ದಿನದ ಸುದ್ದಿ
ಬಿ.ಆರ್. ಜೋಯಪ್ಪ ಅವರ ‘ಕಾಟಿಬೆಟ್ಟದ ಕಥೆಗಳು’ ಪುಸ್ತಕ ಲೋಕಾರ್ಪಣೆ
ಸುದ್ದಿದಿನ, ಮಡಿಕೇರಿ : ಕೊಡಗು ಲೇಖಕ ಮತ್ತು ಕಲಾವಿದರ ಬಳಗ ಹಾಗೂ ಸರ್ಕಾರಿ ಪದವಿ ಪೂರ್ವ ಕಾಲೇಜು ಇವರ ಸಂಯುಕ್ತ ಆಶ್ರಯದಲ್ಲಿ ಸಾಹಿತಿ ಬಿ.ಆರ್.ಜೋಯಪ್ಪ ಅವರು ಬರೆದ ‘ಕಾಟಿಬೆಟ್ಟದ ಕಥೆಗಳು’ ಪುಸ್ತಕ ಲೋಕಾರ್ಪಣೆ ಸಮಾರಂಭವು ಶನಿವಾರ ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಸಭಾಂಗಣದಲ್ಲಿ ನಡೆಯಿತು.
ಪುಸ್ತಕ ಬಿಡುಗಡೆ ಮಾಡಿ ಮಾತನಾಡಿದ ರಂಗಕರ್ಮಿ ಶಿವಮೊಗ್ಗದ ಕವಿ ಕಾವ್ಯ ಟ್ರಸ್ಟ್ನ ಪ್ರಸನ್ನ ಅವರು ಸಣ್ಣ ಊರಿನಲ್ಲಿದ್ದು, ಸಣ್ಣ ಸಣ್ಣ ವಿಚಾರಗಳನ್ನು ಅದ್ಭುತ ಸಾಹಿತ್ಯ ರೂಪದಲ್ಲಿ ಪುಸ್ತಕದಲ್ಲಿ ಅನಾವರಣ ಮಾಡಿದ್ದಾರೆ ಎಂದರು. ಬಿ.ಆರ್.ಜೋಯಪ್ಪ ಅವರ ಬಾಲ್ಯದಲ್ಲಿ ಕಂಡಂತಹ ಅನುಭವವು ಕಥೆ ರೂಪದಲ್ಲಿ ಮೂಡಿ ಬಂದಿರುವುದು ಸಂತಸದ ವಿಷಯವಾಗಿದೆ ಎಂದರು.
ಮನುಷ್ಯನ ಜೀವನದಲ್ಲಿ ಪ್ರಕೃತಿ ಮತ್ತು ಪುರುಷ ಸಂಬಂಧದ ಬಾಂಧವ್ಯವನ್ನು ಈ ಪುಸ್ತಕವು ತೋರಿಸಿಕೊಡುತ್ತದೆ. ಸಭ್ಯತೆಯ ಬಾಲ್ಯ ಕಾಲದಲ್ಲಿ ಪ್ರಕೃತಿ ಮತ್ತು ಮನುಷ್ಯನ ಒಡನಾಟ ಮತ್ತು ಮನುಷ್ಯ ಬೆಳೆದಂತೆ ಪ್ರಕೃತಿಯ ಮೇಲೆ ಅತಿಕ್ರಮಣವಾಗುತ್ತ ಪ್ರಕೃತಿಯನ್ನು ವಿಕಾರಗೊಳಿಸುವ ಘಟನೆಗಳು ಈ ಪುಸ್ತಕದಲ್ಲಿ ಮೂಡಿಬಂದಿದೆ ಎಂದು ಅವರು ನುಡಿದರು.
ಶಿಕ್ಷಣ ಬೌದ್ಧಿಕ ಜ್ಞಾನವೂ ಹೌದು ಹಾಗೂ ಹೃದಯದ ಅನುಭವವು ಹೌದು. ಇಂದಿನ ವಿದ್ಯಾರ್ಥಿಗಳು ಅವಸರದ ಬದುಕಿನಿಂದ ಹೊರಬಂದು ತಮ್ಮ ಪರಿಸರವನ್ನು ಗಮನಿಸಿ ನೆರೆ ಹೊರೆಯವರೊಂದಿಗೆ ಉತ್ತಮ ಬಾಂಧವ್ಯ ಹೊಂದಿ ನಮ್ಮ ಭಾಷೆ, ನಮ್ಮ ಪರಿಸರದ ಬಗ್ಗೆ ಕೆಲಸ ಮಾಡಬೇಕು. ಬೇಕಾದದ್ದನ್ನು ಇಟ್ಟುಕೊಂಡು ಬೇಡವಾದದನ್ನು ಬಿಟ್ಟು ಸಮೃದ್ಧ ನಾಡನ್ನು ಕಟ್ಟುವಂತಹ ಕೆಲಸಗಳು ಮುಂದುವರೆಯಬೇಕು ಎಂದು ತಮ್ಮ ಅನುಭವವನ್ನು ಹಂಚಿಕೊಂಡರು.
