ದಿನದ ಸುದ್ದಿ
ಮೀಸಲಾತಿ ಅಂದ್ರೆ ನೌಕರಿ, ಸೌಲಭ್ಯ, ಸವಲತ್ತು ಅಲ್ಲ : ಹರ್ಷಕುಮಾರ್ ಕುಗ್ವೆ
ಒಂದು ದೇಶದಲ್ಲಿ ಸೃಷ್ಟಿಯಾಗುವ ಎಲ್ಲಾ ಬಗೆಯ ಶೈಕ್ಷಣಿಕ ಹಾಗೂ ಉದ್ಯೋಗದ ಅವಕಾಶಗಳಲ್ಲಿ ದೇಶದ ಜನಸಂಖ್ಯೆಯ ವಿವಿಧ ಸ್ತರಗಳ, ವಿವಿಧ ವರ್ಗಗಳ ಜನರೂ ಪ್ರಾತಿನಿಧ್ಯ (representation) ಪಡೆಯಬೇಕು ಎಂಬ ಪ್ರಜಾತಾಂತ್ರಿಕ ಆಶಯ ಇಟ್ಟುಕೊಂಡಾಗ ನಮಗೆ ಅದನ್ನು ಸಾಧಿಸಲು ಕೆಲವು ಮಾನದಂಡಗಳು ಬೇಕಾಗುತ್ತವೆ.
ಸಾವಿರಾರು ವರ್ಷಗಳ ಕಾಲ ಈ ದೇಶದಲ್ಲಿ ಸೃಷ್ಟಿಯಾಗುವ ಎಲ್ಲಾ ಶೈಕ್ಷಣಿಕ ಮತ್ತು ಉದ್ಯೋಗದ ಅವಕಾಶಗಳು ಕೆಲವೇ ವರ್ಗಗಳ ಸೊತ್ತಾಗಿದ್ದವು. ಆ ವರ್ಗಗಳು ಯಾವೆಂದು ನೋಡಿದಾಗ ಅವು ದೇಶದ ಸಾಮಾಜಿಕ ವ್ಯವಸ್ಥೆಯ ಮೇಲುಸ್ತರದಲ್ಲಿದ್ದ “ಜಾತಿ” ಗಳೇ ಆಗಿದ್ದವು. ಅಂದರೆ ತಳಸ್ತರದಲ್ಲಿದ್ದ ಬಹುತೇಕ ಜಾತಿಗಳ ಜನರು ಶೈಕ್ಷಣಿಕ ಮತ್ತು ಉದ್ಯೋಗದ ಅವಕಾಶಗಳಿಂದ ವಂಚಿತರಾಗಿದ್ದರು. ಇಂತಹ ಒಂದು ಪರಿಸ್ಥಿತಿಯಲ್ಲಿ ಅವಕಾಶಗಳನ್ನು ಎಲ್ಲರಿಗೂ ಹಂಚಬೇಕಾದರೆ, ಎಲ್ಲರಿಗೂ ಪ್ರಾತಿನಿಧ್ಯ ಒದಗಿಸಬೇಕಾದರೆ ಬಹಳ ಸೂಕ್ತ ಮಾನದಂಡ ಜಾತಿಯ ಮಾನದಂಡವೇ ಎಂಬುದು ಎಂತಹ ದಡ್ಡನಿಗೂ ಅರ್ಥವಾಗುತ್ತದೆ. ಜಾತಿಯನ್ನು ಹೊರತುಪಡಿಸಿ ಕೇವಲ ವರ್ಗವನ್ನು ಮಾನದಂಡವಾಗಿಸಿದರೆ ಮತ್ತೆ ಅವಕಾಶಗಳು ಕೆಲವೇ ಬಲಾಢ್ಯ ಜಾತಿಗಳ ಪಾಲಾಗುವುದು ಖಚಿತ. ಹೀಗಾಗಿಯೇ ದೇಶದಲ್ಲಿ ಜಾತಿ ಆಧಾರಿತ ಪ್ರಾತಿನಿಧ್ಯವನ್ನು ಜಾರಿಗೊಳಿಸಲಾಗಿದೆ.
