Connect with us

ದಿನದ ಸುದ್ದಿ

ಹುಟ್ಟು ಹಬ್ಬ | “ಜಗತ್ತಿನ ಯಾವುದೇ ಮೂಲೆಯಲ್ಲಿ ನಡೆಯುವ ದೌರ್ಜನ್ಯದ ವಿರುದ್ಧ ಸಿಡಿದೆದ್ದರೆ ನೀನು ನನ್ನ ಸಂಗಾತಿ”..! : ಚೆ ಗುವೆರಾ

Published

on

  • ಶಿವಸ್ವಾಮಿ, ಯುವಚಿಂತಕರು

ನಾನು ಎಂದಿಗೂ ಸೋತು ಮನೆಗೆ ಹಿಂತಿರುಗುವುದಿಲ್ಲ, ಸೋಲಿಗಿಂತ ಸಾವನ್ನೆ ಹೆಚ್ಚು ಇಷ್ಟಪಡುತ್ತೇನೆ”. ಎಂದು ನಿರಂತರವಾಗಿ ಹೋರಾಡುತ್ತಲೇ ತನ್ನ ವಿರೋಧಿಗಳಿಗೆ ಸಿಂಹಸ್ವಪ್ನವಾಗಿ ಎಂದಿಗೂ ಸೋಲನ್ನು ಒಪ್ಪಿಕೊಳ್ಳದೆ ತನ್ನನ್ನು ತಾನೇ ಸಾವಿಗೆ ಅರ್ಪಿಸಿಕೊಂಡ ಮಹಾನ್ ಕ್ರಾಂತಿಕಾರಿ, ಮಾನವತಾವಾದಿ, ಗೆರಿಲ್ಲಾ ಯುದ್ಧ ತಂತ್ರದ ನಿಪುಣ, ವೈದ್ಯ, ಬರಹಗಾರ, ಬುದ್ಧಿಜೀವಿ ಹಾಗೂ ಕ್ಯೂಬಾ ಕ್ರಾಂತಿಯ ಪ್ರಮುಖ ನೇತಾರ ಅರ್ನೆಸ್ಟೋ ಚೆಗುವಾರ.

ಚೆಗುವಾರ ಹುಟ್ಟಿದ್ದು ಜೂನ್ 14, 1928ರಂದು ಲಿಂಚ್ ಮತ್ತು ಸೀಲಿಯಾ ಡ ಲಾ ಸೆರ್ನ್ ಎಂಬ ಸ್ಪ್ಯಾನಿಷ್ ಮತ್ತು ಐರಿಷ್ ದಂಪತಿಗಳ ಮಗನಾಗಿ ಅರ್ಜೆಂಟೀನಾದ ರೊಸಾರಿಯೋ ಪಟ್ಟಣದಲ್ಲಿ ಜನಿಸಿದನು.ಚೆಗುವರ ಚಿಕ್ಕಂದಿನಿಂದಲೇ ಶೋಷಿತ ಬಡವರ, ಶ್ರಮಿಕರ ಬಗ್ಗೆ ಅಪಾರವಾದ ಕಾಳಜಿ ಮತ್ತು ಪ್ರೀತಿಯನ್ನು ಬೆಳೆಸಿಕೊಂಡು ಎಡಪಂಥೀಯವಾದದ ಬಗ್ಗೆ ಒಲವು ಹೊಂದಿದ್ದ ಕುಟುಂಬದಲ್ಲಿ ಹುಟ್ಟಿಬೆಳೆದ ಅವನಿಗೆ ಚಿಕ್ಕಂದಿನಿಂದಲೇ ರಾಜಕೀಯ ದೃಷ್ಟಿಕೋನಗಳ ಬಗೆಗೆ ಪರಿಚಯವಾಗಿ ಗಣತಂತ್ರವಾದಿಗಳ ಪ್ರಬಲ ಸಮರ್ಥಕರಾಗಿದ್ದ ತಂದೆಯ ಪ್ರಭಾವ ಚೆಗುವಾರನ ಮೇಲೆ ಸಹಜವಾಗಿಯೇ ಬೀರಿತು.

19 ನೇಯ ವಯಸ್ಸಿನಲ್ಲಿಯೇ ವೈದ್ಯಕೀಯ ವೃತ್ತಿ ಕಲಿಕೆಗಾಗಿ ವಿಶ್ವವಿದ್ಯಾನಿಲಯಕ್ಕೆ ಪ್ರವೇಶಾತಿ ಪಡೆದು ಮತ್ತೆ ಒಂದು ವರ್ಷ ರಜೆ ಪಡೆದು ತನ್ನ ಮಿತ್ರ ಅಲ್ಬಟ್ರೋ ಗ್ರೆನಾಡೇ ಜೊತೆ ಸೇರಿ ಮೋಟಾರ್ ಸೈಕಲ್ ಮೂಲಕ ದಕ್ಷಿಣ ಅಮೇರಿಕಾ ಪ್ರವಾಸ ಮಾಡುತ್ತಾನೆ ತಾನೊಬ್ಬ ಕ್ರಾಂತಿಕಾರಿಯಾಗಲು ಈ ಪ್ರವಾಸದ ಅನುಭವಗಳೇ ಕಾರಣವೆಂದು ಅವನೇ ಬರೆದುಕೊಂಡಿದ್ದಾನೆ.

ದಕ್ಷಿಣ ಅಮೆರಿಕಾದ ಆಂಡೀಸ್ ಪರ್ವತದ ಮಾಚು ಪಿಚುವಿಗೆ ಹೋಗುವ ದಾರಿಯಲ್ಲಿ ಶ್ರೀಮಂತ ಭೂ ಮಾಲೀಕರಿಂದ ತುಂಡು ತುಂಡು ಭೂಮಿಗಳನ್ನು ಪಡೆದು ಕೃಷಿ ಮಾಡುತಿದ್ದ ರೈತಾಪಿ ಜನರ ಕಡುಬಡತನದ ಹೀನಾಯ ಬದುಕಿನ ಸ್ಥಿತಿಯನ್ನು ಹತ್ತಿರದಿಂದ ಕಂಡು ನಾನು ಈ ಜನರಿಗೆ ಏನಾದರೂ ಸಹಾಯ ಮಾಡಬೇಕೆಂದರೆ ನನ್ನ ವೈದ್ಯಕೀಯ ಅಭ್ಯಾಸವನ್ನು ಬಿಟ್ಟು ಸಶಸ್ತ್ರ ಹೋರಾಟದ ಮೂಲಕ ರಾಜಕೀಯ ರಂಗವನ್ನು ಪ್ರವೇಶಿಸಬೇಕೆಂದು ಮನವರಿಕೆಯಾಯಿತು ಎಂದು ತನ್ನ ಮೋಟಾರ್ ಸೈಕಲ್ ಡೈರಿಯಲ್ಲಿ ಬರೆದುಕೊಳ್ಳುತ್ತಾನೆ.

