್ಲಿ 6, ಉತ್ತರಾಖಂಡ, ಅಸ್ಸಾಂ ಮತ್ತು ಮಹಾರಾಷ್ಟ್ರದಲ್ಲಿ ತಲಾ 5 , ಬಿಹಾರದಲ್ಲಿ 4, ಪಶ್ಚಿಮ ಬಂಗಾಳದಲ್ಲಿ 3, ಅರುಣಾಚಲ ಪ್ರದೇಶ, ಮಣಿಪುರ, ಮೆಘಾಲಯದಲ್ಲಿ ತಲಾ 2 ಮತ್ತು ಛತ್ತೀಸ್ಗಢ, ಮಿಜೋರಾಂ, ನಾಗಾಲ್ಯಾಂಡ್, ಸಿಕ್ಕಿಂ, ತ್ರಿಪುರ, ಅಂಡಮಾನ್-ನಿಕೋಬಾರ್ ದ್ವೀಪಗಳು, ಜಮ್ಮು-ಕಾಶ್ಮೀರ, ಲಕ್ಷದ್ವೀಪ ಮತ್ತು ಪುದುಚೇರಿಯಲ್ಲಿ ತಲಾ ಒಂದು ಕ್ಷೇತ್ರದಲ್ಲಿ ಮೊದಲ ಹಂತದಲ್ಲಿ ಚುನಾವಣೆ ನಡೆಯಲಿದೆ.
ಎರಡನೇ ಹಂತದಲ್ಲಿ 89 ಲೋಕಸಭಾ ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದ್ದು, ಚುನಾವಣಾ ಆಯೋಗ ನಾಳೆ ಅಧಿಸೂಚನೆ ಹೊರಡಿಸಲಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243
ದಿನದ ಸುದ್ದಿ
ಚುನಾವಣಾ ಅಕ್ರಮ ; ಸಾರ್ವಜನಿಕರು ದೂರು ಸಲ್ಲಿಸಲು ಆಯೋಗದಿಂದ ಸಿ-ವಿಜಿಲ್ ಆಪ್ ಅಭಿವೃದ್ಧಿ
ಸುದ್ದಿದಿನ ಡೆಸ್ಕ್ : 18ನೇ ಲೋಕಸಭೆಗೆ ಸದಸ್ಯರನ್ನು ಆಯ್ಕೆ ಮಾಡಲು ನಡೆಯಲಿರುವ ಸಾರ್ವತ್ರಿಕ ಚುನಾವಣೆಗೆ ಭಾರತ ಚುನಾವಣಾ ಆಯೋಗ, ಸಕಲ ಸಿದ್ಧತೆಯೊಂದಿಗೆ ಸಜ್ಜಾಗಿದೆ.
ದೇಶದಲ್ಲಿ ಚುನಾವಣೆಗಳನ್ನು ಪಾರದರ್ಶಕವಾಗಿ ಹಾಗೂ ಅತ್ಯಂತ ವಿಶ್ವಾಸಾರ್ಹ ರೀತಿಯಲ್ಲಿ ನಡೆಸುವ ಸಂಕಲ್ಪದೊಂದಿಗೆ ಚುನಾವಣಾ ಆಯೋಗ, ಸಮಸ್ತ ಚುನಾವಣಾ ಪ್ರಕ್ರಿಯೆಗಳನ್ನು ಸುಗಮಗೊಳಿಸಲು ತಂತ್ರಜ್ಞಾನದ ನೆರವನ್ನು ಬಳಸಿಕೊಳ್ಳುತ್ತಿದೆ. ಈ ನಿಟ್ಟಿನಲ್ಲಿ ಮತದಾರರು, ಚುನಾವಣಾ ಸಿಬ್ಬಂದಿ ಹಾಗೂ ಆಯೋಗಕ್ಕೆ ನೆರವಾಗುವ ಹಲವು ಆಪ್ಗಳನ್ನು ಚುನಾವಣಾ ಆಯೋಗ ಅಭಿವೃದ್ಧಿಪಡಿಸಿದೆ.
ಈ ಪೈಕಿ ಇಂದು ಸಿ-ವಿಜಿಲ್ ಆಪ್ ಬಗ್ಗೆ ಮಾಹಿತಿ.
ದೇಶದಲ್ಲಿ ಚುನಾವಣೆಗಳ ವೇಳೆ ನಡೆಯುವ ಅಕ್ರಮಗಳು, ಮಾದರಿ ನೀತಿ ಸಂಹಿತೆಯ ಉಲ್ಲಂಘನೆ ಪ್ರಕರಣಗಳ ಮೇಲೆ ಕಣ್ಣಿಡುವುದು ಕೇವಲ ಚುನಾವಣಾ ಸಿಬ್ಬಂದಿಯ ಕೆಲಸವಲ್ಲ. ಇದು ಪ್ರತಿಯೊಬ್ಬ ನಾಗರಿಕನ ಕರ್ತವ್ಯವೂ ಹೌದು. ಹಾಗಾಗಿ ಚುನಾವಣಾ ಅಕ್ರಮಗಳ ಬಗ್ಗೆ ಸಾರ್ವಜನಿಕರು ಆಯೋಗಕ್ಕೆ ದೂರು ತಲುಪಿಸಲು ಭಾರತ ಚುನಾವಣಾ ಆಯೋಗ ಸಿ-ವಿಜಿಲ್ ಆಪ್ ಅನ್ನು ಅಭಿವೃದ್ಧಿ ಪಡಿಸಿದೆ.
