Connect with us

ದಿನದ ಸುದ್ದಿ

CAB ಬಗ್ಗೆ ಸಂಪೂರ್ಣ ವಿವರ : ಮಿಸ್ ಮಾಡ್ದೆ ಓದಿ ; ಶೇರ್ ಮಾಡಿ

Published

on

  • ಪೌರತ್ವ ಕಾಯಿದೆಯ ವಿರುದ್ಧ ಮೂವರು ಹಿರಿಯ ವಿಶ್ರಾಂತ ಅಧಿಕಾರಿಗಳು ಸುಪ್ರೀಂ ಕೋರ್ಟಿನಲ್ಲಿ ರಿಟ್ ಅರ್ಜಿ ಸಲ್ಲಿಸಿದ್ದಾರೆ. ಈ ಅರ್ಜಿಯ ಸಾರಾಂಶವನ್ನು ಇಲ್ಲಿ ಭಾಷಾಂತರಿಸಿದ್ದೇನೆ. ಸರಳ ಮಾತುಗಳಲ್ಲಿ ಏಕೆ ಈ ಕಾಯಿದೆ ಸರಿ ಇಲ್ಲ ಎಂದು ರಿಟ್ ಅರ್ಜಿಯಲ್ಲಿ ವಿವರಿಸಲಾಗಿದೆ. ಬಾಂಗ್ಲಾದೇಶದಲ್ಲಿ ಭಾರತದ ಹೈಕಮಿಷನರ್ ಆಗಿದ್ದ ದೇವ್ ಮುಖರ್ಜಿ, ಸೋಮಸುಂದರ್ ಬುರ್ರಾ, ಅಮಿತಾಭಾ ಪಾಂಡೆ ಎಂಬ ಇಬ್ಬರು ನಿವ್ರತ್ತ ಹಿರಿಯ ಐ ಎ ಎಸ್ ಅಧಿಕಾರಿಗಳು ಸಲ್ಲಿಸಿರುವ ರಿಟ್ ಅರ್ಜಿ ಇದು.

ಅನುವಾದ: ರಾಜಾರಾಂ ತಲ್ಲೂರು

ಶತಮಾನಗಳಿಂದ ಮನುಷ್ಯ ಧರ್ಮ ಮತ್ತು ನಂಬಿಕೆಗಳ ಹೆಸರಿನಲ್ಲಿ ದೌರ್ಜನ್ಯ, ತಾರತಮ್ಯ ಮತ್ತು ಹಿಂಸೆಗಳಿಗೆ ಬಲಿಯಾಗುತ್ತಾ ಬಂದಿದ್ದಾನೆ. ಇದರಿಂದಾಗಿ ವ್ಯಕ್ತಿಗಳು, ಕುಟುಂಬಗಳು, ಜನಸಮುದಾಯಗಳು ತಮ್ಮ ತಾಯ್ನೆಲವನ್ನು ಬಿಟ್ಟು ಹೋಗಬೇಕಾದ ಮತ್ತು ಬೇರೆಲ್ಲೋ ಹೋಗಿ ಆಶ್ರಯ ಪಡೆಯುವ ದಾರುಣ ಪರಿಸ್ಥಿತಿ ಬಂದದ್ದಿದೆ. ಕೆಲವೊಮ್ಮೆ ಅವರಿಗೆ ಆಯ್ಕೆಗಳಿರುವುದಿಲ್ಲ. ಜಗತ್ತಿನ ಚರಿತ್ರೆ ಎಂದರೆ, ಗಂಡಸರು, ಹೆಂಗಸರು ಮತ್ತು ಮಕ್ಕಳು ತಮ್ಮದೇ ನೆಲದಲ್ಲಿ ಪರಕೀಯರಾಗುವುದರ ಮತ್ತು ಅವರ ಆ ಅಸಹಾಯಕ ಸ್ಥತಿಯಲ್ಲಿ ಸಮಾಜಗಳು, ದೇಶಗಳು ಅವರಿಗೆ ಆಶ್ರಯ ನೀಡಿದ್ದರ ಕಥೆಯೇ ಆಗಿದೆ.

ಪೌರತ್ವ (ತಿದ್ದುಪಡಿ) ಕಾಯಿದೆ, 2019 [ಪ್ರಶ್ನಾರ್ಹ ಕಾಯಿದೆ] ಮೇಲ್ನೋಟಕ್ಕೆ ದೌರ್ಜನ್ಯಕ್ಕೊಳಗಾದವರಿಗೆ ಅನುಕೂಲ ಮಾಡಿಕೊಡುವ ಕಾಯಿದೆಯಂತೆ ಕಾಣಿಸುತ್ತದೆ. ಆದರೆ ಈ ಪ್ರಶ್ನಾರ್ಹ ಕಾಯಿದೆಯು ದೌರ್ಜನ್ಯಕ್ಕೊಳಗಾದವರ ನಡುವೆ, ನಂಬಿಕೆ ಮತ್ತು ಮೂಲ ದೇಶದ ಆಧಾರದಲ್ಲಿ ತಾರತಮ್ಯ ಮಾಡುತ್ತದೆ. ಸರಿಯಾದ ಧರ್ಮ (ಹಿಂದು, ಸಿಖ್, ಜೈನ್, ಕ್ರಿಷ್ಚಿಯನ್, ಪಾರ್ಸಿ, ಬೌಧ್ಧ) ಮತ್ತು ಸರಿಯಾದ ಮೂಲದೇಶ (ಪಾಕಿಸ್ಥಾನ, ಅಫ್ಗಾನಿಸ್ಥಾನ, ಬಾಂಗ್ಲಾದೇಶ)ದ ನಿರಾಶ್ರಿತರು ಮತ್ತು ವಲಸೆ ಬಂದವರಿಗೆ ಅಕ್ರಮ ವಲಸಿಗರೆಂಬ ಕಾರಣಕ್ಕೆ ಕಾನೂನು ಕ್ರಮದಿಂದ ಮುಕ್ತಿ ನೀಡಿ ಫಾಸ್ಟ್ ಟ್ರ್ಯಾಕ್ ಮೂಲಕ ಪೌರತ್ವ ನೀಡುವ ಮಾತನ್ನು ಪ್ರಶ್ನಾರ್ಹ ಕಾಯಿದೆ ಆಡುತ್ತದೆ. ಆದರೆ, ತಪ್ಪು ದೇಶಗಳ ತಪ್ಪು ಧರ್ಮದ ನಿರಾಶ್ರಿತರು ಮತ್ತು ವಲಸಿಗರಿಗೆ ಅವರು ಇಲ್ಲಿ ಒಳಗೊಳ್ಳಲು ತಾವು ಅರ್ಹರೆಂದು ವೈಯಕ್ತಿಕವಾಗಿ ಸಾಬೀತು ಮಾಡಬೇಕಾಗುತ್ತದೆ, ಅವರಿಗೆ ಕ್ಷಮಾದಾನವಾಗಲೀ, ಪೌರತ್ವವಾಗಲೀ ಇಲ್ಲ.

ಇದು ಅನ್ಯಾಯವಾದ ತಾರತಮ್ಯ ಮತ್ತು ಸಕಾರಣ ಇಲ್ಲದೆ ಸಮಾನ ಗೌರವ ಮತ್ತುಕಳಕಳಿಗಳನ್ನು ನಿರಾಕರಿಸಿದಂತಾಗುತ್ತದೆ ಎಂದು ಗೌರವಯುತವಾಗಿ ನಿವೇದಿಸಿಕೊಳ್ಳುತ್ತಿದ್ದೇವೆ. ಪ್ರಶ್ನಾರ್ಹ ಕಾಯಿದೆಯು ಸಮಾನತೆ ಮತ್ತು ಸಮಾನ ಪರಿಗಣನೆಯ ಎಲ್ಲ ತತ್ವಗಳನ್ನು ಉಲ್ಲಂಘಿಸುತ್ತದೆ, ಭಾರತದ ಸಂವಿಧಾನದ ಮೂಲ ಲಕ್ಷಣವಾದ ಜಾತ್ಯತೀತತೆಯ “ಹಾನಿ ಮತ್ತು ನಾಶಕ್ಕೆ” ಕಾರಣವಾಗುತ್ತದೆ, ಹಾಗಾಗಿ ಅದನ್ನು ಅಸಾಂವಿಧಾನಿಕ ಎಂದು ಕಿತ್ತುಹಾಕಬೇಕಾಗಿದೆ.