ಮೋಟಾರ್ ಸೈಕಲ್ ಪ್ರವಾಸ ಚೆಗುವಾರನ ಕ್ರಾಂತಿಕಾರಿ ಬದುಕಿನ ಒಂದು ದೊಡ್ಡ ತಿರುವು ಪ್ರವಾಸದ ಜೊತೆಗಾರ ಅಲ್ಬಟ್ರೋ ಗ್ರಾನಡಾಸ್ ಚೆಗುವಾರನ ಕುರಿತು ಹೇಳುತ್ತಾ…ಟೆಟೆ (ಚೇ ನನ್ನನ್ನು ಪ್ರೀತಿಯಿಂದ ಕರೆಯುತಿದ್ದ ಹೆಸರು )ನನ್ನು ನಾನು ಮೊದಲು ಭೇಟಿಯಾಗಿದ್ದು 1941 ರಲ್ಲಿ ನನ್ನ ಸಹೋದರ ಥಾಮಸ್ ಮೂಲಕ ನನಗಾಗ 13 ವರ್ಷ ನಮ್ಮಿಬ್ಬರನ್ನು ಒಟ್ಟಿಗೆ ಕೂಡಿಸಿದ ವಿಷಯವೆಂದರೆ ‘ಓದುವ ಅಭಿರುಚಿ ಮತ್ತು ನಿಸರ್ಗ ಪ್ರೇಮ’ ಚೇ…ಮನೆಗೆ ಪ್ರತಿದಿನ ಭೇಟಿ ನೀಡಿದಾಗಲೂ ನನ್ನನ್ನು ಆಕರ್ಷಿಸಿದ್ದ ಅಲ್ಲಿನ ಅಪಾರವಾದ ಗ್ರಂಥಭಂಡಾರವನ್ನು ನನ್ನದೆಂಬಂತೆ ಬಳಸುಕೊಳ್ಳುತಿದ್ದೆ.

ನಾವು ಎಷ್ಟೋ ರಾತ್ರಿಗಳನ್ನ ಚೆರ್ಚೆಗಳಲ್ಲಿ ಕಳೆದಿದ್ದೇವೆ, ಒಮ್ಮೆ ವಿದ್ಯಾರ್ಥಿ ಚಳುವಳಿಯಲ್ಲಿ ನನ್ನ ಬಂಧನವಾಯಿತು ಆಗ ನನ್ನ ಸಹೋದರ ಥಾಮಸ್ ಜೊತೆ ಚೆಗುವಾರ ನನ್ನ ನೋಡಲು ಪೊಲೀಸ್ ಠಾಣೆಗೆ ಬಂದಿದ್ದ ನಾನು ಅವನ ಜೊತೆ ಮಾತನಾಡುತ್ತಾ ಬಂಧಿತರನ್ನು ಬಿಡುಗಡೆ ಮಾಡುವಂತೆ ಒತ್ತಾಯಿಸಿ ವಿದ್ಯಾರ್ಥಿಗಳನ್ನು ಪ್ರತಿಭಟನೆಗೆ ಕರೆತರುವಂತೆ ನಾನು ಅವನಿಗೆ ಹೇಳಿದೆ, ಅದಕ್ಕೆ ಅವನು ಹೇಳಿದ ಮಾತು ಬೀದಿಗಿಳಿಯಿರಿ ಎಂದು ಹೇಳುತಿದ್ದೀರಲ್ಲ!ಪೊಲೀಸರೆಲ್ಲ ನಮ್ಮ ಮೇಲೆ ದೊಣ್ಣೆಗಳಿಂದ ಸರಿಯಾಗಿ ಬಾರಿಸಲಿ ಅಂತಲೋ! ಅದೆಲ್ಲ ಆಗುವುದಿಲ್ಲ,ನನಗೆ ಪಿಸ್ತೂಲು ಕೊಟ್ಟರೆ ಮಾತ್ರ ನಾನು ಬೀದಿಗಿಳಿಯುತ್ತೇನೆ ಎಂದಿದ್ದ ಅದೆಷ್ಟೋ ! ನೆನಪುಗಳು ನನ್ನೊಂದಿಗಿವೆ.

ಚೆಗುವಾರ 1953 ರಲ್ಲಿ ವೈದ್ಯಕೀಯ ಶಿಕ್ಷಣವನ್ನು ಮುಗಿಸಿ ಮತ್ತೆ ಪ್ರವಾಸ ಹೊರಟು ಗ್ವಾಟಮಾಲಕ್ಕೆ ಬರುತ್ತಾನೆ ಅಲ್ಲಿ ಯುದ್ಧದಲ್ಲಿ ಮುಳುಗಿದ ದೇಶವೊಂದರ ಅನುಭವ ದೊರೆಯುತ್ತದೆ, ನಂತರ 1954 ರಲ್ಲಿ ಅರ್ಬೆನ್ಜ್ ರ ಸಮಾಜವಾದಿ ಸರ್ಕಾರದ ವಿರುದ್ಧ CIA ಪ್ರೇರಿತ ಕ್ಷಿಪ್ರ ಕ್ರಾಂತಿಯನ್ನು ಕಣ್ಣಾರೆ ಕಂಡು ಸಾಮಾಜಿಕ ಮತ್ತು ಆರ್ಥಿಕ ಸಮಾನತೆಗಳನ್ನು ರೂಪಿಸಲು ಲ್ಯಾಟಿನ್ ಅಮೆರಿಕಾದಂತಹ ಯಾವುದೇ ಸರ್ಕಾರವನ್ನು ಅಮೆರಿಕಾದಂತ ಸಾಮ್ರಾಜ್ಯ ಷಾಹಿ ದೇಶ ವಿರೋಧಿಸುತ್ತದೆ ಮತ್ತು ಆರ್ಥಿಕ ಮತ್ತು ಸಾಮಾಜಿಕ ಅಸಮಾನತೆಯನ್ನು ಯಥಾಸ್ಥಿಯಾಗಿ ಉಳಿಸಿಕೊಳ್ಳಲು ಪ್ರಯತ್ನಿಸುತ್ತಿದೆ ಎಂದು ಚೆಗುವಾರ ಸೂಕ್ಷ್ಮವಾಗಿ ಗ್ರಹಿಸಿದರು.