ಹೀಗಾಗಿ ಮೀಸಲಾತಿ ಅಂದರೆ ಸರ್ವರಿಗೂ ಪ್ರಾತಿನಿಧ್ಯ ಎಂದು ತಿಳಿಯಬೇಕೇ ಹೊರತು ಸೌಲಭ್ಯ ನೀಡಿಕೆ ಎಂದಲ್ಲ. ಈ ದೇಶ ಪ್ರಜಾಪ್ರಭುತ್ವ ದೇಶ ಆಗಿರಬೇಕು ಎಂದು ಬಯಸುವವರೆಲ್ಲರೂ ಜಾತಿ ಆಧಾರಿತ ಪ್ರಾತಿನಿಧ್ಯವನ್ನು ಮರು ಮಾತಿಲ್ಲದೇ ಒಪ್ಪಿಕೊಳ್ಳುತ್ತಾರೆ. ಕೆಲವೇ ಜಾತಿ ವರ್ಗಗಳ ಜನರೇ ದೇಶವನ್ನು ನಡೆಸಲಿ ಎಂದು ಬಯಸುವವರು ಜಾತಿ ಆಧಾರಿತ ಮೀಸಲಾತಿ ಬೇಡ ಎನ್ನುತ್ತಾರೆ.
ಇಷ್ಟು ಹೇಳಿದ ಮೇಲೆ ಈ ಜಾತಿ ಆಧಾರಿತ ಮೀಸಲಾತಿಯೇ ಸಾಮಾಜಿಕ ಆರ್ಥಿಕ ಸಮಾನತೆಗೆ ರಾಮಬಾಣವಲ್ಲ. ಆದರೆ ಇದು ಅಟ್ಟ ಹತ್ತಲು ಬೇಕಾದ ಏಣಿಯಂತೆ. ಖಾಸಗಿ ಕ್ಷೇತ್ರಕ್ಕೂ ಈ ಏಣಿ ಹಾಕಬೇಕಾದ ಜರೂರಿದೆ. ಅದಕ್ಕೆ ಮೊದಲು ಅಟ್ಟ ಹತ್ತಿಕೊಂಡು ಏಣಿ ಒದೆಯಲು ಮುಂದಾಗಿರುವವರ ಕಾಲಿಗೆ ಕೊಕ್ಕೆ ಹಾಕಬೇಕಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9986715401
ದಿನದ ಸುದ್ದಿ
ಶಿವಮೊಗ್ಗಕ್ಕೆ ಇಂದು ಪ್ರಧಾನಿ ನರೇಂದ್ರ ಮೋದಿ
ಸುದ್ದಿದಿನ, ಶಿವಮೊಗ್ಗ : ಪ್ರಧಾನಮಂತ್ರಿ ನರೇಂದ್ರ ಮೋದಿ ಇಂದು ಮಧ್ಯಾಹ್ನ 2 ಗಂಟೆಗೆ ಶಿವಮೊಗ್ಗದಲ್ಲಿ ಬೃಹತ್ ಸಾರ್ವಜನಿಕ ಸಭೆಯನ್ನುದ್ದೇಶಿ ಮಾತನಾಡಲಿದ್ದಾರೆ.
ಯುವಜನರು, ಮಹಿಳೆಯರು, ರೈತರು ಸೇರಿ ಸುಮಾರು ಎರಡೂವರೆ ಲಕ್ಷಕ್ಕೂ ಹೆಚ್ಚು ಜನರು ಕಾರ್ಯಕ್ರಮದಲ್ಲಿ ಭಾಗವಹಿಸುವ ನಿರೀಕ್ಷೆ ಇದೆ ಎಂದು ವಿಧಾನಪರಿಷತ್ ಮುಖ್ಯ ಸಚೇತಕ ಎನ್.ರವಿಕುಮಾರ್ ಶಿವಮೊಗ್ಗದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243
ದಿನದ ಸುದ್ದಿ
ಚುನಾವಣಾ ಬಾಂಡ್ ಕುರಿತ ದತ್ತಾಂಶ ಬಿಡುಗಡೆ
ಸುದ್ದಿದಿನ,ನವದೆಹಲಿ : ಚುನಾವಣಾ ಬಾಂಡ್ ಕುರಿತಂತೆ ಸುಪ್ರೀಂಕೋರ್ಟ್ನ ರಿಜಿಸ್ಟ್ರಿ ಇಂದ ಲಭ್ಯವಾದ ಅಂಕಿಕೃತ ದತ್ತಾಂಶ ಮಾದರಿಯನ್ನು ಚುನಾವಣಾ ಆಯೋಗ ಭಾನುವಾರ ತನ್ನ ವೆಬ್ಸೈಟ್ನಲ್ಲಿ ಅಪ್ಲೋಡ್ ಮಾಡಿದೆ. www.eci.gov.in/candidate-politicalparty ವೆಬ್ಸೈಟ್ನಲ್ಲಿ ಈ ದತ್ತಾಂಶ ಲಭ್ಯವಿರುತ್ತದೆ.