ಈ ಪ್ರಶ್ನಾರ್ಹ ಕಾಯಿದೆ ಅಸಾಂವಿಧಾನಿಕ ಮಾತ್ರವಲ್ಲ, ಭಾರತ ಗಣರಾಜ್ಯದ ತಳಹದಿಯಲ್ಲಿರುವ ತತ್ವಾದರ್ಶಗಳಿಗೂ ಇದು ತದ್ವಿರುದ್ಧವಾಗಿದೆ. 1947ರಲ್ಲಿ, ಕೆಲವು ಬದಲಾಯಿಸಲಾಗದ ಸತ್ಯಗಳ ತಳಹದಿಯ ಮೇಲೆ ಈ ದೇಶ ಸ್ಥಾಪನೆಯಾಗಿದೆ. ಅವುಗಳಲ್ಲಿ ಮುಖ್ಯವಾದುದು ಭಾರತ ಆವತ್ತಿಗೂ-ಈವತ್ತಿಗೂ-ಯಾವತ್ತಿಗೂ – ಎಲ್ಲ ಧಾರ್ಮಿಕ ನಂಬಿಕೆಗಳಿಗೂ ತವರಾಗಿತ್ತು, ವೈವಿದ್ಯತೆ ಮತ್ತು ಬಹುತ್ವಗಳನ್ನು ಸ್ವಾಗತಿಸುತ್ತಿತ್ತು ಮತ್ತು ಎಲ್ಲರನ್ನೂ ಒಳಗೊಳ್ಳುತ್ತಿತ್ತು.

ಭಾರತ ಸ್ಥಾಪನೆ ಆಗಿರುವುದು “ ನಾಗರಿಕ ರಾಷ್ಟ್ರೀಯತೆ” ಚಿಂತನೆಯ ಆಧಾರದಲ್ಲಿ. – “ಭಾರತೀಯತೆ” ಎಂಬುದು ಸಂವಿಧಾನ ಮತ್ತದರ ಮೌಲ್ಯಗಳನ್ನು ಒಪ್ಪಿಕೊಂಡು ಸಾಗುವುದರಲ್ಲಿದೆ- ಮತ್ತು ವಿಭಜನೆಯ ವೇಳೆ “ದ್ವಿ-ರಾಷ್ಟ್ರ” ಸಿದ್ಧಾಂತವನ್ನು ತಿರಸ್ಕರಿಸುವುದರಲ್ಲಿ. ಪ್ರಶ್ನಾರ್ಹ ಕಾಯಿದೆಯು ಈ ಮೂಲಭೂತ ತತ್ವಗಳನ್ನು ಚೂರುಚೂರು ಮಾಡಿ, ಕೆಲವು ನಂಬಿಕೆ ಮತ್ತು ಧರ್ಮಗಳನ್ನು ಉದ್ದೇಶಪೂರ್ವಕವಾಗಿ ಬೇರೆಯವರಿಗಿಂತ ಹೆಚ್ಚು ರಕ್ಷಣೆಗೆ ಅರ್ಹಗೊಳಿಸುತ್ತದೆ.

ಭಾರತ ಗಣರಾಜ್ಯದ ಸ್ಥಾಪಕ ತತ್ವಗಳು ಮತ್ತು ಭಾರತದ ಸಂವಿಧಾನದ ಆಶಯಗಳನ್ನು ಉಲ್ಲಂಘಿಸುವುದು ಮಾತ್ರವಲ್ಲದೆ ಸಂವಿಧಾನದ ಮೂಲಭೂತ ಸಂರಚನೆಯನ್ನು ಹಾಗೂ ಸಂವಿಧಾನದ 14,21,25ನೇ ವಿಧಿಗಳನ್ನು ಪ್ರಶ್ನಾರ್ಹ ಕಾಯಿದೆ ಸಂಪೂರ್ಣವಾಗಿ ಉಲ್ಲಂಘಿಸುತ್ತದೆ. ಪ್ರಶ್ನಾರ್ಹ ಕಾಯಿದೆಯು ಭಾರತದ ಗಡಿಯೊಳಗೆ ನಿರಾಶ್ರಿತರು ಮತ್ತು ವಲಸೆಬಂದವರ ನಡುವೆ ಎರಡು ವಿಚಾರಗಳಲ್ಲಿ ತಾರತಮ್ಯ ಮಾಡುತ್ತದೆ: ಅವರ ಮೂಲ ರಾಷ್ಟ್ರೀಯತೆ ಮತ್ತು ಅವರ ಧರ್ಮದ ಹೆಸರಲ್ಲಿ. ಈ ವರ್ಗದಲ್ಲಿ ಬರುವವರು ಯಾರೆಂದರೆ (ಎ) ಅಕ್ರಮ ವಲಸಿಗರು ಎಂದು ಕಾನೂನು ಕ್ರಮದಿಂದ ರಿಯಾಯಿತಿ ಪಡೆಯುವವರು, ಮತ್ತು (ಬಿ) ಫಾಸ್ಟ್ ಟ್ರ್ಯಾಕ್ ಪೌರತ್ವ ಪಡೆಯುವವರು.

ಅದಿಲ್ಲದವರು, ಕೇಂದ್ರ ಗ್ರಹ ಇಲಾಖೆ 2011ರಲ್ಲಿ ಬಿಡುಗಡೆ ಮಾಡಿದ ಸ್ಟಾಂಡರ್ಡ್ ಕಾರ್ಯ ನಿರ್ವಹಣಾ ಮಾರ್ಗದರ್ಶಿಯ ಅಡಿ ವೈಯಕ್ತಿಕ ಕಾರ್ಯನಿರ್ವಾಹಕ ಪ್ರಕ್ರಿಯೆಯ ಅನ್ವಯ “ದೀರ್ಘಕಾಲಿಕ ವೀಸಾ” ಗಳಿಸುವುದಕ್ಕೆ ಪ್ರಯತ್ನಿಸಲು ಸೀಮಿತರಾಗುತ್ತಾರೆ. ಇದರ ಪರಿಣಾಮವಾಗಿ ಕೆಲವು ವ್ಯಕ್ತಿಗಳುಕೆಲವು ಧರ್ಮಕ್ಕೆ ಮತ್ತು ರಾಷ್ಟ್ರೀಯ ಗುಂಪುಗಳಿಗೆ ಸೇರಿರುವ ಕಾರಣಕ್ಕಾಗಿ ಶಾಸನಾತ್ಮಕ ರಕ್ಷಣೆ ಮತ್ತು ಪೌರತ್ವ ಪಡೆದರೆ, ಇತರರು ಅಂತಹ ಯಾವುದೇ ಲಾಭಗಳಿಲ್ಲದೆ ಕಾರ್ಯಾಂಗದ ಮರ್ಜಿ ಕಾಯಬೇಕಾಗುತ್ತದೆ.