ಇಂತಹ ಸ್ಥಿತಿಯನ್ನು ಸರಿಪಡಿಸಲು ‘ಸಶಸ್ತ್ರ ಹೋರಾಟದ ಬುಲೆಟ್ ಕ್ರಾಂತಿಯೊಂದೇ ಮದ್ದು‘ಚೆಗುವಾರ ಯೋಚಿಸುತ್ತಾನೆ ನಂತರ ಗ್ವಾಟೆಮಾಲಾದಿಂದ ಹೊರಬಂದು ಚೆಗುವಾರ ಫಿಡೆಲ್ ಕ್ಯಾಸ್ಟ್ರೋರೊಂದಿಗೆ ಜೊತೆಯಾಗಿ ಕ್ಯೂಬಾದ ಸರ್ವಾಧಿಕಾರಿ ಜನರಲ್ ಪುಲ್ಗೆನ್ಸಿಯೋ ಬಟಿಸ್ಟಾ ರ ವಿರುದ್ಧ ಸೇನಾ ದಂಡಾಯಾತ್ರೆ ಕೈಗೊಳ್ಳುವ ಯೋಜನೆ ರೂಪಿಸಿ, 1956 ರಲ್ಲಿ ಚೆಗುವಾರ ಮತ್ತು ಕ್ಯಾಸ್ಟ್ರೊ ಒಂದಾಗಿ ಹಲವು ಹೋರಾಟಗಾರರೊಂದಿಗೆ ಜನರಲ್ ಬಟಿಸ್ಟಾ ನ ಸರ್ಕಾರವನ್ನು ಕಿತ್ತೊಗೆಯಲು ಕ್ಯೂಬಾಕ್ಕೆ ಬಂದು ಸಿಯೆರಾ ಮತ್ತು ಮೈ ಸ್ಟ್ರಾ ಪರ್ವತಗಳಲ್ಲಿ ಅಡಗಿಕೊಳ್ಳುತ್ತಾರೆ.

ಇದರ ಅರಿವಾಗಿ ಎಚ್ಚೆತ್ತ ಬಟಿಸ್ಟಾ ಸರ್ಕಾರ ಹೆಚೆಚ್ಚು ಸೈನಿಕ ಪಡೆಗಳನ್ನು ಸಜ್ಜುಗೊಳಿಸಿ ಚೆಗುವಾರ ಮತ್ತು ಕ್ಯಾಸ್ಟ್ರೋ ನೇತೃತ್ವದ ಕ್ರಾಂತಿಕಾರಿಗಳನ್ನು ಸದೆಬಡಿಯಲು 10 ಸಾವಿರ ಸೈನಿಕ ಪಡೆಗಳನ್ನು ನಿಯೋಜಿಸುತ್ತಾನೆ ಕ್ರಾಂತಿಕಾರಿಗಳ ಬಗ್ಗೆ ಮಾಹಿತಿ ಸಂಗ್ರಹಿಸಲೇಂದೆ ಸರ್ಕಾರಿ ಸೈನಿಕರು ಸಾಮಾನ್ಯ ಜನರನ್ನು ವಿಚಾರಣೆಗೆಂದೇ ಎಳೆದೊಯ್ಯುತ್ತಿದ್ದರು. ಜೊತೆಗೆ ಅಮಾಯಕರಿಗೆ ಚಿತ್ರಹಿಂಸೆ ನೀಡುತ್ತಿದ್ದರು. ಮಕ್ಕಳನ್ನೂ ಒಳಗೊಂಡಂತೆ ಶಂಕಿತರನ್ನು ಸಾರ್ವಜನಿಕವಾಗಿ ಕೊಲೆಗೈದು ಅವರ ಶವಗಳನ್ನು ಬೀದಿಗಳಲ್ಲಿ ಸಾರ್ವಜನಿಕವಾಗಿ ನೇತು ಹಾಕುತ್ತಿದ್ದರು.

ಅಂದರೆ ಸಾಮಾನ್ಯ ಜನರು ಕ್ರಾಂತಿಕಾರಿಗಳ ಜೊತೆ ಸೇರದಂತೆ ಎಚ್ಚರಿಕೆ ನೀಡುವುದು ಮತ್ತು ಭಯ ಹುಟ್ಟಿಸುವುದು ಇದರ ಉದ್ದೇಶವಾಗಿತ್ತು. ಸರ್ವಾಧಿಕಾರಿ ಬಟಿಸ್ಟಾನ ಈ ವರ್ತನೆಗಳಿಂದ ಗೆರಿಲ್ಲಾ ಹೋರಾಟಗಾರರಿಗೆ ಬೆಂಬಲ ಇನ್ನಷ್ಟು ಹೆಚ್ಚಾಗುತ್ತಲೇ ಹೋಯಿತು. ಉದಾಹರಣೆ ವಕೀಲರು, ವಾಸ್ತುಶಿಲ್ಪಿಗಳು, ವೈದ್ಯರು, ಆಕೌಟೆಂಟ್‍ಗಳು ಸಾಮಾಜಿಕಕರ್ತರು ಮುಂತಾದ ಸುಮಾರು 45 ಸಂಘಟನೆಗಳು ಜುಲೈ 26ರ ಚಳುವಳಿಗೆ ಬೆಂಬಲ ಘೋಷಿಸಿದವು. ಅಮೇರಿಕಾ ಸರ್ವಾಧಿಕಾರಿ ಬಟಿಸ್ಟಾಗೆ, ವಿಮಾನ, ಹಡಗು, ಟ್ಯಾಂಕ್ ಮತ್ತಿತರ ಶಸ್ತ್ರಾಸ್ತ್ರಗಳನ್ನು ಒದಗಿಸಿತು.