ದೂರುಗಳನ್ನು ಆನ್ಲೈನ್ ಮೂಲಕ ಆಯೋಗಕ್ಕೆ ರವಾನಿಸಲು ಈ ಆಪ್ ನೆರವಾಗುವುದು. ಯಾವುದೇ ಚುನಾವಣಾ ಅಕ್ರಮಗಳ ಬಗ್ಗೆ ಧ್ವನಿಮುದ್ರಣ, ವಿಡಿಯೋ ಚಿತ್ರದ ತುಣುಕುಗಳು ಮತ್ತು ಫೋಟೊ ಮೊದಲಾದ ದಾಖಲೆಗಳನ್ನು ಸಾರ್ವಜನಿಕರು ಇದರ ಮೂಲಕ ಕಳುಹಿಸಬಹುದು.
ಚುನಾವಣೆಗಳಲ್ಲಿ ರಾಜಕೀಯ ಪಕ್ಷಗಳು, ಅಭ್ಯರ್ಥಿಗಳು ಮಾಡುವ ಖರ್ಚು-ವೆಚ್ಚ, ಮತದಾರರ ಮನವೊಲಿಕೆಗೆ ಆಮಿಷಗಳ ಬಳಕೆ ಮೊದಲಾದ ಅಕ್ರಮಗಳ ಬಗ್ಗೆ ದೂರು ನೀಡಲು ಇದನ್ನು ಬಳಸಬಹುದು. ಒಂದುನೂರು ನಿಮಿಷಗಳಲ್ಲಿ ಚುನಾವಣಾಧಿಕಾರಿಗಳು ಅಗತ್ಯ ಕ್ರಮ ಕೈಗೊಳ್ಳುತ್ತಾರೆ ಎಂದು ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಹೇಳಿದ್ದಾರೆ.
ದೇಶದ ಯಾವ ಮೂಲೆಯಲ್ಲೇ ಆಗಲಿ ನಡೆಯುವ ಚುನಾವಣಾ ಅಕ್ರಮ ಅಥವಾ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣಗಳ ಬಗ್ಗೆ ತಾವು ನೀಡಿದ ದೂರುಗಳನ್ನು ಆಯೋಗ ಪರಿಗಣಿಸಿದೆಯೇ ಎನ್ನುವ ವಿವರಗಳನ್ನು ಸಹ ಸಾರ್ವಜನಿಕರು ಸಿ-ವಿಜಿಲ್-ಆಪ್ ಮೂಲಕ ವೀಕ್ಷಿಸಬಹುದು.
ಸುದ್ದಿದಿನ.ಕಾಂ|ವಾಟ್ಸಾಪ್|9980346243
-
ದಿನದ ಸುದ್ದಿ7 days ago
ಭಾನುವಾರದಂದು ಕಾರ್ಯನಿರ್ವಹಿಸುವಂತೆ ಬ್ಯಾಂಕ್ಗಳಿಗೆ ಆರ್ ಬಿ ಐ ಸೂಚನೆ
-
ದಿನದ ಸುದ್ದಿ6 days ago
ನಾಯಕನ ಹಟ್ಟಿ | ಶ್ರೀಗುರು ತಿಪ್ಪೇರುದ್ರಸ್ವಾಮಿ ರಥೋತ್ಸವಕ್ಕೆ ವಿಶೇಷ ಬಸ್ ಸೌಲಭ್ಯ
-
ದಿನದ ಸುದ್ದಿ7 days ago
ಕಾಂಗ್ರೆಸ್ ಪಕ್ಷದ ಬ್ಯಾಂಕ್ ಖಾತೆಗಳು ಸ್ಥಗಿತ ; ಬಿಜೆಪಿ ಅಧಿಕಾರ ದುರುಪಯೋಗ : ಖರ್ಗೆ ಕಿಡಿ
-
ದಿನದ ಸುದ್ದಿ5 days ago
ಲೋಕಸಭಾ ಚುನಾವಣೆ : ಚುನಾವಣಾ ಚಟುವಟಿಕೆಗಳ ಕುರಿತ ಜಿಲ್ಲಾವಾರು ಮಾಹಿತಿ
-
ದಿನದ ಸುದ್ದಿ5 days ago
ವಿಜಯಪುರ ಜಿಲ್ಲಾ ಸಾಹಿತ್ಯ ಸಮ್ಮೇಳನದ ಕವಿಗೋಷ್ಠಿಗೆ ಮೈಬೂಬಸಾಹೇಬ.ವೈ.ಜೆ ಆಯ್ಕೆ
-
ದಿನದ ಸುದ್ದಿ5 days ago
ಬೆಂಗಳೂರಿನಲ್ಲಿ ಬಿಜೆಪಿ ನೂತನ ಮಾಧ್ಯಮಕೇಂದ್ರ ಆರಂಭ
-
ದಿನದ ಸುದ್ದಿ5 days ago
ಲೋಕಸಭಾ ಚುನಾವಣೆ | ಹೊಸ ಮತದಾರರೆಷ್ಟು ಗೊತ್ತಾ..?
-
ದಿನದ ಸುದ್ದಿ5 days ago
ಕವಿತೆ | ನೆನಪು