ಭಾರತದ ಗಡಿಯೊಳಗಿರುವ ಎಲ್ಲರಿಗೂ ಅನ್ವಯವಾಗುವಂತೆ ಕಾನೂನಿನ ರಕ್ಷಣೆ ಸಮಾನವಾಗಿರಬೇಕೆಂಬ ಸಾಂವಿಧಾನಿಕ ಆಶಯವನ್ನಿದು ಉಲ್ಲಂಘಿಸುತ್ತದೆ. ಈ ಕಾನೂನು ತಾನೇ ಸ್ವತಃ ಶಾಸಕಾಂಗೀಯ ಉದ್ದೇಶವನ್ನು ವ್ಯಕ್ತಪಡಿಸದಿದ್ದರೂ, ಕೇಂದ್ರ ಗ್ರಹಖಾತೆಯ 2015 ಮತ್ತು 16ರ ಪ್ರಕಟಣಾಸ್ವರೂಪದ ಶಾಸಕಾಂಗೀಯ ದಾಖಲೆಗಳಿಂದ (ಈ ಪ್ರಶ್ನಾರ್ಹ ಕಾಯಿದೆಯ ತಯಾರಿಗೆ ಪೂರ್ವಭಾವಿಯಾಗಿ ರಚಿತವಾದ ಜಂಟಿ ಸಂಸದೀಯ ಆಯೋಗಕ್ಕೆ ಸಲ್ಲಿಸಲಾದವು) ಮತ್ತು ಕಾಯಿದೆಯ ಉದ್ದೇಶ ಮತ್ತು ಕಾರಣಗಳ ಹೇಳಿಕೆಯಲ್ಲಿ, ಈ ಕಾಯಿದೆಯ ಮೂಲ ಉದ್ದೇಶ ಧಾರ್ಮಿಕ ಅಲ್ಪಸಂಖ್ಯಾತರ ಮೇಲಿನ ದೌರ್ಜನ್ಯಕ್ಕೆ ಪರಿಹಾರ ಒದಗಿಸುವುದೆಂದು ಹೇಳಲಾಗಿದೆ.

ಈ ಉದ್ದೇಶ ಮತ್ತು ಗುರಿ ಮಹತ್ತರವಾದದ್ದೇ. ಆದರೆ, ಈ ಪ್ರಶ್ನಾರ್ಹ ಕಾಯಿದೆಯು ಈ ಗುರಿಯನ್ನು ತಾರತಮ್ಯಪೂರ್ವಕವಾಗಿ ಅನುಷ್ಠಾನಗೊಳಿಸಲು ಹೊರಟಿದೆ. ಕೇವಲ ಕೆಲವು ದೇಶಗಳ ಕೆಲವೇ ಧರ್ಮದ ಜನರಿಗೆ ರಕ್ಷಣೆಯನ್ನು ಸೀಮಿತಗೊಳಿಸಲಾಗಿದೆ.

ಹಾಗಾಗಿ, ಭಾರತದ ಆಸುಪಾಸಿನ ದೇಶಗಳಲ್ಲಿ ಕೂಡ ಈ ಕೆಳಗಿನ ಸ್ಥಿತಿಗಳಿರಬಹುದು ಎಂಬ ವಾಸ್ತವವನ್ನು ಈ ಕಾನೂನು ನಿರ್ಲಕ್ಷಿಸುತ್ತದೆ (ಎ) ಪಾಕಿಸ್ಥಾನ, ಅಫ್ಘಾನಿಸ್ಥಾನ ಮತ್ತು ಬಾಂಗ್ಲಾದೇಶ ಹೊರತುಪಡಿಸಿ ಬೇರೆ ಆಸುಪಾಸಿನ ದೇಶಗಳಲ್ಲೂ ಧಾರ್ಮಿಕ ದೌರ್ಜನ್ಯಕ್ಕೊಳಗಾದ ಅಲ್ಪಸಂಖ್ಯಾತರು ಇರಬಹುದು, (ಬಿ) ಮೇಲೆ ಹೇಳಲಾದ ಮೂರು ದೇಶಗಳಲ್ಲಿ ಹಿಂದೂಗಳು, ಸಿಖ್ ರು, ಬೌದ್ಧರು, ಜೈನರು, ಪಾರ್ಸಿಗಳು ಮತ್ತು ಕ್ರಿಷ್ಚಿಯನ್ನರ ಹೊರತಾಗಿಯೂ ಬೇರೆ ಧಾರ್ಮಿಕ ದೌರ್ಜನ್ಯಕ್ಕೊಳಗಾದ ಜನಸಮುದಾಯಗಳಿರಬಹುದು ಮತ್ತು (ಸಿ) ಈ ಎಲ್ಲ ದೇಶಗಳು ಮತ್ತು ಎಲ್ಲ ಗುಂಪುಗಳಲ್ಲೂ ಧಾರ್ಮಿಕೇತರ ದೌರ್ಜನ್ಯಗಳಿಗೆ ಒಳಗಾದ ಜನರು ಇರಬಹುದು (2011ರ ಸ್ಟಾಂಡರ್ಡ್ ಕಾರ್ಯನಿರ್ವಹಣಾ ಮಾರ್ಗದರ್ಶಿ ಇದನ್ನು ಗುರುತಿಸಿದೆ)

ಇದರ ಫಲವಾಗಿ, ಕೆಳಗಿನ ಉದಾಹರಣೆಗಳು ತೋರಿಸುವಂತೆ, ಕಾಯಿದೆಯು ಇಂತಹ ಸನ್ನಿವೇಶಗಳಲ್ಲಿ ಜನರ ನಡುವೆ ಅನ್ಯಾಯ ಮತ್ತು ತಾರತಮ್ಯಗಳನ್ನು ಎಸಗುತ್ತದೆ :

  1. ಶ್ರೀಲಂಕಾದಿಂದ ಧಾರ್ಮಿಕ ದೌರ್ಜನ್ಯದ ಕಾರಣದಿಂದಾಗಿ ಪಲಾಯನ ಮಾಡಿರುವ ಒಬ್ಬ ಶ್ರೀಲಂಕಾದ ತಮಿಳ ವ್ಯಕ್ತಿ, ಅಥವಾ ಧಾರ್ಮಿಕ ಕಾರಣಗಳಿಗಾಗಿ ಮಾನವ ಹತ್ಯೆಯಿಂದ ತಪ್ಪಿಸಿಕೊಳ್ಳಲು ಮಯಮ್ನಾರ್ ನಿಂದ ಪಲಾಯನ ಮಾಡಿದ ಒಬ್ಬ ರೋಹಿಂಗ್ಯಾ ಮುಸ್ಲಿಂ, ಈ ಕಾಯಿದೆಯಡಿ ಆಶ್ರಯ ಪಡೆಯಲಾಗುವುದಿಲ್ಲ, ಆದರೆ ಇದೇ ಕಾರಣಗಳಿಗಾಗಿ ಪಾಕಿಸ್ಥಾನದಿಂದ ಪಲಾಯನ ಮಾಡಿರುವ ಒಬ್ಬ ಹಿಂದೂ ಆಶ್ರಯ ಪಡೆಯುತ್ತಾನೆ – ಈ ಮೂವರೂ “ಭಾರತದ ಗಡಿಯ ಒಳಗೆ ಇರುವ ಹೊರತಾಗಿಯೂ” ಹೀಗಾಗುತ್ತದೆ.
  2. ಧಾರ್ಮಿಕ ದೌರ್ಜನ್ಯಕ್ಕೊಳಗಾಗಿ ಪಾಕಿಸ್ಥಾನದಿಂದ ಪಲಾಯನ ಮಾಡಿರುವ ಅಹ್ಮದೀಯ ವ್ಯಕ್ತಿಯೊಬ್ಬರಿಗೆ ಈ ಕಾಯಿದೆಯಡಿ ಇಲ್ಲಿ ಆಶ್ರಯ ದೊರಕುವುದಿಲ್ಲ, ಆದರೆ ಇದೇ ಕಾರಣಕ್ಕಾಗಿ ಪಾಕಿಸ್ಥಾನದಿಂದ ಪಲಾಯನ ಮಡಿದ ಒಬ್ಬ ಕ್ರಿಷ್ಚಿಯನ್ ಆಶ್ರಯ ಪಡೆಯುತ್ತಾನೆ – ಈ ಇಬ್ಬರೂ “ ಭಾರತದ ಗಡಿಯ ಒಳಗೆ ಇರುವ ಹೊರತಾಗಿಯೂ” ಹೀಗಾಗುತ್ತದೆ.
  3. ರಾಜಕೀಯ ದೌರ್ಜನ್ಯದ ಕಾರಣದಿಂದಾಗಿ ಚೀನಾದಿಂದ ಪಲಾಯನ ಮಾಡಿರುವ ಒಬ್ಬ ಟಿಬೇಟನ್ ರಾಜಕೀಯ ಚಳುವಳಿಗಾರ, ಅಥವಾ ಸಾಮಾಜಿಕ ದೌರ್ಜನ್ಯಕ್ಕಾಗಿ ಬಾಂಗ್ಲಾದೇಶದಿಂದ ಪಲಾಯನ ಮಾಡಿರುವ ಒಬ್ಬರು ಮಹಿಳಾ ಹಕ್ಕುಗಳ ಚಳುವಳಿಗಾರ ಈ ಕಾನೂನಿನ ಅಡಿ ಆಶ್ರಯ ಪಡೆಯುವುದಿಲ್ಲ, ಆದರೆ ಧಾರ್ಮಿಕ ದೌರ್ಜನ್ಯಕ್ಕೊಳಗಾದ ಅಫ್ಘಾನಿಸ್ಥಾನಿ ಬೌದ್ಧ ಆಶ್ರಯ ಪಡೆಯುತ್ತಾರೆ – ಈ ಮೂವರೂ “ಭಾರತದ ಗಡಿಯ ಒಳಗೆ ಇರುವ ಹೊರತಾಗಿಯೂ” ಹೀಗಾಗುತ್ತದೆ.