‘ನಾಪಾಂಬಾಂಬಿ’ನಂತಹ ವಿನಾಶಕಾರಿ ಅಸ್ತ್ರಗಳು ಇದ್ದಾಗಲೂ ಬಟಿಸ್ಟಾನಿಂದ ಗೆರಿಲ್ಲಾ ಹೋರಾಟಗಾರರನ್ನು ಸೋಲಿಸಲು ಸಾಧ್ಯವಾಗಲಿಲ್ಲ. 1958 ಮಾರ್ಚ್ ಚುನಾವಣೆಗಳನ್ನು ಸರ್ವಾಧಿಕಾರಿ ಬಟಿಸ್ಟಾ ವಿರುದ್ಧ ಕ್ಯೂಬಾ ಜನತೆ ಬಹಿಷ್ಕರಿಸಿತು. ರಾಜಧಾನಿ ಹವಾನದಲ್ಲಿ 75% ಚುನಾವಣಾ ಬಹಿಷ್ಕಾರ ಇದ್ದರೆ ಸ್ಯಾಂಟಿಯಾಗೋ ನಗರದಲ್ಲಿ ಶೇ 98% ರಷ್ಟು ಬಹಿಷ್ಕಾರಗಳು ನಡೆದವು. ಇದೇ ಸಂದರ್ಭದಲ್ಲಿ ಕ್ರಾಂತಿಕಾರಿಗಳು ಬಟಿಷ್ಟಾನನನ್ನು ನೇರವಾಗಿ ಸೋಲಿಸಲು ಮುಖ್ಯ ನಗರಗಳಿಗೆ ಬಂದರು.

ಆದರೆ ಸರ್ವಾಧಿಕಾರಿ ಬಟಿಷ್ಟಾ ಅಮೆರಿಕಾದೊಂದಿಗೆ ಸಮಾಲೋಚಿಸಿ ದೇಶಬಿಟ್ಟು ಪಲಾಯನ ಮಾಡಿದ. 1958 ಡಿಸೆಂಬರ್ 31ರಂದು ಬಟಿಸ್ಟಾ ದುರಾಡಳಿತವನ್ನು ಪತನ ಮಾಡಲಾಯಿತು. 1959ರ ಜನವರಿಯಲ್ಲಿ ರಾಜಧಾನಿ ಹವಾನ ನಗರವನ್ನು ಪ್ರವೇಶಿಸಿ ಅಧಿಕಾರವನ್ನು ವಶಕ್ಕೆ ತೆಗೆದುಕೊಂಡ ಮೊಟ್ಟ ಮೊದಲ ಬಂಡಾಯಗಾರ ಪಿಡಲ್ ಕ್ಯಾಸ್ಟ್ರೋ ಜೊತೆ ಚೆಗುವಾರ ಕೂಡ ಇದ್ದರು. ಚೆಗುವಾರ ಮತ್ತು ಕ್ಯಾಸ್ಟ್ರೋ ಕ್ಯೂಬಾದ ಹೊಸ ನಾಯಕರಾದರು.

ಸರ್ಕಾರದ ನೇತೃತ್ವವನ್ನು ಕ್ಯಾಸ್ಟ್ರೋ ವಹಿಸಿಕೊಂಡರು. ಮುಂದೆ ಪಿಡಲ್ ಕ್ಯಾಸ್ಟ್ರೊ ಸರ್ಕಾರದಲ್ಲಿ ಚೆಗುವಾರ ಕೃಷಿ ಮಂತ್ರಿಯಾಗಿ ಕ್ರಾಂತಿಕಾರಿ ಸುಧಾರಣೆಗಳನ್ನು ತಂದರು. ಭೂಸುಧಾರಣೆಯೊಂದಿಗೆ ಚೆಗುವಾರ ಕೇಂದ್ರೀಕರಿಸಿದ ಮತ್ತೊಂದು ಪ್ರಧಾನ ಕ್ಷೇತ್ರವೆಂದರೆ ‘ಶಿಕ್ಷಣಕ್ಷೇತ್ರ’ ಅವರು ರಾಷ್ಟ್ರೀಯ ಸಾಕ್ಷರತೆಗಾಗಿ ಹೆಚ್ಚು ಹೊತ್ತುಕೊಟ್ಟರು. ಅವರ ಒತ್ತಾಸೆಯಂತೆ ಕ್ಯೂಬಾ ಸಕಾರವೂ 1961ನೇ ವರ್ಷವನ್ನು ಶಿಕ್ಷಣ ವರ್ಷವೆಂದು ಘೋಷಿಸಿತು.

ಇದರ ಸಲುವಾಗಿ ಹಳ್ಳಿಗಾಡುಗಳಲ್ಲಿ ಬಹುತೇಕ ಅಕ್ಷರಸ್ಥರಿಗೆ ಓದುಬರಹ ಕಲಿಸಲು ಸಾಕ್ಷರತ ಆಂದೋಲವನ್ನು ಕೈಗೊಳ್ಳಲಾಯಿತು. ಈ ಆಂದೋಲನ ಮುಗಿಯುವ ವೇಳೆಗೆ 7 ಲಕ್ಷಕ್ಕೂ ಹೆಚ್ಚು ಮಂದಿಗೆ ಓದು ಬರಹ ಕಲಿಸಲಾಯಿತು. ಇಂತಹ ಕ್ರಾಂತಿಕಾರ ಕೆಲಸದಿಂದ ದೇಶದ ಸಾಕ್ಷರತೆ ಶೇ 96 ಕ್ಕೆ ಏರಿಕೆಯಾಯಿತು. ಆನಂತರ ಅವರು 1965ರಲ್ಲಿ ಕ್ಯೂಬಾವನ್ನು ಬಿಟ್ಟು ಹೊರಟು ತೃತೀಯ ಜಗತ್ತಿನ ಕ್ರಾಂತಿಗಳಿಗೆ ಬೆಂಬಲವಾಗಿ ಅವರು ತನ್ನ ಸುತ್ತಾಟವನ್ನು ಮುಂದುವರಿಸಿದರು. ಅದರ ಭಾಗವಾಗಿಯೇ ಅವರು ಬೊಲಿವಿಯದಲ್ಲಿ ಗೆರಿಲ್ಲಾ ಯೋಧರನ್ನು ಸಂಘಟಿಸಲು ಯತ್ನಿಸಿದರು.