ಸುಪ್ರೀಂಕೋರ್ಟ್ ನಿರ್ದೇಶಿಸಿದಂತೆ ರಾಜಕೀಯ ಪಕ್ಷಗಳು ಚುನಾವಣಾ ಬಾಂಡ್ ಕುರಿತ ದತ್ತಾಂಶಗಳನ್ನು ಮೊಹರು ಹಾಕಿದ ಲಕೋಟೆಯಲ್ಲಿ ಸಲ್ಲಿಸಿದ್ದವು ಎಂದು ಚುನಾವಣಾ ಆಯೋಗದ ಹೇಳಿಕೆ ತಿಳಿಸಿದೆ. ರಾಜಕೀಯ ಪಕ್ಷಗಳಿಂದ ಸ್ವೀಕರಿಸಿದ ಮೊಹರು ಹಾಕಿದ ಲಕೋಟೆಗಳನ್ನು ತೆರೆಯದೇ ಸುಪ್ರೀಂಕೋರ್ಟ್ಗೆ ಸಲ್ಲಿಸಲಾಗಿತ್ತು.
ಇದೇ 15ರಂದು ಸುಪ್ರೀಂಕೋರ್ಟ್ ನೀಡಿದ ಆದೇಶದ ಮೇರೆಗೆ ಸುಪ್ರೀಂಕೋರ್ಟ್ನ ರಿಜಿಸ್ಟ್ರಿ, ಭೌತಿಕ ಪ್ರತಿ ಹಾಗೂ ಅದರ ಡಿಜಿಟಲ್ ದಾಖಲೆಯಿರುವ ಪೆನ್ಡ್ರೈವ್ ಒಳಗೊಂಡ ಮೊಹರು ಹಾಕಿದ ಲಕೋಟೆಯನ್ನು ಹಿಂತಿರುಗಿಸಿತ್ತು.
ಸುದ್ದಿದಿನ.ಕಾಂ|ವಾಟ್ಸಾಪ್|9980346243
ದಿನದ ಸುದ್ದಿ
ರಶ್ಮಿ ಚಂದ್ರಗಿರಿ ಅವರಿಗೆ ಪಿಎಚ್.ಡಿ ಪದವಿ
ಸುದ್ದಿದಿನ,ಹಾವೇರಿ : ನಗರದ ರಶ್ಮಿ ಚಂದ್ರಗಿರಿ ಅವರು ಕರ್ನಾಟಕ ವಿಶ್ವವಿದ್ಯಾಲಯಕ್ಕೆ ಮಂಡಿಸಿದ “ದಲಿತ ಬಂಡಾಯ ಕಾದಂಬರಿಗಳಲ್ಲಿ ಸಾಂಸ್ಕೃತಿಕ ನೆಲೆಗಳು” ಎಂಬ ಮಹಾಪ್ರಬಂಧಕ್ಕೆ ಕರ್ನಾಟಕ ವಿಶ್ವವಿದ್ಯಾಲಯ ಪಿಎಚ್.ಡಿ ಪದವಿ ಪ್ರಧಾನ ಮಾಡಿದೆ.
ಇವರಿಗೆ ಡಾ.ಬಿಎಸ್.ಭಜಂತ್ರಿ , ಸಹಾಯಕ ಪ್ರಧ್ಯಾಪಕರು ಕರ್ನಾಟಕ ಕಲಾ ಮಹಾವಿದ್ಯಾಲಯ ಧಾರವಾಡ ಇವರು ಮಾರ್ಗದರ್ಶನ ಮಾಡಿದ್ದರು.
ಬರವಣಿಗೆಯಲ್ಲಿ ತೊಡಗಿಸಿಕೊಂಡಿರುವ ರಶ್ಮಿ ಚಂದ್ರಗಿರಿಯವರ ಹಲವು ಲೇಖನಗಳು ನಿಯತಕಾಲಿಕೆಗಳಲ್ಲಿ ಪ್ರಕಟಗೊಂಡಿವೆ. ಪ್ರಸ್ತುತ ಇವರು ಉಪನ್ಯಾಸಕಿಯಾಗಿ ಕಾರ್ಯನಿರ್ವಹಿಸಿತ್ತಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243