ಹಾಗಾಗಿ ಈ ಪ್ರಶ್ನಾರ್ಹ ಕಾಯಿದೆ ಸಕಾರಣವನ್ನಾಗಲೀ, ಕರುಣೆಯನ್ನಾಗಲೀ, ಮಾನವೀಯತೆಯನ್ನಾಗಲೀ ಹೊಂದಿಲ್ಲ, ಸಾಂವಿಧಾನಿಕವಾಗಿಯೂ ಮಾನ್ಯತೆ ಗಳಿಸಿಕೊಳ್ಳುವಂತಿಲ್ಲ.ಇದಲ್ಲದೆ, ಧರ್ಮ ಮತ್ತು ಧರ್ಮಾಧರಿತ ದೌರ್ಜನ್ಯಗಳನ್ನು ದೇಶದ ಪೌರತ್ವಕ್ಕೆ ಸ್ಪಷ್ಟ ಕ್ಲೇಮುಗಳಾಗಿ ಪರಿವರ್ತಿಸುತ್ತಾ, ಅದೇ ವೇಳೆಗೆ ಬೇರೆ ಧಾರ್ಮಿಕೇತರ ದೌರ್ಜನ್ಯಗಳಿಗೆ ಅದೇ ಪಾವಿತ್ರ್ಯವನ್ನು ನಿರಾಕರಿಸುತ್ತಾ ಇರುವ ಈ ಪ್ರಶ್ನಾರ್ಹ ಕಾಯಿದೆ ಜಾತ್ಯತೀತತೆಯ ಮೂಲಭೂತ ತತ್ವವನ್ನೇ ಉಲ್ಲಂಘಿಸುತ್ತದೆ.

ಸಮಾಜದಲ್ಲಿ ವ್ಯಕ್ತಿಯ ನಾಗರಿಕ ಸ್ಥಿತಿಯನ್ನು ಧರ್ಮ ಅಥವಾ ನಂಬಿಕೆಯ ಆಧಾರದಲ್ಲಿ ಗುರುತಿಸುವುದನ್ನು ಭಾರತದ ಜಾತ್ಯತೀತತೆಯ ತತ್ವವು ಪ್ರತ್ಯಕ್ಷವಾಗಿಯಾಗಲೀ ಪರೋಕ್ಷವಾಗಿಯಾಗಲೀ ಮಾನ್ಯ ಮಾಡುವುದಿಲ್ಲ. ಜನರನ್ನು ಪ್ರತ್ಯೇಕಿಸಿ ಮೇಲುಕೀಳೆಂದು ಪರಿಗಣಿಸಿ ಹೀಗೆ ಮಾಡಲು ಇಲ್ಲಿ ಅವಕಾಶವೇ ಇಲ್ಲ.

ಅರ್ಜಿದಾರರು ವಿಶ್ರಾಂತ ಜನಸೇವಕರಾಗಿದ್ದು ತಮ್ಮ ಇಡಿಯ ವ್ರತ್ತಿಬದುಕನ್ನು ದೇಶದ ಸಂವಿಧಾನವನ್ನು ಎತ್ತಿಹಿಡಿಯುವ, ಅದರ ಹಿತಾಸಕ್ತಿಗಳನ್ನು ರಕ್ಷಿಸುವುದಕ್ಕೆ ಮುಡಿಪಾಗಿಟ್ಟವರು. ಎಲ್ಲ ನಿರಾಶ್ರಿತರು ಮತ್ತು ವಲಸಿಗರಿಗೆ ನ್ಯಾಯಬದ್ಧ, ಸಮಾನ ಅವಕಾಶಗಳಿರುವ, ನೈಸರ್ಗೀಕರಣದ ಮೂಲಕ ಪೌರತ್ವ ನೀಡುವ ನೀತಿಗೆ ನಮ್ಮ ಆಕ್ಷೇಪ ಇಲ್ಲ.

ಇದೊಂದು ನೈತಿಕ ಆವಶ್ಯಕತೆ ಮಾತ್ರವಲ್ಲದೇ ಜಗತ್ತಿನಲ್ಲಿ ಭಾರತವು ಈ ತನಕ ಪಡೆದಿರುವ ತೆರೆದ, ಬಹುತ್ವದ, ವೈವಿದ್ಯತೆಗಳಿಂದೊಡಗೂಡಿದ ಸಮಾಜ ಎಂಬ ಚಾರಿತ್ರಿಕ ಸ್ಥಾನಮಾನಕ್ಕೆ ತಕ್ಕುದಾಗಿದೆ, ರಕ್ಷಣೆ ಬಯಸಿ ಬಂದವರಿಗೆ ಯಾವತ್ತೂ ರಕ್ಷಣೆ ನೀಡಿದೆ, ಎಲ್ಲ ಧರ್ಮ, ನಂಬಿಕೆ, ಜೀವನ ಶೈಲಿಗಳ ಜನರನ್ನೂ ಯಾವತ್ತಿಗೂ ಸ್ವಾಗತಿಸಿದೆ, ಸಹನೆ ಮತ್ತು ಸ್ವೀಕಾರದ ಮನೋಭಾವ ಭಾರತದ ನಾಗರೀಕತೆಯ ಲಕ್ಷಣವೇ ಆಗಿದೆ ಎಂಬ ಕಾರಣಗಳಿಗಾಗಿಯೂ ಇದು ಅಗತ್ಯವಿದೆ. ಆದರೆ ಪ್ರಶ್ನಾರ್ಹ ಕಾಯಿದೆಯು ಈ ಗುರಿಯನ್ನು ತಲುಪುವುದಿಲ್ಲ ಮಾತ್ರವಲ್ಲದೇ, ತಾರತಮ್ಯದ ಕಾನೂನುಗಳಿಗೆ ಕಾರಣ ಆಗಲಿದೆ. ಈ ಕಾರಣಗಳಿಗಾಗಿ, ಪ್ರಶ್ನಾರ್ಹ ಕಾಯಿದೆಯು ಅಸಂವಿಧಾನಿಕ ಮತ್ತು ನ್ಯಾಯಲಯವು ಅದನ್ನು ರದ್ಧುಪಡಿಸಬೇಕೆಂದು ಕೋರುತ್ತೇವೆ.