ಆದರೆ ಬೊವಿಲಿಯಾದಲ್ಲಿ ಚೆಗುವಾರಗೆ ಸಾಮಾನ್ಯ ಜನರ ನೆರವು ಸಿಗಲಿಲ್ಲಾ ಕ್ರಾಂತಿಕಾರಿಗಳ ಜೊತೆ ಸೇರಲು ಸಾಮಾನ್ಯಜನ ಎದುರುತ್ತಿದ್ದರು. ಆದರೂ ಎದೆಗುಂದದೆ ಚೆಗುವಾರ ತನ್ನ ಹೋರಾಟವನ್ನು ಮುಂದುವರಿಸಿದರು. ಆದರೆ ಅಮೆರಿಕಾದ CIA ನೆರವಿನಿಂದ ಬೊಲಿವಿಯಾ ಪಡೆಗಳು ಗೆರಿಲ್ಲಾ ಹೋರಾಟಗಾರರನ್ನು ಪತ್ತೆಹಚ್ಚಿ ಹಲವು ಗೆರಿಲ್ಲಾ ಯೋಧರನ್ನು ಕೊಂದು ಚೆಗುವಾರನನ್ನು 1967 ಅಕ್ಟೋಬರ್ 8ರಂದು ಸೆರೆಹಿಡಿದರು.

ನಂತರ ಹಿಗುಎರಾ ಎಂಬ ಗ್ರಾಮದ ಶಾಲೆಯಲ್ಲಿ ಕೂಡಿಹಾಕಿ ಮಾರನೆ ದಿನ ಅಕ್ಟೋಬರ್ 9 ರಂದು ಮಧ್ಯಾಹ್ನ 1.30ರ ಸುಮಾರಿಗೆ ಅಮೆರಿಕಾದ CIA ಅಧಿಕಾರಿಗಳ ಸಮ್ಮುಖದಲ್ಲಿ ಸಿಐಎ ರೇಂಜರ್ಗಳು ತೀರ ಸಮೀಪದಿಂದ ಗುಂಡಿಟ್ಟು ಚೆಗುವಾರನನ್ನು ಹತ್ಯೆಗೈಯುತ್ತಾರೆ. ನಂತರ ಅವನ ಮುಖವನ್ನು ಪಡಿಯಚ್ಚು ತೆಗೆದು ಅವನ ದೇಹವನ್ನು ಹತ್ತಿರದಿಂದ ಫೊಟೋ ತೆಗೆಯಲಾಯಿತು. ಮತ್ತು ಅವನ ಕೈಗಳನ್ನು ಮುಂಗೈಬಳಿ ಕತ್ತರಿಸಿ ಅವನ್ನು ಆಲ್ಕೊಹಾಲಿನಲ್ಲಿ ರಕ್ಷಿಸಿಟ್ಟರು. ಕಾರಣ ನಾವು ಕೊಂದ ವ್ಯಕ್ತಿ ಚೆಗೆವಾರ ಎಂಬುದರ ಋಜುವಾತುವಿಗಾಗಿ ಅವರ ಹಾಗೆ ಮಾಡಿದರು.

ಚೆ ಗುವೆರಾ ಸತ್ತ ಸುದ್ದಿ ತಿಳಿದು ಜಗತ್ತಿನಾದ್ಯಂತ ಅವನ ಸಂಗಾತಿಗಳು ಶೋಕತಪ್ತರಾದರು. ಈಗ ಚೆ ಕೈಗಳನ್ನು ಕ್ಯೂಬಾ ರಕ್ಷಿಸಿಟ್ಟಿದೆ. ಮತ್ತು ಇವು ವಿಮೋಚನೆಗಾಗಿ ಹೋರಾಟದಲ್ಲಿ ಅಸ್ತ್ರಗಳನ್ನು ಹಿಡಿದ ಕೈಗಳೂ, ತಮ್ಮ ಗಮನಾರ್ಹ ಚಿಂತನೆಗಳನ್ನು ಬರೆದು ಹಂಚಿದ ಕೈಗಳು, ಕಬ್ಬಿನ ಪ್ಲಾಂಟೇಷನ್‍ಗಳಲ್ಲಿ, ಬಂದರುಕಟ್ಟೆಗಳ ಮುಂತಾದ ನಿರ್ಮಾಣದ ಸ್ಥಳಗಳಲ್ಲಿ ಕೆಲಸ ಮಾಡಲು ಬಳಸಿದ ಕೈಗಳು ಎಂದು ಕ್ಯಾಸ್ಟ್ರೊ ಉದ್ಘರಿಸುತ್ತಾರೆ. ಒಟ್ಟಾರೆಯಾಗಿ ಹೇಳಬೇಕೆಂದರೆ ಅಮೇರಿಕಾದಂತ ದುಷ್ಟಶಕ್ತಿಗಳು ಚೆ ನ ದೇಹವನ್ನು ಮಾತ್ರ ಹತ್ಯೆ ಮಾಡಿರಬಹುದು.

ಆದರೆ ಚೆಗುವಾರ ಹಂಚಿದ ಕ್ರಾಂತಿಕಾರಿ ಆಲೋಚನೆಗಳನ್ನು ನಿಯಂತ್ರಿಸಲು ಅಥವಾ ಹತ್ಯೆ ಮಾಡಲು ಸಾಧ್ಯವಿಲ್ಲಾ ! ಚೆಗೆವಾರ ಶೋಷಿತ ಜನತೆಗೆ ತಮ್ಮ ಬದುಕನ್ನು ಅರ್ಪಿಸಿಕೊಂಡವರು. ಆಗಾಗಿ ಅವಕಾಶವಂಚಿತ ಸಮುದಾಯಗಳಿಗೆ ಚೆಗುವಾರ ಎಂದೆಂದಿಗೂ ಸ್ಫೂರ್ತಿಯಾಗಿರುತ್ತಾರೆ ಅನ್ನುವುದರಲ್ಲಿ ಯಾವ ಅನುಮಾವೂ ಇಲ್ಲ.

ಐರಿಶ್ ಬಂಡಾಯಗಾರರ ರಕ್ತ ನನ್ನ ಮಗನ ಧಮನಿಗಳಲ್ಲಿ ಹರಿಯುತ್ತಿತ್ತು ಎಂಬುದನ್ನು ನಾವು ಮೊಟ್ಟ ಮೊದಲು ಗಮನಿಸೇಕಾದ ವಿಚಾರ’ ಎಂದು ಚೆಗುವಾರನ ಮರಣದ ನಂತರ ಅವರ ತಂದೆ ಪ್ರತಿಕ್ರಿಯಿಸಿದ ಹಾಗೆ, ಚೆ… ಇಲ್ಲವಾಗಿ ಹಲವು ವರ್ಷಗಳು ಕಳೆದಿದ್ದರೂ ಅವನು ತನ್ನ ವಿಚಾರ, ಆಲೋಚನೆಗಳ, ಮಾನವೀಯವಾದ ವ್ಯಕ್ತಿತ್ವಗಳ ಮೂಲಕ ದಬ್ಬಾಳಿಕೆ, ಶೋಷಣೆ ಅನ್ಯಾಯಗಳ ವಿರುದ್ಧಾ ಇಂದಿಗೂ ಸಿಡಿದೇಳುವ ಕ್ರಾಂತಿಯ ಕಿಡಿಯಾಗಿ ತನ್ನ ನಂತರದ ತಲೆಮಾರಿಗೆ ಸ್ಫೂರ್ತಿಯ ಚಿಲುಮೆಯಾಗಿ ಸದಾ ಜೊತೆಯಾಗುತ್ತಲೇ ಇರುತ್ತಾನೆ.