ಹೆಸರಾಂತ ಕಥೆಗಾರರು ಹಾಗೂ ಮೈಸೂರು ಆಕಾಶವಾಣಿ ಕಾರ್ಯಕ್ರಮ ನಿರ್ವಾಹಕರಾದ ಅಬ್ದುಲ್ ರಶೀದ್ ಅವರು ಮಾತನಾಡಿ ಕಾಟಿಬೆಟ್ಟದ ಕಥೆಗಳು ಪುಸ್ತಕದಲ್ಲಿ ಬಿ.ಆರ್.ಜೋಯಪ್ಪ ಅವರು ತಮ್ಮ ಬಾಲ್ಯದ ತಮ್ಮ ಮನೆಯ ಪರಿಸರದ ಸುತ್ತಮುತ್ತಲಿನ ಆಗು ಹೋಗುಗಳು ಕಥೆಯ ರೂಪದಲ್ಲಿ ಅನಾವರಣಗೊಳಿಸಿದ್ದಾರೆ. ಕೊಡಗಿನ ಜೀವನ ಶೈಲಿ, ತಮ್ಮ ಸುತ್ತಮುತ್ತಲಿನ ಅನುಭವ, ಜೀವನ ಶಿಕ್ಷಣವನ್ನು ಕೃತಿಯಲ್ಲಿ ತೋರಿಸಿಕೊಟ್ಟಿದ್ದಾರೆ.
ವಿದ್ಯಾರ್ಥಿ ದಿನದಲ್ಲಿ ಸಾಹಿತ್ಯದ ಪ್ರಭಾವದಿಂದ ತಮಗಾದ ಅನುಭವವನ್ನು ವಿದ್ಯಾರ್ಥಿಗಳೊಂದಿಗೆ ಹಂಚಿಕೊಳ್ಳುತ್ತ ಪ್ರಸ್ತುತ ಕಾಲಘಟ್ಟದಲ್ಲಿ ವಿದ್ಯಾರ್ಥಿಗಳು ತಮ್ಮಲ್ಲಿ ಇರುವ ಸಾಹಿತ್ಯದ ಅಭಿರುಚಿಯನ್ನು ವೃದ್ಧಿಪಡಿಸಿಕೊಂಡು ತಂತ್ರಜ್ಞಾನವನ್ನು ತಮ್ಮ ಬೆಳವಣಿಗೆಗೆ ಉಪಯುಕ್ತ ರೀತಿಯಲ್ಲಿ ಬಳಸಿಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ತಿಳಿಸಿದರು.
ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷರಾದ ಟಿ.ಪಿ.ರಮೇಶ್ ಅವರು ಪ್ರಯತ್ನಶೀಲ ಬದುಕಿನಲ್ಲಿ ಯಶಸ್ಸಿನ ಗುಟ್ಟು ಅಡಗಿದೆ ಎಂಬುದನ್ನು ಕಾಟಿಬೆಟ್ಟದ ಕಥೆಗಳು ಪುಸ್ತಕದಲ್ಲಿ ಅಡಕವಾಗಿದೆ. ಬಿ.ಆರ್.ಜೋಯಪ್ಪ ಅವರು ಶಿಕ್ಷಕರಾಗಿ, ಲೇಖಕರಾಗಿ, ಅವರ ಪರಿಶ್ರಮದ ಅನಾವರಣ, ಗ್ರಾಮೀಣ ಪರಿಸರ, ಬಡತನದ ಅನಾವರಣ, ನಾಟಿ ಔಷಧಿಯ ಮಹತ್ವ, ಅವರ ಕಾಲಘಟ್ಟದ ಬದುಕಿನ ಚಿತ್ರಣವನ್ನು ಸೊಗಸಾಗಿ ಈ ಪುಸ್ತಕದಲ್ಲಿ ಅನಾವರಣಗೊಳಿಸಿದ್ದಾರೆ ಎಂದು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡರು.
ಕಥೆಗಳ ಲೇಖಕರಾದ ಬಿ.ಆರ್.ಜೋಯಪ್ಪ ಅವರುಕಾಟಿಬೆಟ್ಟದ ಈ ಪುಸ್ತಕ ರಚಿಸಲು ತಮಗೆ ಪ್ರೇರಣೆ ನೀಡಿದ ಮಹನೀಯರಿಗೆ ಕೃತಜ್ಞತೆ ಸಲ್ಲಿಸುತ್ತಾ ಕಥೆ ಬರೆಯುವ ಸಂದರ್ಭವನ್ನು ಹಂಚಿಕೊಳ್ಳುತ್ತಾ ತಮ್ಮ ಕುಟುಂಬ ಸದಸ್ಯರ ಸಹಕಾರ ಈ ಮುಂಚೆ ತಾವು ಬರೆದ ಪುಸ್ತಕಗಳ ಮಾಹಿತಿಗಳನ್ನು ನೀಡಿ ಪುಸ್ತಕವು ಉತ್ತಮ ರೀತಿಯಲ್ಲಿ ಮೂಡಿಬರಲು ಸಹಕಾರ ನೀಡಿದ ಎಲ್ಲಾ ಮಾರ್ಗದರ್ಶಕರಿಗೆ ವಿಮರ್ಶಕರಿಗೆ ಧನ್ಯವಾದ ತಿಳಿಸಿದರು.
ಕೊಡಗು ಲೇಖಕ ಮತ್ತು ಕಲಾವಿದರ ಬಳಗದ ಅಧ್ಯಕ್ಷರಾದ ಎಂ.ಪಿ.ಕೇಶವ ಕಾಮತ್ ಅವರು ಮಾತನಾಡಿ ಶಾಲಾ ಕಾಲೇಜುಗಳಲ್ಲಿ ಸಾಹಿತ್ಯದ ಬೆಳವಣಿಗೆ ಆಗಬೇಕೆಂಬ ಉದ್ದೇಶದಿಂದ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸುವುದು ಈ ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಪಿ.ಆರ್.ವಿಜಯ, ಚಿಂತನ-ಚಿತ್ತಾರ ಪ್ರಕಾಶನದ ಡಿ.ನಿಂಗರಾಜು ಚಿತ್ತಣ್ಣನವರ್, ಲೇಖಕರ ಕುಟುಂಬಸ್ಥರು ಇತರರು ಇದ್ದರು. ಕೊಡಗು ಲೇಖಕ ಮತ್ತು ಕಲಾವಿದರ ಬಳಗದ ಪ್ರಧಾನ ಕಾರ್ಯದರ್ಶಿ ವಿಲ್ಪರ್ಡ್ ಕ್ರಾಸ್ತಾ ನಿರೂಪಿಸಿದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243
ದಿನದ ಸುದ್ದಿ
ಶಿವಮೊಗ್ಗಕ್ಕೆ ಇಂದು ಪ್ರಧಾನಿ ನರೇಂದ್ರ ಮೋದಿ
ಸುದ್ದಿದಿನ, ಶಿವಮೊಗ್ಗ : ಪ್ರಧಾನಮಂತ್ರಿ ನರೇಂದ್ರ ಮೋದಿ ಇಂದು ಮಧ್ಯಾಹ್ನ 2 ಗಂಟೆಗೆ ಶಿವಮೊಗ್ಗದಲ್ಲಿ ಬೃಹತ್ ಸಾರ್ವಜನಿಕ ಸಭೆಯನ್ನುದ್ದೇಶಿ ಮಾತನಾಡಲಿದ್ದಾರೆ.
ಯುವಜನರು, ಮಹಿಳೆಯರು, ರೈತರು ಸೇರಿ ಸುಮಾರು ಎರಡೂವರೆ ಲಕ್ಷಕ್ಕೂ ಹೆಚ್ಚು ಜನರು ಕಾರ್ಯಕ್ರಮದಲ್ಲಿ ಭಾಗವಹಿಸುವ ನಿರೀಕ್ಷೆ ಇದೆ ಎಂದು ವಿಧಾನಪರಿಷತ್ ಮುಖ್ಯ ಸಚೇತಕ ಎನ್.ರವಿಕುಮಾರ್ ಶಿವಮೊಗ್ಗದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243
ದಿನದ ಸುದ್ದಿ
ಚುನಾವಣಾ ಬಾಂಡ್ ಕುರಿತ ದತ್ತಾಂಶ ಬಿಡುಗಡೆ
ಸುದ್ದಿದಿನ,ನವದೆಹಲಿ : ಚುನಾವಣಾ ಬಾಂಡ್ ಕುರಿತಂತೆ ಸುಪ್ರೀಂಕೋರ್ಟ್ನ ರಿಜಿಸ್ಟ್ರಿ ಇಂದ ಲಭ್ಯವಾದ ಅಂಕಿಕೃತ ದತ್ತಾಂಶ ಮಾದರಿಯನ್ನು ಚುನಾವಣಾ ಆಯೋಗ ಭಾನುವಾರ ತನ್ನ ವೆಬ್ಸೈಟ್ನಲ್ಲಿ ಅಪ್ಲೋಡ್ ಮಾಡಿದೆ. www.eci.gov.in/candidate-politicalparty ವೆಬ್ಸೈಟ್ನಲ್ಲಿ ಈ ದತ್ತಾಂಶ ಲಭ್ಯವಿರುತ್ತದೆ.
ಸುಪ್ರೀಂಕೋರ್ಟ್ ನಿರ್ದೇಶಿಸಿದಂತೆ ರಾಜಕೀಯ ಪಕ್ಷಗಳು ಚುನಾವಣಾ ಬಾಂಡ್ ಕುರಿತ ದತ್ತಾಂಶಗಳನ್ನು ಮೊಹರು ಹಾಕಿದ ಲಕೋಟೆಯಲ್ಲಿ ಸಲ್ಲಿಸಿದ್ದವು ಎಂದು ಚುನಾವಣಾ ಆಯೋಗದ ಹೇಳಿಕೆ ತಿಳಿಸಿದೆ. ರಾಜಕೀಯ ಪಕ್ಷಗಳಿಂದ ಸ್ವೀಕರಿಸಿದ ಮೊಹರು ಹಾಕಿದ ಲಕೋಟೆಗಳನ್ನು ತೆರೆಯದೇ ಸುಪ್ರೀಂಕೋರ್ಟ್ಗೆ ಸಲ್ಲಿಸಲಾಗಿತ್ತು.
ಇದೇ 15ರಂದು ಸುಪ್ರೀಂಕೋರ್ಟ್ ನೀಡಿದ ಆದೇಶದ ಮೇರೆಗೆ ಸುಪ್ರೀಂಕೋರ್ಟ್ನ ರಿಜಿಸ್ಟ್ರಿ, ಭೌತಿಕ ಪ್ರತಿ ಹಾಗೂ ಅದರ ಡಿಜಿಟಲ್ ದಾಖಲೆಯಿರುವ ಪೆನ್ಡ್ರೈವ್ ಒಳಗೊಂಡ ಮೊಹರು ಹಾಕಿದ ಲಕೋಟೆಯನ್ನು ಹಿಂತಿರುಗಿಸಿತ್ತು.
ಸುದ್ದಿದಿನ.ಕಾಂ|ವಾಟ್ಸಾಪ್|9980346243
ದಿನದ ಸುದ್ದಿ
ರಶ್ಮಿ ಚಂದ್ರಗಿರಿ ಅವರಿಗೆ ಪಿಎಚ್.ಡಿ ಪದವಿ
ಸುದ್ದಿದಿನ,ಹಾವೇರಿ : ನಗರದ ರಶ್ಮಿ ಚಂದ್ರಗಿರಿ ಅವರು ಕರ್ನಾಟಕ ವಿಶ್ವವಿದ್ಯಾಲಯಕ್ಕೆ ಮಂಡಿಸಿದ “ದಲಿತ ಬಂಡಾಯ ಕಾದಂಬರಿಗಳಲ್ಲಿ ಸಾಂಸ್ಕೃತಿಕ ನೆಲೆಗಳು” ಎಂಬ ಮಹಾಪ್ರಬಂಧಕ್ಕೆ ಕರ್ನಾಟಕ ವಿಶ್ವವಿದ್ಯಾಲಯ ಪಿಎಚ್.ಡಿ ಪದವಿ ಪ್ರಧಾನ ಮಾಡಿದೆ.
ಇವರಿಗೆ ಡಾ.ಬಿಎಸ್.ಭಜಂತ್ರಿ , ಸಹಾಯಕ ಪ್ರಧ್ಯಾಪಕರು ಕರ್ನಾಟಕ ಕಲಾ ಮಹಾವಿದ್ಯಾಲಯ ಧಾರವಾಡ ಇವರು ಮಾರ್ಗದರ್ಶನ ಮಾಡಿದ್ದರು.
ಬರವಣಿಗೆಯಲ್ಲಿ ತೊಡಗಿಸಿಕೊಂಡಿರುವ ರಶ್ಮಿ ಚಂದ್ರಗಿರಿಯವರ ಹಲವು ಲೇಖನಗಳು ನಿಯತಕಾಲಿಕೆಗಳಲ್ಲಿ ಪ್ರಕಟಗೊಂಡಿವೆ. ಪ್ರಸ್ತುತ ಇವರು ಉಪನ್ಯಾಸಕಿಯಾಗಿ ಕಾರ್ಯನಿರ್ವಹಿಸಿತ್ತಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243