ದಿನಾಂಕ ಪಟ್ಟಿ

15-8-1947

ಅಹಿಂಸೆ, ಮಾನವೀಯತೆ, ಸಮಾನತೆ, ಜಾತ್ಯತೀತತೆಯ ತತ್ವಗಳ ಮೇಲೆ ಸುದೀರ್ಘವಾದ ಹೋರಾಟದ ಬಳಿಕ ಭಾರತ ಸ್ವತಂತ್ರ, ಸಾರ್ವಭೌಮ ದೇಶವಾಗಿದೆ. ಭಾರತದ ಸ್ವಾತಂತ್ರ್ಯವು ಮೊಹಮ್ಮದ್ ಅಲಿ ಜಿನ್ನಾ ಅವರ ಹಿಂದೂ ಗಳು ಮತ್ತು ಮುಸ್ಲಿಮರು ತಮ್ಮೊಳಗೇ ಎರಡು ರಾಷ್ಟ್ರಗಳು ಮತ್ತವರಿಗೆ ಸ್ವಂತ ತಾಯ್ನೆಲಗಳು ಬೇಕು ಎಂಬ “ ಎರಡು-ರಾಷ್ಟ್ರ ಸಿದ್ಧಾಂತ” ವನ್ನುತಿರಸ್ಕರಿಸಿದೆ. ಬದಲಾಗಿ ದೇಶ ಮತ್ತು ದೇಶದ ಸಂವಿಧಾನ ವೈವಿದ್ಯತೆ, ಬಹುತ್ವ ಮತ್ತು ಒಳಗೊಳ್ಳುವಿಕೆಯ ತತ್ವಗಳನ್ನು ಆಧರಿಸಿದೆ.

1947-50

ಈ ತತ್ವಗಳ ಆಧಾರದಲ್ಲಿ ಮೂರುವರ್ಷಗಳ ದೀರ್ಘ ಪ್ರಕ್ರಿಯೆಯ ಬಳಿಕ ಭಾರತದ ಸಂವಿಧಾನವನ್ನು ರಚಿಸಲಾಯಿತು. ಪೌರತ್ವದ ಬಗ್ಗೆ ಹೇಳುವ ಸಂವಿಧಾನದ ಎರಡನೇ ಭಾಗದಲ್ಲಿ ಇದು ಸ್ಪಷ್ಟವಾಗಿ ಉಲ್ಲೇಖವಾಗಿದ್ದು, ಧಾರ್ಮಿಕ ಮತ್ತು ಜನಾಂಗೀಯ ತಳಹದಿಯ ಪೌರತ್ವ (jus sanguinis) ಮತ್ತು ಹುಟ್ಟು, ವಾಸ ಹಾಗೂ ಗಡಿ ಆಧರಿತ ಪೌರತ್ವ (jus soli) ಗಳನ್ನು ಸ್ಪಷ್ಟವಾಗಿ ತಿರಸ್ಕರಿಸಿದೆ.

30-12-1955

ಪೌರತ್ವ ಕಾಯಿದೆ ಶಾಸನವಾಯಿತು. ಅದು ಮೇಲೆ ಹೇಳಿದ ಸಾಂವಿಧಾನಿಕ ತತ್ವಗಳನ್ನೇ ಆಧರಿಸಿದೆ.

24-4-1973

ಮಾನ್ಯ ನಾಯಾಯಾಲಯವು ಕೇಶವಾನಂದ ಭಾರತಿ ವರ್ಸಸ್ ಕೇರಳ ರಾಜ್ಯ ಪ್ರಕರಣದ ತೀರ್ಪಿನಲ್ಲಿ, ಜಾತ್ಯತೀತತೆ ಭಾರತೀಯ ಸಂವಿಧಾನದ ಮೂಲ ಸಂರಚನೆಯ ಭಾಗ ಎಂದು ಹೇಳಿದೆ. ಮುಂದೆ ಎಸ್ ಆರ್ ಬೊಮ್ಮಾಯಿ ವರ್ಸಸ್ ಭಾರತ ಸರ್ಕಾರ ಪ್ರಕರಣದಲ್ಲೂ ಇದನ್ನು ಎತ್ತಿ ಹಿಡಿದಿದೆ.

7-12-1985

ಅಸ್ಸಾಂ ಒಪ್ಪಂದದ ಬಳಿಕ, ಪೌರತ್ವ ಕಾಯಿದೆಗೆ 6Aಸೆಕ್ಷನ್ “ಅಸ್ಸಾಂ ಒಪ್ಪಂದದನ್ವಯ ಬರುವ ವ್ಯಕ್ತಿಗಳಿಗೆ ಪೌರತ್ವದ ವಿಶೇಷ ಪ್ರಾವಧಾನಗಳು” ಸೇರ್ಪಡೆಯಾಯಿತು. ಈ ವಿಭಾಗವು “ನಿರ್ದಿಷ್ಟ” ಭೂಭಾಗದಿಂದ ಭಾರತಕ್ಕೆ ಬರುವ “ಭಾರತೀಯ ಮೂಲದ” ಜನರಿಗೆ ಹಾಗೆ ಮಾಡಲು ಕೊನೆಯ ದಿನಾಂಕಗಳನ್ನು ಸ್ಪಷ್ಟಪಡಿಸುತ್ತದೆ. ಈ ಸೆಕ್ಷನ್ 6A ಸಾಂವಿಧಾನಿಕವೇ ಎಂಬ ಬಗ್ಗೆ ತಕರಾರು ಈಗಲೂ ತಮ್ಮ ನ್ಯಾಯಲಯದ ಮುಂದೆ ವಿಚಾರಣೆಗೆ ಬಾಕಿ ಇದೆ.

3-12-2004

ಪೌರತ್ವ ಕಾಯಿದೆಯ 3ನೇ ವಿಧಿಯನ್ನು ಬದಲಾಯಿಸಲಾಯಿತು. ಇದು jus soli ತತ್ವವನ್ನು 1987ರ ಬಳಿಕ ಜನಿಸಿದವರಿಗಾಗಿ ಭಾಗಷಃ ಬದಲಾಯಿಸುತ್ತದೆ. ಇಲ್ಲಿ ಧಾರ್ಮಿಕ ನಂಬಿಕೆ ಪೌರತ್ವಕ್ಕೆ ತಳಹದಿಯಾಗಿಲ್ಲ.

29-12-2011

ನಿರಾಶ್ರಿತರೆಂದು ಭಾರತದಲ್ಲಿ ವಾಸವಿರುವ ವಿದೇಶಿ ನಾಗರಿಕರ ಸಮಸ್ಯೆಗಳ ಪರಿಹಾರಕ್ಕಾಗಿ ಕೇಂದ್ರ ಗ್ರಹಸಚಿವಾಲಯವು ಸ್ಟಾಂಡರ್ಡ್ ಕಾರ್ಯಾಚರಣೆ ಮಾರ್ಗದರ್ಶಿ ಪ್ರಕಟಿಸಿತು. ಅದರ ಪ್ರಕಾರ, ಈ ಕ್ಲೇಮುಗಳನ್ನು ಪರಿಶೀಲಿಸಿ, ಸರಿಯೆಂದು ಕಂಡುಬಂದರೆ “ದೀರ್ಘಕಾಲಿಕ ವೀಸಾ” ನೀಡಲಾಗುತ್ತದೆ. ಈ ವೀಸಾನೀಡಿಕೆಗೆ ಆಧಾರ, ಆ ವ್ಯಕ್ತಿಗೆ ಅವರ ತಾಯ್ನಾಡಿನಲ್ಲಿ ಜಾತಿ, ಧರ್ಮ, ರಾಷ್ಟ್ರೀಯತೆ ಹೆಸರಿನಲ್ಲಿ ದೌರ್ಜನ್ಯ ಆಗಿದೆಯೇ ಎಂಬುದು.