ನಮ್ಮ ನಡುವೆ ಇರುವ ವಿದ್ಯಾವಂತ ಬುದ್ಧಿವಂತ ರೆನಿಸಿಕೊಂಡವರು, ನಾವು ಶ್ರೇಷ್ಠ ಉಳಿದವರು ಕನಿಷ್ಠವೆಂದು ಜಾತಿ ಧರ್ಮ ದೇವರುಗಳ ಹೆಸರಿನಲ್ಲಿ ಭಯ ಹುಟ್ಟಿಸಿ ಶೋಷಿತ ಸಮುದಾಯಗಳ ಮೇಲೆ ದೌರ್ಜನ್ಯವೆಸಗುತಿದ್ದರು ಇಲ್ಲಿನ ಸರ್ಕಾರಗಳು ಮತ್ತು ಜನಸಾಮಾನ್ಯರು ಅದರ ವಿರುದ್ಧ ಸಿಡಿದೇಳುವುದಿರಲಿ, ಕೊನೆ ಪಕ್ಷ ವಿರೋಧ ವ್ಯಕ್ತ ಪಡಿಸದೆ ಜಾಣ ಕುರುಡರಂತೆ ಮೌನವಹಿಸುತ್ತಿರುವುದು ದುರಂತವೇ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ

ಸಂವಿಧಾನಕ್ಕೆ ಅಪಾಯವಾದರೆ, ಬಡವರ, ಶ್ರಮಿಕರ ಭವಿಷ್ಯಕ್ಕೆ ಅಪಾಯವಾದಂತೆ : ಸಿಎಂ ಸಿದ್ದರಾಮಯ್ಯ

Published

on

ಸುದ್ದಿದಿನ,ಮಡಿಕೇರಿ : ದೇಶದ ಸಂವಿಧಾನಕ್ಕೆ ಅಪಾಯವಾದರೆ ಈ ದೇಶದ ಮಹಿಳೆಯರ, ಬಡವರ, ಮಧ್ಯಮ ವರ್ಗದವರ, ಶ್ರಮಿಕರ, ಬದುಕು-ಭವಿಷ್ಯಕ್ಕೆ ಅಪಾಯ ಎಂದರ್ಥ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಮಡಿಕೇರಿಯಲ್ಲಿ ನಡೆದ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ಈ ಲೋಕಸಭಾ ಚುನಾವಣೆ ನಮಗೊಂದು ಅವಕಾಶ. ಈ ಬಾರಿ ಬಿಜೆಪಿಯನ್ನು ಸೋಲಿಸಿ ಕಾಂಗ್ರೆಸ್ ಗೆಲ್ಲಿಸುವ ಮೂಲಕ ಪ್ರಜಾತಂತ್ರ ಉಳಿಸಬೇಕು ಎಂದು ಕರೆ ನೀಡಿದರು.

ಬಳಿಕ ತುಮಕೂರಿನಲ್ಲಿ ಮಾತನಾಡಿದ ಅವರು, ರಾಜ್ಯದ ಹಿತಾಸಕ್ತಿ ಕಾಪಾಡುವಲ್ಲಿ ಕಳೆದ ಲೋಕಸಭಾ ಚುನಾವಣೆಯಲ್ಲಿ ಆಯ್ಕೆಯಾಗಿದ್ದ ಬಿಜೆಪಿ ಸಂಸದರು ವಿಫಲರಾಗಿದ್ದಾರೆ ಎಂದು ಮುಖ್ಯಮಂತ್ರಿ ಆರೋಪಿಸಿದರು.

ಮಹಿಳೆಯರ ಅಭ್ಯುದಯಕ್ಕಾಗಿ ಪಂಚ ಗ್ಯಾರಂಟಿ ಯೋಜನೆಗಳನ್ನು ನುಡಿದಂತೆ ಜಾರಿಗೆ ತಂದಿದ್ದೇವೆ. ಇದರಿಂದಾಗಿ ಮಹಿಳೆಯರ ಜೀವನದಲ್ಲಿ ಸುಧಾರಣೆ ಕಂಡಿದೆ, ಈ ಯೋಜನೆಯ ಫಲಾನುಭವಿಗಳ ಬಗ್ಗೆ ಟೀಕಿಸುವುದು ಸರಿಯಲ್ಲ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ದಾವಣಗೆರೆ | ದ್ವಿತೀಯ ಪಿ.ಯು.ಸಿ ಪರೀಕ್ಷೆ; ಜಿಲ್ಲೆಗೆ ಶೇ 80.96 ರಷ್ಟು ಫಲಿತಾಂಶ

Published

on

ಸುದ್ದಿದಿನ,ದಾವಣಗೆರೆ : 2024 ರ ಮಾರ್ಚ್‍ನಲ್ಲಿ ನಡೆದ ದ್ವಿತೀಯ ಪಿ.ಯು.ಸಿ. ಫಲಿತಾಂಶ ಪ್ರಕಟವಾಗಿದ್ದು ಜಿಲ್ಲೆಗೆ ಶೇ 80.96 ರಷ್ಟು ಫಲಿತಾಂಶ ಬಂದಿದ್ದು ಶೇ 74.27 ಗಂಡು, ಶೇ 82.01 ರಷ್ಟು ಹೆಣ್ಣು ಮಕ್ಕಳು ಉತ್ತೀರ್ಣರಾಗಿದ್ದಾರೆ ಎಂದು ಜಿಲ್ಲಾಧಿಕಾರಿ ಡಾ; ವೆಂಕಟೇಶ್ ಎಂ.ವಿ ತಿಳಿಸಿದರು.

ಅವರು ಬುಧವಾರ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಚುನಾವಣಾ ಸಂಬಂಧ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು. ಏಪ್ರಿಲ್ 10 ರಂದು ಫಲಿತಾಂಶ ಪ್ರಕಟವಾಗಿದ್ದು ಹೆಚ್ಚಿನ ವಿವರಗಳು ಬರಬೇಕಾಗಿದೆ. ಈ ವರ್ಷ ಜಿಲ್ಲೆಯಲ್ಲಿ ದ್ವಿತೀಯ ಪಿ.ಯು.ಸಿ ಪರೀಕ್ಷೆಯನ್ನು 19644 ರೆಗ್ಯುಲರ್, 422 ಖಾಸಗಿ ಸೇರಿ 20066 ವಿದ್ಯಾರ್ಥಿಗಳು ತೆಗೆದುಕೊಂಡಿದ್ದರು. ಇದರಲ್ಲಿ 15904 ವಿದ್ಯಾರ್ಥಿಗಳು ಉತ್ತೀರ್ಣರಾಗುವ ಮೂಲಕ ಶೇ 80.96 ರಷ್ಟು ಫಲಿತಾಂಶ ಪಡೆದಿದ್ದಾರೆ.

ಕಳೆದ ವರ್ಷ ಶೇ 75.72 ರಷ್ಟು ಫಲಿತಾಂಶ ಬಂದಿತ್ತು, ಈ ವರ್ಷ ಶೇ 5.24 ರಷ್ಟು ಫಲಿತಾಂಶ ಹೆಚ್ಚಳವಾಗಿದೆ. ಜಿಲ್ಲೆಗೆ ಟಾಪ್ ಬಂದವರಲ್ಲಿ ಕಲಾ ವಿಭಾಗದಲ್ಲಿ ಹರಿಹರದ ಶ್ರೀಮತಿ ಗಿರಿಯಮ್ಮ ಕಾಂತಪ್ಪ ಮಹಿಳಾ ಪದವಿ ಪೂರ್ವ ಕಾಲೇಜಿನ ಹೀನಬಾನು ಪಿ.ಕೆ. 591 ಅಂಕ ಪಡೆದು ಶೇ 98.5, ವಾಣಿಜ್ಯ; ದಾವಣಗೆರೆ ತಾ; ಗೋಪನಾಳು ಸರ್ಕಾರಿ ಪದವಿ ಪೂರ್ವ ಕಾಲೇಜಿನ ರೇಷ್ಮಾ ಬಾನು 589 ಅಂಕ ಪಡೆದು ಶೇ 98.16 ರಷ್ಟು ಫಲಿತಾಂಶ ಪಡೆದು ಜಿಲ್ಲೆಗೆ ಮೊದಲಿಗರಾಗಿದ್ದಾರೆ.

ವಿಜ್ಞಾನ ವಿಭಾಗದಲ್ಲಿ ಲೋಕಿಕೆರೆ ರಸ್ತೆಯಲ್ಲಿನ ಸರ್‍ಎಂವಿ ಸಂಯುಕ್ತ ಪದವಿ ಪೂರ್ವ ಕಾಲೇಜಿನ ಮೊಹಮ್ಮದ್ ಸುಹೇಲ್, ಅಮೃತ ದೊಡ್ಡ ಬಸಪ್ಪನವರ್, ಅನನ್ಯ ಹೆಚ್.ಎಸ್, ಆಕಾಶ್ ಸಿ.ಪಾಟೀಲ್ ಇವರು 593 ಅಂಕ ಶೇ 98.83 ರಷ್ಟು ಸಮನಾದ ಫಲಿತಾಂಶ ಹಂಚಿಕೊಂಡಿದ್ದಾರೆ ಎಂದರು.

ವಿಭಾಗವಾರು ಫಲಿತಾಂಶ; ಕಲಾ ವಿಭಾಗದಲ್ಲಿ ಶೇ 57.83 ರಷ್ಟು ಫಲಿತಾಂಶ ಬಂದಿದ್ದು ಇದರಲ್ಲಿ ಗಂಡು ಶೇ 45, ಹೆಣ್ಣು ಶೇ 66.46 ರಷ್ಟು ಉತ್ತೀರ್ಣರಾಗಿದ್ದಾರೆ. ವಾಣಿಜ್ಯ ವಿಭಾಗದಲ್ಲಿ ಶೇ 76.22 ರಷ್ಟು ಫಲಿತಾಂಶ ಬಂದಿದ್ದು ಗಂಡು ಶೇ 65.5, ಹೆಣ್ಣು ಶೇ 80.8, ವಿಜ್ಞಾನ ವಿಭಾಗದಲ್ಲಿ ಶೇ 91.13 ರಷ್ಟು ಫಲಿತಾಂಶ ಬಂದಿದ್ದು ಗಂಡು ಶೇ 91.39 ಹಾಗೂ ಹೆಣ್ಣು ಶೇ 88.69 ರಷ್ಟು ಫಲಿತಾಂಶ ಬಂದಿದೆ.

ನಗರಕ್ಕಿಂತ ಗ್ರಾಮೀಣರ ಮೇಲುಗೈ; ಫಲಿತಾಂಶದಲ್ಲಿ ನಗರ ಪ್ರದೇಶಕ್ಕಿಂತ ಗ್ರಾಮೀಣ ವಿದ್ಯಾರ್ಥಿಗಳು ಶೇ 1.1 ರಷ್ಟು ಮೇಲುಗೈ ಸಾಧಿಸಿದ್ದಾರೆ. ಗ್ರಾಮೀಣ ಪ್ರದೇಶದಲ್ಲಿ ಶೇ 73.65 ಗಂಡು, ಶೇ 84.6 ಹೆಣ್ಣು ಉತ್ತೀರ್ಣರಾದರೆ ನಗರ ಪ್ರದೇಶದ ಒಟ್ಟು ಫಲಿತಾಂಶ ಶೇ 80.75 ರಲ್ಲಿ ಗಂಡು ಶೇ 74.41, ಹೆಣ್ಣು ಶೇ 81.37 ರಷ್ಟು ಫಲಿತಾಂಶ ಪಡೆದಿದ್ದಾರೆ.

ಶೇ 100 ರಷ್ಟು ಫಲಿತಾಂಶ ಪಡೆದ ಶಾಲೆಗಳು; ದಾವಣಗೆರೆ ಅಂಜುಂ ಪದವಿ ಪೂರ್ವ ಕಾಲೇಜು, ಲೇಬರ್ ಕಾಲೋನಿ, ಜೈನ್ ಟ್ರಿನಿಟಿ ಪದವಿ ಪೂರ್ವ ಕಾಲೇಜು, ಅನ್‍ಮೋಲ್ ಪದವಿ ಪೂರ್ವ ಕಾಲೇಜು, ಶ್ರೀ ಗೀತಂ ಪದವಿ ಪೂರ್ವ ಕಾಲೇಜು, ದಾವಣಗೆರೆ ಇವು ಶೇ 100 ರಷ್ಟು ಫಲಿತಾಂಶ ಪಡೆದ ಕಾಲೇಜುಗಳಾಗಿವೆ.

ಈ ವೇಳೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸುರೇಶ್ ಬಿ.ಇಟ್ನಾಳ್, ಜಿಲ್ಲಾ ರಕ್ಷಣಾಧಿಕಾರಿ ಉಮಾ ಪ್ರಶಾಂರ್, ಶಾಲಾ ಶಿಕ್ಷಣ, ಪದವಿ ಪೂರ್ವ ಇಲಾಖೆ ಉಪನಿರ್ದೇಶಕ ಕರಿಸಿದ್ದಪ್ಪ ಉಪಸ್ಥಿತರಿದ್ದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಗ್ರಾಹಕರಿಂದ ಹೆಚ್ಚುವರಿಯಾಗಿ ಪೇಪರ್ ಬ್ಯಾಗ್‍ಗೆ ರೂ.10 ಪಡೆದ ಶಾಪಿಂಗ್ ಮಾಲ್‍ಗೆ ದಂಡ

Published

on

ಸಾಂದರ್ಭಿಕ ಚಿತ್ರ

ಸುದ್ದಿದಿನ ,ದಾವಣಗೆರೆ : ವಕೀಲ ವೃತ್ತಿಯಲ್ಲಿ ತೊಡಗಿಕೊಂಡಿರುವ ಆರ್. ಬಸವರಾಜ್ ಎಂಬುವವರು ದಾವಣಗೆರೆ ನಗರದ ಮ್ಯಾಕ್ಸ್ ರೀಟೈಲ್ ಅಂಗಡಿಯಲ್ಲಿ 2023 ರ ಅಕ್ಟೋಬರ್ 29 ರಂದು ರೂ.1,499 ಪಾವತಿಸಿ, ಡೆನಿವಾ ಪ್ಯಾಂಟ್ ಖರೀದಿಸಿದರು. ಈ ವೇಳೆಯಲ್ಲಿ ಇಲ್ಲಿಯೇ ಲೈಫ್ ಸ್ಟೈಲ್ ಇಂಟರ್‍ನ್ಯಾಷನಲ್ ವಾಣಿಜ್ಯ ಸಂಸ್ಥೆ ಪ್ಯಾಂಟ್ ಮಾರಾಟದ ವೇಳೆ ಹೆಚ್ಚುವರಿಯಾಗಿ ರೂ.10/- ಪೇಪರ್ ಬ್ಯಾಗ್‍ಗೆ ಪಡೆಯಲಾಯಿತು.

ಗ್ರಾಹಕರಾದ ಆರ್. ಬಸವರಾಜ್ ಇವರ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದಲ್ಲಿ ದೂರನ್ನು ದಾಖಲಿಸಿ ವಾಣಿಜ್ಯ ಸಂಸ್ಥೆ ವಿರುದ್ದ ರೂ.50,000 ಮಾನಸಿಕ ಕಿರುಕುಳ ಹಾಗೂ ದೂರು ದಾಖಲಿಸಲು ಖರ್ಚು ಮಾಡಿದ ಮೊ ರೂ.10,000 ಗಳನ್ನು ಪಾವತಿಸುವಂತೆ ದೂರನ್ನು ದಾಖಲಿಸಿದರು.

ವಾಣಿಜ್ಯ ಸಂಸ್ಥೆಗೆ ನೋಟಿಸ್ ಜಾರಿ ಮಾಡಿದ್ದು ಈ ಸಂಸ್ಥೆ ವಕೀಲರ ಮುಖಾಂತರ ಹಾಜರಾಗಿ ಬ್ಯಾಗ್‍ಗೆ ಹೆಚ್ಚುವರಿಯಾಗಿ ಪಡೆದ ಹಣಕ್ಕೆ ಸಮರ್ಥಿಸಿಕೊಂಡಿತ್ತು. ಆದರೆ ಗ್ರಾಹಕರ ಆಯೋಗ ಈ ಮೊದಲು ರಾಷ್ಟ್ರೀಯ ಗ್ರಾಹಕರ ಆಯೋಗ ಬಿಗ್ ಬಜಾರ್ ವಿರುದ್ಧ ಸಾಯಲ್ ದಾವ ಪ್ರಕರಣದ ನ್ಯಾಯ ನಿರ್ಣಯದ ತೀರ್ಪಿನ ಅನುಗುಣವಾಗಿ ವಾಣಿಜ್ಯ ಸಂಸ್ಥೆಗಳು ಕ್ಯಾರಿ ಬ್ಯಾಗ್‍ಗಳಿಗೆ ಹೆಚ್ಚಿನ ಹಣವನ್ನು ಪಡೆಯುವಂತಿಲ್ಲ ಎಂಬ ತೀರ್ಪನ್ನು ಉಲ್ಲೇಖಿಸಿ ಹೆಚ್ಚುವರಿಯಾಗಿ ರೂ.10 ಪಡೆದ ಸಂಸ್ಥೆಯ ಕ್ರಮವು ಗ್ರಾಹಕರ ಸಂರಕ್ಷಣಾ ಕಾಯ್ದೆಯ ಅಡಿಯಲ್ಲಿ ಅನುಚಿತ ವ್ಯಾಪಾರ ಪದ್ದತಿಯೆಂದು ಪರಿಗಣಿಸಿ ದಾವಣಗೆರೆ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷರಾದ ಮಹಂತೇಶ ಈರಪ್ಪ ಶಿಗ್ಲಿ, ಸದಸ್ಯರಾದ ತ್ಯಾಗರಾಜನ್ ಮತ್ತು ಮಹಿಳಾ ಸದಸ್ಯರಾದ ಶ್ರೀಮತಿ ಬಿ.ಯು. ಗೀತಾ ಇವರು ವಾಣಿಜ್ಯ ಸಂಸ್ಥೆಗೆ ರೂ.7000 ದಂಡವಿದಿಸಿ ಆದೇಶಿಸಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending