ದಿನದ ಸುದ್ದಿ
ಶ್ವಾನಗಳ ಕೌಶಲ್ಯದಿಂದ ಕೋವಿಡ್-19 ರೋಗಿಯ ಪತ್ತೆ : ನಡೆಯುತ್ತಿದೆ ಸಂಶೋಧನೆ
- ಡಾ. ಕಮಲೇಶ್ ಕುಮಾರ್ ಕೆ ಎಸ್, ಪಶುವೈದ್ಯಾಧಿಕಾರಿಗಳು, ಶಿವಮೊಗ್ಗ
ನಮ್ಮ ಸಂಚರಣೆಗೆ ನಾವು ದೃಷ್ಟಿಯ ಮೇಲೆ ಹೇಗೆ ಅವಲಂಬಿತರಾಗಿರುತ್ತೇವೆಯೋ ಹಾಗೆಯೇ ಶ್ವಾನಗಳು ದೃಷ್ಟಿಯ ಜೊತೆಗೆ ಮುಖ್ಯವಾಗಿ ಅವುಗಳ ಮೂಗಿನ ಗ್ರಾಹಕಗಳ (receptors) ಮೇಲೆ ಹೆಚ್ಚು ಅವಲಂಬಿತವಾಗಿರುತ್ತವೆ. ಪ್ರಸ್ತುತ ಪ್ರಪಂಚದಾದ್ಯಂತ ಇರುವ ಸಾಕು ನಾಯಿಗಳು ತೋಳದಿಂದ ಉಗಮಗೊಂಡಿವೆ ಎಂದು ವೈಜ್ಞಾನಿಕವಾಗಿ ಸಾಬೀತಾಗಿದೆ.
ಕಾಡು ಪ್ರಾಣಿಗಳಾದ ತೋಳಗಳು ಸಾಮಾನ್ಯವಾಗಿ ತಮ್ಮ ನೈಸರ್ಗಿಕ ವಾಸನೆ ಗ್ರಹಿಕೆ (natural scent detection) ಕೌಶಲ್ಯದಿಂದ ಇನ್ನೊಂದು ಪ್ರಾಣಿಯನ್ನು, ತಮ್ಮ ಪ್ರದೇಶವನ್ನು ಅಥವ ಬೇಟೆಯನ್ನು ಹುಡುಕುತ್ತ ಜೀವನ ಸಾಗಿಸುತ್ತವೆ. ಇದೇ ಸಾಮರ್ಥ್ಯವು ಶ್ವಾನಗಳಿಗು ತಳೀಯವಾಗಿ (genetically) ಬಂದಿದೆ ಹಾಗೂ ನಮ್ಮ ಹಿರಿಯರು ಇದನ್ನೇ ಬಳಸಿಕೊಂಡು ತಮ್ಮ ಸಂರಕ್ಷಣೆ, ಪ್ರಾಣಿ ಬೇಟೆ ಮತ್ತು ಕುರಿಹಿಂಡು ಕಾಯುವ ಕಾವಲಿಗಾಗಿ ಬಳಸಿದ್ದಾರೆ.
ಸಾಮಾನ್ಯವಾಗಿ ಸಾಕುಪ್ರಾಣಿಯನ್ನಾಗಿ ಸಾಕುವ ಶ್ವಾನಗಳು ಬುದ್ಧಿವಂತಿಕೆ, ನೆನಪಿನ ಶಕ್ತಿ, ವಿಧೇಯತೆ, ಆಟವಾಡುವ, ಗಮನಿಸುವ ಹಾಗೂ ಪ್ರೇರಣೆ ನೀಡುವ ನೈಪುಣ್ಯತೆಯನ್ನು ಹೊಂದಿರುವುದು ನಮ್ಮೆಲ್ಲರಿಗು ತಿಳಿದಿರುವ ಸಂಗತಿ. ಇದೆಲ್ಲದಕ್ಕೂ ಮಿಗಿಲಾಗಿ ಶ್ವಾನಗಳಿಗೆ ವಾಸನೆ ಗ್ರಹಿಸುವ ಶಕ್ತಿ ಅತ್ಯಧಿಕವಾಗಿ ಇರುತ್ತದೆ. ಅವು ಮಾನವನಿಗಿಂತ ಸುಮಾರು 10,000 ದಿಂದ 1,00,000 ಪಟ್ಟು ಹೆಚ್ಚು ವಾಸನೆಯನ್ನು ಗ್ರಹಿಸುವ ಶಕ್ತಿ ಹೊಂದಿರುತ್ತವೆ ಎಂದು ವಿಜ್ಞಾನಿಗಳು ನಿರೂಪಿಸಿದ್ದಾರೆ.
ಅದರಲ್ಲೂ ಬೇಟೆಯಾಡುವ ಜಾತಿಗೆ ಸೇರಿದ ಶ್ವಾನಗಳು ಹೆಚ್ಚು ವಾಸನೆಯನ್ನು ಗ್ರಹಿಸುತ್ತವೆ. ಮನುಷ್ಯರಿಗೆ ಹೋಲಿಸಿದರೆ, ನಮಲ್ಲಿ 6 ಮಿಲಿಯನ್ ನಷ್ಟು ಇರುವ ವಾಸನೆ ಕಂಡು ಹಿಡಿಯುವ ಗ್ರಾಹಕಗಳು ಶ್ವಾನಗಳಲ್ಲಿ 300 ಮಿಲಿಯನ್ ನಷ್ಟು ಇರುತ್ತವೆ. ಅವುಗಳ ಮೂಗಿನ ಹಾಗು ಮೆದುಳಿನ (hemispheric specific brain) ರಚನೆಯು ಬಹಳಷ್ಟು ವಿಶೇಷ ಹಾಗು ವೈವಿಧ್ಯವಾಗಿರುತ್ತದೆ.
ಪ್ರಪಂಚದಾದ್ಯಂತ ಅತ್ಯುತ್ತಮವಾದ ವಾಸನೆ ಗ್ರಹಿಕೆ ಕೌಶಲ್ಯ ಹೊಂದಿರುವ ಹತ್ತು ತಳಿಯ ಶ್ವಾನಗಳು ಹೀಗಿವೆ.
- ಬ್ಲಡ್ ಹೌನ್ಡ್ (Blood hound)
- ಬಾಸೆಟ್ ಹೌನ್ಡ್ (Basset hound)
- ಬೀಗಲ್ (Beagle)
- ಜರ್ಮನ್ ಶಫರ್ಡ್ (German Shephered)
- ಲ್ಯಾಬ್ರೆಡರ್ ರಿಟ್ರೆವರ್ (Labrador Retriever
- ಬೆಲ್ಜಿಯನ್ ಮಲಿನೋಯ್ಸ್ (Belgian Malinois)
- ಬ್ಲ್ಯೂಟಿಕ್ ಕೂನ್ ಹೌನ್ಡ್ (Blue tick Coonhound)
- ಬ್ಲಾಕ್ ಅಂಡ್ ಟಾನ್ ಕೂನ್ ಹೌನ್ಡ್ (Black & tan coonhound)
- ಗೋಲ್ಡನ್ ರಿಟ್ರೆವರ್ (Golden Retriever)
- ಡಾಶ್ ಹೌನ್ಡ್ (Dachshund)
ಈ ಬೇಟೆ ತಳಿಗಳೆಲ್ಲವು ನುರಿತ ತರಬೇತುದಾರರಿಂದ ತರಬೇತಿ ಪಡೆದ ನಂತರ ಸೈನ್ಯ, ಪೊಲೀಸ್ ಇಲಾಖೆ ಹಾಗು ಬಾಂಬ್ ನಿಷ್ಕ್ರಿಯ ದಳ ಹಾಗೂ ವಿವಿಧ ಇತ್ಯಾದಿ ಕ್ಷೇತ್ರಗಳಲ್ಲಿ ತಮ್ಮ ಇರುವಿಕೆಯನ್ನು ಸಾವಿರಾರು ಉದಾಹರಣೆಗಳಿಂದ ತೋರಿಸಿವೆ. ಆದರೂ ಇದಕ್ಕೆ ಮಿಗಿಲಾಗಿ ವೈದ್ಯಕೀಯ ಕ್ಷೇತ್ರದಲ್ಲಿ ರೋಗ ಪತ್ತೆ ಹಚ್ಚುವಲ್ಲಿ ನೆರವು ನೀಡುವಲ್ಲಿ ಶ್ವಾನಗಳ ಪಾಲು ಅಪಾರ.
1980 ರಲ್ಲೇ ಕ್ಯಾನ್ಸರ್ ರೋಗವನ್ನು (ಶ್ವಾಶಕೋಶ ಹಾಗು ಸ್ಥನ ಕ್ಯಾನ್ಸರ್) 97% ನಷ್ಟು ನಿಖರತೆಯಿಂದ ಕಂಡುಹಿಡಿಯುವಲ್ಲಿ ಶ್ವಾನಗಳು ಯಶಸ್ವಿಯಾಗಿವೆ. ಮೆದುಳು ಮತ್ತು ನರಮಂಡಲಕ್ಕೆ ಸಂಬಂದಿಸಿದ ರೋಗವಾದ ಪಾರ್ಕಿನ್ಸನ್ (Parkinson) ರೋಗ, ಮಲೇರಿಯಾ (Malaria) ಹಾಗೂ ಇತರೆ ರೋಗಗಳನ್ನು ತಮ್ಮ ಚಾಣಾಕ್ಷತನದಿಂದ ಕಂಡುಹಿಡಿದಿವೆ. ಮುಖ್ಯವಾಗಿ ಶ್ವಾನಗಳು ಸೇವಿಸುವ ಆಹಾರ, ಹೊಟ್ಟೆ ಹಾಗೂ ಕರುಳಿನಲ್ಲಿನ ಸೂಕ್ಷ್ಮಾಣು ಜೀವಿಗಳು, ದೇಹದ ಸ್ಥಿತಿ ಹಾಗೂ ವೈದ್ಯಕೀಯ ಆರೈಕೆ ಅವುಗಳ ಈ ಕೌಶಲ್ಯದ ಮೇಲೆ ಪರಿಣಾಮ ಬೀರುತ್ತವೆ.
ಇಂಗ್ಲೆಂಡಿನಲ್ಲಿ ಈ ಕೌಶಲ್ಯಗಳುಳ್ಳ ಶ್ವಾನಗಳನ್ನು ಯಾವುದೇ ಲಕ್ಷಣಗಳಿಲ್ಲದ ಕೊರೊನ ವೈರಸ್ ಪೀಡಿತ ವ್ಯಕ್ತಿಯನ್ನು ಮೊದಲ ಹಂತದಲ್ಲಿ ಪತ್ತೆಹಚ್ಚುವಲ್ಲಿ ಬಳಸಲು ಸಂಶೋಧನೆ ನಡೆಯುತ್ತಿದೆ. ಉಸಿರಾಟ, ಉಗುಳು, ರಕ್ತ ಹಾಗೂ ಮೂತ್ರದಲ್ಲಿರುವ ಆವಿಯಾಗುವ ಸಾವಯವ ಸಂಯುಕ್ತಗಳನ್ನು (volatile organic compounds) ಬಳಸಿಕೊಂಡು ವಾಸನೆ ಮುದ್ರೆ (odour imprinting) ಮಾಡುತ್ತಿದ್ದಾರೆ. ಈ ರೀತಿ ಮುದ್ರೆಯಾದ ನಂತರ ಶ್ವಾನಗಳು ರೋಗ ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಬಹುದು.
ಇನ್ಫಲೂಎಂಜಾ (Influenza) ರೋಗದಲ್ಲಿ ಉಸಿರಾಟದ ವಾಸನೆ ಇರುವ ರೀತಿಯಲ್ಲಿ ಕೊರೊನ ವೈರಸ್ ಪೀಡಿತರಿಗೂ ಇದ್ದಲ್ಲಿ ಅವರನ್ನು ಕಂಡುಹಿಡಿಯುವುದು ಸುಲಭವಾಗಬಹುದು ಎಂಬ ಅಭಿಪ್ರಾಯ ವಿಜ್ಞಾನಿಗಳದು. ಇಷ್ಟೆಲ್ಲಾ ಆದರೆ ಕೇವಲ ಆಸ್ಪತ್ರೆ ಅಲ್ಲದೆ ಸೂಕ್ಷ್ಮ ಪ್ರದೇಶಗಳಾದ ವಿಮಾನ ನಿಲ್ದಾಣ, ಬಸ್ ನಿಲ್ದಾಣ ಹಾಗೂ ರೈಲ್ವೆ ನಿಲ್ದಾಣಗಳಲ್ಲಿ ಶ್ವಾನಗಳು ಕಾರ್ಯನಿರ್ವಹಿಸಬಹುದಾಗಿದೆ. ಇದು ಎಷ್ಟರಮಟ್ಟಿಗೆ ಉಪಯೋಗವಾಗುವುದೊ ಎಂದು ಕಾದು ನೋಡಬೇಕಿದೆ.
(ಡಾ. ಕಮಲೇಶ್ ಕುಮಾರ್ ಕೆ ಎಸ್,
ಪಶುವೈದ್ಯಾಧಿಕಾರಿಗಳು
ಪಶುಚಿಕಿತ್ಸಾಲಯ, ಮತ್ತೂರು,
ಶಿವಮೊಗ್ಗ
ಈ ಮೇಲ್ : kskamalesh93@gmail.com
ಫೋನ್ : 9164282969)
ಸುದ್ದಿದಿನ.ಕಾಂ|ವಾಟ್ಸಾಪ್|9980346243
ದಿನದ ಸುದ್ದಿ
ಶಿವಮೊಗ್ಗಕ್ಕೆ ಇಂದು ಪ್ರಧಾನಿ ನರೇಂದ್ರ ಮೋದಿ
ಸುದ್ದಿದಿನ, ಶಿವಮೊಗ್ಗ : ಪ್ರಧಾನಮಂತ್ರಿ ನರೇಂದ್ರ ಮೋದಿ ಇಂದು ಮಧ್ಯಾಹ್ನ 2 ಗಂಟೆಗೆ ಶಿವಮೊಗ್ಗದಲ್ಲಿ ಬೃಹತ್ ಸಾರ್ವಜನಿಕ ಸಭೆಯನ್ನುದ್ದೇಶಿ ಮಾತನಾಡಲಿದ್ದಾರೆ.
ಯುವಜನರು, ಮಹಿಳೆಯರು, ರೈತರು ಸೇರಿ ಸುಮಾರು ಎರಡೂವರೆ ಲಕ್ಷಕ್ಕೂ ಹೆಚ್ಚು ಜನರು ಕಾರ್ಯಕ್ರಮದಲ್ಲಿ ಭಾಗವಹಿಸುವ ನಿರೀಕ್ಷೆ ಇದೆ ಎಂದು ವಿಧಾನಪರಿಷತ್ ಮುಖ್ಯ ಸಚೇತಕ ಎನ್.ರವಿಕುಮಾರ್ ಶಿವಮೊಗ್ಗದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243
ದಿನದ ಸುದ್ದಿ
ಚುನಾವಣಾ ಬಾಂಡ್ ಕುರಿತ ದತ್ತಾಂಶ ಬಿಡುಗಡೆ
ಸುದ್ದಿದಿನ,ನವದೆಹಲಿ : ಚುನಾವಣಾ ಬಾಂಡ್ ಕುರಿತಂತೆ ಸುಪ್ರೀಂಕೋರ್ಟ್ನ ರಿಜಿಸ್ಟ್ರಿ ಇಂದ ಲಭ್ಯವಾದ ಅಂಕಿಕೃತ ದತ್ತಾಂಶ ಮಾದರಿಯನ್ನು ಚುನಾವಣಾ ಆಯೋಗ ಭಾನುವಾರ ತನ್ನ ವೆಬ್ಸೈಟ್ನಲ್ಲಿ ಅಪ್ಲೋಡ್ ಮಾಡಿದೆ. www.eci.gov.in/candidate-politicalparty ವೆಬ್ಸೈಟ್ನಲ್ಲಿ ಈ ದತ್ತಾಂಶ ಲಭ್ಯವಿರುತ್ತದೆ.
ಸುಪ್ರೀಂಕೋರ್ಟ್ ನಿರ್ದೇಶಿಸಿದಂತೆ ರಾಜಕೀಯ ಪಕ್ಷಗಳು ಚುನಾವಣಾ ಬಾಂಡ್ ಕುರಿತ ದತ್ತಾಂಶಗಳನ್ನು ಮೊಹರು ಹಾಕಿದ ಲಕೋಟೆಯಲ್ಲಿ ಸಲ್ಲಿಸಿದ್ದವು ಎಂದು ಚುನಾವಣಾ ಆಯೋಗದ ಹೇಳಿಕೆ ತಿಳಿಸಿದೆ. ರಾಜಕೀಯ ಪಕ್ಷಗಳಿಂದ ಸ್ವೀಕರಿಸಿದ ಮೊಹರು ಹಾಕಿದ ಲಕೋಟೆಗಳನ್ನು ತೆರೆಯದೇ ಸುಪ್ರೀಂಕೋರ್ಟ್ಗೆ ಸಲ್ಲಿಸಲಾಗಿತ್ತು.
ಇದೇ 15ರಂದು ಸುಪ್ರೀಂಕೋರ್ಟ್ ನೀಡಿದ ಆದೇಶದ ಮೇರೆಗೆ ಸುಪ್ರೀಂಕೋರ್ಟ್ನ ರಿಜಿಸ್ಟ್ರಿ, ಭೌತಿಕ ಪ್ರತಿ ಹಾಗೂ ಅದರ ಡಿಜಿಟಲ್ ದಾಖಲೆಯಿರುವ ಪೆನ್ಡ್ರೈವ್ ಒಳಗೊಂಡ ಮೊಹರು ಹಾಕಿದ ಲಕೋಟೆಯನ್ನು ಹಿಂತಿರುಗಿಸಿತ್ತು.
ಸುದ್ದಿದಿನ.ಕಾಂ|ವಾಟ್ಸಾಪ್|9980346243
ದಿನದ ಸುದ್ದಿ
ರಶ್ಮಿ ಚಂದ್ರಗಿರಿ ಅವರಿಗೆ ಪಿಎಚ್.ಡಿ ಪದವಿ
ಸುದ್ದಿದಿನ,ಹಾವೇರಿ : ನಗರದ ರಶ್ಮಿ ಚಂದ್ರಗಿರಿ ಅವರು ಕರ್ನಾಟಕ ವಿಶ್ವವಿದ್ಯಾಲಯಕ್ಕೆ ಮಂಡಿಸಿದ “ದಲಿತ ಬಂಡಾಯ ಕಾದಂಬರಿಗಳಲ್ಲಿ ಸಾಂಸ್ಕೃತಿಕ ನೆಲೆಗಳು” ಎಂಬ ಮಹಾಪ್ರಬಂಧಕ್ಕೆ ಕರ್ನಾಟಕ ವಿಶ್ವವಿದ್ಯಾಲಯ ಪಿಎಚ್.ಡಿ ಪದವಿ ಪ್ರಧಾನ ಮಾಡಿದೆ.
ಇವರಿಗೆ ಡಾ.ಬಿಎಸ್.ಭಜಂತ್ರಿ , ಸಹಾಯಕ ಪ್ರಧ್ಯಾಪಕರು ಕರ್ನಾಟಕ ಕಲಾ ಮಹಾವಿದ್ಯಾಲಯ ಧಾರವಾಡ ಇವರು ಮಾರ್ಗದರ್ಶನ ಮಾಡಿದ್ದರು.
ಬರವಣಿಗೆಯಲ್ಲಿ ತೊಡಗಿಸಿಕೊಂಡಿರುವ ರಶ್ಮಿ ಚಂದ್ರಗಿರಿಯವರ ಹಲವು ಲೇಖನಗಳು ನಿಯತಕಾಲಿಕೆಗಳಲ್ಲಿ ಪ್ರಕಟಗೊಂಡಿವೆ. ಪ್ರಸ್ತುತ ಇವರು ಉಪನ್ಯಾಸಕಿಯಾಗಿ ಕಾರ್ಯನಿರ್ವಹಿಸಿತ್ತಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243