7-9-2015

ಗೃಹ ಖಾತೆಯು GSR 685 (E) ಎಂಬ ಪ್ರಶ್ನಾರ್ಹ ಪ್ರಕಟಣೆ ಹೊರಡಿಸುತ್ತದೆ ಮತ್ತು 1950ರ ಪಾಸ್ ಪೋರ್ಟ್ ನಿಯಮಗಳನ್ನು ತಿದ್ದುಪಡಿ ಮಾಡುತ್ತದೆ. ಈ ತಿದ್ದುಪಡಿಯಲ್ಲಿ, ಬಾಂಗ್ಲಾದೇಶ ಮತ್ತು ಪಾಕಿಸ್ಥಾನದ ಅಲ್ಪಸಂಖ್ಯಾತ ಸಮುದಾಯಗಳು ಅಂದರೆ ಹಿಂದೂಗಳು, ಸಿಖ್, ಬೌದ್ಧ, ಪಾರ್ಸಿ, ಜೈನ ಮತ್ತು ಕ್ರಿಷ್ಚಿಯನ್ನರು ಧಾರ್ಮಿಕ ದೌರ್ಜನ್ಯ ಅಥವಾ ಅದರ ಭಯದಿಂದ ಭಾರತದಲ್ಲಿ ಆಶ್ರಯ ಪಡೆಯಬಯಸಿದರೆ, ಮತ್ತು ಅವರು 2014 ಡಿಸೆಂಬರ್ 31ರ ಮುನ್ನ ಭಾರತವನ್ನು ಪ್ರವೇಶಿಸಿದ್ದರೆ, ಅವರಿಗೆ ಸೂಕ್ತ ದಾಖಲೆಪತ್ರಗಳಿಲ್ಲದಿದ್ದರೂ ಭಾರತಕ್ಕೆ ಮುಕ್ತ ಪ್ರವೇಶ ಇರುತ್ತದೆ (ಪಾಸ್ ಪೋರ್ಟ್ ನಿಯಮಗಳ ನಿಯಮ 3). ಇದಲ್ಲದೇ ಈ ಪ್ರಕಟಣೆಯು 1948ರ ವಿದೇಶೀಯರ ಆದೇಶಕ್ಕೂ ತಿದ್ದುಪಡಿಗಳನ್ನು ಮಾಡುತ್ತದೆ.

18-7-2016

ಗ್ರಹಸಚಿವಾಲಯವು ಪ್ರಶ್ನಾರ್ಹವಾದ GSR 702 (E) and 703 (E) ಮೂಲಕ ರಕ್ಷಣೆಯನ್ನು ಅಫ್ಘಾನಿಸ್ಥಾನ ರಾಷ್ಟ್ರೀಯರಿಗೂ ವಿಸ್ತರಿಸುತ್ತದೆ.

ಜುಲೈ-ಆಗಸ್ಟ್2016

ಪೌರತ್ವ (ತಿದ್ದುಪಡಿ) ಕಾಯಿದೆ 2016, ಲೋಕಸಭೆಯಲ್ಲಿ ಮಂಡನೆಯಾಯಿತು (ಇದು ಬಹುತೇಕ ಈಗ ಜಾರಿಗೆ ಬಂದಿರುವ ಕಾಯಿದೆಯ ರೀತಿಯಲ್ಲೇ ಇದೆ) ಇದರಲ್ಲಿ ಮೂರು ದೇಶಗಳ ಆರು ಧಾರ್ಮಿಕ ಸಮುದಾಯಗಳಿಗೆ ಅಕ್ರಮ ವಲಸಿಗರನ್ನು ಪೌರರನ್ನಾಗಿಸುವ ಅವಕಾಶ ನೀಡಲಾಗಿದೆ. ಇದನ್ನು 2016ರಲ್ಲಿ ಜಂಟಿ ಸಂಸದೀಯ ಸಮಿತಿಗೆ ಒಪ್ಪಿಸಲಾಯಿತು.

4-1-2019

ವಿಸ್ತ್ರತ ಚರ್ಚೆಯ ಬಳಿಕ ಜಂಟಿ ಸಂಸದೀಯ ಸಮಿತಿಯು (ಕೆಲವು ಆಕ್ಷೇಪಗಳೊಂದಿಗೆ) ಈ ಮಸೂದೆಯನ್ನು ಮಂಡಿಸಬಹುದೆಂದು ಶಿಫಾರಸು ಮಾಡಿತು. ಸಮಿತಿ ತನ್ನ ವರದಿಯಲ್ಲಿ ಈ ಮಸೂದೆಯ ಉದ್ದೇಶ 2015 ಮತ್ತು 2016ರ ಗ್ರಹ ಇಲಾಖೆಯ ಪ್ರಕಟಣೆಗಳಿಗೆ ಶಾಸನರೂಪ ನೀಡುವುದು ಈ ಮಸೂದೆಯ ಉದ್ದೇಶ ಎಂದು ಗ್ರಹ ಇಲಾಖೆಯ ನಿಲುವನ್ನು ದಾಖಲಿಸಿದೆ.

9.12.2019

ಪೌರತ್ವ (ತಿದ್ದುಪಡಿ) ಕಾಯಿದೆ 2019ಲೋಕಸಭೆಯಲ್ಲಿ ಅಂಗೀಕಾರಗೊಂಡಿತು. ಇದು 2016ರ ಮಸೂದೆಗಿಂತ ಭಿನ್ನವಾಗಿದ್ದು, ನೋಂದಣಿ ಪ್ರಮಾಣಪತ್ರ ಅಥವ ನೈಸರ್ಗೀಕರಣ ಗಳಿಸಲು ಭಾರತಕ್ಕೆ ಪ್ರವೇಶದ ಕೊನೆಯ ದಿನಾಂಕವನ್ನು 31-12-2014ಕ್ಕೆ ನಿಗದಿಪಡಿಸಿದೆ, ಮತ್ತು ಇದು ತಿದ್ದುಪಡಿಯ ಲಾಭವನ್ನು ಕೆಲವು ಭೂಭಾಗಗಳಿಗೆ ಮಾತ್ರ ಸೀಮಿತಗೊಳಿಸುತ್ತದೆ, ಹಾಗಾಗಿ ಸಂವಿಧಾನದ ಆರನೇ ಷೆಡ್ಯೂಲಿನ ವ್ಯಾಪ್ತಿಯಲ್ಲಿ ಬರುವ ಭೂಭಾಗಗಳಿಗೆ ಇದನ್ನು ಅನ್ವಯಿಸಲಾಗುವುದಿಲ್ಲ ಮಾತ್ರವಲ್ಲದೇ ಬೆಂಗಾಲ್ ಈಸ್ಟರ್ನ್ ಫ್ರಂಟಿಯರ್ ರೆಗ್ಯುಲೇಷನ್ 1873 ಅಡಿ ಬರುವ “ಒಳರೇಖೆ” ಯ ಒಳಗಿನ ಭೂಭಾಗಗಳಿಗೂ ಇದು ಅನ್ವಯ ಆಗುವುದಿಲ್ಲ.

11-12-2019

ಪೌರತ್ವ (ತಿದ್ದುಪಡಿ) ಕಾಯಿದೆ 2019ರಾಜ್ಯಸಭೆಯಲ್ಲಿ ಅಂಗೀಕಾರವಾಗುತ್ತದೆ.

12-12-2019

ಪೌರತ್ವ (ತಿದ್ದುಪಡಿ) ಕಾಯಿದೆ 2019ಕ್ಕೆ ರಾಷ್ಟ್ರಪತಿಗಳ ಅಂಕಿತ ಬೀಳುತ್ತದೆ ಮತ್ತು ಅದು ಈಗ ಶಾಸನವಾಗಿದೆ.

13-12-2019

ಈ ರಿಟ್ ಅರ್ಜಿ ದಾಖಲಿಸಲಾಗಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ

ಸಂವಿಧಾನಕ್ಕೆ ಅಪಾಯವಾದರೆ, ಬಡವರ, ಶ್ರಮಿಕರ ಭವಿಷ್ಯಕ್ಕೆ ಅಪಾಯವಾದಂತೆ : ಸಿಎಂ ಸಿದ್ದರಾಮಯ್ಯ

Published

on

ಸುದ್ದಿದಿನ,ಮಡಿಕೇರಿ : ದೇಶದ ಸಂವಿಧಾನಕ್ಕೆ ಅಪಾಯವಾದರೆ ಈ ದೇಶದ ಮಹಿಳೆಯರ, ಬಡವರ, ಮಧ್ಯಮ ವರ್ಗದವರ, ಶ್ರಮಿಕರ, ಬದುಕು-ಭವಿಷ್ಯಕ್ಕೆ ಅಪಾಯ ಎಂದರ್ಥ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಮಡಿಕೇರಿಯಲ್ಲಿ ನಡೆದ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ಈ ಲೋಕಸಭಾ ಚುನಾವಣೆ ನಮಗೊಂದು ಅವಕಾಶ. ಈ ಬಾರಿ ಬಿಜೆಪಿಯನ್ನು ಸೋಲಿಸಿ ಕಾಂಗ್ರೆಸ್ ಗೆಲ್ಲಿಸುವ ಮೂಲಕ ಪ್ರಜಾತಂತ್ರ ಉಳಿಸಬೇಕು ಎಂದು ಕರೆ ನೀಡಿದರು.

ಬಳಿಕ ತುಮಕೂರಿನಲ್ಲಿ ಮಾತನಾಡಿದ ಅವರು, ರಾಜ್ಯದ ಹಿತಾಸಕ್ತಿ ಕಾಪಾಡುವಲ್ಲಿ ಕಳೆದ ಲೋಕಸಭಾ ಚುನಾವಣೆಯಲ್ಲಿ ಆಯ್ಕೆಯಾಗಿದ್ದ ಬಿಜೆಪಿ ಸಂಸದರು ವಿಫಲರಾಗಿದ್ದಾರೆ ಎಂದು ಮುಖ್ಯಮಂತ್ರಿ ಆರೋಪಿಸಿದರು.

ಮಹಿಳೆಯರ ಅಭ್ಯುದಯಕ್ಕಾಗಿ ಪಂಚ ಗ್ಯಾರಂಟಿ ಯೋಜನೆಗಳನ್ನು ನುಡಿದಂತೆ ಜಾರಿಗೆ ತಂದಿದ್ದೇವೆ. ಇದರಿಂದಾಗಿ ಮಹಿಳೆಯರ ಜೀವನದಲ್ಲಿ ಸುಧಾರಣೆ ಕಂಡಿದೆ, ಈ ಯೋಜನೆಯ ಫಲಾನುಭವಿಗಳ ಬಗ್ಗೆ ಟೀಕಿಸುವುದು ಸರಿಯಲ್ಲ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ದಾವಣಗೆರೆ | ದ್ವಿತೀಯ ಪಿ.ಯು.ಸಿ ಪರೀಕ್ಷೆ; ಜಿಲ್ಲೆಗೆ ಶೇ 80.96 ರಷ್ಟು ಫಲಿತಾಂಶ

Published

on

ಸುದ್ದಿದಿನ,ದಾವಣಗೆರೆ : 2024 ರ ಮಾರ್ಚ್‍ನಲ್ಲಿ ನಡೆದ ದ್ವಿತೀಯ ಪಿ.ಯು.ಸಿ. ಫಲಿತಾಂಶ ಪ್ರಕಟವಾಗಿದ್ದು ಜಿಲ್ಲೆಗೆ ಶೇ 80.96 ರಷ್ಟು ಫಲಿತಾಂಶ ಬಂದಿದ್ದು ಶೇ 74.27 ಗಂಡು, ಶೇ 82.01 ರಷ್ಟು ಹೆಣ್ಣು ಮಕ್ಕಳು ಉತ್ತೀರ್ಣರಾಗಿದ್ದಾರೆ ಎಂದು ಜಿಲ್ಲಾಧಿಕಾರಿ ಡಾ; ವೆಂಕಟೇಶ್ ಎಂ.ವಿ ತಿಳಿಸಿದರು.

ಅವರು ಬುಧವಾರ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಚುನಾವಣಾ ಸಂಬಂಧ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು. ಏಪ್ರಿಲ್ 10 ರಂದು ಫಲಿತಾಂಶ ಪ್ರಕಟವಾಗಿದ್ದು ಹೆಚ್ಚಿನ ವಿವರಗಳು ಬರಬೇಕಾಗಿದೆ. ಈ ವರ್ಷ ಜಿಲ್ಲೆಯಲ್ಲಿ ದ್ವಿತೀಯ ಪಿ.ಯು.ಸಿ ಪರೀಕ್ಷೆಯನ್ನು 19644 ರೆಗ್ಯುಲರ್, 422 ಖಾಸಗಿ ಸೇರಿ 20066 ವಿದ್ಯಾರ್ಥಿಗಳು ತೆಗೆದುಕೊಂಡಿದ್ದರು. ಇದರಲ್ಲಿ 15904 ವಿದ್ಯಾರ್ಥಿಗಳು ಉತ್ತೀರ್ಣರಾಗುವ ಮೂಲಕ ಶೇ 80.96 ರಷ್ಟು ಫಲಿತಾಂಶ ಪಡೆದಿದ್ದಾರೆ.

ಕಳೆದ ವರ್ಷ ಶೇ 75.72 ರಷ್ಟು ಫಲಿತಾಂಶ ಬಂದಿತ್ತು, ಈ ವರ್ಷ ಶೇ 5.24 ರಷ್ಟು ಫಲಿತಾಂಶ ಹೆಚ್ಚಳವಾಗಿದೆ. ಜಿಲ್ಲೆಗೆ ಟಾಪ್ ಬಂದವರಲ್ಲಿ ಕಲಾ ವಿಭಾಗದಲ್ಲಿ ಹರಿಹರದ ಶ್ರೀಮತಿ ಗಿರಿಯಮ್ಮ ಕಾಂತಪ್ಪ ಮಹಿಳಾ ಪದವಿ ಪೂರ್ವ ಕಾಲೇಜಿನ ಹೀನಬಾನು ಪಿ.ಕೆ. 591 ಅಂಕ ಪಡೆದು ಶೇ 98.5, ವಾಣಿಜ್ಯ; ದಾವಣಗೆರೆ ತಾ; ಗೋಪನಾಳು ಸರ್ಕಾರಿ ಪದವಿ ಪೂರ್ವ ಕಾಲೇಜಿನ ರೇಷ್ಮಾ ಬಾನು 589 ಅಂಕ ಪಡೆದು ಶೇ 98.16 ರಷ್ಟು ಫಲಿತಾಂಶ ಪಡೆದು ಜಿಲ್ಲೆಗೆ ಮೊದಲಿಗರಾಗಿದ್ದಾರೆ.

ವಿಜ್ಞಾನ ವಿಭಾಗದಲ್ಲಿ ಲೋಕಿಕೆರೆ ರಸ್ತೆಯಲ್ಲಿನ ಸರ್‍ಎಂವಿ ಸಂಯುಕ್ತ ಪದವಿ ಪೂರ್ವ ಕಾಲೇಜಿನ ಮೊಹಮ್ಮದ್ ಸುಹೇಲ್, ಅಮೃತ ದೊಡ್ಡ ಬಸಪ್ಪನವರ್, ಅನನ್ಯ ಹೆಚ್.ಎಸ್, ಆಕಾಶ್ ಸಿ.ಪಾಟೀಲ್ ಇವರು 593 ಅಂಕ ಶೇ 98.83 ರಷ್ಟು ಸಮನಾದ ಫಲಿತಾಂಶ ಹಂಚಿಕೊಂಡಿದ್ದಾರೆ ಎಂದರು.

ವಿಭಾಗವಾರು ಫಲಿತಾಂಶ; ಕಲಾ ವಿಭಾಗದಲ್ಲಿ ಶೇ 57.83 ರಷ್ಟು ಫಲಿತಾಂಶ ಬಂದಿದ್ದು ಇದರಲ್ಲಿ ಗಂಡು ಶೇ 45, ಹೆಣ್ಣು ಶೇ 66.46 ರಷ್ಟು ಉತ್ತೀರ್ಣರಾಗಿದ್ದಾರೆ. ವಾಣಿಜ್ಯ ವಿಭಾಗದಲ್ಲಿ ಶೇ 76.22 ರಷ್ಟು ಫಲಿತಾಂಶ ಬಂದಿದ್ದು ಗಂಡು ಶೇ 65.5, ಹೆಣ್ಣು ಶೇ 80.8, ವಿಜ್ಞಾನ ವಿಭಾಗದಲ್ಲಿ ಶೇ 91.13 ರಷ್ಟು ಫಲಿತಾಂಶ ಬಂದಿದ್ದು ಗಂಡು ಶೇ 91.39 ಹಾಗೂ ಹೆಣ್ಣು ಶೇ 88.69 ರಷ್ಟು ಫಲಿತಾಂಶ ಬಂದಿದೆ.

ನಗರಕ್ಕಿಂತ ಗ್ರಾಮೀಣರ ಮೇಲುಗೈ; ಫಲಿತಾಂಶದಲ್ಲಿ ನಗರ ಪ್ರದೇಶಕ್ಕಿಂತ ಗ್ರಾಮೀಣ ವಿದ್ಯಾರ್ಥಿಗಳು ಶೇ 1.1 ರಷ್ಟು ಮೇಲುಗೈ ಸಾಧಿಸಿದ್ದಾರೆ. ಗ್ರಾಮೀಣ ಪ್ರದೇಶದಲ್ಲಿ ಶೇ 73.65 ಗಂಡು, ಶೇ 84.6 ಹೆಣ್ಣು ಉತ್ತೀರ್ಣರಾದರೆ ನಗರ ಪ್ರದೇಶದ ಒಟ್ಟು ಫಲಿತಾಂಶ ಶೇ 80.75 ರಲ್ಲಿ ಗಂಡು ಶೇ 74.41, ಹೆಣ್ಣು ಶೇ 81.37 ರಷ್ಟು ಫಲಿತಾಂಶ ಪಡೆದಿದ್ದಾರೆ.

ಶೇ 100 ರಷ್ಟು ಫಲಿತಾಂಶ ಪಡೆದ ಶಾಲೆಗಳು; ದಾವಣಗೆರೆ ಅಂಜುಂ ಪದವಿ ಪೂರ್ವ ಕಾಲೇಜು, ಲೇಬರ್ ಕಾಲೋನಿ, ಜೈನ್ ಟ್ರಿನಿಟಿ ಪದವಿ ಪೂರ್ವ ಕಾಲೇಜು, ಅನ್‍ಮೋಲ್ ಪದವಿ ಪೂರ್ವ ಕಾಲೇಜು, ಶ್ರೀ ಗೀತಂ ಪದವಿ ಪೂರ್ವ ಕಾಲೇಜು, ದಾವಣಗೆರೆ ಇವು ಶೇ 100 ರಷ್ಟು ಫಲಿತಾಂಶ ಪಡೆದ ಕಾಲೇಜುಗಳಾಗಿವೆ.

ಈ ವೇಳೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸುರೇಶ್ ಬಿ.ಇಟ್ನಾಳ್, ಜಿಲ್ಲಾ ರಕ್ಷಣಾಧಿಕಾರಿ ಉಮಾ ಪ್ರಶಾಂರ್, ಶಾಲಾ ಶಿಕ್ಷಣ, ಪದವಿ ಪೂರ್ವ ಇಲಾಖೆ ಉಪನಿರ್ದೇಶಕ ಕರಿಸಿದ್ದಪ್ಪ ಉಪಸ್ಥಿತರಿದ್ದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಗ್ರಾಹಕರಿಂದ ಹೆಚ್ಚುವರಿಯಾಗಿ ಪೇಪರ್ ಬ್ಯಾಗ್‍ಗೆ ರೂ.10 ಪಡೆದ ಶಾಪಿಂಗ್ ಮಾಲ್‍ಗೆ ದಂಡ

Published

on

ಸಾಂದರ್ಭಿಕ ಚಿತ್ರ

ಸುದ್ದಿದಿನ ,ದಾವಣಗೆರೆ : ವಕೀಲ ವೃತ್ತಿಯಲ್ಲಿ ತೊಡಗಿಕೊಂಡಿರುವ ಆರ್. ಬಸವರಾಜ್ ಎಂಬುವವರು ದಾವಣಗೆರೆ ನಗರದ ಮ್ಯಾಕ್ಸ್ ರೀಟೈಲ್ ಅಂಗಡಿಯಲ್ಲಿ 2023 ರ ಅಕ್ಟೋಬರ್ 29 ರಂದು ರೂ.1,499 ಪಾವತಿಸಿ, ಡೆನಿವಾ ಪ್ಯಾಂಟ್ ಖರೀದಿಸಿದರು. ಈ ವೇಳೆಯಲ್ಲಿ ಇಲ್ಲಿಯೇ ಲೈಫ್ ಸ್ಟೈಲ್ ಇಂಟರ್‍ನ್ಯಾಷನಲ್ ವಾಣಿಜ್ಯ ಸಂಸ್ಥೆ ಪ್ಯಾಂಟ್ ಮಾರಾಟದ ವೇಳೆ ಹೆಚ್ಚುವರಿಯಾಗಿ ರೂ.10/- ಪೇಪರ್ ಬ್ಯಾಗ್‍ಗೆ ಪಡೆಯಲಾಯಿತು.

ಗ್ರಾಹಕರಾದ ಆರ್. ಬಸವರಾಜ್ ಇವರ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದಲ್ಲಿ ದೂರನ್ನು ದಾಖಲಿಸಿ ವಾಣಿಜ್ಯ ಸಂಸ್ಥೆ ವಿರುದ್ದ ರೂ.50,000 ಮಾನಸಿಕ ಕಿರುಕುಳ ಹಾಗೂ ದೂರು ದಾಖಲಿಸಲು ಖರ್ಚು ಮಾಡಿದ ಮೊ ರೂ.10,000 ಗಳನ್ನು ಪಾವತಿಸುವಂತೆ ದೂರನ್ನು ದಾಖಲಿಸಿದರು.

ವಾಣಿಜ್ಯ ಸಂಸ್ಥೆಗೆ ನೋಟಿಸ್ ಜಾರಿ ಮಾಡಿದ್ದು ಈ ಸಂಸ್ಥೆ ವಕೀಲರ ಮುಖಾಂತರ ಹಾಜರಾಗಿ ಬ್ಯಾಗ್‍ಗೆ ಹೆಚ್ಚುವರಿಯಾಗಿ ಪಡೆದ ಹಣಕ್ಕೆ ಸಮರ್ಥಿಸಿಕೊಂಡಿತ್ತು. ಆದರೆ ಗ್ರಾಹಕರ ಆಯೋಗ ಈ ಮೊದಲು ರಾಷ್ಟ್ರೀಯ ಗ್ರಾಹಕರ ಆಯೋಗ ಬಿಗ್ ಬಜಾರ್ ವಿರುದ್ಧ ಸಾಯಲ್ ದಾವ ಪ್ರಕರಣದ ನ್ಯಾಯ ನಿರ್ಣಯದ ತೀರ್ಪಿನ ಅನುಗುಣವಾಗಿ ವಾಣಿಜ್ಯ ಸಂಸ್ಥೆಗಳು ಕ್ಯಾರಿ ಬ್ಯಾಗ್‍ಗಳಿಗೆ ಹೆಚ್ಚಿನ ಹಣವನ್ನು ಪಡೆಯುವಂತಿಲ್ಲ ಎಂಬ ತೀರ್ಪನ್ನು ಉಲ್ಲೇಖಿಸಿ ಹೆಚ್ಚುವರಿಯಾಗಿ ರೂ.10 ಪಡೆದ ಸಂಸ್ಥೆಯ ಕ್ರಮವು ಗ್ರಾಹಕರ ಸಂರಕ್ಷಣಾ ಕಾಯ್ದೆಯ ಅಡಿಯಲ್ಲಿ ಅನುಚಿತ ವ್ಯಾಪಾರ ಪದ್ದತಿಯೆಂದು ಪರಿಗಣಿಸಿ ದಾವಣಗೆರೆ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷರಾದ ಮಹಂತೇಶ ಈರಪ್ಪ ಶಿಗ್ಲಿ, ಸದಸ್ಯರಾದ ತ್ಯಾಗರಾಜನ್ ಮತ್ತು ಮಹಿಳಾ ಸದಸ್ಯರಾದ ಶ್ರೀಮತಿ ಬಿ.ಯು. ಗೀತಾ ಇವರು ವಾಣಿಜ್ಯ ಸಂಸ್ಥೆಗೆ ರೂ.7000 ದಂಡವಿದಿಸಿ ಆದೇಶಿಸಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending